ಇಪ್ಪತ್ತು ವರ್ಷಗಳ ಹಿಂದೆ ಮೋರಿಗಳೆಲ್ಲವೂ ಸ್ವಚ್ಛವಾಗಿದ್ದಾಗ; "ನೀರು ಗಾಜಿನಂತೆ ನಿರ್ಮಲವಾಗಿತ್ತು. ಅದರಲ್ಲಿ (ನದಿಯ ತಳದಲ್ಲಿ) ಬಿದ್ದ ನಾಣ್ಯವು ಮೇಲಿನಿಂದ ಸ್ಪಷ್ಟವಾಗಿ ಕಾಣುತ್ತಿತ್ತಲ್ಲದೆ, ಯಮುನೆಯ ನೀರನ್ನು ನೇರವಾಗಿ ಕುಡಿಯಬಹುದಿತ್ತು", ತನ್ನ ಮಾತಿಗೆ ಒತ್ತು ನೀಡಲೋ ಎಂಬಂತೆ ಅಂಗೈಯಿಂದ ಕಲುಷಿತ ನೀರನ್ನು ಮೊಗೆದು, ಅದನ್ನು ಬಾಯಿಯ ಬಳಿಗೆ ತಂದ ಬೆಸ್ತ ರಮನ್ ಹಲ್ದರ್ ಗಲಿಬಿಲಿಗೊಂಡ ನಮ್ಮನ್ನು ನೋಡಿ, ವಿಷಾದದ ನಗುವಿನೊಂದಿಗೆ  ತಮ್ಮ ಬೆರಳುಗಳ ಸಂದಿಯಿಂದ ನೀರನ್ನು ಹೊರಚೆಲ್ಲಿದರು.

ಇಂದಿನ ಯಮುನೆಯಲ್ಲಿನ ಪ್ಲಾಸ್ಟಿಕ್‍ಗಳು, ತೆಳು ಲೋಹದ ಮುಚ್ಚುಹಾಳೆಗಳು, ಕೊಚ್ಚೆ, ದಿನಪತ್ರಿಕೆಗಳು, ಮುದುಡಿದ ಗಿಡಗಂಟಿಗಳು, ಕಾಂಕ್ರೀಟಿನ ಮುರುಕುಚೂರುಗಳು, ಬಟ್ಟೆಯ ತುಣುಕುಗಳು, ಕೆಸರು, ಕೊಳೆತ ತಿಂಡಿತಿನಿಸುಗಳು, ತೇಲುತ್ತಿರುವ ತೆಂಗಿನಕಾಯಿಗಳು, ರಾಸಾಯನಿಕದ ನೊರೆ ಮತ್ತು ಗಂಟೆ ಹೂವಿನ ಜೊಂಡು ಇತ್ಯಾದಿಗಳು ರಾಜಧಾನಿಯ ಭೌತಿಕ ಹಾಗೂ ಕಾಲ್ಪನಿಕ ಉಪಭೋಗದ ಕರಾಳ ಪ್ರತಿಬಿಂಬಗಳಾಗಿವೆ.

ಕೇವಲ 22 ಕಿ.ಮೀ. ವ್ಯಾಪ್ತಿಯ (ಶೇ. 1.6) ಯಮುನೆಯು ರಾಷ್ಟ್ರೀಯ ರಾಜಧಾನಿಯ ಭೂಪ್ರದೇಶದಲ್ಲಿ ಹರಿಯುತ್ತದೆ. ಆದರೆ ನದಿಯ ಈ ಚಿಕ್ಕ ಹರಿವಿನ ವ್ಯಾಪ್ತಿಯಲ್ಲಿ, ಇಡೀ 1,376 ಕಿ.ಮೀ. ವ್ಯಾಪ್ತಿಯ ಶೇ. 80 ರಷ್ಟು ಕಸ ಹಾಗೂ ವಿಷಕಾರಕ ವಸ್ತುಗಳನ್ನು ಸುರಿಯಲಾಗುತ್ತದೆ. ಇದನ್ನು ಗುರುತಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ [ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ (ಎನ್. ಬಿ. ಟಿ)] ಮೇಲ್ವಿಚಾರಣಾ ಸಮಿತಿಯ ವರದಿಯು, 2018ರಲ್ಲಿ ದೆಹಲಿಯ ಈ ನದಿಯನ್ನು ‘ಹೊಲಸು ನೀರನ್ನು ಸಾಗಿಸುವ ಕಾಲುವೆ’ ಎಂಬುದಾಗಿ ಘೋಷಿಸಿತು.

ಕಳೆದ ವರ್ಷ ದೆಹಲಿಯಲ್ಲಿನ ನದಿಯ ದಕ್ಷಿಣದ ಹರಿವಿನ ಕಾಲಿಂದಿ ಕುಂಜ್ ಘಾಟ್‍ನಲ್ಲಿ ಸಾವಿರಾರು ಮೀನುಗಳು ಸಾವಿಗೀಡಾಗಿರುವುದು ಕಂಡುಬಂದಿತು. ದೆಹಲಿಯಲ್ಲಿನ ನದಿಯ ಹರಿವಿನಲ್ಲಿ ಇತರೆ ಜಲಸಂಬಂಧಿತ ಸಂಗತಿಗಳು ವಾರ್ಷಿಕವಾಗಿ ಘಟಿಸತೊಡಗಿವೆ.

"ನದಿಯ ಪರಿಸರ ವ್ಯವಸ್ಥೆಯು ಉಳಿವಿಗೆ, ನೀರಿನಲ್ಲಿನ ಆಮ್ಲಜನಕದ ಪ್ರಮಾಣದ ಮಟ್ಟವು 6 ಅಥವ ಅದಕ್ಕಿಂತಲೂ ಹೆಚ್ಚಿರತಕ್ಕದ್ದು. ಮೀನುಗಳಿಗೆ ಕನಿಷ್ಠ 4-5ರಷ್ಟು ನೀರಿನಲ್ಲಿನ ಆಮ್ಲಜನಕದ ಪ್ರಮಾಣವು ಅವಶ್ಯ", ಎಂಬುದಾಗಿ ಚಿಕಾಗೋ ವಿಶ್ವವಿದ್ಯಾನಿಲಯದ ಟಾಟಾ ಸೆಂಟರ್ ಫಾರ್ ಡೆವಲಪ್‍ಮೆಂಟ್‍ ನ ವಾಟರ್ ಟು ಕ್ಲೌಡ್ ಯೋಜನೆಯ ನಿರ್ದೇಶಕರಾದ ಪ್ರಿಯಾಂಕ ಹಿರಾನಿಯವರು ತಿಳಿಸುತ್ತಾರೆ. ಈ ಯೋಜನೆಯು ನದಿಗಳ ವಾಸ್ತವಿಕ ಮಾಲಿನ್ಯವನ್ನು ತಿಳಿಯಪಡಿಸುತ್ತದೆ.

PHOTO • People's Archive of Rural India

‘ಅಲ್ಲಿ (ಕಾಲಿಂದಿ ಕುಂಜ್ ಘಾಟ್) ಈಗ ಮೀನುಗಳೇ ಇಲ್ಲ. ಮೊದಲಿಗೆ ಅವು ಹೇರಳವಾಗಿದ್ದವು. ಈಗ ಕೇವಲ ಕೆಲವು ಹೆಮ್ಮೀನುಗಳಷ್ಟೇ ಉಳಿದಿವೆ’, ಎನ್ನುತ್ತಾರೆ ರಮಣ್ ಹಲ್ದರ್ (ಮಧ್ಯದಲ್ಲಿ)

ದೆಹಲಿಯ ಈಶಾನ್ಯ ಭಾಗದ ರಾಂ ಘಾಟ್‍ ನ ದಡದಲ್ಲಿ ಹಸಿರು ಹುಲ್ಲಿನ ಮೇಲೆ ಕುಳಿತ 52 ವರ್ಷದ ಹಲ್ದರ್ ಹಾಗೂ ಆತನ ಇಬ್ಬರು ಸ್ನೇಹಿತರು ನಿಶ್ಚಿಂತೆಯಿಂದ ಧೂಮಪಾನದಲ್ಲಿ ನಿರತರಾಗಿದ್ದರು. ದೂರದಿಂದ ಬಿಳಿಯ ಮೋಡದಂತೆ ಕಾಣುವ ಕೈಯಿಂದ ಹೆಣೆದ ಬಲೆಯನ್ನು ಬಿಡಿಸುತ್ತಿದ್ದ ರಾಂ ಹಲ್ದರ್, "ನಾನು ಕಾಲಿಂದಿ ಕುಂಜ್ ಘಾಟ್‍ನಿಂದ ಇಲ್ಲಿಗೆ ಮೂರು ವರ್ಷಗಳ ಹಿಂದೆ ಬಂದು ನೆಲೆಸಿದೆ. ಇಲ್ಲಿ ಮೀನುಗಳೇ ಇಲ್ಲ. ಮೊದಲಿಗೆ ಅವುಗಳ ಸಂಖ್ಯೆ ಅಪಾರವಾಗಿತ್ತು. ಈಗ ಕೆಲವು ಹೆಮ್ಮೀನುಗಳಷ್ಟೇ ಉಳಿದಿವೆ. ಇವುಗಳಲ್ಲಿನ ಕೆಲವು ಕೊಳಕಾಗಿದ್ದು ಅಲರ್ಜಿ, ದದ್ದು, ಜ್ವರ ಮತ್ತು ಅತಿಸಾರವನ್ನುಂಟು ಮಾಡುತ್ತವೆ", ಎಂದರು.

ಕಡಲ ಸಂರಕ್ಷಣೆಯಲ್ಲಿ ನಿರತರಾಗಿರುವ ದಿವ್ಯ ಕಾರಂತ್, ನೀರಿನಾಳದ ಇತರೆ ಮೀನುಗಳಂತಲ್ಲದ ಹೆಮ್ಮೀನು ನೀರಿನ ಮೇಲ್ಮೈಯಲ್ಲಿ ತೇಲುತ್ತಾ ಉಸಿರಾಡಬಲ್ಲದು. ಹೀಗಾಗಿ ಉಳಿದವುಗಳಿಗಿಂತ ಇದು ಬದುಕುಳಿಯುವ ಸಾಧ್ಯತೆ ಹೆಚ್ಚು. ಈ ಪರಿಸರ ವ್ಯವಸ್ಥೆಯಲ್ಲಿನ ಪರಭಕ್ಷಕಗಳಾದ ಇವು ಆಹಾರದ ಸರಪಳಿಯಲ್ಲಿ ಕೆಳಮಟ್ಟದಲ್ಲಿದ್ದು, ವಿಷಕಾರಕಗಳಿಗೆ ಗುರಿಯಾಗಿರುವ ಮೀನುಗಳನ್ನು ತಿನ್ನುವ ಕಾರಣ, ಇವುಗಳ ದೇಹದಲ್ಲಿ ನಂಜು ಶೇಖರಗೊಂಡಿರುತ್ತದೆ ಎಂಬುದಾಗಿ ತಿಳಿಸುತ್ತಾರೆ. "ಹೀಗಾಗಿ ಜಾಡಮಾಲಿಯೋಪಾದಿಯಲ್ಲಿರುವ ಈ ಮಾಂಸಾಹಾರಿಯನ್ನು ತಿನ್ನುವ ಜನರು ಕೆಲವು ಪರಿಣಾಮಗಳಿಗೀಡಾಗುತ್ತಾರೆ."

*****

ದೆಹಲಿಯಲ್ಲಿನ ಲಾಭನಿರಪೇಕ್ಷ ಸಂಸ್ಥೆ, ರಿಸರ್ಚ್ ಕಲೆಕ್ಟಿವ್‍ ನ ಆಕ್ಯುಪೇಶನ್ ಆಫ್ ದ ಕೋಸ್ಟ್: ದ ಬ್ಲೂ ಎಕಾನಮಿ ಇನ್ ಇಂಡಿಯ ಎಂಬ ಪ್ರಕಾಶನವು, ಭಾರತದಲ್ಲಿ ಸುಮಾರು ಶೇ. 87ರಷ್ಟು ಮೀನುಗಳು ನೀರಿನ 100 ಮೀಟರ್ ಆಳದಲ್ಲಿ ಲಭ್ಯವಾಗುತ್ತವೆ ಎಂಬ ಮಾಹಿತಿ ನೀಡುತ್ತದೆ. ಈ ಬಹುತೇಕ ಮೀನುಗಾರಿಕೆಯು ದೇಶದ ಬೆಸ್ತ ಸಮುದಾಯದ ಅಳವಿನಲ್ಲಿದೆ. ಇದು ಆಹಾರವನ್ನಷ್ಟೇ ಅಲ್ಲದೆ ದಿನನಿತ್ಯದ ಜೀವನ ಹಾಗೂ ಸಂಸ್ಕøತಿಯನ್ನೂ ಪೋಷಿಸುತ್ತಿದೆ.

ನ್ಯಾಷನಲ್ ಪ್ಲಾಟ್‍ಫಾರ್ಮ್ ಫಾರ್ ಸ್ಮಾಲ್ ಸ್ಕೇಲ್ ಫಿಶ್ ವರ್ಕರ್ಸ್ (ಇನ್‍ಲ್ಯಾಂಡ್) ಮುಖ್ಯಸ್ಥರಾದ ಪ್ರದೀಪ್ ಚಟರ್ಜಿ, "ಈಗ ನೀವು ಬೆಸ್ತರ ಅಲ್ಪ ಪ್ರಮಾಣದ ಆರ್ಥಿಕತೆಗೆ ಹಾನಿಯೆಸಗುತ್ತಿದ್ದೀರಿ", ಎನ್ನುತ್ತಾರೆ. ಇವರು ಸ್ಥಳೀಯ ಮಾರುಕಟ್ಟೆಗೆ ಸ್ಥಳೀಯ ಮೀನುಗಳನ್ನು ಸರಬರಾಜು ಮಾಡುತ್ತಾರೆ. "ನಿಮಗೆ ಇವು ಲಭ್ಯವಾಗದಿದ್ದಲ್ಲಿ, ದೂರದ ಊರುಗಳಿಂದ ಅದನ್ನು ತರಬೇಕಾಗುತ್ತದೆ. ಸಾಗಣೆಯ ಪುನರ್ ಬಳಕೆಯಿಂದಾಗಿ ಈ ಬಿಕ್ಕಷ್ಟು ಮತ್ತಷ್ಟು ಹೆಚ್ಚಾಗುತ್ತದೆ. ಅಂತರ್ಜಲಕ್ಕೆ ಮರಳುವುದೆಂದರೆ ಶಕ್ತಿಯ ಹೆಚ್ಚುವರಿ ಬಳಕೆ. ಇದು ಜಲಚಕ್ರವನ್ನು ಪ್ರಭಾವಿಸುತ್ತದೆ".

"ಜಲಚರಗಳ ಮೇಲೆ ಇದು ಪರಿಣಾಮವನ್ನು ಬೀರುತ್ತದೆ. ನದಿಯ ಮರುಪೂರಣವಾಗುವುದಿಲ್ಲ. ಇದನ್ನು ವ್ಯವಸ್ಥಿತಗೊಳಿಸಿ, ನದಿಯಿಂದ ಕುಡಿಯುವ ಶುದ್ಧ ನೀರನ್ನು ಪಡೆಯಲು ಸಾಂಪ್ರದಾಯಿಕ ಮೂಲಗಳಿಂದ ಮತ್ತೆ ಹೆಚ್ಚಿನ ಶಕ್ತಿಯು ಅವಶ್ಯ. ಹೀಗೆ ಪರಿಸರ ಆಧಾರಿತ ಅರ್ಥವ್ಯವಸ್ಥೆಯನ್ನು ನಾವು ಬಲವಂತವಾಗಿ ನಾಶಗೊಳಿಸಿ ಶ್ರಮ, ಆಹಾರ ಮತ್ತು ಉತ್ಪನ್ನಗಳನ್ನು; ಶಕ್ತಿ ಹಾಗೂ ಬಂಡವಾಳವನ್ನು ತೀವ್ರವಾಗಿ ಅವಲಂಬಿಸಿರುವ ಸಾಂಸ್ಥಿಕ ಚಕ್ರದಲ್ಲಿ (ಕಾರ್ಪೋರೆಟ್ ಸೈಕಲ್) ತೊಡಗಿಸಿದ್ದೇವೆ. ಈಗಲೂ ನದಿಗಳನ್ನು ಕಸದ ತೊಟ್ಟಿಗಳಾಗಿ ಬಳಸುತ್ತಿದ್ದೇವೆ", ಎಂದು ಅವರು ವಿವರಿಸುತ್ತಾರೆ.

ಕೈಗಾರಿಕೆಗಳು ತ್ಯಾಜ್ಯವನ್ನು ನದಿಗೆ ಹರಿಯಬಿಟ್ಟಾಗ ಬೆಸ್ತರಿಗೆ ಈ ಬಗ್ಗೆ ಮೊದಲು ತಿಳಿಯುತ್ತದೆ. ಯಮುನೆಯು ರಾಜಧಾನಿಯನ್ನು ಪ್ರವೇಶಿಸುವ ಹರಿಯಾಣ-ದೆಹಲಿ ಗಡಿಯ ಪಲ್ಲ ಎಂಬಲ್ಲಿ ನೆಲೆಸಿರುವ 45 ವರ್ಷದ ಮಂಗಲ್ ಸಾಹ್ನಿ, "ಹೊಲಸು ವಾಸನೆ ಹಾಗೂ ಮೀನುಗಳು ಸಾಯುವುದನ್ನು ನೋಡುತ್ತಲೇ ನಮಗೆ ಇದರ ಅರಿವಾಗುತ್ತದೆ", ಎಂದು ತಿಳಿಸುತ್ತಾರೆ. ಬಿಹಾರದ ಶಿಯೋಹರ್ ಜಿಲ್ಲೆಯಲ್ಲಿನ ತನ್ನ 15 ಜನ ಸದಸ್ಯರ ಕುಟುಂಬದ ಪೋಷಣೆಯ ಬಗ್ಗೆ ಸಾಹ್ನಿ ಚಿಂತಿತರಾಗಿದ್ದಾರೆ. "ಜನರು ನಮ್ಮ ಬಗ್ಗೆ ಬರೆಯುತ್ತಲೇ ಇದ್ದಾರೆ. ಆದರೆ ನಮ್ಮ ಜೀವನವು ಸುಧಾರಿಸಿಲ್ಲ. ಮತ್ತಷ್ಟು ದುರ್ಭರವಾಗಿದೆ", ಎಂದ ಅವರು ನಮ್ಮನ್ನು ಸಾಗಹಾಕಿದರು.

When industries release effluents into the river, fisherfolk are the first to know. 'We can tell from the stench, and when the fish start dying', remarks 45-year-old Mangal Sahni, who lives at Palla, on the Haryana-Delhi border, where the Yamuna enters the capital
PHOTO • Shalini Singh
Palla, on the Haryana-Delhi border, where the Yamuna enters the capital
PHOTO • Shalini Singh

ಕೈಗಾರಿಕೆಗಳು ತ್ಯಾಜ್ಯವನ್ನು ನದಿಗೆ ಹರಿಯಬಿಟ್ಟಾಗ ಬೆಸ್ತರಿಗೆ ಈ ಬಗ್ಗೆ ಮೊದಲು ತಿಳಿಯುತ್ತದೆ. ಯಮುನೆಯು ರಾಜಧಾನಿಯನ್ನು ಪ್ರವೇಶಿಸುವ ಹರಿಯಾಣ-ದೆಹಲಿ ಗಡಿಯ ಪಲ್ಲ (ಬಲ) ಎಂಬಲ್ಲಿ ನೆಲೆಸಿರುವ 45 ವರ್ಷದ ಮಂಗಲ್ ಸಾಹ್ನಿ (ಎಡ), "ಹೊಲಸು ವಾಸನೆ ಹಾಗೂ ಮೀನುಗಳು ಸಾಯುವುದನ್ನು ನೋಡುತ್ತಲೇ ನಮಗೆ ಇದರ ಅರಿವಾಗುತ್ತದೆ", ಎಂದು ತಿಳಿಸುತ್ತಾರೆ

ಸೆಂಟ್ರಲ್ ಮರೈನ್ ಫಿಶರೀಸ್ ರಿಸರ್ಚ್ ಇನ್‍ಸ್ಟಿಟ್ಯೂಟ್‍ ನ ಪ್ರಕಾರ ಸಾಂಪ್ರದಾಯಿಕ ಕಡಲ ಮೀನುಗಾರಿಕೆಯಲ್ಲಿ ತೊಡಗಿರುವ ಸುಮಾರು 8.4 ಲಕ್ಷ ಕುಟುಂಬಗಳಿವೆ. ಭಾರತದ ಕಡಲ ತೀರದಲ್ಲಿ 4 ಮಿಲಿಯನ್ ಬೆಸ್ತರ ಸಮುದಾಯವು ಸಾಂಪ್ರದಾಯಿಕ ಕಡಲ ಮೀನುಗಾರಿಕೆಯಲ್ಲಿ ನಿರತವಾಗಿವೆ. ಇದಕ್ಕಿಂತಲೂ 7ರಿಂದ 8ಪಟ್ಟು ಸಂಖ್ಯೆಯ ಜನರು ಮಿನುಗಾರಿಕೆಯ ಅರ್ಥವ್ಯವಸ್ಥೆಯನ್ನು ಅವಲಂಬಿಸಿದ್ದಾರೆ. ಇವರಲ್ಲಿನ 4 ಮಿಲಿಯನ್ ಜನರು ಒಳನಾಡಿನ ಮೀನುಗಾರಿಕೆಯಲ್ಲಿ ನಿರತರಾಗಿದ್ದಾರೆ. ದಶಕಗಳಿಂದಲೂ ಮಿಲಿಯಾಂತರ ಜನರು ಪೂರ್ಣಕಾಲಿಕ ಹಾಗೂ ವ್ಯವಸ್ಥಿತ ಚಟುವಟಿಕೆಯೆನಿಸಿದ ಈ ಮೀನುಗಾರಿಕೆಯನ್ನು ತೊರೆಯುತ್ತಿದ್ದಾರೆ. ಚಟರ್ಜಿಯವರು ಹೇಳುವಂತೆ ಅನೇಕ ಮೀನುಗಾರರು ನಷ್ಟವನ್ನು ಅನುಭವಿಸಿದ ಕಾರಣ, ಕಡಲಿನಲ್ಲಿ ಮೀನುಗಾರಿಕೆಯನ್ನು ನಡೆಸುವ ಶೇ. 60-70ರಷ್ಟು ಬೆಸ್ತರು ಇತರೆ ಉದ್ಯೋಗಗಳನ್ನು ಅರಸಿದ್ದಾರೆ.

ದೆಹಲಿಯಲ್ಲಿನ ಯಮುನೆಯ ವ್ಯಾಪ್ತಿಯಲ್ಲಿ ಎಷ್ಟು ಬೆಸ್ತರಿದ್ದರು, ಈಗಿನ ಅವರ ಸಂಖ್ಯೆಯೇನು ಎಂಬುದರ ಕುರಿತಂತೆ ಯಾವುದೇ ದಸ್ತಾವೇಜುಗಳಾಗಲಿ, ಮುದ್ರಿತ ದತ್ತಾಂಶಗಳಾಗಲಿ ಲಭ್ಯವಿಲ್ಲದಿರುವುದು ವಿಚಿತ್ರವೆನಿಸುತ್ತದೆ. ಅಲ್ಲದೆ ಸಾಹ್ನಿಯಂತೆ ಅನೇಕರು ವಲಸಿಗರಾಗಿದ್ದು, ಈ ಲೆಕ್ಕಾಚಾರವನ್ನು ಮತ್ತಷ್ಟು ಜಟಿಲಗೊಳಿಸಿದೆ. ಅಳಿದುಳಿದ ಬೆಸ್ತರು ತಮ್ಮ ಸಂಖ್ಯೆಯು ಕ್ಷೀಣಿಸಿರುವುದನ್ನು ಒಪ್ಪುತ್ತಾರೆ. ಲಾಂಗ್ ಲಿವ್ ಯಮುನಾ ಎಂಬ ಆಂದೋಲನದ ನೇತೃತ್ವ ವಹಿಸಿರುವ ನಿವೃತ್ತ ಅರಣ್ಯಾಧಿಕಾರಿ ಮನೋಜ್ ಮಿಶ್ರ, ಸ್ವಾತಂತ್ರ್ಯಪೂರ್ವದಲ್ಲಿ ಸಾವಿರಗಳಷ್ಟಿದ್ದ ಪೂರ್ಣಕಾಲಿಕ ಬೆಸ್ತರ ಸಂಖ್ಯೆಯೀಗ ನೂರಕ್ಕಿಂತಲೂ ಕಡಿಮೆಯೆಂಬುದಾಗಿ ತಿಳಿಸುತ್ತಾರೆ.

"ಯಮುನಾ ನದಿಯಲ್ಲಿನ ಬೆಸ್ತರ ಗೈರುಹಾಜರಿಯು ನದಿಯು ಅವಸಾನಗೊಂಡಿರುವ ಅಥವ ಅವಸಾನಗೊಳ್ಳುತ್ತಿರುವುದರ ಸೂಚಕವಾಗಿದೆ. ಇವರ ನಿರ್ಗಮನವು ಪ್ರಸ್ತುತ ಪರಿಸ್ಥಿತಿಯ ದ್ಯೋತಕವಾಗಿದೆ. ಈಗ ಘಟಿಸುತ್ತಿರುವ ವಿದ್ಯಮಾನಗಳೆಲ್ಲವೂ ಇದಕ್ಕೆ ಇಂಬು ಕೊಡುವಂತಿದ್ದು ಮಾನವ ಚಟುವಟಿಕೆಗಳಿಂದಾಗಿ ಉಂಟಾದ ಹವಾಮಾನ ಬಿಕ್ಕಟ್ಟಿನಿಂದ ಈ ಅವಸಾನವು ಮತ್ತಷ್ಟು ತೀವ್ರಗೊಂಡಿದೆ. ಪರಿಸರಕ್ಕೆ ನವಚೈತನ್ಯವನ್ನು ನೀಡುವ ಜೀವವೈವಿಧ್ಯತೆಯು ಸಾಧ್ಯವಾಗುತ್ತಿಲ್ಲ. ಶೇ. 40ರಷ್ಟು ಇಂಗಾಲವು ಜಾಗತಿಕವಾಗಿ ಸಾಗರಗಳಿಂದ ಹೀರಲ್ಪಡುವ ಕಾರಣ, ಇದು ಜೀವನಚಕ್ರವನ್ನು ಪ್ರಭಾವಿಸುತ್ತಿದೆ", ಎನ್ನುತ್ತಾರೆ ರಿಸರ್ಚ್ ಕಲೆಕ್ಟಿವ್ಸ್‍ ನ ಸಿದ್ಧಾರ್ಥ್ ಚಕ್ರವರ್ತಿ.

*****

ದೆಹಲಿಯ ಶೇ. 40ರಷ್ಟು ಭಾಗದಲ್ಲಿ ಒಳಚರಂಡಿಯ ಸಂಪರ್ಕವಿಲ್ಲದ ಕಾರಣ, ಅಗಣಿತ ಟನ್‍ ಗಳಷ್ಟು  ಮಲಮೂತ್ರ ಹಾಗೂ ನಂಜು ತುಂಬಿದ ಕೆರೆ ಮತ್ತು ಇತರೆ ಮೂಲಗಳ ನಿರುಪಯುಕ್ತ ವಸ್ತುಗಳು ನೀರಿಗೆ ಸುರಿಯಲ್ಪಡುತ್ತಿವೆ. 1797 ಅನಧಿಕೃತ ಕಾಲೋನಿಗಳ ಪೈಕಿ ಶೇ. 20ಕ್ಕಿಂತಲೂ ಕಡಿಮೆ ಕಾಲೋನಿಗಳಿಗೆ ಒಳಚರಂಡಿ ಪೈಪ್‍ಲೈನ್‍ ಗಳಿವೆ. ವಸತಿ ಪ್ರದೇಶಗಳಲ್ಲಿ 51,837 ಕೈಗಾರಿಕೆಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ಅವುಗಳ ತ್ಯಾಜ್ಯವು ನೇರವಾಗಿ ಚರಂಡಿಗೆ ಸೇರುತ್ತಿದ್ದು, ಅಂತಿಮವಾಗಿ ನದಿಯನ್ನು ಪ್ರವೇಶಿಸುತ್ತಿದೆ ಎಂಬುದಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ತಿಳಿಸುತ್ತದೆ.

ನದಿಯೊಂದಿಗೆ ಮಾನವನ ಚಟುವಟಿಕೆಯ ಶ್ರೇಣಿ, ವಿಧಾನ ಹಾಗೂ ಆರ್ಥಿಕತೆಯ ನಿಟ್ಟಿನಲ್ಲಿ ನದಿಯ ಅವಸಾನದ ಹಿನ್ನೆಲೆಯ ಪ್ರಸ್ತುತ ಬಿಕ್ಕಟ್ಟನ್ನು ಗ್ರಹಿಸಬಹುದು.

ಮೀನುಗಳ ಲಭ್ಯತೆಯು ತೀವ್ರವಾಗಿ ಕಡಿಮೆಯಾಗುತ್ತಿದ್ದು ಬೆಸ್ತರ ಆದಾಯವು ಕ್ಷೀಣಿಸುತ್ತಿದೆ. ಮೊದಲಿಗೆ, ಮೀನುಗಾರಿಕೆಯಿಂದ ಅವರು ಸಾಕಷ್ಟು ಆದಾಯವನ್ನು ಗಳಿಸುತ್ತಿದ್ದರು. ಕುಶಲ ಮೀನುಗಾರರು ಕೆಲವೊಮ್ಮೆ ಮಾಹೆಯಾನ 50,000 ರೂ.ಗಳನ್ನು ಸಂಪಾದಿಸಬಹುದಿತ್ತು.

ರಾಂ ಘಾಟ್‍ ನಲ್ಲಿ ವಾಸಿಸುವ 42 ವರ್ಷದ ಆನಂದ್ ಸಾಹ್ನಿ, ತಾವು ವಯಸ್ಕರಾಗಿದ್ದಾಗ ಬಿಹಾರದ ಮೋತಿಹರಿ ಜಿಲ್ಲೆಯಿಂದ ದೆಹಲಿಗೆ ಬಂದರು. "20 ವರ್ಷದಲ್ಲಿ ನನ್ನ ಸಂಪಾದನೆಯ ಅರ್ಧ ಭಾಗದಷ್ಟು ಕಡಿಮೆಯಾಗಿದೆ. ಈಗ ನನಗೆ ದಿನಂಪ್ರತಿ 100-200 ರೂ.ಗಳು ದೊರೆಯುತ್ತಿವೆ. ನನ್ನ ಕುಟುಂಬವನ್ನು ಪೋಷಿಸಲು ಇತರೆ ಮಾರ್ಗಗಳನ್ನು ಹುಡುಕಬೇಕು. ಮಛಲೀ ಕ ಕಾಮ್ (ಮೀನುಗಾರಿಕೆ) ಖಾಯಂ ಉದ್ಯೋಗವಾಗಿ ಉಳಿದಿಲ್ಲ", ಎಂದು ಅವರು ನಿರಾಸೆಯಿಂದ ತಿಳಿಸಿದರು.

ಮಲ್ಲ ಅಥವ ಬೆಸ್ತ ಮತ್ತು ಅಂಬಿಗರ ಸಮುದಾಯದ 30-40 ಕುಟುಂಬಗಳು, ಹೆಚ್ಚು ಮಾಲಿನ್ಯಕ್ಕೊಳಗಾಗದ ಯಮುನೆಯ ರಾಂ ಘಾಟ್‍ನಲ್ಲಿ ವಾಸಿಸುತ್ತವೆ. ತಮ್ಮ ಬಳಕೆಗೆಂದು ಕೆಲವು ಮೀನುಗಳನ್ನು ಉಳಿಸಿಕೊಂಡು, ಉಳಿದುದನ್ನು ಹತ್ತಿರದ ಸೋನಿಯ ವಿಹಾರ್, ಗೋಪಾಲ್‍ಪುರ್ ಮತ್ತು ಹನುಮಾನ್ ಚೌಕದ ಮಾರುಕಟ್ಟೆಗಳಲ್ಲಿ ಮೀನಿನ ಪ್ರಕಾರಗಳಿಗನುಸಾರವಾಗಿ ಕೆ.ಜಿ.ಗೆ 50 ರಿಂದ 200 ರೂ.ಗಳವರೆಗೆ ಇವರು ಮೀನಿನ ಮಾರಾಟ ಮಾಡುತ್ತಾರೆ.

PHOTO • People's Archive of Rural India

"ನನ್ನ ಕುಟುಂಬವನ್ನು ಪೋಷಿಸಲು ಇತರೆ ಮಾರ್ಗಗಳನ್ನು ಹುಡುಕಬೇಕು. ಮಛಲೀ ಕ ಕಾಮ್ (ಮೀನುಗಾರಿಕೆ) ಖಾಯಂ ಉದ್ಯೋಗವಾಗಿ ಉಳಿದಿಲ್ಲ", ಎಂದು ರಾಂ ಘಾಟ್‍ ನ ನಿವಾಸಿ ಆನಂದ್ ಸಾಹ್ನಿ ನಿರಾಸೆಯಿಂದ ನುಡಿದರು

*****

ತಿರುವನಂತಪುರಂ ನಲ್ಲಿ ನೆಲೆಸಿರುವ ಹಿರಿಯ ಪರಿಸರ ಸಲಹೆಗಾರರಾದ ಡಾ. ರಾಧಾ ಗೋಪಾಲನ್, ಮಳೆಯ ಪ್ರಮಾಣ ಮತ್ತು ಉಷ್ಣತೆಯ ಏರುಪೇರುಗಳನ್ನೊಳಗೊಂಡ ಹವಾಮಾನದ ಬಿಕ್ಕಟ್ಟು, ಯಮುನೆಗೆ ಹಲವು ಸ್ತರಗಳ ಸಮಸ್ಯೆಯನ್ನು ಉಂಟುಮಾಡಿದೆ ಎನ್ನುತ್ತಾರೆ. ನೀರಿನ ಗುಣಮಟ್ಟ ಹಾಗೂ ಪ್ರಮಾಣದಲ್ಲಿನ ರಾಜಿ ಹಾಗೂ ಹವಾಮಾನ ಬದಲಾವಣೆಯ ಅನಿಶ್ಚಿತತೆಯು ಮೀನುಗಳ ಲಭ್ಯತೆಯ ಪ್ರಮಾಣ ಹಾಗೂ ಅವುಗಳ ಗುಣಮಟ್ಟವನ್ನು ಕ್ಷೀಣಿಸಿದ್ದು, ಸಮಸ್ಯೆಯನ್ನು ಮತ್ತಷ್ಟು ಉಲ್ಭಣಗೊಳಿಸಿದೆ.

34 ವರ್ಷದ ಸುನೀತ ದೇವಿ, "ನೀರು ಕಲುಷಿತಗೊಂಡಿರುವ ಕಾರಣ ಮೀನುಗಳು ಸಾಯುತ್ತಿವೆ", ಎನ್ನುತ್ತಾರೆ. ಮೀನುಗಾರಿಕೆಯಲ್ಲಿ ನಿರತರಾಗಿದ್ದ ಆಕೆಯ ಪತಿ ನರೇಶ್ ಸಾಹ್ನಿ ದಿನಗೂಲಿಯನ್ನರಸಿ ದೂರಕ್ಕೆ ತೆರಳಿದ್ದಾರೆ. "ಜನರು ಎಲ್ಲ ರೀತಿಯ ನಿರುಪಯುಕ್ತ ವಸ್ತುಗಳನ್ನೂ ಅದರಲ್ಲೂ ಈಚಿನ ದಿನಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ತಂದು ಎಸೆಯುತ್ತಾರೆ. ಮತೀಯ ಸಮಾರಂಭಗಳಲ್ಲಿ ಅವರು ಪೂರಿ, ಜಿಲೇಬಿ ಮತ್ತು ಲಾಡುಗಳಂತಹ ತಿನಿಸುಗಳನ್ನೂ ತಂದು ಸುರಿಯುತ್ತಾರೆ. ಇದರಿಂದಾಗಿ ನದಿಯು ಕೊಳೆಯುತ್ತಿದೆ", ಎಂದು ಸಹ ಅವರು ತಿಳಿಸಿದರು.

ದೇವತಾ ವಿಗ್ರಹಗಳನ್ನು ನದಿಯಲ್ಲಿ ವಿಸರ್ಜಿಸುವ ಚಟುವಟಿಕೆಗಳಿಂದಾಗಿ ನದಿಗೆ ಹೆಚ್ಚಿನ ಹಾನಿಯುಂಟಾಗುತ್ತಿದೆ ಎಂಬ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ವರದಿಯ ನಂತರ, ಕಳೆದ ನೂರು ವರ್ಷಗಳಲ್ಲಿ ಮೊದಲ ಬಾರಿಗೆ 2019ರ ಅಕ್ಟೋಬರ್‍ನಲ್ಲಿ, ದುರ್ಗಾಪೂಜೆಯ ಸಂದರ್ಭದಲ್ಲಿ ವಿಗ್ರಹಗಳ ವಿಸರ್ಜನೆಯನ್ನು ಇಲ್ಲಿ ನಿಷೇಧಿಸಲಾಯಿತು.

ದರಿಯಾ, ಬಾದಲ್, ಬಾದ್‍ ಶಾ (ನದಿ, ಮೋಡಗಳು ಮತ್ತು ಸಾರ್ವಭೌಮ) ಎಂಬ ನಗರ ನಿರ್ಮಿತಿಯ ಕುರಿತಾದ ಹಳೆಯ ಗಾದೆಗನುಸಾರವಾಗಿ ಮೊಘಲರು 16 ಮತ್ತು 17ನೇ ಶತಮಾನಗಳಲ್ಲಿ ದೆಹಲಿಯಲ್ಲಿ ತಮ್ಮ ಸಾಮ್ರಾಜ್ಯವನ್ನು ನಿರ್ಮಿಸಿದರು. ಕೌಶಲ್ಯದ ಮಾದರಿಯೆಂಬುದಾಗಿ ಪರಿಗಣಿತವಾಗಿದ್ದ ಅವರ ನೀರಿನ ವ್ಯವಸ್ಥೆಯು ಇಂದು ಐತಿಹಾಸಿಕ ಅವಶೇಷವಾಗಿ ಉಳಿದಿದೆಯಷ್ಟೇ. 18ನೇ ಶತಮಾನದಲ್ಲಿ ಬ್ರಿಟಿಷರು ನೀರನ್ನು ಕೇವಲ ಸಂಪನ್ಮೂಲವೆಂಬ ನಿಟ್ಟಿನಲ್ಲಿ ವ್ಯವಹರಿಸಿದರಲ್ಲದೆ, ಯಮುನೆಗೆ ವಿಮುಖವಾಗುವಂತೆ ನವ ದೆಹಲಿಯನ್ನು ನಿರ್ಮಿಸಿದರು. ದಿನಕಳೆದಂತೆ ಜನಸಂಖ್ಯೆಯ ವಿಸ್ಫೋಟದಿಂದಾಗಿ ನಗರೀಕರಣಕ್ಕೆ ನಾಂದಿಯಾಯಿತು.

ನರೆಟಿವ್ಸ್ ಆಫ್ ದಿ ಎನ್ವಿರಾನ್ಮೆಂಟ್ ಆಫ್ ಡೆಲ್ಲಿ ಎಂಬ ಪುಸ್ತಕದಲ್ಲಿ (ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್‍ ನಿಂದ ಪ್ರಕಟಿತ) 1940 ಮತ್ತು 1970ರ ದಶಕದಲ್ಲಿ ಮೀನುಗಾರಿಕೆ, ಈಜು ಹಾಗೂ ದೆಹಲಿಯ ಓಖ್ಲಾ ಪ್ರದೇಶದಲ್ಲಿನ ವನವಿಹಾರವು ಜೀವನದ ಭಾಗಗಳಾಗಿದ್ದವು. ಓಕ್ಲಾ ಅಣೆಕಟ್ಟಿನ ಕೆಳ ಹರಿವಿನಲ್ಲಿ ಗಂಗೆಯ ಡಾಲ್ಫಿನ್‍ಗಳು ಕಾಣಸಿಗುತ್ತಿದ್ದವಲ್ಲದೆ, ನೀರು ಕಡಿಮೆಯಾದಾಗ ನದಿಯ ನಡುಗಡ್ಡೆಗಳ ಮೇಲೆ ಆಮೆಗಳು ಸೂರ್ಯಸ್ನಾನಕ್ಕೆಳೆಸುತ್ತಿದ್ದವು ಎಂಬುದನ್ನು ಹಳೆಯ ಕಾಲದ ಜನರು ನೆನಪು ಮಾಡಿಕೊಳ್ಳುತ್ತಾರೆ.

ಆಗ್ರಾದಲ್ಲಿ ನೆಲೆಸಿರುವ ಬ್ರಿಜ್ ಖಂಡೇವಾಲಾ ಅವರು, "ಯಮುನೆಯ ಅವಸಾನವು ಅಪಾಯಕಾರಿಯಾಗಿದೆ” ಎನ್ನುತ್ತಾರೆ. 2017ರಲ್ಲಿ ಉತ್ತರಾಖಂಡದ ಹೈಕೋರ್ಟ್, ಗಂಗಾ ಮತ್ತು ಯಮುನಾ ನದಿಗಳನ್ನು “ಜೀವಂತ ಪಳಿಯುಳಿಕೆಗಳು" ಎಂಬುದಾಗಿ ಘೋಷಿಸುತ್ತಲೇ ಈ ನಗರದ ಸರ್ಕಾರಿ ಅಧಿಕಾರಿಗಳ ವಿರುದ್ಧ ‘ಕೊಲೆ ಪ್ರಯತ್ನ’ದ ಮೊಕದ್ದಮೆಗಳನ್ನು ಇವರು ದಾಖಲಿಸಿದರು. ಇವರು ಯಮುನೆಯನ್ನು ನಿಧಾನಗತಿಯ ವಿಷದಿಂದ ಸಾಯಿಸುತ್ತಿದ್ದಾರೆಂಬುದು ಅವರ ಆಪಾದನೆಯಾಗಿದೆ.

ಜೊತೆಗೆ ಸರ್ಕಾರವು ನಗರದಾದ್ಯಂತದ ನೀರಿನ ಮಾರ್ಗಗಳನ್ನು ಬಂದರುಗಳಿಗೆ ಸಂಪರ್ಕಿಸುವ ಸರಾಗ್ ಮಾಲಾ ಯೋಜನೆಯನ್ನು ಪ್ರಾರಂಭಿಸುತ್ತಿದೆ. ಆದರೆ "ಬೃಹತ್ ಹಡಗಿನ ಸರಕುಗಳನ್ನು ನದಿಯ ದಡದ ಪ್ರಾಂತಗಳಿಗೆ ಕೊಂಡೊಯ್ದಲ್ಲಿ ನೀರು ಮತ್ತೆ ಮಲಿನಗೊಳ್ಳುತ್ತದೆ", ಎಂಬುದಾಗಿ ನ್ಯಾಷನಲ್ ಪ್ಲಾಟ್‍ಫಾರ್ಮ್ ಫಾರ್ ಸ್ಮಾಲ್ ಸ್ಕೇಲ್ ಫಿಶ್ ವರ್ಕರ್ಸ್ (ಇನ್‍ಲ್ಯಾಂಡ್) ಸಂಘಟನೆಯ ಚಟರ್ಜಿಯವರು ಎಚ್ಚರಿಸುತ್ತಾರೆ.

Pradip Chatterjee, head of the National Platform for Small Scale Fish Workers
PHOTO • Aikantik Bag
Siddharth Chakravarty, from the Delhi-based Research Collective, a non-profit group active on these issues
PHOTO • Aikantik Bag

ಎಡಕ್ಕೆ: ನ್ಯಾಷನಲ್ ಪ್ಲಾಟ್‍ಫಾರ್ಮ್ ಫಾರ್ ಸ್ಮಾಲ್ ಸ್ಕೇಲ್ ಫಿಶ್ ವರ್ಕರ್ಸ್ (ಇನ್‍ಲ್ಯಾಂಡ್) ಮುಖ್ಯಸ್ಥರಾದ ಪ್ರದೀಪ್ ಚಟರ್ಜಿ. ಬಲಕ್ಕೆ: ಈ ಸಮಸ್ಯೆಗಳ ನಿರ್ವಹಣೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ದೆಹಲಿಯ ರಿಸರ್ಚ್ ಕಲೆಕ್ಟಿವ್ ಎಂಬ ಲಾಭ ನಿರಪೇಕ್ಷ ತಂಡದ ಸಿದ್ಧಾರ್ಥ್ ಚಕ್ರವರ್ತಿ

Last year, thousands of fish were found dead at the Kalindi Kunj Ghat on the southern stretch of the Yamuna in Delhi
PHOTO • Shalini Singh

ದೆಹಲಿಯ ಯಮುನೆಯ ದಕ್ಷಿಣ ಹರಿವಿನಲ್ಲಿನ ಕಾಲಿಂದಿ ಕುಂಜ್ ಘಾಟ್‍ ನಲ್ಲಿ ಕಳೆದ ವರ್ಷ, ಸಾವಿರಾರು ಮೀನುಗಳು ಸಾವಿಗೀಡಾಗಿರುವುದು ಕಂಡುಬಂದಿತು

*****

ಹಲ್ದರ್ ತನ್ನ ಕುಟುಂಬದ ಮೀನುಗಾರಿಕೆಯ ಕೊನೆಯ ಪೀಳಿಗೆಯವರಾಗಿದ್ದಾರೆ. ಪಶ್ಚಿಮ ಬಂಗಾಳದ ಮಲ್ದದವರಾದ ಇವರು ರಾಂ ಘಾಟ್‍ನಲ್ಲಿ ಮಾಹೆಯಾನ 15-20 ದಿನಗಳವರೆಗೆ ನೆಲೆಸುತ್ತಾರೆ. ಉಳಿದ ದಿನಗಳನ್ನು 25 ಹಾಗೂ 27 ವರ್ಷದ ತನ್ನ ಇಬ್ಬರು ಗಂಡು ಮಕ್ಕಳ ಜೊತೆ ನೊಯ್ಡಾದಲ್ಲಿ ಕಳೆಯುತ್ತಾರೆ. ಒಬ್ಬ ಮಗನು ಮೊಬೈಲ್‍ಗಳ ದುರಸ್ತಿಯಲ್ಲಿ ತೊಡಗಿದ್ದು, ಮತ್ತೊಬ್ಬನು ಮೊಟ್ಟೆಯ ಸುರುಳಿ (ಎಗ್ ರೋಲ್ಸ್) ಹಾಗೂ ಮೊಮೊಗಳ ಮಾರಾಟದಲ್ಲಿ ತೊಡಗಿದ್ದಾನೆ "ಮಕ್ಕಳು ನನ್ನ ವೃತ್ತಿಯನ್ನು ಗತಕಾಲದ್ದೆನ್ನುತ್ತಾರೆ. ನನ್ನ ಕಿರಿಯ ಸಹೋದರನೂ ಮೀನುಗಾರಿಕೆಯಲ್ಲಿ ತೊಡಗಿದ್ದಾನೆ. ಇದು ನಮ್ಮ ಪರಂಪರೆ. ಮಳೆಯಿರಲಿ, ಬಿಸಿಲಿರಲಿ ನಮಗೆ ತಿಳಿದಿರುವುದು ಇದೊಂದೇ. ಇತರೆ ಮಾರ್ಗಗಳನ್ನು ಅವಲಂಬಿಸಿದಲ್ಲಿ, ನಾನು ಹೇಗೆ ಬದುಕುಳಿಯಬಲ್ಲೆನೆನ್ನುವುದು ನನಗೆ ತಿಳಿದಿಲ್ಲ", ಎಂದು ಅವರು ಅಲವತ್ತುಕೊಳ್ಳುತ್ತಾರೆ.

"ಈಗ ಮೀನಿನ ಮೂಲಗಳೆಲ್ಲವೂ ಒಣಗಿವೆ. ಅವರು ಏನು ತಾನೇ ಮಾಡಿಯಾರು?", ಎಂಬುದಾಗಿ ಡಾ. ಗೋಪಾಲನ್ ಪ್ರಶ್ನಿಸುತ್ತಾರೆ. ಮೀನು ಅವರ ಪೌಷ್ಠಿಕಾಂಶದ ಮೂಲವೂ ಹೌದು. ಅರ್ಥವ್ಯವಸ್ಥೆಯನ್ನು ರೂಪಿಸುವ ನಿಟ್ಟಿನ ಸಮಾಜೋ-ಆರ್ಥಿಕ ವಲಯದಲ್ಲಿ ಇವರನ್ನು ನೆಲೆಗೊಳಿಸತಕ್ಕದ್ದು. ಇವು ಪ್ರತ್ಯೇಕ ಅಸ್ತಿತ್ವವನ್ನುಳ್ಳ ಸಂಗತಿಗಳಲ್ಲ. ನಮಗೆ ಆದಾಯ ಹಾಗೂ ಪರಿಸರ ವ್ಯವಸ್ಥೆಯಲ್ಲಿನ ವಿವಿಧತೆಯ ಅವಶ್ಯಕತೆಯಿದೆ.

ಏತನ್ಮಧ್ಯೆ, ಸರ್ಕಾರಿ ವಲಯದಲ್ಲಿ ಹವಾಮಾನ ಬಿಕ್ಕಟ್ಟಿನ ಬಗ್ಗೆ ಜಾಗತಿಕ ಸ್ತರದ ಮಾತುಗಳನ್ನಾಡುತ್ತಿದ್ದು, ರಫ್ತಿನ ಉದ್ದೇಶಕ್ಕಾಗಿ ಮೀನಿನ ಕೃಷಿಯನ್ನು ಕೈಗೊಳ್ಳುವುದನ್ನು ಕುರಿತ ನೀತಿಗಳನ್ನು ರೂಪಿಸುವ ಪ್ರಯತ್ನಗಳು ನಡೆದಿವೆ ಎಂಬುದಾಗಿ ರಿಸರ್ಚ್ ಕಲೆಕ್ಟಿವ್‍ ನ ಚಕ್ರವರ್ತಿ ಮಾಹಿತಿ ನೀಡುತ್ತಾರೆ.

2017-18ರಲ್ಲಿ ಭಾರತವು $4.8  ಬಿಲಿಯನ್ ಮೌಲ್ಯದ ಸೀಗಡಿಗಳನ್ನು ರಫ್ತು ಮಾಡಿದೆ. ಇದು ಮೆಕ್ಸಿಕನ್ ನೀರಿನಲ್ಲಿ ದೊರಕುವ ಪೆಸಿಫಿಕ್ ವೈಟ್ ಸೀಗಡಿಯಾಗಿದ್ದು ವಿಶಿಷ್ಟ ಪ್ರಕಾರದ್ದಾಗಿದೆ. "ಅಮೆರಿಕದಲ್ಲಿ ಮೆಕ್ಸಿಕನ್ ಸೀಗಡಿಗಳಿಗೆ ಅಪಾರ ಬೇಡಿಕೆಯಿರುವ" ಕಾರಣ, ಭಾರತವು ಈ ಏಕಫಸಲಿನ ಕೃಷಿಯಲ್ಲಿ ತೊಡಗಿದೆ. ಸೀಗಡಿಯ ರಫ್ತಿನ ಕೇವಲ ಶೇ. 10ರಷ್ಟು ಭಾಗವು ಭಾರತದ ಜಲಪ್ರದೇಶಗಳಲ್ಲಿ ಹೇರಳವಾಗಿ ದೊರೆಯುವ ಬ್ಲ್ಯಾಕ್ ಟೈಗರ್ ಸೀಗಡಿಗಳನ್ನೊಳಗೊಂಡಿದೆ. ಭಾರತದ ಜೀವವೈವಿಧ್ಯತೆಯು ನಾಶವಾಗುತ್ತಿದ್ದು ಜೀವನೋಪಾಯದ ಮಾರ್ಗಗಳನ್ನು ಪ್ರಭಾವಿಸುತ್ತಿದೆ. "ಕಾರ್ಯನೀತಿಯು ರಫ್ತಿನತ್ತ ಅಭಿವಿನ್ಯಸ್ತಗೊಂಡಲ್ಲಿ ಅದು ದುಬಾರಿಯೆನಿಸುತ್ತದಲ್ಲದೆ, ಸ್ಥಳೀಯ ಪೌಷ್ಠಿಕಾಂಶ ಮತ್ತು ಅವಶ್ಯಕತೆಗಳನ್ನು ಪೂರೈಸಲಾರದು."

ಉತ್ಸಾಹಶೂನ್ಯ ಭವಿಷ್ಯವನ್ನು ಎದುರು ನೋಡುತ್ತಿರುವ ಹಲ್ದರ್ ಗೆ ತನ್ನ ಕಸುಬಿನ ಬಗ್ಗೆ ಅಭಿಮಾನವಿದೆ. ಮೀನುಗಾರಿಕೆಗೆ ಬಳಸುವ ದೋಣಿಗೆ 10,000 ಹಾಗೂ ಬಲೆಗೆ 3,000-5,000 ರೂ.ಗಳ ಬೆಲೆಯಿದೆ. ಫೋಮ್, ಮಣ್ಣು ಹಾಗೂ ಹಗ್ಗದಿಂದ ತಯಾರಿಸಿದ ಮೀನು ಹಿಡಿಯುವ ಬಲೆಯನ್ನು ಅವರು ನಮಗೆ ತೋರಿಸಿದರು. ಒಂದು ಬಲೆಯಿಂದ ಅವರಿಗೆ ದಿನಂಪ್ರತಿ 50-100 ರೂ.ಗಳ ಮೌಲ್ಯದ ಮೀನುಗಳು ದೊರೆಯುತ್ತವೆ.

ಇತ್ತೀಚಿನ ದಿನಗಳಲ್ಲಿ 45 ವರ್ಷದ ರಾಮ್ ಪರ್ವೇಶ್ ಬಿದಿರು ಮತ್ತು ಹಗ್ಗದಿಂದ ತಯಾರಿಸಿದ ಬೋನಿನೋಪಾದಿಯ ಉಪಕರಣದಿಂದ 1-2 ಕೆ.ಜಿ.ಗಳಷ್ಟು ಮೀನನ್ನು ಹಿಡಿಯುತ್ತಾರೆ. "ನಮ್ಮ ಹಳ್ಳಿಯಲ್ಲಿ ನಾವು ಇದನ್ನು ತಯಾರಿಸುವುದನ್ನು ಕಲಿತೆವು. ಬೋನಿನ ಎರಡೂ ಕಡೆಗಳಲ್ಲಿ ಅಟ್ಟೆ ಕ ಛಾರ (ಗೋಧಿಹಿಟ್ಟಿನ ತುಣುಕು) ಎಂಬ ಬೇಟೆಯನ್ನು ಆಕರ್ಷಿಸುವ ಆಹಾರವನ್ನಿಟ್ಟು, ಬೋನನ್ನು ನೀರಿನ ಕೆಳಕ್ಕೆ ಇಳಿಸಲಾಗುತ್ತದೆ. ಕೆಲವೇ ಗಂಟೆಗಳಲ್ಲಿ ಮೀನಿನ ಚಿಕ್ಕ ಪ್ರಕಾರವಾದ ‘ಪುಥಿ’ ಇದರಲ್ಲಿ ಸಿಲುಕಿಕೊಳ್ಳುತ್ತದೆ", ಎಂದು ಅವರು ವಿವರಿಸುತ್ತಾರೆ. ಪುಥಿ ಎಂಬುದು ಇಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವ ಮೀನು ಎಂಬುದಾಗಿ ಸೌತ್ ಏಷಿಯ ಆನ್ ಡ್ಯಾಮ್ಸ್, ರಿವರ್ಸ್ ಅಂಡ್ ಪೀಪಲ್ ನೆಟ್‍ವರ್ಕ್‍ ನ ಸ್ಥಳೀಯ ಸಕ್ರಿಯ ಕಾರ್ಯಕರ್ತರಾದ ಭಿಮ್ ಸಿಂಗ್ ರಾವತ್ ತಿಳಿಸುತ್ತಾರೆ. "ಛಿಲ್ವ ಮತ್ತು ಬಛುವಗಳು ಈಗ ಕಡಿಮೆಯಾಗಿದ್ದು, ಬಾಮ್ ಮತ್ತು ಮಲ್ಲಿ ಮೀನುಗಳು ಬಹುತೇಕ ನಶಿಸಿಹೋಗಿವೆ. ಮಗುರ್ (ಹೆಮ್ಮೀನು) ಮೀನುಗಳು ಕಲುಷಿತ ನೀರಿನ ಹರವಿನಲ್ಲಿ ಕಂಡುಬರುತ್ತವೆ."

'We are the protectors of Yamuna', declares Arun Sahni
PHOTO • Shalini Singh
Ram Parvesh with his wife and daughter at Ram Ghat, speaks of the many nearly extinct fish varieties
PHOTO • Shalini Singh

‘ನಾವು ಯಮುನೆಯ ಸಂರಕ್ಷಕರು’ ಎಂಬುದಾಗಿ ಅರುಣ್ ಸಾಹ್ನಿ (ಎಡಕ್ಕೆ) ಸ್ಪಷ್ಟಪಡಿಸಿದರು. ತಮ್ಮ ಪತ್ನಿ ಹಾಗೂ ಮಗಳೊಂದಿಗಿರುವ ರಾಮ್ ಪರ್ವೇಶ್ (ಬಲಕ್ಕೆ); ರಾಮ್ ಘಾಟ್‍ನಲ್ಲಿ ಬಹುತೇಕ ನಶಿಸಿಹೋಗಿರುವ ಅನೇಕ ಮೀನಿನ ಪ್ರಕಾರಗಳನ್ನು ಕುರಿತ ಮಾತುಕತೆಯಲ್ಲಿ ತೊಡಗಿದ್ದಾರೆ

ನಾವು ಯಮುನೆಯ ಸಂರಕ್ಷಕರು ಎಂದು ಮುಗುಳ್ನಕ್ಕ 75 ವರ್ಷದ ಅರುಣ್ ಸಾಹ್ನಿ, 4 ದಶಕಗಳ ಹಿಂದೆ ಬಿಹಾರಿನ ವೈಶಾಲಿ ಜಿಲ್ಲೆಯಲ್ಲಿ ತಮ್ಮ ಕುಟುಂಬವನ್ನು ಬಿಟ್ಟು ದೆಹಲಿಗೆ ಬಂದರು. 1980-90ರ ದಶಕದಲ್ಲಿ ರೊಹು, ಚಿಂಗ್ರಿ, ಸೌಲ್, ಮಲ್ಲಿ ಪ್ರಕಾರಗಳನ್ನೊಳಗೊಂಡಂತೆ ದಿನಂಪ್ರತಿ ಇವರಿಗೆ ಸುಮಾರು 50 ಕೆ.ಜಿ.ಯಷ್ಟು ಮೀನು ದೊರೆಯುತ್ತಿತ್ತು. ಈಗ ಕೇವಲ 10 ಕೆ.ಜಿ ಅಥವ 20 ಕೆ.ಜಿ.ಯಷ್ಟು ಮೀನುಗಳು ಮಾತ್ರವೇ ಅವರಿಗೆ ಲಭ್ಯವಾಗುತ್ತವೆ.

ಕುತುಬ್ ಮಿನಾರ್ ಗಿಂತಲೂ ಎರಡರಷ್ಟು ಎತ್ತರವಿದ್ದು, ರಾಮ್ ಘಾಟ್‍ ನಿಂದ ನೋಡಬಹುದಾದ ಯಮುನೆಯ ಹೆಗ್ಗುರುತಿನಂತಿರುವ ಸೇತುವೆಯನ್ನು ಸುಮಾರು 1,518 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. 1993ರಿಂದ ಸುಮಾರು 1,514 ಕೋಟಿ ರೂ.ಗಳ ವೆಚ್ಚದಲ್ಲಿ ಯಮುನೆಯನ್ನು ಸ್ವಚ್ಛಗೊಳಿಸುವ ಪ್ರಯತ್ನಗಳು ಯಶಸ್ವಿಯಾಗಿರುವುದಿಲ್ಲ.

ಅಧಿಕಾರಿಗಳ ಈ ವೈಫಲ್ಯವು ನಾಗರಿಕರ ಜೀವನ ಹಾಗೂ ಆರೋಗ್ಯವನ್ನು ಪ್ರಭಾವಿಸುತ್ತಿದ್ದು ನದಿಯ ಅಸ್ತಿತ್ವವನ್ನೇ ಅಪಾಯಕ್ಕೆ ತಳ್ಳಿದೆಯಲ್ಲದೆ, ಗಂಗಾ ನದಿಯನ್ನೂ ಪ್ರಭಾವಿಸುತ್ತಿದೆ ಎಂಬುದಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಎಚ್ಚರಿಕೆ ನೀಡಿದೆ.

"ಕಾರ್ಯನೀತಿಯ ಹಂತದಲ್ಲಿಯೇ ಸಮಸ್ಯೆಯಿದೆ. 1993ರ ಯಮುನಾ ಕಾರ್ಯ ಯೋಜನೆಯನ್ನು ತಾಂತ್ರಿಕ ದೃಷ್ಟಿಕೋನದಿಂದ ಮಾತ್ರವೇ ರೂಪಿಸಲಾಗಿದ್ದು, ನದಿಗೂ ಸಹ ಒಂದು ಅಸ್ತಿತ್ವವಿದೆ ಅಥವ ಅದೂ ಸಹ ಪರಿಸರದ ವ್ಯವಸ್ಥೆಯ ಭಾಗವೆಂಬ ನಿಟ್ಟಿನ ಗ್ರಹಿಕೆಯಿಲ್ಲ. ನದಿಯೊಂದು ಜಲಾನಯನ ಪ್ರದೇಶದ ಕಾರ್ಯಗಳಿಂದುಂಟಾಗುವ ಅಸ್ತಿತ್ವವೇ ಆಗಿದೆ. ಇನ್ನು ದೆಹಲಿಯು ಯಮುನೆಗೆ ಜಲಾನಯನ ಪ್ರದೇಶವಾಗಿರುವ ಭೂಭಾಗ. ಜಲಾನಯನ ಪ್ರದೇಶವನ್ನು ಸ್ವಚ್ಛಗೊಳಿಸದೆ, ನದಿಯನ್ನು ಸ್ವಚ್ಛಗೊಳಿಸುವುದು ಸಾಧ್ಯವಿಲ್ಲ", ಎನ್ನುತ್ತಾರೆ ಡಾ. ಗೋಪಾಲನ್.

ಸಮುದ್ರದ ಸಂರಕ್ಷಣೆಯಲ್ಲಿ ನಿರತರಾದ ದಿವ್ಯಾ ಕಾರ್ನಾಡ್ ತಿಳಿಸುವಂತೆ ಮೀನುಗಾರರು ಕಲ್ಲಿದ್ದಲ ಗಣಿಗಳ ಅಪರಾಧ ಸೂಚಕರಿದ್ದಂತೆ. "ಭಾರದ ಲೋಹಗಳು ಕೇಂದ್ರೀಯ ನರವ್ಯವಸ್ಥೆಯನ್ನು ವಿಫಲಗೊಳಿಸುತ್ತವೆ ಎಂಬುದನ್ನು ಕುರಿತಂತೆ ಹಾಗೂ ಅತ್ಯಂತ ಕಲುಷಿತ ನದಿಗಳ ಬಳಿಯಿರುವ ಪ್ರದೇಶಗಳಲ್ಲಿನ ಅಂತರ್ಜಲದ ಬಳಕೆಯು ನಮ್ಮ ಮಾನಸಿಕ ಆರೋಗ್ಯವನ್ನು ಪ್ರಭಾವಿಸುತ್ತದೆಯೆಂಬುದರ ಬಗ್ಗೆ ಗಮನಹರಿಸದಿರುವುದು ಹೇಗೆ ತಾನೇ ಸಾಧ್ಯ? ದಡದಲ್ಲಿನ ಮೀನುಗಾರರು ಇವುಗಳ ಪರಸ್ಪರ ಸಂಬಂಧವನ್ನು ಹಾಗೂ ತ್ವರಿತ ಪರಿಣಾಮಗಳನ್ನು ಕಾಣುತ್ತಾರೆ", ಎನ್ನುತ್ತಾರೆ ದಿವ್ಯಾ.

ಸೂರ್ಯನು ಮುಳುಗಿದ ಸಾಕಷ್ಟು ಸಮಯದ ನಂತರ ತನ್ನ ಬಲೆಯನ್ನು ಬೀಸುವ ಸಿದ್ಧತೆಯಲ್ಲಿ ತೊಡಗಿದ ಹಲ್ದರ್, "ಇದು ನನಗೆ ನೆಮ್ಮದಿಯನ್ನು ಕೊಡುವ ಕೊನೆಯ ಸಣ್ಣ ಪ್ರಯತ್ನ", ಎಂದು ಮುಗುಳ್ನಕ್ಕರು. ಬಲೆಯನ್ನು ಬೀಸಲು ರಾತ್ರಿ 9ರ ಸಮಯವು ಅತ್ಯಂತ ಸೂಕ್ತವಾದುದು. ಸೂರ್ಯೋದಯವಾಗುತ್ತಿದ್ದಂತೆಯೇ ಬಲೆಗೆ ಬಿದ್ದ ಮೀನುಗಳನ್ನು ಸಂಗ್ರಹಿಸಿದಲ್ಲಿ ದೊರೆಯುವ "ಸತ್ತ ಮೀನುಗಳು ತಾಜಾ ಸ್ಥಿತಿಯಲ್ಲಿರುತ್ತವೆ", ಎನ್ನುತ್ತಾನೆ ಆತ.

ಯು.ಎನ್‍.ಡಿ.ಪಿ ಆಶ್ರಯದಲ್ಲಿ ಪರಿಯ ವತಿಯಿಂದ ದೇಶಾದ್ಯಂತ ಪರಿಸರದಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ವರದಿಸುವ ಯೋಜನೆಯನ್ನು ಕೈಗೊಳ್ಳಲಾಗಿದ್ದು, ಸದರಿ ವಿಷಯವನ್ನು ಕುರಿತಂತೆ ಸಾಮಾನ್ಯ ಜನರ ಅನುಭವ ಮತ್ತು ಹೇಳಿಕೆಗಳನ್ನು ಗ್ರಹಿಸುವ ನಿಟ್ಟಿನಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ.

ಈ ಲೇಖನವನ್ನು ಪುನಃ ಪ್ರಕಟಿಸಲು ಬಯಸಿದಲ್ಲಿ, [email protected] ಗೆ ಬರೆದು, ಅದರ ಪ್ರತಿಯನ್ನು [email protected] ಗೆ ಸಲ್ಲಿಸಿ.

ಅನುವಾದ: ಶೈಲಜ ಜಿ. ಪಿ.
Reporter : Shalini Singh

Shalini Singh is a founding trustee of the CounterMedia Trust that publishes PARI. A journalist based in Delhi, she writes on environment, gender and culture, and was a Nieman fellow for journalism at Harvard University, 2017-2018.

Other stories by Shalini Singh

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Series Editors : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.