ಮೊದಲಿಗೆ…

ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) 2014ರಿಂದ ನಿರೂಪಿಸುತ್ತಿರುವ ಭಾರತದ ವೈವಿಧ್ಯತೆಯ ಕುರಿತಾದ ಮಹಾಕಾವ್ಯದಂತಹ ಕತೆಗಳು ಭಾರತೀಯ ಭಾಷೆಗಳಲ್ಲಿ ಮೂಡಿಬರುವ ಮೂಲಕ ವೈವಿಧ್ಯತೆಗೆ ಅರ್ಥ ತರುತ್ತವೆ. ಭಾರತದಲ್ಲಿ ಗ್ರಾಮೀಣ ಪ್ರದೇಶದ 833 ಮಿಲಿಯನ್ ಜನರು 86 ವಿಭಿನ್ನ ಲಿಪಿಗಳನ್ನು ಬಳಸಿಕೊಂಡು 700 ಕ್ಕೂ ಹೆಚ್ಚು ವಿವಿಧ ಭಾಷೆಗಳಲ್ಲಿ ಮಾತನಾಡುತ್ತಾರೆ. ಯಾವುದೇ ಲಿಪಿಯಿಲ್ಲದ ಭಾಷೆಗಳು ಸೇರಿದಂತೆ ಈ ಭಾಷೆಗಳು ಭಾರತದ ಸಾಂಸ್ಕೃತಿಕ ವೈವಿಧ್ಯತೆಯ ಹೃದಯಭಾಗದಲ್ಲಿವೆ. ಈ ಭಾರತೀಯ ಭಾಷೆಗಳಿಲ್ಲದ ಆರ್ಕೈವ್‌ ಒಂದನ್ನು ರೂಪಿಸುವುದು ಬಿಡಿ, ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಪರಿ ಕತೆಗಳ ಪ್ರಯಾಣದಲ್ಲಿ ಈ ಅನುವಾದಗಳು ಬಹಳ ಮುಖ್ಯವಾದ ಭೂಮಿಕೆಯನ್ನು ವಹಿಸುತ್ತವೆ.

“ಈ ಆರ್ಕೈವ್‌ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪರಿ ಅಗ್ರಣಿಯಾಗಿ ಕೆಲಸ ಮಾಡುತ್ತಿದೆ. ಇದು ಅನುವಾದವನ್ನು ಸಾಮಾಜಿಕ ನ್ಯಾಯದ ದೃಷ್ಟಿಕೋನದಿಂದ ನೋಡುತ್ತದೆ" ಎಂದು ಸ್ಮಿತಾ ಖಟೋರ್ ಹೇಳುತ್ತಾರೆ. ಜ್ಞಾನದ ಉತ್ಪಾದನೆ ಮತ್ತು ಪ್ರಸಾರವು ಇಂಗ್ಲಿಷ್ ಶಿಕ್ಷಣ ಪಡೆದ, ಇಂಗ್ಲಿಷ್ ಮಾತನಾಡುವ ವರ್ಗಗಳ ಸವಲತ್ತುಗಳಾಗಿಯೇ ಉಳಿಯದಂತೆ ಇದು ನೋಡಿಕೊಳ್ಳುತ್ತದೆ. ಇದು ಬಹುಪಾಲು ಗ್ರಾಮೀಣರು ಇಂಗ್ಲಿಷ್‌ ಭಾಷೆಯಿಂದ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಬದುಕುತ್ತಿರುವ ಸಂಧರ್ಭದಲ್ಲಿ ಬಹಳ ಮುಖ್ಯವೆನ್ನಿಸುತ್ತದೆ.”

ನಮ್ಮ ಭಾಷಾ ಸಂಪಾದಕರು ಮತ್ತು ಅನುವಾದಕರ ತಂಡವು ಆಗಾಗ ಪದಗಳ ಸಾಂಸ್ಕೃತಿಕ ಸಂದರ್ಭ, ನುಡಿಗಟ್ಟುಗಳ ಸೂಕ್ತತೆ ಇತ್ಯಾದಿ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುತ್ತದೆ. ಮೊನ್ನೆ ಅಂತಹದ್ದೇ ಒಂದು ದಿನ..

ಸ್ಮಿತಾ: ತೆಲಂಗಾಣದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಕುರುಂಪುರಿ ಪಂಚಾಯತ್‌ನ ವಲಸೆ ಕಾರ್ಮಿಕರು ತಮ್ಮನು ನೋಡಿ ಖುಷಿಪಟ್ಟ ಬಗ್ಗೆ ಪುರುಷೋತ್ತಮ್‌ ಠಾಕೂರ್‌ ಅವರು ವರದಿಯೊಂದರಲ್ಲಿ ಬರೆದಿದ್ದು ನೆನಪಿದೆಯ? ಅವರಲ್ಲೊಬ್ಬ ವ್ಯಕ್ತಿ, ʼಬಹಳ ದಿನಗಳ ನಂತರ ಇವತ್ತು ಒಬ್ಬ ಒಡಿಯಾ ಭಾಷೆ ಮಾತನಾಡುವ ವ್ಯಕ್ತಿಯನ್ನು ಭೇಟಿಯಾದೆ. ನಿಮ್ಮನ್ನು ಕಂಡು ಬಹಳ ಖುಷಿಯಾಯ್ತು!ʼ ಎಂದಿದ್ದರು.”

ಮಹಾರಾಷ್ಟ್ರದ ಜ್ಯೋತಿ ಶಿನೋಲಿ ರಘು ಎಂಬ ವಲಸೆ ಕಾರ್ಮಿಕರ ಮಗುವಿನ ಬಗ್ಗೆ ಬರೆದ ಒಂದು ಲೇಖನದಲ್ಲಿ , ಶಿಕ್ಷಕರು ಮತ್ತು ಸ್ನೇಹಿತರು ತನಗೆ ಅರ್ಥವಾಗದ ಭಾಷೆಯಲ್ಲಿ ಮಾತನಾಡುವ ಹೊಸ ಶಾಲೆಗೆ ಒಗ್ಗಿಕೊಳ್ಳುವುದು ಅವನ ಪಾಲಿಗೆ ದೊಡ್ಡ ಸವಾಲಾಗಿತ್ತು. ಅದೇ ಕತೆಯಲ್ಲಿ ಆ ಹುಡುಗನ ತಾಯಿ ಗಾಯತ್ರಿ ಹೇಳುವಂತೆ “ಕೇವಲ ಮೂರು ವಾರಗಳ ಕಾಲ ಚೈನ್ನೈನ ಶಾಲೆಯೊಂದಕ್ಕೆ ಹೋದ ಅವನು ಒಂದು ದಿನ ಅಳುತ್ತಾ ಮರಳಿದ್ದ. ಅಲ್ಲಿ ಅವನಿಗೆ ಏನೂ ಅರ್ಥವಾಗುತ್ತಿರಲಿಲ್ಲ. ಜೊತೆಗೆ ಅಲ್ಲಿರುವವರು ತನ್ನೊಡನೆ ಒರಟಾಗಿ ನಡೆದುಕೊಳ್ಳುತ್ತಾರೆನ್ನುವ ಭಾವನೆ ಅವನಲ್ಲಿ ಮೂಡಿತ್ತು.”

ಗ್ರಾಮೀಣ ಭಾರತದ ಜನರಿಗೆ ಭಾಷಾ ಅಸ್ಮಿತೆ ನಿರ್ಣಾಯಕವಾದುದು, ವಿಶೇಷವಾಗಿ ಅವರು ಜೀವನೋಪಾಯವನ್ನು ಹುಡುಕಿಕೊಂಡು ದೂರದ ಸ್ಥಳಗಳಿಗೆ ವಲಸೆ ಹೋಗಬೇಕಾಗಿ ಬಂದಾಗ.

PHOTO • Labani Jangi

ಶಂಕರ: ಆದರೆ ಸ್ಮಿತಾ, ಕೆಲವೊಮ್ಮೆ ಪದಗಳು ಸಹ ವಲಸೆ ಹೋಗುತ್ತವೆ. ಸೆಂಥಲಿರ್‌ ವರದಿ ಮಾಡಿದ ಕೃತಕ ಪರಾಗ ಸ್ಪರ್ಶ ಮಾಡಿಸುವ ಮಹಿಳೆಯರ ಕುರಿತ ಕತೆಯಲ್ಲಿ, ಅಲ್ಲಿನ ಮಹಿಳೆಯರು ತಾವು ಕೈಯಿಂದ ನಡೆಸುವ ಕ್ರಾಸ್‌ - ಪಾಲಿನೇಷನ್‌ ಕೆಲಸಕ್ಕೆ ಕ್ರಾಸಿಂಗ್‌ ಎನ್ನುವ ಪದವನ್ನು ಹುಟ್ಟುಹಾಕಿದ್ದಾರೆ. ಈ ಒಂದು ಇಂಗ್ಲಿಷ್‌ ಪದ ಈಗ ಅವರ ಬದುಕಿನ ಭಾಗವಾಗಿದೆ. ಅಂತಹ ಪದಗಳನ್ನು ನಾವು ಬಹಳಷ್ಟು ಹಳ್ಳಿಗಳಲ್ಲಿ ಕೇಳಬಹುದು.

ಇದು ರೋಮಾಂಚನಕಾರಿ ಅನುಭವದ ಜೊತೆಗೆ ಸವಾಲಿನ ಕೆಲಸವೂ ಹೌದು. ನಮ್ಮ ರಾಜ್ಯವಾದ ಕರ್ನಾಟಕದಿಂದ ವರದಿಯಾದ ಕತೆಗಳಲ್ಲಿ ಜನರ ಮಾತುಗಳು ಜೀವಂತವೆನ್ನಿಸುವುದಿಲ್ಲ. ಏಕೆಂದರೆ ಅವು ಇಂಗ್ಲಿಷಿನಲ್ಲಿರುತ್ತವೆ ಮತ್ತು ಪುಸ್ತಕದ ಭಾಷೆಯಲ್ಲಿರುತ್ತವೆ. ಅದರಲ್ಲಿನ ದುಡಿಯುವ ಜನರ ಭಾಷೆ ಅವರದ್ದಲ್ಲ ಎನ್ನಿಸುತ್ತದೆ. ಅವರು ಕಾಲ್ಪನಿಕ ಪಾತ್ರಗಳಂತೆ ತೋರುತ್ತಾರೆ. ಹೀಗಾಗಿ ಇಂತಹ ಕತೆಗಳನ್ನು ಅನುವಾದಿಸುವಾಗ ನಾನು ವರದಿಗಾರರಿಂದ ಅವರ ಮೂಲ ಸಂಭಾಷಣೆಯನ್ನು ತರಿಸಿಕೊಳ್ಳುತ್ತೇನೆ. ಇದು ಆ ಕತೆಯನ್ನು ಇನ್ನಷ್ಟು ನೈಜವಾಗಿಸುತ್ತದೆ. ಅದೊಂದು ಕೇವಲ ವರದಿ ಮಾಡಲ್ಪಟ್ಟ ʼಕಲೆಯಾಗಿʼ ಉಳಿಯುವುದಿಲ್ಲ.”

ಪ್ರತಿಷ್ಠಾ: ಈ ಅನುವಾದ ಪ್ರಕ್ರಿಯೆ ಸದಾ ನೇರವಾಗಿ ಅಥವಾ ಸುಲಭವಾಗಿ ಇರುವುದಿಲ್ಲ. ನನಗೆ ಕೆಲವೊಮ್ಮೆ ವರದಿಗಾರರು ಮೂಲ ಭಾಷೆಯಲ್ಲಿ ವರದಿ ಮಾಡಿದ ಕತೆಗಳನ್ನು ಅನುವಾದಿಸುವಾಗಲೂ ಹೆಣಗಾಡುವಂತಾಗುತ್ತದೆ. ಮೂಲತಃ ಹಿಂದಿ ಅಥವಾ ಗುಜರಾತಿಯಲ್ಲಿ ಬರೆಯಲ್ಪಟ್ಟ ಕತೆ ಚೆನ್ನಾಗಿಯೇ ಓದಿಸಿಕೊಳ್ಳುವಂತಿರುತ್ತದೆ. ಆದರೆ ಮೂಲಕ್ಕೆ ನಿಷ್ಟವಾಗಿ ಅದನ್ನು ಇಂಗ್ಲಿಷಿಗೆ ಅನುವಾದಿಸಿದಾಗ ಅದರ ಕಟ್ಟೋಣ, ವಾಕ್ಯ ರಚನೆ, ಪಾರಿಭಾಷಿಕ ಪದಗಳು ಯೋಜಿತವಾಗಿರುವಂತೆ ಭಾಸವಾಗುತ್ತದೆ. ಇಂತಹ ಸಂದರ್ಭದಲ್ಲಿ ನನ್ನ ನಿಷ್ಠೆ ಯಾವ ಕಡೆಗಿರಬೇಕು ಎನ್ನುವ ಗೊಂದಲ ನನ್ನನ್ನು ಕಾಡುತ್ತದೆ. ಅಂಚಿನಲ್ಲಿರುವ ಸಮುದಾಯಗಳ ಕತೆ ಹೇಳುವಾಗ ನಾನು ಮೂಲ ಕತೆಯ ಸ್ಫೂರ್ತಿಗೆ ನಿಷ್ಟವಾಗಿರಬೇಕೆ ಅಥವಾ ಅದರಲ್ಲಿ ಬಳಸಲಾಗಿರುವ ಮೂಲ ಲಿಪಿ, ಪದಗಳಿಗೆ ನಿಷ್ಠವಾಗಿರಬೇಕೆ ಎನ್ನುವುದು ಸದಾ ಇಕ್ಕಟ್ಟಿಗೆ ದೂಡುತ್ತದೆ. ನಾನು ಇಂಗ್ಲಿಷ್‌ ಭಾಷೆಯಲ್ಲಿ ಸಂಪಾದಿಸಬೇಕೋ, ಭಾರತೀಯ ಭಾಷೆಯಲ್ಲಿ ಸಂಪಾದಿಸಬೇಕೋ ಎನ್ನುವುದು ಸದಾ ದೀರ್ಘ ಆಲೋಚನೆಗೆ ದೂಡುವ ಸಂಗತಿಯಾಗಿದೆ. ಇದು ವಿಚಾರ ವಿನಿಮಯಕ್ಕೆ ಕಾರಣವಾಗಿ, ಸಂದರ್ಭಾನುಸಾರ ಈ ನಿಷ್ಠೆ ಒಂದರಿಂದ ಒಂದಕ್ಕೆ ಬದಲಾಗುತ್ತದೆ.

ವಿವಿಧ ಭಾಷೆಗಳ ನಡುವೆ ಸಂಪರ್ಕವಿರುವುದರಿಂದ ಅನುವಾದಗಳು ಸಾಧ್ಯವಾಗಿದೆ. ಆದರೆ ಚಿತ್ರಗಳು, ಶಬ್ದಗಳು, ಭಾಷೆ, ಜ್ಞಾನ, ಸಂಸ್ಕೃತಿ ಮತ್ತು ವ್ಯಕ್ತಿತ್ವದ ನಡುವಿನ ಸಂಪರ್ಕಗಳು ಅದನ್ನು ತುಂಬಾ ವಿಶೇಷವಾಗಿಸುತ್ತವೆ. ನಾನು ಪರಿಯೊಂದಿಗೆ ಕೆಲಸ ಮಾಡುತ್ತಾ ಅದು ಎಷ್ಟು ವಿಶೇಷವಾಗಿದೆ ಎನ್ನುವುದು ನನ್ನ ಅರಿವಿಗೆ ಬಂತು. ಇಲ್ಲಿ ನಾವು ಒಂದೇ ಕಥೆಯನ್ನು ಎರಡು ವಿಭಿನ್ನ ಭಾಷೆಗಳಲ್ಲಿ ಎರಡು ಬಾರಿ ಹೇಳಿರುತ್ತೇವೆ. ಆದರೆ ಅವು ವಿಭಿನ್ನ ಕಥೆಗಳಲ್ಲ, ಆದರೇ ಅದೇ ಸಮಯಕ್ಕೆ ಅದನ್ನು ಕೇವಲ ಅನುವಾದ ಎಂದು ಕರೆಯಲು ನನಗೆ ಮನಸ್ಸು ಬರುವುದಿಲ್ಲ.

ಜೋಶುವಾ: ಅನುವಾದವೆಂದರನೇ ಮರುಸೃಷ್ಟಿಯಲ್ಲವೆ ಪ್ರತಿಷ್ಠಾ ದೀ? ಅದೊಂದು ರೂಪಾಂತರದ ಪ್ರಕ್ರಿಯೆಯೆನ್ನುವುದು ನನ್ನ ಅಭಿಪ್ರಾಯ, ನಾನು ಗ್ರೈಂಡ್‌ಮಿಲ್‌ ಸಾಂಗ್‌ ಪ್ರಾಜೆಕ್ಟ್‌ನ ಲಾವಣಿಗಳನ್ನು ಬಾಂಗ್ಲಾ ಭಾಷೆಗೆ ಅನುವಾದಿಸುವಾಗ ಅದನ್ನೇ ಮಾಡುವುದು. ಅವು ನನ್ನ ಭಾಷೆಯಲ್ಲಿ ಮರುಹುಟ್ಟು ಪಡೆಯುತ್ತವೆ. ನನಗನ್ನಿಸುವ ಹಾಗೆ ಕವಿಯಾಗುವುದು ಕಷ್ಟವಾದರೆ, ಕವಿತೆಯನ್ನು ಅನುವಾದಿಸುವುದು ಅದಕ್ಕೂ ಕಷ್ಟ!

ಯಾರಾದರೂ ಅಭಿವ್ಯಕ್ತಿ, ಕಲ್ಪನೆ, ಚಿತ್ರಣ, ಶಬ್ದಕೋಶ, ಪ್ರಾಸ, ಲಯ ಮತ್ತು ರೂಪಕಗಳ ಸಂಪೂರ್ಣ ವ್ಯಾಪ್ತಿಯನ್ನು ಹಾಗೆಯೇ ಉಳಿಸಿಕೊಂಡು ಮರಾಠಿ ಮೌಖಿಕ ಸಾಹಿತ್ಯವನ್ನು ಹೇಗೆ ಮರುಸೃಷ್ಟಿಸಲು ಸಾಧ್ಯ? ಗ್ರಾಮೀಣ ಗಾಯಕರು-ಗೀತರಚನೆಕಾರರಿಂದ ಪ್ರೇರಿತನಾಗಿ, ನಾನು ನನ್ನ ಕವಿತೆಯನ್ನು ಮಹಿಳೆಯಂತೆ ಯೋಚಿಸಲು ಮತ್ತು ಜಾತಿ ವ್ಯವಸ್ಥೆ, ಪಿತೃಪ್ರಭುತ್ವ ಮತ್ತು ವರ್ಗ ಹೋರಾಟದ ಪುಡಿ ಗಿರಣಿಯಲ್ಲಿ ಪುಡಿಪುಡಿಯಾದ ಅಸಹಾಯಕ ಧಾನ್ಯಗಳು ಹರಿಯುವಂತೆ ಮಾಡಲು ಸದಾ ಪ್ರಯತ್ನಿಸುತ್ತೇನೆ. ಪ್ರತಿ ಬಾರಿಯೂ, ನಾನು ಗ್ರಾಮೀಣ ಬಂಗಾಳದ ಸ್ತ್ರೀ ಸಂಗೀತ-ಕಾವ್ಯಾತ್ಮಕ ಮೌಖಿಕ ಸಂಪ್ರದಾಯಗಳಾದ ತುಸು, ಭಾದು, ಕುಲೋ-ಝರಾ ಗಾನ್ ಅಥವಾ ಬ್ರೊತೊಕೊಥಾದಲ್ಲಿ ಅವುಗಳಿಗೆ ಪೂರಕಗಳನ್ನು ಹುಡುಕುತ್ತೇನೆ.

ಇದು ಎಷ್ಟು ಆಕರ್ಷಕ ಕೆಲಸವೋ ಅಷ್ಟೇ ತ್ರಾಸದಾಯಕ ಕೆಲಸವೂ ಆಗಿರುತ್ತದೆ.

PHOTO • Labani Jangi

ಮೇಧಾ: ನನ್ನ ಹತ್ತಿರ ಕೇಳಿ. ಯಾವುದನ್ನು ಅನುವಾದಿಸುವುದು ಕಷ್ಟ ಎಂದು ನಾನು ಹೇಳುತ್ತೇನೆ. ಹಾಸ್ಯವನ್ನು ಅನುವಾದಿಸುವುದು ನಿಜಕ್ಕೂ ಕಷ್ಟದ ಕೆಲಸ. ಅದರಲ್ಲೂ ಸಾಯಿನಾಥ್‌ ಅವರ ವರದಿಗಳು! ಅವರ ಎಲಿಫೆಂಟ್‌ ಮ್ಯಾನ್‌ ಎಂಡ್‌ ಬೆಲ್ಲಿ ಆಫ್‌ ದಿ ಬೀಸ್ಟ್‌ ಕತೆಯನ್ನು ಓದುವಾಗ ಮುಖದ ಮೇಲೆ ನಗು ಮೂಡಿಸುತ್ತದೆ ಆದರೆ ಅದೇ ಸಮಯಕ್ಕೆ ಅದು ತಲೆಯನ್ನೂ ಕೆಡಿಸುತ್ತದೆ. ಇದರಲ್ಲಿನ ಪ್ರತಿ ಶಬ್ಧವೂ ಪರ್ಬತಿ ಎಂಬ ಸೌಮ್ಯ ಆನೆಯ ಮೇಲೆ ಕುಳಿತು, ಅವಳ ಪ್ರೀತಿಯ ಮಾವುತನಾದ ಪರ್ಭುವಿನೊಂದಿಗೆ ಹರಟೆ ಹೊಡೆಯುವ ಮೂವರು ಪುರುಷರ ಆಕರ್ಷಕ ಚಿತ್ರವನ್ನು ಸೃಷ್ಟಿಸುತ್ತದೆ.  ಈ ಮೃಗದ ಹೊಟ್ಟೆ ತುಂಬಿಸಲು ಮಾವುತ ಏನು ಮಾಡುತ್ತಾನೆನ್ನುವುದನ್ನು ತಿಳಿದುಕೊಳ್ಳುವ ಅವರ ಪ್ರಯತ್ನವು ಕೊನೆಗೂ ವ್ಯರ್ಥವಾಗುತ್ತದೆ.

ವಿವರಗಳಲ್ಲಿ ರಾಜಿ ಮಾಡಿಕೊಳ್ಳದೆ ಮತ್ತು ಆನೆ ಸವಾರಿಯ ಲಯ ಮತ್ತು ವೇಗವನ್ನು ಹಾಳು ಮಾಡದೆ ನಾನು ಆ ಕತೆಯ ಸೌಂದರ್ಯವನ್ನು ಮರಾಠಿಯಲ್ಲಿ ಭಾಷಾಂತರಿಸಬೇಕಾಗಿತ್ತು.

ಈ ಸವಾಲು ಶೀರ್ಷಿಕೆಯಿಂದಲೇ ಪ್ರಾರಂಭವಾಯಿತು, ಇದು ಪರಿ ಕತೆಗಳನ್ನು ಅನುವಾದಿಸುವಾಗ ನಾವು ಸಾಮಾನ್ಯವಾಗಿ ಎದುರಿಸುವ ಸಮಸ್ಯೆ. ಕೊನೆಯಲ್ಲಿ, ದೈತ್ಯ ಪ್ರಾಣಿಗೆಗೆ ಆಹಾರವನ್ನು ನಿರಂತರವಾಗಿ ನೀಡುವ ಅಗತ್ಯವು ನನ್ನನ್ನು 'ಬಕಾಸುರ' ಎಂಬ ಪ್ರಸಿದ್ಧ ಪಾತ್ರದ ಬಳಿ ಕರೆದೊಯ್ಯಿತು, ಅವನಿಗೆ ಪ್ರತಿದಿನ ಇಡೀ ಹಳ್ಳಿ ಆಹಾರವನ್ನು ನೀಡಬೇಕಾಗಿತ್ತು. ಕೊನೆಗೆ ನಾನು ಮರಾಠಿಯಲ್ಲಿ ಈ ರೀತಿಯಾಗಿ ಶೀರ್ಷಿಕೆ ನೀಡಿದೆ: हत्ती दादा आणि बकासुराचं पोट . (ಹತ್ತೀ ದಾದಾ ಆಣಿ ಬಕಾಸುರಾಂಚ ಪೇಟ್)

"ಬೆಲ್ಲಿ ಆಫ್ ದಿ ಬೀಸ್ಟ್" ಅಥವಾ "ಪಂಡೋರ ಬಾಕ್ಸ್" ಅಥವಾ "ಥಿಯೇಟ್ರಿಕಲ್ ಆಫ್ ದಿ ಆಪ್ಟಿಕ್ಸ್" ನಂತಹ ವಿಷಯಗಳನ್ನು ಅನುವಾದಿಸುವಾಗ ನಮ್ಮ ಓದುಗರಿಗೆ ತಿಳಿದಿರುವ ಪದಗಳು, ಆಲೋಚನೆಗಳು ಮತ್ತು ಪಾತ್ರಗಳನ್ನು ಹುಡುಕುವುದು ಬಹಳ ಮುಖ್ಯ ಎನ್ನುವುದು ನನ್ನ ಭಾವನೆ.

ಪ್ರತಿಷ್ಠಾ: ಇನ್ನೊಂದು ಸಂಸ್ಕೃತಿಯ ಕವಿತೆಯನ್ನು ಅನುವಾದಿಸುವಾಗ ನಾನು ಈ ಸ್ವಾತಂತ್ರ್ಯವನ್ನು ಆಗಾಗ ತೆಗೆದುಕೊಳ್ಳುತ್ತೇನೆ. ಆದರೆ ಪರಿ ಕತೆಗಳನ್ನು ಅನುವಾದಿಸುವಾಗಲೂ ಇದನ್ನು ಏಕೆ ಮಾಡಬೇಕಾಗುತ್ತದೆ ಎನ್ನುವುದು ನನಗೂ ಅರ್ಥವಾಗುತ್ತದೆ. ಅನುವಾದಿತ ಕತೆಯಲ್ಲಿನ ಪದಗಳ ಅರ್ಥದ ಒಂದು ಭಾಗವನ್ನು ಓದುಗರೂ ವ್ಯಾಖ್ಯಾನಿಸುತ್ತಾರೆ ಎನ್ನುವುದು ನನ್ನ ಅಭಿಪ್ರಾಯ.

PHOTO • Labani Jangi

ʼಪರಿ ಅನುವಾದವೆಂದರೆ  ಕೇವಲ ಇಂಗ್ಲಿಷಿನಲ್ಲಿರುವುದನ್ನು ಇನ್ನೊಂದು ಭಾಷೆಗೆ ತಂದು ಸುರಿಯುವ ಭಾಷಿಕ ಕ್ರಿಯೆಯಲ್ಲ. ನಮ್ಮ ಜಗತ್ತಿನಾಚೆಗೆ ಇರುವ ಜಗತ್ತನ್ನು ನೋಡುವ ಪ್ರಯತ್ನʼ – ಪಿ. ಸಾಯಿನಾಥ್

ಕಮಲ್ಜಿತ್:‌ ಇದು ಪಂಜಾಬಿಯಲ್ಲಿ ಹೇಗಾಗುತ್ತದೆ ಎನ್ನುವುದನ್ನು ನಾಉ ಹೇಳ್ತೀನಿ. ಕೆಲವೊಮ್ಮೆ ನಾನು ನಮ್ಮ ಭಾಷೆಯ ನಿಯಮಗಳನ್ನು ತಿರುಚಿ ಅದನ್ನು ನನ್ನ ಅನುವಾದಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬೇಕಾಗುತ್ತದೆ! ಕೆಲವೊಮ್ಮೆ ಹಾಗೆ ಮಾಡಿದ್ದಕ್ಕಾಗಿ ನಾನು ವಿಮರ್ಶೆಗೆ ಒಳಗಾಗುವುದೂ ಇದೆ.

ಉದಾಹರಣೆಗೆ, ಇಂಗ್ಲಿಷ್ ಭಾಷೆಯಲ್ಲಿನ ಎಲ್ಲಾ ಕಥೆಗಳು ಸಾಮಾಜಿಕ ವ್ಯತ್ಯಾಸಗಳನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳಿಗೆ ಏಕರೂಪದ ಸರ್ವನಾಮವನ್ನು ಬಳಸುತ್ತವೆ. ಪಂಜಾಬಿಯಲ್ಲಿ, ಇತರ ಭಾರತೀಯ ಭಾಷೆಗಳಲ್ಲಿರುವಂತೆ, ಸರ್ವನಾಮಗಳು ವ್ಯಕ್ತಿಯ ಶ್ರೇಣಿ, ವಯಸ್ಸು, ವರ್ಗ, ಸಾಮಾಜಿಕ ಸ್ಥಾನಮಾನ, ಲಿಂಗ ಮತ್ತು ಜಾತಿಯನ್ನು ಅವಲಂಬಿಸಿ ಬದಲಾಗುತ್ತವೆ. ಇಲ್ಲಿ, ಪರಿ ಕಥೆಯನ್ನು ಇಂಗ್ಲಿಷ್ ಭಾಷೆಯಿಂದ ಪಂಜಾಬಿಗೆ ಅನುವಾದಿಸುವಾಗ, ನಾನು ನನ್ನ ಭಾಷೆಯ ಸಾಮಾಜಿಕ-ಭಾಷಾ ಮಾನದಂಡಗಳನ್ನು ಅನುಸರಿಸಿದರೆ, ಅದು ನಮ್ಮ ಸೈದ್ಧಾಂತಿಕ ನಂಬಿಕೆಗಳಿಗೆ ವಿರುದ್ಧವಾಗಿರುತ್ತದೆ.

ಹೀಗಾಗಿ ಭಾಷಾಂತರ ಪ್ರಕ್ರಿಯೆಯಲ್ಲಿ ನಾವು ಗುರು, ರಾಜಕಾರಣಿ, ವಿಜ್ಞಾನಿ, ನೈರ್ಮಲ್ಯ ಕಾರ್ಮಿಕ, ಪುರುಷ ಅಥವಾ ಟ್ರಾನ್ಸ್ ವುಮನ್ ಹೀಗೆ ಯಾರೇ ಆಗಿರಲಿ ಎಲ್ಲಾ ಮನುಷ್ಯರನ್ನು ಸಮಾನ ಗೌರವದಿಂದ ಪರಿಗಣಿಸಬೇಕೆಂದು ನಾವು ಮೊದಲಿನಿಂದಲೂ ನಿರ್ಧರಿಸಿದ್ದೇವೆ.

ತಾರ್ನ್ ತರಣ್ ಭೂಮಾಲೀಕರ ಮನೆಗಳಲ್ಲಿ ದನದ ಸಗಣಿಯನ್ನು ಎತ್ತುವ ದಲಿತ ಮಹಿಳೆ ಮಂಜಿತ್ ಕೌರ್ ಅವರ ಕಥೆಯನ್ನು ನಾವು ಪಂಜಾಬಿಯಲ್ಲಿ ಪ್ರಕಟಿಸಿದಾಗ , ಓದುಗರಿಂದ ನನಗೆ ಸಂದೇಶಗಳು ಬರಲಾರಂಭಿಸಿದವು, "ನಿಮ್ಮ ಭಾಷೆಯಲ್ಲಿ ಮಂಜಿತ್ ಕೌರ್‌ ಅವರಿಗೆ ಏಕೆ ಇಷ್ಟು ಗೌರವ ನೀಡಿದ್ದೀರಿ. ಮಂಜಿತ್ ಕೌರ್ ಇಕ್ ಮಜಾಬಿ ಸಿಖ್ ಹಾಣ್. ಓಹ್ ಜಿಮಿದಾರನ್ ದಿ ಘರಾನ್ ದಾ ಗೋಹಾ ಚುಕ್ದಿ ಹಾಣ್?" ನಾನು ನಿಯಮಗಳನ್ನು ಪಾಲಿಸದ ಕಾರಣ ಮತ್ತು 'ಹೈ' ಬದಲಿಗೆ 'ಹಾಣ್' ಪದವನ್ನು ಬಳಸಿದ್ದರಿಂದಾಗಿ ಅನೇಕ ಓದುಗರು ನಾನು ಮಷೀನ್‌ ಟ್ರಾನ್ಸಲೇಷನ್‌ ಬಳಸಿರಬಹುದು ಎಂದು ಅನುಮಾನಿಸಿದ್ದರು.

ದೇವೇಶ್:‌ ಅರೇ, ಹಿಂದಿಯಲ್ಲಿ ಕೂಡಾ ಅಂಚಿನಲ್ಲಿರುವ ಸಮುದಾಯದ ಜನರನ್ನು ಗೌರವಿಸುವ ಪದಗಳಿಲ್ಲ. ಅವರನ್ನು ಮುಜುಗರಕ್ಕೆ ಈಡು ಮಾಡದ ಪದಗಳನ್ನು ಹುಡುಕುವುದು ಬಹಳ ಕಷ್ಟ. ಆದರೆ ನಮ್ಮ ಅನುವಾದದ ಪ್ರಕ್ರಿಯೆಯು ಈ ಕೊರತೆಯನ್ನು ಮೀರಿ ಹೊಸ ಪದಗಳನ್ನು ಸೃಷ್ಟಿಸುವಂತೆ ಹಾಗೂ ಇತರ ಭಾಷೆಗಳಿಂದ ಪದಗಳನ್ನು ಪಡೆಯುವಂತೆ ಮಾಡುತ್ತದೆ.

ಪ್ರಕೃತಿ, ವಿಜ್ಞಾನ, ಲಿಂಗ ಅಥವಾ ಲೈಂಗಿಕತೆ ಅಥವಾ ಅಂಗವೈಕಲ್ಯಕ್ಕೆ ಸಂಬಂಧಿಸಿದಂತೆ ಸರಿಯಾದ ಪದಗಳನ್ನು ಹುಡುಕುವುದು ಬಹಳ ಕಷ್ಟವಾಗುತ್ತದೆ. ಈ ವಿಷಯದಲ್ಲಿ ಹಿಂದಿ ಶಬ್ದಕೋಶವು ಸೂಕ್ತ ಪದಗಳಿಂದ ವಂಚಿತವಾಗಿದೆ. ಕೆಲವೊಮ್ಮೆ ಭಾಷೆಯ ವೈಭವೀಕರಣದ ಮೂಲಕ, ಮೂಲಭೂತ ಪ್ರಶ್ನೆಗಳನ್ನು ಸರಳವಾಗಿ ಕಣ್ಮರೆ ಮಾಡಲಾಗುತ್ತದೆ - ಉದಾಹರಣೆಗೆ ಮಹಿಳೆಯರನ್ನು ದೇವತೆಗಳು ಎಂದು ವರ್ಣಿಸಲಾಗುತ್ತದೆ ಅಥವಾ ಅಂಗವಿಕಲರನ್ನು 'ದಿವ್ಯಾಂಗರು' ಎಂದು ಕರೆಯಲಾಗುತ್ತದೆ; ಆದರೆ  ವಾಸ್ತವವನ್ನು ನೋಡಿದಾಗ, ಅಲ್ಲಿ ಅವರ ಪರಿಸ್ಥಿತಿ ಮೊದಲಿಗಿಂತಲೂ ಕೆಟ್ಟದಾಗಿರುತ್ತದೆ.

ಕವಿತಾ ಅಯ್ಯರ್‌ ವರದಿ ಮಾಡಿದ ‘मैं नलबंदी कराने के लिए घर से अकेली ही निकल गई थी’ (‘ಸಂತಾನ ಹರಣ ಚಿಕಿತ್ಸೆಗೆ ಒಬ್ಬಳೇ ನಡೆದುಕೊಂಡು ಹೋಗಿದ್ದೆʼ) ಕತೆಯನ್ನು ಅನುವಾದಿಸುವಾಗ ನನ್ನ ಅನುಭವಕ್ಕೆ ಬಂದಿದ್ದು ಏನೆಂದರೆ, ಅಗಾಧವಾದ ಸಾಹಿತ್ಯದ ಹೊರತಾಗಿಯೂ, ಹಿಂದಿಯ ಸಾಹಿತ್ಯೇತರ ಪ್ರಕಾರಗಳು ಜನರ ನೋವಿನ ಸ್ಪಷ್ಟ ಚಿತ್ರಣವನ್ನು ಹೊಂದಿಲ್ಲ ಎನ್ನುವುದು. . ಜ್ಞಾನ, ವಿಜ್ಞಾನ, ಔಷಧ ಮತ್ತು ಆರೋಗ್ಯ ಹಾಗೂ ಸಮಾಜದ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಉಪಯೋಗಿಸಬಹುದಾದ ಪಾರಿಭಾಷಿಕ ಶಬ್ಧಗಳನ್ನು ಹಿಂದಿಯಲ್ಲಿ ಸಾಕಷ್ಟು ಅಭಿವೃದ್ಧಿಪಡಿಸಲಾಗಿಲ್ಲ.

PHOTO • Labani Jangi

ಸ್ವರ್ಣ ಕಾಂತಾ: ಭೋಜಪುರಿ ಭಾಷೆಯಲ್ಲೂ ಅದೇ ಕತೆ. ಅಥವಾ ಇಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಏಕೆಂದರೆ ಈ ಭಾಷೆಯಲ್ಲಿ ಮಾತನಾಡುವವರಿಗೆ ಹೋಲಿಸಿದರೆ ಬರಹಗಾರರ ಸಂಖ್ಯೆ ಬಹಳ ಕಡಿಮೆಯಿದೆ. ಭೋಜಪುರಿ ಭಾಷೆ ಶೈಕ್ಷಣಿಕ ಮಾಧ್ಯಮದಲ್ಲಿ ಇಲ್ಲದ ಕಾರಣ ಅದರಲ್ಲಿ ವೈದ್ಯಕೀಯ, ಎಂಜಿನಿಯರಿಂಗ್, ಇಂಟರ್ನೆಟ್, ಸಾಮಾಜಿಕ ಮಾಧ್ಯಮ ಮುಂತಾದ ಹೊಸ ಉದ್ಯೋಗಗಳಿಗೆ ಸಂಬಂಧಿಸಿದ ಪದಗಳಿಲ್ಲ.

ನೀವು ಸೂಚಿಸಿದಂತೆ ಹೊಸ ಪದಗಳನ್ನು ರಚಿಸಬಹುದು, ದೇವೇಶ್, ಅದರಲ್ಲೂ ಹಲವು ಗೊಂದಲಗಳಿವೆ. 'ಟ್ರಾನ್ಸ್‌ಜೆಂಡರ್' ರೀತಿಯ ಪದಗಳಿಗೆ, ಸಾಂಪ್ರದಾಯಿಕವಾಗಿ ನಾವು 'ಹಿಜ್ರಾ', 'ಚಕ್ಕಾ', 'ಲೌಂಡಾ' ಮುಂತಾದ ಪದಗಳನ್ನು ಬಳಸಿದ್ದೇವೆ, ಇದು ನಾವು ಇಂಗ್ಲಿಷಿನಲ್ಲಿ ಬಳಸುವ ಪದಗಳಿಗೆ ಹೋಲಿಸಿದರೆ ಅತ್ಯಂತ ಆಕ್ರಮಣಕಾರಿಯಾಗಿದೆ. ಅಂತೆಯೇ, ನಾವು ಎಷ್ಟೇ ಪ್ರಯತ್ನಿಸಿದರೂ, ಮಹಿಳಾ ದಿನ, ಮಾನಸಿಕ ಆರೋಗ್ಯ, ಕೃತ್ಯಗಳು ಅಥವಾ ಪ್ರತಿಮೆಗಳ ಹೆಸರುಗಳು (ಆರೋಗ್ಯ ಕಾಯ್ದೆ), ಕ್ರೀಡಾ ಪಂದ್ಯಾವಳಿಗಳ ಹೆಸರುಗಳು (ಪುರುಷರ ಅಂತರರಾಷ್ಟ್ರೀಯ ವಿಶ್ವಕಪ್) ಮುಂತಾದ ಹೆಸರುಗಳನ್ನು ಭಾಷಾಂತರಿಸುವುದು ಅಸಾಧ್ಯ.

ಬಿಹಾರದ ಸಮಸ್ತಿಪುರ ಜಿಲ್ಲೆಯ 19 ವರ್ಷದ ಶಿವಾನಿ ಎಂಬ ಮಹಾದಲಿತ ಯುವತಿಯೊಬ್ಬಳು ಜಾತಿ ಮತ್ತು ಲಿಂಗ ತಾರತಮ್ಯದ ವಿರುದ್ಧ ತನ್ನ ಕುಟುಂಬ ಮತ್ತು ಹೊರಜಗತ್ತಿನ ವಿರುದ್ಧ ಹೋರಾಡುತ್ತಿರುವ ಕತೆಯನ್ನು ಅನುವಾದಿಸಿದ್ದು ನನಗೆ ನೆನಪಿದೆ. ಇಂತಹ ತಾರತಮ್ಯಗಳು ನನಗೆ ತೀರಾ ಹತ್ತಿರದಿಂದ ತಿಳಿದಿದ್ದರೂ, ಇವುಗಳ ಕುರಿತಾದು ಓದು ನಮ್ಮ ಪಾಲಿಗೆ ದುರ್ಲಭ ಎನ್ನುವುದು ನನ್ನ ಅರಿವಿಗೆ ಬಂತು.

ಅನುವಾದಗಳು ಸಮುದಾಯದ ಬೌದ್ಧಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಕೊಡುಗೆ ನೀಡುತ್ತವೆ ಎನ್ನುವುದು ನನ್ನ ನಂಬಿಕೆ.

ನಿರ್ಮಲ್:‌ ಒಂದು ಪ್ರಮಾಣಿಕೃತ ಮಾದರಿಯಿಲ್ಲದ ಭಾಷೆಯಲ್ಲಿ ಕೆಲಸ ಮಾಡುವಾಗಲೂ ಈ ಸಮಸ್ಯೆ ಎದುರಾಗುತ್ತದೆ. ಛತ್ತೀಸಗಢದ ಐದು ಭಾಗಗಳಲ್ಲಿ ಛತ್ತೀಸಗಢಿ ಭಾಷೆಯ ಎರಡು ಡಜನ್ನಿಕ್ಕೂ ಮಿಕ್ಕಿದ ರೂಪಗಳಿವೆ - ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಮಧ್ಯ. ಹೀಗಾಗಿ ಛತ್ತೀಸಗಡಿಗೆ ಅನುವಾದಿಸುವುದೆಂದರೆ ನಿಜಕ್ಕೂ ಸವಾಲಿನ ಕೆಲಸ. ಈ ಭಾಷೆಯಲ್ಲಿ ಒಂದು ಪ್ರಮಾಣೀಕೃತ ಭಾಷಾ ಮಾದರಿಯಿಲ್ಲ. ಕೆಲವೊಮ್ಮೆ ನಿರ್ದಿಷ್ಟ ಪದಗಳನ್ನು ಆಯ್ದುಕೊಳ್ಳಲು ಹೊರಟಾಗ ನನಗೆ ಗೊಂದಲ ಕಾಡುತ್ತದೆ. ಅಂತಹ ಸಂದರ್ಭಗಳಲ್ಲಿ ನಾನು ಪತ್ರಕರ್ತ ಮಿತ್ರರು, ಸಂಪಾದಕರು, ಬರಹಗಾರರು, ಶಿಕ್ಷಕರು ಸಹಾಯ ಪಡೆಯುತ್ತೇನೆ ಅಥವಾ ಪುಸ್ತಕದ ಮೊರೆ ಹೋಗುತ್ತೇನೆ.

ಸಾಯಿನಾಥ್‌ ಅವರ ಎಚ್ಚರಿಕೆ, ಉಡುಗೊರೆ ನೀಡುವ ಗುತ್ತಿಗೆದಾರರಿದ್ದಾರೆ ಎನ್ನುವ ವರದಿಯನ್ನು ಅನುವಾದ ಮಾಡುವಾಗ ನನಗೆ ಇದೇ ಸಮಸ್ಯೆ ಎದುರಾಯಿತು. ಹಲವು ಛತ್ತೀಸಗಢಿ ಪದಗಳು ಸಿಗದೆ ಒದ್ದಾಡಿದೆ. ಛತೀಸಗಢದ ಸುರ್ಗುಜಾ ಎನ್ನುವುದು ಜಾರ್ಖಂಡ್‌ ಗಡಿಯಲ್ಲಿದೆ. ಇಲ್ಲಿ ಉರಾಣ್‌ ಆದಿವಾಸಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಕಾಡಿಗೆ ಸಂಬಂಧಿಸಿದಂತೆ ಅವರು ಬಳಸುವ ಪದಗಳು ಛತ್ತೀಸಗಢಿಯನ್ನೇ ಹೋಲುತ್ತವೆ. ಅದು ಮಹಿಳೆಯರನ್ನು ಕೇಂದ್ರದಲ್ಲಿಟ್ಟುಕೊಂಡು ಬರೆಯಲಾಗಿದ್ದ ವರದಿಯಾದ ಕಾರಣ ನಾನು ಆದಿವಾಸಿಗಳ ಸಂಪರ್ಕ ಸಾಧಿಸಲು ಪ್ರಯತ್ನಿಸಿದೆ. ಅವರು ತಮ್ಮ ದೈನದಂದಿನ ಬದುಕಿನಲ್ಲಿ ಬಳಸುವ ಪದಗಳನ್ನೇ ಬಳಸಲು ಯತ್ನಿಸಿದೆ. ಅದೇನೇ ಇದ್ದರೂ ಈ ಸಮುದಾಯದ ಜನರ ಮನೆಮಾತು ಕುರುಖ್‌ ಎನ್ನುವ ಭಾಷೆ.

ಒಂದು ಕಾಲದಲ್ಲಿ ನಿತ್ಯದ ಬದುಕಿನಲ್ಲಿ ಬೇರೂರಿದ್ದ ಸುಕುರ್ದುಮ್, ಕೌವ್ವಾ, ಹಂಕಾ, ಹ್ಯಾಂಕೆ, ಲಂಡಾ, ಫಂಡಾ, ಖೇಡಾ, ಅಲ್ಕರ್ಹಾ ಮುಂತಾದ ಪದಗಳು ಈಗ ಬಳಕೆಯಲ್ಲಿಲ್ಲ ಎಂದು ತಿಳಿದು ಆಶ್ಚರ್ಯವಾಯಿತು, ಇದಕ್ಕೆ ಕಾರಣ ಈ ಸಮುದಾಯಗಳಿಗೆ ತಮ್ಮ ನೀರು, ಕಾಡು ಮತ್ತು ಭೂಮಿಗೆ ಪ್ರವೇಶ ನಿರಾಕರಿಸಲಾಗಿರುವುದು.

PHOTO • Labani Jangi

ʼನಮ್ಮ ಪರಿಸರ, ಉದ್ಯೋಗ ಮತ್ತು ಪ್ರಜಾಪ್ರಭುತ್ವ ಎಲ್ಲವೂ ಭಾಷೆಗಳೊಡನೆ ಸಂಕೀರ್ಣ ಸಂಬಂಧ ಹೊಂದಿವೆ. ಅವುಗಳಲ್ಲಿನ ಅಗಾಧ ವೈವಿಧ್ಯತೆ ಇಂದಿನ ಬದುಕಿಗೆ ಬಹಳ ಮುಖ್ಯ' – ಪಿ. ಸಾಯಿನಾಥ್

ಪಂಕಜ್: ಅನುವಾದಕನೊಬ್ಬ ತಾನು ಅನುವಾದಿಸುತ್ತಿರುವ ಭಾಷೆಯ ಜನರ ಜಗತ್ತಿಗೆ ಪ್ರವೇಶಿಸುವುದು ಎಷ್ಟು ಮುಖ್ಯ ಎನ್ನುವುದು ನನಗೆ ತಿಳಿದಿದೆ. ಅರುಷ್ ಅವರ ಕತೆಯ ಅನುವಾದದಿಂದ ನನಗೆ ಟ್ರಾನ್ಸ್‌ಜೆಂಡರ್ ಪುರುಷ ಮತ್ತು ಮಹಿಳೆಯ ನಡುವಿನ ಪ್ರೀತಿಯ ತೀವ್ರತೆಯನ್ನು ಮಾತ್ರವಲ್ಲ, ಅವರ ಹೋರಾಟದ ಸಂಕೀರ್ಣತೆ ಸಹ ಅರಿವಿಗೆ ಬಂತು. ಸರಿಯಾದ ಪದವನ್ನು ಕಂಡುಹಿಡಿಯಲು ಪರಿಭಾಷೆಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸಲು ನಾನು ಕಲಿತಿದ್ದೇನೆ, ಉದಾಹರಣೆಗೆ, 'ಲಿಂಗ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆ ('reassignment surgery')'ಯಂತಹ ಪದಗಳನ್ನು ಬ್ರಾಕೆಟ್‌ಗಳಲ್ಲಿ ಇರಿಸುವುದು ಮತ್ತು 'ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆ'ಯನ್ನು ಆವರಣದಲ್ಲಿ ತೋರಿಸುವುದು.

ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳನ್ನು ಪ್ರತಿನಿಧಿಸುವ ಕೆಲವು ಪದಗಳನ್ನು ಅಸ್ಸಾಮೊಯಲ್ಲಿ ನಾನು ಹುಡುಕಿಕೊಂಡಿದ್ದೇನೆ. ಈ ಪದಗಳು ಕೆಟ್ಟ ಅರ್ಥಗಳನ್ನು ಹೊಮ್ಮಿಸುವುದಿಲ್ಲ ಹಾಗೂ ಅವರನ್ನು ಅಪಮಾನಿಸುವುದಿಲ್ಲ. ʼರೂಪಾಂತರ್‌ಕಾಮಿ ಪುರುಷ್‌ ಅಥವಾ ನಾರಿʼ, ಅವರು ತಮ್ಮ ಲಿಂಗವನ್ನು ದೃಢಪಡಿಸಿದ್ದಲ್ಲಿ ನಾವು ಅವರನ್ನು ರೂಪಾಂತರಿತೋ ಪುರುಷ್‌ ಅಥವಾ ನಾರಿ ಎಂದು ಕರೆಯುತ್ತೇವೆ. ನಮ್ಮಲ್ಲಿ ಲೆಸ್ಬಿಯನ್‌ ಮತ್ತು ಗೇ ಸಮುದಾಯಕ್ಕೆ ಸೊಮೊಕಾಮಿ ಎನ್ನುವ ಪದವಿದೆ. ಆದರೆ ಇದುವರೆಗೆ ಕ್ವೀರ್‌ ಸಮುದಾಯದ ಘನತೆಯನ್ನು ಎತ್ತಿ ಹಿಡಿಯಬಲ್ಲ ಪ್ರಮಾಣೀಕೃತ ಪದಗಳ ಕೊರತೆಯನ್ನು ತುಂಬಲಾಗಿಲ್ಲ. ಆ ಪದಗಳನ್ನು ನಾವು ಕೇವಲ ಲಿಪ್ಯಂತರ ಮಾಡುತ್ತೇವೆ.

ರಾಜಸಂಗೀತನ್: ಪಂಕಜ್, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಲೈಂಗಿಕ ಕಾರ್ಯಕರ್ತರೊಂದಿಗೆ ವ್ಯವಹರಿಸಿದ ಮತ್ತೊಂದು ಕಥೆಯ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಅದನ್ನು ಓದಿ ನಾನು ಸಾಕಷ್ಟು ಪ್ರಭಾವಿತನಾದೆ. ಜಗತ್ತು ಈ ಹೊಸ ರೋಗವನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದಾಗ, ಬಡವರ ಬಗೆಗಿನ ವ್ಯವಸ್ಥಿತ ಅಹಂಕಾರ ಮತ್ತು ಉದಾಸೀನತೆಯೊಂದಿಗೆ, ಸಾಮಾನ್ಯ ಭಾರತೀಯರ ಸಮಸ್ಯೆಗಳು ದ್ವಿಗುಣಗೊಂಡವು. ಸವಲತ್ತು ಪಡೆದ ಜನರಿಗೂ ಜೀವನವು ಕಷ್ಟಕರವಾಗಿದ್ದ ಸಮಯದಲ್ಲಿ, ಸಮಾಜದ ಅಂಚಿನಲ್ಲಿರುವವರ ಬಗ್ಗೆ ಗಮನ ಹರಿಸಲು ಯಾರಿದ್ದರು? ಆಕಾಂಕ್ಷ ಬರೆದ ಕಾಮಾಟಿಪುರ ಕುರಿತ ಲೇಖನವು ಹಿಂದೆಂದೂ ನಮ್ಮ ಪ್ರಜ್ಞೆಯನ್ನು ಪ್ರವೇಶಿಸದ ಜನರ ಕಷ್ಟಗಳ ಕುರಿತು ಯೋಚಿಸುವಂತೆ ಮಾಡಿತು.

ಅವರ ಕೆಲಸದ ಸ್ಥಳ ಮತ್ತು ಮನೆ ಎರಡೂ ಆಗಿದ್ದ ಸಣ್ಣ ಕತ್ತಲೆ ಕೋಣೆಯಲ್ಲಿ ಅವರು ಈಗ ಶಾಲೆಯಿಲ್ಲದ ಮಕ್ಕಳಿಗೆ ಸ್ಥಳವನ್ನು ಹೊಂದಿಸುತ್ತಲೇ ತಮ್ಮ ಗ್ರಾಹಕರಿಗೂ ಸ್ಥಳ ಮಾಡಿಕೊಳ್ಳಬೇಕು! ಈ ಲಾಕ್‌ಡೌನ್‌ ಸಮಯ ಅವರ ಬದುಕಿನಲ್ಲಿ ದೊಡ್ಡ ಸಂದಿಗ್ಧತೆಯನ್ನೇ ಸೃಷ್ಟಿಸಿತ್ತು. ಈ ಹೊಸ ಪರಿಸ್ಥಿತಿಯನ್ನು ಎದುರಿಸಲು ಈ ಕುಟುಂಬಗಳು ಏನು ಮಾಡಬೇಕು? ಇದು ಮಕ್ಕಳ ಮೇಲೆ ಬೀರುವ ಪರಿಣಾಮವೇನು? ಲೈಂಗಿಕ ಕಾರ್ಯಕರ್ತೆಯಾಗಿ ಮತ್ತು ತಾಯಿಯಾಗಿ ಈ ಸಮಯದಲ್ಲಿ ಪ್ರಿಯಾ ಎಂತಹ ಪರಿಸ್ಥಿತಿಯನ್ನು ಎದುರಿಸಿರಬಹುದು? ಪ್ರಿಯಾ ತನ್ನ ಸ್ವಂತ ಭಾವನೆಗಳು ಮತ್ತು ಬದುಕಿನ ಹೋರಾಟದ ನಡುವೆ ಛಿದ್ರವಾಗಿದ್ದರು. ಈ ನಡುವೆ ಅವರ ಮಗ ವಿಕ್ರಮ್‌ ತನ್ನ ಸುತ್ತ ಕವಿದಿರುವ ಈ ಕತ್ತಲೆಯ ಲೋಕದಲ್ಲೇ ತನ್ನ ಬದುಕಿಗೆ ಅರ್ಥ ಕಂಡುಕೊಳ್ಳಲು ಹೆಣಗುತ್ತಿದ್ದ.

ಕುಟುಂಬ, ಪ್ರೀತಿ, ಭರವಸೆ, ಸಂತೋಷ ಮತ್ತು ಪೋಷಣೆಯ ಬಗೆಗಿನ ವಿಚಾರಗಳು ಈ ಕಥೆಯಲ್ಲಿ ಆಘಾತಕಾರಿ ರೂಪಗಳನ್ನು ಪಡೆದುಕೊಳ್ಳುತ್ತವೆ, ಆದರೆ ಆಶ್ಚರ್ಯಕರವಾಗಿ ಅದೇ ಸಾಮಾಜಿಕ ಅರ್ಥಗಳನ್ನು ಉಳಿಸಿಕೊಳ್ಳುತ್ತವೆ. ಈ ವರದಿಗಳನ್ನು ಅನುವಾದಿಸಲು ಆರಂಭಿಸಿದ ದಿನದಿಂದಲೇ ಮನುಷ್ಯನೊಳಗಿನ ಭರವಸೆಯೆಡೆಗೆ ಬದುಕು ಸಾಗಲಿದೆಯನ್ನುವ ನಂಬಿಕೆ ಮತ್ತು ಅದರೆಡಿಗಿನ ಅವರ ಪ್ರಯತ್ನಗಳನ್ನು ಮೆಚ್ಚಲು ಆರಂಭಿಸಿದೆ.

ಸುಧಾಮಯಿ: ಖಂಡಿತವಾಗಿಯೂ ಈ ಮಾತುಗಳನ್ನು ನಾನು ಒಪ್ಪುತ್ತೇನೆ. ನಾನು ಎಲ್ಜಿಬಿಟಿಕ್ಯೂಐಎ+ ಸಮುದಾಯದ ಕುರಿತಾದ ವರದಿಗಳನ್ನು ಅನುವಾದಿಸಲು ಪ್ರಾರಂಭಿಸುವ ಮೊದಲು ಈ ಸಮುದಾಯದ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ. ಪ್ರಾಮಾಣಿಕವಾಗಿ ಹೇಳುವುದಾದರೆ, ಈ ಜನರು ಮತ್ತು ಈ ವಿಷಯದ ಕುರಿತು ನನಗೆ ಭಯವಿತ್ತು. ಟ್ರಾನ್ಸ್ ಸಮುದಾಯದ ಜನರನ್ನು ರಸ್ತೆಗಳಲ್ಲಿ, ಸಿಗ್ನಲ್‌ಗಳ ಬಳಿ ಅಥವಾ ಅವರು ನಮ್ಮ ಮನೆಗಳಿಗೆ ಬಂದಾಗ, ನಾನು ಅವರನ್ನು ನೋಡಲು ಸಹ ಹೆದರುತ್ತಿದ್ದೆ. ಅವರು ಯಾವುದೋ ಅಸ್ವಾಭಾವಿಕ ರೀತಿಯಲ್ಲಿ ವರ್ತಿಸುತ್ತಾರೆ ಎಂದು ನಾನು ಕೂಡ ಭಾವಿಸುತ್ತಿದ್ದೆ.

ಈ ಕಥೆಗಳನ್ನು ಅನುವಾದಿಸುವಾಗ ಈ ವಿಷಯವನ್ನು ತಿಳಿದಿರುವ ಮತ್ತು ಸಮುದಾಯದ ಪರಿಭಾಷೆಗಳಿಗೆ ನ್ಯಾಯ ಒದಗಿಸಬಲ್ಲ ಜನರನ್ನು ನಾನು ಹುಡುಕಬೇಕಾಗಿತ್ತು. ಮತ್ತು ಆ ಕಥೆಗಳನ್ನು ಓದುವ, ಅರ್ಥಮಾಡಿಕೊಳ್ಳುವ ಮತ್ತು ನಂತರ ಸಂಪಾದಿಸುವ ಪ್ರಕ್ರಿಯೆಯಲ್ಲಿ, ನಾನು ಇನ್ನಷ್ಟು ಜ್ಞಾನವನ್ನು ಪಡೆದುಕೊಂಡೆ ಮತ್ತು ಈ ಮೂಲಕ ನನ್ನೊಳಗಿದ್ದ ಟ್ರಾನ್ಸೋ ಫೋಬಿಯಾವನ್ನು ನೀಗಿಸಿಕೊಂಡೆ. ಈಗ ನಾನು ಅವರನ್ನು ಎಲ್ಲ ಕಂಡರೂ ಪ್ರೀತಿಯಿಂದ ಒಂದೆರಡು ಮಾತುಗಳನ್ನಾಡಿಯೇ ಮುಂದುವರೆಯುತ್ತೇನೆ.

ನನ್ನ ಪ್ರಕಾರ ಅನುವಾದವೆನ್ನುವುದು ನಮ್ಮ ಪೂರ್ವಾಗ್ರಹಗಳನ್ನು ಕಳೇದುಕೊಳ್ಳುವ ಮತ್ತು ಆಂತರಿಕವಾಗಿ ಬೆಳವಣಿಗೆ ಹೊಂದುವ ಪ್ರಕ್ರಿಯೆ.

PHOTO • Labani Jangi

ಪ್ರಣತಿ: ನಾವು ಅನುವಾದಿಸಿದ ಅನೇಕ ಸಾಂಸ್ಕೃತಿಕ ಕಥೆಗಳ ಕುರಿತು ನನಗೆ ಇಂತಹದ್ದೇ ಭಾವವಿದೆ. ವೈವಿಧ್ಯಮಯ ಸಾಂಸ್ಕೃತಿಕ ಮೂಲಗಳಿಂದ ಬರುವ ವಿಷಯವನ್ನು ನಿಕಟವಾಗಿ ಓದುವ ಮೂಲಕ ಮತ್ತು ಎಚ್ಚರಿಕೆಯಿಂದ ಭಾಷಾಂತರಿಸುವ ಮೂಲಕ ಅನುವಾದಕರಿಗೆ ಬೇರೆ ಬೇರೆ ಸಾಂಸ್ಕೃತಿಕ ಆಚರಣೆಗಳ ಬಗ್ಗೆ ಕಲಿಯಲು ಸಾಕಷ್ಟು ಅವಕಾಶವಿದೆ. ಅಲ್ಲಿ ಮೂಲ ಭಾಷೆಯಲ್ಲಿ ನಿರ್ದಿಷ್ಟ ವಿಷಯದ ಸಾಂಸ್ಕೃತಿಕ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳುವುದು ಕಡ್ಡಾಯವಾಗುತ್ತದೆ.

ಭಾರತದಂತಹ ಬ್ರಿಟಿಷ್ ವಸಾಹತುಶಾಹಿ ನೆನಪನ್ನು ಹೊಂದಿರುವ ದೇಶದಲ್ಲಿ, ಇಂಗ್ಲಿಷ್ ಸಂಪರ್ಕ ಭಾಷೆಯಾಗಿದೆ. ಕೆಲವೊಮ್ಮೆ ನಮಗೆ ಜನರ ಮೂಲ ಭಾಷೆ ತಿಳಿದಿರುವುದಿಲ್ಲ ಮತ್ತು ನಮ್ಮ ಕೆಲಸಕ್ಕಾಗಿ ಇಂಗ್ಲಿಷನ್ನು ಅವಲಂಬಿಸುತ್ತೇವೆ. ಆದರೆ ಒಬ್ಬ ಆತ್ಮಸಾಕ್ಷಿಯುಳ್ಳ ಅನುವಾದಕರು, ವಿಭಿನ್ನ ಸಾಂಸ್ಕೃತಿಕ ಆಚರಣೆಗಳು, ಇತಿಹಾಸಗಳು ಮತ್ತು ಭಾಷೆಗಳನ್ನು ಶ್ರದ್ಧೆಯಿಂದ ಮತ್ತು ತಾಳ್ಮೆಯಿಂದ ಕಲಿಯುವುದರಿಂದ ಉತ್ತಮ ಫಲಿತಾಂಶವನ್ನು ನೀಡಬಲ್ಲರು.

ರಾಜೀವ್: ಕೆಲವೊಮ್ಮೆ ಎಷ್ಟು ತಾಳ್ಮೆಯಿಂದ ಹುಡುಕಿದರೂ ನನ್ನ ಭಾಷೆಯಲ್ಲಿ ಕೆಲವು ಪದಗಳು ಸಿಗುವುದಿಲ್ಲ. ಅದರಲ್ಲೂ ವಿಶೇಷವಾಗಿ ವೃತ್ತಿಗೆ ಸಂಬಂಧಿಸಿದ ವರದಿಗಳನ್ನು ಅನುವಾದಿಸಬೇಕಾಗಿ ಬಂದಾಗ. ಆ ವೃತ್ತಿಯಲ್ಲಿನ ಉಪಕರಣಗಳು ಹಾಗೂ ಅದರ ಸಂಕೀರ್ಣ ಪ್ರಕ್ರಿಯೆಯನ್ನು ಸರಿಯಾದ ಪದ ಬಳಸಿ ವಿವರಿಸುವುದು ನಿಜಕ್ಕೂ ಸವಾಲಾಗಿ ಪರಿಣಮಿಸುತ್ತದೆ. ಕಾಶ್ಮೀರದ ನೇಕಾರರ ಕುರಿತಾದ ಉಫಾಕ್ ಫಾತಿಮಾ ಕಥೆಯಲ್ಲಿ , ಚರಖಾನಾ ಮತ್ತು ಚಶ್ಮ್-ಇ-ಬುಲ್ಬುಲ್ ರೀತಿಯ ನೇಯ್ಗೆ ಮಾದರಿಗಳ ಹೆಸರುಗಳನ್ನು ಭಾಷಾಂತರಿಸುವಾಗ ನನಗೆ ಬಹಳ ಕಷ್ಟವಾಯಿತು. ಇವುಗಳಿಗೆ ಮಲಯಾಳಂನಲ್ಲಿ ಯಾವುದೇ ಸಮಾನ ಪದಗಳಿಲ್ಲದ ಕಾರಣ ಅವುಗಳಿಗೆ ಒಂದೆರಡು ವಿವರಣಾತ್ಮಕ ನುಡಿಗಟ್ಟುಗಳನ್ನು ಬಳಸಿದೆ. ಪಟ್ಟು ಎಂಬ ಪದವೂ ಆಸಕ್ತಿದಾಯಕವಾಗಿತ್ತು. ಕಾಶ್ಮೀರದಲ್ಲಿ, ಇದು ನೇಯ್ದ ಉಣ್ಣೆ ಬಟ್ಟೆಯಾಗಿದ್ದರೆ, ಮಲಯಾಳಂನಲ್ಲಿ ಪಟ್ಟು ಎಂದರೆ ರೇಷ್ಮೆ ಬಟ್ಟೆ.

ಖಮರ್: ಉರ್ದುವಿನಲ್ಲಿ ಶಬ್ದಕೋಶವು ದುರ್ಬಲವಾಗಿದೆ, ವಿಶೇಷವಾಗಿ ಪರಿಯಲ್ಲಿ ಹವಾಮಾನ ಬದಲಾವಣೆ ಮತ್ತು ಮಹಿಳೆಯರ ಸಂತಾನೋತ್ಪತ್ತಿ ಹಕ್ಕುಗಳ ಕುರಿತ ಲೇಖನಗಳನ್ನು ಭಾಷಾಂತರಿಸುವಾಗ ಇದು ಅನುಭವಕ್ಕೆ ಬರುತ್ತದೆ. ಈ ವಿಷಯದಲ್ಲಿ ಹಿಂದಿಯ ಕಥೆ ಸ್ವಲ್ಪ ಭಿನ್ನವಾಗಿದೆ. ಇದು ಕೇಂದ್ರ ಸರ್ಕಾರ ಪ್ರಾಯೋಜಿತ ಭಾಷೆ; ಸರ್ಕಾರದ ಬೆಂಬಲವನ್ನು ಹೊಂದಿದೆ. ಅವರು ಅದಕ್ಕೆ ಮೀಸಲಾದ ಸಂಸ್ಥೆಗಳನ್ನು ಹೊಂದಿದ್ದಾರೆ. ಹೀಗಾಗಿ ಹೊಸ ಪರಿಭಾಷೆಗಳು ಉರ್ದುವಿಗಿಂತ ಬೇಗ ಈ ಭಾಷೆಗೆ ಬರುತ್ತವೆ, ಉರ್ದುವಿನಲ್ಲಿ ನಾವು ಅನುವಾದಗಳಲ್ಲಿ ಅನೇಕ ವಿಷಯಗಳಿಗೆ ಇಂಗ್ಲಿಷ್ ಪದಗಳನ್ನು ಬಳಸುವುದನ್ನು ಮುಂದುವರಿಸಿದ್ದೇವೆ.

ಉರ್ದು ಒಂದು ಕಾಲದಲ್ಲಿ ಮುಖ್ಯ ಭಾಷೆಯಾಗಿತ್ತು. ದೆಹಲಿ ಕಾಲೇಜು ಮತ್ತು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಂತಹ ಸಂಸ್ಥೆಗಳು ಉರ್ದು ಪಠ್ಯಗಳ ಅನುವಾದಕ್ಕೆ ಹೆಸರುವಾಸಿಯಾಗಿದ್ದವು ಎಂದು ಇತಿಹಾಸ ಹೇಳುತ್ತದೆ. ಕಲ್ಕತ್ತಾದ ಫೋರ್ಟ್ ವಿಲಿಯಂ ಕಾಲೇಜಿನ ಪ್ರಾಥಮಿಕ ಉದ್ದೇಶವೆಂದರೆ ಬ್ರಿಟಿಷ್ ಅಧಿಕಾರಿಗಳಿಗೆ ಭಾರತೀಯ ಭಾಷೆಗಳಲ್ಲಿ ತರಬೇತಿ ನೀಡುವುದು, ಅನುವಾದಗಳನ್ನು ಕೈಗೊಳ್ಳುವುದು. ಇಂದು ಆ ಎಲ್ಲಾ ಸ್ಥಳಗಳು ಅವಸಾನ ಹೊಂದಿವೆ. ಉರ್ದು ಮತ್ತು ಹಿಂದಿ ನಡುವಿನ ಹೋರಾಟವು 1947ರ ನಂತರವೂ ಮುಂದುವರೆದಿದೆ ಮತ್ತು ಉರ್ದುವಿನ ಮೇಲಿನ ಗಮನವು ಸಂಪೂರ್ಣವಾಗಿ ಕಣ್ಮರೆಯಾಗಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ.

PHOTO • Labani Jangi

ಕಮಲ್ಜಿತ್: ದೇಶ ವಿಭಜನೆಯು ಭಾಷಾ ವಿಭಜನೆಗೆ ಕಾರಣವಾಯಿತು ಎಂದು ನಿಮಗೆ ಅನ್ನಿಸುತ್ತದೆಯೇ? ನನಗೆ ಅನ್ನಿಸುವ ಹಾಗೆ ಭಾಷೆ ಜನರಂತೆ ಭಂಜಕ ಮನಸ್ಥಿತಿಯನ್ನು ಹೊಂದಿರುವುದಿಲ್ಲ.

ಖಮರ್: ಒಂದು ಕಾಲದಲ್ಲಿ ಉರ್ದು ಇಡೀ ದೇಶಕ್ಕೆ ಸೇರಿದ ಭಾಷೆಯಾಗಿತ್ತು. ಅದು ದಕ್ಷಿಣದಲ್ಲಿಯೂ ಇತ್ತು. ಅವರು ಅದನ್ನು ದಖನಿ (ಅಥವಾ ದಖ್ಖನಿ) ಉರ್ದು ಎಂದು ಕರೆಯುತ್ತಾರೆ. ಈ ಭಾಷೆಯಲ್ಲಿ ಬರೆಯುವ ಕವಿಗಳಿದ್ದರು ಮತ್ತು ಅವರ ಕೃತಿಗಳು ಶಾಸ್ತ್ರೀಯ ಉರ್ದು ಪಠ್ಯಕ್ರಮದ ಭಾಗವಾಗಿದ್ದವು. ಆದರೆ ಮುಸ್ಲಿಮ್ ಆಳ್ವಿಕೆಯ ಅಂತ್ಯದೊಂದಿಗೆ ಇದೆಲ್ಲವೂ ಕೊನೆಗೊಂಡಿತು. ಆಧುನಿಕ ಭಾರತದಲ್ಲಿ ಉತ್ತರ ಪ್ರದೇಶ, ಬಿಹಾರ, ಬಂಗಾಳ ಸೇರಿದಂತೆ ಹಿಂದಿ ಬೆಲ್ಟ್ ಎಂದು ನಾವು ಕರೆಯುವ ಪ್ರದೇಶದಲ್ಲಿ ಉರ್ದು ಉಳಿದುಕೊಂಡಿದೆ.

ಇಲ್ಲಿ ಜನರಿಗೆ ಶಾಲೆಗಳಲ್ಲಿ ಉರ್ದು ಕಲಿಸಲಾಗುತ್ತಿತ್ತು. ಹಿಂದೂ ಅಥವಾ ಮುಸ್ಲಿಮ್ ಆಗಿರುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿರಲಿಲ್ಲ. ತಮಗೆ ಉರ್ದು ತಿಳಿದಿದೆ ಎಂದು ಹೇಳುವ ಜನರು, ಹಿಂದೂಗಳು, ಮಾಧ್ಯಮಗಳಲ್ಲಿ ಕೆಲಸ ಮಾಡುವ ಹಿರಿಯ ಜನರ ಕುರಿತು ನನಗೆ ತಿಳಿದಿದೆ. ಅವರು ಅದನ್ನು ತಮ್ಮ ಶಾಲೆಯಲ್ಲಿ ಕಲಿಸಿದ್ದರು. ಶಾಲೆಯಲ್ಲಿ ಕಲಿಸದೆ ಹೋದರೆ ಭಾಷೆಯೊಂದು ಉಳಿಯಲು ಹೇಗೆ ಸಾಧ್ಯ?

ಈ ಮೊದಲು ಉರ್ದು ಓದುವ ಮೂಲಕ ಕೆಲಸ ಹಿಡಿಯಬಹುದಿತ್ತು, ಆದರೆ ಈಗ ಅದು ಸಾಧ್ಯವಿಲ್ಲ. ಹಾಗೂ ಕೆಲವು ಪತ್ರಿಕೆಗಳು ಇದ್ದವು, ಮತ್ತು ಕೆಲವು ವರ್ಷಗಳ ಹಿಂದೆ ಉರ್ದು ಮಾಧ್ಯಮಕ್ಕಾಗಿ ಬರೆಯುವವರೂ ಇದ್ದರು. ಆದರೆ 2014ರ ನಂತರ ಪತ್ರಿಕೆಗಳು ಸಹ ಅವುಗಳಿಗೆ ಸಿಗುತ್ತಿದ್ದ ಧನಸಹಾಯವು ನಿಂತಿದ್ದರಿಂದ ಸತ್ತಿವೆ. ಜನರು ಈ ಭಾಷೆಯನ್ನು ಮಾತನಾಡುತ್ತಾರೆ ಆದರೆ ಈ ಭಾಷೆಯಲ್ಲಿ ಓದಲು ಮತ್ತು ಬರೆಯಲು ತಿಳಿದಿರುವವರ ಸಂಖ್ಯೆ ನಾಟಕೀಯವಾಗಿ ಕುಸಿದಿದೆ.

ದೇವೇಶ್: ಇದು ಭಾಷೆ ಮತ್ತು ರಾಜಕೀಯದ ನಿಜವಾದ ದುರಂತ ಕಥೆ, ಖಮರ್ ದಾ. ಹಾಗಿದ್ದರೆ ನೀವು ಇಲ್ಲಿ ಅನುವಾದಿಸುವ ಲೇಖನಗಳನ್ನು ಯಾರು ಓದುತ್ತಾರೆ? ನಿಮ್ಮ ಕೆಲಸಕ್ಕೆ ಅರ್ಥವಿದೆ ಎನ್ನಿಸುತ್ತದೆಯೇ ನಿಮಗೆ?

ನಾನು ಈ ಕುರಿತು ಪರಿಗೆ ಸೇರಿದ ಸ್ವಲ್ಪ ದಿನದಲ್ಲೇ ನಡೆದ ಪರಿ ವಾರ್ಷಿಕ ಸಭೆಯಲ್ಲಿ ಮಾತನಾಡಿದ್ದೆ. ಇಲ್ಲಿನ ಜನರು ನನ್ನ ಭಾಷೆಯನ್ನು ಉಳಿಸುವಲ್ಲಿ ಆಸಕ್ತಿ ಹೊಂದಿರುವಂತೆ ನನಗೆ ಕಂಡಿತು. ಇದೇ ಕಾರಣಕ್ಕಾಗಿ ನಾನು ಇಂದಿಗೂ ಪರಿಯೊಂದಿಗೆ ಕೆಲಸ ಮಾಡುತ್ತಿದ್ದೇನೆ. ಇದು ಕೇವಲ ಉರ್ದುವಿನ ಕುರಿತಾಗಿ ನಾನು ಹೇಳುತ್ತಿಲ್ಲ. ಪರಿ ಪ್ರತಿ ಭಾಷೆ ವಿಚಾರದಲ್ಲೂ ತನ್ನ ಕಾಳಜಿಯನ್ನು ಹೊಂದಿದೆ. ಅದು ಅಳಿಸಿ ಹೋಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತದೆ.

ಈ ಲೇಖನವನ್ನು ಪರಿ-ಭಾಷಾ ತಂಡದ ದೇವೇಶ್ (ಹಿಂದಿ), ಜೋಶುವಾ ಬೋಧಿನೇತ್ರ (ಬಾಂಗ್ಲಾ), ಕಮಲ್ಜಿತ್ ಕೌರ್ (ಪಂಜಾಬಿ), ಮೇಧಾ ಕಾಳೆ (ಮರಾಠಿ), ಮೊಹಮ್ಮದ್ ಖಮರ್ ತಬ್ರೇಜ್ (ಉರ್ದು), ನಿರ್ಮಲ್ ಕುಮಾರ್ ಸಾಹು (ಛತ್ತೀಸಗಢಿ), ಪಂಕಜ್ ದಾಸ್ (ಅಸ್ಸಾಮಿ), ಪ್ರಣತಿ ಪರಿದಾ (ಒಡಿಯಾ), ಪ್ರತಿಷ್ಠಾ ಪಾಂಡ್ಯ (ಗುಜರಾತಿ), ರಾಜಸಂಗೀತನ್ (ತಮಿಳು), ರಾಜೀವ್ ಚೆಳಾನಟ್ (ಮಲಯಾಳಂ), ಸ್ಮಿತಾ ಖಟೋರ್ (ಬಾಂಗ್ಲಾ) ಬರೆದಿದ್ದಾರೆ. ಮತ್ತು ಸ್ಮಿತಾ ಖಟೋರ್, ಮೇಧಾ ಕಾಳೆ, ಜೋಶುವಾ ಬೋಧಿನೇತ್ರ ಅವರ ಸಂಪಾದಕೀಯ ಬೆಂಬಲದೊಂದಿಗೆ ಪ್ರತಿಷ್ಠಾ ಪಾಂಡ್ಯ ಸಂಪಾದಿಸಿದ್ದಾರೆ. ಫೋಟೋ ಎಡಿಟಿಂಗ್ ಬಿನೈಫರ್ ಭರೂಚಾ.

ಅನುವಾದ: ಶಂಕರ. ಎನ್. ಕೆಂಚನೂರು

PARIBhasha Team

PARIBhasha is our unique Indian languages programme that supports reporting in and translation of PARI stories in many Indian languages. Translation plays a pivotal role in the journey of every single story in PARI. Our team of editors, translators and volunteers represent the diverse linguistic and cultural landscape of the country and also ensure that the stories return and belong to the people from whom they come.

Other stories by PARIBhasha Team
Illustrations : Labani Jangi

Labani Jangi is a 2020 PARI Fellow, and a self-taught painter based in West Bengal's Nadia district. She is working towards a PhD on labour migrations at the Centre for Studies in Social Sciences, Kolkata.

Other stories by Labani Jangi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru