ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯ 40 ಕುಕಿ-ಝೋ ಬುಡಕಟ್ಟು ಕುಟುಂಬಗಳ ಸಣ್ಣ ಗ್ರಾಮವಾದ ನಗಾಮುನ್ ಗುನ್ಫೈಜಾಂಗ್ ಎನ್ನುವಲ್ಲಿ ಇಬ್ಬರು ಗಂಡಸರು ದಟ್ಟವಾದ ಕಾಡಿನ ದಾರಿಯ ನಡುವೆ ತಮ್ಮ ಹೊಲದೆಡೆಗಿನ ಏರು ದಾರಿಯನ್ನು ಹತ್ತುತ್ತಿದ್ದರು. 2023ರ ಸೆಪ್ಟೆಂಬರ್‌ ತಿಂಗಳ ಆ ದಿನ ಆಕಾಶದ ತುಂಬಾ ಮೋಡಗಳು ದಟ್ಟೈಸಿದ್ದವು. ಅವರಿಬ್ಬರು ದಟ್ಟ ಪೊದೆಗಳಿಂದ ಕೂಡಿದ ಬೆಟ್ಟದ ದಾರಿಯಲ್ಲಿ ನಡೆಯುತ್ತಿದ್ದರು.

ಕೆಲವೇ ವರ್ಷಗಳ ಹಿಂದೆ ಈ ಗುಡ್ಡಗಳು ಬಿಳಿ, ಊದಾ ಮತ್ತು ಗುಲಾಬಿ ಬಣ್ಣದ ಗಸಗಸೆ (ಪಾಪಾವರ್ ಸೋಮ್ನಿಫೆರಮ್) ಕುಟುಂಬದ ಗಿಡಗಳ ಹೂವಿನಿಂದ ಕೂಡಿರುತ್ತಿದ್ದವು.

“ನಾನು 1990ರ ದಶಕದ ಆರಂಭದಲ್ಲಿ ಗಾಂಜಾ (ಕೆನಾಬಿಸ್ ಸ್ಯಾಟಿವಾ) ಬೆಳೆಯುತ್ತಿದ್ದೆ, ಆದರೆ ಆ ಸಮಯದಲ್ಲಿ, ಅದರಿಂದ ಅಷ್ಟೇನೂ ಆದಾಯ ಬರುತ್ತಿರಲಿಲ್ಲ” ಎಂದು ಈ ದಾರಿಯಲ್ಲಿ ನಡೆಯುತ್ತಿದ್ದ ರೈತರಲ್ಲಿ ಒಬ್ಬರಾದ ಪಾವೊಲಾಲ್ ಹೇಳಿದರು. "2000ರ ದಶಕದ ಆರಂಭದಲ್ಲಿ, ಜನರು ಈ ಬೆಟ್ಟಗಳಲ್ಲಿ ಕಾನಿ [ಗಸಗಸೆ] ಬೆಳೆಯಲು ಪ್ರಾರಂಭಿಸಿದರು. "ಕೆಲವು ವರ್ಷಗಳ ಹಿಂದೆ ಅದನ್ನು ನಿಷೇಧಿಸುವವರೆಗೂ ಅದನ್ನು ನಾನೂ ಬೆಳೆಯುತ್ತಿದ್ದೆ" ಎಂದು ಅವರು ಹೇಳುತ್ತಾರೆ.

ಪಾವೊಲಾಲ್‌ ಅವರು 2020ನೇ ಇಸವಿಯ ಚಳಿಗಾಲದ ಕುರಿತು ಮಾತನಾಡುತ್ತಿದ್ದರು. ಆ ಸಮಯದಲ್ಲಿ ನಹಾಮುನ್‌ ಗುನ್ಪಾಯ್‌ಜಾಂಗ್‌ ಮುಖ್ಯಸ್ಥ ಎಸ್‌ ಟಿ ತನ್ಬೋಜ್‌ ಕಿಗ್ಪೆನ್‌ ಊರಿನ ಎಲ್ಲ ಗಸಗಸೆ ತೋಟವನ್ನು ನಾಶಪಡಿಸುವಂತೆಯೂ ಮತ್ತು ಇನ್ನು ಮುಂದೆ ಗಸಗಸೆ ಬೆಳೆಯನ್ನು ಬೆಳೆಯಬಾರದೆಂದೂ ಕರೆ ನೀಡಿದರು. ಆದರೆ ಈ ನಿರ್ಧಾರವನ್ನು ಅವರು ಒಂಟಿಯಾಗಿ ತೆಗೆದುಕೊಂಡಿರಲಿಲ್ಲ. ಅವರು ಈ ನಿರ್ಧಾರವನ್ನು ರಾಜ್ಯ ಬಿಜೆಪಿ ಸರ್ಕಾರದ ʼಡ್ರಗ್ಸ್‌ ವಿರುದ್ಧ ಯುದ್ಧʼ ಅಭಿಯಾನದ ಭಾಗವಾಗಿ ತೆಗೆದುಕೊಂಡಿದ್ದರು.

ಹೆಚ್ಚು ವ್ಯಸನಕಾರಿ ಮಾದಕ ವಸ್ತುವಾದ ಅಫೀಮನ್ನು ತಯಾರಿಸಲು ಬಳಸಲಾಗುವ ಗಸಗಸೆಯನ್ನು ಮುಖ್ಯವಾಗಿ ಮಣಿಪುರದ ಗುಡ್ಡಗಾಡು ಜಿಲ್ಲೆಗಳಾದ ಚುರಾಚಂದ್ಪುರ , ಉಖ್ರುಲ್, ಕಾಮ್‌ಜೋಂಗ್, ಸೇನಾಪತಿ, ತಮೆಂಗ್ಲಾಂಗ್, ಚಾಂದೇಲ್, ತೆಂಗ್ನೌಪಾಲ್ ಮತ್ತು ಕಾಂಗ್ಪೋಕ್ಪಿಯಲ್ಲಿ ಬೆಳೆಯಲಾಗುತ್ತದೆ; ಕಾಂಗ್ಪೋಕ್ಪಿ ನಿವಾಸಿಗಳಲ್ಲಿ ಹೆಚ್ಚಿನವರು ಕುಕಿ-ಜೋ ಬುಡಕಟ್ಟು ಜನಾಂಗಕ್ಕೆ ಸೇರಿದವರು.

ಐದು ವರ್ಷಗಳ ಹಿಂದೆ, ನವೆಂಬರ್ 2018ರಲ್ಲಿ, ಮುಖ್ಯಮಂತ್ರಿ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರವು ಮಾದಕ ವಸ್ತುಗಳ ವಿರುದ್ಧದ ಯುದ್ಧವನ್ನು ಪ್ರಾರಂಭಿಸಿತು.  ಆ ಪ್ರದೇಶಗಳಲ್ಲಿ ಗಸಗಸೆ ಕೃಷಿಯನ್ನು ನಿಲ್ಲಿಸುವಂತೆ ಸಿಂಗ್ ಗುಡ್ಡಗಾಡು ಜಿಲ್ಲೆಗಳ ಗ್ರಾಮ ಮುಖ್ಯಸ್ಥರು ಮತ್ತು ಚರ್ಚುಗಳಿಗೆ ಮನವಿ ಮಾಡಿದರು.

Left: Poppy plantations in Ngahmun village in Manipur's Kangpokpi district .
PHOTO • Kaybie Chongloi
Right: Farmers like Paolal say that Manipur's war on drugs campaign to stop poppy cultivation has been unsuccessful in the absence of  consistent farming alternatives.
PHOTO • Makepeace Sitlhou

ಎಡ: ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯ ನಗಾಮುನ್ ಗ್ರಾಮದ ಗಸಗಸೆ ತೋಟಗಳು. ಬಲ: ಸ್ಥಿರವಾದ ಕೃಷಿ ಪರ್ಯಾಯಗಳ ಅನುಪಸ್ಥಿತಿಯಿಂದಾಗಿ ಗಸಗಸೆ ಕೃಷಿಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಮಣಿಪುರದ ಮಾದಕವಸ್ತುಗಳ ವಿರುದ್ಧದ ಯುದ್ಧವು ವಿಫಲವಾಗಿದೆ ಎಂದು ಪಾವೊಲಾಲ್ ಮತ್ತು ಅವರಂತಹ ರೈತರು ಹೇಳುತ್ತಾರೆ

'ಮಾದಕವಸ್ತುಗಳ ವಿರುದ್ಧದ ಯುದ್ಧ' ಅಭಿಯಾನವು ತಮ್ಮ ಮೇಲೆ ನಡೆಸಲಾದ ನೇರ ದಾಳಿ ಎಂದು ಕುಕಿ-ಜೋ ಬುಡಕಟ್ಟಿನ ಸ್ಥಳೀಯರು ಹೇಳುತ್ತಾರೆ, ಇದು ಮೇ 2023ರಲ್ಲಿ ಬಹುಸಂಖ್ಯಾತ ಮೈತೇಯಿ ಸಮುದಾಯ ಮತ್ತು ಅಲ್ಪಸಂಖ್ಯಾತ ಕುಕಿ-ಜೋ ಬುಡಕಟ್ಟು ಜನಾಂಗದವರ ನಡುವೆ ಭುಗಿಲೆದ್ದ ರಕ್ತಸಿಕ್ತ ಜನಾಂಗೀಯ ಸಂಘರ್ಷಕ್ಕೂ ಕಾರಣವಾಗಿದೆ. ನಾಗಾ ಮತ್ತು ಕುಕಿ ಝೋ ಸಮುದಾಯಗಳಿರುವ ಗುಡ್ಡಗಾಡು ಜಿಲ್ಲೆಗಳಲ್ಲಿ ಗಸಗಸೆಯನ್ನು ಬೆಳೆಯಲಾಗುತ್ತಿದ್ದರೂ, ಮಣಿಪುರದಲ್ಲಿ ಕುಕಿಗಳು ಮಾತ್ರವೇ ಮಾದಕವಸ್ತು ವ್ಯಾಪಾರವನ್ನು ನಡೆಸುತ್ತಿದ್ದಾರೆಂದು ಮುಖ್ಯಮಂತ್ರಿ ಬಿರೇನ್ ಸಿಂಗ್ (ಬಿಜೆಪಿ) ಆರೋಪ ಹೊರಿಸಿದ್ದಾರೆಂದು ಸ್ಥಳೀಯರು ದೂರುತ್ತಿದ್ದಾರೆ.

ಪಾವೊಲಾಲ್ ಅವರಂತೆ ಗಹ್ಮುನ್ ಗುನ್ಫೈಜಾಂಗ್ ಗ್ರಾಮದ ಸುಮಾರು 30 ಕೃಷಿ ಕುಟುಂಬಗಳು ಗಸಗಸೆ ಕೃಷಿಯನ್ನು ತ್ಯಜಿಸಲು ಒತ್ತಾಯಿಸಲ್ಪಟ್ಟಿದ್ದಾರೆ ಮತ್ತು ಈಗ ಅವರೆಲ್ಲ ಬೀನ್ಸ್, ಎಲೆಕೋಸು, ಆಲೂಗಡ್ಡೆ, ಬಾಳೆಹಣ್ಣು ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾರೆ ಮತ್ತು ಆ ಮೂಲಕ ಅವರ ಹಿಂದಿನ ಆದಾಯದ ಒಂದು ಭಾಗವನ್ನು ಗಳಿಸುತ್ತಾರೆ. "ಇದು ಕುತ್ತಿಗೆ ಹಿಸುಕುವ ಅನುಭವವಾಗಿತ್ತು" ಎಂದು ಈಗ ಹಳ್ಳಿಯ ಮುಖ್ಯಸ್ಥರಾಗಿರುವ ಸ್ಯಾಮ್ಸನ್ ಕಿಪ್ಗೆನ್ ಹೇಳುತ್ತಾರೆ. ಈ ಪ್ರದೇಶದ ಎಲ್ಲಾ ಭೂಮಿಯು ಸಮುದಾಯ ಒಡೆತನದಲ್ಲಿದೆ, ಗ್ರಾಮದ ಮುಖ್ಯಸ್ಥರಿಂದ ನಿರ್ವಹಿಸಲ್ಪಡುತ್ತದೆ ಮತ್ತು ನಿಯಂತ್ರಿಸಲ್ಪಡುತ್ತದೆ - ಇದು ಆನುವಂಶಿಕ ಸ್ಥಾನವಾಗಿದೆ. "ಆದರೆ ಅವರು [ಬೆಳೆಗಳನ್ನು ಬದಲಾಯಿಸಲು ಒತ್ತಾಯಿಸಲ್ಪಟ್ಟ ರೈತರು] ಇದು ಹಳ್ಳಿ ಮತ್ತು ಪರಿಸರಕ್ಕೆ ಒಳ್ಳೆಯದು ಎಂದು ಅರ್ಥಮಾಡಿಕೊಂಡಿದ್ದರು" ಎಂದು ಅವರು ಹೇಳುತ್ತಾರೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಎಂಎನ್ಆರ್‌ಜಿಎ) ಯಂತಹ ಇತರ ಕಾರ್ಯಸಾಧ್ಯ ಉದ್ಯೋಗಾವಕಾಶಗಳಿಗೆ ಪ್ರವೇಶವಿಲ್ಲದ ರೈತರಿಗೆ ಗಸಗಸೆ ಎನ್ನುವುದು ಹೇಳಿ ಮಾಡಿಸಿದ ಬೆಳೆಯಾಗಿತ್ತು.

ಸರ್ಕಾರವು ಬಂಧಿಸಿ ಜೈಲಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದರಿಂದ ಅಫೀಮು ಕೃಷಿಯನ್ನು ಕೊನೆಗೊಳಿಸಿದ್ದಾಗ 45 ವರ್ಷದ ಪಾವೊಲಾಲ್ ಹೇಳುತ್ತಾರೆ. ಗ್ರಾಮಸ್ಥರು ಸಹಕರಿಸದಿದ್ದರೆ, ಪೊಲೀಸರು ಬಂದು ಅವರ ಗಸಗಸೆ ಹೊಲಗಳನ್ನು ಸುಟ್ಟುಹಾಕುತ್ತಾರೆ ಎಂದು  ತಿಳಿಸಲಾಯಿತು. ಇತ್ತೀಚೆಗೆ, ಕಣಿವೆಯ ನಾಗರಿಕ ಸಮಾಜ ಗುಂಪು ಕೇಂದ್ರ ಸರ್ಕಾರವು ಅಫೀಮು ಹೊಲಗಳ ಮೇಲೆ ವಾಯುದಾಳಿ ನಡೆಸುವುದಾಗಿ ಒಪ್ಪಿಕೊಂಡಿತ್ತು , ಆದರೆ ಈ ಬೇಡಿಕೆಗೆ ಯಾವುದೇ ಅಧಿಕೃತ ಅನುಮತಿ ಇಲ್ಲ ಎಂದು ಹೇಳಿಕೊಂಡಿದೆ.

2018ರಿಂದ 18,000 ಎಕರೆಗೂ ಹೆಚ್ಚು ಗಸಗಸೆ ಹೊಲಗಳನ್ನು ನಾಶಪಡಿಸಲಾಗಿದೆ ಮತ್ತು 2,500 ರೈತರನ್ನು ಬಂಧಿಸಲಾಗಿದೆ ಎಂದು ರಾಜ್ಯ ಹೇಳಿಕೊಂಡಿದೆ. ಆದಾಗ್ಯೂ, 2018 ಮತ್ತು 2022ರ ನಡುವೆ ಒಟ್ಟು 13,407 ಎಕರೆ ಗಸಗಸೆ ಹೊಲಗಳು ನಾಶವಾಗಿವೆ ಎಂದು ಮಣಿಪುರ ಪೊಲೀಸರ ಮಾದಕವಸ್ತು ಮತ್ತು ಗಡಿಗಳ ವಿಶೇಷ ಘಟಕದ ಅಂಕಿಅಂಶಗಳು ಹೇಳುತ್ತವೆ.

ಮಣಿಪುರದ ಗಡಿಯುದ್ದಕ್ಕೂ ಇರುವ ಮಯನ್ಮಾರ್ ವಿಶ್ವದ ನಂಬರ್ ಒನ್ ಅಫೀಮು ಉತ್ಪಾದಕ ರಾಷ್ಟ್ರವಾಗಿದೆ. ಮಾರ್ಫಿನ್, ಕೋಡೀನ್, ಹೆರಾಯಿನ್ ಮತ್ತು ಆಕ್ಸಿಕೋಡೋನ್ ನಂತಹ ಹೆಚ್ಚು ವ್ಯಸನಕಾರಿ ಮಾದಕ ವಸ್ತುಗಳಿಗೆ ಮ್ಯಾನ್ಮಾರ್ ಪ್ರಮುಖ ಮಾರುಕಟ್ಟೆಯಾಗಿದೆ. ಮಣಿಪುರಕ್ಕೆ ಈ ಸಾಮೀಪ್ಯದಿಂದಾಗಿ, ಮಣಿಪುರವು ಮಾದಕವಸ್ತುಗಳು ಮತ್ತು ಇತರ ಅಕ್ರಮ ಸರಕುಗಳ ಕಳ್ಳಸಾಗಾಣಿಕೆಯ ಕೇಂದ್ರವಾಗುವ ನಿರಂತರ ಅಪಾಯವಿದೆ. ಭಾರತದಲ್ಲಿ ಮಾದಕವಸ್ತು ಬಳಕೆಯ ಹರಡುವಿಕೆ (ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ) ಎಂಬ ಶೀರ್ಷಿಕೆಯ 2019ರ ಅಧ್ಯಯನದ ಪ್ರಕಾರ, ಈಶಾನ್ಯ ರಾಜ್ಯಗಳಲ್ಲಿ ಮಣಿಪುರವು ಅತಿ ಹೆಚ್ಚು ಇಂಜೆಕ್ಷನ್ ಡ್ರಗ್ ಬಳಕೆದಾರರನ್ನು ಹೊಂದಿದೆ.

"ಯುವಕರನ್ನು ಚಟಗಳಿಂದ ದೂರ ಉಳಿಸಲು ನಾನು ಡ್ರಗ್ಸ್ ವಿರುದ್ಧ ಯುದ್ಧ ಘೋಷಿಸಿದೆ, ನಾನು ಏನು ತಪ್ಪು ಮಾಡಿದ್ದೇನೆ?" ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ 2023ರ ಡಿಸೆಂಬರ್ ತಿಂಗಳಿನಲ್ಲಿ ಇಂಫಾಲ್ ನಗರದ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಕೇಳಿದರು. ಜಾತಿ ಗಲಭೆಗಳ ಹಿಂದೆ ಬಿಜೆಪಿ ಕೈವಾಡವಿದೆ ಎಂಬ ಆರೋಪಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

Demza, a farmer who used to earn up to three lakh rupees annually growing poppy, stands next to his farm where he grows cabbage, bananas and potatoes that he says is not enough to support his family, particularly his children's education
PHOTO • Makepeace Sitlhou

ತನ್ನ ಕೃಷಿಭೂಮಿಯ ಪಕ್ಕ ಡೆಮ್ಜಾ ಎನ್ನುವ ರೈತ. ಅವರು ಗಸಗಸೆ ಬೆಳೆಯುವ ಮೂಲಕ ವರ್ಷಕ್ಕೆ ಸುಮಾರು 3 ಲಕ್ಷ ರೂ.ಗಳನ್ನು ಸಂಪಾದಿಸುತ್ತಿದ್ದರು. ಈಗ ಅವರು ಆ ಭೂಮಿಯಲ್ಲಿ ಎಲೆಕೋಸು, ಆಲೂಗಡ್ಡೆ ಮತ್ತು ಬಾಳೆ ಬೆಳೆಯುತ್ತಾರೆ. ಗಳಿಸಿದ ಆದಾಯವು ಮಕ್ಕಳ ಶಿಕ್ಷಣದ ಖರ್ಚನ್ನು ಬಿಡಿ, ಕುಟುಂಬವನ್ನು ನಡೆಸುವುದಕ್ಕೂ ಸಾಕಾಗುವುದಿಲ್ಲ

ವಿಪರ್ಯಾಸವೆಂದರೆ, 'ಡ್ರಗ್ಸ್ ವಿರುದ್ಧದ ಯುದ್ಧ' ಡೆಮ್ಜಾ ಅವರ ಮಕ್ಕಳ ಶಿಕ್ಷಣಕ್ಕೆ ಎರವಾಯಿತು.

ನಾಲ್ಕು ವರ್ಷಗಳ ಹಿಂದಿನವರೆಗೂ, ಡೆಮ್ಜಾ ಮತ್ತು ಅವರ ಕುಟುಂಬವು ಗಹ್ಮುನ್ ಗುನ್ಫೈಜಾಂಗ್ ಊರಿನಲ್ಲಿ ಗಸಗಸೆ ಬೆಳೆಯ ಮೂಲಕ ಮೂಲಕ ಸಾಕಷ್ಟು ಆರಾಮವಾಗಿ ಜೀವನ ನಡೆಸುತ್ತಿದ್ದರು. ನಿಷೇಧದ ನಂತರ, ಅವರು ಮಿಶ್ರ ಬೆಳೆಗೆ ಬದಲಾಗಬೇಕಾಯಿತು, ಮತ್ತು ಇದರೊಂದಿಗೆ ಅವರ ಆದಾಯ ಕುಸಿಯಿತು. "ವರ್ಷಕ್ಕೆ ಎರಡು ಬಾರಿ [ತರಕಾರಿಗಳನ್ನು] ಕೊಯ್ಲು ಮಾಡಿದರೂ, ಮತ್ತು ಇಳುವರಿ ಉತ್ತಮವಾಗಿದ್ದರೂ, ವರ್ಷಕ್ಕೆ ಸುಮಾರು 1 ಲಕ್ಷ ರೂ.ಗಳನ್ನಷ್ಟೇ ಗಳಿಸುತ್ತೇನೆ" ಎಂದು ಡೆಮ್ಜಾ ಪರಿಗೆ ತಿಳಿಸಿದರು. "ಗಸಗಸೆ ಬೆಳೆಯುತ್ತಿದ್ದ ಸಮಯದಲ್ಲಿ ಒಂದು ಬೆಳೆಯಿಂದ ವರ್ಷಕ್ಕೆ ಮೂರು ಲಕ್ಷ ಸಂಪಾದಿಸುತ್ತಿದ್ದೆ."

ಈ ಆದಾಯ ಕುಸಿತದಿಂದಾಗಿ ಅವರು ತಮ್ಮ ಮಕ್ಕಳನ್ನು ಇಂಫಾಲದ ದೊಡ್ಡ ಶಾಲೆಯನ್ನು ಬಿಡಿಸುವಂತಾಯಿತು. ಪ್ರಸ್ತುತ ಇಬ್ಬರು ಮಕ್ಕಳಲ್ಲಿ ಒಬ್ಬರನ್ನು ಮಾತ್ರ ಕಾಂಗ್ಪೋಕ್ಪಿ ಜಿಲ್ಲಾ ಕೇಂದ್ರದಲ್ಲಿರುವ ಸ್ಥಳೀಯ ಶಾಲೆಗೆ ಸೇರಿಸಲಾಗಿದೆ.

ಬಡತನ, ಆಹಾರ ಅಭದ್ರತೆ ಮತ್ತು ಭೌತಿಕ ಬೇಡಿಕೆಗಳು ಮಣಿಪುರದ ಆದಿವಾಸಿ ರೈತರನ್ನು ಗಸಗಸೆ ಕೃಷಿಗೆ ಪ್ರೇರೇಪಿಸುತ್ತವೆ ಎಂದು ಕಾಂಗ್ಪೋಕ್ಪಿ, ಚುರಾಚಂದ್ಪುರ ಮತ್ತು ತೆಂಗ್ನೌಪಾಲ್ ಗುಡ್ಡಗಾಡು ಜಿಲ್ಲೆಗಳಲ್ಲಿ ನಡೆಸಿದ 2019ರ ಅಧ್ಯಯನವು ಹೇಳುತ್ತದೆ. ಐಐಟಿ ಗುವಾಹಟಿಯ ಸಮಾಜಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಗಮ್ಜಾಹಾವೊ ಕಿಪ್ಗೆನ್ ಈ ಅಧ್ಯಯನದ ನೇತೃತ್ವ ವಹಿಸಿದ್ದರು. ಇದಕ್ಕಾಗಿ 60 ಕುಟುಂಬಗಳನ್ನು ಸಮೀಕ್ಷೆ ಮಾಡಿದ್ದರು. ಒಂದು ಹೆಕ್ಟೇರ್ ಭೂಮಿಯಲ್ಲಿ 5-7 ಕಿಲೋ ಗಸಗಸೆ ಉತ್ಪಾದಿಸಬಹುದು, ಇದರ ಮಾರುಕಟ್ಟೆ ಮೌಲ್ಯ 70,000 ರಿಂದ 1.5 ಲಕ್ಷ ರೂ ಎನ್ನುವುದು ಸಹ ಈ ಅಧ್ಯಯನದಿಂದ ತಿಳಿದುಬಂತು.

*****

ಮಣಿಪುರದ ಕುಕಿ-ಜೋ ಬುಡಕಟ್ಟು ಸಮುದಾಯದವರಿಗೆ ನವೆಂಬರ್ ಎನ್ನುವುದು ಸಂಭ್ರಮದ ತಿಂಗಳು; ಗಸಗಸೆ ಕೊಯಿಲಿನ ಜೊತೆಗೆ ಈ ಸಮಯದಲ್ಲಿ ವಾರ್ಷಿಕ ಕುಟ್ ಉತ್ಸವವನ್ನು ಆಚರಿಸಲಾಗುತ್ತದೆ. ಹಬ್ಬವನ್ನು ಆಚರಿಸಲು ಸಮುದಾಯದ ಜನರೆಲ್ಲರೂ ಒಟ್ಟುಗೂಡುತ್ತಾರೆ, ಆಹಾರ, ನೃತ್ಯ, ಉತ್ಸವಗಳ ಜೊತೆಗೆ ಸೌಂದರ್ಯ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗುತ್ತದೆ. ಆದರೆ 2023 ಬೇರೆಯದೇ ರೀತಿಯ ವರ್ಷವಾಗಿತ್ತು. ಮೇ ತಿಂಗಳಲ್ಲಿ, ಮೈತೇಯಿ ಮತ್ತು ಕುಕಿ-ಜೋ ಜನರ ನಡುವೆ ರಕ್ತಸಿಕ್ತ ಘರ್ಷಣೆಗಳು ಭುಗಿಲೆದ್ದವು. ಮಣಿಪುರದ ಜನಸಂಖ್ಯೆಯಲ್ಲಿ ಶೇ.53ರಷ್ಟು ಮೈತೇಯಿಗಳು ಇದ್ದಾರೆ.

ಮಾರ್ಚ್ 2023ರ ಅಂತ್ಯದಲ್ಲಿ, ಮಣಿಪುರ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಮೈತೇಯಿ ಸಮುದಾಯದ ದೀರ್ಘಕಾಲದ ವಿನಂತಿಯನ್ನು ಪರಿಗಣಿಸಲು ನಿರ್ದೇಶಿಸಿತ್ತು, ಇದು ಅವರಿಗೆ ಆರ್ಥಿಕ ಪ್ರಯೋಜನಗಳನ್ನು ಮತ್ತು ಸರ್ಕಾರಿ ಉದ್ಯೋಗಗಳಿಗೆ ಕೋಟಾವನ್ನು ನೀಡುತ್ತದೆ. ಇದಲ್ಲದೆ, ಮುಖ್ಯವಾಗಿ ಕುಕಿ ಬುಡಕಟ್ಟು ಜನಾಂಗದವರು ಆಕ್ರಮಿಸಿಕೊಂಡಿರುವ ಗುಡ್ಡಗಾಡು ಪ್ರದೇಶಗಳಲ್ಲಿ ಮೈತೇಯಿಗಳಿಗೆ ಭೂಮಿಯನ್ನು ಖರೀದಿಸಲು ಸಾಧ್ಯವಾಗುತ್ತದೆ. ನ್ಯಾಯಾಲಯದ ಶಿಫಾರಸನ್ನು ಮಣಿಪುರದ ಬುಡಕಟ್ಟು ಸಮುದಾಯಗಳು ವಿರೋಧಿಸಿದವು, ತಮ್ಮ ಜಮೀನುಗಳ ಮೇಲಿನ ನಿಯಂತ್ರಣವು ಅಪಾಯದಲ್ಲಿದೆ ಎಂದು ಭಾವಿಸಿದವು.

Farmers and residents of Ngahmun village slashing the poppy plantations after joining Chief Minister Biren Singh’s War on Drugs campaign in 2020
PHOTO • Kaybie Chongloi

ಮುಖ್ಯಮಂತ್ರಿ ಬಿರೇನ್ ಸಿಂಗ್ 2020ರಲ್ಲಿ ಮಾದಕವಸ್ತುಗಳ ವಿರುದ್ಧ ಯುದ್ಧ ಘೋಷಿಸಿದ ನಂತರ ರೈತರು ಮತ್ತು ನಹ್ಮುನ್ ಗ್ರಾಮದ ನಿವಾಸಿಗಳು ಗಸಗಸೆ ತೋಟಗಳನ್ನು ನಾಶಪಡಿಸುತ್ತಿರುವುದು

ಇದು ಕ್ರೂರ ಹತ್ಯೆಗಳು, ಶಿರಚ್ಛೇದಗಳು, ಸಾಮೂಹಿಕ ಅತ್ಯಾಚಾರಗಳು ಮತ್ತು ಅಗ್ನಿಸ್ಪರ್ಶ ಸೇರಿದಂತೆ ರಾಜ್ಯದಾದ್ಯಂತ ಸರಣಿ ಹಿಂಸಾತ್ಮಕ ದಾಳಿಗಳಿಗೆ ಕಾರಣವಾಯಿತು.

ಪರಿ ಊರಿಗೆ ಭೇಟಿ ನೀಡುವ ಎರಡು ತಿಂಗಳ ಮೊದಲು, ಭಯಾನಕ ಘಟನೆಯ ವೀಡಿಯೊ ಒಂದು ವೈರಲ್ ಆಗಿತ್ತು. ಕಾಂಗ್ಪೋಕ್ಪಿಯ ಬಿ ಫೆನೋಮ್ ಗ್ರಾಮದ ಇಬ್ಬರು ಮಹಿಳೆಯರನ್ನು ಮೈತೇಯಿ ಪುರುಷರ ಗುಂಪು ಬೆತ್ತಲೆಯಾಗಿ ಮೆರವಣಿಗೆ ಮಾಡಿದೆ. ಮೇ ಆರಂಭದಲ್ಲಿ ಬಿ ಫೆನೋಮ್ ಗ್ರಾಮದ ಮೇಲೆ ದಾಳಿ ನಡೆದಾಗ ಈ ಘಟನೆ ನಡೆದಿದೆ. ವೀಡಿಯೊವನ್ನು ಚಿತ್ರೀಕರಿಸಿದ ನಂತರ, ಅವರ ಪುರುಷ ಸಂಬಂಧಿಕರನ್ನು ಕೊಲ್ಲಲಾಯಿತು ಮತ್ತು ಭತ್ತದ ಗದ್ದೆಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.

ಸಂಘರ್ಷದಲ್ಲಿ ಈವರೆಗೆ ಅಂದಾಜು 200 ಜನರು ಸಾವನ್ನಪ್ಪಿದ್ದಾರೆ ಮತ್ತು 70,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ, ಇವರಲ್ಲಿ ಹೆಚ್ಚಾಗಿ ಅಲ್ಪಸಂಖ್ಯಾತ ಕುಕಿ ಜನರಾಗಿದ್ದು ಈ ಅಂತರ್ಯುದ್ಧದಲ್ಲಿ ರಾಜ್ಯ ಮತ್ತು ಪೊಲೀಸರು ಮೈತೇಯಿ ಉಗ್ರರನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಅಫೀಮು (ಗಸಗಸೆ) ರಕ್ತಸಿಕ್ತ ಅಂತರ್ಯುದ್ಧದ ಕೇಂದ್ರಬಿಂದುವಾಗಿದೆ. "ರಾಜಕಾರಣಿಗಳು ಮತ್ತು ಅಧಿಕಾರಿಗಳು ಈ ಸರಪಳಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಮಧ್ಯವರ್ತಿಗಳು ರೈತರಿಂದ ಖರೀದಿಸಿ ಸಾಕಷ್ಟು ಹಣವನ್ನು ಗಳಿಸುತ್ತಾರೆ" ಎಂದು ಐಐಟಿ ಪ್ರಾಧ್ಯಾಪಕ ಕಿಪ್ಜೆನ್ ಹೇಳುತ್ತಾರೆ. ಗಸಗಸೆ ವ್ಯವಹಾರದಲ್ಲಿ ಹೆಚ್ಚಿನ ರೈತರಿಗೆ ಸಂಬಳ ಸಿಗುವುದಿಲ್ಲ ಎಂದು ಕಿಪ್ಗೆನ್ ಹೇಳುತ್ತಾರೆ.

ಮಯನ್ಮಾರಿನೊಂದಿಗೆ ಗಡಿಯಾಚೆಗಿನ ಮಾದಕವಸ್ತು ವ್ಯಾಪಾರದಲ್ಲಿ ತೊಡಗಿರುವ ಕುಕಿ ನ್ಯಾಷನಲ್ ಫ್ರಂಟ್ (ಕೆಎನ್ಎಫ್) ನಂತಹ ಸಶಸ್ತ್ರ ಗುಂಪುಗಳ ಬೆಂಬಲದೊಂದಿಗೆ ಕುಕಿ-ಜೋ ಬುಡಕಟ್ಟು ಜನಾಂಗದ ಬಡ ಗಸಗಸೆ ಬೆಳೆಗಾರರು ಸಂಘರ್ಷಕ್ಕೆ ಕಾರಣ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಆರೋಪಿಸಿದ್ದಾರೆ. ಮೈತೇಯಿ ಪ್ರಾಬಲ್ಯದ ಕಣಿವೆಯಲ್ಲಿ ಮೀಸಲು ಅರಣ್ಯಗಳ ಭಾರಿ ನಾಶ ಮತ್ತು ತೀವ್ರ ಪರಿಸರ ಬಿಕ್ಕಟ್ಟಿಗೆ ಬೆಟ್ಟಗಳಲ್ಲಿ ಗಸಗಸೆ ಕೃಷಿಯನ್ನು ರಾಜ್ಯ ಸರ್ಕಾರ ದೂಷಿಸುತ್ತದೆ.

ರೈತರ ಪ್ರಕಾರ, ಗಸಗಸೆ ಕೃಷಿ ಚಕ್ರವು ಮರಗಳನ್ನು ಕಡಿಯುವ ಮತ್ತು ಕಾಡಿನ ತುಂಡುಗಳನ್ನು ಸುಡುವ ಮೂಲಕ ದೊಡ್ಡ ಭೂಮಿಯನ್ನು ತೆರವುಗೊಳಿಸುವುದರೊಂದಿಗೆ ಪ್ರಾರಂಭವಾಗುತ್ತದೆ, ನಂತರ ಕೀಟನಾಶಕಗಳು, ಜೀವಸತ್ವಗಳು ಮತ್ತು ಯೂರಿಯಾವನ್ನು ಬಳಸಲಾಗುತ್ತದೆ. 2021ರಲ್ಲಿ ಪ್ರಕಟವಾದ ಪ್ರಬಂಧವು , ಚುರಾಚಂದ್ಪುರ ಜಿಲ್ಲೆಯಲ್ಲಿ ಹೊಸದಾಗಿ ತೆರವುಗೊಳಿಸಿದ ತೋಟದ ಸ್ಥಳಗಳ ಪಕ್ಕದ ಹಳ್ಳಿಗಳಲ್ಲಿ ತೊರೆಗಳು ಒಣಗಿವೆ ಮತ್ತು ಮಕ್ಕಳಲ್ಲಿ ನೀರಿನಿಂದ ಹರಡುವ ರೋಗಗಳು ಹೆಚ್ಚಾಗಿದೆ ಎಂದು ತಿಳಿಸುತ್ತದೆ. ಆದಾಗ್ಯೂ, ಮಣಿಪುರದಲ್ಲಿ ಗಸಗಸೆ ಕೃಷಿಯ ಪರಿಸರದ ಪರಿಣಾಮದ ಬಗ್ಗೆ ವೈಜ್ಞಾನಿಕ ಸಂಶೋಧನೆಯ ಕೊರತೆಯಿದೆ ಎಂದು ಪ್ರೊಫೆಸರ್ ಕಿಪ್ಗೆನ್ ಹೇಳಿದರು.

Paolal harvesting peas in his field. The 30 farming households in Ngahmun Gunphaijang, like Paolal’s, were forced to give up poppy cultivation and grow vegetables and fruits like peas, cabbage, potatoes and bananas instead, getting a fraction of their earlier earnings
PHOTO • Makepeace Sitlhou

ಪಾವೊಲಾಲ್ ತನ್ನ ಹೊಲದಲ್ಲಿ ಬಟಾಣಿ ಕೊಯ್ಲು ಮಾಡುತ್ತಿದ್ದಾರೆ. ಪಾವೊಲಾಲ್ ಅವರಂತೆ, ನಹ್ಮುನ್ ಗುನ್ಫಿಜಾಂಗ್ ಊರಿನ 30 ಕೃಷಿ ಕುಟುಂಬಗಳು ಗಸಗಸೆ ಕೃಷಿಯನ್ನು ತ್ಯಜಿಸಿ ಬಟಾಣಿ, ಎಲೆಕೋಸು, ಆಲೂಗಡ್ಡೆ ಮತ್ತು ಬಾಳೆಹಣ್ಣುಗಳಂತಹ ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಯಬೇಕಾಯಿತು, ಇದು ಈಗ ಅವರ ಹಿಂದಿನ ಗಳಿಕೆಯ ಒಂದು ಭಾಗವನ್ನು ಗಳಿಸಿಕೊಡುತ್ತದೆ

ನೆರೆಯ ಮಯನ್ಮಾರ್‌ ದೇಶದಲ್ಲಿ ಅಫೀಮು ಗಸಗಸೆ ಕೃಷಿಯ ಬಗ್ಗೆ ವಿಶ್ವಸಂಸ್ಥೆಯ ಮಾದಕವಸ್ತು ಮತ್ತು ಅಪರಾಧ ಕಚೇರಿ (ಯುಎನ್ಒಡಿಸಿ) ನೀಡಿದ ವರದಿಯು ಗಸಗಸೆ ಬೆಳೆಯದ ಹಳ್ಳಿಗಳಿಗಿಂತ ಗಸಗಸೆ ಬೆಳೆಯುವ ಹಳ್ಳಿಗಳಲ್ಲಿ ಅರಣ್ಯ ಗುಣಮಟ್ಟವು ವೇಗವಾಗಿ ಹದಗೆಡುತ್ತದೆ ಎಂದು ಹೇಳಿದೆ. ಆದಾಗ್ಯೂ, ಗಸಗಸೆ ಬೆಳೆದ ಮತ್ತು ಗಸಗಸೆ ಬೆಳೆದಿಲ್ಲದ ಭೂಮಿಯ ಮೇಲೆ ತಾಪಮಾನ ಬದಲಾವಣೆಯ ಪರಿಣಾಮವು 2016ರಿಂದ 2018 ರವರೆಗೆ ಇಳುವರಿ ಕುಸಿತದ ರೂಪದಲ್ಲಿ ಕಂಡುಬಂದಿದೆ. ವಾಸ್ತವವೆಂದರೆ ಗಸಗಸೆ ಕೃಷಿಯ ಪರಿಸರ ಪರಿಣಾಮದ ಬಗ್ಗೆ ಯಾವುದೇ ನಿರ್ಣಾಯಕ ದತ್ತಾಂಶವಿಲ್ಲ.

"ಗಸಗಸೆ ಮಣ್ಣಿನ ಮೇಲೆ ಪರಿಣಾಮ ಬೀರಿದ್ದರೆ, ನಾವು ಇಲ್ಲಿ ತರಕಾರಿಗಳನ್ನು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ" ಎಂದು ನಹ್ಮುನ್ ಎನ್ನುವ ಊರಿನ ರೈತ ಪಾವೋಲಾಲ್ ಹೇಳುತ್ತಾರೆ, ಈ ಹಿಂದೆ ತಮ್ಮ ಭೂಮಿಯಲ್ಲಿ ಗಸಗಸೆ ಬೆಳೆದಿದ್ದರೂ, ಹಣ್ಣುಗಳು ಅಥವಾ ತರಕಾರಿಗಳನ್ನು ಬೆಳೆಯುವಲ್ಲಿ ಅವರು ಯಾವುದೇ ಸಮಸ್ಯೆಯನ್ನು ಎದುರಿಸಲಿಲ್ಲ.

*****

ಗಸಗಸೆಯಂತೆ ಹೆಚ್ಚಿನ ಆದಾಯ ತರಬಲ್ಲ ಆಯ್ಕೆಗಳ ಕೊರತೆಯೇ ನಿಜವಾದ ಸಮಸ್ಯೆ ಎಂದು ರೈತರು ಹೇಳುತ್ತಾರೆ. ಎಲ್ಲಾ ಗ್ರಾಮಸ್ಥರಿಗೆ ಆಲೂಗಡ್ಡೆ ಬೀಜಗಳನ್ನು ವಿತರಿಸುವುದಾಗಿ ಮುಖ್ಯಸ್ಥರು ಹೇಳಿಕೊಂಡರೂ, ಪಾವೊಲಾಲ್ ಅವರಂತಹ ಮಾಜಿ ಗಸಗಸೆ ರೈತರು ಅದರಿಂದ ತಮಗೆ ಪ್ರಯೋಜನವಾಗಿಲ್ಲ ಎಂದು ಹೇಳುತ್ತಾರೆ. "ಮಾರುಕಟ್ಟೆಯಿಂದ 100 ರೂ.ಗೆ ಒಂದು ಪ್ಯಾಕೆಟ್ ಬೀಜಗಳನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ನಾನು ಅನಕಂ [ತರಕಾರಿಗಳನ್ನು] ಬೆಳೆದಿದ್ದೇನೆ."

ನಹ್ಮುನ್ ಸರ್ಕಾರದ ಉಪಕ್ರಮಕ್ಕೆ ಸೇರಿದ ಒಂದು ವರ್ಷದ ನಂತರ, ತಂಗ್ಖುಲ್ ನಾಗಾ ಪ್ರಾಬಲ್ಯದ ಉಖ್ರುಲ್ ಜಿಲ್ಲೆಯ ಪೆಹ್ ಗ್ರಾಮ ಕೌನ್ಸಿಲ್ ಬೆಟ್ಟಗಳಲ್ಲಿನ ಗಸಗಸೆ ತೋಟಗಳನ್ನು ನಾಶಪಡಿಸಿತು. ಮುಖ್ಯಮಂತ್ರಿ ತಕ್ಷಣವೇ 2021ರಲ್ಲಿ ಅವರಿಗೆ 10 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದರು. ರಾಜ್ಯದ ತೋಟಗಾರಿಕೆ ಮತ್ತು ಮಣ್ಣಿನ ಸಂರಕ್ಷಣಾ ಇಲಾಖೆ, ಮಣಿಪುರ ಸಾವಯವ ಮಿಷನ್ ಏಜೆನ್ಸಿಯೊಂದಿಗೆ ಫಲಾನುಭವಿಗಳನ್ನು ಗುರುತಿಸಲು ಮತ್ತು ಕಿವಿ ಮತ್ತು ಸೇಬು ತೋಟಗಳಂತಹ ಪರ್ಯಾಯ ಜೀವನೋಪಾಯವನ್ನು ಒದಗಿಸಲು ಕೌನ್ಸಿಲ್‌ ಜೊತೆ ಕೆಲಸ ಮಾಡುತ್ತಿದೆ.

ಬಹುಮಾನದ ಜೊತೆಗೆ, ಗ್ರಾಮಕ್ಕೆ 20.3 ಲಕ್ಷ ರೂ ನಗದು, 80 ಚೀಲ ರಸಗೊಬ್ಬರ, ಪ್ಲಾಸ್ಟಿಕ್ ಪ್ಯಾಕೇಜಿಂಗ್ ಮತ್ತು ಸೇಬು, ಶುಂಠಿ ಮತ್ತು ಕ್ವಿನೋವಾ ಸಸ್ಯಗಳಿಗೆ ಹೆಚ್ಚುವರಿ ಅನುದಾನ, ಉಳುಮೆಗೆ ಯಂತ್ರೋಪಕರಣಗಳು ಮತ್ತು ಉಪಕರಣಗಳನ್ನು ಸ್ವೀಕರಿಸಲಾಗಿದೆ ಎಂದು ಪೆಹ್ ಗ್ರಾಮದ ಅಧ್ಯಕ್ಷ ಮೂನ್ ಶಿಮ್ರಾ ಹೇಳಿದ್ದಾರೆ. "ವಾಸ್ತವವಾಗಿ, ಗ್ರಾಮ ಕೌನ್ಸಿಲ್ ಮಧ್ಯಪ್ರವೇಶಿ ಸರ್ಕಾರವು ನಮಗೆ ಬಹುಮಾನ ನೀಡುವವರೆಗೂ ಕೇವಲ ಒಂದು ಕುಟುಂಬವು ಗಸಗಸೆ ಬೆಳೆಯಲು ಪ್ರಾರಂಭಿಸಿತ್ತು" ಎಂದು ಶಿಮ್ರಾ ಹೇಳುತ್ತಾರೆ. ಈ ಗ್ರಾಮವು ಜಿಲ್ಲಾ ಕೇಂದ್ರವಾದ ಉಖ್ರುಲ್‌ ನಗರದಿಂದ 34 ಕಿ.ಮೀ ದೂರದಲ್ಲಿದೆ, ಅಲ್ಲಿ ಗೆಣಸು, ನಿಂಬೆ, ಕಿತ್ತಳೆ, ಸೋಯಾಬೀನ್, ಸಜ್ಜೆ, ಮೆಕ್ಕೆಜೋಳ ಮತ್ತು ಭತ್ತವನ್ನು ಬೆಳೆಯಲಾಗುತ್ತದೆ.

"ಆದಾಗ್ಯೂ, ಹೊಸ ಬೆಳೆಗಳನ್ನು ಬೆಳೆಯಲು ನಮಗೆ ಅಗತ್ಯವಾದ ತರಬೇತಿಯನ್ನು ನೀಡುವಂತೆ ಮತ್ತು ಯೋಜನೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವಂತೆ ನಾವು ಸರ್ಕಾರವನ್ನು ವಿನಂತಿಸುತ್ತೇವೆ. ಬೆಳೆಗಳ ಸುತ್ತಲೂ ಮುಳ್ಳು ತಂತಿ ಬೇಲಿಗಳು ಸಹ ನಮಗೆ ಬೇಕಾಗುತ್ತವೆ, ಏಕೆಂದರೆ ನಮ್ಮ ಜಾನುವಾರುಗಳು ಬೆಳೆಯನ್ನು ಹಾಳುಮಾಡಬಹುದು."

ಸಂಶೋಧನಾ ಉದ್ದೇಶಗಳಿಗಾಗಿ ಕೋಳಿ ಮತ್ತು ತರಕಾರಿ ಬೀಜಗಳಂತಹ ಜೀವನೋಪಾಯದ ಆಯ್ಕೆಗಳಿಗಾಗಿ ತಮ್ಮ ಗ್ರಾಮವು ಒಮ್ಮೆ ರಾಜ್ಯ ವಿಶ್ವವಿದ್ಯಾಲಯ ಮತ್ತು ಶಾಸಕರಿಂದ ಸಹಾಯವನ್ನು ಪಡೆಯಿತು, ಆದರೆ ಸರ್ಕಾರದ ಬೆಂಬಲದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ ಎಂದು ನಹ್ಮುನ್ ಗ್ರಾಮದ ಹಂಗಾಮಿ ಮುಖ್ಯಸ್ಥ ಕಿಪ್ಗೆನ್ ಪರಿಗೆ ತಿಳಿಸಿದರು. "ಮಾದಕವಸ್ತುಗಳ ವಿರುದ್ಧದ ಯುದ್ಧಕ್ಕೆ ಸೇರಿದ ಪರ್ವತಗಳ ಮೊದಲ ಬುಡಕಟ್ಟು ಗ್ರಾಮಗಳು ನಮ್ಮವು. ಆದರೂ ಸರ್ಕಾರವು ಕೆಲವು ಬುಡಕಟ್ಟು ಸಮುದಾಯಗಳಿಗೆ ಮಾತ್ರ ಬಹುಮಾನ ನೀಡುತ್ತಿದೆ ಮತ್ತು ಇತರರನ್ನು ನಿರ್ಲಕ್ಷಿಸುತ್ತಿದೆ" ಎಂದು ಅವರು ಹೇಳಿದರು.

Left: Samson Kipgen, the acting village chief,  says that switching from poppy cultivation has 'strangled' the farmers.
PHOTO • Makepeace Sitlhou
Right: Samson walks through a patch of the hill where vegetables like bananas, peas, potatoes and cabbages are grown
PHOTO • Makepeace Sitlhou

ಎಡ: ಗಸಗಸೆ ಕೃಷಿಯನ್ನು ಬಿಡಿಸುವ ಮೂಲಕ ರೈತರ ಪರಿಸ್ಥಿಯನ್ನು ಇನ್ನಷ್ಟು ಹದಗೆಡಿಸಲಾಗಿದೆ ಎಂದು ಗ್ರಾಮದ ಉಸ್ತುವಾರಿ ಮುಖ್ಯಸ್ಥ ಸ್ಯಾಮ್ಸನ್ ಕಿಪ್ಗೆನ್ ಹೇಳುತ್ತಾರೆ. ಬಲ: ಬಾಳೆ, ಬಟಾಣಿ, ಆಲೂಗಡ್ಡೆ ಮತ್ತು ಎಲೆಕೋಸಿನಂತಹ ತರಕಾರಿಗಳನ್ನು ಬೆಳೆಯುವ ಬೆಟ್ಟದ ದಾರಿಯಲ್ಲಿ ಸ್ಯಾಮ್ಸನ್ ನಡೆಯುತ್ತಿರುವುದು

ಆದಾಗ್ಯೂ, ರಾಜ್ಯ ಸರ್ಕಾರದ ಮೂಲಗಳು ಇದಕ್ಕೆ ಅಪೂರ್ಣ ಜೀವನೋಪಾಯದ ಆಯ್ಕೆಗಳು ಕಾರಣ ಎನ್ನುವುದಿಲ್ಲ, ವು ಕೃಷಿಯ ಮಾದರಿಯನ್ನು ದೂಷಿಸುತ್ತವೆ. "ಪಹಾರಿ ಬುಡಕಟ್ಟು ರೈತರು ಬೀಜಗಳು ಮತ್ತು ಕೋಳಿಗಳನ್ನು ಪಡೆದಿದ್ದಾರೆ, ಆದರೆ ಅವುಗಳಲ್ಲಿ ಹೆಚ್ಚಿನವು ಉಪ ಕಸುಬುಗಳಾಗಿವೆ" ಎಂದು ನಾಗಾ ಪ್ರಾಬಲ್ಯದ ಗುಡ್ಡಗಾಡು ಜಿಲ್ಲೆಗಳಲ್ಲಿ ಗಸಗಸೆ ರೈತರ ಜೀವನೋಪಾಯ ಉಪಕ್ರಮಗಳ ಮೇಲ್ವಿಚಾರಣೆ ನಡೆಸುತ್ತಿರುವ ಮಣಿಪುರ ಸರ್ಕಾರದ ಮೂಲಗಳು ತಿಳಿಸಿವೆ.

ತರಕಾರಿಗಳು ಅಥವಾ ಕೋಳಿಗಳನ್ನು ಬೆಳೆಯುವುದರಿಂದ ಬರುವ ಆದಾಯವು ಗಸಗಸೆಯಿಂದ ರೈತರ ಆದಾಯಕ್ಕೆ ಎಂದಿಗೂ ಸಮನಾಗಿರುವುದಿಲ್ಲ, ಇದು ತರಕಾರಿಗಳು ಮತ್ತು ಹಣ್ಣುಗಳಿಂದ ಅಂದಾಜು ವಾರ್ಷಿಕ ಆದಾಯ 15 ಲಕ್ಷ ರೂ.ಗೆ ಹೋಲಿಸಿದರೆ ಕೇವಲ 1 ಲಕ್ಷ ರೂ. ಕಡಿಮೆ ಗಳಿಕೆಯೊಂದಿಗೆ ಪರ್ಯಾಯ ಜೀವನೋಪಾಯವನ್ನು ನೀಡುವುದರಿಂದ ಗಸಗಸೆ ಕೃಷಿ ಕೊನೆಗೊಳ್ಳುವುದಿಲ್ಲ. ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಉದ್ಯೋಗಿಯೊಬ್ಬರು, 'ಡ್ರಗ್ಸ್ ವಿರುದ್ಧದ ಯುದ್ಧ' ಅಭಿಯಾನವು ಪರ್ವತಗಳಲ್ಲಿ ಯಶಸ್ವಿಯಾಗಿಲ್ಲ. ಇದು ಕೇವಲ ನಾಟಕ" ಎಂದು ಹೇಳುತ್ತಾರೆ.

ಗಸಗಸೆ ಕೃಷಿಯನ್ನು ಸುಸ್ಥಿರ ಪರ್ಯಾಯ ಜೀವನೋಪಾಯ ಮತ್ತು ಮನರೇಗಾದಂತಹ ಸಮಗ್ರ ಅಭಿವೃದ್ಧಿ ಆಧಾರಿತ ಉಪಕ್ರಮಗಳಿಂದ ಬದಲಾಯಿಸದ ಹೊರತು ಅದರ ಬಲವಂತದ ನಿರ್ಮೂಲನೆ ಅರ್ಥಹೀನವಾಗಿದೆ. ಹಾಗೆ ಮಾಡಲು ವಿಫಲವಾದರೆ "ಸಾಮಾಜಿಕ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ ಮತ್ತು ಸ್ಥಳೀಯ ಸರ್ಕಾರ ಮತ್ತು ಕೃಷಿ ಸಮುದಾಯಗಳ ನಡುವೆ ದ್ವೇಷವನ್ನು ಸೃಷ್ಟಿಸುತ್ತದೆ" ಎಂದು ಪ್ರೊಫೆಸರ್ ಕಿಪ್ಜೆನ್ ಹೇಳುತ್ತಾರೆ.

ಯುಎನ್ಒಡಿಸಿ ವರದಿಯು ಸಹ "ಅಫೀಮು ನಿರ್ಮೂಲನೆ ಪ್ರಯತ್ನವನ್ನು ಉಳಿಸಿಕೊಳ್ಳಲು ಗಸಗಸೆ ಕೃಷಿ ನಿಂತ ನಂತರವೂ ರೈತರ ಆದಾಯದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಅವಕಾಶಗಳು ಬೇಕಾಗುತ್ತವೆ" ಎನ್ನುವ ಅಂತಿಮ ನಿರ್ಧಾರಕ್ಕೆ ಬಂದಿದೆ.

ಜನಾಂಗೀಯ ಸಂಘರ್ಷವು ಗುಡ್ಡಗಾಡು ಬುಡಕಟ್ಟು ರೈತರ ಸಂಕಟಗಳನ್ನು ಇನ್ನಷ್ಟು ಹೆಚ್ಚಿಸಿದೆ, ಅವರು ಮುಂದಿನ ದಿನಗಳಲ್ಲಿ ಕಣಿವೆಯಲ್ಲಿ ವ್ಯಾಪಾರ ಮಾಡಲು ಅಥವಾ ವ್ಯವಹರಿಸಲು ಸಾಧ್ಯವಿಲ್ಲ.

"[ವಾರ್ಷಿಕ] ಅಫೀಮು ಕೃಷಿ ಮುಗಿದ ನಂತರ, ಗಣಿಯಿಂದ ಮರಳು ತೆಗೆದು ಅದನ್ನು ಮೈತೇಯಿಗಳಿಗೆ ಮಾರಾಟ ಮಾಡುವ ಮೂಲಕ ನಾವು ಹೆಚ್ಚುವರಿ ಆದಾಯವನ್ನು ಗಳಿಸುತ್ತಿದ್ದೆವು" ಎಂದು ಡೆಮ್ಜಾ ಹೇಳುತ್ತಾರೆ. ಆ ಕೆಲಸವೂ ಈಗ ಇಲ್ಲವಾಗಿದೆ. ಈ [ಹೋರಾಟ] ಮುಂದುವರಿದರೆ, ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಅಥವಾ ಜೀವನ ಸಾಗಿಸಲು ಸಾಧ್ಯವಾಗದ ಸಮಯ ಬರುತ್ತದೆ."

ಅನುವಾದ: ಶಂಕರ. ಎನ್. ಕೆಂಚನೂರು

Makepeace Sitlhou

Makepeace Sitlhou is an independent journalist reporting on human rights, social issues, governance and politics.

Other stories by Makepeace Sitlhou
Editor : PARI Desk

PARI Desk is the nerve centre of our editorial work. The team works with reporters, researchers, photographers, filmmakers and translators located across the country. The Desk supports and manages the production and publication of text, video, audio and research reports published by PARI.

Other stories by PARI Desk
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru