ಮೊಸಳೆಯನ್ನು ಹೋಲುವ  ಪುಲ್‌ ಓವರ್ ಮತ್ತು ದಪ್ಪನೆಯ ಉಣ್ಣೆಯ ಸಾಕ್ಸ್ ಧರಿಸಿದ್ದ ಹರ್‌ಫತೇಹ್ ಸಿಂಗ್, ರಾಜಸ್ಥಾನ್-ಹರಿಯಾಣ ಗಡಿಯಲ್ಲಿ ದೊಡ್ಡ ಪಾತ್ರೆಯೊಂದರಲ್ಲಿದ್ದ ಹಸಿ ಬಟಾಣಿಯ ಸಿಪ್ಪೆ ತೆಗೆಯಲು ತನ್ನ ತಂದೆಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದ. ದೆಹಲಿ-ಜೈಪುರ ಹೆದ್ದಾರಿಯಲ್ಲಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಶಹಜಹಾನ್‌ಪುರದ 18 ತಿಂಗಳ ಗಂಡು ಮಗು ಖಂಡಿತವಾಗಿಯೂ ಕಿರಿಯ ಪ್ರತಿಭಟನಾಕಾರರಲ್ಲಿ ಒಬ್ಬ. ರೈತರ ಆಂದೋಲನದಲ್ಲಿ ತರಕಾರಿಗಳ ಸಿಪ್ಪೆ ತೆಗೆಯುವ ಮೂಲಕ ಹರ್‌ಫತೇಹ್ ಹೋರಾಟಕ್ಕೆ ತನ್ನ ಕೊಡುಗೆಯನ್ನು ನೀಡುತ್ತಿದ್ದಾನೆ. ಅಥವಾ ಕನಿಷ್ಠ, ಹಾಗೆ ಮಾಡಲು ಪ್ರಯತ್ನಿಸುತ್ತಿದ್ದಾನೆ. ಅವನು ಅದನ್ನು ಸರಿಯಾಗಿ ಅಥವಾ ಪರಿಣಾಮಕಾರಿಯಾಗಿ ಮಾಡುತ್ತಿಲ್ಲ ನಿಜ, ಆದರೆ ಅದರಲ್ಲಿ ಅವನ ಆಸಕ್ತಿ ಅಥವಾ ಶ್ರಮದ ಕೊರತೆ ಕಾಣುವುದಿಲ್ಲ.

ದೆಹಲಿ ಮತ್ತು ಹರಿಯಾಣದ ವಿವಿಧ ಗಡಿಗಳಲ್ಲಿ, ಹಲವಾರು ರಾಜ್ಯಗಳ ಲಕ್ಷಾಂತರ ರೈತರು ತಮ್ಮ ಜೀವನೋಪಾಯಕ್ಕೆ ಹಾನಿಕಾರಕವಾಗಿರುವಂತಹ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಹೋರಾಡುತ್ತಿದ್ದಾರೆ. ಜೂನ್ 5ರಂದು ಮೊದಲು ಸುಗ್ರೀವಾಜ್ಞೆಯಾಗಿ ಹೊರಡಿಸಲ್ಪಟ್ಟ ಈ ಕಾನೂನುಗಳನ್ನು ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಮಸೂದೆಗಳಾಗಿ ಪರಿಚಯಿಸಲಾಯಿತು ಮತ್ತು ಆ ತಿಂಗಳ 20 ರ ಹೊತ್ತಿಗೆ ಕಾಯಿದೆಗಳನ್ನಾಗಿ ಆತುರವಾಗಿ ಜಾರಿಗೊಳಿಸಲಾಯಿತು

ಡಿಸೆಂಬರ್ 25ರಂದು, ನಾನು ಹರ್‌ಫತೇಹ್ ಭೇಟಿಯಾದ ಸಮಯದಲ್ಲಿ, ಮಹಾರಾಷ್ಟ್ರದ ಸುಮಾರು ಒಂದು ಸಾವಿರ ರೈತರು ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಇತರ ಅನೇಕ ಬೆಳೆಗಾರರನ್ನು ಶಹಜಹಾನ್ಪುರದ ಪ್ರತಿಭಟನಾ ಸ್ಥಳದಲ್ಲಿ ಸೇರಿಕೊಂಡರು. ಈ ರೈತರು ಮತ್ತು ಕೃಷಿ ಕಾರ್ಮಿಕರು ನಾಸಿಕ್‌ನಿಂದ 1,200 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಿಂದ ಟೆಂಪೊಗಳು, ಜೀಪ್‌ಗಳು ಮತ್ತು ಮಿನಿವ್ಯಾನ್‌ಗಳಂತಹ ವಾಹನಗಳಲ್ಲಿ ವಿವಿಧ ರಾಜ್ಯಗಳಿಂದ ತಮ್ಮ ಬಂದಿರುವ ಸಹವರ್ತಿಗಳನ್ನು ಅನೇಕ ಪ್ರತಿಭಟನಾ ಸ್ಥಳಗಳಲ್ಲಿ ಸೇರಲು ಬಂದಿದ್ದರು.

ಮಹಾರಾಷ್ಟ್ರದ ರೈತರನ್ನು ಸ್ವಾಗತಿಸಲು ಸೇರಿದ್ದ ಕುಟುಂಬಗಳಲ್ಲಿ ಹರ್‌ಫತೇಹ್ ಕುಟುಂಬವೂ ಒಂದಾಗಿತ್ತು - ಅವರಿಗೆ ಸುಮಾರು 100 ಜನರಿಗೆ ಆಲೂ-ಮಟರ್ ಸಬ್ಜಿ ತಯಾರಿಸುವ ಕೆಲಸವನ್ನು ವಹಿಸಲಾಗಿತ್ತು. "ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾವು ಚಳಿಯ ದಿನಗಳಲ್ಲಿ ಇಲ್ಲಿದ್ದೇವೆ. ಇಂದು ನಾವು ರೈತರು ಪ್ರತಿಭಟಿಸದಿದ್ದರೆ, ಫತೇಹ್‌ಗೆ ಭವಿಷ್ಯವಿಲ್ಲ” ಎಂದು ಮಗುವಿನ ತಂದೆ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಛಾಜುಪುರ ಗ್ರಾಮದ 41 ವರ್ಷದ ಜಗರೂಪ್‌ ಸಿಂಗ್ ಹೇಳುತ್ತಾರೆ.

One of the youngest protestors at the Rajasthan-Haryana border pitches in to help his family prepare aloo mutter for a hundred people
PHOTO • Shraddha Agarwal
One of the youngest protestors at the Rajasthan-Haryana border pitches in to help his family prepare aloo mutter for a hundred people
PHOTO • Shraddha Agarwal

ಪ್ರತಿಭಟನಾ ಸ್ಥಳದಲ್ಲಿನ ಸಮುದಾಯ ಅಡುಗೆಮನೆಯಲ್ಲಿ ಸಹಾಯ ಮಾಡಲು ಹರ್‌ಫತೇಹ್‌ನ ಕುಟುಂಬ ಶಹಜಹಾನ್ಪುರಕ್ಕೆ ಬಂದಿತು

ಛಾಜುಪುರದಲ್ಲಿ ಐದು ಎಕರೆ ಭೂಮಿಯನ್ನು ಹೊಂದಿರುವ ಜಗರೂಪ್‌ ಅಕ್ಕಿ, ಗೋಧಿ ಮತ್ತು ಆಲೂಗಡ್ಡೆಗಳನ್ನು ಬೆಳೆಯುತ್ತಾರೆ. ಅವರು ಮೊದಲ 20 ದಿನಗಳ ಕಾಲ ಹರಿಯಾಣದ ಸೋನಿಪತ್ ಜಿಲ್ಲೆಯ ಸಿಂಘು ಗಡಿಯಲ್ಲಿ ಹಾಜರಿದ್ದರು ಮತ್ತು ನಂತರ ರಾಜಸ್ಥಾನ-ಹರಿಯಾಣ ಗಡಿಯಲ್ಲಿ ಹೆದ್ದಾರಿಯನ್ನು ನಿರ್ಬಂಧಿಸುವ ಉದ್ದೇಶದಿಂದ ಸಾವಿರಾರು ಇತರ ರೈತರೊಂದಿಗೆ ಶಿಬಿರವನ್ನು ಶಹಜಹಾನ್ಪುರಕ್ಕೆ ಸ್ಥಳಾಂತರಿಸಿದರು.

ಪ್ರತಿಭಟನೆಯ ಮೊದಲ ವಾರಗಳಲ್ಲಿ ಅವರು ತಮ್ಮ ಕುಟುಂಬವನ್ನು ಸಾಕಷ್ಟು ನೆನಪಿಸಿಕೊಂಡಿದ್ದಾಗಿ ಜಗರೂಪ್ ಹೇಳುತ್ತಾರೆ. ಡಿಸೆಂಬರ್ 23ರಂದು, ಅವರ ಪತ್ನಿ, 33 ವರ್ಷದ ಗುರ್‌ಪ್ರೀತ್ ಕೌರ್ ಮತ್ತು ಅವರ ಇಬ್ಬರು ಮಕ್ಕಳಾದ 8 ವರ್ಷದ ಏಕಮ್‌ಜೋತ್ ಮತ್ತು ಹರ್‌ಫತೇಹ್ ಶಹಜಹಾನಪುರದ ಪ್ರತಿಭಟನಾ ಸ್ಥಳಕ್ಕೆ ಬಂದು ಅವರನ್ನು ಕೂಡಿಕೊಂಡರು ಮತ್ತು ಅಲ್ಲಿ ನಿರ್ಮಿಸಲಾದ ವಿವಿಧ ಸಮುದಾಯ ಅಡಿಗೆಮನೆಗಳಲ್ಲಿ ಸಹಾಯ ಮಾಡಿದರು. "ನನ್ನ ಮಗಳು ಸೇವೆ ಮಾಡುತ್ತಿದ್ದಾಳೆ. ಅವಳು ಅಗತ್ಯವಿರುವ ಎಲ್ಲರಿಗೂ ಚಹಾವನ್ನು ವಿತರಿಸುತ್ತಿದ್ದಾಳೆ. ನಾವು ಇಲ್ಲಿ ಏನು ಮಾಡುತ್ತಿದ್ದೇವೆ ಎಂಬುದರ ಮಹತ್ವವನ್ನು ನನ್ನ ಮಕ್ಕಳು ಅರ್ಥಮಾಡಿಕೊಳ್ಳುತ್ತಾರೆ” ಎಂದು ಜಗರೂಪ್ ಹೇಳುತ್ತಾ‌ ಬಟಾಣಿಗಳನ್ನು ಸರಿಯಾಗಿ ಸಿಪ್ಪೆ ತೆಗೆಯುವಂತೆ ತನ್ನ ಮಗ ಹರ್‌ಫತೇಹ್‌ಗೆ ಸೂಚಿಸುತ್ತಾರೆ.

ರೈತರು ವಿರೋಧಿಸುತ್ತಿರುವ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ನಿಷ್ಕ್ರಿಯಗೊಳಿಸುತ್ತದೆ , ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

ಅನುವಾದ: ಶಂಕರ ಎನ್. ಕೆಂಚನೂರು

Shraddha Agarwal

Shraddha Agarwal is a Reporter and Content Editor at the People’s Archive of Rural India.

Other stories by Shraddha Agarwal
Translator : Shankar N Kenchanuru

Shankar N Kenchanuru is a poet and freelance translator. He can be reached at [email protected]

Other stories by Shankar N Kenchanuru