ಲಡ್ಕ್ಯ ದವಡೆ ಅವರು, “ಆದಿವಾಸಿಗಳು ಮುಂಬೈನಲ್ಲಿ ನೆಲೆಸಿದ್ದಾರೆ” ಎಂದು ತಿಳಿಸಿದರು. ಮುಂಬೈ ಉಪನಗದಲ್ಲಿ ಆಗಸ್ಟ್ 9, 2023ರ ವಿಶ್ವ ಆದಿವಾಸಿಗಳ ದಿನದಂದು ಆದಿವಾಸಿ ಕೊಪ್ಪಲಿನಿಂದ ಒಟ್ಟಾಗಿ ಬಂದ ಸುಮಾರು 3000 ಜನರನ್ನು ಕಂಡಾಗ ಈ ನೆಲಸಿಗರ ಸಂಖ್ಯೆ ಕಡಿಮೆಯಲ್ಲವೆಂಬುದು ಮನದಟ್ಟಾಗುತ್ತದೆ.
ಬೆಚ್ಚಗಿನ ಒಂದು ಮುಂಜಾನೆಯಲ್ಲಿ, ಮುಂಬೈನ ಆರೆ ಕಾಡಿನ ಪ್ರವೇಶದ್ವಾರ, ಗೋರೆಗಾಂವ್ನ ಚೆಕ್ ನಾಕಾದ ಬಳಿ ಆರೆ ಕಾಡು, ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್, ಮುಲುಂದ್, ಭಂದುಪ್, ಕಂಡಿವಲಿ, ಗೊರೈ ಮತ್ತು ಮಧ್ ದ್ವೀಪದ ಆದಿವಾಸಿಗಳು ಒಟ್ಟುಗೂಡಿದಾಗ, ವಾತಾವರಣದಲ್ಲಿ ಹಬ್ಬದ ಸಂಭ್ರಮ ಮತ್ತು ಭರವಸೆಯು ಕಂಡುಬರುತ್ತಿತ್ತು.
ಉತ್ತರ ಮುಂಬೈನ R/Central ಮುನಿಸಿಪಲ್ ವಾರ್ಡಿನ ಗೊರೈನಲ್ಲಿ ಬೊರ್ಘಿಲ್ಪಡ ಪ್ರದೇಶದ ಲಡ್ಕ್ಯ, “ಇಂದು ನಮ್ಮ ಹಬ್ಬ” ಎಂದರು. ಮಹಿಳೆಯರು ಬಣ್ಣಬಣ್ಣದ ಸೀರೆಗಳನ್ನು ಉಟ್ಟಿದ್ದರು. ಕೆಲವು ಪುರುಷರು ಎಲೆ ಮತ್ತು ಅಡಕೆಯ ಹಾರಗಳನ್ನು ಧರಿಸಿದ್ದರು.
ಆದಿವಾಸಿಗಳು ಒಟ್ಟುಗೂಡಿ, ತಮ್ಮ ಹಕ್ಕನ್ನು ಪ್ರತಿಪಾದಿಸಲು ನೀಡಿದ ಒಕ್ಕೊರಲಿನ ಕರೆಯೇ ಈ ಅಂತರರಾಷ್ಟ್ರೀಯ ಹಬ್ಬ. ವರ್ಲಿ ಆದಿವಾಸಿ ಸಮುದಾಯದ ಲಡ್ಕ್ಯ, “ನಾವು ಬೆಟ್ಟಗಳು ಮತ್ತು ಕಾಡುಗಳನ್ನು ಪೋಷಿಸಿದ್ದೇವೆ. ಈಗ ಸರ್ಕಾರದ ಬಳಿ ಯಾವುದೇ ಭೂಮಿಯು ಉಳಿದಿಲ್ಲ. ಆದ್ದರಿಂದ ಅವರು ನಮ್ಮನ್ನು ನಮ್ಮ ಪಾಡಾಗಳಿಂದ ಒಕ್ಕಲೆಬ್ಬಿಸಲು ಬಯಸುತ್ತಾರೆ” ಎಂದರು. ಭೂಮಿಯ ದಾಖಲೆಗಳಿಲ್ಲದೆ ಇವರ ಹಕ್ಕುಗಳನ್ನು ಸಾಬೀತುಪಡಿಸುವುದು ಕಷ್ಟ. ಹೀಗಾಗಿ ಅವರು ಮನೆಗಳು, ವಾಡಿಗಳು ಮತ್ತು ಹೊಲಗಳಿರುವ ತಮ್ಮ ಪೂರ್ವಜರ ಭೂಮಿಯನ್ನು ತೊರೆಯುವ ಆಘಾತಕ್ಕೀಡಾಗಿದ್ದಾರೆ. ಓದಿ: Aarey Adivasis: ‘Then we lost this land of ours’


ಮುಂಬೈನಲ್ಲಿ ಸಭೆ ಸೇರುವ ಮೊದಲು ಗೋರೆಗಾಂವ್ ಚೆಕ್ ನಾಕಾ ಬಳಿಯ ಉದ್ಯಾನವನದಲ್ಲಿ ಒಟ್ಟುಗೂಡಿರುವ ಮುಂಬೈನ ಆದಿವಾಸಿಗಳು


ಎಡಕ್ಕೆ: ಸಭೆಗೆ ಮೊದಲು ಪೋಸ್ಟರುಗಳನ್ನು ಹಿಡಿದಿರುವ ಮಹಿಳೆಯರು. ಬಲಕ್ಕೆ: ಅಡಕೆಯ ಹಾರಗಳನ್ನು ಧರಿಸಿರುವ ಲಡ್ಕ್ಯ ದವಡೆ (ಎಡಕ್ಕೆ) ಪ್ರಭು ಥಾಕರ್ ಮತ್ತು ರಘು
ಮಧ್ ದ್ವೀಪದಲ್ಲಿನ ಗಣ್ಪತಿ ಪಾಡಾದ ವರ್ಲಿ ಆದಿವಾಸಿ, ಪಾರ್ವತಿ ಹದ್ದಲ್, “ಸರ್ಕಾರವು ನಮ್ಮನ್ನು, ಹಕ್ಕಿಲ್ಲದೆಯೇ ಸರ್ಕಾರಿ ಜಮೀನನ್ನು ಆಕ್ರಮಿಸಿಕೊಂಡವರು ಎನ್ನುತ್ತದೆ” ಎಂದು ತಿಳಿಸಿದರು. 32ರ ಪಾರ್ವತಿ, ಟ್ಯೂಷನ್ ಟೀಚರ್. ಇವರು ಪ್ರತಿಭಟನಾ ಮೆರವಣಿಗೆಯ ಆಯೋಜಕರಲ್ಲೊಬ್ಬರಾದ ಕಶ್ತಕರಿ ಶೇತ್ಕಾರಿ (ಕೆಎಸ್ಎಸ್) ಸಂಘಟನೆಗೆ ಸೇರಿದವರು. ಇತರೆ ಆಯೋಜಕರಂದರೆ, ಮಹಾರಾಷ್ಟ್ರ ಆದಿವಾಸಿ ಮಂಚ್ ಮತ್ತು ಶ್ರಮಿಕ್ ಮುಕ್ತಿ ಆಂದೋಲನ್.
ಕೆಎಸ್ಎಸ್ ಸ್ಥಾಪಕರು ಹಾಗೂ ಮುಖಂಡರಾದ ವಿಠಲ್ ಲಾಡ್, “ಅವರು (ಸರ್ಕಾರ2) 1950ಕ್ಕೂ ಮೊದಲಿನ ದಾಖಲೆಗಳನ್ನು ಆಗ್ರಹಿಸುತ್ತಿದ್ದಾರೆ. ಓದು ಬರಹ ಬಲ್ಲ ವ್ಯಕ್ತಿಯು ಸಹ ಸಂವಿಧಾನ(ಭಾರತೀಯ)ವು ಜಾರಿಗೆ ಬರುವುದಕ್ಕೂ ಮೊದಲಿನ ಪ್ರಮಾಣಪತ್ರಗಳನ್ನು ಹೊಂದಿರುವುದಿಲ್ಲ. ಆದಿವಾಸಿಗಳು ಅದನ್ನು ಹೊಂದಿರಲು ಹೇಗೆ ಸಾಧ್ಯ? ಯಾವುದೇ ಪರಿಶಿಷ್ಟ ಪಂಗಡ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ)” ಕಾನೂನು, 2006 ( ಅರಣ್ಯ ಹಕ್ಕುಗಳ ಕಾನೂನು ಎಂತಲೂ ಇದನ್ನು ಪ್ರಸ್ತಾವಿಸಲಾಗುತ್ತದೆ) ಇದನ್ನು ಕೇಳುವುದಿಲ್ಲ” ಎಂದು ತಿಳಿಸಿದರು.
ಸರ್ಕಾರವು ಇತರೆ ಪ್ರಮಾಣಪತ್ರಗಳನ್ನು ಸಹ ನಿರಾಕರಿಸಿದೆಯೆಂದು ಅವರು ತಿಳಿಸುತ್ತಾರೆ. “ನಮ್ಮ ಜಾತಿ ಪ್ರಮಾಣಪತ್ರಗಳು ನಮಗೆ ದೊರೆತಿರುವುದಿಲ್ಲ” ಎನ್ನುತ್ತಾರೆ ನಾರಾಯಣ್ ಕದಲೆ. ಥಾಕರ್ ಆದಿವಾಸಿ ರೈತರಾದ ಇವರು, ಆರೆಯಲ್ಲಿನ ಬಂಗುಡ ಪಾಡಾದಲ್ಲಿ 3.5 ಗುಂಟೆ (ಎಕರೆಯ ಹತ್ತನೇ ಒಂದು ಭಾಗಕ್ಕಿಂತ ಕಡಿಮೆ) ಭೂಮಿಯಲ್ಲಿ ಹೀರೇಕಾಯಿ, ಕುಂಬಳಕಾಯಿಯಂತಹ ತರಕಾರಿಗಳು, ವೀಳ್ಯದೆಲೆ, ಪುಂಡಿ ಸೊಪ್ಪನ್ನು ಬೆಳೆಯುತ್ತಾರೆ. ಸಾತ್ಬಾರಾ ಮಹಾರಾಷ್ಟ್ರದಲ್ಲಿ ಭೂಮಿಯ ಒಡೆತನಕ್ಕೆ ಸಾಕ್ಷ್ಯವಿದ್ದಂತೆ.
“ಅವರು (ಸರ್ಕಾರಿ ಸಿಬ್ಬಂದಿಗಳು) ಮುಂಬೈನಲ್ಲಿ ಆದಿವಾಸಿಗಳಿಲ್ಲವೆಂದು ಸಾಧಿಸುತ್ತಾರೆ. ನಾವು ಆದಿವಾಸಿಗಳಲ್ಲವೆಂದು ವಾದಿಸುವ ಅವರು ನಮ್ಮ ಜಾತಿಗತ ಸ್ಥಿತಿಯನ್ನು ಪ್ರಶ್ನಿಸುತ್ತಾರೆ” ಎಂಬುದಾಗಿ 39ರ ಹಾಡುಗಾರ ಹಾಗೂ ವನಪಾಲಕರೊಬ್ಬರು ತಿಳಿಸಿದರು.


ಎಡಕ್ಕೆ: ಕಶ್ತಕರಿ ಶೇತ್ಕಾರಿ ಸಂಘಟನೆಯ ಸ್ಥಾಪಕರಾದ ವಿಠಲ್ ಲಾಡ್ ಅವರೊಂದಿಗಿರುವ ಲಡ್ಕ್ಯ ದವ್ಡೆ (ಗುಲಾಬಿಯನ್ನು ಹಿಡಿದಿರುವವರು). ಬಲಕ್ಕೆ: ಕದಲೆ ಅವರು ಥಾಕರ್ ಆದಿವಾಸಿ ವನಪಾಲಕ ಮತ್ತು ಆರೆಯಲ್ಲಿನ ಬಂಗುಡ ಪಾಡಾದ ಹಾಡುಗಾರ

ಕೆಎಸ್ಎಸ್ ಸಕ್ರಿಯ ಕಾರ್ಯಕರ್ತೆ ಶಕುಂತಲ ದೇವಿಯವರು ಭಾರತೀಯ ಸಂವಿಧಾನ ಮತ್ತು ವಿಠಲ್ ಲಾಡ್ ಅವರು ಬರೆದಿರುವ ಪುಸ್ತಕವೊಂದನ್ನು ಹಿಡಿದಿದ್ದಾರೆ
ಸಂಘಟನೆಯಲ್ಲಿ ಉಪಸ್ಥಿತರಿದ್ದ ಅನೇಕರಿಗೆ ತಮ್ಮ ಭೂಮಿಯ ಅಧಿಕೃತ ದಾಖಲೆಗಳಿರುವುದಿಲ್ಲ. ಅದನ್ನು ಪಡೆಯುವ ಪ್ರಕ್ರಿಯೆಯು ದೀರ್ಘ ಹಾಗೂ ದುಸ್ಸಹವಾದುದೆಂದು ಅವರು ತಿಳಿಸುತ್ತಾರೆ.
ಆಯೋಜಕರು ಹೊರಡಿಸಿದ ಪತ್ರಿಕಾ ಹೇಳಿಕೆಯಲ್ಲಿ “222 ಮುಂಬೈ ಆದಿವಾಸಿ ಪಾಡಾಗಳನ್ನು ಗಾವ್ಥಾನಗಳೆಂದು (ಸ್ವದೇಶೀಯ ಗ್ರಾಮಗಳು) ಅಧಿಕೃತವಾಗಿ ಘೋಷಿಸಿ, ಭಾರತೀಯ ಸಂವಿಧಾನದಿಂದ ಉದ್ದೇಶಿಸಲ್ಪಟ್ಟ ಸ್ವಾಯತ್ತತೆ ಮತ್ತು ಪ್ರಾತಿನಿಧ್ಯವನ್ನು ಮಂಜೂರು ಮಾಡಬೇಕೆಂದು” ಕೇಳಲಾಗಿದೆ. ಮೂಲ ನಿವಾಸಿಗಳೆಂಬುದಾಗಿ ಆದಿವಾಸಿಗಳಿಗೆ ಅಧಿಕೃತ ಮಾನ್ಯತೆ ಹಾಗೂ ಜಾತಿ ಪ್ರಮಾಣಪತ್ರಗಳಿಗೆ ಆಗ್ರಹಿಸಲಾಗಿದೆ ಮತ್ತು ಸರ್ಕಾರದಿಂದ ಪ್ರೋತ್ಸಾಹಿಸಲ್ಪಟ್ಟ ಅರಣ್ಯನಾಶ ಮತ್ತು ತಮ್ಮ ಪೂರ್ವಜರ ಭೂಮಿಯಿಂದ ಒತ್ತಾಯಪೂರ್ವಕವಾಗಿ ಸ್ಥಳಾಂತರಣಗೊಳಿಸುವುದನ್ನು ತಕ್ಷಣದಿಂದಲೇ ನಿಲ್ಲಿಸಬೇಕೆಂದು ಸಹ ತಿಳಿಸಲಾಗಿದೆ. ಪಾಡಾಗಳಲ್ಲಿ ಅರಣ್ಯ ಹಕ್ಕುಗಳ ಕಾಯಿದೆಯನ್ನು ಜಾರಿಗೊಳಿಸುವುದರ ಪ್ರಾಮುಖ್ಯತೆಯನ್ನು ಕುರಿತು ಸಹ ಅವರು ಮಾತನಾಡಿದರು.
ಮೆಟ್ರೊ ಕಾರ್ ಷೆಡ್ ಅಷ್ಟೇ ಅಲ್ಲದೆ, ವಾಸಗೃಹದ ಯೋಜನೆಗಳು, ಕೋಳಿ ಸಾಕಾಣಿಕೆಯ ಕ್ಷೇತ್ರ, ಬೇಕರಿ, ಸಂಶೋಧನಾ ಕೇಂದ್ರ, ಫಿಲ್ಮ್ ಸಿಟಿ ಇನ್ನೂ ಅನೇಕ ಅಭಿವೃದ್ಧಿ ಯೋಜನೆಗಳಿದ್ದು, ಭೂಮಿಯನ್ನು ಅಭಿವೃದ್ಧಿ ಯೋಜನೆಗಳಿಗೆ ಪಥಾಂತರಗೊಳಿಸುವ ಮೊದಲು ಸ್ಥಳೀಯ ಸಮುದಾಯಗಳ ಅಭಿಪ್ರಾಯವನ್ನು ಏಕೆ ಪಡೆಯಬೇಕೆಂಬುದರ ಬಗ್ಗೆ ವಿಠಲ್ ಅವರು ಪಟ್ಟಿಯೊಂದನ್ನು ಮುಂದಿಡುತ್ತಾರೆ.
ಮುಂಬೈನಲ್ಲಿ ಉಳಿದಿರುವ ಕಾಡೆಲ್ಲವೂ ಇಲ್ಲಿದೆ. “ಏಕೆಂದರೆ ಆದಿವಾಸಿಗಳಾದ ನಾವು ಅದನ್ನು ಪೋಷಿಸಿದ್ದೇವೆ” ಎನ್ನುತ್ತಾರೆ ಲಡ್ಕ್ಯ ದವ್ಡೆ. ಈ ವರದಿಗಾರನು ಮಾತನಾಡಿಸಿದ ಪ್ರತಿಯೊಬ್ಬ ಆದಿವಾಸಿಯೂ ಇದೇ ಮಾತುಗಳನ್ನು ಪ್ರತಿಧ್ವನಿಸುತ್ತಾರೆ. “ಆರೆಯಲ್ಲಿ ಇಂತಹ ಅಭಿವೃದ್ಧಿಯನ್ನು ಮುಂದುವರಿಸಿದಲ್ಲಿ ಕಾಡು ನಾಶವಾಗುತ್ತದೆ. ಆದ್ದರಿಂದ ಅಭಿವೃದ್ಧಿಯ ಯೋಜನೆಗಳನ್ನು ನಿಲ್ಲಿಸಬೇಕೆಂದು ನಾವು ಆಗ್ರಹಿಸುತ್ತೇವೆ” ಎಂದರು ವಿಠಲ್.


ಸಂಘಟನೆಯಲ್ಲಿ ಮಹಿಳೆಯರು ಮೆರವಣಿಗೆಯ ನೇತೃತ್ವ ವಹಿಸಿದ್ದಾರೆ


ಸಂಘಟನೆಯಲ್ಲಿ ಜನರು ತಮ್ಮ ಬೇಡಿಕೆಗಳತ್ತ ಗಮನಸೆಳೆಯಲು ಗೋರೆಗಾವ್ ಚೆಕ್ ನಾಕಾದಿಂದ ಆರೆ ಡೈರಿಯವರೆಗೆ ಸಾಗಿದರು
*****
ಆಗಸ್ಟ್ 9, 2023ರ ಸಂಘಟನೆಯು ಗೋರೆಗಾಂವ್ನ ಚೆಕ್ ನಾಕಾದಿಂದ ಆರೆ ಡೈರಿಯವರೆಗಿನ ಸುಮಾರು ಎರಡು ಕಿ.ಮೀ.ಗಳನ್ನು ಆವರಿಸಿತ್ತು. ಆರಂಭದಿಂದಲೂ ಪ್ರತಿಭಟನಕಾರರು “ಈ ಕಾಡು ನಮ್ಮದು, ಬೇರಾರೂ ಇದರ ಮಾಲೀಕರಲ್ಲ” ಎಂಬ ಘೋಷಣೆಯನ್ನುಕೂಗುತ್ತಿದ್ದರು.
ಸಂಘಟನೆಯ ಭಾಷಣಗಳಲ್ಲಿ ಆದಿವಾಸಿಗಳು ಮತ್ತು ಸಂಘಟಕರ ಪ್ರಕಾರ, ಅಗತ್ಯಕ್ಕೆ ತಕ್ಕಂತೆ ತಮ್ಮ ಮನೆಗಳನ್ನು ದುರಸ್ತಿಗೊಳಿಸಲು ಮತ್ತು ವಾಡಿಗಳನ್ನು ಪೋಷಿಸಲು ಅವಕಾಶ ನೀಡದ ಸರ್ಕಾರಿ ಸಿಬ್ಬಂದಿಗಳ ಬಗ್ಗೆಯೂ ತಿಳಿಸಲಾಯಿತು. “ನಮಗೆ ಯಾರೂ ಏನನ್ನೂ ಕೊಟ್ಟಿರುವುದಿಲ್ಲ. ನಾವು ನಮ್ಮ ವಾಡಿಗಳು ಹಾಗೂ ಹೊಲಗಳಲ್ಲಿ ಗಿಡಗಳನ್ನು ನೆಡುತ್ತೇವೆ. ಅವರು (ಅರಣ್ಯ ಮತ್ತು ಆರೆ ಡೈರಿಯ ಸಿಬ್ಬಂದಿಗಳು) ನಾಶಪಡಿಸುತ್ತಾರೆ. ನಮ್ಮ ಮನೆಗಳನ್ನು ಒಡೆದುಹಾಕುತ್ತಾರೆ” ಎಂಬುದಾಗಿ ಆರೆಯಲ್ಲಿನ ಮೊರಛ ಪಾಡಾದ ಬೇಬಿತಾಯ್ ಮಲಿ ತಿಳಿಸಿದರು.”
ನಗರದಲ್ಲಿ ವಾಸಿಸುತ್ತಿದ್ದಾಗ್ಯೂ, ನಾಗರಿಕ ಸೌಲಭ್ಯಗಳನ್ನು ಅವರಿಗೆ ನಿರಾಕರಿಸಲಾಗಿದೆ. “ಅನೇಕ ಪ್ರತಿಭಟನೆಗಳು ಮತ್ತು ಪ್ರಾಧಿಕಾರಗಳಿಗೆ ಅನೇಕ ಮನವಿಗಳನ್ನು ಸಲ್ಲಿಸಿದ ನಂತರ ಕೊನೆಗೊಮ್ಮೆ ನಮಗೆ ಬೋರ್ವೆಲ್ನಿಂದ ನೀರು ದೊರೆಯುವಂತಾಯಿತು” ಎಂಬುದಾಗಿ ಗೊರೈನ ಛೋಟ ದೊಂಗ್ರಿ ಕೊಪ್ಪಲಿನ ಆದಿವಾಸಿ ಸಾಮಾಜಿಕ ಕಾರ್ಯಕರ್ತೆ ವನಿತ ಶಂಕರ್ ಕೊಟ್ಟಲ್ ತಿಳಿಯಪಡಿಸಿದರು. ಗೊರೈನ ಪಾಡಾಗಳು ಸ್ವಲ್ಪಮಟ್ಟಿನ ಪ್ರಗತಿಯನ್ನು ಕಂಡಿವೆಯಾದರೂ ಆರೈಯಲ್ಲಿನ ಬಹುತೇಕ ಪಾಡಾಗಳಲ್ಲಿ ಈ ಸ್ಥಿತಿಯಿಲ್ಲ. ಖಾಮ್ಬಚಾ ಪಾಡಾದಂತಹ ಕೆಲವು ಸ್ಥಳಗಳಲ್ಲಿ ಕೇವಲ ಒಂದು ಗಂಟೆಯವರೆಗೆ ನೀರು ದೊರೆಯುತ್ತದೆ.
ಖಡಕ್ಪಾಡಾದಲ್ಲಿ ನೀರಿನ ಗುಣಮಟ್ಟದ ಬಗ್ಗೆ ಪರಿಶೀಲನಾರ್ಹ ಕಳವಳಗಳಿವೆ. “ನೀರನ್ನು ನೋಡಲು ಸಹ ನೀವು ಇಚ್ಛಿಸುವುದಿಲ್ಲ. ಅದು ಅಷ್ಟು ಮಲಿನವಾಗಿದೆ. ಅದರಲ್ಲಿ ಹುಳುಗಳಿವೆ. ಸಾಗಣೆ ಮಾರ್ಗಗಳೆಲ್ಲ ಮುರಿದಿವೆ. ನೀವು ಬಂದು ಅದನ್ನು ನೋಡಬೇಕು” ಎನ್ನುತ್ತಾರೆ 29ರ ವಯಸ್ಸಿನ ನಿವಾಸಿ ವನಿತ (ಕೇವಲ ಈ ಹೆಸರನ್ನು ಬಳಸುತ್ತಾರೆ)


ಕಶ್ತಕರಿ ಶೇತ್ಕಾರಿ ಸಂಘಟನೆಯ ಬೇಬಿತಾಯ್ ಮಲಿ ಅವರು ಆರೆ ಡೈರಿಯನ್ನು ತಲುಪಿದ ನಂತರ ಜನರ ಗುಂಪನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಬಲಕ್ಕೆ: ಸಂಘಟನೆಯಲ್ಲಿರುವ ಗೊರೈನ ಛೋಟ ದೊಂಗ್ರಿ ಪಾಡಾದ ವನಿತ ಶಂಕರ್ ಕೊಟ್ಟಲ್

ಸಂಘಟನೆಯ ನಂತರ ಜನರು ಸಕ್ರಿಯ ಕಾರ್ಯಕರ್ತರ ಭಾಷಣಗಳನ್ನು ಆಲಿಸಲು ಗುಂಪುಗೂಡಿದ್ದಾರೆ
ಗೊರೈನ ಆದಿವಾಸಿ ಹಾಗೂ ಕೆಎಸ್ಎಸ್ನೊಂದಿಗೆ ತೊಡಗಿರುವ ಕುನಾಲ್ ಬಾಬರ್, ತಮ್ಮ ಭಾಷಣದಲ್ಲಿ, “ಸ್ವಾತಂತ್ರ್ಯ ದೊರೆತು 75 ವರ್ಷಗಳಾಗಿವೆಯಾದರೂ ಆದಿವಾಸಿಗಳಾದ ನಾವು ಸ್ವತಂತ್ರರಾಗಿಲ್ಲ. ಸ್ವಾತಂತ್ರ್ಯವು ನಮಗೆ ತಲುಪಿರುವುದಿಲ್ಲ. ಅವರು ನಮ್ಮನ್ನು ನಮ್ಮ ಭೂಮಿಯಿಂದ ಒಕ್ಕಲೆಬ್ಬಿಸುತ್ತಾರೆ. ಸರ್ಕಾರವು ಮುಂಬೈನಲ್ಲಿ ಆದಿವಾಸಿಗಳಿಲ್ಲವೆಂದು ಹೇಳುತ್ತದೆ. ಅದು ನಿಜವಾಗಿದ್ದಲ್ಲಿ, ನಾವೆಲ್ಲರೂ ಬಂದದ್ದಾದರೂ ಎಲ್ಲಿಂದ?” ಎಂದರು.
*****
ಆದಿವಾಸಿಗಳ ಜೀವನ ಪದ್ಧತಿಗಳು ಮತ್ತು ಮುಂಬೈ ಸುತ್ತಮುತ್ತಲಿನ ಸಮುದಾಯಗಳಿಂದ ಪೂಜಿಸಲ್ಪಡುವ ಪ್ರಕೃತಿ ದೇವರುಗಳಾದ ಹಿರ್ವದೇವ್ ಮತ್ತು ವಾಗ್ದೇವ್ಗಳ ಗುಣಗಾನ ಮಾಡುತ್ತಾ ನಾರಾಯನ್ ಕದಲೆ ಅವರು ತಾವೇ ರಚಿಸಿ, ಹಾಡಿದ ಹಾಡಿನೊಂದಿಗೆ ದಿನಪೂರ್ತಿ ನಡೆದ ವೃತ್ತಾಂತವು ಮುಕ್ತಾಯಗೊಂಡಿತು.
ವನಪಾಲಕನ ವೃತ್ತಿಯನ್ನು ನಿರ್ವಹಿಸುವ 39ರ ನಾರಾಯಣ್, “ನನ್ನ ನಂತರದ ಪೀಳಿಗೆಯನ್ನು ಹುರಿದುಂಬಿಸಲು ನಾನು ಹಾಡುಗಳನ್ನು ಬರೆಯುತ್ತೇನೆ” ಎನ್ನುತ್ತಾರೆ. ಮುಂಬೈನ ವಿವಿಧ ಪಾಡಾಗಳಿಂದ ಆದಿವಾಸಿ ಯುವಜನರು ಸಂಭ್ರಮದಿಂದ ತಮ್ಮಲ್ಲಿರುವ ಉತ್ತಮವಾದ ಬಟ್ಟೆಗಳನ್ನು ಧರಿಸಿ, ಪೋಸ್ಟರ್ಗಳನ್ನು ಹಿಡಿದು, ಉತ್ಸಾಹದಿಂದ “ಆದಿವಾಸಿಗಳ ಒಗ್ಗಟಿಗೆ ಜಯವಾಗಲಿ” ಎಂಬ ಘೋಷಣೆಗಳನ್ನು ಕೂಗುತ್ತಿದ್ದರು.
“ನಾವು ಮುಂಬೈನ ವಿವಿಧ ಭಾಗಗಳಲ್ಲಿ ವಾಸಿಸುತ್ತೇವಾದರೂ, ಆದಿವಾಸಿಗಳ ಪ್ರಶ್ನೆಗಳು ಮತ್ತು ಸಮಸ್ಯೆಗಳೆಲ್ಲವೂ ಒಂದೇ. ಈ ಸಮಸ್ಯೆಗಳ ನಿವಾರಣೆಗೆ ನಾವೆಲ್ಲರೂ ಒಟ್ಟುಗೂಡಬೇಕು” ಎನ್ನುತ್ತಾರೆ ಪಾರ್ವತಿ.
ಅನುವಾದ: ಶೈಲಜಾ ಜಿ.ಪಿ.