ಶ್ರೀರಂಗಂ ಬಳಿಯ ಕೊಲ್ಲಿಡಂ ನದಿಯ ದಂಡೆಯಲ್ಲಿ ಆಗಷ್ಟೇ ಕತ್ತಲು ಕವಿಯಲಾರಂಭಿಸಿತ್ತು. ತಮ್ಮ ಎಳ್ಳಿನ ಹೊಲದಿಂದ 10 ನಿಮಿಷಗಳಷ್ಟು ನಡಿಗೆಯ ದೂರದಲ್ಲಿ ನದಿಯ ಮರಳಿನ ದಂಡೆಯ ಮೇಲೆ ಕುಳಿತು ವಡಿವೇಲನ್‌ ತಮ್ಮ ಬದುಕಿನ ಕತೆಯನ್ನು ನಮ್ಮೊಡನೆ ಹಂಚಿಕೊಳ್ಳುತ್ತಿದ್ದರು. 1978ರಲ್ಲಿ ಅವರು ಹುಟ್ಟಿದ 12 ದಿನಕ್ಕೆ ನದಿ ಉಕ್ಕಿ ಹರಿದಿತ್ತು. ಆಗ ಅವರ ಊರಿನಲ್ಲಿ ಎಲ್ಲರೂ ಎಳ್ಳು ಬೆಳೆಯುತ್ತಿದ್ದರು. ಎಳ್ಳು ಕೊಯ್ಲು ಮಾಡಿದ ನಂತರ ಅದರಿಂದ ಜೇನಿನ ಬಣ್ಣದ ಎಳ್ಳೆಣ್ಣೆ ತೆಗೆಯುತ್ತಿದ್ದರು. ಎರಡು ಬಳೆ ದಿಂಡುಗಳನ್ನು ಬಳಸಿ ಹೊಳೆಯಲ್ಲಿ ಈಜು ಕಲಿಯುತ್ತಿದ್ದರು. ದೊಡ್ಡ ನದಿಯ ದಡದಲ್ಲಿ ವಾಸಿಸುತ್ತಿದ್ದ ಪ್ರಿಯಾರನ್ನು ಪ್ರೇಮಿಸುತ್ತಿದ್ದರು. ತಂದೆಯ ಮುನಿಸಿನ ನಡುವೆಯೂ ಪ್ರಿಯಾರನ್ನೇ ಅವರು ಮದುವೆಯಾದರು. ಮತ್ತು ಈಗ ತಮ್ಮ ಒಂದೂವರೆ ಎಕರೆ ನೆಲದಲ್ಲಿ ಭತ್ತ, ಎಳ್ಳು ಮತ್ತು ಉದ್ದು ಬೆಳೆಯುತ್ತಿದ್ದಾರೆ…

ಮೊದಲ ಮೂರು ಬೆಳೆ ಒಂದಷ್ಟು ಹಣವನ್ನು ತಂದಿತ್ತು. “ಭತ್ತದಿಂದ ಬಂದ ಕಾಸನ್ನು ಕಬ್ಬಿನ ಬೆಳೆಯ ಮೇಲೆ ಹಾಕಿದೆವು. ಮತ್ತೆ ಆ ಹಣವನ್ನು ಅದೇ ಗದ್ದೆಯಲ್ಲಿ ಉಳುಮೆ ಮಾಡಿದೆವು” ಎಂದು ವಡಿವೇಲನ್‌ ವಿವರಿಸುತ್ತಾರೆ. ಎಳ್ಳನ್ನು ಸಾಮಾನ್ಯವಾಗಿ ಎಣ್ಣೆಗಾಗಿ ಬೆಳೆಯಲಾಗುತ್ತದೆ. ಮರದ ಗಾಣದಲ್ಲಿ ಅರೆದು ಹಿಂಡಿದ ಎಣ್ಣೆಯನ್ನು ತಮಿಳಿನಲ್ಲಿ ನಲ್ಲೆಣೈ (ಎಳ್ಳೆಣ್ಣೆ) ಎಂದು ಕರೆಯಲಾಗುತ್ತದೆ. ಅದನ್ನು ದೊಡ್ಡ ಪಾತ್ರೆಯೊಂದರಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. “ನಾವು ಅದನ್ನು ಅಡುಗೆಗೆ ಮತ್ತು ಉಪ್ಪಿನಕಾಯಿಗೆ ಬಳಸುತ್ತೇವೆ” ಎನ್ನುತ್ತಾರೆ ಪ್ರಿಯಾ. “ಮತ್ತೆ ಅವರು ದಿನವೂ ಅದರಿಂದ ಬಾಯಿ ಮುಕ್ಕಳಿಸುತ್ತಾರೆ” ಎಂದು ಪ್ರಿಯಾ ಹೇಳುವಾಗ ವಡಿವೇಲನ್‌ ಮುಗುಳ್ನಕ್ಕು “ಮತ್ತೆ ಎಣ್ಣೆ ಸ್ನಾನ! ಅದು ನನಗೆ ಬಹಳ” ಇಷ್ಟ ಎಂದು ಹೇಳಿದರು.

ವಡಿವೇಲನ್‌ ಅವರಿಗೆ ಪ್ರಿಯವಾದ ಹಲವು ಸಂಗತಿಗಳಿವೆ. ಅವೆಲ್ಲವೂ ಸರಳ ಸಂತೋಷಗಳು. ಅವುಗಳಲ್ಲಿ ಸ್ನೇಹಿತರೊಡನೆ ಹೊಳೆಯಲ್ಲಿ ಮೀನು ಹಿಡಿದು ಸುಟ್ಟು ತಿನ್ನುವುದು. ಪಂಚಾಯತ್‌ ಅಧ್ಯಕ್ಷರ ಮನೆಯಲ್ಲಿದ್ದ ಗ್ರಾಮದ ಏಕೈಕ ಟಿವಿ ನೋಡುವುದು ಕೆಲವು. “ಅದೇನೋ ಗೊತ್ತಿಲ್ಲ ಟಿವಿಯೆಂದರೆ ನನಗೆ ಬಹಳ ಇಷ್ಟವಾಗಿತ್ತು. ಟಿವಿ ಸರಿಯಾಗಿ ಕೆಲಸ ಮಾಡದಿದ್ದಾಗ ಅದರಿಂದ ಬರುತ್ತಿದ್ದ ‌ʼಒಂಯ್ʼ ಎನ್ನುವ ಸದ್ದನ್ನು ಸಹ ಬಿಡದೆ ಕೇಳುತ್ತಿದ್ದೆ ನಾನು!”

ಆದರೆ ಹಗಲಿನ ಬೆಳಕು ಮಸುಕಾಗುತ್ತ ಹೋದಂತೆ ಅವರ ಫ್ಲಾಶ್‌ಬ್ಯಾಕ್‌ ಕೂಡಾ ಮಸುಕಾಗುತ್ತಾ ಹೋಯಿತು. “ಈಗ ನೀವು ಕೇವಲ ಕೃಷಿ ನಂಬಿ ಬದುಕು ನಡೆಸಲು ಸಾಧ್ಯವಿಲ್ಲ” ಎಂದು ವಡಿವೇಲನ್‌ ಹೇಳುತ್ತಾರೆ. “ನನ್ನ ಹತ್ತಿರ ಒಂದು ಬಾಡಿಗೆ ಕಾರು ಕೂಡಾ ಇರುವುದರಿಂದ ಹೇಗೋ ಮ್ಯಾನೇಜ್‌ ಆಗುತ್ತಿದೆ.” ಅವರು ನಮ್ಮನ್ನು ತಮ್ಮ ಟೊಯೋಟಾ ಇಟಿಯೋಸ್ ಕಾರಿನಲ್ಲಿ ಶ್ರೀರಂಗಂ ತಾಲ್ಲೂಕಿನ ತಿರುವಳಾರ್‌ಸೋಯಲ್ಲಿರುವ ತಮ್ಮ ಮನೆಯಿಂದ ನದಿಯ ದಡಕ್ಕೆ ಕರೆತಂದಿದ್ದಾರೆ. ಅವರು ಕಾರನ್ನು ಖಾಸಗಿ ಫೈನಾನ್ಸಿನಲ್ಲಿ ಎಂಟರ ಬಡ್ಡಿ ದರದಲ್ಲಿ ಸಾಲದ ಮೂಲಕ ಕೊಂಡಿದ್ದಾರೆ. ಈ ಸಾಲದ ಕಂತಾಗಿ ಅವರು ತಿಂಗಳಿಗೆ 25,000 ರೂ.ಗಳ ಭಾರಿ ಮೊತ್ತವನ್ನು ಕಟ್ಟಬೇಕು. ಹಣದ ವಿಷಯದಲ್ಲಿ ಸದಾ ಪರದಾಟವಿರುವುದಾಗಿ ಗಂಡ ಹೆಂಡತಿ ಹೇಳುತ್ತಾರೆ. ಕೆಲವೊಮ್ಮೆ ಕಂತು ಕಟ್ಟಲು ಹಣವಿಲ್ಲದಿದ್ದಾಗ ಚಿನ್ನ ಅಡವಿಟ್ಟು ಕಟ್ಟುತ್ತಾರೆ. “ನಮ್ಮಂತಹವರು ಬ್ಯಾಂಕಿನಲ್ಲಿ ಸಾಲ ಪಡೆಯಬೇಕೆಂದರೆ ಕನಿಷ್ಟ 10 ಜೋಡಿ ಚಪ್ಪಲಿ ಸವೆಸಬೇಕು. ಅಷ್ಟು ಅಲೆದಾಡಿಸುತ್ತಾರೆ” ಎನ್ನುತ್ತಾ ವಡಿವೇಲನ್‌ ನಿಟ್ಟುಸಿರು ಬಿಡುತ್ತಾರೆ.

ಇಷ್ಟು ಹೊತ್ತಿಗೆ ಆಕಾಶವು ಗುಲಾಬಿ, ನೀಲಿ ಮತ್ತು ಕಪ್ಪು ಬಣ್ಣ ಬಳಿದುಕೊಂಡ ಕಲಾಕೃತಿಯಂತೆ ಕಾಣತೊಡಗಿತ್ತು. ದೂರದಲ್ಲಿ ನವಿಲುಗಳು ಕೂಗುವ ಸದ್ದು ಕೇಳುತ್ತಿತ್ತು. “ಈ ಹೊಳೆಯಲ್ಲಿ ನೀರುನಾಯಿಗಳಿವೆ” ಎಂದು ವಡಿವೇಲನ್ ಹೇಳುತ್ತಾರೆ. ನಮ್ಮಿಂದ ಸ್ವಲ್ಪ ದೂರದಲ್ಲಿ ಚಿಕ್ಕ ಮಕ್ಕಳ ಹಿಂಡೊಂದು ನೀರು ನಾಯಿಗಳಂತೆಯೇ ನೀರಿಗೆ ಚುರುಕಾಗಿ ಧುಮುಕುತ್ತಾ ಆಟವಾಡುತ್ತಿತ್ತು. “ನಾನು ಕೂಡಾ ಹೀಗೆ ಆಡುತ್ತಿದ್ದೆ. ಇಲ್ಲಿ ಬೇರೆ ಆಟಗಳು ಹುಟ್ಟಲೇ ಇಲ್ಲ!”

Vadivelan and Priya (left) on the banks of Kollidam river at sunset, 10 minutes from their sesame fields (right) in Tiruchirappalli district of Tamil Nadu
PHOTO • M. Palani Kumar
Vadivelan and Priya (left) on the banks of Kollidam river at sunset, 10 minutes from their sesame fields (right) in Tiruchirappalli district of Tamil Nadu
PHOTO • M. Palani Kumar

ವಡಿವೇಲನ್ ಮತ್ತು ಪ್ರಿಯಾ (ಎಡ) ಸೂರ್ಯಾಸ್ತದ ಸಮಯದಲ್ಲಿ ಕೊಲ್ಲಿಡಂ ನದಿಯ ದಡದಲ್ಲಿ, ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯಲ್ಲಿರುವ ಅವರ ಎಳ್ಳಿನ ಹೊಲದಿಂದ ಇಲ್ಲಿಗೆ 10 ನಿಮಿಷಗಳ ದಾರಿ (ಬಲ)

ಇದೆಲ್ಲದರ ಜೊತೆಗೆ ವಡಿವೇಲನ್‌ ವರ್ಷಕ್ಕೊಮ್ಮೆ ನದಿಗೆ ಪೂಜೆಯನ್ನೂ ಸಲ್ಲಿಸುತ್ತಾರೆ. “"ಪ್ರತಿ ವರ್ಷ, ತಮಿಳು ಆಡಿ ತಿಂಗಳ 18ನೇ ದಿನವಾದ ಆಡಿ ಪೆರುಕ್ಕು ದಿನದಂದು ನಾವೆಲ್ಲರೂ ಕಾವೇರಿ ದಡಕ್ಕೆ ಹೋಗುತ್ತೇವೆ. ತೆಂಗಿನಕಾಯಿ ಒಡೆದು, ಕರ್ಪೂರವನ್ನು ಹಚ್ಚಿ ನದಿಗೆ ಹೂವುಗಳು ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತೇವೆ." ಇದಕ್ಕೆ ಪ್ರತಿಯಾಗಿ ಸುಮಾರು 2,000 ವರ್ಷಗಳಿಂದ ಕಾವೇರಿ ಮತ್ತು ಕೊಲ್ಲಿಡಂ (ಕೊಲೆರೂನ್)‌ ನದಿಗಳು ತಮಿಳುನಾಡಿನ ತಿರುಚಿರಾಪಳ್ಳಿ (ತಿರುಚ್ಚಿ ಎಂದೂ ಕರೆಯಲಾಗುತ್ತದೆ) ಜಿಲ್ಲೆಯಲ್ಲಿರುವ ಈ ಜನರ ಹೊಲ-ಗದ್ದೆಗಳನ್ನು ಪೋಷಿಸುತ್ತಿವೆ.

*****

“ಬೇಯಿಸಿದ ಬೇಳೆಕಾಳು, ಎಳ್ಳುಂಡೆ, ಮಾಂಸದೊಂದಿಗೆ ಬೆರೆಸಿದ ಅನ್ನ
ಹೂವು, ದೂಪ ಹೊಸ ಅಕ್ಕಿ ಅನ್ನ ಅರ್ಪಿಸಿ
ಹೆಂಗಸರು ಕೈ ಕೈ ಹಿಡಿದು ಸೊಗಸಾಗಿ ಕುಣಿಯುತ್ತ ಮೈಮರೆಯುವರು
ಹಿರಿಯ ಮಹಿಳೆಯರು ಮನದುಂಬಿ ಹರಸುವರು
“ನಮ್ಮ ರಾಜನ ಆಡಳಿತದಲ್ಲಿ
ಈ ಮಹಾನ್ ದೇಶದಿಂದ ಹಸಿವು, ರೋಗ ಮತ್ತು ದ್ವೇಷ ದೂರಾಗಲಿ;
ಮಳೆ ಮತ್ತು ಸಂಪತ್ತು ಹೊರಹೊಮ್ಮಲಿ"

ಕ್ರಿ.ಶ. 2ನೇ ಶತಮಾನದಲ್ಲಿ ಬರೆಯಲಾದ ತಮಿಳು ಮಹಾಕಾವ್ಯ ಸಿಲಪ್ಪದಿಕಾರಂನ ಈ ಪ್ರಾರ್ಥನಾ ಆಚರಣೆಯು "ಇಂದು ತಮಿಳುನಾಡಿನಲ್ಲಿ ಆಚರಿಸಲಾಗುವ ಆಚರಣೆಯಂತೆಯೇ ಇದೆ" ಎಂದು ಚೆಂಥಿಲ್ ನಾಥನ್ ತಮ್ಮ ಬ್ಲಾಗ್ ಓಲ್ಡ್ ತಮಿಳ್ ಪೊಯೆಟ್ರಿಯಲ್ಲಿ ಬರೆದಿದ್ದಾರೆ. [ಕವಿತೆ: ಇಂದಿರಾ ವಿಳಾವು, ಸಾಲುಗಳು 68-75]

ಎಳ್ಳು ಪ್ರಾಚೀನವಾದುದು ಮತ್ತು ಸರ್ವೇಸಾಮಾನ್ಯವಾದುದು. ಮತ್ತು ಇದೊಂದು ವಿವಿಧ ಆಸಕ್ತಿದಾಯಕ ಉಪಯೋಗಗಳನ್ನು ಹೊಂದಿರುವ ಬೆಳೆ. ನಲ್ಲೆಣ್ಣೆ ಎಂದು ಕರೆಯಲ್ಪಡುವ ಎಳ್ಳೆಣ್ಣೆ ತಮಿಳುನಾಡಿನ ಜನಪ್ರಿಯ ಅಡುಗೆ ಎಣ್ಣೆ. ಜೊತೆಗೆ ಇದರ ಬೀಜವನ್ನು ಬಹಳಷ್ಟು ವಿದೇಶಿ ಮತ್ತು ಸ್ಥಳೀಯ ಸಿಹಿತಿನಿಸುಗಳಲ್ಲಿ ಬಳಸಲಾಗುತ್ತದೆ. ಇದರ ಕಪ್ಪು ಹಾಗೂ ಬಿಳಿಯ ಕಾಳುಗಳು ತಿನಿಸುಗಳಿಗೆ ವಿಶೇಷವಾದ ರುಚಿಯನ್ನು ನೀಡುತ್ತವೆ. ಅಗಿದು ತಿನ್ನುವಾಗ ಸುಖಮಯವಾದ ಒಂದು ಅನುಭವವನ್ನು ಉಂಟುಮಾಡುತ್ತವೆ. ಎಳ್ಳು ಆಚರಣೆಗಳಲ್ಲೂ ಪ್ರಮುಖ ಪಾತ್ರವನ್ನು ಪಡೆದಿದ್ದು ವಿಶೇಷವಾಗಿ ಹಿರಿಯರನ್ನು ಪೂಜಿಸುವಾಗ ಇದು ಬಳಕೆಗೆ ಬರುತ್ತದೆ.

ಎಳ್ಳಿನ ಬೀಜಗಳು 50 ಪ್ರತಿಶತ ಎಣ್ಣೆ, 25 ಪ್ರತಿಶತ ಪ್ರೋಟೀನ್ ಮತ್ತು 15 ಪ್ರತಿಶತ ಕಾರ್ಬೋಹೈಡ್ರೇಟ್ ಅನ್ನು ಹೊಂದಿರುತ್ತವೆ. ಎಳ್ಳು ಮತ್ತು ಹುಚ್ಚೆಳ್ಳು (ಗುರೆಳ್ಳು) ಕುರಿತ ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಯೋಜನೆಯು ಹೇಳುವಂತೆ, ಇದು 'ಶಕ್ತಿಯ ಭಂಡಾರವಾಗಿದೆ ಮತ್ತು ವಿಟಮಿನ್ ಇ, ಎ, ಬಿ ಕಾಂಪ್ಲೆಕ್ಸ್ ಮತ್ತು ಖನಿಜಗಳಾದ ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ತಾಮ್ರ, ಮೆಗ್ನೀಸಿಯಮ್, ಸತು ಮತ್ತು ಪೊಟ್ಯಾಸಿಯಮ್‌ ಖನಿಜಗಳಿಂದ ಸಮೃದ್ಧವಾಗಿದೆ.' ಎಣ್ಣೆಯನ್ನು ತೆಗೆದ ನಂತರದ ಸಿಗುವ ಅದರ ಹಿಂಡಿ (ಎಳ್ಳು ಪುನಾಕು) ಜಾನುವಾರುಗಳಿಗೆ ಆಹಾರವಾಗಿ ಬಳಕೆಯಾಗುವುದರಲ್ಲಿ ಆಶ್ಚರ್ಯವೇನಿಲ್ಲ.

Ellu (sesame) is both ancient and commonplace with various uses – as nallenai (sesame oil), as seeds used in desserts and savoury dishes, and as an important part of rituals. Sesame seeds drying behind the oil press in Srirangam.
PHOTO • M. Palani Kumar

ಎಳ್ಳು ವಿವಿಧ ಉಪಯೋಗಗಳನ್ನು ಹೊಂದಿರುವ ತೀರಾ ಪರಿಚಿತ ಮತ್ತು ಪ್ರಾಚೀನ ಎಣ್ಣೆಕಾಳು ನಲ್ಲೆಣ್ಣೈ ಎನ್ನುವ ಹೆಸರಿನಲ್ಲಿ ಪರಿಚಿತ. ಸಿಹಿತಿಂಡಿಗಳು ಮತ್ತು ಖಾರದ ತಿನಿಸುಗಳಲ್ಲಿ ಇದರ ಬೀಜಗಳನ್ನು ಬಳಸಲಾಗುತ್ತದೆ. ಶ್ರೀರಂಗಂನಲ್ಲಿರುವ ಎಣ್ಣೆ ಗಾಣದ ಹಿಂದೆ ಒಣಗುತ್ತಿರುವ ಎಳ್ಳು

Freshly pressed sesame oil (left) sits in the sun until it clears. The de-oiled cake, ellu punaaku (right) is sold as feed for livestock
PHOTO • M. Palani Kumar
Freshly pressed sesame oil (left) sits in the sun until it clears. The de-oiled cake, ellu punaaku (right) is sold as feed for livestock.
PHOTO • M. Palani Kumar

ಹೊಸದಾಗಿ ಗಾಣದಿಂದ ತೆಗೆದ ಎಳ್ಳೆಣ್ಣೆ (ಎಡಕ್ಕೆ) ಅದು ತಿಳಿಯಾಗುವವರೆಗೆ ಬಿಸಿಲಿನಲ್ಲಿ ಇರಿಸಲಾಗುತ್ತದೆ. ಎಳ್ಳಿನ ಹಿಂಡಿ, ಎಳ್ಳು ʼಪುನಾಕುʼವನ್ನು (ಬಲ) ಜಾನುವಾರುಗಳಿಗೆ ಆಹಾರವಾಗಿ ಮಾರಾಟ ಮಾಡಲಾಗುತ್ತದೆ

'ಎಳ್ಳು (ಸೆಸಮಮ್ ಇಂಡಿಕಂ ಎಲ್.) ಅತ್ಯಂತ ಹಳೆಯ ಸ್ಥಳೀಯ ಎಣ್ಣೆಕಾಳು ಬೆಳೆಯಾಗಿದ್ದು, ಇದು ಭಾರತದಲ್ಲಿ ಕೃಷಿಯ ಸುದೀರ್ಘ ಇತಿಹಾಸವನ್ನು ಹೊಂದಿದೆ. ಐಸಿಎಆರ್ ಪ್ರಕಟಿಸಿದ ಹ್ಯಾಂಡ್‌ ಬುಕ್ ಆಫ್ ಅಗ್ರಿಕಲ್ಚರ್ ಹೇಳುವಂತೆ, ಭಾರತವು ವಿಶ್ವದ ಅತಿದೊಡ್ಡ ಎಳ್ಳು ಉತ್ಪಾದಕ ರಾಷ್ಟ್ರವಾಗಿದ್ದು, ಇದು ವಿಶ್ವಾದ್ಯಂತ ಈ ಬೆಳೆಯನ್ನು ಬೆಳೆಯುವ ಭೂಮಿಯ ಶೇಕಡಾ 24ರಷ್ಟು ಪಾಲನ್ನು ಹೊಂದಿದೆ. ವಿಶ್ವದ ಎಣ್ಣೆಕಾಳುಗಳ ಕ್ಷೇತ್ರದಲ್ಲಿ ಭಾರತವು ಶೇಕಡಾ 12ರಿಂದ 15, ಉತ್ಪಾದನೆಯ ಶೇಕಡಾ 7ರಿಂದ 8 ಮತ್ತು ಜಾಗತಿಕ ಬಳಕೆಯ ಶೇಕಡಾ 9ರಿಂದ 10ರಷ್ಟನ್ನು ಹೊಂದಿದೆ ಎಂದು ಅದು ಹೇಳುತ್ತದೆ.

ಹಾಗೆಂದು ಈ ಪ್ರಾಬಲ್ಯ ಕೇವಲ ಇತ್ತೀಚಿನದಲ್ಲ. ಕೆ ಟಿ ಅಚ್ಚಯ್ಯ ಬರೆದಿರುವ ʼಇಂಡಿಯನ್‌ ಫುಡ್‌ ಎ ಹಿಸ್ಟಾರಿಕಲ್‌ ಕಂಪ್ಯಾನಿಯನ್‌ ನೋಟ್ಸ್‌ʼ ಎನ್ನುವ ಪುಸ್ತಕದಲ್ಲಿ ಇದರ ರಫ್ತಿನ ಕುರಿತು ಸಾಕಷ್ಟು ಸಾಕ್ಷಿಗಳಿವೆ ಎನ್ನುತ್ತದೆ.

ದಕ್ಷಿಣ ಭಾರತದ ಬಂದರುಗಳ ಎಳ್ಳಿನ ವ್ಯಾಪಾರದ ಐತಿಹಾಸಿಕ ವಿವರಣೆಗಳು ಕನಿಷ್ಠ ಕ್ರಿ.ಶ 1ನೇ ಶತಮಾನದಷ್ಟು ಹಿಂದಿನವು. ಗ್ರೀಕ್ ಮಾತನಾಡುವ ಈಜಿಪ್ಟಿನ ನಾವಿಕನೊಬ್ಬ ಮೊದಲ ಅನುಭವದಿಂದ ಬರೆದ ಪೆರಿಪ್ಲಸ್ ಮಾರಿಸ್ ಎರಿಥ್ರೇಯಿ (ಎರಿಥ್ರಿಯನ್ ಸಮುದ್ರದ ಪ್ರದಕ್ಷಿಣೆ) ಆ ಕಾಲದ ವ್ಯಾಪಾರದ ಬಗ್ಗೆ ಹೆಚ್ಚಿನ ವಿವರಗಳನ್ನು ದಾಖಲಿಸುತ್ತದೆ. ದಂತ ಮತ್ತು ಮಸ್ಲಿನ್ ಸೇರಿದಂತೆ ವಿದೇಶಕ್ಕೆ ಕಳುಹಿಸಲಾಗುತ್ತಿದ್ದ ಅಮೂಲ್ಯ ಸರಕುಗಳಲ್ಲಿ ಎಳ್ಳೆಣ್ಣೆ ಮತ್ತು ಚಿನ್ನವೂ ಸೇರಿದೆ, ಇವೆರಡೂ ಇಂದಿನ ತಮಿಳುನಾಡಿನ ಪಶ್ಚಿಮ ಭಾಗದಲ್ಲಿರುವ ಕೊಂಗುನಾಡಿನಿಂದ ಕಳಿಸಲಾಗುತ್ತಿತ್ತು ಎಂದು ಅವರು ಉಲ್ಲೇಖಿಸುತ್ತಾರೆ. ಇದು ಆಗ ಆ ಎಣ್ಣೆಗೆ ಇದ್ದ ಪ್ರಾಮುಖ್ಯತೆಯನ್ನು ತೋರಿಸುತ್ತದೆ.

ಸ್ಥಳೀಯ ವ್ಯವಹಾರದ ವಿವರಗಳೂ ರೋಮಾಂಚಕವಾಗಿವೆ ಎನ್ನುತ್ತಾರೆ ಅಚ್ಚಯ್ಯ. ಮಂಕುಡಿ ಮಾರುತನಾರ್ ಬರೆದ ಮಧುರೈ ಕಾಂಚಿಯಲ್ಲಿರುವ ಮಧುರೈ ಪಟ್ಟಣದ ಚಿತ್ರವು ಮಾರುಕಟ್ಟೆಯಲ್ಲಿನ ಉತ್ಸಾಹದ ವಾತಾವರಣವನ್ನು ವಿವರಿಸುತ್ತದೆ: 'ಮೆಣಸಿನ ಮೂಟೆಗಳು ಮತ್ತು ಭತ್ತ, ರಾಗಿ, ಕಡಲೆ, ಬಟಾಣಿ ಮತ್ತು ಎಳ್ಳಿನಂತಹ ಹದಿನಾರು ರೀತಿಯ ಧಾನ್ಯಗಳನ್ನು ಧಾನ್ಯ ವ್ಯಾಪಾರಿಗಳ ಬೀದಿಯಲ್ಲಿ ರಾಶಿ ಹಾಕಲಾಗಿತ್ತು.'

ಎಳ್ಳೆಣ್ಣೆಗೆ ರಾಜರ ಪ್ರೋತ್ಸಾಹವೂ ಇತ್ತು. ಅಚ್ಚಯ್ಯ ಬರೆದಿರುವ 'ಇಂಡಿಯನ್ ಫುಡ್' ಪುಸ್ತಕದಲ್ಲಿ 1520ರ ಸುಮಾರಿಗೆ ವಿಜಯನಗರದಲ್ಲಿ ಹಲವಾರು ವರ್ಷಗಳ ಕಾಲ ವಾಸವಿದ್ದ ಪೋರ್ಚುಗೀಸ್ ವ್ಯಾಪಾರಿ ಡೊಮಿಂಗೊ ಪೇಸ್ ಬಗ್ಗೆ ಉಲ್ಲೇಖಿಸಲಾಗಿದೆ. ರಾಜ ಕೃಷ್ಣದೇವರಾಯನ ಬಗ್ಗೆ ಪೇಸ್ ಹೀಗೆ ಬರೆದಿದ್ದಾರೆ:

“ಸೂರ್ಯೋದಯಕ್ಕೂ ಮೊದಲು ರಾಜ ಮುಕ್ಕಾಲು ಪಾವಿನಷ್ಟು ಎಳ್ಳೆಣ್ಣೆ ಕುಡಿಯುವ ಅಭ್ಯಾಸವನ್ನು ಹೊಂದಿದ್ದರು. ಅದೇ ಎಣ್ಣೆಯಿಂದ ದೇಹಕ್ಕೆ ಮಸಾಜ್‌ ಮಾಡಿಸಿಕೊಳ್ಳುತ್ತಾರೆ. ಸೊಂಟಕ್ಕೆ ಸಣ್ಣ ಬಟ್ಟೆಯನ್ನು ಸುತ್ತಿಕೊಳ್ಳುವ ರಾಜ ಅಷ್ಟೂ ಎಣ್ಣೆ ಬೆವರಿ ಹೋಗುವ ತನಕ ಭಾರ ಎತ್ತುವುದು ಮತ್ತು ಕತ್ತಿವರಸೆಯನ್ನು ಅಭ್ಯಾಸ ಮಾಡುತ್ತಿದ್ದರು.”

Sesame flowers and pods in Priya's field (left). She pops open a pod to reveal the tiny sesame seeds inside (right)
PHOTO • Aparna Karthikeyan
Sesame flowers and pods in Priya's field (left). She pops open a pod to reveal the tiny sesame seeds inside (right)
PHOTO • M. Palani Kumar

ಪ್ರಿಯಾರ ಹೊಲದಲ್ಲಿ ಎಳ್ಳು ಹೂವುಗಳು ಮತ್ತು ಕಾಯಿಗಳು (ಎಡ). ಒಳಗಿನ (ಬಲ) ಸಣ್ಣ ಎಳ್ಳಿನ ಬೀಜಗಳನ್ನು ಹೊರತೆಗೆಯಲು ಅವರು ಎಳ್ಳಿನ ಮೊಗ್ಗನ್ನು (ಕೋಶ) ಒಡೆಯುತ್ತಿದ್ದಾರೆ

Priya holding up a handful of sesame seeds that have just been harvested
PHOTO • M. Palani Kumar

ಪ್ರಿಯಾ ಈಗಷ್ಟೇ ಕೊಯ್ಲು ಮಾಡಿದ ಬೆರಳೆಣಿಕೆಯಷ್ಟು ಎಳ್ಳಿನ ಬೀಜಗಳನ್ನು ತೋರಿಸುತ್ತಿದ್ದಾರೆ

ವಡಿವೇಲನ್ ಅವರ ತಂದೆ ಪಳನಿವೇಲ್ ಕೂಡಾ ಹೀಗೆ ಬದುಕುವ ಮೂಲಕ ಇದಕ್ಕೆ ಸಾಕ್ಷಿಯಂತಿದ್ದರು. ಅವರ ಕುರಿತಾದ ಪ್ರತಿಯೊಂದು ವರ್ಣನೆಯಿಂದಲೂ ಅವರು ಕ್ರೀಡೆಯನ್ನು ಪ್ರೀತಿಸುವ ವ್ಯಕ್ತಿಯೆನ್ನುವುದು ಕೇಳುಗರಿಗೆ ಅರ್ಥವಾಗುತ್ತದೆ. "ಅವರು ತಮ್ಮ ದೇಹವನ್ನು ಎಚ್ಚರಿಕೆಯಿಂದ ಕಾಪಾಡಿಕೊಂಡಿದ್ದರು. ಕಲ್ಲುಗಳನ್ನು [ತೂಕಗಳನ್ನು] ಎತ್ತುತ್ತಿದ್ದರು, ತೆಂಗಿನ ತೋಪಿನಲ್ಲಿ ಕುಸ್ತಿ ಕಲಿಸುತ್ತಿದ್ದರು. ಅವರು ಸಿಲಂಬಮ್ (ಸಂಗಮ್ ಸಾಹಿತ್ಯದಲ್ಲಿ ಉಲ್ಲೇಖಿಸಲಾದ ತಮಿಳುನಾಡಿನ ಪ್ರಾಚೀನ ಸಮರ ಕಲೆ) ಕಲೆಯನ್ನೂ ಅದ್ಭುತವಾಗಿ ಕರಗತಗೊಳಿಸಿಕೊಂಡಿದ್ದರು."

ಕುಟುಂಬವು ಮನೆಬಳಕೆಗೆ ಹೆಚ್ಚು ಎಳ್ಳೆಣ್ಣೆ ಮತ್ತು ಅಪರೂಪಕ್ಕೆ ತೆಂಗಿನೆಣ್ಣೆಯನ್ನು ಉಪಯೋಗಿಸುತ್ತದೆ. ಎರಡನ್ನೂ ದೊಡ್ಡ ಪಾತ್ರೆಯಲ್ಲಿ ಇರಿಸಲಾಗುತ್ತಿತ್ತು. “ನನಗೆ ಈಗಲೂ ನೆನಪಿದೆ. ಅಪ್ಪ ರ್ಯಾಲಿ ಸೈಲಿ ಸೈಕಲ್‌ ಓಡಿಸುತ್ತಿದ್ದರು. ಅದರ ಮೇಲೆ ಉದ್ದಿನ ಚೀಲ ಹೇರಿಕೊಂಡು ತಿರುಚಿಯ ಗಾಂಧಿ ಮಾರುಕಟ್ಟೆಗೆ ಹೋಗುತ್ತಿದ್ದರು. ಬರುವಾಗ ಮೆಣಸು, ಸಾಸಿವೆ, ಕಾಳುಮೆಣಸು ಮತ್ತು ಹುಣಸೆಹಣ್ಣು ತರುತ್ತಿದ್ದರು. ಅದೊಂದು ರೀತಿಯ ವಿನಿಮಯದಂತೆ ಇರುತ್ತಿತ್ತು. ಅಡುಗೆ ಮನೆಯಲ್ಲಿ ಒಂದು ವರ್ಷಕ್ಕೆ ಸಾಲುವಷ್ಟು ಪದಾರ್ಥಗಳನ್ನು ಸಂಗ್ರಹಿಸಡಲಾಗುತ್ತಿತ್ತು!”

*****

ವಡಿವೇಲನ್ ಮತ್ತು ಪ್ರಿಯಾ 2005ರಲ್ಲಿ ಮದುವೆಯಾದರು. ಅವರ ಮದುವೆ ತಿರುಚಿ ಬಳಿಯ ವಯಲೂರು ಮುರುಗನ್ ದೇವಸ್ಥಾನದಲ್ಲಿ ನಡೆಯಿತು. "ಮದುವೆಗೆ ನನ್ನ ಅಪ್ಪ ಬಂದಿರಲಿಲ್ಲ, ಅವರು ನಮ್ಮ ಮದುವೆಗೆ ಒಪ್ಪಿಗೆ ಕೊಟ್ಟಿರಲಿಲ್ಲ" ಎಂದು ವಡಿವೇಲನ್ ಹೇಳುತ್ತಾರೆ. "ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲೆಂಬಂತೆ, ನನ್ನ ಸಂಬಂಧಿಕರನ್ನು ಕರೆದೊಯ್ಯಲು ಊರಿಗೆ ಬಂದ ನನ್ನ ಸ್ನೇಹಿತರು ತಕ್ಷಣ ಹೋಗಿ ಅಪ್ಪನ ಬಳಿ ಮದುವೆಗೆ ಬರುತ್ತೀರಾ ಎಂದು ಕೇಳಿದ್ದಾರೆ. ಅವರು ಸಿಟ್ಟಿನಿಂದ ಗೆಳೆಯರ ಮೇಲೆ ಸಿಡಿದರು!" ಎನ್ನುತ್ತಾ ವಡಿವೇಲನ್ ಜೋರಾಗಿ ನಕ್ಕರು.

ಈ ದಂಪತಿಗಳ ಮನೆಯ ಚಾವಡಿಯಲ್ಲಿ ನಾವು ಕುಳಿತಿದ್ದೆವು. ಪಕ್ಕದಲ್ಲೇ ದೇವರ ಪಟಗಳಿಂದ ತುಂಬಿದ ಒಂದು ಶೆಲ್ಫ್‌ ಇತ್ತು. ಅದರ ಜೊತೆಗೆ ಗೋಡೆಯ ತುಂಬಾ ಸೆಲ್ಫಿಗಳು, ಪ್ರವಾಸದ ಫೋಟೋಗಳು ಇದ್ದವು. ಅದರ ಪಕ್ಕದಲ್ಲಿ ಪ್ರಿಯಾ ಸಮಯ ಸಿಕ್ಕಾಗಿ ನೋಡುವ ಟಿವಿಯೂ ಇತ್ತು. ನಾವು ಅವರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅವರು ಮಕ್ಕಳಿಬ್ಬರೂ ಶಾಲೆಗೆ ಹೋಗಿದ್ದರು. ಅವರ ಮನೆಯ ನಾಯಿ ನಮ್ಮನ್ನು ಕಂಡು ಹಲೋ ಎಂದಿತು. “ಅದು ಜೂಲಿ” ಎಂದು ವಡಿವೇಲನ್‌ ಪರಿಚಯಿಸಿದರು. ನಾನು ಅವಳನ್ನು ಮೆಚ್ಚಿ “ಚಂದ ಇದ್ದಾಳೆ” ಎಂದಾಗ ಅವರು “ಅದು ಗಂಡು” ಎಂದು ನಕ್ಕರು. ಜೂಲಿ ಬೇಸರದಿಂದ ಅಲ್ಲಿಂದ ಹೊರಟುಹೋಯಿತು.

ಪ್ರಿಯಾ ನಮ್ಮನ್ನು ಊಟಕ್ಕೆ ಕರೆದರು. ಅವರು ನಮಗಾಗಿ ವಡೆ ಮತ್ತು ಪಾಯಸದೊಂದಿಗೆ ಹಬ್ಬದೂಟವನ್ನೇ ತಯಾರಿಸಿದ್ದರು. ಬಾಳೆಯೆಲೆಯಲ್ಲ ಬಡಿಸಿದ ಊಟ ಬಹಳ ರುಚಿಕಟ್ಟಾಗಿತ್ತು ಮತ್ತು ಭರ್ಜರಿಯಾಗಿತ್ತು.

Left: Priya inspecting her sesame plants.
PHOTO • M. Palani Kumar
Right: The couple, Vadivelan and Priya in their sugarcane field.
PHOTO • M. Palani Kumar

ಎಡಕ್ಕೆ: ಪ್ರಿಯಾ ತಮ್ಮ ಹೊಲದಲ್ಲಿನ ಎಳ್ಳಿನ ಗಿಡಗಳನ್ನು ಪರಿಶೀಲಿಸುತ್ತಿದ್ದಾರೆ. ಬಲ: ದಂಪತಿಗಳಾದ ವಡಿವೇಲನ್ ಮತ್ತು ಪ್ರಿಯಾ ತಮ್ಮ ಕಬ್ಬಿನ ಹೊಲದಲ್ಲಿ

ನಿದ್ರೆಗೆ ಜಾರದಂತೆ ನಾವು ವ್ಯವಹಾರದ ಕುರಿತು ಮಾತನಾಡತೊಡಗಿದೆವು. ಎಳ್ಳಿನ ಬೆಳೆ ಬೆಳಯುವ ಅನುಭವ ಹೇಗಿರುತ್ತದೆ? “ನಿರಾಶಾದಾಯಕ” ಎನ್ನುತ್ತಾರೆ ವಡಿವೇಲನ್.‌ ಹಾಗೇ ನೋಡಿದರೆ ಬೇಸಾಯವೇ ಅಂತಹದ್ದು ಎನ್ನುತ್ತಾರೆ ಅವರು. “ಆದಾಯ ಕಡಿಮೆಯಾಗುತ್ತಿದೆ. ಒಳಸುರಿ ವೆಚ್ಚಗಳು ಹೆಚ್ಚುತ್ತಿವೆ. ಇತರ ರಸಗೊಬ್ಬರಗಳಂತೆ ಯೂರಿಯಾ ಬೆಲೆಯೂ ತುಂಬಾ ದುಬಾರಿಯಾಗಿದೆ. ಇದಲ್ಲದೆ ಹೊಲ ಉಳುಮೆ ಮಾಡಬೇಕು, ಎಳ್ಳಿನ ಬೀಜ ಬಿತ್ತನೆ ಮಾಡಬೇಕು. ಗಿಡಗಳ ನಡುವೆ ನೀರು ಹರಿಯುವಂತೆ ಏರಿ ಮಾಡಬೇಕು. ಜೊತೆಗೆ ಸೂರ್ಯ ಮುಳುಗಿದ ನಂತರವೇ ಹೊಲಕ್ಕೆ ನೀರು ಹರಿಸುತ್ತೇವೆ."

ಮೊದಲ ಸಲ ಸರಿಯಾಗಿ ನೀರು ಬಿಡುವುದು ಮೂರನೇ ವಾರ ಎನ್ನುತ್ತಾರೆ ಪ್ರಿಯಾ. ಅಷ್ಟು ಹೊತ್ತಿಗೆ ಗಿಡ ಇಷ್ಟು ಎತ್ತರ ಬೆಳೆದಿರುತ್ತದೆ ಎನ್ನುತ್ತಾ ಅವರು ತಮ್ಮ ಕೈಯನ್ನು ನೆಲದಿಂದ ಹತ್ತು ಇಂಚು ಎತ್ತರದಲ್ಲಿ ಇಟ್ಟು ತೋರಿಸಿದರು. “ನಂತರ ಅದು ಬಹಳ ಬೇಗನೆ ಬೆಳೆಯಲಾರಂಭಿಸುತ್ತದೆ. ಐದನೇ ವಾರದಲ್ಲಿ ಕಳೆ ತೆಗೆದು, ಯೂರಿಯಾ ಕೊಡಬೇಕು. ಜೊತೆಗೆ ಪ್ರತಿ ಹತ್ತು ದಿನಕ್ಕೊಮ್ಮೆ ಗಿಡಗಳಿಗೆ ನೀರು ಕೊಡಬೇಕು. ಸೂರ್ಯನ ಬೆಳಕು ಉತ್ತಮವಾಗಿದ್ದಷ್ಟೂ ಇಳುವರಿ ಉತ್ತಮವಾಗಿರುತ್ತದೆ.”

ವಡಿವೇಲನ್‌ ಕೆಲಸದ ಮೇಲೆ ಹೊರಗಿದ್ದಾಗ ಪ್ರಿಯಾ ಹೊಲದ ಉಸಾಬರಿ ನೋಡಿಕೊಳ್ಳುತ್ತಾರೆ. ವರ್ಷದ ಎಲ್ಲಾ ಕಾಲದಲ್ಲೂ ಅವರ ಒಂದೂವರೆ ಎಕರೆ ಹೊಲದಲ್ಲಿ ಕನಿಷ್ಟ ಎರಡು ಬೆಳಗಳಿರುತ್ತವೆ. ಅವರು ಮನೆಗೆಲಸಗಲನ್ನು ಮುಗಿಸಿ, ಮಕ್ಕಳನ್ನು ಶಾಲೆಗೆ ಕಳುಹಿಸಿ, ನಂತರ ತನಗೆ ಊಟ ಕಟ್ಟಿಕೊಂಡು ಹೊಲದತ್ತ ತಮ್ಮ ಸೈಕಲ್‌ ಏರಿ ಹೊರಡುತ್ತಾರೆ. ಅಲ್ಲಿ ಅವರು ಹೊಲಕ್ಕೆ ಬಂದ ಕೆಲಸದಾಳುಗಳ ಜೊತೆ ಸೇರಿ ಕೆಲಸ ಮಾಡುತ್ತಾರೆ. “ಬೆಳಗ್ಗೆ ಹತ್ತು ಗಂಟೆಗೆ ಎಲ್ಲರಿಗೂ ಚಹಾ ಖರೀದಿಸಿ ಕೊಡಬೇಕು.ಮತ್ತೆ ಊಟದ ನಂತರ ಟೀ ಮತ್ತು ಪಲ್ಹಾಗಾರಮ್ [ತಿಂಡಿ] ಇರುತ್ತದೆ.‌ ಸಾಮಾನ್ಯವಾಗಿ ಸುಯಿಯಮ್‌ [ಸಿಹಿತಿಂಡಿ] ಮತ್ತು ಉರುಳೈ ಬೋಂಡಾ ಇರುತ್ತದೆ.” ಅವರು ಏಳುತ್ತಾ, ಬಾಗುತ್ತಾ, ಕೂರುತ್ತಾ, ಅಡುಗೆ ಮಾಡುತ್ತಾ, ಸ್ವಚ್ಛಗೊಳಿಸುತ್ತಾ ಕೆಲಸ ಮಾಡುತ್ತಲೇ ಇದ್ದರು… ನಾವು ಹೊಲಕ್ಕೆ ಹೊರಡುವ ಮೊದಲು “ಸ್ವಲ್ಪ ಜ್ಯೂಸ್‌ ಕುಡಿಯಿರಿ” ಎಂದು ಕುಡಿಯಲು ಕೊಟ್ಟರು.

*****

ಎಳ್ಳು ವಯಲ್‌ ಅಥವಾ ಎಳ್ಳಿನ ಹೊಲ ಎನ್ನುವುದು ನೋಡಲು ಬಹಳ ಸುಂದರವಾಗಿರುತ್ತದೆ. ಈ ಗಿಡದ ಹೂವುಗಳು ಸೂಕ್ಷ್ಮ ಮತ್ತು ಅಲಂಕಾರಿಕವಾಗಿರುತ್ತವೆ. ಗುಲಾಬಿ ಮತ್ತು ಬಿಳಿ ಬಣ್ಣದ ಈ ಹೂವುಗಳು ಫ್ರೆಂಚ್‌ ಮ್ಯಾನಿಕ್ಯೂರ್‌ ಮತ್ತು ಚಿಫಾನ್‌ ಸೀರೆಗಳನ್ನು ನೆನಪಿಸುತ್ತವೆ. ದಕ್ಷಿಣ ಭಾರತದ ಅಡುಗೆ ಮನೆಗಳಲ್ಲಿನ ಗಾಢ ಎಣ್ಣೆಯ ನೆನಪನ್ನು ಇವು ಅಷ್ಟಾಗಿ ತರುವುದಿಲ್ಲ.

ಎಳ್ಳಿನ ಸಸ್ಯವು ಎತ್ತರಕ್ಕೆ ತೆಳುವಾಗಿದ್ದು, ಕಡು ಹಸಿರು ಎಲೆಗಳನ್ನು ಹೊಂದಿರುತ್ತದೆ. ಕಾಂಡದ ಮೇಲೆ ಅನೇಕ ಹಸಿರು ಬೀಜಗಳಿರುತ್ತವೆ. ಪ್ರತಿಯೊಂದೂ ಬಾದಾಮಿಯಷ್ಟು ದೊಡ್ಡದಿರುತ್ತದೆ ಮತ್ತು ಏಲಕ್ಕಿಯ ಆಕಾರದಲ್ಲಿರುತ್ತದೆ. ಪ್ರಿಯಾ ನಮಗಾಗಿ ಒಂದನ್ನು ಒಡೆದು ತೋರಿಸಿದರು. ಒಳಗೆ, ಹಲವಾರು ಸಣ್ಣ ತಿಳಿ ಬಿಳಿ ಎಳ್ಳಿನ ಬೀಜಗಳಿದ್ದವು. ಒಂದು ಚಮಚ ಎಣ್ಣೆಗಾಗಿ ಇವುಗಳಲ್ಲಿ ಎಷ್ಟನ್ನು ಪುಡಿಮಾಡಬೇಕು ಎಂದು ಊಹಿಸುವುದು ಕಷ್ಟ. ಯಾಕೆಂದರೆ, ಒಂದು ಇಡ್ಲಿಗೆ ಕನಿಷ್ಟ ಎರಡು ಚಮಚ ಎಳ್ಳೆಣ್ಣೆಯನ್ನು ಹಚ್ಚಿ ಅದರ ಮೇಲೆ ಚಟ್ನಿ ಪುಡಿಯನ್ನು ಉದುರಿಸಲಾಗುತ್ತದೆ.

ಆದರೆ ಹೆಚ್ಚು ಯೋಚಿಸುವುದಕ್ಕೆ ಬಿಸಿಲು ಬಿಡುತ್ತಿರಲಿಲ್ಲ, ಎಪ್ರಿಲ್‌ ತಿಂಗಳ ಬಿಸಿಲು ಬಿರುಸಾಗಿತ್ತು. ನಾವು ಅಲ್ಲೇ ಹತ್ತಿರದಲ್ಲಿದ್ದ ತೋಪಿನ ನೆರಳಿನಲ್ಲಿ ಆಶ್ರಯ ಪಡೆದೆವು. ಅಲ್ಲಿಯೇ ಹೊಲಕ್ಕೆ ಕೆಲಸಕ್ಕೆ ಬಂದ ಮಹಿಳೆಯರೂ ಆಶ್ರಯ ಪಡೆಯುತ್ತಾರೆಂದು ವಡಿವೇಲನ್‌ ತಿಳಿಸಿದರು. ಅವರಲ್ಲಿ ಬಹಳಷ್ಟು ಪಕ್ಕದ ಗೋಪಾಲ್‌ ಎನ್ನುವವರ ಉದ್ದಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಬಿಸಿಲಿನಿಂದ ರಕ್ಷಣೆ ಪಡೆಯಲು ತಮ್ಮ ತಲೆಗೆ ಕಾಟನ್‌ ಬಟ್ಟೆಯನ್ನು ಸುತ್ತಿಕೊಂಡಿದ್ದರು. ಅವರು ಚಹಾ ಮತ್ತು ಊಟದ ವಿರಾಮವನ್ನು ಹೊರತುಪಡಿಸಿ ಇಡೀ ದಿನ ಬಿಡುವಿಲ್ಲದೆ ದುಡಿಯುತ್ತಾರೆ.

Left: Mariyaayi works as a labourer, and also sells tulasi garlands near the Srirangam temple.
PHOTO • M. Palani Kumar
Right: Vadivelan’s neighbour, S. Gopal participates in the sesame harvest
PHOTO • M. Palani Kumar

ಎಡ: ಮರಿಯಾಯಿ ಕೂಲಿ ಕೆಲಸ ಮಾಡುತ್ತಾರೆ ಮತ್ತು ಶ್ರೀರಂಗಂ ದೇವಾಲಯದ ಬಳಿ ತುಳಸಿ ಹಾರಗಳನ್ನು ಮಾರುತ್ತಾರೆ. ಬಲ: ವಡಿವೇಲನ್ ಅವರ ನೆರೆಹೊರೆಯವರಾದ ಎಸ್. ಗೋಪಾಲ್ ಎಳ್ಳಿನ ಕೊಯ್ಲಿನಲ್ಲಿ ಭಾಗವಹಿಸುತ್ತಾರೆ

Women agricultural labourers weeding (left) in Gopal's field. They take a short break (right) for tea and snacks
PHOTO • M. Palani Kumar
Women agricultural labourers weeding (left) in Gopal's field. They take a short break (right) for tea and snacks.
PHOTO • M. Palani Kumar

ಗೋಪಾಲ್ ಅವರ ಹೊಲದಲ್ಲಿ ಕಳೆ ತೆಗೆಯುತ್ತಿರುವ (ಎಡಕ್ಕೆ) ಕೃಷಿ ಕಾರ್ಮಿಕ ಮಹಿಳೆಯರು. ಅವರು ಚಹಾ ಮತ್ತು ತಿಂಡಿಗಳಿಗಾಗಿ ಸಣ್ಣ ವಿರಾಮ (ಬಲಕ್ಕೆ) ತೆಗೆದುಕೊಳ್ಳುತ್ತಾರೆ

ಅಲ್ಲಿದ್ದ ಎಲ್ಲರೂ ವಯಸ್ಸಾದ ಮಹಿಳೆಯರು. ಎಪ್ಪತ್ತರ ಪ್ರಾಯದ ವಿ. ಮರಿಯಾಯಿ ಅತ್ಯಂತ ಹಿರಿಯವರು. ಅವರು ಕಳೆ ತೆಗೆಯುವುದು, ನಾಟಿ, ಕೊಯ್ಲಿನಂತಹ ಕೆಲಸಗಳಿಲ್ಲದಿರುವ ಸಮಯದಲ್ಲಿ ಶ್ರೀರಂಗಂ ದೇವಸ್ಥಾನದ ಬಳಿ ತುಳಸಿ ಹಾರದ ವ್ಯಾಪಾರ ಮಾಡುತ್ತಾರೆ. ಅವರು ಬಹಳ ಮೃದುವಾದ ದನಿಯಲ್ಲಿ ಮಾತನಾಡುತ್ತಿದ್ದರು. ಆದರೆ ಸೂರ್ಯ ಎಡೆಬಿಡದೆ ಬೆಂಕಿ ಕಾರುತ್ತಿದ್ದ…

ಎಳ್ಳಿನ ಗಿಡ ಬಿಸಿಲಿನ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅದು ಬಹಳಷ್ಟು ವಿಷಯಗಳ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ವಡಿವೇಲನ್‌ ಅವರ ಪಕ್ಕದ ಹೊಲದವರಾದ 65 ವರ್ಷದ ಎಸ್‌ ಗೋಪಾಲನ್‌ ನನಗೆ ಹೇಳಿದರು. ಈ ಮಾತನ್ನು ವಡಿವೇಲನ್‌ ಮತ್ತು ಪ್ರಿಯಾ ಸಹ ಅನುಮೋದಿಸುತ್ತಾರೆ. ಮೂವರು ರೈತರು ಕೀಟನಾಶಕ ಮತ್ತು ಸ್ಪ್ರೇಗಳ ಕುರಿತು ಹೆಚ್ಚು ಮಾತನಾಡಲಿಲ್ಲ. ಅಲ್ಲೋ ಒಮ್ಮೆಯಷ್ಟೇ ಅದು ಬೇಕಾಗುತ್ತದೆ. ಅವು ಗಿಡಗಳ ಕುರಿತೂ ಹೆಚ್ಚು ಯೋಚಿಸುವುದಿಲ್ಲ. ಎಳ್ಳು ಎಲ್ಲಾ ರೀತಿಯಿಂದಲೂ ಸಿರಿಧಾನ್ಯಗಳನ್ನು ಹೋಲುತ್ತದೆ - ಬೆಳೆಸಲು ಸುಲಭ, ಸ್ವಲ್ಪ ಗಮನ ಸಾಕಾಗುತ್ತದೆ. ಹಾನಿಯಾಗುವುದು ಅಕಾಲಿಕ ಮಳೆಯಿಂದ.

2022ರಲ್ಲಿ ಅದೇ ನಡೆದಿತ್ತು. “ಬರಬಾರದ ಸಮಯದಲ್ಲಿ ಮಳೆ ಬಂದಿತ್ತು – ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಗಿಡ ಎಳಸಾಗಿರುತ್ತವೆ, ಇದು ಬೆಳವಣಿಗೆಯನ್ನು ಕುಂಠಿತಗೊಳಿಸಿತು” ಎನ್ನುತ್ತಾರೆ ವಡಿವೇಲನ್.‌ ಅವರ ಹೊಲದಲ್ಲಿನ ಬೆಳೆ ಕೊಯ್ಲಿಗೆ ಹತ್ತಿರದಲ್ಲಿತ್ತು. ಅವರು ಸಣ್ಣ ಇಳುವರಿಯ ನಿರೀಕ್ಷೆಯಲ್ಲಿದ್ದರು. "ಕಳೆದ ವರ್ಷ 30 ಸೆಂಟ್ಸ್ (ಎಕರೆಯ ಮೂರನೇ ಒಂದು ಭಾಗ) ಹೊಲದಿಂದ 150 ಕಿಲೋಗ್ರಾಂಗಳಷ್ಟು ಎಳ್ಳು ಸಿಕ್ಕಿತ್ತು. ಈ ಬಾರಿ ಅದು 40 ಕೆಜಿ ದಾಟುವುದು ಅನುಮಾನ.”

ಈ ಪ್ರಮಾಣದ ಇಳುವರಿಯಿಂದ ತಮ್ಮ ವರ್ಷದ ತೈಲ ಬೇಡಿಕೆಯನ್ನು ಪೂರೈಸಿಕೊಳ್ಳುವುದು ಕಷ್ಟ ಎನ್ನುತ್ತಾರೆ ದಂಪತಿಗಳು. “ನಾವು ಒಂದು ಸಲಕ್ಕೆ 15ರಿಂದ 18 ಕೇಜಿಗಳಷ್ಟು ಎಳ್ಳನ್ನು ಎಣ್ಣೆ ಮಾಡಿಸುತ್ತೇವೆ. ಅದರಿಂದ ಸುಮಾರು ಏಳು ಅಥವಾ ಎಂಟು ಲೀಟರ್‌ ಎಣ್ಣೆ ದೊರೆಯುತ್ತದೆ. ಮನೆ ಬಳಕೆಗೆ ವರ್ಷಕ್ಕೆ ಎರಡು ಸಲ ಎಣ್ಣೆ ಮಾಡಿಸುತ್ತೇವೆ” ಎಂದು ವಿರಿಸುತ್ತಾರೆ ಪ್ರಿಯಾ. ವಡಿವೇಲನ್‌ ಮರುದಿನ ನಮ್ಮನ್ನು ಹತ್ತಿರದ ಎಣ್ಣೆ ಮಿಲ್ಲಿಗೆ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದರು. ಆದರೆ ಎಳ್ಳು ಬೀಜದ ಕತೆಯೇನು? ಅದನ್ನು ಹೇಗೆ ಸಂಗ್ರಹಿಸುತ್ತಾರೆ?

ಗೋಪಾಲ್‌ ನಮ್ಮನ್ನು ಅದನ್ನು ನೋಡಲು ಕರೆದುಕೊಂಡು ಹೋದರು. ಅವರ ಎಳ್ಳಿನ ಹೊಲವು ಅಲ್ಲಿಂದ ಸ್ವಲ್ಪ ದೂರದಲ್ಲಿತ್ತು. ಅಲ್ಲಿ ಒಂದು ಇಟ್ಟಿಗೆ ಗೂಡಿತ್ತು. ಮತ್ತು ಅಲ್ಲಿ ಕೆಲಸ ಮಾಡುವ ಕೆಲವು ಕುಟುಂಬಗಳೂ ತಂಗಿದ್ದವು. ಅವರಿಗೆ ಒಂದು ಇಟ್ಟಿಗೆ ತಯಾರಿಸಿದರೆ ಒಂದು ರೂಪಾಯಿ ದೊರೆಯುತ್ತದೆ. ಅಲ್ಲಿಯೇ ಅವರು ತಮ್ಮ ಮಕ್ಕಳನ್ನು ಬೆಳೆಸುತ್ತಾರೆ (ಅವರು ಆಡು ಮತ್ತು ಕೋಳಿಗಳನ್ನು ನೋಡಿಕೊಳ್ಳುತ್ತಾರೆ). ಸಂಜೆಯಾದ ಕಾರಣ ಇಟ್ಟಿಗೆ ಭಟ್ಟಿ ಮೌನವಾಗಿತ್ತು. ಇಟ್ಟಿಗೆ ಭಟ್ಟಿಯಲ್ಲಿ ಸಹಾಯಕನಾಗಿ ಕೆಲಸ ಮಾಡುವ ಸೀನಿಯಮ್ಮಾಳ್‌ ಸಹಾಕ್ಕೆಂದು ನಮ್ಮ ಕಡೆಗೆ ನಡೆದು ಬಂದರು.

Priya and Gopal shake the harvested sesame stalks (left) until the seeds fall out and collect on the tarpaulin sheet (right)
PHOTO • M. Palani Kumar
Priya and Gopal shake the harvested sesame stalks (left) until the seeds fall out and collect on the tarpaulin sheet (right)
PHOTO • M. Palani Kumar

ಪ್ರಿಯಾ ಮತ್ತು ಗೋಪಾಲ್ ಕೊಯ್ಲು ಮಾಡಿದ ಎಳ್ಳಿನ ಗಿಡಗಳನ್ನು (ಎಡಕ್ಕೆ) ಅದರಲ್ಲಿನ ಕಾಳುಗಳು ಬೀಳುವವರೆಗೆ ಅಲ್ಲಾಡಿಸುತ್ತಾರೆ. ಬಿದ್ದ ಕಾಳುಗಳನ್ನು ಟಾರ್ಪಾಲಿನ್ ಶೀಟ್ ಮೇಲೆ (ಬಲ) ಸಂಗ್ರಹಿಸುತ್ತಾರೆ

Sesame seeds collected in the winnow (left). Seeniammal (right)  a brick kiln worker, helps out with cleaning the sesame seeds to remove stalks and other impurities
PHOTO • M. Palani Kumar
Sesame seeds collected in the winnow (left). Seeniammal (right)  a brick kiln worker, helps out with cleaning the sesame seeds to remove stalks and other impurities
PHOTO • M. Palani Kumar

ಮೊರದಲ್ಲಿ ಸಂಗ್ರಹಿಸಿಟ್ಟಿರುವ ಎಳ್ಳಿನ ಬೀಜಗಳು (ಎಡಕ್ಕೆ). ಇಟ್ಟಿಗೆ ಭಟ್ಟಿ ಕೆಲಸಗಾರರಾದ ಸೀನಿಯಮ್ಮಾಳ್ (ಬಲ) ಎಳ್ಳಿನ ಕಾಳುಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತಾರೆ ಮತ್ತು ಅದರಲ್ಲಿನ ಗಿಡದ ಕಡ್ಡಿಗಳು ಹಾಗೂ ಇತರ ಕಲ್ಮಶಗಳನ್ನು ತೆಗೆದುಹಾಕುತ್ತಾರೆ

ಮೊದಲಿಗೆ ಗೋಪಾಲ್‌ ಕಟಾವು ಮಾಡಿದ ಎಳ್ಳಿನ ಗಿಡಗಳ ಮೇಲೆ ಮುಚ್ಚಿದ್ದ ಟಾರ್ಪಲಿನ್‌ ಶೀಟ್‌ ತೆಗೆಯುತ್ತಾರೆ. ಅವುಗಳ ತೇವಾಂಶ ಒಣಗಿ ಕಾಯಿಗಳು ಒಡೆಯುವಂತೆ ಒಂದಷ್ಟು ರಾಶಿ ಹಾಕಿ ಪೇರಿಸಿಡಲಾಗುತ್ತದೆ. ಸೀನಿಯಮ್ಮಾಳ್‌ ತಮ್ಮ ಅನುಭವಸ್ಥ ಕೈಗಳಿಂದ ಕೋಲನ್ನು ಬಳಸಿ ಗಿಡಗಳನ್ನು ತಿರುವಿ ಹಾಕುತ್ತಾರೆ. ಕಾಯಿಗಳು ಬಲಿತಿದ್ದು ಒಡೆದು ಅದರಲ್ಲಿದ್ದ ಬೆಳದ ಬೀಜಗಳು ಉದುರುತ್ತವೆ. ಅವರು ಅವುಗಳನ್ನು ಕೈಗಳಿಂದ ಸಂಗ್ರಹಿಸಿ ರಾಶಿ ಮಾಡುತ್ತಾರೆ. ಎಲ್ಲಾ ಗಿಡಗಳಲ್ಲಿನ ಕಾಳುಗಳನ್ನು ಉದುರಿಸುವ ತನಕವೂ ಇದನ್ನು ಮುಂದುವರೆಸಲಾಗುತ್ತದೆ.

ಪ್ರಿಯಾ, ಗೋಪಾಲ್‌ ಮತ್ತು ಅವರ ಸೊಸೆ ಗಿಡಗಳನ್ನು ಒಟ್ಟುಗೂಡಿಸಿ ಹೊರೆ ಕಟ್ಟುತ್ತಾರೆ. ಒಂದು ಕಾಲದಲ್ಲಿ ಎಳ್ಳಿನ ಕಡ್ಡಿಗಳನ್ನು ಸೌದೆಯಾಗಿ ಬಳಸಲಾಗುತ್ತಿತ್ತು. “ಅವುಗಳನ್ನು ಮೊದಲು “ಭತ್ತ ಬೇಯಿಸಲು ಬಳಸುತ್ತಿದ್ದದ್ದು ನನಗೆ ನೆನಪಿದೆ. ಈಗ ಭತ್ತವನ್ನು ಮಿಲ್ಲಿಗೆ ಕೊಂಡೊಯ್ಯುವುದರಿಂದಾಗಿ ಈ ಒಣ ಕಡ್ಡಿಗಳನ್ನು ಸುಮ್ಮನೆ ಸುಟ್ಟು ಬಿಡುತ್ತೇವೆ” ಎನ್ನುತ್ತಾರೆ ವಡಿವೇಲನ್.‌

ಅನೇಕ ಹಳೆಯ ಅಭ್ಯಾಸಗಳು ಕಣ್ಮರೆಯಾಗಿವೆ ಎನ್ನುತ್ತಾರೆ ಗೋಪಾಲ್.‌ ಈಗ ಉಯಿರ್‌ ವೇಲಿ (ಹಸಿರು ಬೇಲಿ) ಕಣ್ಮರೆಯಾಗಿದೆಯೆನ್ನುವುದು ಅವರಿಗೆ ವಿಶೇಷವಾಗಿ ಬೇಸರ ತರಿಸಿದೆ. “ಈ ಹಿಂದೆ ಹಸಿರು ಬೇಲಿಗಳ ಉದ್ದಕ್ಕೂ ಬಿಲ ಮಾಡಿಕೊಂಡು ನರಿಗಳು ವಾಸಿಸುತ್ತಿದ್ದವು. ಅವು ನಮ್ಮ ಬೆಳೆಗೆ ಬರುವ ಹಕ್ಕಿಗಳು ಮತ್ತು ಪ್ರಾಣಿಗಳನ್ನು ದೂರವಿಡುತ್ತಿದ್ದವು. ಈಗ ಒಂದು ನರಿ ಕೂಡಾ ಕಾಣಿಸುವುದಿಲ್ಲ!” ಎಂದು ಅವರು ಬೇಸರದಿಂದ ಹೇಳುತ್ತಾರೆ.

“ಖಂಡಿತವಾಗಿಯೂ ಹೌದು” ಎನ್ನುತ್ತಾರೆ ವಡಿವೇಲನ್.‌ “ಆಗ ಎಲ್ಲಿ ನೋಡಿದರೂ ನರಿಗಳಿರುತ್ತಿದ್ದವು. ನಾನು ಸಣ್ಣವನಿದ್ದಾಗ ಒಮ್ಮೆ ನಾಯಿ ಮರಿಯೆಂದುಕೊಂಡು ನರಿಯ ಮರಿಯನ್ನು ಎತ್ತಿಕೊಂಡು ತಂದಿದ್ದೆ. ಅಪ್ಪ ಅದನ್ನು ಕಂಡ ಕೂಡಲೇ ಅದು ನಾಯಿಯಂತಿಲ್ಲ ಎಂದಿದ್ದರು. ಆ ರಾತ್ರಿ ದೊಡ್ಡ ನರಿಗಳ ಹಿಂಡೊಂದು ನಮ್ಮ ಮನೆಯ ಹಿಂದೆ ಕೂಗುತ್ತಿದ್ದವು. ಮರುದಿನ ನಾನು ಅದನ್ನು ಎಲ್ಲಿ ಕಂಡಿದ್ದೆನೋ ಅಲ್ಲೇ ಬಿಟ್ಟು ಬಂದಿದ್ದೆ!”

ನಾವು ಹರಟೆಯಲ್ಲಿ ತೊಡಗಿರುವಾಗ ಸೀನಿಯಮ್ಮಾಳ್‌ ಮೊರದಲ್ಲಿ ಎಳ್ಳನ್ನು ಕೇರುತ್ತಿದ್ದರು. ಅವರು ಕೇರುವ ಲಯಕ್ಕೆ ಎಳ್ಳು ಮಳೆ ಹನಿ ಸಂಗೀತದ ಲಯಕ್ಕೆ ಬೀಳುತ್ತಿರುವಂತೆ ಬೀಳುತ್ತಿದ್ದ ದೃಶ್ಯ ನೋಡಲು ಸುಂದರವಾಗಿತ್ತು. ತಮ್ಮ ಕೇರುವಿಕೆಯ ಲಯಕ್ಕೆ ತಕ್ಕಂತೆ ಅವರು ತಮ್ಮ ತಲೆಯನ್ನೂ ಆಡಿಸುತ್ತಿದ್ದರು.

Gopal's daughter-in-law cleans the seeds using a sieve (left) and later they both gather them into sacks (right).
PHOTO • M. Palani Kumar
Gopal's daughter-in-law cleans the seeds using a sieve (left) and later they both gather them into sacks (right).
PHOTO • M. Palani Kumar

ಗೋಪಾಲ್ ಅವರ ಸೊಸೆ ಜರಡಿ (ಎಡ) ಬಳಸಿ ಬೀಜಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ನಂತರ ಅವರಿಬ್ಬರೂ ಅವುಗಳನ್ನು ಚೀಲಗಳಲ್ಲಿ (ಬಲ) ಸಂಗ್ರಹಿಸುತ್ತಾರೆ

Priya helps gather the stalks (left). Gopal then carries it (right) to one side of the field. It will later be burnt
PHOTO • M. Palani Kumar
Priya helps gather the stalks (left). Gopal then carries it (right) to one side of the field. It will later be burnt.
PHOTO • M. Palani Kumar

ಎಳ್ಳಿನ ಕಡ್ಡಿಗಳನ್ನು (ಎಡಕ್ಕೆ) ಸಂಗ್ರಹಿಸಲು ಪ್ರಿಯಾ ಸಹಾಯ ಮಾಡುತ್ತಾರೆ. ನಂತರ ಗೋಪಾಲ್ ಅದನ್ನು (ಬಲಕ್ಕೆ) ಹೊಲದ ಒಂದು ಬದಿಗೆ ಕೊಂಡೊಯ್ಯುತ್ತಾರೆ. ಎಲ್ಲ ಮುಗಿದ ನಂತರ ಅದನ್ನು ಸುಡಲಾಗುತ್ತದೆ

*****

ಶ್ರೀರಂಗಂನ ಶ್ರೀ ರಂಗ ಮರಚೆಕ್ಕು (ಮರದ ಗಾಣ) ದಲ್ಲಿದ್ದ ರೇಡಿಯೋದಲ್ಲಿ ಹಳೆಯ ತಮಿಳು ಹಾಡೊಂದು ಬರುತ್ತಿತ್ತು. ಅದರ ಮಾಲಿಕ ಆರ್‌ ರಾಜು ಕ್ಯಾಶ್‌ ರಿಜಿಸ್ಟರ್‌ ಹಿಂದೆ ಕುಳಿತಿದ್ದರು. ಗಾಣ ಎಣ್ಣೆ ಬೀಜ ಅರೆಯುವ ಸದ್ದು ಕೇಳುತ್ತಿತ್ತು. ದೊಡ್ಡ ಸ್ಟೀಲ್‌ ಪಾತ್ರೆಗಳಲ್ಲಿ ಜೇನು ಬಣ್ಣದ ಎಣ್ಣೆಯನ್ನು ತುಂಬಿಸಿಡಲಾಗಿತ್ತು. ಇನ್ನಷ್ಟು ಎಳ್ಳಿನ ಕಾಳುಗಳನ್ನು ಮಿಲ್ಲಿನ ಹಿಂದೆ ಒಣಗಿಸಲಾಗಿತ್ತು.

"18 ಕಿಲೋ ಎಳ್ಳು ಪುಡಿ ಮಾಡಲು 1.5 ಗಂಟೆ ಬೇಕಾಗುತ್ತದೆ. ನಾವು ಅದಕ್ಕೆ 1.5 ಕಿಲೋ ತಾಳೆ ಬೆಲ್ಲವನ್ನು ಸೇರಿಸುತ್ತೇವೆ. ಸುಮಾರು 8 ಲೀಟರ್ ಎಣ್ಣೆ ಸಿಗುತ್ತದೆ. ಸ್ಟೀಲ್ ಗಿರಣಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ" ಎಂದು ರಾಜು ವಿವರಿಸುತ್ತಾರೆ. ರಾಜು ಒಂದು ಕಿಲೋ ಎಣ್ಣೆ ಕಾಳು ಅರೆಯಲು 30 ರೂಪಾಯಿ ಚಾರ್ಜ್‌ ಮಾಡುತ್ತಾರೆ. ಮತ್ತು ಕೋಲ್ಡ್ ಪ್ರೆಸ್ಡ್ ಎಳ್ಳೆಣ್ಣೆಯನ್ನು ಲೀಟರ್ ಒಂದಕ್ಕೆ ರೂ.420 ಕ್ಕೆ ಮಾರಾಟ ಮಾಡಲಾಗುತ್ತದೆ. " ನಾವು ಫಸ್ಟ್‌ ಕ್ಲಾಸ್ ತಾಳೆ ಬೆಲ್ಲವನ್ನಷ್ಟೇ ಬಳಸುತ್ತೇವೆ - ರೈತರಿಂದ ನೇರವಾಗಿ ಅಥವಾ ಗಾಂಧಿ ಮಾರುಕಟ್ಟೆಯಿಂದ ಕಿಲೋಗೆ 130 ರೂ.ಗಳಂತೆ ಖರೀದಿಸುತ್ತೇವೆ - ಮತ್ತು ಎಣ್ಣೆಯ ಪರಿಮಳವನ್ನು ಹೆಚ್ಚಿಸಲು ಉತ್ತಮ ಗುಣಮಟ್ಟದ ತಾಳೆ ಬೆಲ್ಲವನ್ನು ಕಿಲೋಗೆ 300 ರೂ.ಗೆ ಖರೀದಿಸಿ ಬಳಸುತ್ತೇವೆ."

ಯಂತ್ರವು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಾಲ್ಕು ಬಾರಿ ಚಲಿಸುತ್ತದೆ ಮತ್ತು ಹೊಸದಾಗಿ ಹಿಂಡಿದ ಎಣ್ಣೆಯನ್ನು ತಿಳಿಯಾಗುವವರೆಗೆ ಬಿಸಿಲಿನಲ್ಲಿ ಇಡಲಾಗುತ್ತದೆ. ಹಿಂಡಿ [ಎಳ್ಳು ಪುನಾಕು] ಸ್ವಲ್ಪ ಎಣ್ಣೆಯಂಶವನ್ನು ಹೊಂದಿರುತ್ತದೆ, ಇದನ್ನು ರೈತರು ತಮ್ಮ ಜಾನುವಾರುಗಳಿಗೆ ಮೇವಾಗಿ ಕಿಲೋಗ್ರಾಂಗೆ 35 ರೂ.ಗೆ ಖರೀದಿಸುತ್ತಾರೆ.

ಒಂದು ಎಕರೆಯಲ್ಲಿ ಎಳ್ಳನ್ನು ಬೆಳೆದು, ಕೊಯ್ಲು ಮಾಡಿ, ಚೊಕ್ಕ ಮಾಡಿ ಚೀಲಕ್ಕೆ ತುಂಬುವುದಕ್ಕೆ 20,000 ರೂ.ಗಿಂತ ಸ್ವಲ್ಪ ಹೆಚ್ಚು ಖರ್ಚಾಗುತ್ತದೆ ಎಂದು ರಾಜು ಲೆಕ್ಕಹಾಕುತ್ತಾರೆ. ಇಳುವರಿ ಸಾಮಾನ್ಯವಾಗಿ 300 ಕಿಲೋ. ಈ ಮೂರು ತಿಂಗಳ ಬೆಳೆಗೆ ಎಕರೆಗೆ 15,000ರಿಂದ 17,000 ರೂ.ಗಳವರೆಗೆ ಲಾಭವನ್ನು ಅವರು ಲೆಕ್ಕಹಾಕುತ್ತಾರೆ.

ಸಮಸ್ಯೆ ಇರುವುದೇ ಅಲ್ಲಿ, ಎನ್ನುತ್ತಾರೆ ವಡಿವೇಲನ್.‌ “ನಮ್ಮ ಶ್ರಮದ ಲಾಭ ಪಡೆಯುವವರು ಯಾರು ಗೊತ್ತೇ? ವ್ಯಾಪಾರಿಗಳು. ಫಸಲು ಕೈ ಬದಲಾಗುತ್ತಿದ್ದಂತೆ ಅವರು ನಮಗೆ ನೀಡಿದ ಎರಡರಷ್ಟು ಮೊತ್ತವನ್ನು ಸಂಪಾದಿಸುತ್ತಾರೆ” ಎಂದು ಅವರು ಆರೋಪಿಸುತ್ತಾರೆ. “ಅವರು ಅದಕ್ಕೆ ಯಾವ ಮೌಲ್ಯವರ್ಧನೆ ಮಾಡುತ್ತಾರೆ?” ಎನ್ನುತ್ತಾ ಅವರು ತಲೆ ಕೊಡವುತ್ತಾರೆ. “ಈ ಕಾರಣಕ್ಕಾಗಿಯೇ ನಾವು ಬೆಳೆದ ಎಳ್ಳನ್ನು ಮಾರಾಟ ಮಾಡುವುದಿಲ್ಲ. ಮನೆಯ ಅಗತ್ಯಕ್ಕೆ ಬೇಕಿರುವಷ್ಟನ್ನೇ ಬೆಳೆದುಕೊಳ್ಳುತ್ತೇವೆ. ನಮಗೆ ಅಷ್ಟೇ ಸಾಕು…”

The wooden press at Srirangam squeezes the golden yellow oil out of the sesame seeds
PHOTO • M. Palani Kumar
The wooden press at Srirangam squeezes the golden yellow oil out of the sesame seeds
PHOTO • M. Palani Kumar

ಎಳ್ಳಿನ ಕಾಳುಗಳನ್ನು ಹಿಂಡಿ ಹೊಂಬಣ್ಣದ ಎಣ್ಣೆಯನ್ನು ತೆಗೆಯುವ ಶ್ರೀರಂಗಂನಲ್ಲಿನ ಮರದ ಗಾಣ

Gandhi market in Trichy, Tamil Nadu where sesame and dals are bought from farmers and sold to dealers
PHOTO • M. Palani Kumar
Gandhi market in Trichy, Tamil Nadu where sesame and dals are bought from farmers and sold to dealers
PHOTO • M. Palani Kumar

ತಮಿಳುನಾಡಿನ ತಿರುಚ್ಚಿಯಲ್ಲಿರುವ ಗಾಂಧಿ ಮಾರುಕಟ್ಟೆಯಲ್ಲಿ ರೈತರಿಂದ ಎಳ್ಳು ಮತ್ತು ಬೇಳೆಗಳನ್ನು ಖರೀದಿಸಿ ವಿತರಕರಿಗೆ ಮಾರಾಟ ಮಾಡಲಾಗುತ್ತದೆ

ತಿರುಚ್ಚಿಯ ಜನನಿಬಿಡ ಗಾಂಧಿ ಮಾರುಕಟ್ಟೆಯಲ್ಲಿ, ಎಳ್ಳಿನ ಅಂಗಡಿಗಳು ಚಟುವಟಿಕೆಯಿಂದ ಗಿಜಿಗುಡುತ್ತಿರುತ್ತವೆ. ಅಲ್ಲಿ ರೈತರು ಉದ್ದು, ಹೆಸರು ಕಾಳು ಮತ್ತು ಎಳ್ಳಿನ ಚೀಲಗಳ ಮೇಲೆ ಹೊರಗೆ ಕುಳಿತುಕೊಂಡಿದ್ದರು. ವ್ಯಾಪಾರಿಗಳು ತಮ್ಮ ಅಜ್ಜಂದಿರಿಗೆ ಸೇರಿದ ಅಂಗಡಿಗಳ ಒಳಗೆ ಕುಳಿತಿದ್ದಾರೆ. 45 ವರ್ಷದ ಪಿ.ಸರವಣನ್, ನಾವು ಭೇಟಿ ನೀಡಿದ್ದ ದಿನಗಳು ಉದ್ದಿನ ಆವಕ ಹೆಚ್ಚಿರುವ ದಿನಗಳು ಎಂದು ತಿಳಿಸಿದರು. ಅಲ್ಲಿದ್ದ ಮಹಿಳಾ ಮತ್ತು ಪುರುಷ ಕಾರ್ಮಿಕರು ಧಾನ್ಯಗಳನ್ನು ಜರಡಿ ಹಿಡಿದು ಪ್ಯಾಕ್‌ ಮಾಡುತ್ತಿದ್ದರು. “ಸ್ಥಳೀಯವಾಗಿ ಎಳ್ಳಿನ ಕೊಯ್ಲು ಈಗಷ್ಟೇ ಆರಂಭಗೊಂಡಿವೆ. ಇನ್ನು ಸ್ವಲ್ಪ ದಿನಗಳಲ್ಲೇ ಚೀಲಗಳು ಮಾರುಕಟ್ಟೆಗೆ ಬರಲಿವೆ” ಎಂದು ಅವರು ಮಾಹಿತಿ ನೀಡಿದರು.

ಆದರೆ ಈಗ ಕೊಯ್ಲಿನ ಸಮಯದಲ್ಲೂ ತಮ್ಮ ತಂದೆಯ ಕಾಲದಲ್ಲಿ ನೋಡುತ್ತಿದ್ದ ಫಸಲಿನ ಕಾಲು ಭಾಗದಷ್ಟು ಎಳ್ಳು ಸಹ ಮಾರುಕಟ್ಟೆಗೆ ಬರುತ್ತಿಲ್ಲ ಎನ್ನುತ್ತಾರೆ 55 ವರ್ಷದ ಎಸ್‌ ಚಂದ್ರಶೇಖರನ್.‌ “ಜೂನ್‌ ತಿಂಗಳಿನಲ್ಲಿ ಮೊದಲು ದಿನಕ್ಕೆ 2,000 ಮೂಟೆಗಳಷ್ಟು ಎಳ್ಳು ಗಾಂಧಿ ಮಾರುಕಟ್ಟೆಗೆ ಬರುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ಕೇವಲ 500 ಮೂಟೆಗಳಷ್ಟೇ ಬರುತ್ತಿವೆ. ರೈತರು ಎಳ್ಳು ಬೆಳೆಯುವುದನ್ನು ನಿಲ್ಲಿಸುತ್ತಿದ್ದಾರೆ. ಇದಕ್ಕೆ [ಬೆಳೆಗೆ] ಬಹಳಷ್ಟು ಕೆಲಸ ಬೇಕಾಗುತ್ತದೆ. ಆದರೆ ಬೆಲೆ ಹೆಚ್ಚುತ್ತಿಲ್ಲ – ಕೇಜಿಗೆ 100ರಿಂದ 130 ರೂಪಾಯಿಗಳ ನಡುವಿನಲ್ಲೇ ಇದೆ. ಹೀಗಾಗಿ ಅವರು ಎಳ್ಳಿನ ಬದಲು ಉದ್ದನ್ನು ಬೆಳೆಯುತ್ತಿದ್ದಾರೆ. ಇದನ್ನು ಯಾಂತ್ರಿಕವಾಗಿ ಕೊಯ್ಲು ಮಾಡಬಹುದು ಹಾಗೂ ಅದೇ ದಿನ ಚೀಲಕ್ಕೆ ತುಂಬಿಸಿಡಬಹುದು.”

ಆದರೆ ಎಣ್ಣೆಯ ಬೆಲೆ ಏರುತ್ತಿದೆ, ಆದರೆ ರೈತರಿಗೇಕೆ ಉತ್ತಮ ಬೆಲೆ ಸಿಗುತ್ತಿಲ್ಲ? ಎಂದು ನಾನು ಅವರನ್ನು ಕೇಳಿದೆ. “ಅದು ಮಾರುಕಟ್ಟೆಯನ್ನು ಅವಲಂಬಿಸಿರುತ್ತದೆ. ಪೂರೈಕೆ ಮತ್ತು ಬೇಡಿಕೆ ಇತರ ರಾಜ್ಯಗಳಲ್ಲಿನ ಉತ್ಪಾದನೆ, ದೊಡ್ಡ ತೈಲ ಗಿರಣಿ ಮಾಲೀಕರು ಸಂಗ್ರಹಿಸುವ ದಾಸ್ತಾನು." ಇವೆಲ್ಲವೂ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ ಎನ್ನುತ್ತಾರೆ ಚಂದ್ರಶೇಖರನ್.‌

ಇದು ಪ್ರತಿಯೊಂದು ಬೆಳೆ ಮತ್ತು ಸರಕಿನ ಕತೆ. ಮಾರುಕಟ್ಟೆ ಕೆಲವರ ಪಾಲಿಗೆ ಕರುಣಾಮಯಿಯಾಗಿದ್ದರೆ ಇನ್ನೂ ಕೆಲವರ ಪಾಲಿಗೆ ಕ್ರೂರಿಯಾಗಿರುತ್ತದೆ. ಅದು ಯಾವಾಗಲೂ ಯಾರ ಪರವಿರುತ್ತದೆಯೆನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ..

*****

ಖಾದ್ಯ ತೈಲ ಉದ್ಯಮವು ಬೆಳೆಗಳು ಮತ್ತು ಸಾಂಸ್ಕೃತಿಕ ಅಭ್ಯಾಸಗಳ ಆಮದು ಮತ್ತು ಸ್ಥಳಾಂತರಗಳ ದೀರ್ಘ ಮತ್ತು ಸಂಕೀರ್ಣ ಇತಿಹಾಸವನ್ನು ಹೊಂದಿದೆ. ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಮಾಜಶಾಸ್ತ್ರ ಮತ್ತು ನೀತಿ ಅಧ್ಯಯನಗಳ ಸಹಾಯಕ ಪ್ರಾಧ್ಯಾಪಕ ಡಾ.ರಿಚಾ ಕುಮಾರ್ ಅವರು ಒಂದು ಪ್ರಬಂಧದಲ್ಲಿ ವಿವರಿಸಿದಂತೆ: "1976ರ ಹೊತ್ತಿಗೆ, ಭಾರತವು ತನ್ನ ಖಾದ್ಯ ತೈಲ ಅಗತ್ಯಗಳಲ್ಲಿ ಸುಮಾರು 30 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತಿತ್ತು." ಸ್ವಾವಲಂಬನೆಯಿಂದ ತೀವ್ರ ಸಂಕಟದವರೆಗೆ ಎಂಬ ಶೀರ್ಷಿಕೆಯ ಲೇಖನವು ಹೀಗೆ ಹೇಳುತ್ತದೆ;  ಸರ್ಕಾರವು ಹಾಲು ಉತ್ಪಾದನೆಯನ್ನು ಹೆಚ್ಚಿಸಿದ ಡೈರಿ ಸಹಕಾರಿ ಸಂಘಗಳ ಯಶಸ್ಸಿನ ಸೂತ್ರವನ್ನು ಇದಕ್ಕೂ ಅನ್ವಯಿಸಲು ಹೊರಟಿದೆ.

Freshly pressed sesame oil (left). Various cold pressed oils (right) at the store in Srirangam
PHOTO • M. Palani Kumar
Freshly pressed sesame oil (left). Various cold pressed oils (right) at the store in Srirangam.
PHOTO • M. Palani Kumar

ಆಗಷ್ಟೇ ತಯಾರಿಸಿದ ಎಳ್ಳೆಣ್ಣೆ (ಎಡ). ಅಂಗಡಿಯೊಂದರಲ್ಲಿ ಪ್ರದರ್ಶನಕ್ಕೆ ಇರಿಸಲಾಗಿರುವ ಗಾಣದ ಮೂಲಕ ಅರೆದು ತೆಗೆಯಲಾದ ಹಲವು ಬಗೆಯ ಎಣ್ಣೆಗಳು

ಆದರೆ, "ಹಳದಿ ಕ್ರಾಂತಿಯ ಹೊರತಾಗಿಯೂ, 1990ರ ದಶಕದ ಮಧ್ಯಭಾಗದಲ್ಲಿ ಭಾರತವು ಖಾದ್ಯ ತೈಲದ ಕೊರತೆಯನ್ನು ಎದುರಿಸಿತು, ಏಕೆಂದರೆ ಎಣ್ಣೆಕಾಳುಗಳು-ಏಕದಳ ಧಾನ್ಯಗಳು-ದ್ವಿದಳ ಧಾನ್ಯಗಳ ಮಿಶ್ರ ಬೆಳೆಯ ಬದಲು ಗೋಧಿ, ಅಕ್ಕಿ ಮತ್ತು ಕಬ್ಬಿನಂತಹ ಬೆಳೆಗಳನ್ನು ಬೆಳೆಯಲಾರಂಭಿಸಲಾಯಿತು. ಇದಲ್ಲದೆ, 1994ರ ಖಾದ್ಯ ತೈಲ ಆಮದಿನ ಉದಾರೀಕರಣವು ದೇಶೀಯ ಮಾರುಕಟ್ಟೆಯಲ್ಲಿ ಇಂಡೋನೇಷ್ಯಾದ ಅಗ್ಗದ ತಾಳೆ ಎಣ್ಣೆ ಮತ್ತು ಅರ್ಜೆಂಟೀನಾದ ಸೋಯಾಬೀನ್ ಎಣ್ಣೆಯ ಹೊಳೆಯನ್ನೇ ಹರಿಸಿತು.” ಎನ್ನುತ್ತಾರೆ ಕುಮಾರ್.

"ತಾಳೆ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆ ಇತರ ಖಾದ್ಯ ತೈಲಗಳಿಗೆ ಅಗ್ಗದ ಬದಲಿಗಳಾದವು, ವಿಶೇಷವಾಗಿ ವನಸ್ಪತಿ (ಸಂಸ್ಕರಿಸಿದ, ತರಕಾರಿ ಕೊಬ್ಬು) ದುಬಾರಿ ತುಪ್ಪದ ಸ್ಥಾನವನ್ನು ಇವು ಆವರಿಸಿಕೊಂಡವು. ಒಟ್ಟಾಗಿ, ಸಾಸಿವೆ, ಎಳ್ಳು, ಎಣ್ಣೆಕಾಳು, ತೆಂಗು ಮತ್ತು ನೆಲಗಡಲೆ ಸೇರಿದಂತೆ ಭಾರತದಾದ್ಯಂತದ ಹೊಲಗಳು ಮತ್ತು ಊಟದ ತಟ್ಟೆಗಳಿಂದ ಸಾಂಪ್ರದಾಯಿಕ ಮತ್ತು ಪ್ರಾದೇಶಿಕ ಎಣ್ಣೆ ಬೀಜಗಳು ಮತ್ತು ಎಣ್ಣೆಗಳನ್ನು ಇಲ್ಲವಾಗಿಸಿದವು, ಇವುಗಳನ್ನು ಬೆಳೆಯುವುದು ರೈತರಿಗೂ ಲಾಭದಾಯಕವಾಗಿರಲಿಲ್ಲ" ಎಂದು ಕುಮಾರ್ ಬರೆಯುತ್ತಾರೆ.

ಪ್ರಸ್ತುತ ಭಾರತದಲ್ಲಿ ಅಡುಗೆ ಎಣ್ಣೆಗೆ ರಫ್ತಿನಲ್ಲಿ ಪೆಟ್ರೋಲಿಯಮ್‌ ಮತ್ತು ಚಿನ್ನದ ನಂತರದ ಸ್ಥಾನವಿದೆ. ಇದು ಕೃಷಿ ಆಮದಿನ ಮೊತ್ತದಲ್ಲಿ ಶೇಕಡಾ 40ರಷ್ಟು ಮತ್ತು ಒಟ್ಟು ಆಮದು ಮೊತ್ತದ ಶೇಕಡಾ 3ರಷ್ಟು ಪಾಲನ್ನು ಹೊಂದಿದೆ ಎನ್ನುತ್ತದೆ ಪುಶ್ಶಿಂಗ್‌ ಫಾರ್‌ ಸೆಲ್ಫ್‌ ಸಫಿಷಿಯೆನ್ಸಿ ಇನ್‌ ಎಡಿಬಲ್‌ ಆಯಿಲ್‌ ಇನ್‌ ಇಂಡಿಯಾ ಎನ್ನುವ ವರದಿ. ದೇಶದ ಒಟ್ಟು ಗೃಹ ಬಳಕೆ ಎಣ್ಣೆಯ ಶೇಕಡಾ 60ರಷ್ಟು ಅಗತ್ಯವನ್ನು ರಫ್ತಿನಿಂದ ಪೂರೈಸಲಾಗುತ್ತಿದೆ ಎನ್ನುತ್ತದೆ ಇದೇ ವರದಿ.

*****

ವಡಿವೇಲನ್ ಕುಟುಂಬದ ಶೇಕಡಾ 60ರಷ್ಟು ಖರ್ಚುಗಳನ್ನು ಅವರ ಟ್ಯಾಕ್ಸಿ ಭರಿಸುತ್ತದೆ. ಅವರಿರುವ ಹಳ್ಳಿಗಿಂತ ಸ್ವಲ್ಪ ಮುಂದೆ ಎರಡು ಭಾಗಗಳಾಗಿ ವಿಭಜಿಸಲ್ಪಟ್ಟ ಕಾವೇರಿಯಂತೆ, ವಡಿವೇಲನ್ ಅವರ ಸಮಯ ಮತ್ತು ಜೀವನವನ್ನು ಕೃಷಿ ಮತ್ತು ಡ್ರೈವಿಂಗ್ ನಡುವೆ ವಿಭಜನೆಗೊಂಡಿದೆ. ಇವೆರಡರ ನಡುವೆ ಕೃಷಿ ಬಹಳ ಕಷ್ಟದ್ದು ಎನ್ನುವುದು ಅವರ ಅಭಿಪ್ರಾಯ. “ಇದು ಹೆಚ್ಚು ಗಮನ ಬೇಡುವ ಮತ್ತು ಅನಿಶ್ಚಿತತೆಯಿಂದ ಕೂಡಿದ ಉದ್ಯೋಗ.”

ವಡಿವೇಲನ್‌ ಅವರಿಗೆ ಹಗಲಿನಲ್ಲಿ ಕೆಲಸವಿರುವ ಕಾರಣ (ಜೊತೆಗೆ ದೀರ್ಘಕಾಲ ಗಾಡಿ ಓಡಿಸುತ್ತಾರೆ) ಅವರ ಪತ್ನಿ ಹೊಲಕ್ಕೆ ಹೋಗುತ್ತಾರೆ. ಇದರ ಜೊತೆಗೆ ಮನೆಗೆಲಸವೂ ಅವರದ್ದೇ. ಒಮ್ಮೊಮ್ಮೆ ವಡಿವೇಲ್‌ ಕೂಡಾ ಹೆಂಡತಿಯ ಕೆಲಸದಲ್ಲಿ ಕೈಜೋಡಿಸುತ್ತಾರೆ. ರಾತ್ರಿ ಹೊತ್ತು ಹೊಲಗಳಿಗೆ ನೀರುಣಿಸುವುದು, ಕೊಯ್ಲು ಯಂತ್ರಕ್ಕಾಗಿ ಅಲೆಯುವುದು, ಕೊಯ್ಲಿನ ಹಂಗಾಮಿನಲ್ಲಿ ಎಲ್ಲರಿಗೂ ಅದರ ಅಗತ್ಯವಿರುತ್ತದೆಯಾದ್ದರಿಂದ ಆ ಸಮಯದಲ್ಲಿ ಯಂತ್ರವನ್ನು ಹೊಂದಿಸಲು ಬಹಳಷ್ಟು ಓಡಾಡಬೇಕಾಗುತ್ತದೆ. ಮೊದಲು ಅವರು ಹೊಲದಲ್ಲಿ ಶ್ರಮದಾಯಕ ಕೆಲಸಗಳನ್ನು ಮಾಡುತ್ತಿದ್ದರು. “ಆದರೆ ಈಗೀಗ ಸನಿಕೆಯನ್ನು ಹಿಡಿದು ಕೆಲಸ ಮಾಡಿದರೆ ಬೆನ್ನು ಹಿಡಿದುಕೊಂಡು ಕಾರು ಓಡಿಸಲಾಗುವುದಿಲ್ಲ!”

Women workers winnow (left) the freshly harvested black gram after which they clean and sort (right)
PHOTO • M. Palani Kumar
Women workers winnow (left) the freshly harvested black gram after which they clean and sort (right)
PHOTO • M. Palani Kumar

ಮಹಿಳಾ ಕಾರ್ಮಿಕರು ಕೊಯ್ಲು ಮಾಡಿದ ಉದ್ದನ್ನು ಮೊರದಲ್ಲಿ ಕೇರುತ್ತಿರುವುದು. ನಂತರ ಅವರು ಅದನ್ನು ಸ್ವಚ್ಛಗೊಳಿಸಿ ವಿಂಗಡಿಸುತ್ತಾರೆ (ಬಲ)

ಹೀಗಾಗಿ ದಂಪತಿಗಳು ಕೆಲಸಕ್ಕೆ ಆಳುಗಳನ್ನು ಕರೆದುಕೊಂಡು ಬರುತ್ತಾರೆ. ಕೆಲಸಗಾರರು ಸಿಗದ ಸಮಯದಲ್ಲಿ ಕಳೆ ತೆಗಯಲು, ನಾಟಿ ಮಾಡಲು ಮತ್ತು ಎಳ್ಳು ಒಕ್ಕಣೆ ಮಾಡಲು ಹಿರಿಯ ಮಹಿಳೆಯರನ್ನು ನೇಮಿಸಿಕೊಳ್ಳುತ್ತಾರೆ.

ಉದ್ದಿನ ಬೆಳೆ ಕೂಡಾ ಕಷ್ಟ ಕೊಡುವ ಬೆಳೆ. “ಕೊಯ್ಲಿಗೆ ಸ್ವಲ್ಪ ದಿನ ಮೊದಲು ನಂತರ ಮಳೆಯಾಯಿತು. ಉದ್ದನ್ನು ಒಣಗಿಸಿಡುವುದಕ್ಕೆ ನನಗೆ ಬಹಳ ಕಷ್ಟವಾಯಿತು.” ಅವರು ತಮ್ಮ ಕಷ್ಟವನ್ನು ವಿವರಿಸುವಾಗ ಅದನ್ನು ಎದುರಿಸಲು ವಿಶೇಷ ಶಕ್ತಿಯೇ ಬೇಕು ಎನ್ನಿಸಿತು. ಇದು ನಾನು ತಿನ್ನುವ ಇಡ್ಲಿ ಮತ್ತು ದೋಸೆಯಲ್ಲಿನ ಉಳುಂದು (ಉದ್ದು) ಬೇಳೆಯನ್ನು ಇನ್ನಷ್ಟು ಗೌರವಿಸುವಂತೆ ಮಾಡಿತು.

“ನಾನು ಇಪ್ಪತ್ತು ವರ್ಷದವನಿದ್ದಾಗ 14 ಚಕ್ರದ ಲಾರಿ ಓಡಿಸುತ್ತಿದ್ದೆ. ನಾವು ಇಬ್ಬರು ಚಾಲಕರಿದ್ದೆವು. ನಾವು ಸರದಿಯಂತೆ ಲಾರಿಯನ್ನು ಉತ್ತರ ಪ್ರದೇಶ, ದೆಹಲಿ, ಕಾಶ್ಮೀರ, ರಾಜಸ್ಥಾನ, ಗುಜರಾತ್ ಹೀಗೆ ಭಾರತದ ಉದ್ದಗಲಕ್ಕೆ ಓಡಿಸುತ್ತಿದ್ದೆವು.” ಅವರು ದಾರಿಯಲ್ಲಿ ಏನೆಲ್ಲ ತಿನ್ನುತ್ತಿದ್ದೆವು ಎನ್ನುವುದನ್ನು (ಒಂಟೆ ಹಾಲಿನ ಚಹಾ, ರೋಟಿ ಮತ್ತು ದಾಲ್‌, ಎಗ್‌ ಬುರ್ಜಿ), ಎಲ್ಲಿ ಸ್ನಾನ ಮಾಡುತ್ತಿದ್ದೆವು ಎನ್ನುವುದನ್ನು (ನದಿಗಳಲ್ಲಿ, ಕೆಲವೊಮ್ಮೆ ಶ್ರೀನಗರಂದತಹ ಶೀತಲ ನಗರಗಳಲ್ಲಿ ಅವರು ಸ್ನಾನ ಮಾಡಲು ಇಷ್ಟಪಡುತ್ತಿರಲಿಲ್ಲ) ದಾರಿಯುದ್ದಕ್ಕೂ ಯಾವ ಹಾಡುಗಳನ್ನು ಕೇಳಿದೆವು (“ಇಳಯರಾಜ ಸಂಗೀತ ನೀಡಿರುವ ಹಾಡುಗಳ ಜೊತೆಗೆ ಎಚ್ಚರವಾಗಿರಲು ಕುತ್ತು ಪಾಟ್ಟು ಕೂಡಾ ಕೇಳುತ್ತಿದ್ದೆವು) ಎಂದು ವಿವರಿಸಿದರು. ಅವರು ಸ್ನೇಹ, ಗಾಸಿಪ್‌ ಮತ್ತು ದೆವ್ವಗಳ ಕುರಿತು ಪ್ರೀತಿಯಿಂದ ಮಾತನಾಡುತ್ತಾರೆ. “ಒಂದು ದಿನ ಚೂರು ಮೈಕೈ ಸಡಿಲ ಮಾಡಿಕೊಳ್ಳಲೆಂದು ತಲೆಯ ಮೇಲೆ ಕಂಬಳಿ ಹೊದ್ದು ಲಾರಿಯಿಂದ ಕೆಳಗಿಳಿದು ಅಲ್ಲೇ ನಡೆದಾಡಿದ್ದೆ. ಮರುದಿನ ಅಲ್ಲಿದ್ದ ಹುಡುಗರು ನಾವು ರಾತ್ರಿ ಮುಸುಕು ಹಾಕಿಕೊಂಡಿದ್ದ ದೆವ್ವ ನೋಡಿದೆವು ಎಂದರು!” ಎನ್ನುತ್ತಾ ಅವರು ನಗುತ್ತಾರೆ.

ಮದುವೆಯ ನಂತರ ಮನೆಯಿಂದ ದೂರವಿರಬೇಕಾಗುತ್ತದೆ ಎನ್ನುವ ಕಾರಣಕ್ಕೆ ಅವರು ಲಾರಿ ಓಡಿಸುವುದನ್ನು ನಿಲ್ಲಿಸಿದರು. ಅವರು ಸ್ಥಳೀಯವಾಗಿ ಗಾಡಿ ಓಡಿಸಲು ಆರಂಭಿಸಿದರು. ಜೊತೆಗೆ ಕೃಷಿಯನ್ನೂ ಮಾಡುತ್ತಿದ್ದರು. ವಡಿವೇಲನ್ ಮತ್ತು ಪ್ರಿಯಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ - 10ನೇ ತರಗತಿಯಲ್ಲಿ ಓದುತ್ತಿರುವ ಮಗಳು ಮತ್ತು ಏಳನೇ ತರಗತಿಯಲ್ಲಿ ಓದುತ್ತಿರುವ ಮಗ. "ನಾವು ಅವರಿಗೆ ಎಲ್ಲವನ್ನೂ ನೀಡಲು ಪ್ರಯತ್ನಿಸುತ್ತಿದ್ದೇವೆ, ಆದರೆ ಬಹುಶಃ ಚಿಕ್ಕ ಹುಡುಗನಾಗಿದ್ದಾಗ ನಾನು ಅವರಿಗಿಂತಲೂ ಸಂತೋಷವಾಗಿದ್ದೆ" ಎಂದು ಅವರು ಗಂಭೀರವಾಗಿ ಹೇಳುತ್ತಾರೆ.

Vadivelan’s time is divided between farming and driving. Seen here (left)with his wife Priya in the shade of a nearby grove and with their children (right)
PHOTO • M. Palani Kumar
Vadivelan’s time is divided between farming and driving. Seen here (left)with his wife Priya in the shade of a nearby grove and with their children (right)
PHOTO • Aparna Karthikeyan

ವಡಿವೇಲನ್‌ ಕೃಷಿ ಮತ್ತು ಡ್ರೈವಿಂಗ್‌ ನಡುವೆ ತಮ್ಮ ದಿನಚರಿಯನ್ನು ಹೊಂದಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ (ಎಡಕ್ಕೆ) ಅವರ ಪತ್ನಿ ಪ್ರಿಯಾ ಮತ್ತು ಅವರ ಮಕ್ಕಳೊಂದಿಗೆ (ಬಲ) ಹತ್ತಿರದ ತೋಪಿನ ನೆರಳಿನಲ್ಲಿ

ಅವರ ಬಾಲ್ಯದ ಕತೆಗಳೂ ಅಷ್ಟೇನೂ ಸುಂದರವಾಗಿಲ್ಲ. “ಹಾಗೆ ನೋಡಿದರೆ ನಮ್ಮನ್ನೆಲ್ಲ ಯಾರೂ ನೋಡಿಕೊಂಡಿಲ್ಲ. ನಾವೇ ಹೇಗೋ ಬೆಳೆದೆವು” ಎಂದು ನನ್ನತ್ತ ನೋಡಿ ನಕ್ಕರು. ಅವರು ಮೊದಲ ಬಾರಿ ಚಪ್ಪಲಿ ತೊಟ್ಟಿದ್ದು ಒಂಬತ್ತನೇ ತರಗತಿಗೆ ಹೋಗುವಾಗ. ಅದುವರೆಗೂ ಅವರು ಬರಿಗಾಲಿನಲ್ಲೇ ಅಜ್ಜಿ ಬೆಳೆಯುತ್ತಿದ್ದ ಸೊಪ್ಪಿನ ಕಟ್ಟುಗಳನ್ನು 50 ಪೈಸೆಗೆ ಒಂದು ಕಟ್ಟಿನಂತೆ ಮಾರಲು ಹೋಗುತ್ತಿದ್ದರು. “ಆಗ ಜನರು ಅದಕ್ಕೂ ಚೌಕಾಶಿ ಮಾಡುತ್ತಿದ್ದರು!” ಎಂದು ಅವರು ನಿಟ್ಟುಸಿರಿಡುತ್ತಾರೆ. ಶಾಲೆಯಲ್ಲಿ ಕೊಟ್ಟ ಅಂಗಿ ಚೆಡ್ಡಿ ಧರಿಸಿ ಸೈಕಲ್ಲಿನಲ್ಲಿ ಓಡಾಡುತ್ತಿದ್ದರು. “ಅದು ಮೂರು ತಿಂಗಳು ಬರುತ್ತಿತ್ತು. ಮನೆಯಲ್ಲಿ ವರ್ಷಕ್ಕೆ ಒಂದು ಜತೆ ಬಟ್ಟೆಯನ್ನಷ್ಟೇ ಕೊಡಿಸುತ್ತಿದ್ದರು.”

ವಡಿವೇಲನ್‌ ಕಷ್ಟದ ದಿನಗಳನ್ನು ದಿಟ್ಟರಾಗಿ ಎದುರಿಸಿದರು. ಅವರು ಅಥ್ಲೀಟ್‌ ಆಗಿದ್ದರು. ಹಲವು ಸ್ಪರ್ಧೆಗಳಲ್ಲಿ ಪದಕವನ್ನೂ ಗೆದ್ದಿದ್ದಾರೆ. ಅವರು ಕಬ್ಬಡ್ಡಿ ಆಡುತ್ತಿದ್ದರು, ನದಿಯಲ್ಲಿ ಈಜುತ್ತಿದ್ದರು. ಸ್ನೇಹಿತರೊಂದಿಗೆ ಸುತ್ತಾಡುತ್ತಿದ್ದರು. ರಾತ್ರಿ ಮಲಗುವಾಗ ಅವರ ಅಪ್ಪಾಯಿ (ಅಪ್ಪನ ಅಮ್ಮ) ಹೇಳುವ ಕತೆಗಳನ್ನು ಕೇಳುತ್ತಾ ಮಲಗುತ್ತಿದ್ದರು. “ನಾನು ಕತೆ ಅರ್ಧ ಮುಗಿಯುವಷ್ಟರಲ್ಲಿ ಮಲಗಿಬಿಟ್ಟಿರುತ್ತಿದ್ದೆ. ಮರುದಿನ ರಾತ್ರಿ ಅಜ್ಜಿ ಅಲ್ಲಿಂದಲೇ ಕತೆ ಆರಂಭಿಸುತ್ತಿದ್ದರು. ಅವರಿಗೆ ರಾಜ, ರಾಣಿ ಮತ್ತು ದೇವರು ಹೀಗೆ ಹಲವು ಕತೆಗಳು ಗೊತ್ತಿದ್ದವು…”

ಆದರೆ ವಡಿವೇಲನ್ ಅವರ ಕುಟುಂಬಕ್ಕೆ ಉಡುಪುಗಳು ಮತ್ತು ಆಹಾರವನ್ನು ಭರಿಸಲು ಸಾಧ್ಯವಾಗದ ಕಾರಣ ಅವರು ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಮನೆಯಲ್ಲಿ ಆಹಾರವೆಂದರೆ ಗಂಜಿ, ಅನ್ನ ಮತ್ತು ಸಾರು ಮತ್ತು ಕೆಲವೊಮ್ಮೆ ಮಾಂಸ. ಶಾಲೆಯಲ್ಲಿ, ಮಧ್ಯಾಹ್ನದ ಊಟಕ್ಕೆ ಉಪ್ಪಿನಕಾಯಿ ಸಿಗುತ್ತಿತ್ತು. ಮತ್ತು ಸಂಜೆ ಗಂಜಿ ಮತ್ತು ಉಪ್ಪನ್ನು 'ತಿಂಡಿ' ಎಂದು ಕುಡಿಯುತ್ತಿದ್ದಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಈ ಪದವನ್ನು ಅವರು ಉದ್ದೇಶಪೂರ್ವಕವಾಗಿ ಬಳಸುತ್ತಾನೆ. ಈಗ ಅವರು ತಮ್ಮ ಮಕ್ಕಳಿಗೆ ಅಂಗಡಿಯಿಂದ ತಂದ ತಿಂಡಿಯನ್ನು ನೀಡುತ್ತಾರೆ.

ಅವರು ತನ್ನ ಮಕ್ಕಳು ತಾನು ಕಂಡ ಕಷ್ಟವನ್ನು ಕಾಣದಿರುವಂತೆಯೂ ನೋಡಿಕೊಳ್ಳುತ್ತಿದ್ದಾರೆ. ಎರಡನೇ ಬಾರಿ ನಾನು ಕೊಲ್ಲಿಡಂ ದಡದಲ್ಲಿರುವ ಅವರ ಪಟ್ಟಣಕ್ಕೆ ಭೇಟಿ ನೀಡಿದಾಗ, ಅವರ ಪತ್ನಿ ಮತ್ತು ಮಗಳು ದಡದಲ್ಲಿ ಮರಳನ್ನು ಅಗೆದಾಗ ಆರಿಂಚು ಆಳದಲ್ಲಿ ನೀರು ಬಂದಿತ್ತು. "ಈ ನದಿಯಲ್ಲಿ ಶುದ್ಧ ನೀರು ಇದೆ" ಎಂದು ಪ್ರಿಯಾ ಹೇಳುತ್ತಾರೆ. ಅವರು ದಿಬ್ಬವನ್ನು ಮಾಡಿದರು, ಅದರಲ್ಲಿ ಹೇರ್‌ ಪಿನ್‌ ಇಟ್ಟು ಮಗಳ ಬಳಿ ಹುಡುಕುವಂತೆ ಹೇಳುತ್ತಾರೆ. ವಡಿವೇಲನ್ ಮತ್ತು ಅವರ ಮಗ ಆಳವಿಲ್ಲದ ನೀರಿನಲ್ಲಿ ಸ್ನಾನ ಮಾಡುತ್ತಾರೆ. ನಾನು ನೋಡಬಹುದಾದ ಮಟ್ಟಿಗೆ ಸುತ್ತಲೂ ನಾವು ಮಾತ್ರ ಇದ್ದೆವು. ಮರಳಿನಲ್ಲಿ ಹಸುಗಳು ಮನೆಗೆ ಹೋದ ಹೆಜ್ಜೆಗುರುತುಗಳಿದ್ದವು. ವಿಶಾಲವಾದ, ತೆರೆದ ಸ್ಥಳಗಳು ಮಾತ್ರ ಇರಬಹುದಾದ ರೀತಿಯಲ್ಲಿ ಇದು ಸುಂದರವಾಗಿದೆ. "ನಿಮ್ಮ ನಗರದಲ್ಲಿ ನೀವು ಇದನ್ನು ನೋಡಲು ಸಾಧ್ಯವಿಲ್ಲ" ಎಂದು ವಡಿವೇಲನ್ ಮನೆಗೆ ಹಿಂದಿರುಗುವ ದಾರಿಯಲ್ಲಿ ಹೇಳುತ್ತಾರೆ.

*****

ಮುಂದಿನ ಸಲ ಅದೇ ನದಿಯ ದಡಕ್ಕೆ ಹೋದಾಗ ನನಗೆ ನಗರಕ್ಕೆ ಬಂಧಿರುವಂತೆ ಅನ್ನಿಸಿತು. ಅದು ಆಗಸ್ಟ್‌ 2023, ಒಂದು ವರ್ಷದ ನಂತರ ಆಡಿ ಪೆರುಕ್ಕು ಹಬ್ಬಕ್ಕಾಗಿ ನಾನು ಅಲ್ಲಿಗೆ ಮತ್ತೆ ಹೋಗಿದ್ದೆ. ಅದೊಂದು ಸಂಸ್ಕೃತಿ ಮತ್ತು ಇತಿಹಾಸ ಭೇಟಿಯಾಗುವ ಹಬ್ಬ.

Vadivelan at a nearby dam on the Cauvery (left) and Priya at the Kollidam river bank (right)
PHOTO • Aparna Karthikeyan
Vadivelan at a nearby dam on the Cauvery (left) and Priya at the Kollidam river bank (right)
PHOTO • Aparna Karthikeyan

ಕಾವೇರಿ ನದಿಯ ಹತ್ತಿರದ ಅಣೆಕಟ್ಟಿನಲ್ಲಿ ವಡಿವೇಲನ್ (ಎಡ) ಮತ್ತು ಕೊಲ್ಲಿಡಂ ನದಿಯ ದಡದಲ್ಲಿ (ಬಲ) ಪ್ರಿಯಾ

The crowd at Amma Mandapam (left), a ghat on the Cauvery on the occasion of Aadi Perukku where the river (right) is worshipped with flowers, fruits, coconut, incense and camphor.
PHOTO • Aparna Karthikeyan
The crowd at Amma Mandapam (left), a ghat on the Cauvery on the occasion of Aadi Perukku where the river (right) is worshipped with flowers, fruits, coconut, incense and camphor.
PHOTO • Aparna Karthikeyan

ಆಡಿ ಪೆರುಕ್ಕು ಸಂದರ್ಭದಲ್ಲಿ ಕಾವೇರಿ ನದಿಯ ಘಾಟ್ ಅಮ್ಮಾ ಮಂಟಪದಲ್ಲಿ (ಎಡಕ್ಕೆ) ಜನಸಂದಣಿ, ಅಲ್ಲಿ ನದಿಗೆ (ಬಲಕ್ಕೆ) ಹೂವುಗಳು, ಹಣ್ಣುಗಳು, ತೆಂಗಿನಕಾಯಿ, ಧೂಪದ್ರವ್ಯ ಮತ್ತು ಕರ್ಪೂರ ಅರ್ಪಿಸಿ ಪೂಜಿಸಲಾಗುತ್ತದೆ

ಶ್ರೀರಂಗಂನ ಓಣಿಯೊಂದರಲ್ಲಿ ಕಾರು ನಿಲ್ಲಿಸುತ್ತಾ “ಇಂದು ಬಹಳಷ್ಟು ಜನಸಂದಣಿಯಿರುತ್ತದೆ” ಎಂದು ವಡಿವೇಲನ್ ಎಚ್ಚರಿಸಿದರು. ನಾವು ಕಾವೇರಿ ನದಿಯ ಘಾಟಿನಲ್ಲಿರು ಅಮ್ಮಾ ಮಂಟಪಕ್ಕೆ ನಡೆದುಕೊಂಡು ಹೋದೆವು, ಅಲ್ಲಿ ಯಾತ್ರಾರ್ಥಿಗಳು ಸೇರಿದ್ದರು. ಆಗ ಬೆಳಗಿನ 8: 30ರ ಸಮಯ. ಆಗಲೇ ಜನರು ನೆರೆದಿದ್ದರು. ಮೆಟ್ಟಿಲುಗಳ ಮೇಲೆ ಸ್ಥಳವಿರಲಿಲ್ಲ, ಅವು ಜನರು ಮತ್ತು ಬಾಳೆ ಎಲೆಗಳಿಂದ ತುಂಬಿದ್ದವು, ನದಿಗೆ ಅರ್ಪಣೆಗಳಾಗಿ - ತೆಂಗಿನಕಾಯಿಗಳು, ಊದುಬತ್ತಿಯಿಂದ ಚುಚ್ಚಲ್ಪಟ್ಟ ಬಾಳೆಹಣ್ಣುಗಳು, ಸಣ್ಣ ಅರಿಶಿನ ಗಣೇಶ ಮೂರ್ತಿಗಳು, ಹೂವುಗಳು, ಹಣ್ಣುಗಳು ಮತ್ತು ಕರ್ಪೂರ ಇದ್ದವು. ಹಬ್ಬದ ವಾತಾವರಣವಿತ್ತು.

ನವವಿವಾಹಿತರು ಮತ್ತು ಅವರ ಕುಟುಂಬಗಳು ಪುರೋಹಿತರ ಸುತ್ತಲೂ ಒಟ್ಟುಗೂಡುತ್ತಾರೆ, ಅವರು ತಾಳಿಯ ಚಿನ್ನದ ಆಭರಣಗಳನ್ನು ಹೊಸ ದಾರಕ್ಕೆ ಬದಲಾಯಿಸಲು ಸಹಾಯ ಮಾಡುತ್ತಾರೆ. ನಂತರ ಗಂಡ ಮತ್ತು ಹೆಂಡತಿ ಪ್ರಾರ್ಥಿಸುತ್ತಾರೆ ಮತ್ತು ಎಚ್ಚರಿಕೆಯಿಂದ ಸಂರಕ್ಷಿಸಲಾದ ತಮ್ಮ ಮದುವೆಯ ದಾರವನ್ನು ನೀರಿಗೆ ಎಸೆಯುತ್ತಾರೆ. ಮಹಿಳೆಯರು ಒಬ್ಬರ ಕುತ್ತಿಗೆಗೆ ಒಬ್ಬರು ಅರಿಶಿನ ದಾರಗಳನ್ನು ಕಟ್ಟುತ್ತಾರೆ. ಅವರು ಕುಟುಂಬ ಮತ್ತು ಸ್ನೇಹಿತರಿಗೆ ಕುಂಕುಮ ಮತ್ತು ಸಿಹಿತಿಂಡಿಗಳನ್ನು ಅರ್ಪಿಸುತ್ತಾರೆ. ತಿರುಚ್ಚಿಯ ಪ್ರಸಿದ್ಧ ಗಣೇಶ ದೇವಾಲಯವಾದ ಉಚಿ ಪಿಳ್ಳೈಯಾರ್ ಕೋಯಿಲ್ ಕಾವೇರಿಗೆ ಅಡ್ಡಲಾಗಿ ಬೆಳಿಗ್ಗೆ ಬಿಸಿಲಿನಲ್ಲಿ ಹೊಳೆಯುತ್ತಿತ್ತು.

ಮತ್ತು ಸಾವಿರಾರು ವರ್ಷಗಳಿಂದ ಹೊಲಗಳು ಮತ್ತು ಕನಸುಗಳಿಗೆ ನೀರಾವರಿ ಒದಗಿಸುತ್ತಿರುವ ನದಿಯು ಪ್ರಾರ್ಥನೆ ಮತ್ತು ಆಸೆಗಳನ್ನು ಹೊತ್ತುಕೊಂಡು ವೇಗವಾಗಿ ಹರಿಯುತ್ತಿತ್ತು...

ಸೆಲ್ಫ್‌ ರಿಲಯನ್ಸ್‌ ಟು ಡೀಪನಿಂಗ್‌ ಡಿಸ್ಟ್ರೆಸ್‌ ಎನ್ನುವ ಪ್ರಬಂಧವನ್ನು ಹಂಚಿಕೊಂಡಿದ್ದಕ್ಕಾಗಿ ಡಾ. ರಿಚಾ ಕುಮಾರ್ ಅವರಿಗೆ ಅನೇಕ ಧನ್ಯವಾದಗಳು

ಈ ಸಂಶೋಧನಾ ಅಧ್ಯಯನಕ್ಕೆ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ಧನಸಹಾಯ ಕಾರ್ಯಕ್ರಮ 2020ರ ಭಾಗವಾಗಿ ಧನಸಹಾಯ ನೀಡಿರುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು

Aparna Karthikeyan

Aparna Karthikeyan is an independent journalist, author and Senior Fellow, PARI. Her non-fiction book 'Nine Rupees an Hour' documents the disappearing livelihoods of Tamil Nadu. She has written five books for children. Aparna lives in Chennai with her family and dogs.

Other stories by Aparna Karthikeyan
Photographs : M. Palani Kumar

M. Palani Kumar is Staff Photographer at People's Archive of Rural India. He is interested in documenting the lives of working-class women and marginalised people. Palani has received the Amplify grant in 2021, and Samyak Drishti and Photo South Asia Grant in 2020. He received the first Dayanita Singh-PARI Documentary Photography Award in 2022. Palani was also the cinematographer of ‘Kakoos' (Toilet), a Tamil-language documentary exposing the practice of manual scavenging in Tamil Nadu.

Other stories by M. Palani Kumar

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru