ವ್ಯಕ್ತಿಯೊಬ್ಬ ತನ್ನ ಏಳು ವರ್ಷದ ಮಗಳೊಂದಿಗೆ ರಾಜ್ಯದಾದ್ಯಂತ ಸಾವಿರಾರು ವಾರ್ಕರಿಗಳು ಭಗವಾನ್ ವಿಠ್ಠಲನ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ಸಾಗುವ ವಾರ್ಷಿಕ ತೀರ್ಥಯಾತ್ರೆಯಾದ ಆಷಾಢ ವಾರಿ ಯಾತ್ರೆಗೆ ಹೋಗುತ್ತಿದ್ದ.  ದಾರಿಯಲ್ಲಿ ಅವರು ಮೈಸ್‌ಗಾಂವ್‌ ಎನ್ನುವಲ್ಲಿ ತಂಗಲು ತೀರ್ಮಾನಿಸಿದರು. ಸಂಜೆಯಾಗುತ್ತಿದ್ದಂತೆ ಗಾಳಿಯಲ್ಲಿ ಕೀರ್ತನೆಯ ಅಲೆ ಹಾಯ್ದು ಬರತೊಡಗಿತು. ಪುಟ್ಟ ಹುಡುಗಿಗೆ ಖಾಂಜಿರಿ (ಡಫ್ಲಿ) ದನಿ ಕೇಳಿ ತನಗೂ ಅದನ್ನು ಕೇಳಬೇಕೆನ್ನಿಸಿತು. ಅವಳು ತನ್ನ ಅಪ್ಪನನ್ನು ಈ ಕುರಿತು ಪೀಡಿಸತೊಡಗಿದಳು.

ಆದರೆ ಅವಳ ತಂದೆ ಹಿಂಜರಿಯುತ್ತಿದ್ದರು. “ಇಲ್ಲಿನ ಜನರು ನಮ್ಮಂತಹ ಮಹರ್‌ ಮತ್ತು ಮಾಂಗ್‌ ಜನರನ್ನು ಮುಟ್ಟುವುದಿಲ್ಲ” ಎಂದು ಮಗಳಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದರು. “ಅವರು ನಮ್ಮನ್ನು ನಿಷ್ಪ್ರಯೋಜಕರಂತೆ ಕಾಣುತ್ತಾರೆ. ನಮ್ಮನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ.” ಆದರೆ ಬಾಲಕಿ ತನ್ನ ಹಟ ಬಿಡಲಿಲ್ಲ. ಕೊನೆಗೆ ತಂದೆ ದೂರ ನಿಂತು ವೀಕ್ಷಿಸುವ ಒಪ್ಪಂದದೊಂದಿಗೆ ಮಗಳನ್ನು ಅಲ್ಲಿಗೆ ಕರೆದೊಯ್ಯುತ್ತಾರೆ. ಸಂಗೀತದ ಅಲೆಯನ್ನು ಅನುಸರಿಸಿ ಅಪ್ಪ ಮಗಳಿಬ್ಬರೂ ಚಪ್ಪರ ಇರುವ ಕಡೆ ಸಾಗುತ್ತಾರೆ. ಅಲ್ಲಿ ಮಹಾರಾಜ್‌ ಖಂಜರಿ ನುಡಿಸುವುದನ್ನು ಅಪ್ಪ ಮಗಳಿಬ್ಬರೂ ತನ್ಮಯರಾಗಿ ನೋಡುತ್ತಿರುತ್ತಾರೆ. ಅದನ್ನು ನೋಡುತ್ತಾ ಬಾಲಕಿಗೆ ವೇದಿಕೆಯ ಮೇಲೆ ಹೋಗುವ ಆಸೆಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ಕೊನೆಗೆ ಅವಳು ವೇದಿಕೆ ಮೇಲೆ ಹೋಗಿಯೇ ಬಿಡುತ್ತಾಳೆ.

"ನಾನು ಒಂದು ಭರೂದ್ (ಸಾಮಾಜಿಕ ಜ್ಞಾನೋದಯಕ್ಕಾಗಿ ಸಂಯೋಜಿಸಿದ ಹಾಡುಗಳಲ್ಲಿ ವಿಡಂಬನೆ ಮತ್ತು ಹಾಸ್ಯವನ್ನು ಬಳಸುವ ಪ್ರಾಚೀನ ಕಾವ್ಯದ ಒಂದು ರೂಪ) ಹಾಡಲು ಬಯಸುತ್ತೇನೆ" ಎಂದು ಅವಳು ವೇದಿಕೆಯಲ್ಲಿದ್ದ ಸಂತ ಪ್ರದರ್ಶಕರ ಬಳಿ ಹೇಳುತ್ತಾಳೆ. ಪ್ರೇಕ್ಷಕರು ದಿಗ್ಭ್ರಮೆಗೊಂಡಿದ್ದಾರೆ. ಆದರೆ ಮಹಾರಾಜರು ಅವಳಿಗೆ ಹಾಡಲು ಅವಕಾಶ ನೀಡುತ್ತಾರೆ. ಮತ್ತು ಮುಂದಿನ ಕೆಲವು ನಿಮಿಷಗಳವರೆಗೆ, ಯುವತಿಯು ಲಯಕ್ಕಾಗಿ ಲೋಹದ ಕೊಡವೊಂದನ್ನು ಬಾರಿಸುತ್ತಾ ವೇದಿಕೆಯನ್ನು ತನ್ನದಾಗಿಸಿಕೊಳ್ಳುತ್ತಾಳೆ, ಅಂದು ಅವಳು ಅಲ್ಲಿ ಅದೇ ಮಹಾರಾಜರು ಬರೆದು ಸಂಯೋಜಿಸಿದ ಹಾಡನ್ನು ಹಾಡುತ್ತಾಳೆ.

माझा रहाट गं साजनी
गावू चौघी जनी
माझ्या रहाटाचा कणा
मला चौघी जनी सुना

ಬಾವಿಯ ಮೇಲಿದೆ ಮರದ ರಾಟೆ
ನಾವು ನಾಲ್ವರು ಜೊತೆಗೂಡಿ ಹಾಡೋಣ ಚಿನ್ನಾ
ಮರದ ರಾಟೆ ಮತ್ತು ಅದರಲ್ಲಿನ ಕಡ್ಡಿಗಳಂತೆ
ನನಗೂ ನಾಲ್ಕು ಸೊಸೆಯಂದಿರು

ಈ ಬಾಲ ಗಾಯಕಿಯ ಹಾಡಿನಿಂದ ಪ್ರಭಾವಿತರಾದ ಸಂತ ಆಕೆಗೆ ತನ್ನ ಖಂಜಿರಿಯನ್ನು ಉಡುಗೊರೆಯಾಗಿ ನೀಡುತ್ತಾರೆ. “ನಿನಗೆ ಸದಾ ನನ್ನ ಆಶೀರ್ವಾದವಿರುತ್ತದೆ. ನೀನು ಈ ಜಗತ್ತಿಗೆ ಜ್ಞಾನೋದಯ ಮಾಡಿಸುವೆ” ಎಂದು ಹರಸುತ್ತಾರೆ.

ಮೀರಾ ಉಮಾಪ್ ವಿಡಂಬನೆ ಮತ್ತು ರೂಪಕಗಳ ಬಳಕೆಗೆ ಹೆಸರುವಾಸಿಯಾದ ಸಾಂಪ್ರದಾಯಿಕ ಭರೂದ್ ಹಾಡುವ ವೀಡಿಯೊ ವೀಕ್ಷಿಸಿ, ಇದು ಅನೇಕ ವ್ಯಾಖ್ಯಾನಗಳನ್ನು ಹೊಂದಿರುತ್ತದೆ

ಅದು 1975. ತುಕಡೋಜಿ ಮಹಾರಾಜ್ ಅವರು ಗ್ರಾಮೀಣ ಜೀವನದ ಕೆಟ್ಟ ಆಚರಣೆಗಳು ಮತ್ತು ಅಪಾಯಗಳು ಮತ್ತು ಮುಂದಿನ ಹಾದಿಯ ಬಗ್ಗೆ ಗ್ರಾಮ ಗೀತೆಯಲ್ಲಿ ಸಂಕಲಿಸಿದ ಪದ್ಯಗಳಿಗೆ ಹೆಸರುವಾಸಿಯಾಗಿದ್ದರು. ಈಗ 50 ವರ್ಷಗಳ ನಂತರವೂ ಅದೇ ಪುಟ್ಟ ಹುಡುಗಿ ತನ್ನ ಪ್ರದರ್ಶನಗಳಿಂದ ವೇದಿಕೆಗೆ ಬೆಂಕಿ ಹಚ್ಚುತ್ತಾಳೆ. ನೌವಾರಿ ಹತ್ತಿ ಸೀರೆ, ಹಣೆಯ ಮೇಲೆ ದೊಡ್ಡ ಬಿಂದಿ, ಎಡಗೈಯಲ್ಲಿ ದಿಮಡಿ ಎಂಬ ಸಣ್ಣ ವಾದ್ಯವನ್ನು ಹಿಡಿದು, ಮೀರಾ ಉಮಾಪ್ ಭೀಮ್ ಗೀತೆಯನ್ನು ಹಾಡುತ್ತಿದ್ದರೆ, ಅವರ ಬಲಗೈಯ ಬೆರಳುಗಳು ಚರ್ಮದ ಪೊರೆಯ ಮೇಲೆ ಲಯಬದ್ಧವಾಗಿ ಮತ್ತು ಶಕ್ತಿಯುತವಾಗಿ ನೃತ್ಯ ಮಾಡುತ್ತಿರುತ್ತವೆ; ಅವರ ಕೈಗಳಲ್ಲಿನ ಗಾಜಿನ ಬಳೆಗಳು ಅವರು ನುಡಿಸುತ್ತಿರುವ ವಾದ್ಯದ ಅಂಚಿಗೆ ಕಟ್ಟಿದ ಗಂಟೆಗಳೊಂದಿಗೆ ಸೇರಿ ನಾದ ಹೊರಡಿಸುತ್ತವೆ.

खातो तुपात पोळी भीमा तुझ्यामुळे
डोईवरची
गेली मोळी भीमा तुझ्यामुळे
काल
माझी माय बाजारी जाऊन
जरीची
घेती चोळी भीमा तुझ्यामुळे
साखर
दुधात टाकून काजू दुधात खातो
भिकेची
गेली झोळी भीमा तुझ्यामुळे

ಓ ಭೀಮಾ, ನಿನ್ನಿಂದಾಗಿ ಇಂದು ನಾನು ರೊಟ್ಟಿಯನ್ನು ತುಪ್ಪದಲ್ಲಿ ಅದ್ದಿ ತಿನ್ನುತ್ತಿದ್ದೇನೆ
ಸೌದೆ ಹೊರುವ ಕೆಲಸವಿಂದು ನನಗೆ ತಪ್ಪಿದೆ ಓ ಭೀಮಾ ಇದಕ್ಕೆಲ್ಲ ನೀನೇ ಕಾರಣ

ನಿನ್ನ ವಾರದ ಸಂತೆಗೆ ಹೋಗಿದ್ದಳು ನನ್ನ ಅಮ್ಮ
ನನಗೆಂದು ಜರತಾರಿ ರವಿಕೆ ತಂದಳು, ಇದು ಸಾಧ್ಯವಾಗಿದ್ದು ನಿನ್ನಿಂದ ಓ ಭೀಮಾ

ಸಕ್ಕರೆ ಹಾಕಿದ ಹಾಲಿನ ಜೊತೆಗೆ ಗೋಡಂಬಿ ತಿನ್ನುತ್ತಿರುವೆ
ಭಿಕ್ಷಾಟನೆಯಿಂದ ಮುಕ್ತಿ ಹೊಂದಿರುವೆ ಇಂದು, ಇದಕ್ಕೆಲ್ಲ ಕಾರಣ ನೀನೇ ಓ ಭೀಮಾ

*****

ಮೀರಾಬಾಯಿಗೆ ತಾನು ಹುಟ್ಟಿದ ದಿನ ತಿಳಿದಿಲ್ಲ, ಆದರೆ 1965ನೇ ಇಸವಿಯಲ್ಲಿ ಹುಟ್ಟಿದೆ ಎಂದು ಹೇಳುತ್ತಾರೆ. ಅವರು ಮಹಾರಾಷ್ಟ್ರದ ಅಂತರ್ವಾಲಿ ಗ್ರಾಮದ ಬಡ ಮಾತಂಗ್ ಕುಟುಂಬದಲ್ಲಿ ಜನಿಸಿದರು. ರಾಜ್ಯದ ಪರಿಶಿಷ್ಟ ಜಾತಿಗಳಡಿಯಲ್ಲಿ ಪಟ್ಟಿ ಮಾಡಲಾದ ಮಾತಂಗ್ ಜನರನ್ನು ಐತಿಹಾಸಿಕವಾಗಿ 'ಅಸ್ಪೃಶ್ಯರು' ಎಂದು ಪರಿಗಣಿಸಲಾಗುತ್ತದೆ ಮತ್ತು ಜಾತಿ ಶ್ರೇಣಿಯಲ್ಲಿ ಅವರು ಅತ್ಯಂತ ಕೆಳಮಟ್ಟದಲ್ಲಿದ್ದಾರೆ.

ಅವರ ತಂದೆ ವಾಮನರಾವ್ ಮತ್ತು ತಾಯಿ ರೇಷ್ಮಾಬಾಯಿ ಬೀಡ್ ಜಿಲ್ಲೆಯಲ್ಲಿ ಊರಿನಿಂದ ಊರಿಗೆ ಪ್ರಯಾಣಿಸಿ, ಸುಮಧುರ ಭಜನೆ ಮತ್ತು ಅಭಾಂಗ್‌ಗಳನ್ನು ಹಾಡುತ್ತಾ, ಭಿಕ್ಷೆ ಬೇಡುತ್ತಿದ್ದರು. ಹಾಡುವ ಕಲೆಯನ್ನು ಸಂರಕ್ಷಿಸುವ ದಲಿತ ಸಮುದಾಯದ ನಡುವೆ ಅತ್ಯಂತ ಗೌರವಾನ್ವಿತ ಜ್ಞಾನಿಗಳು ಮತ್ತು ಶಿಕ್ಷಕರ ಗುಂಪಾದ 'ಗುರು ಘರಾನಾ'ಕ್ಕೆ ಸೇರಿದ ಕುಟುಂಬವಾಗಿ ಅವರನ್ನು ಸಮುದಾಯದಲ್ಲಿ ಗೌರವಿಸಲಾಗುತ್ತಿತ್ತು. ಹೀಗಾಗಿ ಮೀರಾಬಾಯಿ ಶಾಲೆಗೆ ಹೋಗದಿದ್ದರೂ, ತಮ್ಮ ಹೆತ್ತವರಿಂದ ಪರಂಪರೆಯಾಗಿ ಬಂದ ಅಭಂಗ್, ಭಜನೆ ಮತ್ತು ಕೀರ್ತನೆಗಳ ಶ್ರೀಮಂತ ಸಂಗ್ರಹದೊಂದಿಗೆ ಬೆಳೆದರು.

PHOTO • Vikas Sontate

ದಿಮಡಿ ಮತ್ತು ಖಂಜಿರಿ ನುಡಿಸುವ ಮಹಾರಾಷ್ಟ್ರದ ಏಕೈಕ ಮಹಿಳಾ ಶಾಹೀರ್ ಮೀರಾ ಉಮಾಪ್. ಸಾಂಪ್ರದಾಯಿಕವಾಗಿ ಪುರುಷರು ಮಾತ್ರ ನುಡಿಸುವ ವಾದ್ಯಗಳನ್ನು ನುಡಿಸುವಲ್ಲಿ ಅವರು ಅದ್ಭುತ ಕೌಶಲವನ್ನು ಹೊಂದಿದ್ದಾರೆ

ದಂಪತಿಗಳು ತಮ್ಮ ಎಂಟು ಮಕ್ಕಳನ್ನು ಪೋಷಿಸಲು ಬಹಳ ಕಷ್ಟಪಡುತ್ತಿದ್ದರು - ಐದು ಹೆಣ್ಣು ಮತ್ತು ಮೂರು ಗಂಡು. ಮಕ್ಕಳಲ್ಲಿ ಹಿರಿಯವರಾದ ಮೀರಾಬಾಯಿ ಏಳು ವರ್ಷದವರಾಗುವಷ್ಟರಲ್ಲಿ ಹೆತ್ತವರೊಂದಿಗೆ ಹಾಡಲು ಹೋಗುತ್ತಿದ್ದರು. ವಾಮನರಾವ್ ಏಕತಾರಿ ಮತ್ತು ಅವರ ತಮ್ಮ ಭೌರಾವ್ ದಿಮಡಿ ನಿರ್ವಹಿಸಿದರು. "ನನ್ನ ತಂದೆ ಮತ್ತು ಚಿಕ್ಕಪ್ಪ ಇಬ್ಬರೂ ಒಟ್ಟಿಗೆ ಭಿಕ್ಷೆ ಬೇಡುತ್ತಿದ್ದರು" ಎಂದು ಅವರು ತಮ್ಮ ಹಾಡಿನ ಕಥೆಯನ್ನು ನಮಗೆ ವಿವರಿಸುತ್ತಾರೆ. "ಒಮ್ಮೆ, ಆ ಬೆಳಿಗ್ಗೆಯ ಆದಾಯವನ್ನು ಹಂಚಿಕೊಳ್ಳುವ ವಿಷಯದಲ್ಲಿ ಅವರ ನಡುವೆ ಜಗಳವಾಯಿತು. ಅದು ಅವರು ಬೇರ್ಪಡಲು ನಿರ್ಧರಿಸುವ ಹಂತವನ್ನು ತಲುಪಿತು."

ಆ ದಿನದ ನಂತರ, ಅವರ ಚಿಕ್ಕಪ್ಪ ಬುಲ್ಡಾನಾ ಎನ್ನುವಲ್ಲಿಗೆ ಹೋದರು ಮತ್ತು ಅವರ ತಂದೆ ಮಗಳನ್ನು ತನ್ನೊಂದಿಗೆ ಕರೆದುಕೊಂಡು ಹೋಗತೊಡಗಿದರು. ಉಮಾ ಅವರ ಹಿಂದೆ, ತನ್ನ ಕೋಮಲ ಧ್ವನಿಯಲ್ಲಿ ಹಾಡುತ್ತಿದ್ದರು. ಹೀಗೆ ಹಾಡುತ್ತಾ ಅನೇಕ ಭಕ್ತಿ ಗೀತೆಗಳನ್ನು ಕಲಿತರು. "ನಾನು ಒಂದು ದಿನ ಗಾಯಕಿಯಾಗುತ್ತೇನೆ ಎಂದು ನನ್ನ ತಂದೆ ಯಾವಾಗಲೂ ನಂಬಿದ್ದರು" ಎಂದು ಅವರು ಹೇಳುತ್ತಾರೆ.

ನಂತರ ಅವರು ಕೂಲಿಗಾಗಿ ದನ ಮೇಯಿಸುವ ಕೆಲಸ ಮಾಡುತ್ತಿದ್ದ ದಿನಗಳಲ್ಲಿ ದಿಮಡಿ ಕಲಿಯಲು ಪ್ರಾರಂಭಿಸಿದರು. “ಚಿಕ್ಕವಳಿದ್ದಾಗ ಲೋಹದ ಬಿಂದಿಗೆಗಳೇ ನನ್ನ ಪಾಲಿನ ವಾದ್ಯಗಳಾಗಿದ್ದವು. ನೀರು ತರಲು ಹೋಗುವಾಗ ಕಲ್ಶಿ ಎಂದು ಕರೆಯಲಾಗುವ ಲೋಹದ ಬಿಂದಿಗೆಗಳನ್ನು ಬಾರಿಸುತ್ತಿದ್ದೆ. ಇದೊಂದು ಅಭ್ಯಾಸವಾಯಿತು ನನಗೆ. ನಾನು ಬದುಕಿನಲ್ಲಿ ಎಲ್ಲವನ್ನೂ ಹೀಗೇ ಕಲಿತಿದ್ದು. ಶಾಲೆಗೆ ಹೋಗಿ ಕಲಿತವಳಲ್ಲ ನಾನು. ಏನಾದರೂ ಕೆಲಸ ಮಾಡುತ್ತಲೇ ಕಲಿತವಳು” ಎಂದು ಮೀರಾಬಾಯಿ ಹೇಳುತ್ತಾರೆ.

ಮನೆಯ ಅಕ್ಕಪಕ್ಕದಲ್ಲಿ ಸಾಕಷ್ಟು ಭಜನಾ ತಂಡಗಳಿದ್ದವು. ಮೀರಾಬಾಯಿ ಕೂಡಾ ಆ ತಂಡಗಳನ್ನು ಸೇರಿಕೊಂಡರು. ತಾನೂ ಅವರೊಂದಿಗೆ ಭಜನೆ ಹಾಡಲು ಆರಂಭಿಸಿದರು.

राम नाही सीतेच्या तोलाचा
राम बाई हलक्या दिलाचा

ರಾಮ ಸೀತೆಯಷ್ಟು ದೊಡ್ಡವನಲ್ಲ
ರಾಮನ ಹೃದಯ ಬಹಳ ಸಣ್ಣದು

“ನಾನು ಶಾಲೆಗೆ ಹೋದವಳಲ್ಲ ಆದರೆ ನನಗೆ 40 ಬೇರೆ ಬೇರೆ ರಾಮಾಯಣಗಳು ಬಾಯಿಪಾಠವಾಗಿದೆ. ಶ್ರವಣ ಬಾಲ, ಮಹಾಭಾರತದ ಪಾಂಡವರ ಕತೆ ಮತ್ತು ನೂರಾರು ಕಬೀರರ ದೋಹೆಗಳು ಕೂಡಾ ಗೊತ್ತು. ಎಲ್ಲವೂ ನನ್ನ ಮೆದುಳಿನಲ್ಲಿ ಅಚ್ಚೊತ್ತಿವೆ” ಎಂದು ಅವರು ಹೇಳುತ್ತಾರೆ. ಅವರ ಪ್ರಕಾರ ರಾಮಾಯಣ ಎನ್ನುವುದು ಒಂದು ಕತೆಯಲ್ಲ. ಅದೊಂದು ಜನರು ತಮ್ಮ ಸಂಸ್ಕೃತಿ,ಲೋಕದೃಷ್ಟಿ ಮತ್ತು ತಮ್ಮ ಅವಲೋಕನಗಳಿಗೆ ಅನುಗುಣವಾಗಿ ಸೃಷ್ಟಿಸಿಕೊಂಡಿರುವ ಕತೆ. ಅನೇಕ ಸಮುದಾಯಗಳು ಎದುರಿಸುತ್ತಿರುವ ಐತಿಹಾಸಿಕ ಸವಾಲುಗಳು ಮತ್ತು ಅನಾನುಕೂಲಗಳು ಈ ಮಹಾಕಾವ್ಯಗಳಲ್ಲಿ ಬದಲಾವಣೆಗಳನ್ನು ತಂದಿವೆ. ಇವುಗಳಲ್ಲಿ ಪಾತ್ರಗಳು ಒಂದೇ ಆಗಿರುತ್ತವೆ ಆದರೆ ಕಥೆಗಳು ಬಹು-ವರ್ಣ ಮತ್ತು ಬಹುಮುಖಿಯಾಗಿವೆ.

ಮೀರಾಬಾಯಿ ಕೂಡಾ ಅದನ್ನು ಸ್ಥಾನ-ಮಾನಕ್ಕೆ ತಕ್ಕಂತೆ ಪ್ರಸ್ತುತಪಡಿಸುತ್ತಾರೆ. ಅವರ ನಿರೂಪಣೆ ಮೇಲ್ಜಾತಿಯ ನಿರೂಪಣೆಗಿಂತಲೂ ಭಿನ್ನ. ಅವರ ರಾಮಯಾಣದ ಕೇಂದ್ರ ಬಿಂದು ದಲಿತ, ಮಹಿಳೆ. ರಾಮ ಸೀತೆಯನ್ನು ವನವಾಸದಲ್ಲಿ ಏಕಾಂಗಿಯಾಗಿ ಯಾಕೆ ಬಿಟ್ಟು ಹೋದ? ಅವನು ಶಂಭೂಕ ಮತ್ತು ವಾಲಿಯನ್ನು ಏಕೆ ಕೊಂದ? ಹೀಗೆ ಅವರು ತನ್ನ ಕಥೆಗಳನ್ನು ಪ್ರಸ್ತುತಪಡಿಸುವಾಗ ಮತ್ತು ಮಹಾಕಾವ್ಯದ ಜನಪ್ರಿಯ ಕಥೆಗಳನ್ನು ತಾರ್ಕಿಕವಾಗಿ ಅರ್ಥೈಸುವಾಗ ತನ್ನ ಪ್ರೇಕ್ಷಕರ ಮುಂದೆ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. "ಈ ಕಥೆಗಳನ್ನು ಪ್ರಸ್ತುತಪಡಿಸಲು ನಾನು ಹಾಸ್ಯವನ್ನು ಸಹ ಬಳಸುತ್ತೇನೆ" ಎಂದು ಅವರು ಹೇಳುತ್ತಾರೆ.

PHOTO • Ramdas Unhale
PHOTO • Labani Jangi

ಎಡಕ್ಕೆ: ಮೀರಾ ಉಮಾಪ್ ಅವರು ಏಳು ವರ್ಷದವರಿದ್ದಾಗ ಪ್ರದರ್ಶನವೊಂದರಲ್ಲಿ ಸಂತ ಕವಿ ತುಕ್ಡೋಜಿ ಮಹಾರಾಜ್ ಅವರು ಉಡುಗೊರೆಯಾಗಿ ನೀಡಿದ ಖಂಜಿರಿಯೊಂದಿಗೆ. ಬಲ: ಮೀರಾಬಾಯಿ ನುಡಿಸುವ ಮರದ ವರ್ತುಲ ಮತ್ತು ಚರ್ಮದ ಪೊರೆಯಿಂದ ಮಾಡಿದ ಸಣ್ಣ ವಾದ್ಯವಾದ ದಿಮಡಿಯ ಚಿತ್ರ. ಖಿಂಜರಿ, ದಿಮಡಿಗಿಂತ ಭಿನ್ನವಾಗಿ ಹೊರ ವರ್ತುಲದಲ್ಲಿ ಹೆಚ್ಚುವರಿ ಲೋಹದ ಫಲಕಗಳು ಅಥವಾ ಘುಂಗ್ರೂಗಳನ್ನು ಹೊಂದಿರುತ್ತದೆ. ಜಾನಪದ ಕಲಾವಿದರು ದೇವತೆಗಳ ಕಥೆಗಳನ್ನು ನಿರೂಪಿಸುವಾಗ ಇದನ್ನು ಬಳಸುತ್ತಾರೆ ಮತ್ತು ಇದನ್ನು ಅವರ ಆರಾಧನೆಯ ಅತ್ಯಗತ್ಯ ಭಾಗವೆಂದು ಪರಿಗಣಿಸಲಾಗುತ್ತದೆ

ಸಂಗೀತದ ಕುರಿತಾದ ಆಳವಾದ ಪ್ರಜ್ಞೆ ಮತ್ತು ತಂತ್ರ ಮತ್ತು ಪ್ರಸ್ತುತಿಯ ಉತ್ತಮ ತಿಳುವಳಿಕೆಯೊಂದಿಗೆ ಮೀರಾಬಾಯಿಯ ಸಂಗೀತವು ತನ್ನದೇ ಆದ ಉನ್ನತ ಸ್ತರವೊಂದನ್ನು ಕಂಡುಕೊಂಡಿದೆ. ವಿದರ್ಭ ಮತ್ತು ಮರಾಠಾವಾಡದಲ್ಲಿ ಅಪಾರ ಅನುಯಾಯಿಗಳನ್ನು ಹೊಂದಿರುವ ಪ್ರಭಾವಶಾಲಿ ಸಂತ ಕವಿ ಮತ್ತು ಸುಧಾರಕ ತುಕಾಡೋಜಿ ಮಹಾರಾಜ್ ಅವರ ಹೆಜ್ಜೆಗಳು ಮತ್ತು ಶೈಲಿಯನ್ನು ಅನುಸರಿಸಿದ ಮೀರಾಬಾಯಿ ತಾನು ಕೂಡ ಅನೇಕ ಎತ್ತರಗಳನ್ನು ಏರಿದ್ದಾರೆ.

ತುಕಾಡೋಜಿ ಮಹಾರಾಜ್ ತಮ್ಮ ಕೀರ್ತನೆ ಪ್ರದರ್ಶನಗಳಲ್ಲಿ ಖಂಜಿರಿ ನುಡಿಸುತ್ತಿದ್ದರು. ಅವರ ಶಿಷ್ಯ ಸತ್ಯಪಾಲ್ ಚಿಂಚೋಳಿಕರ್ ಸಪ್ತ-ಖಂಜಿರಿ ನುಡಿಸುತ್ತಾರೆ, ಇದರಲ್ಲಿ ಏಳು ಖಂಜಿರಿಗಳು ವಿಭಿನ್ನ ಸ್ವರಗಳು ಮತ್ತು ಶಬ್ದಗಳನ್ನು ಹೊರಡಿಸುತ್ತವೆ. ಸಾಂಗ್ಲಿಯ ದೇವಾನಂದ ಮಾಲಿ ಮತ್ತು ಸತಾರಾದ ಮಲಾರಿ ಗಜಭರೆ ಕೂಡ ಇದೇ ವಾದ್ಯವನ್ನು ನುಡಿಸುತ್ತಿದ್ದರು. ಮೀರಾಬಾಯಿಯ ಉಮಾಪ್ ವಿಶೇ಼ಷತೆಯಿರುವುದು ಈ ರೀತಿ ಖಂಜಿರಿ ನುಡಿಸುವ ಏಕೈಕ ಮಹಿಳೆ ಎನ್ನುವುದರಲ್ಲಿ ಮತ್ತು ಅವರು ಇದರಲ್ಲಿ ಹೊಂದಿರುವ ಕೌಶಲವೂ ಅವರನ್ನು ಇತರರಿಂದ ವಿಶೇಷವಾಗಿಸುತ್ತದೆ.

ಹಾಡುಗಳನ್ನು ಬರೆಯುವುದರ ಜೊತೆಗೆ ದಫ್ (ಶಾಹಿರರು ಹೆಚ್ಚಾಗಿ ಬಳಸುವ ವಾದ್ಯ) ನುಡಿಸುತ್ತಿದ್ದ ಲಾತೂರಿನ ಶಾಹಿರ್ ರತ್ನಾಕರ್ ಕುಲಕರ್ಣಿ ಮೀರಾಬಾಯಿ ಖಂಜಿರಿಯನ್ನು ಬಹಳ ಕೌಶಲದಿಂದ ನುಡಿಸುವುದನ್ನು ಮತ್ತು ಮಾಧುರ್ಯದಿಂದ ಹಾಡುವುದನ್ನು ಒಮ್ಮೆ ನೋಡಿದರು. ನಂತರ ಅವರು ಶಾಹಿರಿ (ಸಾಮಾಜಿಕ ಜ್ಞಾನದ ಹಾಡುಗಳು) ಹಾಡುವಂತೆ ಪ್ರೇರೇಪಿಸಲು ನಿರ್ಧರಿಸಿದರು. ಮೀರಾಬಾಯಿ 20 ವರ್ಷದವರಿದ್ದಾಗ ಶಾಹಿರಿ ಕ್ಷೇತ್ರಕ್ಕೆ ಪ್ರವೇಶಿಸಿದರು ಮತ್ತು ಬೀಡ್ ಜಿಲ್ಲೆಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದರು.

"ನನಗೆ ಎಲ್ಲಾ ಧಾರ್ಮಿಕ ಗ್ರಂಥಗಳೂ ಬಾಯಿಪಾಠವಾಗಿದ್ದವು. ಕಥೆ, ಸಪ್ತಾಹ, ರಾಮಾಯಣ, ಮಹಾಭಾರತ, ಸತ್ಯವಾನ್ ಮತ್ತು ಸಾವಿತ್ರಿಯ ಕಥೆ, ಮಹಾದೇವನ ಎಲ್ಲಾ ಹಾಡುಗಳು ಮತ್ತು ಕಥೆಗಳು ಮತ್ತು ಪುರಾಣಗಳು ನನ್ನ ನಾಲಿಗೆಯ ತುದಿಯಲ್ಲಿದ್ದವು" ಎಂದು ಅವರು ಹೇಳುತ್ತಾರೆ. "ನಾನು ಅವುಗಳನ್ನು ನಿರೂಪಿಸಿದ್ದೇನೆ, ಹಾಡಿದ್ದೇನೆ ಮತ್ತು ರಾಜ್ಯದ ಎಲ್ಲಾ ಮೂಲೆಗಳಲ್ಲಿ ಪ್ರದರ್ಶಿಸಿದ್ದೇನೆ. ಆದರೆ ಅದರಿಂದ ನನಗೆ ಎಂದೂ ತೃಪ್ತಿ ಅಥವಾ ತೃಪ್ತಿಯ ಭಾವನೆ ನೀಡಿಲ್ಲ. ಈ ಹಾಡುಗಳು ಅವುಗಳನ್ನು ಕೇಳುವ ಜನರಿಗೆ ಯಾವುದೇ ಹೊಸ ಮಾರ್ಗವನ್ನು ತೋರಿಸಲಿಲ್ಲ.

ಬುದ್ಧ, ಫುಲೆ, ಶಾಹು, ಅಂಬೇಡ್ಕರ್, ತುಕಡೋಜಿ ಮಹಾರಾಜ್ ಮತ್ತು ಗಾಡ್ಗೆ ಬಾಬಾ ಅವರು ಬಹುಜನ ಸಮುದಾಯಗಳ ಸಾಮಾಜಿಕ ಸಮಸ್ಯೆಗಳು ಮತ್ತು ಅಸ್ವಸ್ಥತೆಯ ಬಗ್ಗೆ ಮಾತನಾಡಿದವರು. ಅವರು ಮೀರಾಬಾಯಿಯ ಹೃದಯವನ್ನು ಸ್ಪರ್ಶಿಸಿದರು. "ವಿಜಯಕುಮಾರ್ ಗವಾಯಿ ನನಗೆ ಮೊದಲ ಭೀಮ್ ಗೀತೆ ಕಲಿಸಿದರು. ಮೊದಲ ಬಾರಿಗೆ ನಾನು ಹಾಡಿದ್ದು ವಾಮನ್‌ ದಾದಾ ಅವರ ಹಾಡನ್ನು" ಎಂದು ಮೀರಾಬಾಯಿ ನೆನಪಿಸಿಕೊಳ್ಳುತ್ತಾರೆ.

पाणी वाढ गं माय, पाणी वाढ गं
लयी नाही मागत भर माझं इवलंसं गाडगं
पाणी वाढ गं माय, पाणी वाढ गं

ನೀರು ಕೊಡಿ ನನಗೆ, ನೀರು ಕೊಡಿ ನನಗೆ
ಹೆಚ್ಚೇನೂ ಕೇಳುವುದಿಲ್ಲ ನಾನು, ನನ್ನ ಸಣ್ಣ ಗಡಿಗೆ ತುಂಬುವಷ್ಟು ನೀರು ಕೊಡಿ ನನಗೆ
ನೀರು ಕೊಡಿ ನನಗೆ, ನೀರು ಕೊಡಿ ನನಗೆ

"ಆ ದಿನದಿಂದ ನಾನು ಎಲ್ಲಾ ಪೋಠಿ ಪುರಾಣದ (ಗ್ರಾಂಥಿಕ ಜ್ಞಾನದ) ಹಾಡುಗಳನ್ನು ಹಾಡುವುದನ್ನು ನಿಲ್ಲಿಸಿ ಭೀಮ್ ಗೀತೆಯನ್ನು ಹಾಡಲು ಪ್ರಾರಂಭಿಸಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ಶತಮಾನೋತ್ಸವದ ವರ್ಷವಾದ 1991ರಲ್ಲಿ ಅವರು ಭೀಮ್ ಗೀತೆಗೆ ತಮ್ಮನ್ನು ಸಮರ್ಪಿಸಿಕೊಂಡರು.  ಬಾಬಾ ಸಾಹೇಬ್ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ ಅವರ ಸಂದೇಶವನ್ನು ಹರಡುವ ಹಾಡುಗಳನ್ನು ಅವರು ಹಾಡುತ್ತಿದ್ದರು. "ಜನರು ಅದನ್ನು ಇಷ್ಟಪಟ್ಟರು ಮತ್ತು ಬಹಳ ಉತ್ಸಾಹದಿಂದ ಪ್ರತಿಕ್ರಿಯಿಸಿದರು" ಎಂದು ಶಾಹೀರ್ ಮೀರಾಬಾಯಿ ಹೇಳುತ್ತಾರೆ.

ಮೀರಾ ಉಮಾಪ್ ದನಿಯಲ್ಲಿ ಭೀಮ್ ಗೀತೆಯನ್ನು ಕೇಳಿ

ಶಾ ಹೀರ್ ಎನ್ನುವುದು 'ಶಾಯರ್' ಅಥವಾ 'ಶೇರ್' ಎನ್ನುವ ಫಾರ್ಸಿ ಪದದಿಂದ ಬಂದಿದೆ. ಮಹಾರಾಷ್ಟ್ರದ ಗ್ರಾಮೀಣ ಪ್ರದೇಶಗಳಲ್ಲಿ ಶಾಹಿರರು ಪೊವಾಡಾ ಎಂದು ಕರೆಯಲ್ಪಡುವ ಆಡಳಿತಗಾರರನ್ನು ವೈಭವೀಕರಿಸುವ ಹಾಡುಗಳನ್ನು ಬರೆದಿದ್ದಾರೆ ಮತ್ತು ಹಾಡಿದ್ದಾರೆ. ಆತ್ಮಾರಾಮ್ ಸಾಳ್ವೆ ಖಂಜಿರಿಯೊಂದಿಗೆ, ದಾದು ಸಾಳ್ವೆ ಹಾರ್ಮೋನಿಯಂನೊಂದಿಗೆ ಮತ್ತು ಕಾಡುಬಾಯಿ ಖಾರತ್ ಏಕತಾರಿ ಬಳಸಿ ತಮ್ಮ ಹಾಡುಗಳ ಮೂಲಕ ದಲಿತ ಪ್ರಜ್ಞೆಯನ್ನು ಹೆಚ್ಚಿಸಿದ್ದಾರೆ. ಇಂತಹ ಅನೇಕ ಶಾಹಿರರು ಇದ್ದಾರೆ. ಮೀರಾಬಾಯಿ ತನ್ನ ದಿಮಡಿ ಜೊತೆ ಹಾಡುವುದರೊಂದಿಗೆ ಮಹಾರಾಷ್ಟ್ರದ ಖ್ಯಾತ ಮಹಿಳಾ ಶಾಹಿರರ ಪಟ್ಟಿಗೆ ಸೇರುತ್ತಾರೆ. ಅಲ್ಲಿಯವರೆಗೆ ದಿಮಡಿಯನ್ನು ಯುದ್ಧ ವಾದ್ಯವೆಂದು ಪರಿಗಣಿಸಲಾಗಿತ್ತು, ಇದನ್ನು ಪುರುಷರು ಮಾತ್ರ ಬಾರಿಸುತ್ತಿದ್ದರು. ಮೀರಾಬಾಯಿ ದಿಮಡಿ ಬಾರಿಸುವುದರೊಂದಿಗೆ ಹಳೆಯ ಸಂಪ್ರದಾಯವೊಂದನ್ನು ಕೊನೆಗೊಳಿಸಿದರು.

ಅವರು ವಾದ್ಯವನ್ನು ನುಡಿಸುತ್ತ ಹಾಡುವುದನ್ನು ಕೇಳುವುದೇ ಒಂದು ಅನುಭೂತಿ. ವಾದ್ಯದ ವಿವಿಧ ಭಾಗಗಳ ಮೇಲೆ ಕೈಯಾಡಿಸಿ ವಿವಿಧ ಸ್ವರಗಳನ್ನು ಹೊರಡಿಸಿ ಅವರು ಪೊವಾಡ, ಕೀರ್ತನೆ, ಭಜನೆ ಮುಂತಾದವುಗಳನ್ನು ಹಾಡುತ್ತಾರೆ. ನಿಧಾನಗತಿಯಲ್ಲಿ ವೇಗವನ್ನು ಪಡೆಯುವ ಅವರ ಹಾಡುಗಾರಿಕೆಯನ್ನು ಕೇಳುವುದೆಂದರೆ ಅದೊಂದು ವಿಶೇಷ ಅನುಭವ. ಅವರ ಸಮರ್ಪಣೆಯಿಂದಾಗಿಯೇ ಖಂಜಿರಿ ಮತ್ತು ದಿಮಡಿಯಂತಹ ವಾದ್ಯಗಳ ಕಲೆ ಜೀವಂತವಾಗಿ ಉಳಿದಿವೆ.

ಮಹಾರಾಷ್ಟ್ರದ ಅನೇಕ ಸಂತ ಕವಿಗಳು ಬಳಸುವ ಜಾನಪದ ರೂಪವಾದ ಭರೂದ್  ಪ್ರಕಾರವನ್ನು ಹಾಡುವ ಕೆಲವೇ ಮಹಿಳಾ ಶಾಹಿರರಲ್ಲಿ ಮೀರಾಬಾಯಿ ಒಬ್ಬರು. ಭರೂದ್ ಪ್ರಕಾರದಲ್ಲಿ ಎರಡು ವಿಧಗಳಿವೆ - ಧರ್ಮ ಮತ್ತು ಆಧ್ಯಾತ್ಮಿಕತೆಯ ಸುತ್ತ ಸುತ್ತುವ ಭಜನಿ ಭರೂದ್ ಮತ್ತು ಪುರುಷರು ಮಹಿಳೆಯರಂತೆ ವೇಷ ಧರಿಸಿ ವೇದಿಕೆಯ ಮೇಲೆ ಪ್ರದರ್ಶನ ನೀಡುವ ಸೋಂಗಿ ಭರೂದ್. ಸಾಮಾನ್ಯವಾಗಿ ಪುರುಷರು ಐತಿಹಾಸಿಕ ಮತ್ತು ಸಾಮಾಜಿಕ ವಿಷಯಗಳ ಮೇಲೆ ಪೊವಾಡಾಗಳನ್ನು ಮತ್ತು ಭರೂದ್ ಹಾಡುತ್ತಾರೆ. ಆದರೆ ಮೀರಾಬಾಯಿ ಈ ವಿಭಜನೆಗೆ ಸವಾಲೊಡ್ಡಿದರು ಮತ್ತು ಎಲ್ಲಾ ಕಲಾ ಪ್ರಕಾರಗಳನ್ನು ಒಂದೇ ರೀತಿಯ ಹುರುಪು ಮತ್ತು ಬಲದಿಂದ ಪ್ರದರ್ಶಿಸಲು ಪ್ರಾರಂಭಿಸಿದರು. ಹಾಗೆ ನೋಡಿದರೆ, ಅವರ ಗಾಯನಗಳು ಇತರ ಕೆಲವು ಪುರುಷ ಗಾಯಕರಿಗಿಂತಲೂ ಹೆಚ್ಚು ಜನಪ್ರಿಯವಾಗಿವೆ'.

ದಿಮಡಿ, ಹಾಡುಗಳು, ನಾಟಕ ಮತ್ತು ಪ್ರೇಕ್ಷಕರಿಗೆ ಸಂದೇಶವನ್ನು ನೀಡುವ ಪ್ರದರ್ಶನಗಳು ಮೀರಾಬಾಯಿಗೆ ಮನರಂಜನೆಯನ್ನು ಮೀರಿದ ಸಂಗತಿ.

*****

ಈ ದೇಶದಲ್ಲಿ ಕಲೆಯು ಅದರ ಸೃಷ್ಟಿಕರ್ತನ ಜಾತಿಯೊಂದಿಗೆ ಬಹಳ ನಿಕಟ ಸಂಬಂಧ ಹೊಂದಿದೆ ಮತ್ತು ಅದರ ಆಧಾರದ ಮೇಲೆಯೇ ಅದರ ಶ್ರೇಷ್ಟತೆಯನ್ನು ನಿರ್ಣಯಿಸಲಾಗುತ್ತದೆ. ಸಂಗೀತ ಮತ್ತು ಇತರ ಕಲೆಗಳನ್ನು ಇಲ್ಲಿ ಜಾತಿಯನ್ನು ಅನುಸರಿಸಿ ಕಲಿಯಲಾಗುತ್ತದೆ. ದಲಿತೇತರ, ಬಹುಜನೇತರರು ಈ ವಾದ್ಯಗಳಿಗೆ ಸ್ವರಗತಿಯನ್ನು ರಚಿಸಲು ಮತ್ತು ಅನುಸರಿಸಲು ಮತ್ತು ಅವುಗಳನ್ನು ನುಡಿಸಲು ಕಲಿಯಲು ಸಾಧ್ಯವಾಗುತ್ತದೆಯೇ? ಮತ್ತು, ಹೊರಗಿನವರು ದಿಮಡಿ ಅಥವಾ ಸಂಬಲ್ ಅಥವಾ ಜುಂಬರುಕ್ ನುಡಿಸಲು ಪ್ರಯತ್ನಿಸಿದರೂ ಅದಕ್ಕೆ ಬೇಕಾದ ಸ್ವರಗತಿಯ ಸಂಕೇತ ಪಠ್ಯಗಳು ಲಭ್ಯವಿಲ್ಲ.

ಮುಂಬೈ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ವಿದ್ಯಾರ್ಥಿಗಳು ಖಂಜಿರಿ ಮತ್ತು ದಿಮಡಿ ನುಡಿಸುವುದನ್ನು ಕಲಿಯುತ್ತಿದ್ದಾರೆ. ಪ್ರಸಿದ್ಧ ಕಲಾವಿದರಾದ ಕೃಷ್ಣ ಮುಸಲೆ ಮತ್ತು ವಿಜಯ್ ಚವಾಣ್ ಈ ವಾದ್ಯಗಳಿಗೆ ಸ್ವರಗತಿಗಳನ್ನು ರಚಿಸಿದ್ದಾರೆ. ಆದರೆ ಇದು ತನ್ನದೇ ಆದ ಸವಾಲುಗಳನ್ನು ಹೊಂದಿದೆ ಎಂದು ವಿಶ್ವವಿದ್ಯಾಲಯದ ಲೋಕ-ಕಲಾ ಅಕಾಡೆಮಿಯ ನಿರ್ದೇಶಕ ಗಣೇಶ್ ಚಂದನಶಿವೆ ಹೇಳುತ್ತಾರೆ.

PHOTO • Medha Kale
PHOTO • Ramdas Unhale

ಎಡ: ಗಣೇಶ್ ಚಂದನಶಿವೆ, ಮುಂಬೈ ವಿಶ್ವವಿದ್ಯಾಲಯದ ಲೋಕ ಕಲಾ ಅಕಾಡೆಮಿಯ ನಿರ್ದೇಶಕ. ದಿಮಡಿ ಅಥವಾ ಸಂಬಲ್ ತನ್ನದೇ ಆದ ಸಂಗೀತಶಾಸ್ತ್ರವನ್ನು ಹೊಂದಿಲ್ಲ ಎಂದು ಅವರು ಒಪ್ಪಿಕೊಳ್ಳುತ್ತಾರೆ. 'ಯಾರೂ ಸ್ವರಗತಿಗಳನ್ನು ಬರೆದಿಲ್ಲ ಅಥವಾ ಶಾಸ್ತ್ರೀಯ ವಾದ್ಯದ ಸ್ಥಾನಮಾನವನ್ನು ನೀಡಲು ಬೇಕಾದ "ವಿಜ್ಞಾನ" ವನ್ನು ರಚಿಸಿಲ್ಲ' ಎಂದು ಅವರು ಹೇಳುತ್ತಾರೆ. ಬಲ: ಮೀರಾಬಾಯಿ ಯಾವುದೇ ವಿಜ್ಞಾನ, ಸ್ವರಗತಿ ಅಥವಾ ಅದರ ಸಂಗೀತದ ವ್ಯಾಕರಣವನ್ನು ತಿಳಿಯದೆ ವಾದ್ಯದ ಜ್ಞಾನವನ್ನು ಪಡೆದುಕೊಂಡಿದ್ದಾರೆ

"ಇತರ ಶಾಸ್ತ್ರೀಯ ವಾದ್ಯಗಳನ್ನು ಕಲಿಸುವ ರೀತಿಯಲ್ಲಿ ನೀವು ದಿಮಡಿ, ಸಂಬಲ್ ಅಥವಾ ಖಂಜಿರಿಯನ್ನು ಕಲಿಸಲು ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ. "ತಬಲಾವನ್ನು ಆ ರೀತಿಯಲ್ಲಿ ಕಲಿಸಬಹುದು ಅಥವಾ ಕಲಿಯಬಹುದು ಏಕೆಂದರೆ ನಾವು ಆ ವಾದ್ಯಕ್ಕೆ ಸ್ವರಗತಿಗಳನ್ನು ಹಾಕಬಹುದು. ಜನರು ದಿಮಡಿ ಅಥವಾ ಸಂಬಲ್ ಕಲಿಸಲು ಇದೇ ರೀತಿಯ ಸ್ವರಗತಿಗಳನ್ನು ಬಳಸಲು ಪ್ರಯತ್ನಿಸಿದ್ದಾರೆ. ಆದರೆ ಈ ಎರಡೂ ವಾದ್ಯಗಳು ತನ್ನದೇ ಆದ ಸಂಗೀತಶಾಸ್ತ್ರವನ್ನು ಹೊಂದಿಲ್ಲ. ಶಾಸ್ತ್ರೀಯ ವಾದ್ಯದ ಸ್ಥಾನಮಾನವನ್ನು ನೀಡುವ ಸಂಕೇತಗಳನ್ನು ಯಾರೂ ಬರೆದಿಲ್ಲ ಅಥವಾ 'ವಿಜ್ಞಾನ'ವನ್ನು ರಚಿಸಿಲ್ಲ" ಎಂದು ಅವರು ವಿವರಿಸುತ್ತಾರೆ.

ಯಾವುದೇ ವಿಜ್ಞಾನ, ಸ್ವರಗತಿ ಅಥವಾ ಅದರ ಸಂಗೀತದ ವ್ಯಾಕರಣವನ್ನು ತಿಳಿಯದೆ ಮೀರಾಬಾಯಿಗೆ ದಿಮಡಿ ಮತ್ತು ಖಂಜಿರಿಯಲ್ಲಿ ಪಾಂಡಿತ್ಯ ದೊರೆತಿದೆ. ಕಲಿಯುವಾಗ ಅವರಿಗೆ ಧಾ ಅಥವಾ ತಾ ತಿಳಿದಿರಲಿಲ್ಲ. ಆದರೆ ಅವರ ವೇಗ ಮತ್ತು ಲಯ ಮತ್ತು ಸ್ವರಗಳಲ್ಲಿನ ಪರಿಪೂರ್ಣತೆಯು ಶಾಸ್ತ್ರೀಯ ವಾದ್ಯವನ್ನು ನುಡಿಸುವ ಯಾವುದೇ ಕಲಾವಿದನಿಗೆ ಸರಿಸಾಟಿಯಾಗಬಲ್ಲದು. ವಾದ್ಯವನ್ನು ಅವರು ತನ್ನದಾಗಿಸಿಕೊಂಡಿದ್ದಾರೆ. ದಿಮಡಿ ನುಡಿಸುವಲ್ಲಿ ಮೀರಾಬಾಯಿಯ ಕೌಶಲಕ್ಕೆ ಲೋಕ-ಕಲಾ ಅಕಾಡೆಮಿಯ ಯಾರೂ ಸರಿಸಾಟಿಯಾಗಲು ಸಾಧ್ಯವಿಲ್ಲ.

ಬಹುಜನ ಜಾತಿಗಳು ಮಧ್ಯಮ ವರ್ಗಕ್ಕೆ ಬರುತ್ತಿರುವುದರಿಂದ, ಅವು ತಮ್ಮದೇ ಆದ ಸಾಂಪ್ರದಾಯಿಕ ಕಲೆ ಮತ್ತು ಅಭಿವ್ಯಕ್ತಿಗಳನ್ನು ಕಳೆದುಕೊಳ್ಳುತ್ತಿವೆ. ಶಿಕ್ಷಣ ಮತ್ತು ಕೆಲಸಕ್ಕಾಗಿ ನಗರಗಳಿಗೆ ವಲಸೆ ಹೋಗುವ ಅವರು ತಮ್ಮ ಸಾಂಪ್ರದಾಯಿಕ ಉದ್ಯೋಗಗಳು ಮತ್ತು ಸಂಬಂಧಿತ ಕಲಾ ಪ್ರಕಾರಗಳನ್ನು ನಿರ್ವಹಿಸುತ್ತಿಲ್ಲ. ಅವುಗಳ ಮೂಲ ಮತ್ತು ಆಚರಣೆಯ ಐತಿಹಾಸಿಕ ಮತ್ತು ಭೌಗೋಳಿಕ ಸಂದರ್ಭಗಳನ್ನು ಅರ್ಥಮಾಡಿಕೊಳ್ಳಲು ಈ ಕಲಾ ಪ್ರಕಾರಗಳನ್ನು ದಾಖಲಿಸಬೇಕಾದ ತೀವ್ರ ಅವಶ್ಯಕತೆಯಿದೆ;. ನಮ್ಮ ಮುಂದಿರುವ ಅನೇಕ ಪ್ರಶ್ನೆಗಳಿಗೆ ಉತ್ತರಿಸಲು ಸಹ ಇದು ಅಗತ್ಯ. ಉದಾಹರಣೆಗೆ, ಜಾತಿ ಸಂಘರ್ಷ, ಇತರ ಹೋರಾಟಗಳ ಅಂಶಗಳು ಅವರ ಅಭಿವ್ಯಕ್ತಿಗಳಲ್ಲಿ ಪ್ರತಿಬಿಂಬಿತವಾಗಿವೆಯೇ? ಹೌದು ಎಂದಾದಲ್ಲಿ, ಇವುಗಳನ್ನು ಯಾವ ರೂಪಗಳಲ್ಲಿ ವ್ಯಕ್ತಪಡಿಸಲಾಗುತ್ತದೆ? ಈ ನಮೂನೆಗಳನ್ನು ಶೈಕ್ಷಣಿಕವಾಗಿ ನೋಡಿದಾಗ ವಿಶ್ವವಿದ್ಯಾಲಯಗಳು ಅಥವಾ ಶಿಕ್ಷಣ ಸಂಸ್ಥೆಗಳು ಅಂತಹ ದೃಷ್ಟಿಕೋನವನ್ನು ತೋರಿಸುವುದಿಲ್ಲ.

ಪ್ರತಿಯೊಂದು ಜಾತಿಯೂ ಒಂದು ನಿರ್ದಿಷ್ಟ ಜಾನಪದ ಕಲೆಯನ್ನು ಹೊಂದಿದೆ ಮತ್ತು ಅವುಗಳಲ್ಲಿನ ವೈವಿಧ್ಯತೆಯೂ ಅಗಾಧವಾಗಿದೆ. ಇವುಗಳಲ್ಲಿನ ಸಂಪತ್ತು ಮತ್ತು ಪರಂಪರೆಗಳನ್ನು ಅಧ್ಯಯನ ಮಾಡಲು ಮತ್ತು ಸಂಗ್ರಹಿಸಲು ಮೀಸಲಾದ ಸಂಶೋಧನಾ ಕೇಂದ್ರದ ನಿಜವಾದ ಅವಶ್ಯಕತೆಯಿದೆ. ಆದಾಗ್ಯೂ, ಇದು ಯಾವುದೇ ಬ್ರಾಹ್ಮಣೇತರ ಚಳವಳಿಯ ಕಾರ್ಯಸೂಚಿಯಲ್ಲಿಲ್ಲ. ಆದರೆ ಮೀರಾಬಾಯಿ ಈ ಚಿತ್ರವನ್ನು ಬದಲಾಯಿಸಲು ಬಯಸುತ್ತಾರೆ. "ಯುವಕರು ಖಂಜಿರಿ, ಏಕತಾರಿ ಮತ್ತು ಧೋಲಕಿ ಕಲಿಯಬಹುದಾದ ಸಂಸ್ಥೆಯನ್ನು ಪ್ರಾರಂಭಿಸಲು ನಾನು ಬಯಸುತ್ತೇನೆ" ಎಂದು ಅವರು ಹೇಳುತ್ತಾರೆ.

ಸರ್ಕಾರದ ಮಟ್ಟದಲ್ಲಿ ಇದಕ್ಕೆ ಯಾವುದೇ ಬೆಂಬಲ ದೊರೆತಿಲ್ಲ. ಹಾಗಿದ್ದರೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆಯೇ?  "ನನಗೆ ಓದಲು ಮತ್ತು ಬರೆಯಲು ತಿಳಿದಿದೆಯೇ?" ಎಂದು ಅವರು ಕೇಳುತ್ತಾರೆ. "ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ  ಯಾರಾದರೂ ಸರ್ಕಾರಿ ಅಧಿಕಾರಿ ಇದ್ದರೆ, ಈ ಕನಸನ್ನು ಈಡೇರಿಸಲು ನನಗೆ ಸಹಾಯ ಮಾಡುವಂತೆ ನಾನು ಅವರಿಗೆ ಮನವಿ ಮಾಡುತ್ತೇನೆ. ಆದರೆ ಬಡ ಜನರ ಈ ಕಲೆಯನ್ನು ಸರ್ಕಾರ ಗೌರವಿಸುತ್ತದೆ ಎಂದು ನಿಮಗೆ ಅನ್ನಿಸುತ್ತದೆಯೇ?

PHOTO • Labani Jangi
PHOTO • Labani Jangi

ಪೊವಾಡಾ (ವೈಭವದ ಹಾಡುಗಳು) ಮತ್ತು ಟುಣ್‌ ಟುಣ್ ಪ್ರದರ್ಶಿಸುವ ಶಾಹಿರರು ಬಳಸುವ ತಂತಿ ವಾದ್ಯವಾದ ಡಾಫ್. ಇದನ್ನು 'ಭವಾನಿ ಆಯಿ' (ತುಳಜಾಭವಾನಿ) ಆಶೀರ್ವಾದ ಪಡೆಯಲು ಗೊಂಧಾಲಿಗಳು (ಸಮುದಾಯ) ಬಳಸುತ್ತಾರೆ. ಬಲ: ಕಿಂಗ್ರಿ ಎಂಬ ತಂತಿ ವಾದ್ಯವು ಮೆರುಗುಗೊಳಿಸದ ಮಡಿಕೆಗಳ ಅನುರಣಕ ಪೆಟ್ಟಿಗೆಯೊಂದಿಗೆ ರಚಿತಗೊಂಡಿದ್ದು ಇದು ದಕ್ಕಲ್ವಾರ್ ಸಮುದಾಯಕ್ಕೆ ಸೇರಿದೆ. ಇದನ್ನು ಇನ್ನೊಂದು ಬಾಗಿದ ಕೋಲಿಗೆ ದಾರ ಕಟ್ಟಿ ನುಡಿಸಲಾಗುತ್ತದೆ. ಮತ್ತೊಂದು ರೀತಿಯ ಕಿಂಗ್ರಿ ಮೂರು ಅನುರಣಕಗಳನ್ನು ಹೊಂದಿರುತ್ತದೆ ಮತ್ತು ಅದು ಟ್ಯೂನ್‌ ಹೊದಿಸಲು ಮತ್ತು ನುಡಿಸಲು ಮರದ ನವಿಲನ್ನು ಹೊಂದಿರುತ್ತದೆ

PHOTO • Labani Jangi
PHOTO • Labani Jangi

ಎಡ: ಹೆಣ್ಣು ದೇವತೆಗಳ ಪೂಜೆಯಲ್ಲಿ ಗೊಂಧಾಲ್ ಎಂಬ ಆಚರಣೆಯಲ್ಲಿ ಸಂಬಲ್ ಉಪಕರಣವನ್ನು ಬಳಸಲಾಗುತ್ತದೆ. ಇವು ಚರ್ಮದ ಪೊರೆಯೊಂದಿಗೆ ಒಂದು ಬದಿಯಿಂದ ಜೋಡಿಸಲಾದ ಎರಡು ಮರದ ಡೋಲುಗಳನ್ನು ಹೊಂದಿರುತ್ತವೆ. ಈ ವಾದ್ಯವನ್ನು ಎರಡು ಮರದ ಕೋಲುಗಳಿಂದ ನುಡಿಸಲಾಗುತ್ತದೆ, ಒಂದು ಬಾಗಿದ ತುದಿಯನ್ನು ಹೊಂದಿದೆ. ಇದನ್ನು ಗೊಂಧಾಲಿಗಳು ನುಡಿಸುತ್ತಾರೆ. ಬಲ: ಹಲ್ಗಿ ಎಂಬುದು ದೇವಾಲಯಗಳು ಮತ್ತು ದರ್ಗಾಗಳಲ್ಲಿ ಹಬ್ಬಗಳು, ವಿವಾಹ ಮೆರವಣಿಗೆಗಳು ಮತ್ತು ಇತರ ಆಚರಣೆಗಳ ಸಮಯದಲ್ಲಿ ಮಾಂಗ್ ಸಮುದಾಯದ ಪುರುಷರು ನುಡಿಸುವ ವೃತ್ತಾಕಾರದ ಮರದ ಫ್ರೇಮ್ ಹೊಂದಿರುವ ಡೋಲು

*****

ಇದೆಲ್ಲದರ ನಡುವೆಯೂ ಸರ್ಕಾರ ಮೀರಾಬಾಯಿಯನ್ನು ಆಹ್ವಾನಿಸಿದೆ. ಮೀರಾಬಾಯಿಯ ಶಾಹಿರಿ ಮತ್ತು ಗಾಯನವು ದೊಡ್ಡ ಪ್ರೇಕ್ಷಕರನ್ನು ಪರಿಣಾಮಕಾರಿಯಾಗಿ ಆಕರ್ಷಿಸಲು ಪ್ರಾರಂಭಿಸಿದಾಗ, ಮಹಾರಾಷ್ಟ್ರ ಸರ್ಕಾರವು ತಾನು ಕೈಗೊಂಡ ಅನೇಕ ಜಾಗೃತಿ ಕಾರ್ಯಕ್ರಮಗಳು ಮತ್ತು ಅಭಿಯಾನಗಳಿಗೆ ಕೊಡುಗೆ ನೀಡುವಂತೆ ಕೇಳಿಕೊಂಡಿತು. ಈ ನಿಟ್ಟಿನಲ್ಲಿ ಅವರು ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ಆರೋಗ್ಯ, ವ್ಯಸನಮುಕ್ತಿ, ವರದಕ್ಷಿಣೆ ನಿಷೇಧ ಮತ್ತು ಮದ್ಯಪಾನ ನಿಷೇಧದ ವಿಷಯಗಳ ಬಗ್ಗೆ ಜಾನಪದ ಸಂಗೀತದ ಅಂಶಗಳೊಂದಿಗೆ ಸಣ್ಣ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು.

बाई दारुड्या भेटलाय नवरा
माझं नशीब फुटलंय गं
चोळी अंगात नाही माझ्या
लुगडं फाटलंय गं

ನನ್ನ ಗಂಡನೊಬ್ಬ ವ್ಯಸನಿ
ನನ್ನ ಹಣೆಬರಹ ಅಳಿಸಿ ಹೋಗಿದೆ
ನನಗೆ ಧರಿಸಲು ರವಿಕೆಯಿಲ್ಲ
ಕಣ್ಣೀರಿನಲಿ ನೆನೆದು ಹೋಗಿ ಸೀರೆಯ ಅಂಚು

ವ್ಯಸನಮುಕ್ತಿಯ ಬಗ್ಗೆ ಅವರ ಜಾಗೃತಿ ಕಾರ್ಯಕ್ರಮಗಳು ಅವರಿಗೆ ಮಹಾರಾಷ್ಟ್ರ ಸರ್ಕಾರದಿಂದ ವ್ಯಸನಮುಕ್ತಿ ಸೇವಾ ಪ್ರಶಸ್ತಿಯನ್ನು ಗಳಿಸಿಕೊಟ್ಟಿವೆ. ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದಲ್ಲಿ ಪ್ರದರ್ಶನ ನೀಡಲು ಅವರನ್ನು ಆಹ್ವಾನಿಸಲಾಯಿತು.

*****

ಆದರೆ ಈ ಎಲ್ಲಾ ಒಳ್ಳೆಯ ಕೆಲಸಗಳ ಹೊರತಾಗಿಯೂ, ಮೀರಾಬಾಯಿಯ ಪಾಲಿಗೆ ಬದುಕು ಕಠಿಣವಾಗಿದೆ. "ನಾನು ನಿರಾಶ್ರಿತಳಾಗಿದ್ದೆ. ಸಹಾಯಕ್ಕೆ ಯಾರೂ ಇದ್ದಿರಲಿಲ್ಲ" ಎಂದು ಅವರು ತಮ್ಮ ಇತ್ತೀಚಿನ ದುರಂತದ ಕಥೆಯನ್ನು ವಿವರಿಸುತ್ತಾರೆ. "ಲಾಕ್ಡೌನ್ ಸಮಯದಲ್ಲಿ [2020] ಶಾರ್ಟ್ ಸರ್ಕ್ಯೂಟ್‌ ಕಾರಣದಿಂದಾಗಿ ನನ್ನ ಮನೆಗೆ ಬೆಂಕಿ ಹೊತ್ತಿತು. ನಾವು ತುಂಬಾ ಹತಾಶರಾಗಿದ್ದೆವು, ಆ ಮನೆಯನ್ನು ಮಾರಾಟ ಮಾಡುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ನಾವು ಬೀದಿಗೆ ಬಿದ್ದಿದ್ದೆವು. ಅನೇಕ ಅಂಬೇಡ್ಕರ್ ವಾದಿ ಅನುಯಾಯಿಗಳು ಈ ಮನೆಯನ್ನು ನಿರ್ಮಿಸಲು ನನಗೆ ಸಹಾಯ ಮಾಡಿದರು", ಎಂದು ನಾವು ಕುಳಿತಿರುವ ತಗಡಿನ ಗೋಡೆಗಳು ಮತ್ತು ಛಾವಣಿಯನ್ನು ಹೊಂದಿರುವ ತನ್ನ ಹೊಸ ಮನೆಯನ್ನು ತೋರಿಸಿ ಅವರು ಹೇಳುತ್ತಾರೆ.

PHOTO • Ramdas Unhale
PHOTO • Ramdas Unhale

ಅನೇಕ ಪ್ರಶಸ್ತಿಗಳು ಮತ್ತು ಪ್ರಶಸ್ತಿಗಳನ್ನು ಪಡೆದ ಜಾನಪದ ಕಲಾವಿದೆ ಮತ್ತು ಪ್ರದರ್ಶಕಿ ಶಹೀರ್ ಮೀರಾ ಉಮಾಪ್ ಹೋರಾಟದ ಜೀವನವನ್ನು ನಡೆಸುತ್ತಿದ್ದಾರೆ. ಛತ್ರಪತಿ ಸಂಭಾಜಿ ನಗರದ ಚಿಕಲ್ಥಾನಾದಲ್ಲಿರುವ ಅವರ ಸಣ್ಣ ತಗಡಿನ ಮನೆಯ ಚಿತ್ರಗಳು ಇಲ್ಲಿವೆ

ಅಣ್ಣಾಭಾವು ಸಾಠೆ, ಬಾಲ ಗಂಧರ್ವ ಮತ್ತು ಲಕ್ಷ್ಮೀಬಾಯಿ ಕೊಲ್ಹಾಪುರಕರ್ ಅವರಂತಹ ಅನೇಕ ದಿಗ್ಗಜರ ಹೆಸರಿನಲ್ಲಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಕಲಾವಿದೆಯ ಇಂದಿನ ಪರಿಸ್ಥಿತಿ ಇದು. ಅವರ ಸಾಂಸ್ಕೃತಿಕ ಕೊಡುಗೆಗಾಗಿ ಮಹಾರಾಷ್ಟ್ರ ಸರ್ಕಾರವು ಅವರಿಗೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಈ ಪ್ರಶಸ್ತಿಗಳು ಒಮ್ಮೆ ಅವರ ಮನೆಯ ಗೋಡೆಗಳನ್ನು ಅಲಂಕರಿಸಿದ್ದವು.

“ಅವು ನಿಮ್ಮ ಕಣ್ಣುಗಳಿಗಷ್ಟೇ ಸಂತೋಷ ನೀಡಬಲ್ಲವು” ಎಂದು ಮೀರಾಬಾಯಿ ಕಣ್ಣೀರು ತುಂಬಿದ ಕಣ್ಣುಗಳೊಂದಿಗೆ ಹೇಳುತ್ತಾರೆ. “ಕೇವಲ ಅವುಗಳನ್ನು ನೋಡುವುದರಿಂದ ಹೊಟ್ಟೆ ತುಂಬುತ್ತದೆಯೇ? ಕೊರೋನಾ ಸಮಯದಲ್ಲಿ ನಾವು ಹಸಿವಿನಿಂದ ಬಳಲುತ್ತಿದ್ದೆವು. ಆ ಸಮಯದಲ್ಲಿ ಈ ಪ್ರಶಸ್ತಿಗಳನ್ನು ನಾನು ಸೌದೆಯಾಗಿ ಬಳಸಬೇಕಾಯಿತು. ಈ ಪ್ರಶಸ್ತಿಗಳಿಗಿಂತಲೂ ಹಸಿವು ಬಲಶಾಲಿ” ಎಂದು ಅವರು ಹೇಳುತ್ತಾರೆ.

ಗುರುತಿಸುವವರು ಇರಲಿ, ಇಲ್ಲದಿರಲಿ, ಮೀರಾಬಾಯಿ ತನ್ನ ಕಲೆಯನ್ನು ಅಚಲ ಭಕ್ತಿಯಿಂದ ಮುಂದುವರಿಸಿದ್ದಾರೆ, ಮಾನವೀಯತೆ, ಪ್ರೀತಿ ಮತ್ತು ಸಹಾನುಭೂತಿಯ ಸಂದೇಶವನ್ನು ಹರಡಲೆಂದು ಪೌರಾಣಿಕ ಸುಧಾರಕರ ಹಾದಿಯಲ್ಲಿ ತಾವೂ ನಡೆಯುತ್ತಿದ್ದಾರೆ. ಕೋಮುವಾದಿ ಮತ್ತು ವಿಭಜಕ ಬೆಂಕಿಯನ್ನು ನಂದಿಸಲು ಅವರು ತಮ್ಮ ಕಲೆ ಮತ್ತು ಪ್ರದರ್ಶನಗಳನ್ನು ಬಳಸುತ್ತಿದ್ದಾರೆ. "ನನ್ನ ಕಲೆಯನ್ನು ಮಾರಾಟ ಮಾಡಲು ನಾನು ಬಯಸುವುದಿಲ್ಲ" ಎಂದು ಅವರು ಹೇಳುತ್ತಾರೆ. "ಸಂಭಾಲಾಲಿ ತರ್ ತೀ ಕಲಾ ಆಹೆ, ನಹೀ ತರ್ ಬಾಲಾ ಅಹೆ [ಒಬ್ಬರಿಂದ ಗೌರವಿಸಲ್ಪಟ್ಟರೆ ಅದೊಂದು ಕಲೆಯೆನ್ನಿಸಿಕೊಳ್ಳುತ್ತದೆ.ಇಲ್ಲವಾದರೆ ಅದೊಂದು ಪಿಡುಗು ಮಾತ್ರ].

ನಾನು ನನ್ನ ಕಲೆ ತನ್ನ ಪ್ರಸ್ತುತತೆ ಕಳೆದುಕೊಳ್ಳದಂತೆ ನೋಡಿಕೊಂಡಿದ್ದೇನೆ. ಕಳೆದ 40 ವರ್ಷಗಳಿಂದ ಈ ದೇಶದ ವಿವಿಧ ಮೂಲೆಗಳಿಗೆ ಪ್ರಯಾಣಿಸಿದ್ದೇನೆ ಮತ್ತು ಕಬೀರ್, ತುಕಾರಾಮ್, ತುಕಾಡೋಜಿ ಮಹಾರಾಜ್ ಮತ್ತು ಫುಲೆ-ಅಂಬೇಡ್ಕರ್ ಅವರ ಸಂದೇಶಗಳನ್ನು ಅಲ್ಲೆಲ್ಲಾ ಹರಡಿದ್ದೇನೆ. ನಾನು ಅವರ ಹಾಡುಗಳನ್ನು ಹಾಡುತ್ತಿದ್ದೇನೆ ಮತ್ತು ಅವರ ಪರಂಪರೆ ನನ್ನ ಪ್ರದರ್ಶನಗಳ ಮೂಲಕ ಜೀವಂತವಾಗಿದೆ.

"ನನ್ನ ಕೊನೆಯುಸಿರು ಇರುವವರೆಗೂ ಭೀಮ್ ಗೀತೆಯನ್ನು ಹಾಡುತ್ತೇನೆ. ಅದೇ ನನ್ನ ಬದುಕಿನ ಕೊನೆಗಾಲವಾಗಿರುತ್ತದೆ ಮತ್ತು ಅದು ನನಗೆ ಅಪಾರ ತೃಪ್ತಿಯನ್ನು ನೀಡುತ್ತದೆ.

ಈ ವಿಡಿಯೋ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ ಸಹಯೋಗದೊಂದಿಗೆ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ತಮ್ಮ ಆರ್ಕೈವ್ಸ್ ಅಂಡ್ ಮ್ಯೂಸಿಯಂಸ್ ಪ್ರೋಗ್ರಾಂ ಅಡಿಯಲ್ಲಿ ಜಾರಿಗೆ ತಂದ 'ಮರಾಠಾವಾಡಾದ ಪ್ರಭಾವಶಾಲಿ ಶಾಹಿರ್‌ಗಳು, ನಿರೂಪಣೆಗಳು' ಎಂಬ ಸಂಗ್ರಹದ ಭಾಗವಾಗಿದೆ. ನವದೆಹಲಿಯ ಗೋಥೆ-ಇನ್ಸ್ಟಿಟ್ಯೂಟ್/ಮ್ಯಾಕ್ಸ್ ಮುಲ್ಲರ್ ಭವನದ ಭಾಗಶಃ ಬೆಂಬಲದಿಂದ ಇದು ಸಾಧ್ಯವಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Keshav Waghmare

Keshav Waghmare is a writer and researcher based in Pune, Maharashtra. He is a founder member of the Dalit Adivasi Adhikar Andolan (DAAA), formed in 2012, and has been documenting the Marathwada communities for several years.

Other stories by Keshav Waghmare
Editor : Medha Kale

Medha Kale is based in Pune and has worked in the field of women and health. She is the Translations Editor, Marathi, at the People’s Archive of Rural India.

Other stories by Medha Kale
Editor : Pratishtha Pandya

Pratishtha Pandya is a Senior Editor at PARI where she leads PARI's creative writing section. She is also a member of the PARIBhasha team and translates and edits stories in Gujarati. Pratishtha is a published poet working in Gujarati and English.

Other stories by Pratishtha Pandya
Illustrations : Labani Jangi

Labani Jangi is a 2020 PARI Fellow, and a self-taught painter based in West Bengal's Nadia district. She is working towards a PhD on labour migrations at the Centre for Studies in Social Sciences, Kolkata.

Other stories by Labani Jangi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru