ನಾಲ್ಕು ದಿನಗಳನ್ನು ರಸ್ತೆಯಲ್ಲಿ ಕಳೆದು 750 ಕಿ.ಮೀ ದೂರವನ್ನು ಕ್ರಮಿಸಿದ ನಂತರ, ಟೆಂಪೊ ಮತ್ತು ಜೀಪ್‌ಗಳ ಕಾರವಾನ್ ರಾಜಸ್ಥಾನದ ಕೋಟಾದಲ್ಲಿನ ಗುರುದ್ವಾರದಲ್ಲಿ ಊಟಕ್ಕೆ ನಿಂತಿತು. ಡಿಸೆಂಬರ್ 24ರಂದು ಮಧ್ಯಾಹ್ನ ತಂಪಾದ ವಾತಾವರಣದಲ್ಲಿ ಪ್ರಯಾಣಿಕರಾದ ಮಹಾರಾಷ್ಟ್ರದ ರೈತರು ಮತ್ತು ಕೃಷಿ ಕಾರ್ಮಿಕರು ರಾತ್ರಿಯ ಪ್ರಯಾಣದಿಂದಾಗಿ ದಣಿದಿದ್ದಾರೆ. ಆದರೆ ಅವರು ಗುರುದ್ವಾರದಲ್ಲಿ ಸಮುದಾಯ ಅಡುಗೆ ಮನೆಯ ಆಹಾರಕ್ಕಾಗಿ ಕಾಯುತ್ತಿರುವಾಗ, ಸವಿತಾ ಗುಂಜಲ್ ಅವರ ಹಾಡು ಅವರೆಲ್ಲರ ಉತ್ಸಾಹವನ್ನು ಹೆಚ್ಚಿಸುತ್ತದೆ - ಕಾಮಗರ್ ಚ್ಯಾ ಕಷ್ಟಾನಾ  ನಟವಾಲಾ ಜಗ್ಲಾ, ಜೀವನ್ ನಾ ಕೊಯಿ ಪೊಟಲಾ, ಕಪ್ಡಾ ನಹಿ ನೇಸಯಾಲ ('ಕಾರ್ಮಿಕರ ಶ್ರಮವು ಜಗತ್ತನ್ನು ಸುಂದರಗೊಳಿಸುತ್ತದೆ, ಆದರೆ ಅವರಿಗೆ ಇಲ್ಲ ತಿನ್ನಲು ರೊಟ್ಟಿಯಿಲ್ಲ ಅಥವಾ ಧರಿಸಲು ಬಟ್ಟೆಯಿಲ್ಲ').

ಕಡು ಕೆಂಪು ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ 16 ವರ್ಷದ ಭಿಲ್ ಬುಡಕಟ್ಟು ಗಾಯಕಿ "ನಾನು ಹಾಡಲು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳುತ್ತಾರೆ. “ರೈತರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ನಾನು ಬಯಸುತ್ತೇನೆ. ನನ್ನ ಪರಿಸ್ಥಿತಿಯ ಬಗ್ಗೆ ನಾನು ಜಗತ್ತಿಗೆ ಹೇಳಲು ಬಯಸುತ್ತೇನೆ ” ಎಂದು ನಾಸಿಕ್ ಜಿಲ್ಲೆಯ ಚಂದ್ವಾಡ್ ತಾಲ್ಲೂಕಿನ ಚಾಂದವಾಡ್ ಗ್ರಾಮದ ಸವಿತಾ ಹೇಳುತ್ತಾರೆ. ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಸೇರಲು ಅವರು ಡಿಸೆಂಬರ್ 21ರಂದು ನಾಸಿಕ್ನಿಂದ ಒಂದು ಗುಂಪಿನ ರೈತರೊಂದಿಗೆ ಹೊರಟರು. ಲಕ್ಷಾಂತರ ರೈತರು ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಡುತ್ತಿದ್ದಾರೆ, ಇದನ್ನು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಯಾಗಿ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14ರಂದು ಕೃಷಿ ಮಸೂದೆಯಾಗಿ ಸಂಸತ್ತಿನಲ್ಲಿ ಪರಿಚಯಿಸಲಾಯಿತು ಮತ್ತು ಅದೇ ತಿಂಗಳ 20ರಂದು ಈ ಕಾಯ್ದೆಯನ್ನಾಗಿ ಮಾಡಲಾಗಿದೆ.

ಸವಿತಾ ತನ್ನ ಹಳ್ಳಿಯಲ್ಲಿ, ವಾರಾಂತ್ಯದಲ್ಲಿ ಮತ್ತು ರಜಾದಿನಗಳಲ್ಲಿ ಕೃಷಿ ಕಾರ್ಮಿಕಳಾಗಿ ಕೆಲಸ ಮಾಡುತ್ತಾ ದಿನಕ್ಕೆ 150-200 ರೂ ಸಂಪಾದಿಸುತ್ತಾರೆ. "ಒಂದು ವೇಳೆ ಕೆಲಸ ಇದ್ದರೆ, ನಾನು ಹೊಲಗಳಿಗೆ ಹೋಗುತ್ತೇನೆ" ಎಂದು ಅವರು ಹೇಳುತ್ತಾರೆ. ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ, ಅವರು ಚಾಂದ್‌‌ವಾಡ್‌ನ ಹೊಲಗಳಲ್ಲಿ ಕೆಲಸ ಮಾಡುತ್ತಾ ಹೆಚ್ಚಿನ ಸಮಯವನ್ನು ಕಳೆದರು. "ಲಾಕ್ ಡೌನ್ ಸಮಯದಲ್ಲಿ ಬಹಳ ಕಡಿಮೆ ಕೆಲಸವಿತ್ತು. ನನಗೆ ಸಿಕ್ಕಷ್ಟು ಕೆಲಸ ಮಾಡಿದ್ದೇನೆ ಮತ್ತು ಎಷ್ಟು ಸಾಧ್ಯವೋ ಅಷ್ಟು ಸಂಪಾದಿಸಿದೆ” ಎಂದು ಅವರು ಹೇಳುತ್ತಾರೆ. ಅವರು ಈ ವರ್ಷ (2020ರಲ್ಲಿ) ಪ್ರೌಢಶಾಲೆ ಮುಗಿಸಿದರು, ಆದರೆ ಕೊರೋನಾ ಪಿಡುಗಿನಿಂದಾಗಿ ಕಾಲೇಜು ಪ್ರಾರಂಭಿಸಲು ಸಾಧ್ಯವಾಗಲಿಲ್ಲ.

ವಿಡಿಯೋ ನೋಡಿ: ದೆಹಲಿಯ ದಾರಿಯುದ್ದಕ್ಕೂ ರೈತ ಗೀತೆಗಳನ್ನು ಹಾಡುವ ಸವಿತಾ

ಸವಿತಾ ಆಗಾಗ್ಗೆ ಚಾಂದ್‌‌ವಾಡ್‌ನಲ್ಲಿ ತನ್ನ ಗುಂಪಿನೊಂದಿಗೆ ಸಾರ್ವಜನಿಕ ಸಮಾರಂಭಗಳಲ್ಲಿ ಹಾಡುತ್ತಾರೆ. ಈ ಗುಂಪಿನಲ್ಲಿ ಅವರ ಹಿರಿಯ ಸಹೋದರ ಸಂದೀಪ್ ಮತ್ತು ಅವರ ಸ್ನೇಹಿತರಾದ ಕೋಮಲ್, ಅರ್ಚನಾ ಮತ್ತು ಸಪ್ನಾ ಇದ್ದಾರೆ. ಅವರು ತನ್ನ ಸಹೋದರನಿಂದ ಒಂದಿಷ್ಟು ಸಹಾಯ ಪಡೆದು ಎಲ್ಲಾ ಹಾಡುಗಳನ್ನು ರಚಿಸುತ್ತಾರೆ. 24 ವರ್ಷದ ಸಂದೀಪ್ ಒಬ್ಬ ಕೃಷಿ ಕಾರ್ಮಿಕನಾಗಿದ್ದು, ಜಮೀನನ್ನು ಉಳುಮೆ ಮಾಡಲು ಟ್ರ್ಯಾಕ್ಟರ್ ಓಡಿಸುತ್ತಾರೆ. ಇದು ಕಠಿಣ ಕೆಲಸ ಎಂದು ಸವಿತಾ ಹೇಳುತ್ತಾರೆ, ಮತ್ತು ಅವರ ಆದಾಯವು ಭೂಮಿಯ ಗಾತ್ರ ಮತ್ತು ಅದರ ಮೇಲೆ ಕೆಲಸ ಮಾಡಲು ತೆಗೆದುಕೊಳ್ಳುವ ಸಮಯವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, 6-7 ಎಕರೆ ಭೂಮಿಯನ್ನು ಉಳುಮೆ ಮಾಡಲು ಅವರು ಸತತ ಮೂರು ದಿನ ಮತ್ತು ಮೂರು ರಾತ್ರಿಗಳನ್ನು ತೆಗೆದುಕೊಳ್ಳುತ್ತಾರೆ, ಅದಕ್ಕಾಗಿ ಅವರು ಸುಮಾರು 4,000 ರೂ ಪಡೆಯುತ್ತಾರೆ.

ತನ್ನ ಸಹೋದರ ಕಷ್ಟಪಟ್ಟು ಕೆಲಸ ಮಾಡುತ್ತಿರುವುದನ್ನು ನೋಡಿ ಅವರಿಗೆ ತನ್ನದೇ ಆದ ಹಾಡುಗಳನ್ನು ರಚಿಸಲು ಸ್ಫೂರ್ತಿ ಸಿಗುತ್ತದೆ. “ರೈತರ ದೈನಂದಿನ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ನಾನು ಹಾಡುತ್ತೇನೆ. ದಿನ ದಿನವೂ ಅವರು ಹೊಲಗಳಲ್ಲಿ ಕಷ್ಟಪಟ್ಟು ದುಡಿಯುತ್ತಾರೆ, ಆದರೂ ಅವರು ಬೆಳೆದ ಧಾನ್ಯಗಳಿಗೆ ನ್ಯಾಯಯುತ ಬೆಲೆ ಸಿಗುವುದಿಲ್ಲ. ಅದಕ್ಕಾಗಿಯೇ ರೈತರು ಹಿಂದುಳಿದಿದ್ದಾರೆ. ನಮ್ಮ ದೇಶದಲ್ಲಿ ಬಡವರು ಮತ್ತಷ್ಟು ಬಡವರಾಗುತ್ತಿದ್ದರೆ ಶ್ರೀಮಂತರು ಹೆಚ್ಚು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ."

ಮೂರು ಹೊಸ ಕಾನೂನುಗಳು ಪರಿಸ್ಥಿಯನ್ನು ಮತ್ತಷ್ಟು ಹದಗೆಡಿಸುತ್ತವೆ ಎಂದು ಪ್ರತಿಭಟಿಸುತ್ತಿರುವ ರೈತರು ಹೇಳುತ್ತಾರೆ. ಈ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ನಿಷ್ಕ್ರಿಯಗೊಳಿಸುತ್ತದೆ , ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

Savita Gunjal (left) composed the songs that the farmers' group from Maharashtra (right) was singing on the journey
PHOTO • Shraddha Agarwal
Savita Gunjal (left) composed the songs that the farmers' group from Maharashtra (right) was singing on the journey
PHOTO • Shraddha Agarwal

ಸವಿತಾ ಗುಂಜಲ್ (ಎಡ) ಮಹಾರಾಷ್ಟ್ರದ (ಬಲ) ರೈತರ ಗುಂಪು ತಮ್ಮ ಪ್ರಯಾಣದ ಸಮಯದಲ್ಲಿ ಹಾಡುತ್ತಿದ್ದ ಹಾಡುಗಳನ್ನು ರಚಿಸಿದ್ದಾರೆ

ಸವಿತಾ ಅವರ ಕುಟುಂಬವು ಮೂರು ಎಕರೆ ಭೂಮಿಯನ್ನು ಹೊಂದಿದ್ದು, ಅದನ್ನು ಅವರು ಮನೆ ಬಳಕೆಯ ಬೆಳೆಗಳಿಗಾಗಿ ಕೃಷಿ ಮಾಡಲು ಬಳಸುತ್ತಾರೆ. ಅವರ ತಂದೆ, 45 ವರ್ಷದ ಹನುಮಂತ ಗುಂಜಲ್ ಮತ್ತು ತಾಯಿ, 40 ವರ್ಷದ ತಾಯಿ ಗುಂಜಲ್ ಇಬ್ಬರೂ ರೈತರು. ಅವರು ಗೋಧಿ, ಕಿರುಧಾನ್ಯ, ಅಕ್ಕಿ ಮತ್ತು ಈರುಳ್ಳಿ ಬೆಳೆಯುತ್ತಾರೆ. 5ನೇ ತರಗತಿಯಲ್ಲಿ ಓದುತ್ತಿರುವ ಸವಿತಾರ ತಂಗಿ ಅನಿತಾ ತಾಯಿಗೆ ಮನೆಯ ಭೂಮಿಯಲ್ಲಿ ಕೃಷಿ ಮಾಡಲು ಸಹಾಯ ಮಾಡುತ್ತಾಳೆ. ಅವರ ಎರಡನೇ ಸಹೋದರ, 18 ವರ್ಷದ ಸಚಿನ್, ಚಾಂದವಾಡ್ನಲ್ಲಿ ಎಂಜಿನಿಯರಿಂಗ್ ಕಲಿಯುತ್ತಿದ್ದಾರೆ. ಸಂದೀಪ್‌ ಅವರಂತೆ ಅವನು ಸಚಿನ್‌ ಕೂಡ ಹೊಲದ ಉಳುಮೆ ಮಾಡುತ್ತಾರೆ, ಆದರೆ ಬಿಡುವಿನ ಸಮಯದಲ್ಲಿ ಮಾತ್ರ.

ಸವಿತಾ ಅವರ 66 ವರ್ಷದ ಅಜ್ಜಿ, ಕಲಾಬಾಯಿ ಗುಂಜಲ್ (ಮೇಲಿನ ಕವರ್ ಫೋಟೋದ ಎಡಭಾಗದಲ್ಲಿ), ಅವರೊಂದಿಗೆ ಜಾಥಾಕ್ಕೆ ಹೋಗುತ್ತಿದ್ದಾರೆ. ಅವರು 16 ವರ್ಷದವರಿದ್ದಾಗ, ಕಲಾಬಾಯಿ ಚಾಂದ್ವಾಡ್ನಲ್ಲಿ ನಡೆದ ಅಖಿಲ ಭಾರತ ಕಿಸಾನ್ ಸಭೆಯ ಮೊದಲ ಮಹಿಳಾ ನಾಯಕಿಯಾಗಿದ್ದರು. “ನನ್ನ ಆಜಿ (ಅಜ್ಜಿ) ಹೆಚ್ಚು ಹಾಡುವಂತೆ ನನ್ನನ್ನು ಪ್ರೋತ್ಸಾಹಿಸುತ್ತಾರೆ. ಅಜೋಬಾ (ಅಜ್ಜ) ಅವರಿಗೆ ಹಾಡಲು ಕಲಿಸಿದರು, ಮತ್ತು ನಂತರ ಅವರು ನನಗೆ ಕಲಿಸಿದರು. ನನ್ನದೇ ಆದ ಹಾಡುಗಳನ್ನು ಬರೆಯಲು ಅವರು ನನ್ನನ್ನು ಹುರಿದುಂಬಿಸುತ್ತಾರೆ” ಎಂದು ಸವಿತಾ ಹೇಳುತ್ತಾರೆ.

ಕವಿ ಅನ್ನಾಭಾವು ಸಾಥೆ ಮತ್ತು ಹೋರಾಟಗಾರ ರಮೇಶ್ ಗಾಯ್‌ಚೋರ್ ಕೂಡ ಸವಿತಾಗೆ ಪ್ರೇರಣೆ ನೀಡಿದ್ದಾರೆ. “ಹಾಡುಗಳನ್ನು ಬರೆಯುವಾಗ, ನಾನು ಅನ್ನಭಾವು ಬಗ್ಗೆ ಯೋಚಿಸುತ್ತೇನೆ. ಅವರ ಹಾಡು, ಮತ್ ಘುಟ್‌‌ಘುಟ್ ಕರ್ ರೆಹ್ನಾ, ಸೆಹ್ನೆ ಸೆ ಜುಲಮ್ ಬಡ್ತಾ ಹೈ (ಮೌನವಾಗಿ ನೋವನ್ನು ಸಹಿಸಬೇಡಿ, ನೋವನ್ನು ಸಹಿಸಿದಷ್ಟೂ ಹೆಚ್ಚಾಗುತ್ತದೆ) ಇದು ನನ್ನ ನೆಚ್ಚಿನ ಹಾಡುಗಳಲ್ಲಿ ಒಂದಾಗಿದೆ. ಅವರು ಕ್ರಾಂತಿಕಾರಿ. ಅವರಂತೆ, ನನ್ನ ಸಹೋದರಿಯರು ತಮ್ಮ ದಬ್ಬಾಳಿಕೆಗಾರರ ​​ವಿರುದ್ಧ ಹೋರಾಡಬೇಕೆಂದು ನಾನು ಬಯಸುತ್ತೇನೆ. ನಮ್ಮ ದೇಶವು ಮಹಿಳೆಯರನ್ನು ಗೌರವಿಸುವುದಿಲ್ಲ. ನಮ್ಮ ಮೇಲೆ ಅತ್ಯಾಚಾರ ನಡೆಯುತ್ತಿದೆ ಮತ್ತು ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅವರ ಹಾಡುಗಳನ್ನು ಹಾಡುವ ಮೂಲಕ, ಹುಡುಗಿಯರನ್ನು ಹೋರಾಡುವಂತೆ ಪ್ರೋತ್ಸಾಹಿಸಲು ಬಯಸುತ್ತೇನೆ, ಏಕೆಂದರೆ ಆಗ ಮಾತ್ರ ನಮಗೆ ಸ್ವಾತಂತ್ರ್ಯ ಸಿಗುತ್ತದೆ.”

“ನಾನು ಹಾಡುವಾಗ, ನನ್ನ ಜೀವನಕ್ಕೊಂದು ಉದ್ದೇಶವಿದೆಯೆಂದು ನನಗೆ ಅನಿಸುತ್ತದೆ. ನಾನು ದೆಹಲಿಯವರೆಗೂ ಹಾಡುತ್ತೇನೆ,” ಎಂದು ಹೇಳಿ ತನ್ನ ಹಾಡಿಗೆ ಕೊರಳಾಗಲು ಕಾಯುತ್ತಿದ್ದ ರೈತರ ಗುಂಪಿರುವ ಟೆಂಪೋ ಕಡೆ ಹೊರಟರು.

ಅನುವಾದ: ಶಂಕರ ಎನ್. ಕೆಂಚನೂರು

Shraddha Agarwal

Shraddha Agarwal is a Reporter and Content Editor at the People’s Archive of Rural India.

Other stories by Shraddha Agarwal
Translator : Shankar N Kenchanuru

Shankar N Kenchanuru is a poet and freelance translator. He can be reached at [email protected]

Other stories by Shankar N Kenchanuru