“ಇಲ್ಲಿನ ಹಳ್ಳಿ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮವಾಗಿಲ್ಲ. ಹಾಗಾಗಿ ನನ್ನ ಹೆಣ್ಣುಮಕ್ಕಳನ್ನು ವಾರಣಾಸಿಗೆ ಕರೆದೊಯ್ದೆ. ನಗರದ ಶಾಲೆಯಲ್ಲಿ ಪ್ರವೇಶ ಪಡೆದ ಮೂರು ತಿಂಗಳಲ್ಲಿ ನಾನು ಅವರನ್ನು ಮತ್ತೆ ಹಳ್ಳಿಗೆ ಕರೆದೊಯ್ಯಬೇಕಾಗುತ್ತದೆ ಎನ್ನುವುದು ಯಾರಿಗೆ ತಾನೇ ಗೊತ್ತಿತ್ತು ಹೇಳಿ? ಎಂದು ಅರುಣ್ ಕುಮಾರ್ ಪಾಸ್ವಾನ್ ಪ್ರಶ್ನಿಸುತ್ತಾರೆ. ಅವರು ಉತ್ತರ ಪ್ರದೇಶದ ವಾರಣಾಸಿ ನಗರದ ರೆಸ್ಟೋರೆಂಟ್ ನ ಅಡುಗೆ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು, ಮಾರ್ಚ್ ನಲ್ಲಿ ಕೊರೊನಾ ಲಾಕ್ ಡೌನ್ ನಿಂದ ಮುಚ್ಚುವವರೆಗೆ ಅಲ್ಲೇ ದುಡಿಯುತ್ತಿದ್ದರು, ಇದರಿಂದಾಗಿ ಅವರು ಪ್ರತಿ ತಿಂಗಳಿಗೆ 15,000 ರೂ.ಗಳನ್ನು ಸಂಪಾದಿಸುತ್ತಿದ್ದರು.

ಮೇ ತಿಂಗಳ ಆರಂಭದಲ್ಲಿ, ತನ್ನ ಕುಟುಂಬಕ್ಕೆ ಆಹಾರ ಒದಗಿಸಲು ಇನ್ನು ಸಾಧ್ಯವಾಗದಿದ್ದಾಗ, ಪಾಸ್ವಾನ್ ಬಿಹಾರದ ಗಯಾ ಜಿಲ್ಲೆಯಲ್ಲಿನ ತನ್ನ ಗ್ರಾಮ ಮಾಯಾಪುರಕ್ಕೆ ಹಿಂತಿರುಗಲು ನಿರ್ಧರಿಸಿದರು. ಇದು ವಾರಣಾಸಿಯಿಂದ 250 ಕಿಲೋಮೀಟರ್ ದೂರದಲ್ಲಿದೆ. "ನಾನು ನನ್ನ ಕುಟುಂಬ ಮತ್ತು ಇತರರೊಂದಿಗೆ ನಾಳೆ ಮುಂಜಾನೆ 3 ಗಂಟೆಗೆ ಹೊರಡುತ್ತೇನೆ" ಎಂದು ಪಾಸ್ವಾನ್ ಮೇ 8ರಂದು ನನಗೆ ಫೋನ್‌ನಲ್ಲಿ ತಿಳಿಸಿದ್ದರು. “ನಾವು ಯುಪಿ-ಬಿಹಾರ ಗಡಿಯವರೆಗೆ ನಡೆದುಕೊಂಡು ಹೋಗುತ್ತೇವೆ, ಅಲ್ಲಿಂದ ಬಸ್ ಗೆ ಹೋಗುತ್ತೇವೆ. ಬಹುಶಃ ಅಲ್ಲಿಂದ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದನಿಸುತ್ತದೆ. ಒಂದು ವೇಳೆ ದಾರಿಯಲ್ಲಿ ಟ್ರಕ್ ಸಿಕ್ಕರೆ ಅವರಿಗೆ ನಮ್ಮನ್ನು ಗಡಿಯಲ್ಲಿ ಇಳಿಸಲು ವಿನಂತಿಸಿಕೊಳ್ಳುತ್ತೇವೆ" ಎಂದು ಹೇಳಿದರು.

ಪಾಸ್ವಾನ್ ಮತ್ತು ಅವರ 27 ವರ್ಷದ ಪತ್ನಿ ಸಬಿತಾ, ಅವರ ಮೂವರು ಪುಟ್ಟ ಹೆಣ್ಣು ಮಕ್ಕಳಾದ ರೋಲಿ (8), ಮತ್ತು ರಾಣಿ ( 6), ಮತ್ತು ಮಗ ಆಯುಷ್ (3) ಮರುದಿನ ಬೆಳಿಗ್ಗೆ ಹೊರಟರು. ಅವರು 53 ಕಿಲೋಮೀಟರ್ ದೂರದಲ್ಲಿರುವ ರಾಜ್ಯ ಗಡಿಯುದ್ದಕ್ಕೂ ನಡೆದು ಕರಮ್ನಾಸಾ ಚೆಕ್ ಪೋಸ್ಟ್ ಗೆ ತಲುಪಿದರು. ಅಲ್ಲಿ, ಅವರಿಗೆ ಬಸ್ ಹತ್ತಲು ಅನುಮತಿಸುವ ಮೊದಲು ಬಿಹಾರದ ಕೈಮೂರ್ ಜಿಲ್ಲಾಡಳಿತ ಸ್ಥಾಪಿಸಿದ ಆರೋಗ್ಯ ಶಿಬಿರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಗೆ ಒಳಗಾಗಬೇಕಾಗಿತ್ತು. "ಅದೃಷ್ಟವಶಾತ್, ನಮಗೆ ಅಲ್ಲಿಂದ ಸರ್ಕಾರಿ ಬಸ್ ಸಿಕ್ಕಿತು, ಅದು ನಮ್ಮನ್ನು ಗಯಾಗೆ ತಲುಪಿಸಿತು" ಎಂದು ಅವರು ಮೇ 11ರಂದು ಮಾಯಾಪುರ ತಲುಪಿದ ನಂತರ ಹೇಳಿದರು. ಅವರು ಗಯಾ ತಲುಪಿದ ನಂತರ, ತಮ್ಮ ಹಳ್ಳಿಗೆ ಹೋಗಲು ಅವರು ಮತ್ತೊಂದು ಬಸ್‌ಗಾಗಿ ಕಾಯುತ್ತಿದ್ದರು, ಅಲ್ಲಿಗೆ ತಲುಪಿದ ಕೂಡಲೇ ಅವರು ಸ್ವಯಂ-ಪ್ರತ್ಯೇಕತೆಗೆ ಒಳಗಾದರು.

ರಾಣಿಗೆ ತಮ್ಮ ಹಳೆಯ ಮನೆಗೆ ಮರಳಿದ್ದು ಸಂತಸ ತಂದಿದ್ದರೆ, ರೋಲಿ ತನ್ನ 'ಶೆಹರ್ ವಾಲಾ ಶಾಲೆ' (ನಗರ ಶಾಲೆ) ಯ ಸಮವಸ್ತ್ರವನ್ನು ನೆನಪಿಸಿಕೊಳ್ಳುತ್ತಿರುತ್ತಾಳೆ ಎಂದು ಪಾಸ್ವಾನ್ ಹೇಳುತ್ತಾರೆ.

ಆಗಸ್ಟ್ 2019 ರಿಂದ ಪಾಸ್ವಾನ್ ಕೆಲಸ ಮಾಡುತ್ತಿದ್ದ ವಾರಣಾಸಿ ರೆಸ್ಟೋರೆಂಟ್, ಮೊದಲು ಮಾರ್ಚ್ 22ರಂದು ಜನತಾ ಕರ್ಫ್ಯೂಗಾಗಿ ಮುಚ್ಚಲ್ಪಟ್ಟಿತು, ಮತ್ತು ನಂತರ ಮಾರ್ಚ್ 25ರಂದು ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರಲಾಯಿತು. ಮಾರ್ಚ್ ಮಧ್ಯದಲ್ಲಿಯೇ ಅವರಿಗೆ ಕೊನೆಯ ಸಂಬಳ ಸಿಕ್ಕಿತ್ತು, ಆದರೆ ಎಪ್ರಿಲ್ ಎರಡನೇ ವಾರ ಅನ್ನೋವಷ್ಟರಲ್ಲಿ ಪರಿಸ್ಥಿತಿ ಕಷ್ಟವಾಗುತ್ತಾ ಬಂತು. ವಾರಾಣಸಿ ಜಿಲ್ಲಾ ಆಡಳಿತದ ಅಧಿಕಾರಿಗಳು ವಿತರಿಸಿದ ಆಹಾರ ಪ್ಯಾಕೆಟ್‌ಗಳನ್ನು ಸಂಗ್ರಹಿಸಲು ಅವರು ದಿನಕ್ಕೆ ಎರಡು ಬಾರಿ ದೀರ್ಘ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು.

ಆದರೆ ಮೇ 8ರಂದು ಪಾಸ್ವಾನ್ ಅವರು ನನಗೆ ಹೇಳಿದ್ದು, “ನಾವು ಕಳೆದ ನಾಲ್ಕು ದಿನಗಳಿಂದ ಆಹಾರ ಪ್ಯಾಕೆಟ್‌ಗಳನ್ನು ನೀಡಲಾಗುತ್ತಿಲ್ಲ. ನಮಗೆ ತಿನ್ನಲು ಏನೂ ಇಲ್ಲ. ನಮಗೆ ಹೊರಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ.” ಎಂದು ಅವರು ತಮ್ಮ ಕಷ್ಟದ ಪರಿಸ್ಥಿತಿಯನ್ನು ವಿವರಿಸಿದರು.

ಅರುಣ್ ಪಾಸ್ವಾನ್ ಮತ್ತು ಕಾಮೇಶ್ವರ ಯಾದವ್ ತಮ್ಮ ಮನೆ ತಲುಪಲು ಸುಮಾರು 250 ಕಿಲೋಮೀಟರ್ ಪ್ರಯಾಣಿಸಬೇಕಿದ್ದರೆ, ಅಮರಿತ್ ಮಾಂಝಿ 2,380 ಕಿಲೋಮೀಟರ್ ದೂರದಲ್ಲಿರುವ ತಮಿಳುನಾಡಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ವಿಡಿಯೋ ನೋಡಿ : ಲಾಕ್‌ಡೌನ್ ನಲ್ಲಿ ವಾರಣಾಸಿಯಿಂದ ಗಯಾಗೆ ಪ್ರಯಾಣ ಬೆಳೆಸಿರುವ ವಲಸೆ ಕಾರ್ಮಿಕರು

ಗಯಾದ ಗುರಾರು ಬ್ಲಾಕ್‌ನಲ್ಲಿರುವ ಘತೇರಾ ಗ್ರಾಮದಲ್ಲಿನ ಮನೆಗೆ ಹೋಗಲು ಕಾಮೇಶ್ವರ ಯಾದವ್‌ಗೆ ಎರಡು ದಿನಗಳು ಬೇಕಾಯಿತು. ನೆರೆಯ ಚಂದೌಲಿ ಜಿಲ್ಲೆಯ ವಾರಣಾಸಿಯಿಂದ ಸುಮಾರು 17 ಕಿಲೋಮೀಟರ್ ದೂರದಲ್ಲಿರುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯನಗರ (ಡಿಡಿಯು ನಗರ; ಈ ಹಿಂದೆ ಮೊಘಲ್ ಸರಾಯ್ ಎಂದು ಕರೆಯಲಾಗುತ್ತಿತ್ತು) ದಲ್ಲಿರುವ ರೆಸ್ಟೋರೆಂಟ್‌ನಲ್ಲಿ ಅವರು ಮುಖ್ಯ ಬಾಣಸಿಗರಾಗಿದ್ದರು.

ಮೊದಲ ಹಂತದ ಲಾಕ್‌ಡೌನ್ ವಿಸ್ತರಿಸಿದಾಗ ಯಾದವ್ ಅವರು ಏಪ್ರಿಲ್ 15 ರಂದು ಡಿಡಿಯು ನಗರದಿಂದ ಹೊರಟರು."ರೆಸ್ಟೋರೆಂಟ್ ಮುಚ್ಚಿದ್ದರಿಂದಾಗಿ ಈಗ ನನ್ನ ಉಳಿತಾಯವೆಲ್ಲಾ ಖಾಲಿಯಾಗಿದೆ ಮತ್ತು ಇಲ್ಲಿರುವ ನನ್ನ ಕುಟುಂಬಕ್ಕೆ ರೇಷನ್ ಕೂಡ ಇಲ್ಲ. ನಾನು ಬೇಗನೆ ಅವರನ್ನು ತಲುಪಬೇಕಾಗಿತ್ತು" ಎಂದು ಕಾಮೇಶ್ವರ ಯಾದವ್ ಹೇಳಿದರು. ಸುಮಾರು 200 ಕಿಲೋಮೀಟರ್ ದೂರದ ಎರಡು ದಿನಗಳ ಪ್ರಯಾಣವನ್ನು ಕಾಲ್ನಡಿಗೆ ಮತ್ತು ಉಳಿದದ್ದನ್ನು ಟ್ರಕ್ ಮೂಲಕ ಮಾಡಿದರು. ಕೊನೆಗೆ ಯಾದವ್ ಅವರು ಎಪ್ರಿಲ್ 17ರಂದು ತಮ್ಮ ಗ್ರಾಮವನ್ನು ತಲುಪಿದರು.

ಮಾರ್ಚ್ 23ರಂದು ಉತ್ತರಪ್ರದೇಶವು ತನ್ನ ಗಡಿಗಳಿಗೆ ಮೊಹರು ಹಾಕಿದಾಗ, ಯಾದವ್ ಇತರ ಮೂರು ಸಹೋದ್ಯೋಗಿಗಳೊಂದಿಗೆ ರೆಸ್ಟೋರೆಂಟ್‌ಗೆ ತೆರಳಿದ್ದರು, ಅಲ್ಲಿ ಅವರ ಮಾಲೀಕರು ಅವರಿಗೆ ಆಹಾರವನ್ನು ಒದಗಿಸಿದ್ದರು. ಆದರೆ ಯಾದವ್ ಘತೇರಾದಲ್ಲಿ ತನ್ನ ಹೆತ್ತವರು ಮತ್ತು ಪತ್ನಿ ರೇಖಾದೇವಿಯೊಂದಿಗೆ ಇರುವ ತನ್ನ ಮಕ್ಕಳಾದ ಸಂಧ್ಯಾ (10), ಸುಗಂಧ (8) ಮತ್ತು ಸಾಗರ್ (3) ಬಗ್ಗೆ ಹೆಚ್ಚು ಚಿಂತಿತರಾಗಿದ್ದರು. "ನನ್ನ ಮಕ್ಕಳು ಫೋನ್‌ನಲ್ಲಿ ಅಳುತ್ತಿದ್ದರು.ಈ ಲಾಕ್‌ಡೌನ್ ವಿಸ್ತರಿಸಲಾಯಿತು ಮತ್ತು ಈ ಕಾಯುವಿಕೆಯು ಇನ್ನೂ ದೀರ್ಘವಿದೆ ಎನಿಸುತ್ತದೆ" ಎಂದು ಯಾದವ್ ಹೇಳುತ್ತಾರೆ.

ಪತ್ನಿ ರೇಖಾದೇವಿ ಮತ್ತು ಅವರ ಪೋಷಕರು ನೋಡಿಕೊಳ್ಳುವ ಕುಟುಂಬದ 3 ಬಿಘಾ (1.9 ಎಕರೆ) ಜಮೀನಿನಲ್ಲಿ ಬೆಳೆಯುವ ಹೆಸರು ಕಾಳು ಮತ್ತು ಗೋಧಿಯ ಮೇಲೆ ಹೆಚ್ಚಿನ ಭರವಸೆಯನ್ನು ಇಟ್ಟುಕೊಂಡಿದ್ದರು. ಆದರೆ ಏಪ್ರಿಲರರಗೂ ಮುಂಚಿತವಾಗಿ ಸುರಿದ ಮಳೆಯಿಂದಾಗಿ ಎಲ್ಲ ಬೆಳೆ ನಾಶವಾಗಿದೆ. ಈ ಮಳೆ ಗೋದಿಯ ಮೇಲೆಯೂ ಸಹ ಪರಿಣಾಮವನ್ನು ಬೀರಿದೆ, 70 ಕೆಜಿ ವರೆಗೆ ನಿರೀಕ್ಷಿಸಿದ್ದ ಇಳುವರಿ ಏಕಾಏಕಿ 40 ಕೆಜಿಗೆ ಕುಸಿದಿದೆ. ಆದ್ದರಿಂದ ಈಗ ಅದನ್ನು ಅವರು ಕುಟುಂಬದ ಬಳಕೆಗಾಗಿ ಮೀಸಲಿಟ್ಟಿದ್ದಾರೆ. "ಈಗ ನನ್ನ ಎಲ್ಲಾ ಭರವಸೆ ಜೂನ್‌ನಲ್ಲಿ ಹೊಸದಾಗಿ ಕೊಯ್ಲು ಮಾಡಬೇಕಾದ ಹೆಸರು ಧಾನ್ಯದ ಮೇಲೆ ಇದೆ" ಎಂದು ಯಾದವ್ ಹೇಳುತ್ತಾರೆ.

Left: Arun and Sabita Paswan and their children in Varanasi before the lockdown. Right: Kameshwar Yadav with his son and nephew in Ghatera
PHOTO • Arun Kumar Paswan
Left: Arun and Sabita Paswan and their children in Varanasi before the lockdown. Right: Kameshwar Yadav with his son and nephew in Ghatera
PHOTO • Kameshwar Yadav

ಎಡಕ್ಕೆ: ಲಾಕ್ ಡೌನ್ ಮುನ್ನ ವಾರಣಾಸಿಯಲ್ಲಿ ಅರುಣ್ ಮತ್ತು ಸಬಿತಾ ಪಾಸ್ವಾನ್ ಮತ್ತು ಅವರ ಮಕ್ಕಳು. ಬಲಕ್ಕೆ: ಘತೇರಾದಲ್ಲಿ ಕಾಮೇಶ್ವರ್ ಯಾದವ್ ತನ್ನ ಮಗ ಮತ್ತು ಸೋದರಳಿಯನೊಂದಿಗೆ.

ಪಾಸ್ವಾನ್ ಮತ್ತು ಯಾದವ್ ಮನೆಗೆ ತಲುಪಲು ಇನ್ನೂ ಹೆಚ್ಚು ಕಡಿಮೆ 250 ಕಿಲೋಮೀಟರ್ ದೂರ ಕ್ರಮಿಸಬೇಕಾಗಿದ್ದರೆ, ಗಯಾ ನಿವಾಸಿ ಅಮರಿತ್ ಮಾಂಝಿ ಇನ್ನೂ 2,380 ಕಿಲೋಮೀಟರ್ ದೂರದಲ್ಲಿರುವ ತಮಿಳುನಾಡಿನಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಜೊತೆಗೆ ಅವರದೇ ಜಿಲ್ಲೆಯಿಂದ ಬಂದಿರುವ ಇತರ 20 ವಲಸೆ ಕಾರ್ಮಿಕರಿದ್ದಾರೆ. 28 ರ ಹರೆಯದ ಮಾಂಝಿ, 2019 ರ ಅಕ್ಟೋಬರ್‌ನಲ್ಲಿ ಬರಾಚಟ್ಟಿ ಬ್ಲಾಕ್‌ನಲ್ಲಿರುವ ತಮ್ಮ ಗ್ರಾಮವಾದ ತುಲಾ ಚಕ್‌ನಿಂದ ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಅವಿನಾಶಿ ತಾಲೂಕಿನಲ್ಲಿರುವ ಛಾವಣಿಯ ಶೀಟ್‌ಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ದುಡಿಯಲು ಹೋಗಿದ್ದರು.

ಅವರು ಕಾರ್ಖಾನೆಯಲ್ಲಿ 8,000 ರೂ.ಗಳನ್ನು ಸಂಪಾದಿಸುತ್ತಿದ್ದರು, ಇದೇ ಕಾರ್ಖಾನೆಯಲ್ಲಿಯೇ ಬಿಹಾರದಿಂದ ಬಂದಿರುವ ಸುಮಾರು 150 ವಲಸೆ ಕಾರ್ಮಿಕರು ದುಡಿಯುತ್ತಿದ್ದರು; ಅವರೆಲ್ಲರೂ ಕೂಡ ಕಾರ್ಖಾನೆಯ ಮಾಲೀಕರು ಒದಗಿಸಿರುವ ರೂಮಿನಲ್ಲಿಯೇ ಉಳಿದುಕೊಂಡಿದ್ದರು.

ಮೇ 12ರಂದು, ಮಾಂಝಿ ಮತ್ತು ಒಂಬತ್ತು ಸಹೋದ್ಯೋಗಿಗಳು (ಮೇಲಿನ ಕವರ್ ಫೋಟೋದಲ್ಲಿ) ನಡಿಗೆಯ ಮೂಲಕ ದೂರದ ಮನೆಗೆ ತೆರಳಲು ಪ್ರಾರಂಭಿಸಿದರು. ಆದರೆ ಅವರನ್ನು ಮಧ್ಯೆದಲ್ಲಿ ಪೊಲೀಸರು ತಡೆದಾಗ ಅವರು ಕೇವಲ 2-3 ಕಿಲೋಮೀಟರುಗಳವರೆಗೆ ಮಾತ್ರ ಕ್ರಮಿಸಿದ್ದರು. ಅವರನ್ನು ಥಳಿಸಲಾಯಿತು ಮತ್ತು ನಂತರ ಅವರ ರೂಮ್ ಗೆ ಬಿಡಲಾಯಿತು ಎಂದು ಅವರು ಹೇಳುತ್ತಾರೆ. “ನಾವು ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದೇವೆ ಎಂದು ಪೊಲೀಸರು ನಮಗೆ ದಂಡ ವಿಧಿಸಿದ್ದಾರೆ. ನಮ್ಮ ಗುಂಪಿನ ಸದಸ್ಯರೊಬ್ಬರಿಗೆ ಪೋಲೀಸರ ಹೊಡೆತದಿಂದ ಅವನ ಕೈಗೆ ತೀವ್ರ ನೋವಾಗಿದೆ, ಇದರ ಚಿಕಿತ್ಸೆಗಾಗಿ ನಾವು 2000 ರೂ.ಗಳನ್ನು ಖರ್ಚು ಮಾಡಿದ್ದೇವೆ" ಎಂದು ಮಾಂಝಿ ಮೇ 16ರಂದು ನನಗೆ ವಿವರಿಸಿದ್ದರು.

"ನಮ್ಮನ್ನು ಹೊಡೆಯುವ ಬದಲು, ನಮ್ಮ ಊರುಗಳನ್ನು ಹೇಗೆ ತಲುಪಬೇಕು ಎಂಬುದರ ಕುರಿತು ಪೊಲೀಸರು ನಮಗೆ ಮಾರ್ಗದರ್ಶನ ನೀಡಬಹುದಿತ್ತು. ಕಾರ್ಖಾನೆಯ ಮಾಲೀಕರಿಂದ ಅಥವಾ ಸ್ಥಳೀಯ ಆಡಳಿತದಿಂದಲೂ ನಮಗೆ ಯಾವುದೇ ಸಹಾಯ ಹಸ್ತವಿಲ್ಲ" ಎಂದು ಮಾಂಝಿ ಹೇಳುತ್ತಾರೆ. ಆ ವೇಳೆ, ತಮಿಳುನಾಡು ಮತ್ತು ಬಿಹಾರದ ನಡುವೆ ಸಂಚರಿಸುವ ವಲಸೆ ಕಾರ್ಮಿಕರಿಗಾಗಿ ಮೀಸಲಿರುವ 'ಶ್ರಮಿಕ್ ಸ್ಪೆಷಲ್' ರೈಲುಗಳ ಬಗ್ಗೆ ತಮ್ಮ ಕಡೆಯಾಗಲಿ ಅಥವಾ ಇತರರ ಬಳಿಯಾಗಲಿ ಯಾವುದೇ ಮಾಹಿತಿ ಇರಲಿಲ್ಲ. “ನಾವು ಹೇಗಾದರೂ ಮಾಡಿ ನಮ್ಮ ಮನೆ ತಲುಪಬೇಕು. ನಾವು ಈಗ ಕೊರೊನಾವೈರಸ್ ಅಥವಾ ಬಿಸಿಲಿನ ತಾಪಕ್ಕೆ ಹೆದರುವುದಿಲ್ಲ. ಮನೆಗೆ ತಲುಪಲು 14 ದಿನಗಳು ಹಿಡಿಯಬಹುದು, ಆದರೆ ನಾವು ನಡೆಯುತ್ತೇವೆ" ಎನ್ನುವ ಧೃಢ ನಿರ್ಧಾರವನ್ನು ಅವರು ವ್ಯಕ್ತಪಡಿಸಿದರು.

ತನ್ನ ಗ್ರಾಮ ತುಲಾ ಚಕ್‌ನಲ್ಲಿ, ಮಾಂಝಿ ತನ್ನ ಮೂವರು ಸಹೋದರರೊಂದಿಗೆ ತಮ್ಮ ಕುಟುಂಬದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು, ಅಲ್ಲಿ ಅವರು ಸಾಮಾನ್ಯವಾಗಿ ಗೋಧಿ ಮತ್ತು ಮೆಕ್ಕೆಜೋಳವನ್ನು ಬೆಳೆಯುತ್ತಾರೆ. ಆದರೆ 2 ಬಿಘಾ (1.2 ಎಕರೆ) ಭೂಮಿಯಿಂದ ಬರುವ ಅವರ ಆದಾಯದ ಪಾಲು ತಿರುಪ್ಪೂರಿನಲ್ಲಿ ಗಳಿಸಿದ್ದಕ್ಕಿಂತ ಕಡಿಮೆ, ಇದೇ ಕಾರಣಕ್ಕಾಗಿಯೇ ಅವರು ದುಡಿಯಲು ಮನೆಯನ್ನು ತೊರೆದಿರುವುದಾಗಿ ಹೇಳುತ್ತಾರೆ. ಈಗ ಮಾಂಝಿ ಅನುಪಸ್ಥಿತಿಯಲ್ಲಿ, ಗ್ರಾಮದಲ್ಲಿರುವ ಜಮೀನನ್ನು ಅವರ 26 ವರ್ಷದ ಪತ್ನಿ ಕಿರಣ್ ದೇವಿ ನೋಡಿಕೊಳ್ಳುತ್ತಾರೆ.

Amarit Manjhi in Tiruppur, Tamil Nadu (left), where he's been stuck along with others from Gaya (right) during the lockdown
PHOTO • Amarit Manjhi
Amarit Manjhi in Tiruppur, Tamil Nadu (left), where he's been stuck along with others from Gaya (right) during the lockdown
PHOTO • Amarit Manjhi

ಎಡಕ್ಕೆ: ತಮಿಳುನಾಡಿನ ತಿರುಪ್ಪೂರಿನಲ್ಲಿರುವ ಅಮರಿತ್ ಮಾಂಝಿ,  ಬಲಕ್ಕೆ: ಗಯಾದಿಂದ ಬಂದಿರುವ ಕಾರ್ಮಿಕರಲ್ಲೋಬ್ಬರಾಗಿರುವ ಅವರು ಲಾಕ್ ಡೌನ್ ನಲ್ಲಿ ಇತರರೊಂದಿಗೆ ಸಿಲುಕಿಕೊಂಡಿದ್ದಾರೆ.

ಕಾರ್ಖಾನೆಯ ಮಾಲೀಕರು ಮೇ 19ರಿಂದ ಪಡಿತರವನ್ನು ಕಳುಹಿಸಲು ಪ್ರಾರಂಭಿಸಿದ ನಂತರ ಮಾಂಝಿ ಮತ್ತು ಅವರ ಸಹೋದ್ಯೋಗಿಗಳ ಪರಿಸ್ಥಿತಿ ಸುಧಾರಿಸಿತು. ಅವನ ಬಳಿ ಕೇವಲ 500 ರೂಪಾಯಿಗಳು ಮಾತ್ರ ಉಳಿದಿದೆ, ಮತ್ತು ಕಾರ್ಖಾನೆ ಮತ್ತೆ ತೆರೆಯುತ್ತದೆ, ಇದರಿಂದ ಅವರು ಮತ್ತೆ ಸಂಪಾದಿಸಬಹುದು ಮತ್ತು ಹಣವನ್ನು ಮನೆಗೆ ಕಳುಹಿಸಬಹುದು ಎನ್ನುವ ನಿರೀಕ್ಷೆಯಲ್ಲಿ ಅವರಿದ್ದಾರೆ.

ಘತೇರಾ ಗ್ರಾಮದಲ್ಲಿ ಯಾದವ್ ಈಗ ಪರ್ಯಾಯ ಆಯ್ಕೆಗಳನ್ನು ಪರಿಗಣಿಸುತ್ತಿದ್ದಾರೆ." ನಾನು ನರೇಗಾದ ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸವನ್ನು ಎದುರು ನೋಡುತ್ತಿದ್ದೇನೆ.ಅದೂ ಇನ್ನೂ ಇಲ್ಲಿ ಆರಂಭವಾಗಬೇಕಿದೆ" ಎಂದು ಅವರು ಹೇಳುತ್ತಾರೆ.

ವಾರಣಾಸಿಯಲ್ಲಿನ ದಿ ಫ್ಲೇವರ್ಸ್ ರೆಸ್ಟೋರೆಂಟ್‌ನ ಮಾಲೀಕ ಮತ್ತು ಯಾದವ್ ಅವರ ಮಾಲೀಕ ಅಭಿಷೇಕ್ ಕುಮಾರ್ ಅವರ ಎಲ್ಲಾ 16 ಸಿಬ್ಬಂದಿಗಳು ಬಿಹಾರ ಮತ್ತು ತಮಿಳುನಾಡಿನ ತಮ್ಮ ಊರುಗಳಿಗೆ ತೆರಳಿದ್ದಾರೆ ಎಂದು ಹೇಳುತ್ತಾರೆ. "ಬಹುತೇಕ ಬಾಣಸಿಗರು ಹಿಂತಿರುಗಲು ನಿರಾಕರಿಸಿದ್ದಾರೆ. ಒಂದು ವೇಳೆ ಈಗ ಲಾಕ್ ಡೌನ್ ತೆಗೆದರೂ ಸಹ, ವ್ಯಾಪಾರನ್ನು ಶೀಘ್ರದಲ್ಲೇ ಮರುಪ್ರಾರಂಭಿಸಲು ನನಗೆ ಸಾಧ್ಯವಾಗುವುದಿಲ್ಲ" ಎಂದು ಹೇಳುತ್ತಾರೆ.

ಪಾಸ್ವಾನ್ ಕೂಡ ಮಾಯಾಪುರದಲ್ಲಿ ಮನರೇಗಾ (MGNREGA) ಕಾರ್ಯಸ್ಥಳಗಳಲ್ಲಿ ಕೆಲಸ ಪ್ರಾರಂಭವಾಗುವುದಕ್ಕೆ ಕಾಯುತ್ತಿದ್ದಾರೆ, ಮತ್ತು ಅವರು ಸ್ಥಳೀಯ ಹೋಟೆಲ್ ಗಳಲ್ಲಿ ಕೆಲಸ ಹುಡುಕುತ್ತಿದ್ದಾರೆ. ಮಾಯಾಪುರದಲ್ಲಿರುವ ಅವರ ಕುಟುಂಬದ ಜಮೀನಿನಿಂದ ಬರುವ ಪಾಲನ್ನು ಜಂಟಿ ಕುಟುಂಬದ 10 ಸದಸ್ಯರ ನಡುವೆ ವಿಂಗಡಿಸಿದರೆ ಅದರಿಂದ ಬರುವ ಆದಾಯ ತುಂಬಾ ಕಡಿಮೆ, ಇದರಿಂದ ತಮ್ಮ ಕುಟುಂಬವನ್ನು ನಿಭಾಯಿಸುವುದು ಕಷ್ಟಕರ' ಎಂದು ಅವರು ಹೇಳುತ್ತಾರೆ.

ಅವಕಾಶವು ಅವರನ್ನು ಮತ್ತೆ ವಾರಣಾಸಿಗೆ ಕರೆದುಕೊಂಡುಹೋಗಬಹುದು ಎನ್ನುವ ಭರವಸೆ ಇನ್ನೂ ಇದೆ. ಅವರು ಮತ್ತು ಸಬಿತಾ ತಮ್ಮ ವಸ್ತುಗಳನ್ನು ತಮ್ಮ ಬಾಡಿಗೆ ಮನೆಯಲ್ಲಿ ಬಿಟ್ಟಿದ್ದಾರೆ. "ಬಾಡಿಗೆ ಕೈಬಿಡಲು ಮಾಲೀಕರು ಒಪ್ಪಿಲ್ಲ. ನಾನು ಮತ್ತೆ ಹಿಂತಿರುಗಿದಾಗ ನಾನಿಲ್ಲದ ಪ್ರತಿ ತಿಂಗಳದ 2,000 ರೂ.ಬಾಡಿಗೆಯನ್ನು ಅವರಿಗೆ ಪಾವತಿಸಬೇಕಾಗುತ್ತದೆ," ಎಂದು ಪಾಸ್ವಾನ್ ಹೇಳುತ್ತಾರೆ.

ಅಲ್ಲಿಯವರೆಗೆ ಅವರು ರಸ್ತೆ ನಿರ್ಮಾಣದ ಕೆಲಸಗಳನ್ನು ಅಥವಾ ತೆಗ್ಗು ತೆಗೆಯುವ ಕೆಲಸವನ್ನು ಮಾಡುವುದಾಗಿ ಹೇಳುತ್ತಾರೆ. “ನನಗೆ ಬೇರೆ ಆಯ್ಕೆ ಇದೆಯೇ?” ಎಂದು ಪ್ರಶ್ನಿಸುವ ಅವರು “ನನ್ನ ಮಕ್ಕಳ ಆಹಾರಕ್ಕಾಗಿ ಸಿಕ್ಕಿರುವ ಯಾವುದೇ ಕೆಲಸವನ್ನು ನಾನು ಮಾಡಬೇಕಾಗಿದೆ" ಎನ್ನುತ್ತಾರೆ.

ಅನುವಾದ - ಎನ್ . ಮಂಜುನಾಥ್

Rituparna Palit

Rituparna Palit is a student at the Asian College of Journalism, Chennai.

Other stories by Rituparna Palit
Translator : N. Manjunath