PHOTO • P. Sainath

ಅ‌ದೊಂದು ಸರ್ಕಸ್ಸಿನವರು ನಡೆಸುವ ಬಿಗಿ-ಹಗ್ಗದ ಮೇಲಿನ ನಡಿಗೆಯಂತೆಯೇ ಇತ್ತು. ಆದರೆ ಇಲ್ಲಿ ಅಪಾಯ ಇನ್ನೂ ಹೆಚ್ಚು. ಯಾಕೆಂದರೆ ಇದರಲ್ಲಿ ಅವರಿಗೆ ಯಾವುದೇ ಸುರಕ್ಷಾ ಪರದೆಗಳು ಅಥವಾ ಇತರ ರಕ್ಷಣೆಗಳು ಇರಲಿಲ್ಲ. ಅವರು ಹೋಗುತ್ತಿದ್ದ ಬಾವಿಗೆ ಯಾವುದೇ ರಕ್ಷಣಾ ಗೋಡೆಗಳಿರಲಿಲ್ಲ. ಅದಕ್ಕೆ ಒಂದಷ್ಟು ಮರದ ದಿಮ್ಮಿಗಳನ್ನು ಅಲ್ಲಿನ 44 ಡಿಗ್ರಿ ಬಿಸಿ ಗಾಳಿ ಹೊತ್ತು ತರುವ ಮಣ್ಣು ಕಸ-ಕಡ್ಡಿಗಳು ಬಾವಿಗೆ ಬೀಳದಂತೆ ಮರೆಯಾಗಿ ಮುಚ್ಚಲಾಗಿತ್ತು. ಅದರಲ್ಲೇ ಒಂದಿಷ್ಟು ಮರದ ದಿಮ್ಮಿಗಳನ್ನು ವಿವಿಧ ಕೋನಗಳಲ್ಲಿ ಜೋಡಿಸಿ ನೀರೆತ್ತಲು ಅನುಕೂಲ ಮಾಡಲಾಗಿತ್ತು.

ಆಕೆ ಆ ಹಲಗೆಗಳ ಮೇಲೆ ನಿಂತು ನೀರನ್ನು ಸೇದಬೇಕಿತ್ತು. ಆ ಮಹಿಳೆ ಅಲ್ಲಿ ಎರಡು ಬಗೆಯ ಅಪಾಯಗಳನ್ನು ಎದುರಿಸುತ್ತಿದ್ದರು. ಆಕೆ ಜಾರಿ ಬೀಳಬಹುದು ಅಥವಾ ಆಕೆಯ ಭಾರಕ್ಕೆ ಹಲಗೆ ಕುಸಿಯಬಹುದು. ಇವೆರಡರಲ್ಲಿ ಯಾವುದೇ ನಡೆದರೂ ಬೀಳುವುದು ಇಪ್ಪತ್ತು ಟಡಿ ಆಳಕ್ಕೆ ಎನ್ನುವುದು ಮಾತ್ರ ಸತ್ಯ. ಅದರಲ್ಲೂ ಹಲಗೆಗಳು ಒಳಮುಖವಾಗಿ ಮುರಿದು ಪಕ್ಕಕ್ಕೆ ಬಿದ್ದರೆ ಕಾಲು ಪುಡಿ ಪುಡಿಯಾಗುವುದು ಖಚಿತ.

ಸದ್ಯ, ದಿನ ಅಂತಹದ್ದೇನೂ ಸಂಭವಿಸಲಿಲ್ಲ. ಅಲ್ಲಿ ನೀರಿಗೆ ಬಂದಿದ್ದ ಯುವತಿ ಅ ಫಾಲಿಯಾ ಅಥವಾ ಕುಗ್ರಾಮಕ್ಕೆ ಸೇರಿದ (ಅದು ಕುಲ ಆಧಾರಿತವಾಗಬಹುದು) ಭಿಲಾಲ ಆದಿವಾಸಿ. ಆಕೆ ಅಂದು ಬಹಳ ಮನೋಹರವಾಗಿ ಹಲಗೆಗಳ ಮೇಲೆ ನಡೆದು ನೀರನ್ನು ಸೇದಿದರು. ಬಕೆಟ್‌ ಒಂದನ್ನು ಹಗ್ಗಕ್ಕೆ ಕಟ್ಟಿ ಅದರಿಂದ ನೀರು ಎಳೆದು ಇನ್ನೊಂದು ಪಾತ್ರೆಗೆ ತುಂಬಿ ಮತ್ತೆ ಬಕೆಟ್ನನು ನೀರಿಗೆ ಇಳಿಸುತ್ತಿದ್ದರು. ಇಷ್ಟೆಲ್ಲ ಆಗುವಾಗ ಯುವತಿಯಾಗಲಿ ಆ ಮರದ ತುಂಡುಗಳಾಗಲಿ ಒಂದಿಷ್ಟೂ ಅಲುಗಾಡಲಿಲ್ಲ. ಹೀಗೆ ನೀರು ತುಂಬಿಸಿಕೊಂಡವರೇ ಮಧ್ಯಪ್ರದೇಶದ ಜಾಬುವಾ ಜಿಲ್ಲೆಯ ವಕ್ನರ್ ಗ್ರಾಮದಲ್ಲಿರುವ ತನ್ನ ಮನೆಗೆ ಹೊರಟರು. ತಲೆಯ ಮೇಲೆ ಭಾರದ ಬಿಂದಿಗೆಯಿದ್ದರೆ ಕೈಯಲ್ಲಿ ಹಿಡಿಕೆಯ ಬಕೆಟ್‌ ಇತ್ತು.

ನಾನು ಕೂಡ ಆಕೆಯೊಂದಿಗೆ ಆಕೆಯ ಫಾಲಿಯಿಂದ ಒಂದಷ್ಟು ದೂರ ನಡೆದೆ. ಆ ಯುವತಿ ಈ ದಾರಿಯನ್ನು ಎರಡು ಬಾರಿ ನಡೆಯುತ್ತಾರೆ (ಕೆಲವೊಮ್ಮೆ ಅದಕ್ಕಿಂತ ಹೆಚ್ಚು). ಆಕೆ ಈ ಕೆಲಸಕ್ಕಾಗಿ ದಿನಕ್ಕೆ ಕನಿಷ್ಟ 6 ಕಿಲೋಮೀಟರ್‌ ದೂರ ಸವೆಸಬೇಕಿರುತ್ತದೆ. ಆ ಯುವತಿ ಅಲ್ಲಿಂದ ತೆರಳಿದ ನಂತರವೂ ಒಂದಿಷ್ಟು ಹೊತ್ತು ನಾನು ಅಲ್ಲೇ ಇದ್ದೆ ನಂತರ ಅಲ್ಲಿಗೆ ಬಂದ ಇನ್ನೊಬ್ಬ ಯುವತಿ ಮತ್ತು ಅನೇಕ ಸಣ್ಣ ಹುಡುಗಿಯರು ಕೂಡ ಅಷ್ಟೇ ಲೀಲಾಜಾಲವಾಗಿ ನೀರು ಸೇದಿಕೊಂಡು ಹೋದರು. ಅವರು ಅದನ್ನು ಮಾಡುವುದನ್ನು ನೋಡುತ್ತಿದ್ದರೆ ಬಹಳ ಸುಲಭವೆನ್ನುವಂತೆ ಕಾಣಿಸುತ್ತಿತ್ತು. ಅವರಿಂದ ಸ್ಫೂರ್ತಿಗೊಂಡ ನಾನೂ ಒಂದು ಕೈ ನೋಡಲು ನಿರ್ಧರಿಸಿ ಅಲ್ಲೇ ಇದ್ದ ಹುಡುಗಿಯಿಂದ ಬಕೆಟ್‌ ಮತ್ತು ಹಗ್ಗವನ್ನು ಪಡೆದುಕೊಂಡೆ. ಆದರೆ ನಾನು ಆ ಮರದ ತುಂಡುಗಳ ಮೇಲೆ ಕಾಲಿಡುತ್ತಿದ್ದಂತೆ ಅವು ಅತ್ತಿತ್ತ ಅಲುಗಾಡುತ್ತ ಒಂದಿಷ್ಟು ಜಾರಿದವು. ನಾನು ಮುಂದೆ ಹೋದಂತೆಲ್ಲ ಮರಗಳು ನಡುಗುತ್ತಿರುವಂತೆಯೂ ಬಾಗುತ್ತಿರುವಂತೆಯೂ ಕಾಣುತ್ತಿತ್ತು. ಹೀಗಾದಾಗಲೆಲ್ಲ ನಾನು ಮತ್ತೆ ದಡಕ್ಕೆ ಮರಳುತ್ತಿದ್ದೆ.

ಏತನ್ಮಧ್ಯೆ ಈ ನನ್ನ ಸರ್ಕಸ್‌ ನೋಡಲು ಬಾವಿ ಸುತ್ತ ನೆರೆದಿದ್ದ ಉತ್ಸಾಹಿ ಪ್ರೇಕ್ಷಕರಾದ ನೀರಿಗೆಂದು ಬಂದಿದ್ದ ಹೆಂಗಸರು ಮತ್ತು ಮಕ್ಕಳು ನಾನು ಬಾವಿಗೆ ಬೀಳಬಹುದಾದ ಕ್ಷಣವನ್ನು ಎದುರು ನೋಡುತ್ತಿದ್ದರು! ಅವರಿಗೆ ನನ್ನ ಪ್ರಯತ್ನಗಳು ತಮಾಷೆಯಾಗಿ ಕಾಣುತ್ತಿತ್ತು. 1994ರ ಈ ಘಟನೆಯನ್ನು ಈ ನೆನಪಿಸಿಕೊಂಡರೆ ಅಂದು ನಾನು ಕೊನೆಗೂ ಅರ್ಧ ಬಕೆಟ್‌ ನೀರೆತ್ತುವಲ್ಲಿ ಯಶಸ್ವಿಯಾಗಿದ್ದೆ ಮತ್ತು ಅಲ್ಲಿದ್ದವರಿಗೆ ಭರಪೂರ ಮಧ್ಯಾಹ್ನದ ಮನರಂಜನೆ ಒದಗಿಸುವಲ್ಲಿಯೂ ಯಶಸ್ವಿಯಾಗಿದ್ದೆ! ಅಲ್ಲಿ ನೆರೆದಿದ್ದ ನನ್ನ ಬಾಲ ಪ್ರೇಕ್ಷಕರು ನನಗಾಗಿ ಚಪ್ಪಾಳೆಯ ಪ್ರೋತ್ಸಾಹವನ್ನೂ ನೀಡಿ ಬೆನ್ನು ತಟ್ಟಿದ್ದರು!

ಜುಲೈ 12, 1996ರ ದಿ ಹಿಂದೂ ಬ್ಯುಸಿನೆಸ್‌ಲೈನ್‌ನಲ್ಲಿ ಈ ಲೇಖನದ ಸಂಕ್ಷಿಪ್ತ ಆವೃತ್ತಿ ಪ್ರಕಟವಾಗಿತ್ತು.

ಅನುವಾದ: ಶಂಕರ ಎನ್. ಕೆಂಚನೂರು

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru