“ಓದಲೆಂದು ಕುಳಿತಾಗ ನೋಟ್‌ಬುಕ್‌, ಪುಸ್ತಕಗಳ ಮೇಲೆ ನೀರು ಬೀಳುತ್ತಲೇ ಇರುತ್ತದೆ. ಬರವಣಿಗೆಯೆಲ್ಲ ಅಳಿಸಿ, ಪುಸ್ತಕದ ತುಂಬಾ ಶಾಯಿ ಹರಡುತ್ತದೆ" ಎಂದು ಎಂಟು ವರ್ಷದ ವಿಶಾಲ್ ಚವಾಣ್ ಹೇಳುತ್ತಾನೆ. ಇದು ಬಿದಿರು ಮತ್ತು ಭಾರದ ಕಲ್ಲುಗಳನ್ನು ಬಳಸಿ ಕಟ್ಟಿದ ಅವನ ಮನೆಯ ಕತೆ.

ಅಲೆಗಾಂವ್ ಜಿಲ್ಲಾ ಪರಿಷತ್ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿರುವ ವಿಶಾಲ್‌ನ ಕುಟುಂಬವು ಮಹಾರಾಷ್ಟ್ರದಲ್ಲಿ ಅಲೆಮಾರಿ ಬುಡಕಟ್ಟು ಜನಾಂಗಗಳಡಿ ಪಟ್ಟಿ ಮಾಡಲಾಗಿರುವ ಬೆಲ್ದಾರ್ ಸಮುದಾಯಕ್ಕೆ ಸೇರಿದೆ.

"ಮಳೆ ಬಂದಾಗ ಗುಡಿಸಲಿನ ಒಳಗೆ ಇರುವುದು ವಿಶೇಷವಾಗಿ ಕಷ್ಟ... ವಿವಿಧ ಸ್ಥಳಗಳಿಂದ ನೀರು ಹನಿಯಾಗುತ್ತದೆ" ಎಂದು ಅವನು ಹೇಳುತ್ತಾನೆ. ಇದೇ ಸಲುವಾಗಿ ಮತ್ತು ಅವನ ಒಂಬತ್ತು ವರ್ಷದ ಅಕ್ಕ ವೈಶಾಲಿ, ಶಿರೂರ್ ತಾಲ್ಲೂಕಿನ ಅಲೆಗಾಂವ್ ಪಾಗಾ ಗ್ರಾಮದಲ್ಲಿನ ತಮ್ಮ ಮನೆಯ ಛಾವಣಿ ಸೋರುತ್ತಿದೆಯೇ ಎಂದು ಛಾವಣಿಯನ್ನು ಆಗಾಗ ಪರೀಕ್ಷಿಸುತ್ತಿರುತ್ತಾರೆ.

ಅಕ್ಕ-ತಮ್ಮನ ಶೈಕ್ಷಣಿಕ ಆಸಕ್ತಿಯ ಕುರಿತು ಅವರ ಅಜ್ಜಿ ಶಾಂತಾಬಾಯಿ ಚವಾಣ್ ಅವರರಿಗೆ ಬಹಳ ಹೆಮ್ಮೆಯಿದೆ. "ನಮ್ಮ ಇಡೀ ಖಾಂದಾನಿನ [ಕುಟುಂಬದಲ್ಲಿ] ಯಾರೂ ಶಾಲೆಗೆ ಹೋಗಿಲ್ಲ, ನನ್ನ ಮೊಮ್ಮಕ್ಕಳು ಓದಲು ಮತ್ತು ಬರೆಯಲು ಕಲಿಯುತ್ತಿರುವವರಲ್ಲಿ ಮೊದಲಿಗರು" ಎಂದು 80 ವರ್ಷದ ಅವರು ಹೇಳುತ್ತಾರೆ.

ಆದರೆ ಶಾಂತಾಬಾಯಿ ಮೆಚ್ಚುಗೆಯ ಜೊತೆಗೆ ಹೃದಯ ವಿದ್ರಾವಕ ವಿಷಾದದ ಬಗ್ಗೆಯೂ ಮಾತನಾಡುತ್ತಾರೆ. "ಈಗ ಹುಡುಗರಿಗೆ ಸರಿಯಾಗಿ ಓದಲು ಮಾಡಲು ಒಂದು ಒಳ್ಳೆಯ ಮನೆಯಾಗಲೀ, ದೀಪವಾಗಲೀ ಇಲ್ಲ" ಎಂದು ಅವರು ತಮ್ಮ ಟಾರ್ಪಾಲಿನ್ ಮನೆಯ ಬಗ್ಗೆ ಬೇಸರದಿಂದ ಹೇಳುತ್ತಾರೆ.

Left: Nomadic families live in make-shift tarpaulin tents supported by bamboo poles.
PHOTO • Jyoti Shinoli
Right: Siblings Vishal and Vaishali Chavan getting ready to go to school in Alegaon Paga village of Shirur taluka.
PHOTO • Jyoti Shinoli

ಎಡ: ಅಲೆಮಾರಿ ಕುಟುಂಬಗಳು ಬಿದಿರನ್ನು ಬಳಸಿ ಕಟ್ಟಿದ ಟಾರ್ಪಾಲಿನ್ ಡೇರೆಗಳಲ್ಲಿ ವಾಸಿಸುತ್ತವೆ. ಬಲ: ಅಕ್ಕ-ತಮ್ಮಂದಿರಾದ ವಿಶಾಲ್ ಮತ್ತು ವೈಶಾಲಿ ಚವಾಣ್ ಶಿರೂರ್ ತಾಲ್ಲೂಕಿನ ಅಲೆಗಾಂವ್ ಪಾಗಾದಲ್ಲಿ ಶಾಲೆಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ

Vishal studying in his home (left) and outside the Alegaon Zilla Parishad school (right)
PHOTO • Jyoti Shinoli
Vishal studying in his home (left) and outside the Alegaon Zilla Parishad school (right)
PHOTO • Jyoti Shinoli

ವಿಶಾಲ್ ತನ್ನ ಮನೆಯಲ್ಲಿ (ಎಡ) ಮತ್ತು ಅವನು ಓದುತ್ತಿರುವ ಅಲೆಗಾಂವ್ ಜಿಲ್ಲಾ ಪರಿಷತ್ ಶಾಲೆಯ ಹೊರಗೆ (ಬಲ)

ಅವರ ತ್ರಿಕೋನಾಕಾರದ ಮನೆಯಲ್ಲಿ, ಐದು ಅಡಿಗಿಂತ ಹೆಚ್ಚು ಎತ್ತರವಿರುವವರು ಬಾಗಿ ಪ್ರವೇಶಿಸಬೇಕಾಗುತ್ತದೆ. ಪುಣೆ ಜಿಲ್ಲೆಯ ಅಲೆಗಾಂವ್ ಪಾಗಾ ಗ್ರಾಮದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಅವರ ಕುಗ್ರಾಮದಲ್ಲಿ ಬೆಲ್ದಾರ್, ಫೇಸ್ ಪಾರ್ಧಿ ಮತ್ತು ಭಿಲ್ ಬುಡಕಟ್ಟು ಜನಾಂಗಕ್ಕೆ ಸೇರಿದವರ 40 ಗುಡಿಸಲುಗಳಿವೆ. "ಗುಡಿಸಲಿನಲ್ಲಿ ವಾಸಿಸುವುದು ಸುಲಭದ ಕೆಲಸವಲ್ಲ. ಆದರೆ ಮಕ್ಕಳಿಗೆ ನಮ್ಮ ಕಷ್ಟ ಅರ್ಥವಾಗುತ್ತದೆಯಾದ್ದರಿಂದ ಅವರು ಈ ಕುರಿತು ದೂರು ಹೇಳುವುದಿಲ್ಲ" ಎಂದು ಶಾಂತಾಬಾಯಿ ಹೇಳುತ್ತಾರೆ.

ಅವರ ಗುಡಿಸಲಿನ ಟಾರ್ಪಲ್‌ ಬದಲಿಸಿ ಈಗಾಗಲೇ ಒಂಬತ್ತು ವರ್ಷಗಳಾಗಿವೆ. ಆ ಟಾರ್ಪಲಿನ್‌ ಎಲ್ಲೆಡೆ ಹರಿದು ಹೋಗಿದೆ. ಗುಡಿಸಲಿಗೆ ಯಾವುದೇ ರಿಪೇರಿ ಕೆಲಸವನ್ನಾಗಲೀ, ಹೊಸ ಟಾರ್ಪಲ್‌ ತರಲಾಗಲೀ ಅವರಿಂದ ಸಾಧ್ಯವಾಗುತ್ತಿಲ್ಲ.

“ಅಪ್ಪ ಅಮ್ಮ ಯಾವಾಗಲೂ ದೂರದೂರಿನಲ್ಲಿ ಕೆಲಸದಲ್ಲಿರುತ್ತಾರೆ" ಎಂದು ವಿಶಾಲ್ ಹೇಳುತ್ತಾನೆ. ಅವನ ತಾಯಿ ಚಂದಾ ಮತ್ತು ತಂದೆ ಸುಭಾಷ್ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಾರೆ. ಕಲ್ಲುಗಳನ್ನು ಒಡೆದು ಟೆಂಪೊಗಳಲ್ಲಿ ಲೋಡ್ ಮಾಡುವ ಶ್ರಮದಾಯಕ ಕೆಲಸದ ಹೊರತಾಗಿಯೂ, ಅವರಿಗೆ ತಲಾ 100 ರೂ. ಸಿಗುತ್ತದೆ. ಅದನ್ನು ತಿಂಗಳಿಗೆ ಲೆಕ್ಕ ಹಾಕಿದರೆ 6,000ಕ್ಕಿಂತ ಹೆಚ್ಚು ಸಿಗುವುದಿಲ್ಲ. ಈ ಆದಾಯದಿಂದ, ಐದು ಜನರಿರುವ ಅವರ ಕುಟುಂಬವು ಹೊಟ್ಟೆ-ಬಟ್ಟೆಯನ್ನಷ್ಟೇ ನೋಡಿಕೊಳ್ಳಲು ಸಾಧ್ಯ. "ಅಕ್ಕಿ, ಎಣ್ಣೆ ಇತ್ಯಾದಿಯನ್ನು ತಂದು ಮತ್ತೆ ಹಣ ಉಳಿಸುವುದು ಹೇಗೆ? ಮನೆ ನಿರ್ಮಿಸುವುದು ಹೇಗೆ?" ಎಂದು ಆರ್ಥಿಕ ಸಂಕಷ್ಟದಲ್ಲಿರುವ 42 ವರ್ಷದ ಚಂದಾ ಕೇಳುತ್ತಾರೆ.

*****

ಮಹಾರಾಷ್ಟ್ರದಲ್ಲಿ ಅಲೆಮಾರಿ ಬುಡಕಟ್ಟು ಜನಾಂಗದವರಿಗೆ ವಸತಿ ಒದಗಿಸಲು ಹಲವಾರು ಸರ್ಕಾರಿ ಕಲ್ಯಾಣ ಯೋಜನೆಗಳಿದ್ದರೂ, ಅವರ ಸಾಧಾರಣ ಸಂಪಾದನೆಯಿಂದ ಕಾಂಕ್ರೀಟ್ ಮನೆಯನ್ನು ನಿರ್ಮಿಸುವುದು ಮತ್ತು ಹೊಂದುವುದು ಚವಾಣ್ ಕುಟುಂಬಕ್ಕೆ ದೂರದ ಕನಸು. ಶಬರಿ ಆದಿವಾಸಿ ಘರ್ಕುಲ್ ಯೋಜನೆ, ಪಾರ್ಧಿ ಘರ್ಕುಲ್ ಯೋಜನೆ ಮತ್ತು ಯಶವಂತರಾವ್ ಚವಾಣ್ ಮುಕ್ತ್ ವಸಾಹತ್ ಯೋಜನೆಯಂತಹ ಯೋಜನೆಗಳಿಗೆ ಫಲಾನುಭವಿಯು ಜಾತಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. "ಯಾವುದೇ ಘರ್ಕುಲ್ ಯೋಜನೆ [ವಸತಿ ಯೋಜನೆ] ಪಡೆಯಲು, ನಾವು ಯಾರೆನ್ನುವುದನ್ನು ಸಾಬೀತುಪಡಿಸಬೇಕು. ನಮ್ಮ ಜಾತಿಯನ್ನು ನಾವು ಹೇಗೆ ಸಾಬೀತುಪಡಿಸುವುದು?" ಎಂದು ಚಂದಾ ಹೇಳುತ್ತಾರೆ.

2017ರ ಇಡಾಟೆ ಆಯೋಗದ ವರದಿಯು v ದೇಶಾದ್ಯಂತ ಅಲೆಮಾರಿ ಬುಡಕಟ್ಟು ಜನಾಂಗಗಳಲ್ಲಿ ಕಳಪೆ ವಸತಿ ವ್ಯವಸ್ಥೆಗಳು ಸಾಮಾನ್ಯ ನೋಟವಾಗಿದೆ ಎಂದು ಹೇಳುತ್ತದೆ. "ನಾವು ಹೇಗೆ ಬದುಕುತ್ತಿದ್ದೇವೆ ಎನ್ನುವುದನ್ನು ನೀವೇ ನೋಡುತ್ತಿದ್ದೀರಿ" ಎಂದು ಚಂದಾ ಹೇಳುತ್ತಾರೆ. ಆಯೋಗವು ಸಮೀಕ್ಷೆ ನಡೆಸಿದ 9,000 ಕುಟುಂಬಗಳಲ್ಲಿ, 50 ಪ್ರತಿಶತಕ್ಕೂ ಹೆಚ್ಚು ಕುಟುಂಬಗಳು ಅರೆ-ಪಕ್ಕಾ ಅಥವಾ ತಾತ್ಕಾಲಿಕ ಕಟ್ಟಡಗಳಲ್ಲಿ ವಾಸಿಸುತ್ತಿವೆ ಮತ್ತು 8 ಪ್ರತಿಶತದಷ್ಟು ಜನರು ತಮ್ಮ ಕುಟುಂಬಗಳೊಂದಿಗೆ ಡೇರೆಗಳಲ್ಲಿ ವಾಸಿಸುತ್ತಿದ್ದಾರೆ.

Left and Right: Most nomadic families in Maharashtra live in thatched homes
PHOTO • Jyoti Shinoli
Left and Right: Most nomadic families in Maharashtra live in thatched homes.
PHOTO • Jyoti Shinoli

ಎಡ ಮತ್ತು ಬಲ: ಮಹಾರಾಷ್ಟ್ರದ ಹೆಚ್ಚಿನ ಅಲೆಮಾರಿ ಕುಟುಂಬಗಳು ಗುಡಿಸಲು ಮನೆಗಳಲ್ಲಿ ವಾಸಿಸುತ್ತವೆ

ಸರ್ಕಾರಿ ಯೋಜನೆಗಳನ್ನು ಪಡೆಯಲು ಗುರುತಿನ ದಾಖಲೆಗಳನ್ನು ಪಡೆಯುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದೆ ಮತ್ತು ಅವುಗಳನ್ನು ಡಿನೋಟಿಫೈಡ್, ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟುಗಳ ರಾಷ್ಟ್ರೀಯ ಆಯೋಗವು ಸ್ವೀಕರಿಸಿದಂತೆ ದಾಖಲಿಸಲಾಗಿದೆ. ಆಯೋಗಕ್ಕೆ ಬಂದ 454 ಅರ್ಜಿಗಳ ಪೈಕಿ 304 ಅರ್ಜಿಗಳು ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಅರ್ಜಿಗಳಾಗಿವೆ.

ಜಾತಿ ಪ್ರಮಾಣಪತ್ರ ಪಡೆಯಲು, ಮಹಾರಾಷ್ಟ್ರ ಪರಿಶಿಷ್ಟ ಜಾತಿಗಳು , ಪರಿಶಿಷ್ಟ ಪಂಗಡಗಳು, ಡಿ-ಅಧಿಸೂಚಿತ ಬುಡಕಟ್ಟುಗಳು (ವಿಮುಕ್ತ ಜಾತಿಗಳು), ಅಲೆಮಾರಿ ಬುಡಕಟ್ಟುಗಳು, ಇತರ ಹಿಂದುಳಿದ ವರ್ಗಗಳು ಮತ್ತು ವಿಶೇಷ ಹಿಂದುಳಿದ ವರ್ಗ (ಜಾತಿ ಪ್ರಮಾಣಪತ್ರ ವಿತರಣೆ ಮತ್ತು ಪರಿಶೀಲನೆಯ ನಿಯಂತ್ರಣ) ಕಾಯ್ದೆ, 2000ರ ಅಡಿಯಲ್ಲಿ, ಅರ್ಜಿದಾರರು ತಾವು ಆಯಾ ಪ್ರದೇಶದ ಶಾಶ್ವತ ನಿವಾಸಿಗಳು ಅಥವಾ ಅವರ ಪೂರ್ವಜರು ಪರಿಗಣಿತ ದಿನಾಂಕದಂದು (ಡಿ-ಅಧಿಸೂಚಿತ ಬುಡಕಟ್ಟುಗಳ ಸಂದರ್ಭದಲ್ಲಿ 1961) ಸಂಬಂಧಿತ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಸಾಬೀತುಪಡಿಸಬೇಕು. "ಈ ನಿಬಂಧನೆಯೊಂದಿಗೆ, ಜಾತಿ ಪ್ರಮಾಣಪತ್ರವನ್ನು ಪಡೆಯುವುದು ಸುಲಭವಲ್ಲ" ಎಂದು ಶಿರೂರು ಮೂಲದ ಸಾಮಾಜಿಕ ಕಾರ್ಯಕರ್ತೆ ಸುನೀತಾ ಭೋಸಲೆ ಹೇಳುತ್ತಾರೆ.

"ಈ ಭಟ್ಕ್ಯಾ-ವಿಮುಕ್ತ್ ಜಾತಿಯ [ಡಿ-ನೋಟಿಫೈಡ್ ಬುಡಕಟ್ಟು] ಕುಟುಂಬಗಳ ಅನೇಕ ತಲೆಮಾರುಗಳು ಹಳ್ಳಿಯಿಂದ ಹಳ್ಳಿಗೆ, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಅಲೆದಾಡುತ್ತಿವೆ.‌ 50-60 ವರ್ಷಗಳ ಹಿಂದಿನ ವಸತಿ ಪುರಾವೆಗಳನ್ನು ಒದಗಿಸಲು ಹೇಗೆ ಸಾಧ್ಯ? ಈ ಕಾಯ್ದೆಯನ್ನು ಬದಲಾಯಿಸಬೇಕಾಗಿದೆ.” ಎಂದು ಅವರು ಅಭಿಪ್ರಾಯಪಡುತ್ತಾರೆ.

ಫಾನ್ಸೆ ಪಾರ್ಧಿ ಸಮುದಾಯಕ್ಕೆ ಸೇರಿದ ಸುನೀತಾ ಅವರು 2010ರಲ್ಲಿ ಕ್ರಾಂತಿ ಎಂಬ ಲಾಭರಹಿತ ಸಂಸ್ಥೆಯನ್ನು ಸ್ಥಾಪಿಸಿದರು, ಇದು ಡಿ-ನೋಟಿಫೈಡ್ ಬುಡಕಟ್ಟುಗಳ ವಿರುದ್ಧದ ಪ್ರಕರಣಗಳನ್ನು ನಿರ್ವಹಿಸುತ್ತದೆ. ಜಾತಿ ಪ್ರಮಾಣಪತ್ರಗಳು, ಆಧಾರ್ ಕಾರ್ಡುಗಳು, ಪಡಿತರ ಚೀಟಿಗಳು ಮತ್ತು ಇತರ ಅಧಿಕೃತ ದಾಖಲೆಗಳನ್ನು ಪಡೆಯಲು ಈ ಸಂಸ್ಥೆ ಜನರಿಗೆ ಸಹಾಯ ಮಾಡುತ್ತದೆ, ಇವುಗಳ ಮೂಲಕ ಅವರು ಸರ್ಕಾರದ ವಿವಿಧ ಯೋಜನೆಗಳನ್ನು ಪಡೆಯಬಹುದು ಮತ್ತು ದೌರ್ಜನ್ಯ ಪ್ರಕರಣಗಳನ್ನು ನಿರ್ವಹಿಸಬಹುದು. "13 ವರ್ಷಗಳಲ್ಲಿ, ನಾವು ಸುಮಾರು 2,000 ಜನರಿಗೆ ಜಾತಿ ಪ್ರಮಾಣಪತ್ರಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ" ಎಂದು ಸುನೀತಾ ಹೇಳುತ್ತಾರೆ.

ಕ್ರಾಂತಿ ಸಂಸ್ಥೆಯ ಸ್ವಯಂಸೇವಕರು ಪುಣೆ ಜಿಲ್ಲೆಯ ದೌಂಡ್ ಮತ್ತು ಶಿರೂರ್ ತಾಲ್ಲೂಕುಗಳ 229 ಹಳ್ಳಿಗಳಲ್ಲಿ ಮತ್ತು ಅಹ್ಮದ್‌ನಗರ ಜಿಲ್ಲೆಯ ಶ್ರೀಗೊಂಡಾ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಾರೆ, ಇದು ಫಾನ್ಸೆ ಪಾರ್ಧಿ, ಬೆಲ್ದಾರ್ ಮತ್ತು ಭಿಲ್ ರೀತಿಯ ಡಿನೋಟಿಫೈಡ್ ಬುಡಕಟ್ಟುಗಳ ಅಂದಾಜು 25,000 ಜನಸಂಖ್ಯೆಯನ್ನು ಒಳಗೊಂಡಿದೆ.

Left: Poor housing arrangements are common among nomadic tribes who find it difficult to access housing schemes without a caste certificate.
PHOTO • Jyoti Shinoli
Right: The office of the Social Justice and Special Assistance Department, Pune
PHOTO • Jyoti Shinoli

ಎಡ: ಜಾತಿ ಪ್ರಮಾಣಪತ್ರವಿಲ್ಲದೆ ವಸತಿ ಯೋಜನೆಗಳನ್ನು ಪಡೆಯಲು ಪರದಾಡುವ ಅಲೆಮಾರಿ ಬುಡಕಟ್ಟು ಜನಾಂಗಗಳ ನಡುವೆ ಕಳಪೆ ವಸತಿ ವ್ಯವಸ್ಥೆಗಳು ಸಾಮಾನ್ಯವಾಗಿದೆ. ಬಲ: ಸಾಮಾಜಿಕ ನ್ಯಾಯ ಮತ್ತು ವಿಶೇಷ ನೆರವು ಇಲಾಖೆಯ ಕಚೇರಿ, ಪುಣೆ

ಜಾತಿ ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಯು ಸಂಕೀರ್ಣವಾಗಿದೆ, ಸಮಯ ತೆಗೆದುಕೊಳ್ಳುತ್ತದೆ ಮತ್ತು ದುಬಾರಿಯಾಗಿದೆ ಎಂದು ಸುನೀತಾ ಹೇಳುತ್ತಾರೆ. "ಬ್ಲಾಕ್ ಕಚೇರಿಗೆ ಹೋಗಿ ಮತ್ತೆ ಮತ್ತೆ ಜೆರಾಕ್ಸ್ ಪಡೆಯಲು ನೀವು ನಿಮ್ಮ ಸ್ವಂತ ಜೇಬಿನಿಂದ ಹಣವನ್ನು ಖರ್ಚು ಮಾಡಬೇಕು. ಒಂದರ ನಂತರ ಒಂದರಂತೆ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇದರಿಂದಾಗಿ ಜನರು ಪ್ರಮಾಣಪತ್ರ ಪಡೆಯುವ ಭರವಸೆಯನ್ನು ಕಳೆದುಕೊಳ್ಳುತ್ತಾರೆ.” ಎಂದು ಅವರು ವಿವರಿಸುತ್ತಾರೆ

*****

“ನಮಗೆ ಮನೆಯೆಂದು ಕರೆಯಬಹುದಾದ ಸ್ಥಳವೇ ಇದ್ದಿರಲಿಲ್ಲ” ಎನ್ನುತ್ತಾರೆ ವಿಕ್ರಮ್‌ ಬಾರ್ಡೆ. “ನನ್ನ ಬಾಲ್ಯದಿಂದ ಇಲ್ಲಿಯವರೆಗೆ ನಾವು ಎಷ್ಟು ಸಲ ಊರುಗಳನ್ನು ಬದಲಿಸಿದ್ದೇವೆ ಎನ್ನುವುದು ನನಗೇ ನೆನಪಿಲ್ಲ” ಎಂದು 36 ವರ್ಷದ ಅವರು ಹೇಳುತ್ತಾರೆ. “ಜನರು ನಮ್ಮನ್ನು ಈಗಲೂ ನಂಬುವುದಿಲ್ಲ. ಇದೇ ಕಾರಣಕ್ಕಾಗಿ ನಾವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುತ್ತೇವೆ. ಹಳ್ಳಿಯ ಜನರಿಗೆ ನಾವು ಯಾರೆಂದು ಗೊತ್ತಿರುವುದರಿಂದ ಅಲ್ಲಿಂದ ಹೋಗುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಾರೆ.”

ದಿನಗೂಲಿ ಕಾರ್ಮಿಕರಾದದ ವಿಕ್ರಮ್ ಫಾನ್ಸೆ ಪಾರ್ಧಿ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, ಪತ್ನಿ ರೇಖಾ ಅವರೊಂದಿಗೆ ತಗಡಿನ ಛಾವಣಿ ಹೊಂದಿರುವ ಒಂದು ಕೋಣೆಯ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಮನೆ ಅಲೆಗಾಂವ್ ಪಾಗಾ ವಸ್ತಿಯಿಂದ 15 ಕಿಲೋಮೀಟರ್ ದೂರದಲ್ಲಿರುವ ಕುರುಲಿ ಗ್ರಾಮದ ಹೊರವಲಯದಲ್ಲಿರುವ 50 ಭಿಲ್ ಮತ್ತು ಪಾರ್ಧಿ ಕುಟುಂಬಗಳ ಕಾಲೋನಿಯ ಒಂದು ಭಾಗವಾಗಿದೆ.

ವಿಕ್ರಮ್ ಅವರ ಪೋಷಕರು 2008ರಲ್ಲಿ ಜಲ್ನಾ ಜಿಲ್ಲೆಯ ಜಲ್ನಾ ತಾಲ್ಲೂಕಿನ ಭಿಲ್ಪುರಿ ಖ್ ಗ್ರಾಮಕ್ಕೆ ವಲಸೆ ಬಂದಾಗ ವಿಕ್ರಮ್ 13 ವರ್ಷದವರಾಗಿದ್ದರು. "ನಾವು ಭಿಲ್ಪುರಿ ಖ್ ಗ್ರಾಮದ ಹೊರಗಿನ ಕುಡಚಾ ಘರ್ [ಗುಡಿಸಲು] ನಲ್ಲಿ ವಾಸಿಸುತ್ತಿದ್ದಿದ್ದು ನನಗೆ ನೆನಪಿದೆ. ಅವರು ಬೀಡ್‌ ಬಳಿ ಎಲ್ಲೋ ವಾಸಿಸುತ್ತಿರುವುದಾಗಿ ಎಂದು ನನ್ನ ಅಜ್ಜ-ಅಜ್ಜಿ ನನಗೆ ಹೇಳುತ್ತಿದ್ದರು" ಎಂದು ಅವರು ಅಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ. (ಓದಿ: ಮಾಡದ ತಪ್ಪಿಗೆ ಮುಗಿಯದ ಶಿಕ್ಷೆ )

2013ರಲ್ಲಿ, ಅವರು ತಮ್ಮ ಕುಟುಂಬದೊಂದಿಗೆ ಪುಣೆಗೆ ವಲಸೆ ಬಂದರು. ಅವರು ಮತ್ತು ಅವರ 28 ವರ್ಷದ ಪತ್ನಿ ರೇಖಾ, ಕೃಷಿ ಕೆಲಸಕ್ಕಾಗಿ ಪುಣೆ ಜಿಲ್ಲೆಯ ವಿವಿಧ ಹಳ್ಳಿಗಳಿಗೆ ಪ್ರಯಾಣಿಸುತ್ತಾರೆ ಮತ್ತು ಕೆಲವೊಮ್ಮೆ ಅವರು ನಿರ್ಮಾಣ ಸ್ಥಳಗಳಲ್ಲಿಯೂ ಕೆಲಸ ಮಾಡುತ್ತಾರೆ. "ಒಂದು ದಿನದಲ್ಲಿ, ನಾವು ಒಟ್ಟು 350 ರೂ.ಗಳನ್ನು ಗಳಿಸುತ್ತೇವೆ. ಕೆಲವೊಮ್ಮೆ 400 ರೂ. ಸಿಗುತ್ತದೆ. ಎರಡು ವಾರಗಳಿಗಿಂತ ಹೆಚ್ಚು ಕಾಲ ನಮಗೆ ಕೆಲಸ ಸಿಗುವುದಿಲ್ಲ" ಎಂದು ವಿಕ್ರಮ್ ಹೇಳುತ್ತಾರೆ.

Vikram Barde, a daily-wage worker, lives with his wife Rekha in a one-room house with a tin roof. ' We never had a place to call home,' the 36-year-old says, “I can’t recall how many times we have changed places since my childhood'
PHOTO • Jyoti Shinoli
Vikram Barde, a daily-wage worker, lives with his wife Rekha in a one-room house with a tin roof. ' We never had a place to call home,' the 36-year-old says, “I can’t recall how many times we have changed places since my childhood'.
PHOTO • Jyoti Shinoli

ದಿನಗೂಲಿ ಕಾರ್ಮಿಕನಾದ ವಿಕ್ರಮ್ ಬಾರ್ಡೆ ತನ್ನ ಪತ್ನಿ ರೇಖಾ ಅವರೊಂದಿಗೆ ತಗಡಿನ ಛಾವಣಿಯಿರುವ ಒಂದು ಕೋಣೆಯ ಮನೆಯಲ್ಲಿ ವಾಸಿಸುತ್ತಿದ್ದಾರೆ. 'ನಮ್ಮ ಮನೆ ಎಂದು ಕರೆಯಬಹುದಾದ ಒಂದು ಸ್ಥಳ ನಮ್ಮ ಪಾಲಿಗೆ ಎಂದೂ ಇದ್ದಿರಲಿಲ್ಲ' ಎಂದು 36 ವರ್ಷದ ಅವರು ಹೇಳುತ್ತಾರೆ, "ನನ್ನ ಬಾಲ್ಯದಿಂದ ನಾವು ಎಷ್ಟು ಬಾರಿ ಸ್ಥಳಗಳನ್ನು ಬದಲಾಯಿಸಿದ್ದೇವೆ ಎಂದು ನನಗೆ ನೆನಪಿಲ್ಲ" ಎಂದು ಅವರು ಹೇಳುತ್ತಾರೆ

ಎರಡು ವರ್ಷಗಳ ಹಿಂದೆ, ಜಾತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಅವರು ಪ್ರತಿ ತಿಂಗಳು ಸುಮಾರು 200 ರೂ.ಗಳನ್ನು ಖರ್ಚು ಮಾಡುತ್ತಿದ್ದರು. ವಿಕ್ರಮ್ ತನ್ನ ಅರ್ಜಿಯ ಮುಂದಿನ ಬೆಳವಣಿಗೆ ತಿಳಿಯಲು ತಿಂಗಳಿಗೆ ನಾಲ್ಕರಿಂದ ಐದು ಬಾರಿ 10 ಕಿಲೋಮೀಟರ್ ದೂರದಲ್ಲಿರುವ ಶಿರೂರಿನ ಬ್ಲಾಕ್ ಡೆವಲಪ್ಮೆಂಟ್ ಕಚೇರಿಗೆ ಪ್ರಯಾಣಿಸಬೇಕಾಗಿತ್ತು.

"ಎರಡೂ ಮಾರ್ಗಗಳಲ್ಲಿ ಶೇರ್ ಆಟೋ ಪ್ರಯಾಣದ ಶುಲ್ಕ 60 ರೂ. ನಂತರ ಜೆರಾಕ್ಸ್. ಇದಲ್ಲದೆ ಕಚೇರಿಯಲ್ಲಿ ದೀರ್ಘಕಾಲ ಕಾಯಬೇಕಾಗುತ್ತದೆ. ಒಂದಿಡೀ ದಿನದ ಕೂಲಿ ಇದರಿಂದಾಗಿ ಹೋಗುತ್ತದೆ. ಯಾವುದೇ ವಾಸದ ಪುರಾವೆ ಅಥವಾ ಜಾತಿ ಪ್ರಮಾಣಪತ್ರ ನನ್ನ ಬಳಿ ಇಲ್ಲ. ಹೀಗಾಗಿ ನಾನು ಈ ಕುರಿತು ಓಡಾಟ ನಿಲ್ಲಿಸಿದೆ" ಎಂದು ವಿಕ್ರಮ್ ಹೇಳುತ್ತಾರೆ.

ಅವರ ಮಕ್ಕಳಾದ 14 ವರ್ಷದ ಕರಣ್ ಮತ್ತು 11 ವರ್ಷದ ಸೋಹಮ್ ಪುಣೆಯ ಮುಲ್ಶಿ ತಾಲ್ಲೂಕಿನ ವಡ್ಗಾಂವ್‌ನ ವಸತಿ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಕರಣ್ ಒಂಬತ್ತನೇ ತರಗತಿಯಲ್ಲಿದ್ದಾನೆ ಮತ್ತು ಸೋಹಮ್ ಆರನೇ ತರಗತಿಯಲ್ಲಿದ್ದಾನೆ. "ನಮ್ಮ ಮಕ್ಕಳೇ ನಮ್ಮ ಏಕೈಕ ಭರವಸೆ. ಅವರು ಚೆನ್ನಾಗಿ ಓದಿದರೆ. ಅವರು ನಮ್ಮಂತೆ ಅಲೆಮಾರಿಗಳಾಗಬೇಕಿಲ್ಲ."

ಸಾಮಾಜಿಕ-ಆರ್ಥಿಕವಾಗಿ ದುರ್ಬಲ ಗುಂಪುಗಳಿಗೆ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ವಿತ್ತೀಯ ನೆರವು ಪಡೆದ ಕುಟುಂಬಗಳ ಸಂಖ್ಯೆಯನ್ನು ತಿಳಿಯಲು ಪರಿ ವರದಿಗಾರರು ಪುಣೆ ವಿಭಾಗದ ಸಾಮಾಜಿಕ ನ್ಯಾಯ ಮತ್ತು ವಿಶೇಷ ನೆರವು ಇಲಾಖೆಯ ಅಧಿಕಾರಿಯೊಂದಿಗೆ ಮಾತನಾಡಿದರು. "ಪುಣೆಯ ಬಾರಾಮತಿ ತಾಲ್ಲೂಕಿನ ಪಂಡರೆ ಗ್ರಾಮದಲ್ಲಿ 2021-22ರಲ್ಲಿ ವಿಜೆಎನ್‌ಟಿ (ವಿಮುಕ್ತ ಜಾತಿ ಅಧಿಸೂಚಿತ ಬುಡಕಟ್ಟು) 10 ಕುಟುಂಬಗಳಿಗೆ 88.3 ಲಕ್ಷ ರೂ. ಅನುದಾನ ನೀಡಲಾಗಿದೆ. ಅದನ್ನು ಹೊರತುಪಡಿಸಿ, ಅಲೆಮಾರಿ ಬುಡಕಟ್ಟು ಜನಾಂಗದವರಿಗೆ ಈ ವರ್ಷ [2023] ಬೇರೆ ಯಾವುದೇ ಪ್ರಸ್ತಾಪವನ್ನು ಅನುಮೋದಿಸಲಾಗಿಲ್ಲ.

ಅತ್ತ ಅಲೆಗಾಂವ್ ಪಾಗಾ ವಸ್ತಿಯ ಶಾಂತಾಬಾಯಿ ತನ್ನ ಮೊಮ್ಮಕ್ಕಳ ಭವಿಷ್ಯದ ಕುರಿತು ಭರವಸೆ ಹೊಂದಿದ್ದಾರೆ. ಅವರು ಹೇಳುತ್ತಾರೆ “ನನಗೆ ಭರವಸೆಯಿದೆ. ನಾವು ಸಿಮೆಂಟಿನ ಗೋಡೆಯಿರುವ ಮನೆಯಲ್ಲಿ ವಾಸ ಮಾಡಲು ಸಾಧ್ಯವಾಗಲಿಲ್ಲ, ಆದರೆ ನನ್ನ ಮೊಮ್ಮಕ್ಕಳು ಗಾರೆ ಮನೆ ಕಟ್ಟಿ ಅದರಲ್ಲಿ ಸುರಕ್ಷಿತವಾಗಿ ವಾಸವಿರಲಿದ್ದಾರೆ.”

ಅನುವಾದ: ಶಂಕರ. ಎನ್. ಕೆಂಚನೂರು

Jyoti Shinoli is a Senior Reporter at the People’s Archive of Rural India; she has previously worked with news channels like ‘Mi Marathi’ and ‘Maharashtra1’.

Other stories by Jyoti Shinoli
Editor : Sarbajaya Bhattacharya

Sarbajaya Bhattacharya is a Senior Assistant Editor at PARI. She is an experienced Bangla translator. Based in Kolkata, she is interested in the history of the city and travel literature.

Other stories by Sarbajaya Bhattacharya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru