"ಮಳೆ ಮತ್ತೆ ನಿಂತುಹೋಗಿದೆ" ಎನ್ನುತ್ತಾ ಧರ್ಮ ಗರೇಲ್ ಬಿದಿರಿನ ಕೋಲಿನ ಸಹಾಯದಿಂದ ಹೊಲದ ಕಡೆ ನಡೆಯುತ್ತಾ ಹೇಳುತ್ತಾರೆ. “ಜೂನ್ ಒಂದು ವಿಲಕ್ಷಣ ತಿಂಗಳು. 2-3 ಗಂಟೆಗಳ ಕಾಲ ಮಳೆಯಾಗುತ್ತದೆ. ಕೆಲವೊಮ್ಮೆ ಸಣ್ಣಗೆ, ಕೆಲವೊಮ್ಮೆ ಜೋರಾಗಿ. ಆದಾಗ್ಯೂ, ಮುಂದಿನ ಕೆಲವು ಗಂಟೆಗಳವರೆಗೆ ಅಸಹನೀಯ ಬಿಸಿಲು ಮೇಲುಗೈ ಸಾಧಿಸುತ್ತದೆ. ಈ ಬಿಸಿಲು ಮಣ್ಣಿನ ಅಷ್ಟೂ ತೇವಾಂಶವನ್ನು ಹೀರಿಕೊಳ್ಳುತ್ತದೆ. ಮಣ್ಣು ಮತ್ತೆ ಒಣಗುತ್ತದೆ. ಬೆಳೆಗಳು ಹೇಗೆ ಬೆಳೆಯಲು ಸಾಧ್ಯ?”

ಥಾಣೆ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿರುವ 15 ವಾರ್ಲಿ ಕುಟುಂಬಗಳ ಆದಿವಾಸಿ ಗ್ರಾಮವಾದ ಗರೇಲ್‌ಪಾದದಲ್ಲಿನ ಎಂಭತ್ತು ವರ್ಷದ ಗರೇಲ್ ಮತ್ತು ಅವರ ಕುಟುಂಬವು ತಮ್ಮ ಒಂದು ಎಕರೆ ಪ್ರದೇಶದಲ್ಲಿ ಭತ್ತವನ್ನು ಬೆಳೆಯುತ್ತಾರೆ. ಜೂನ್ 2019ರಲ್ಲಿ ಅವರು ಬಿತ್ತನೆ ಮಾಡಿದ ಭತ್ತದ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿದೆ. ಆ ತಿಂಗಳು, 11 ದಿನಗಳವರೆಗೆ ಕೇವಲ 393 ಮಿ.ಮೀ ಮಳೆಯಾಯಿತು (ಸರಾಸರಿ 421.9 ಮಿ.ಮೀಗಿಂತಲೂ ಕಡಿಮೆ).

ಅವರು ನೆಟ್ಟ ಭತ್ತದ ಬೀಜಗಳು ಮೊಳಕೆ ಕೂಡ ಬರಲಿಲ್ಲ - ಅಲ್ಲದೆ ಅವರು ಬೀಜಗಳು, ರಸಗೊಬ್ಬರ,  ಒಂದು ಟ್ರಾಕ್ಟರ್ ಬಾಡಿಗೆಗೆ ಕೊಂಡಿದ್ದು ಮತ್ತು ಇತರ ಕೃಷಿ ವೆಚ್ಚಗಳಾಗಿ ಸುಮಾರು ರೂ. 10,000 ಖರ್ಚು ಮಾಡಿದ್ದಾರೆ.

"ಆಗಸ್ಟ್‌ ತಿಂಗಳಿನಲ್ಲಿ ಮಾತ್ರ ನಿಯಮಿತ ಮಳೆಯಿಂದಾಗಿ ಭೂಮಿ ತಣ್ಣಗಾಯಿತು. ಎರಡನೆಯ ಬಿತ್ತನೆಯ ಮೂಲಕ ಮಾತ್ರ ನಮಗೆ ಒಂದಿಷ್ಟು ಇಳುವರಿ ಮತ್ತು ಸ್ವಲ್ಪ ಲಾಭ ದೊರಕಿತು”ಎಂದು ಧರ್ಮ ಅವರ 38 ವರ್ಷದ ಮಗ ರಾಜು ಹೇಳಿದರು.

ತಾಲ್ಲೂಕಿನಲ್ಲಿ ಜೂನ್‌ನಲ್ಲಿ ಮಳೆ ಕೊರತೆಯಾಗಿದ್ದರೆ, ಜುಲೈ ತಿಂಗಳಿನಲ್ಲಿ 947.3 ಮಿ.ಮೀಯಷ್ಟು ಸಾಮಾನ್ಯ ಮಳೆಯಾಗುವಲ್ಲಿ 1586.8 ಮಿ.ಮೀ ಮಳೆಯಾಗಿದೆ. ಆದ್ದರಿಂದ ಗರೇಲ್ ಕುಟುಂಬವು ಎರಡನೇ ಬಿತ್ತನೆಗೆ ಸಿದ್ಧವಾಯಿತು. ಆದರೆ, ಆಗಸ್ಟ್‌ನಲ್ಲಿ ಮಳೆ ತೀವ್ರಗೊಂಡು ಅಕ್ಟೋಬರ್ ತನಕ ಮುಂದುವರೆಯಿತು. ಥಾಣೆ ಜಿಲ್ಲೆಯ ಎಲ್ಲಾ ಏಳು ತಾಲ್ಲೂಕುಗಳಿಗೆ 116 ದಿನಗಳಲ್ಲಿ ಹೆಚ್ಚುವರಿಯಾಗಿ 1,200 ಮಿ.ಮೀ ಮಳೆಯಾಗಿದೆ.

“ಸಸ್ಯಗಳ ಬೆಳವಣಿಗೆಗೆ ಸಾಕಾಗುವಷ್ಟು ಮಳೆ ಸೆಪ್ಟೆಂಬರ್ ತನಕ ಆಗಿತ್ತು. ಹೊಟ್ಟೆ ಸಿಡಿಯುವವರೆಗೂ ನಾವು ಮನುಷ್ಯರೇ ತಿನ್ನುವುದಿಲ್ಲ, ಸಣ್ಣ ಸಸ್ಯ ತಿನ್ನಲು ಸಾಧ್ಯವೇ?” ರಾಜು ಕೇಳುತ್ತಾರೆ. ಅಕ್ಟೋಬರ್ ಮಳೆಯು ಗರೇಲ್ ಕುಟುಂಬದ ಜಮೀನಿನಲ್ಲಿ ಪ್ರವಾಹಕ್ಕೆ ಕಾರಣವಾಯಿತು. "ನಾವು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಭತ್ತವನ್ನು ಕತ್ತರಿಸಿ ಕಟ್ಟುಗಳಾಗಿ ಜೋಡಿಸಲು ಪ್ರಾರಂಭಿಸಿದ್ದೆವು" ಎಂದು ರೈತ ಮಹಿಳೆ ಮತ್ತು ರಾಜು ಅವರ ಪತ್ನಿ 35 ವರ್ಷದ ಸವಿತಾ ನೆನಪಿಸಿಕೊಳ್ಳುತ್ತಾರೆ. “ನಾವು ಇನ್ನೂ ಉಳಿದ ಬೆಳೆ ಕೊಯ್ಲು ಮಾಡುವುದಿತ್ತು. ಅಕ್ಟೋಬರ್ 5ರ ನಂತರ ಇದ್ದಕ್ಕಿದ್ದಂತೆ ಭಾರಿ ಮಳೆಯಾಗಲು ಪ್ರಾರಂಭಿಸಿತು. ನಾವು ಕಟಾವು ಮಾಡಿದ ಭತ್ತದ ಕಟ್ಟುಗಳನ್ನು  ಸಾಧ್ಯವಾದಷ್ಟು ಮನೆಯೊಳಗೆ ಕೊಂಡೊಯ್ಯಲು ಪ್ರಯತ್ನಿಸಿದೆವು ಆದರೆ ಕೆಲವೇ ನಿಮಿಷಗಳಲ್ಲಿ, ನಮ್ಮ ಜಮೀನಿನಲ್ಲಿ ಪ್ರವಾಹ ಉಂಟಾಯಿತು…”

ಆಗಸ್ಟ್‌ನಲ್ಲಿ ಎರಡನೇ ಬಿತ್ತನೆ ಮಾಡಿದ ನಂತರ, ಗರೇಲ್‌ ಕುಟುಂಬಕ್ಕೆ 3 ಕ್ವಿಂಟಾಲ್ ಅಕ್ಕಿ ಸಿಕ್ಕಿತು. ಹಿಂದೆ ಅವರು ಮೊದಲ ಬಿತ್ತನೆಯಿಂದಲೇ ಸುಮಾರು 8-9 ಕ್ವಿಂಟಾಲ್ ಅಕ್ಕಿ ಪಡೆಯುತ್ತಿದ್ದರು.

Paddy farmers Dharma Garel (left) and his son Raju: 'The rain has not increased or decreased, it is more uneven – and the heat has increased a lot'
PHOTO • Jyoti Shinoli
Paddy farmers Dharma Garel (left) and his son Raju: 'The rain has not increased or decreased, it is more uneven – and the heat has increased a lot'
PHOTO • Jyoti Shinoli

ಭತ್ತದ ಕೃಷಿಕರಾದ ಧರ್ಮ ಗರೇಲ್ (ಎಡ) ಮತ್ತು ಅವರ ಮಗ ರಾಜು: 'ಮಳೆ ಹೆಚ್ಚಾಗಿಲ್ಲ ಅಥವಾ ಕಡಿಮೆಯಾಗಿಲ್ಲ, ಹೆಚ್ಚು ಅನಿಯಮಿತವಾಗಿದೆ - ಮತ್ತು ಬಿಸಿಲು ಹೆಚ್ಚಾಗಿದೆ'

"ಇದು ಒಂದು ದಶಕದಿಂದ ಹೀಗಿದೆ" ಎಂದು ಧರ್ಮ ಹೇಳುತ್ತಾರೆ. "ಮಳೆ ಹೆಚ್ಚಾಗಿಲ್ಲ ಅಥವಾ ಕಡಿಮೆಯಾಗಿಲ್ಲ, ಅದು ಹೆಚ್ಚು ಅನಿಯಮಿತವಾಗಿದೆ - ಮತ್ತು ಬಿಸಿಲು ಬಹಳಷ್ಟು ಹೆಚ್ಚಾಗಿದೆ." 2018ರಲ್ಲಿಯೂ, ಈ ಕುಟುಂಬವು ಸರಾಸರಿಗಿಂತ ಕಡಿಮೆ ಮಳೆಯಿಂದಾಗಿ ಕೇವಲ ನಾಲ್ಕು ಕ್ವಿಂಟಾಲ್ ಕೊಯ್ಲು ಮಾಡಿದೆ. 2017ರ ಅಕ್ಟೋಬರ್‌ನಲ್ಲಿ ಮತ್ತೊಂದು ಸುತ್ತಿನ ಮಳೆಯು ಅವರ ಭತ್ತದ ಬೆಳೆಯ ಮೇಲೆ ಕೆಟ್ಟ ಪರಿಣಾಮವನ್ನುಂಟುಮಾಡಿತು.

ಬದಲಿಗೆ, ಧರ್ಮ ಅವರು ಗಮನಿಸಿರುವಂತೆ, ಉಷ್ಣತೆ ಸ್ಥಿರವಾಗಿ ತೀವ್ರಗೊಳ್ಳುತ್ತಿದೆ ಜೊತೆಗೆ ಅಸಹನೀಯವೂ ಆಗುತ್ತಿದೆ. ನ್ಯೂಯಾರ್ಕ್ ಟೈಮ್ಸ್‌ನ  ಹವಾಮಾನ ಮತ್ತು ಜಾಗತಿಕ ತಾಪಮಾನ ಏರಿಕೆಯ ಕುರಿತ ಇಂಟರ್ಯಾಕ್ಟಿವ್ ಪೋರ್ಟಲ್‌ನ ದತ್ತಾಂಶವು ತೋರಿಸುವಂತೆ 1960ರಲ್ಲಿ, ಎಂದರೆ ಧರ್ಮ ಅವರು 20 ವರ್ಷ ವಯಸ್ಸಿನವರಾಗಿದ್ದಾಗ, ಥಾಣೆ ತಾಪಮಾನವು 32 ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದಾದ 175 ದಿನಗಳನ್ನು ಕಂಡಿತು, ಇಂದು, ಆ ಸಂಖ್ಯೆ 237 ದಿನಗಳಿಗೆ ಏರಿದೆ.

ಶಹಾಪುರ ತಾಲ್ಲೂಕಾ ಸುತ್ತಲಿನ ಹಲವು ಆದಿವಾಸಿ ಕುಟುಂಬಗಳು ಭತ್ತದ ಇಳುವರಿ ಕುಸಿಯುತ್ತಿರುವ ಬಗ್ಗೆ ಮಾತನಾಡುತ್ತವೆ. ಈ ಜಿಲ್ಲೆಯು ಕಟ್ಕರಿ, ಮಲ್ಹಾರ್ ಕೋಲಿ, ಮಾ ಠಾಕೂರ್, ವಾರ್ಲಿ ಮತ್ತು ಇತರ ಆದಿವಾಸಿ ಸಮುದಾಯಗಳಿಗೆ ನೆಲೆಯಾಗಿದೆ - ಥಾಣೆಯಲ್ಲಿನ ಪರಿಶಿಷ್ಟ ಪಂಗಡದ ಜನಸಂಖ್ಯೆಯು ಸರಿಸುಮಾರು 1.15 ಮಿಲಿಯನ್ (ಜನಗಣತಿ 2011), ಎಂದರೆ ಇಲ್ಲಿನ ಒಟ್ಟು ಜನಸಂಖ್ಯೆಯ ಶೇಕಡಾ 14ರಷ್ಟು.

“ಮಳೆಯಾಶ್ರಿತ ಭತ್ತದ ಕೃಷಿಗೆ ನಿಯಮಿತ ಮತ್ತು ಮಧ್ಯಂತರ ಮಳೆಯ ಅಗತ್ಯವಿರುತ್ತದೆ. ಋತುವಿನ ಯಾವುದೇ ಹಂತದಲ್ಲಿ ಅತಿಯಾದ ಮಳೆಯಾದಲ್ಲಿ ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ” ಎಂದು ಪುಣೆ ಮೂಲದ ಇನ್‌ಸ್ಟಿಟ್ಯೂಟ್ ಫಾರ್ ಸಸ್ಟೈನಬಲ್ ಲೈವ್ಲಿಹುಡ್ಸ್ ಅಂಡ್ ಡೆವಲಪ್‌ಮೆಂಟ್‌ನ (BAIF) ಕಾರ್ಯಕ್ರಮ ವ್ಯವಸ್ಥಾಪಕ ಯೋಜನಾ ವ್ಯವಸ್ಥಾಪಕ ಸೋಮನಾಥ್ ಚೌಧರಿ ಹೇಳುತ್ತಾರೆ.

ಅನೇಕ ಬುಡಕಟ್ಟು ಕುಟುಂಬಗಳು ಖಾರಿಫ್‌ನಲ್ಲಿ ಒಂದು ಸಣ್ಣ ತುಂಡು ಭೂಮಿಯಲ್ಲಿ ಭತ್ತವನ್ನು ಬೆಳೆಸುತ್ತಾರೆ ಮತ್ತು ನಂತರ ಆರು ತಿಂಗಳು ಇಟ್ಟಿಗೆ ಗೂಡುಗಳು, ಕಬ್ಬಿನ ಹೊಲಗಳಲ್ಲಿ ಮತ್ತು ಇತರೆಡೆಗಳಲ್ಲಿ ದುಡಿದು ಜೀವನ ಸಾಗಿಸುತ್ತಾರೆ. ಆದರೆ, ಅನಿಯಮಿತ ಮಳೆಯಿಂದಾಗಿ ಭತ್ತದ ಇಳುವರಿ ಕ್ಷೀಣಿಸುತ್ತಿದೆ ಮತ್ತು ಈಗ ಅವರಿಗೆ ಪ್ರತಿವರ್ಷ ಈ ರೀತಿ ಎಲ್ಲವನ್ನೂ ಸಮತೋಲನಗೊಳಿಸಿಕೊಂಡು ರೂಢಿಯಂತೆ ಕೆಲಸ ಮಾಡುವುದು ಕಷ್ಟಕರವಾಗುತ್ತಿದೆ.‌

ಜಿಲ್ಲೆಯ 136,000 ಹೆಕ್ಟೇರ್ ಪ್ರದೇಶದಲ್ಲಿ ಖಾರಿಫ್ ಋತುವಿನಲ್ಲಿ ಮತ್ತು ರಬಿ ಋತುವಿನಲ್ಲಿ 3,000 ಹೆಕ್ಟೇರ್ ನೀರಾವರಿ ಭೂಮಿಯಲ್ಲಿ (ಮುಖ್ಯವಾಗಿ ತೆರೆದ ಬಾವಿಗಳು ಮತ್ತು ಬೋರ್ವೆಲ್‌ಗಳು) ಭತ್ತವನ್ನು ಬೆಳೆಯಲಾಗುತ್ತದೆ (ಸೆಂಟ್ರಲ್‌ ರೀಸರ್ಚ್‌ ಇನ್ಸ್ಟಿಟ್ಯೂಟ್‌ ಫಾರ್‌ ಡ್ರೈ ಲ್ಯಾಮಡ್ 2009-10ರ ಡೇಟಾ ಹೇಳುವಂತೆ). ಸಿರಿಧಾನ್ಯಗಳು, ಬೇಳೆಕಾಳುಗಳು ಮತ್ತು ನೆಲಗಡಲೆ ಇಲ್ಲಿ ಬೆಳೆಯುವ ಕೆಲವು ಪ್ರಮುಖ ಬೆಳೆಗಳಾಗಿವೆ.

Savita Garel and Raju migrate every year to work in sufarcane fields: We don’t get water even to drink, how are we going to give life to our crops?'
PHOTO • Jyoti Shinoli

ಸವಿತಾ ಗರೀಲ್ ಮತ್ತು ರಾಜು ಪ್ರತಿ ವರ್ಷ ಕಬ್ಬಿನ ಹೊಲಗಳಲ್ಲಿ ಕೆಲಸ ಮಾಡಲು ವಲಸೆ ಹೋಗುತ್ತಾರೆ: 'ನಮಗೆ ಕುಡಿಯಲು ಸಹ ನೀರು ಸಿಗುವುದಿಲ್ಲ, ಇನ್ನು ನಮ್ಮ ಬೆಳೆಗಳಿಗೆ ನಾವು ಹೇಗೆ ಜೀವ ನೀಡುವುದು?'

ವಾಸ್ತವವಾಗಿ, ಥಾಣೆ ಜಿಲ್ಲೆಯಲ್ಲಿ ಎರಡು ಪ್ರಮುಖ ನದಿಗಳಿವೆ, ಉಲ್ಹಾಸ್ ಮತ್ತು ವೈತಾರ್ಣಾ, ಪ್ರತಿಯೊಂದೂ ಹಲವಾರು ಉಪನದಿಗಳನ್ನು ಹೊಂದಿವೆ, ಮತ್ತು ಶಹಾಪುರ ತಾಲ್ಲೂಕಿನಲ್ಲಿ ನಾಲ್ಕು ದೊಡ್ಡ ಅಣೆಕಟ್ಟುಗಳಿವೆ - ಭಟ್ಸಾ, ಮೋದಕ್ ಸಾಗರ್, ತನ್ಸಾ ಮತ್ತು ಅಪ್ಪರ್ ವೈತಾರ್ಣ - ಆದರೂ ಇಲ್ಲಿನ ಬುಡಕಟ್ಟು ಪ್ರದೇಶಗಳಲ್ಲಿನ ಕೃಷಿ ಇನ್ನೂ ಮಳೆಯ ಮೇಲೆ ಅವಲಂಬಿತವಾಗಿದೆ.

“ಈ ನಾಲ್ಕು ಅಣೆಕಟ್ಟುಗಳಿಂದ ನೀರು ಮುಂಬೈಗೆ ಹೋಗುತ್ತದೆ. ಹೀಗಾಗಿ, ಇಲ್ಲಿನ ಜನರು ಡಿಸೆಂಬರ್‌ನಿಂದ ಮೇ ತನಕ ನೀರಿನ ಕೊರತೆಯನ್ನು ಎದುರಿಸುತ್ತಾರೆ. ಇದರಿಂದಾಗಿ, ಇಲ್ಲಿ ಬೇಸಿಗೆಯಲ್ಲಿ ನೀರಿನ ಟ್ಯಾಂಕರ್‌ಗಳು ನೀರಿನ ಮುಖ್ಯ ಮೂಲವಾಗಿ ಮಾರ್ಪಟ್ಟಿವೆ” ಎಂದು ಬಾಬನ್ ಹಾರ್ನೆ ಹೇಳುತ್ತಾರೆ. ಅವರು ಶಹಾಪುರ ಮೂಲದ ಸಮಾಜ ಸೇವಕರಾಗಿದ್ದು, ಭಟ್ಸಾ ನೀರಾವರಿ ಯೋಜನೆ ಪುನರ್ವಸತಿ ಸಮಿತಿಯ ಸಂಯೋಜಕರಾಗಿದ್ದಾರೆ.

"ಶಹಾಪುರದಲ್ಲಿ ಬೋರ್‌ವೆಲ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ" ಎಂದು ಅವರು ಹೇಳುತ್ತಾರೆ. "ನೀರಿನ ಇಲಾಖೆ ಅಗೆಯುವುದರ ಹೊರತಾಗಿ, ಖಾಸಗಿ ಗುತ್ತಿಗೆದಾರರು ಅಕ್ರಮವಾಗಿ 700 ಮೀಟರ್‌ಗಿಂತ ಹೆಚ್ಚು ಅಗೆಯುತ್ತಾರೆ." ಶಹಾಪುರ ಸೇರಿದಂತೆ ಥಾಣೆಯ ಮೂರು ತಾಲೂಕುಗಳ 41 ಹಳ್ಳಿಗಳಲ್ಲಿ ಅಂತರ್ಜಲ ಕಡಿಮೆಯಾಗಿದೆ ಎಂದು ಅಂತರ್ಜಲ ಸಮೀಕ್ಷೆ ಮತ್ತು ಅಭಿವೃದ್ಧಿ ಏಜೆನ್ಸಿಯ ಸಂಭವನೀಯ ನೀರಿನ ಕೊರತೆ ವರದಿ, 2018 ತೋರಿಸುತ್ತದೆ.

“ನಾವು ಕುಡಿಯಲು ಸಹ ನೀರು ಸಿಗುವುದಿಲ್ಲ, ಇನ್ನು ನಮ್ಮ ಬೆಳೆಗಳಿಗೆ ನಾವು ಹೇಗೆ ಜೀವ ನೀಡಲು ಸಾಧ್ಯ? ದೊಡ್ಡ ರೈತರು ಹಣ ಪಾವತಿಸಿ ಅಣೆಕಟ್ಟಿನಿಂದ ನೀರು ಪಡೆಯಬಹುದು, ಅಥವಾ ಅವರಲ್ಲಿ ಬಾವಿಗಳು ಮತ್ತು ಪಂಪ್‌ಗಳಿವೆ” ಎಂದು ರಾಜು ಹೇಳುತ್ತಾರೆ.

ಶಹಾಪುರದ ಆದಿವಾಸಿ ಗ್ರಾಮಗಳಿಂದ ಹೆಚ್ಚಿನವರು ಪ್ರತಿವರ್ಷ ನವೆಂಬರ್‌ನಿಂದ ಮೇವರೆಗೆ ಕೆಲಸಕ್ಕೆ ವಲಸೆ ಹೋಗಲು ನೀರಿನ ಕೊರತೆ ಒಂದು ಮುಖ್ಯ ಕಾರಣವಾಗಿದೆ. ಅಕ್ಟೋಬರ್‌ನಲ್ಲಿ ಖಾರಿಫ್ ಕೊಯ್ಲಿನ ನಂತರ, ಅವರು ಮಹಾರಾಷ್ಟ್ರ ಮತ್ತು ಗುಜರಾತ್‌ನ ಇಟ್ಟಿಗೆ ಗೂಡುಗಳಲ್ಲಿ ಅಥವಾ ರಾಜ್ಯದೊಳಗಿನ ಕಬ್ಬಿನ ಹೊಲಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಅವರು ಖಾರಿಫ್ ಬೆಳೆ ಬಿತ್ತನೆ ಸಮಯಕ್ಕೆ, ಕೆಲವು ತಿಂಗಳುಗಳವರೆಗೆ ಕೆಲವು ಖರ್ಚುಗಳನ್ನು ಪೂರೈಸಲು ಬೇಕಾಗುವ ಒಂದಿಷ್ಟು ಹಣದೊಂದಿಗೆ ಮರಳುತ್ತಾರೆ.

ರಾಜು ಮತ್ತು ಸವಿತಾ ಗರೇಲ್ ಕೂಡ ಕಬ್ಬಿನ ಹೊಲದಲ್ಲಿ ಕೆಲಸ ಮಾಡಲು ಸುಮಾರು 500 ಕಿಲೋಮೀಟರ್ ದೂರದಲ್ಲಿರುವ ನಂದೂರ್‌ಬಾರ್ ಜಿಲ್ಲೆಯ ಶಹಡೆ ತಾಲ್ಲೂಕಿನ ಪ್ರಕಾಶ ಗ್ರಾಮಕ್ಕೆ ವಲಸೆ ಹೋಗುತ್ತಾರೆ.ಅವರು ತಮ್ಮ 12 ವರ್ಷದ ಮಗ ಅಜಯ್ ಮತ್ತು ಧರ್ಮ ಅವರನ್ನು ಗರೇಲ್‌ ಪಾದದಲ್ಲಿ ಬಿಟ್ಟು 2019ರಲ್ಲಿ ಡಿಸೆಂಬರ್‌ನಲ್ಲಿ ಸ್ವಲ್ಪ ತಡವಾಗಿ ಹೊರಟರು. ನಾಲ್ವರ ಕುಟುಂಬಕ್ಕೆ ಜೂನ್ ತನಕ ಬದುಕಲು ಮೂರು ಕ್ವಿಂಟಾಲ್ ಅಕ್ಕಿಯಿತ್ತು. "ನಾವು ಹತ್ತಿರದ ಅಘೈ ಗ್ರಾಮದಲ್ಲಿ ತೊಗರಿ ಬೆಳೆ ಬೆಳೆಯುವ ರೈತರೊಂದಿಗೆ ಸ್ವಲ್ಪ ಅಕ್ಕಿಯನ್ನು ಬೇಳೆಯ ಬದಲಿಗೆ ವಿನಿಮಯ ಮಾಡುತ್ತಿದ್ದೆವು. ಆದರೆ ಈ ಬಾರಿ ಅದು ಸಾಧ್ಯವಿಲ್ಲ..." ಕಳಪೆ ಇಳುವರಿಯ ಕುರಿತು ಹೇಳುತ್ತಾ ರಾಜು ನನ್ನೊಡನೆ ಈ ವಿಷಯ ಹಂಚಿಕೊಂಡರು.

Many in Shahapur speak of falling paddy yields. Right: '...the rain is not trustworthy,' says Malu Wagh, with his wife Nakula (left), daughter-in-law Lata and her nieces
PHOTO • Jyoti Shinoli
Many in Shahapur speak of falling paddy yields. Right: '...the rain is not trustworthy,' says Malu Wagh, with his wife Nakula (left), daughter-in-law Lata and her nieces
PHOTO • Jyoti Shinoli

ಶಹಾಪುರದಲ್ಲಿ ಭತ್ತದ ಇಳುವರಿ ಕ್ಷೀಣಿಸುತ್ತಿದೆ ಎಂದು ಹಲವರು ಹೇಳುತ್ತಾರೆ. ಬಲಭಾಗದಲ್ಲಿ: ʼಮಳೆಯನ್ನು ನಂಬುವಂತಿಲ್ಲʼ ಎನ್ನುವ ಮಾಲು ವಾಘ್, ಅವರ ಪತ್ನಿ ನಕುಲಾ (ಎಡ), ಸೊಸೆ ಲತಾ ಮತ್ತು ಸೋದರರ ಮಕ್ಕಳು

ಅವರು ಮತ್ತು ಸವಿತಾ ಕಬ್ಬಿನ ಹೊಲಗಳಲ್ಲಿ ಸುಮಾರು ಏಳು ತಿಂಗಳ ದುಡಿಮೆಗೆ 70,000 ರೂ ಸಂಪಾದಿಸುತ್ತಾರೆ. ರಾಜು ಅವರು ಜೂನ್ ಮತ್ತು ಸೆಪ್ಟೆಂಬರ್ ನಡುವೆ ಶಹಾಪುರದಿಂದ 50 ಕಿಲೋಮೀಟರ್ ದೂರದಲ್ಲಿರುವ ಭಿವಾಂಡಿ ತಾಲ್ಲೂಕಿನ ಆನ್‌ಲೈನ್ ಶಾಪಿಂಗ್ ಗೋದಾಮಿನಲ್ಲಿ ಲೋಡರ್ ಆಗಿಯೂ ಕೆಲಸ ಮಾಡುತ್ತಾರೆ - ಸಾಮಾನ್ಯವಾಗಿ, 50 ದಿನಗಳ ಕೆಲಸ ಇರುತ್ತದೆ. ಈ ಕೆಲಸಕ್ಕೆ ದಿನಕ್ಕೆ 300 ರೂ ಕೂಲಿ ಸಿಗುತ್ತದೆ.

ಬರ್ಶಿಂಗಪಾದ ಗ್ರಾಮದಲ್ಲಿರುವ ಗರೇಲ್‌ಪಾದದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಮಾಲು ವಾಘ್ ಅವರ ಕುಟುಂಬವೂ ಭತ್ತದ ಇಳುವರಿ ಕುಸಿತದಿಂದಾಗಿ ಹೆಣಗಾಡುತ್ತಿದೆ. ಅವರ ಮಣ್ಣಿನ ಗುಡಿಸಲಿನ ಒಂದು ಮೂಲೆಯಲ್ಲಿ, ಎರಡು ಕ್ವಿಂಟಾಲ್ ಭತ್ತವನ್ನು ಕೀಟಗಳಿಂದ ರಕ್ಷಿಸಲು ಬೇವಿನ ಎಲೆಗಳ ಮಧ್ಯೆ ಕನಾಗಿ ಎನ್ನುವ ಸಗಣಿ-ಬಿದಿರಿನಿಂದ  ಮಾಡಿದ ಪಾತ್ರೆಯಲ್ಲಿ ಸಂಗ್ರಹಿಸಿಡಲಾಗಿದೆ. "ಅದು ಈಗ ಮನೆಯಲ್ಲಿ ಅತ್ಯಂತ ಅಮೂಲ್ಯವಾದ ವಸ್ತು" ಎಂದು ಮಾಲು ಕಳೆದ ನವೆಂಬರ್‌ನಲ್ಲಿ ಹೇಳಿದ್ದರು. “ಮಳೆ ನಂಬುವಂತಿಲ್ಲದ ಕಾರಣ ನಾವು ನಮ್ಮ ಇಳುವರಿಯನ್ನು ಎಚ್ಚರಿಕೆಯಿಂದ ಬಳಸಬೇಕು. ಮಳೆ ತನಗೆ ಬೇಕೆನಿಸಿದಾಗ ಬರುವ ರಾಜ, ಅದು ನಮ್ಮದಲ್ಲ. ಅದು ನಮ್ಮ ಮಾತನ್ನು ಕೇಳುವುದಿಲ್ಲ.”

ಅಧ್ಯಯನಗಳು ಸಹ ಇದು ನಿಜವೆಂದು ತೋರಿಸುತ್ತದೆ - ಮಳೆ ರಾಕ್ಷಸನಂತಾಗಿದೆ. "ನಾವು ಮಹಾರಾಷ್ಟ್ರದಲ್ಲಿ 100 ವರ್ಷಗಳಿಗಿಂತ ಹೆಚ್ಚು ಕಾಲ ಮಳೆಯ ಡೇಟಾವನ್ನು ವಿಶ್ಲೇಷಿಸಿದ್ದೇವೆ" ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ನಡೆಸಿದ 2013 ರ ಅಧ್ಯಯನದ ಪ್ರಮುಖ ಲೇಖಕ ಡಾ. ಪುಲಕ್ ಗುಹತಕುರ್ತಾ ಹೇಳುತ್ತಾರೆ. ಮಹಾರಾಷ್ಟ್ರದಲ್ಲಿ ಮಳೆ ಮಾದರಿಯ ಬದಲಾವಣೆಗಳು ಮತ್ತು ಕಾಲೋಚಿತತೆಯ ಸೂಚ್ಯಂಕದ ಪರಸ್ಪರ ಬದಲಾವಣೆಗಳನ್ನು ಕಂಡುಹಿಡಿಯುವಿಕೆ(Detecting changes in rainfall pattern and seasonality index vis-à-vis increasing water scarcity in Maharashtra) ಎಂಬ ಅಧ್ಯಯನವು, ರಾಜ್ಯದ ಎಲ್ಲಾ 35 ಜಿಲ್ಲೆಗಳಲ್ಲಿನ 1901-2006ರ ಅವಧಿಯ ಮಾಸಿಕ ಮಳೆಯ ಡೇಟಾವನ್ನು ವಿಶ್ಲೇಷಿಸುತ್ತದೆ. "ಈ ವಿಶ್ಲೇಷಣೆಯಲ್ಲಿ ಒಂದು ವಿಷಯ ಸ್ಪಷ್ಟವಾಗಿದೆ. ಹವಾಮಾನ ಬದಲಾವಣೆಯು ಸಣ್ಣ ಪ್ರದೇಶದ ಭೌಗೋಳಿಕ ಮತ್ತು ಕಾಲಾನುಕ್ರಮದ ಮೇಲೆ ಪರಿಣಾಮ ಬೀರುತ್ತಿದೆ... ಕೃಷಿ ಮತ್ತು ಮಳೆಯಾಶ್ರಿತ ಕೃಷಿಯ ದೃಷ್ಟಿಯಿಂದಲೂ ಈ ಬದಲಾಗುತ್ತಿರುವ ಮಾದರಿಯು ಮುಖ್ಯವಾಗಿದೆ” ಎಂದು ಹವಾಮಾನ ಸಂಶೋಧನೆ ಮತ್ತು ಸೇವೆಗಳ ಕಚೇರಿಯಲ್ಲಿ, ಐಎಂಡಿ, ಪುಣೆ ಇಲ್ಲಿ ವಿಜ್ಞಾನಿಯಾಗಿರುವ ಡಾ. ಗುಹತಕುರ್ತಾ ಹೇಳುತ್ತಾರೆ.

ಈ ಬದಲಾವಣೆಗಳು ಭೂಮಿಯ ಮೇಲೂ ಹೆಚ್ಚಿನ ಪರಿಣಾಮ ಬೀರುತ್ತಿವೆ. ಅದಕ್ಕಾಗಿಯೇ ಕಟ್ಕಾರಿ ಸಮುದಾಯದ 56 ವರ್ಷದ ಮಾಲು ವಾಘ್ ಮತ್ತು ಅವರ ಕುಟುಂಬ - 2019ರ ನವೆಂಬರ್‌ನಲ್ಲಿ ಗುಜರಾತ್‌ನ ವಲ್ಸಾದ್ ಜಿಲ್ಲೆಯ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ವಾಪಿಗೆ ತೆರಳಿದರು - ಗ್ರಾಮದಲ್ಲಿರುವ ಇತರ 27 ಬುಡಕಟ್ಟು ಕುಟುಂಬಗಳಂತೆಯೇ ಇವರೂ ಕೇವಲ 50 ಕೆಜಿ ಅಕ್ಕಿಯನ್ನು ತಮ್ಮೊಂದಿಗೆ ಒಯ್ದರು. ಮೇ-ಜೂನ್‌ನಲ್ಲಿ ಅವರು ಪರ್ಶಿಂಗ್‌ಪಾದಾಗೆ ಹಿಂದಿರುಗಿದಾಗ ಅವರು ಅಕ್ಟೋಬರ್ ತನಕ ತಮ್ಮ ಬೀಗ ಹಾಕಿದ ಗುಡಿಸಲಿನಲ್ಲಿ ಕೂಡಿಟ್ಟಿರುವ ಸುಮಾರು ಎರಡು ಕ್ವಿಂಟಾಲ್ ಅಕ್ಕಿಯಲ್ಲೇ ಜೀವನ ಸಾಗಿಸಬೇಕು.

“ಸುಮಾರು 5-10 ವರ್ಷಗಳ ಹಿಂದೆ, ನಾವು 8-10 ಕ್ವಿಂಟಾಲ್ ಕೊಯ್ಲು ಮಾಡುತ್ತಿದ್ದೆವು. [ಕನಿಷ್ಠ]  4ರಿಂದ 5 ಕ್ವಿಂಟಾಲ್ ಅಕ್ಕಿ ನನ್ನ ಮನೆಯಲ್ಲಿ ಸುಮ್ಮನೆ ಬಿದ್ದಿರುತ್ತಿತ್ತು. ಅಗತ್ಯವಿದ್ದಾಗ, ನಾವು ಇತರ ರೈತರೊಂದಿಗೆ ಅಕ್ಕಿ ಕೊಟ್ಟು ತೊಗರಿಬೇಳೆ, ನಾಗ್ಲಿ [ರಾಗಿ], ವಾರೈ [ಕಿರುಧಾನ್ಯ] ಮತ್ತು ಹರ್ಭರ [ಕಡಲೆ]  ವಿನಿಮಯ ಮಾಡಿಕೊಳ್ಳುತ್ತಿದ್ದೆವು” ಎಂದು ಮಾಲು ಅವರ ಪತ್ನಿ 50 ವರ್ಷದ ನಕುಲಾ ಹೇಳಿದರು. ಐದು ಜನರ ಕುಟುಂಬಕ್ಕೆ ಅದು ಸಾಕಷ್ಟಾಗುತ್ತಿತ್ತು. “ಈಗ ಐದು ವರ್ಷಗಳಿಗಿಂತ ಹೆಚ್ಚು ಕಾಲವಾಯ್ತು, ನಾವು 6 ರಿಂದ 7 ಕ್ವಿಂಟಲ್‌ಗಿಂತ ಹೆಚ್ಚು ಭತ್ತವನ್ನು ಇಳುವರಿಯಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ.

"ಪ್ರತಿವರ್ಷ ಇಳುವರಿ ಕಡಿಮೆಯಾಗುತ್ತಿದೆ" ಎಂದು ಮಾಲು ಹೇಳುತ್ತಾರೆ.

In one corner of Malu Wagh's hut, paddy is stored amid neem leaves in a kanagi: 'That’s the most precious thing in the house now'
PHOTO • Jyoti Shinoli
In one corner of Malu Wagh's hut, paddy is stored amid neem leaves in a kanagi: 'That’s the most precious thing in the house now'
PHOTO • Jyoti Shinoli

ಮಾಲು ವಾಘ್‌ರ ಗುಡಿಸಲಿನ ಒಂದು ಮೂಲೆಯಲ್ಲಿ, ಕನಗಿಯಲ್ಲಿ ಬೇವಿನ ಎಲೆಗಳನ್ನು ಮಧ್ಯೆ ಹಾಕಿ ಭತ್ತವನ್ನು ಸಂಗ್ರಹಿಸಲಾಗುತ್ತದೆ: ''ಈಗ ಇದು ಅವರ ಮನೆಯಲ್ಲಿರುವ ಅತ್ಯಂತ ದುಬಾರಿ ವಸ್ತು''

ಕಳೆದ ವರ್ಷ ಆಗಸ್ಟ್ನಲ್ಲಿ, ಮಳೆ ಬೀಳಲು ಪ್ರಾರಂಭಿಸಿದಾಗ, ಭರವಸೆ ಹುಟ್ಟಿತು. ಆದರೆ, ಅಕ್ಟೋಬರ್‌ನಲ್ಲಿ 11 ದಿನಗಳ ಕಾಲ ಸುರಿದ 102 ಮಿ.ಮೀ ಭಾರಿ ಅಕಾಲಿಕ ಮಳೆಯು ಕುಟುಂಬಕ್ಕೆ ಸೇರಿದ ಎಕರೆ ಭೂಮಿಯನ್ನು ಮುಳುಗಿಸಿತು. ಕೊಯ್ಲಿಗೆ ಸಿದ್ಧವಾಗಿದ್ದ ಭತ್ತದ ಬೆಳೆ ನೀರಿನಲ್ಲಿ ಮುಳುಗಿತು - ಕೇವಲ ಮೂರು ಕ್ವಿಂಟಾಲ್‌ಗಳನ್ನು ಮಾತ್ರ ಉಳಿಸಿಕೊಳ್ಳಲು ಸಾಧ್ಯವಾಯಿತು. ಬೀಜಗಳು, ರಸಗೊಬ್ಬರಗಳು ಮತ್ತು ಎತ್ತುಗಳನ್ನು ಬಾಡಿಗೆಗೆ ಪಡೆಯಲು 10,000 ರೂ.ಗಳನ್ನು ವ್ಯರ್ಥ ಮಾಡಿದ ಮಾಲು "ಈ ಮಳೆಯೇ ಎಲ್ಲದಕ್ಕೂ ಕಾರಣ" ಎಂದು ಹೇಳುತ್ತಾರೆ.

ಥಾಣೆ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿರುವ ಈ ಗ್ರಾಮದಲ್ಲಿರುವ 12 ಕಟ್ಕಾರಿ ಮತ್ತು 15 ಮಲ್ಹಾರ್ ಕೋಲಿ ಕುಟುಂಬಗಳಲ್ಲಿ ಹೆಚ್ಚಿನವರು ಇದೇ ರೀತಿಯಲ್ಲಿ ನಷ್ಟವನ್ನು ಅನುಭವಿಸಿದ್ದಾರೆ.

"ಮಾನ್ಸೂನ್ ಈಗಾಗಲೇ ಹೆಚ್ಚು ವ್ಯತ್ಯಾಸಗೊಳ್ಳುತ್ತಿರುವುದು ತಿಳಿದುಬಂದಿದೆ. ಹವಾಮಾನ ವೈಪರೀತ್ಯದಿಂದಾಗಿ ಈ ವ್ಯತ್ಯಾಸವು ಮತ್ತಷ್ಟು ಉಲ್ಬಣಗೊಂಡಿದೆ, ಇದರಿಂದಾಗಿ ರೈತರು ತಮ್ಮ ಬೆಳೆ ಚಕ್ರಗಳನ್ನು ಮತ್ತು ಆದ್ಯತೆಯ ಬೆಳೆ ಮಾದರಿಗಳನ್ನು ಅನುಸರಿಸಲು ಸಾಧ್ಯವಾಗುವುದಿಲ್ಲ” ಎಂದು ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿನ ಹವಾಮಾನ ಅಧ್ಯಯನ ಅಂತರಶಿಕ್ಷಣ ಕಾರ್ಯಕ್ರಮದ ಕನ್ವೀನರ್ ಪ್ರೊ. ಡಿ. ಪಾರ್ಥಸಾರಥಿ ಹೇಳುತ್ತಾರೆ. ಅವರು ನಡೆಸಿದ ಅಧ್ಯಯನವು ಮಹಾರಾಷ್ಟ್ರದ ನಾಸಿಕ್ ಮತ್ತು ಕೊಂಕಣ ಜಿಲ್ಲೆಗಳು ಆರ್ದ್ರ ಅವಧಿಯ ಸಂಖ್ಯೆಯಲ್ಲಿ (ಮಳೆಯ ತೀವ್ರತೆ) ಗಮನಾರ್ಹ ಹೆಚ್ಚಳವನ್ನು ತೋರಿಸುತ್ತಿವೆ ಎಂದು ತೋರಿಸಿದರೆ, ಥಾಣೆ ಜಿಲ್ಲೆಯಲ್ಲಿ 1976 -77ರ ನಂತರದ ಮಳೆಯ ದಿನಗಳ (ಮಳೆ ಆವರ್ತನ) ಸಂಖ್ಯೆಯಲ್ಲಿ ವಿಪರೀತ ವ್ಯತ್ಯಾಸವಾಗಿದೆ.

1951ರಿಂದ 2013ರವರೆಗಿನ 62 ವರ್ಷಗಳಲ್ಲಿ ಮಹಾರಾಷ್ಟ್ರದ 34 ಜಿಲ್ಲೆಗಳಲ್ಲಿ ಸಂಗ್ರಹಿಸಲಾದ ದೈನಂದಿನ ಮಳೆ ದತ್ತಾಂಶ ಮತ್ತು ಕೃಷಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮದ ಕುರಿತು ಈ ಅಧ್ಯಯನವನ್ನು ನಡೆಸಲಾಯಿತು. "ಹವಾಮಾನ ಬದಲಾವಣೆಯು ಮಳೆಯ ಮೇಲೆ ಪರಿಣಾಮ ಬೀರಿದೆ. ಮಳೆಗಾಲದ ಆರಂಭ, ಮಳೆಯ ಅಂತ್ಯ, ಮಳೆಗಾಲದ ದಿನಗಳು, ಮಳೆರಹಿತ ದಿನಗಳು, ಒಟ್ಟಾರೆ ಮಳೆ ಎಲ್ಲವೂ ಬದಲಾಗಿದೆ. ಬಿತ್ತನೆ ದಿನಾಂಕ, ಮೊಳಕೆಯೊಡೆಯುವಿಕೆಯ ಪ್ರಮಾಣ ಮತ್ತು ಒಟ್ಟಾರೆ ಇಳುವರಿಯ ಮೇಲೆ ಇವು ಭಾರಿ ಪರಿಣಾಮ ಬೀರುತ್ತವೆ. ಇದು ಕೆಲವೊಮ್ಮೆ ದೊಡ್ಡ ಪ್ರಮಾಣದ ಬೆಳೆ ವೈಫಲ್ಯಕ್ಕೆ ಕಾರಣವಾಗುತ್ತದೆ" ಎಂದು ಪ್ರೊ. ಪಾರ್ಥಸಾರಥಿ ಹೇಳುತ್ತಾರೆ.

ಬರ್ಸಿಂಗ್‌ಪಾದದಿಂದ 124 ಕಿ.ಮೀ ದೂರದಲ್ಲಿರುವ ನೆಹರೋಲಿ ಗ್ರಾಮದಲ್ಲಿನ, ಮಾ ಠಾಕೂರ್ ಸಮುದಾಯಕ್ಕೆ ಸೇರಿದ 60 ವರ್ಷದ ಇಂದೂ ಅಗಿವಾಲೆ ಕೂಡ ಈ ಬದಲಾಗುತ್ತಿರುವ ಮಾದರಿಗಳ ಬಗ್ಗೆ ಮಾತನಾಡುತ್ತಾರೆ. “ನಾವು ರೋಹಿಣಿ ನಕ್ಷತ್ರದಲ್ಲಿ [ಮೇ 25ರಿಂದ ಜೂನ್ 7ರವರೆಗೆ] ಬೀಜಗಳನ್ನು ಬಿತ್ತುತ್ತೇವೆ. ಪುಷ್ಯ [ಜುಲೈ 20ರಿಂದ ಆಗಸ್ಟ್ 2] ಬರುವ ಹೊತ್ತಿಗೆ, ನಮ್ಮ ಬೆಳೆಗಳು ನಾಟಿ ಮಾಡಲು ಸಿದ್ಧವಾಗುತ್ತವೆ. ಚಿತ್ರ ನಕ್ಷತ್ರದ ಸಮಯಕ್ಕೆ [ಅಕ್ಟೋಬರ್ 10ರಿಂದ ಅಕ್ಟೋಬರ್ 23] ನಾವು ಭತ್ತ ಕತ್ತರಿಸಿ ಬಡಿಯುವುದನ್ನು ಪ್ರಾರಂಭಿಸುತ್ತೇವೆ. ಈಗ ಈ ಎಲ್ಲಾ ಕೆಲಸಗಳೂ [ಭತ್ತದ ಕೃಷಿ ಪ್ರಕ್ರಿಯೆ] ವಿಳಂಬವಾಗುತ್ತದೆ. ದೀರ್ಘಕಾಲ ಹಿಡಿಯುತ್ತದೆ, ಈಗ ಮಳೆ ನಕ್ಷತ್ರಗಳ ಪ್ರಕಾರ ಬೀಳುವುದಿಲ್ಲ. ಏಕೆ ಎಂದು ನನಗೆ ಅರ್ಥವಾಗುತ್ತಿಲ್ಲ.”

ಇಂದೂ ಹೆಚ್ಚುತ್ತಿರುವ ಸೆಕೆಯ ಬಗ್ಗೆಯೂ ಮಾತನಾಡುತ್ತಾರೆ. “ನನ್ನ ಇಡೀ ಜೀವನದಲ್ಲಿ ಇಂತಹ ಸೆಕೆಯನ್ನು ನಾನು ನೋಡಿಲ್ಲ. ನಾನು ಮಗುವಾಗಿದ್ದಾಗ, ರೋಹಿಣಿ ನಕ್ಷತ್ರದಲ್ಲಿ ಭಾರಿ ಮಳೆ ಸುರಿಯಲು ಪ್ರಾರಂಭವಾಗುತ್ತಿತ್ತು. ಇದು ನಿರಂತರ ಮಳೆಯಾಗಿದ್ದು, ಬೇಸಿಗೆಯ ನಂತರ ಬಿಸಿಯಾದ ಭೂಮಿಯನ್ನು ತಣ್ಣಗಾಗಿಸುತ್ತದೆ. ಒದ್ದೆಯಾದ ಮಣ್ಣಿನ ಸುವಾಸನೆಯು ಗಾಳಿಯಲ್ಲಿರುತ್ತದೆ. ಈಗ ಆ ಸುವಾಸನೆ ಬಹಳ ಅಪರೂಪ..." ಎಂದು ತನ್ನ ಎರಡು ಎಕರೆ ಕೃಷಿಭೂಮಿಗೆ ಬೇಲಿ ಮಾಡಲು ಅಂಚುಗಳಲ್ಲಿ ಗುಳಿ ತೋಡುತ್ತಿದ್ದ ಅವರು ಹೇಳುತ್ತಾರೆ.

Top row: 'For a long time now, the rainfall is not according to the nakshatras,' says Indu Agiwale. Botttom row: Kisan Hilam blames hybrid seeds for the decreasing soil fertility
PHOTO • Jyoti Shinoli

ಮೇಲಿನ ಸಾಲು: 'ಈಗ ಬಹಳ ಸಮಯದಿಂದ ಮಳೆ ನಕ್ಷತ್ರಗಳ ಪ್ರಕಾರ ಸುರಿಯುವುದಿಲ್ಲ' ಎಂದು ಇಂದೂ ಅಗಿವಾಲೆ ಹೇಳುತ್ತಾರೆ. ಕೆಳಗಿನ ಸಾಲು: ಮಣ್ಣಿನ ಫಲವತ್ತತೆ ಕುಸಿಯಲು ಹೈಬ್ರಿಡ್ ಬೀಜಳು ಕಾರಣವೆಂದು ಕಿಸಾನ್ ಹಿಲಾಮ್ ದೂಷಿಸುತ್ತಾರೆ

ಕೇವಲ ಅಸಮ ಮಳೆ, ಇಳುವರಿ ಕುಸಿಯುವುದು ಮತ್ತು ಹೆಚ್ಚುತ್ತಿರುವ ತಾಪಮಾನಗಳ ಜೊತೆಗೆ, ಶಹಾಪುರದಲ್ಲಿ ಮಣ್ಣಿನ ಫಲವತ್ತತೆ ಕೂಡ ಕಡಿಮೆಯಾಗುತ್ತಿದೆ ಎಂದು ಇಲ್ಲಿನ ರೈತರು ಹೇಳುತ್ತಾರೆ. ಮತ್ತು ನೆಹರೋಲಿ ಗ್ರಾಮದ 68 ವರ್ಷದ ಕಿಸಾನ್ ಹಿಲಾಮ್ ಹೈಬ್ರಿಡ್ ಬೀಜಗಳು ಮತ್ತು ರಾಸಾಯನಿಕ ಗೊಬ್ಬರಗಳನ್ನು ಇದಕ್ಕಾಗಿ ದೂಷಿಸಿಸುತ್ತಾರೆ. “ಮಸೂರಿ, ಚಿಕಂದರ್, ಪೋಶಿ, ಡಾಂಗೆ… ಈ [ಸಾಂಪ್ರದಾಯಿಕ] ಬೀಜಗಳು ಈಗ ಯಾರ ಬಳಿಯಿವೆ? ಯಾರಲ್ಲೂ ಇಲ್ಲ. ಎಲ್ಲರೂ ಸಾಂಪ್ರದಾಯಿಕ ಬೀಜದಿಂದ ಔಷಧ್‌ವಾಲೆಗೆ [ಹೈಬ್ರಿಡ್ ಬೀಜಗಳಿಗೆ] ಬದಲಾವಣೆಗೊಂಡರು. ಈಗ ಯಾರೂ ಬೀಜಗಳನ್ನು ಸಂರಕ್ಷಿಸಿಡುವುದಿಲ್ಲ…” ಎಂದು ಅವರು ಹೇಳುತ್ತಾರೆ.

ನಾವು ಭೇಟಿಯಾದಾಗ, ಅವರು ಮಣ್ಣಿನಲ್ಲಿ ಹೈಬ್ರಿಡ್ ಬೀಜ ಪ್ರಭೇದವನ್ನು ಉದ್ದನೆ ಕವೆಗೋಲಿನಿಂದ ಬೆರೆಸುತ್ತಿದ್ದರು. “ನಾನು ಅವುಗಳನ್ನು ಬಳಸುವುದನ್ನು ವಿರೋಧಿಸಿದ್ದೆ. ಸಾಂಪ್ರದಾಯಿಕ ಬೀಜಗಳು ಕಡಿಮೆ ಇಳುವರಿಯನ್ನು ನೀಡುತ್ತವೆ ಆದರೆ ಅವು ಪರಿಸರವನ್ನು ನಿಭಾಯಿಸುತ್ತವೆ. ಈ ಹೊಸ ಬೀಜಗಳು ಔಷಧ್ [ಗೊಬ್ಬರ] ಇಲ್ಲದೆ ಬೆಳೆಯಲು ಸಾಧ್ಯವಿಲ್ಲ. ಇದು  ಮಳೆ ಕಳಪೆಯಾಗಿದೆಯೆ ಅಥವಾ ಅಧಿಕವಾಗಿದೆಯೇ ಎಂದು ಲೆಕ್ಕಿಸದೆ‌ ಮಣ್ಣಿನ ಶುದ್ಧತೆಯನ್ನು [ಫಲವತ್ತತೆ] ಕಡಿಮೆ ಮಾಡುತ್ತದೆ.”

"ರೈತರು ತಮ್ಮದೇ ಆದ ಸಾಂಪ್ರದಾಯಿಕ ಬೀಜಗಳ ದಾಸ್ತಾನು ಉಳಿಸಿಕೊಳ್ಳುವ ಬದಲು ಬೀಜ ಕಂಪನಿಗಳ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಆದರೆ ಈ ಹೈಬ್ರಿಡ್ ಬೀಜಗಳಿಗೆ ಕಾಲಾನಂತರದಲ್ಲಿ ಹೆಚ್ಚಿನ ಪ್ರಮಾಣದ ರಸಗೊಬ್ಬರಗಳು, ಕೀಟನಾಶಕಗಳು ಮತ್ತು ನೀರು ಬೇಕಾಗುತ್ತದೆ. ಈ ಅಗತ್ಯಗಳು [ಒಳಹರಿವು] ಲಭ್ಯವಿಲ್ಲದಿದ್ದರೆ ಅವು ಖಾತರಿ ಇಳುವರಿಯನ್ನು ನೀಡಲು ಸಾಧ್ಯವಿಲ್ಲ. ಇದರರ್ಥ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳಲ್ಲಿ, ಹೈಬ್ರಿಡ್‌ ತಳಿಗಳು ಸುಸ್ಥಿರವಲ್ಲ” ಎಂದು ಪುಣೆಯ ಇನ್ಸ್ಟಿಟ್ಯೂಟ್ ಫಾರ್ ಸಸ್ಟೈನಬಲ್ ಲೈವ್ಲಿಹುಡ್ಸ್ ಅಂಡ್ ಡೆವಲಪ್ಮೆಂಟ್, ಬಿಎಐಎಫ್ ನಲ್ಲಿ ಸಹಾಯಕ ಕಾರ್ಯಕ್ರಮ ಸಂಯೋಜಕರಾದ ಸಂಜಯ್ ಪಾಟೀಲ್ ವಿವರಿಸುತ್ತಾರೆ. "ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯಿಂದಾಗಿ ಈಗ ಸಕಾಲಿಕ ಮತ್ತು ಊಹಿಸಬಹುದಾದ ಮಳೆ ಬರುವುದು ಅಪರೂಪ, ಆದ್ದರಿಂದ ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬಲ್ಲ ಪ್ರಧಾನ ಬೆಳೆ ಹೊಂದುವುದು ಇಂದು ಬಹಳ ಅವಶ್ಯಕವಾಗಿದೆ."

"ಆ ಪ್ರದೇಶದಲ್ಲಿನ ಭತ್ತದ ಸಾಂಪ್ರದಾಯಿಕ ಬೀಜವು ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತದೆ, ಮತ್ತು ಹವಾಮಾನ ಬದಲಾದರೂ ಸಣ್ಣ ಮಟ್ಟದ ಇಳುವರಿ ಕೊಯ್ಲು ಮಾಡಬಹುದು" ಎಂದು ಬಿಎಎಫ್‌ನ ಸೋಮನಾಥ್ ಚೌಧರಿ ಹೇಳುತ್ತಾರೆ.

ಹೈಬ್ರಿಡ್ ಬೀಜಗಳಿಗೆ ಹೆಚ್ಚಾಗಿ ಬಹಳ ನೀರು ಬೇಕಾಗುತ್ತದೆ. ಇದರಿಂದ, ಮಳೆಯಾಶ್ರಿತ  ಹಳ್ಳಿಗಳಲ್ಲಿ, ಸಮಯಕ್ಕೆ ಸರಿಯಾಗಿ ಮಳೆ ಬರದಿದ್ದರೆ, ಬೆಳೆಗಳು ಹಾನಿಗೊಳಗಾಗುತ್ತವೆ.

ಈ ನಡುವೆ ಈ ವರ್ಷದ ಪ್ರಾರಂಭದಲ್ಲಿ ನಾನು ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದಾಗ, ಮಾಲು, ನಕುಲಾ, ಅವರ ಮಗ ರಾಜೇಶ್, ಸೊಸೆ ಲತಾ ಮತ್ತು ಅವರ 10 ವರ್ಷದ ಮೊಮ್ಮಗಳು ಸುವಿಧಾ ವಾಪಿಯ ಇಟ್ಟಿಗೆ ಗೂಡುಗಳ ತಾತ್ಕಾಲಿಕ ಗುಡಿಸಲಿನಲ್ಲಿ ಊಟ ಮಾಡುತ್ತಿದ್ದರು. ಅವರು ದಿನಕ್ಕೆ ಒಂದು ಬಾರಿ ಅನ್ನ, ಬದನೆ, ಆಲೂಗಡ್ಡೆ ಅಥವಾ ಟೊಮೆಟೊ ಸಾರಿನಂತಹ ಸರಳವಾದ ಊಟವನ್ನು ಮಾಡುತ್ತಾರೆ ಎಂದು ನನಗೆ ತಿಳಿಯಿತು.

Along with uneven rainfall, falling yields and rising temperatures, the fertility of the soil is also decreasing, farmers in Shahapur taluka say
PHOTO • Jyoti Shinoli
Along with uneven rainfall, falling yields and rising temperatures, the fertility of the soil is also decreasing, farmers in Shahapur taluka say
PHOTO • Jyoti Shinoli

ಏರುಪೇರಿನ ಮಳೆ, ಇಳುವರಿ ಕುಸಿಯುವುದು ಮತ್ತು ಹೆಚ್ಚುತ್ತಿರುವ ತಾಪಮಾನಗಳ ಜೊತೆಗೆ ಮಣ್ಣಿನ ಫಲವತ್ತತೆಯೂ ಕಡಿಮೆಯಾಗುತ್ತಿದೆ ಎಂದು ಶಹಾಪುರ ತಾಲ್ಲೂಕಿನ ರೈತರು ಹೇಳುತ್ತಾರೆ

“ಇಟ್ಟಿಗೆಗಳನ್ನು ತಯಾರಿಸುವುದು ಸುಲಭದ ಕೆಲಸವಲ್ಲ. ನಮ್ಮ ಬೆವರು ಕೂಡ ಕೆಸರಿನಲ್ಲಿ ನೀರಿನಂತೆ ಬೆರೆಯುತ್ತದೆ. ಆದ್ದರಿಂದ ಕೆಲಸ ಮುಂದುವರಿಸಲು ನಾವು ಸರಿಯಾಗಿ ತಿನ್ನಬೇಕು. ಈ ಬಾರಿ, ಇಳುವರಿ ಕಡಿಮೆ ಇದ್ದುದರಿಂದ, ನಾವು ದಿನಕ್ಕೆ ಒಂದು ಬಾರಿ ಮಾತ್ರ ತಿನ್ನುತ್ತಿದ್ದೇವೆ. ಜೂನ್ ಬಿತ್ತನೆ ಕಾಲಕ್ಕೂ ಮುಂಚಿತವಾಗಿ ನಾವು ನಮ್ಮ [ಅಕ್ಕಿ] ದಾಸ್ತಾನು ಮುಗಿಯಂತೆ ನೋಡಿಕೊಳ್ಳಬೇಕಿದೆ,” ಮಾಲು ಹೇಳಿದರು.

ಇಟ್ಟಿಗೆ ಗೂಡು ಕೆಲಸದ ಅಂತ್ಯದ ವೇಳೆಗೆ, ಅಂದರೆ, ಮೇ ವೇಳೆಗೆ, ನಾಲ್ಕು ಜನರ ವೇತನವಾಗಿ ಅವರು 80,000 ದಿಂದ 90,000 ರೂ.ಗಳ ಕಟ್ಟಿನೊಂದಿಗೆ ಬರ್ಶಿಂಗಪಾದಕ್ಕೆ ಮರಳುತ್ತಾರೆ. ಮುಂದಿನ ವರ್ಷದ ತನಕ, ಕೃಷಿ ಖರ್ಚು, ವಿದ್ಯುತ್ ಬಿಲ್‌ಗಳು, ಔಷಧಿಗಳು, ಉಪ್ಪು ಮತ್ತು ಮಸಾಲೆಗಳು, ತರಕಾರಿಗಳು ಮತ್ತು ದಿನಸಿ ಎಲ್ಲವನ್ನೂ ಇದೇ ಹಣದಲ್ಲಿ ನಿಭಾಯಿಸಬೇಕು.

ಶಹಾಪುರದ ಆದಿವಾಸಿ ಗ್ರಾಮಗಳಲ್ಲಿನ ಮಾಲು ವಾಘ್, ಧರ್ಮ ಗರೇಲ್ ಮತ್ತು ಇತರರು ‘ಹವಾಮಾನ ಬದಲಾವಣೆ’ ಎಂಬ ಪದವನ್ನು ತಿಳಿದಿಲ್ಲದಿರಬಹುದು, ಆದರೆ ಅವರು ಬದಲಾವಣೆಯನ್ನು ಸ್ವತಃ ತಿಳಿದಿದ್ದಾರೆ ಮತ್ತು ಪ್ರತಿದಿನ ಅದರ ಪರಿಣಾಮಗಳನ್ನು ನೇರವಾಗಿ ಎದುರಿಸುತ್ತಿದ್ದಾರೆ. ಹವಾಮಾನ ಬದಲಾವಣೆಗಳ ಹಲವು ಆಯಾಮಗಳ ಬಗ್ಗೆ ಅವರು ಸ್ಪಷ್ಟವಾಗಿ ಮಾತನಾಡುತ್ತಾರೆ: ಅನಿಯಮಿತ ಮಳೆ ಮತ್ತು ಅದರ ಅಸಮ ಹಂಚಿಕೆ; ಸೆಕೆಯ ಭಯಾನಕ ಏರಿಕೆ; ಬೋರ್‌ವೆಲ್‌ಗಳ ಹೆಚ್ಚಳ ಮತ್ತು ನೀರಿನ ಮೂಲಗಳ ಮೇಲೆ ಅದರ ಪರಿಣಾಮ, ಮತ್ತು ಇದರ ಪರಿಣಾಮವಾಗಿ, ಭೂಮಿ, ಬೆಳೆಗಳು ಮತ್ತು ಕೃಷಿಯ ಮೇಲೆ; ಬೀಜಗಳಲ್ಲಿನ ಬದಲಾವಣೆಗಳು ಮತ್ತು ಇಳುವರಿಯ ಮೇಲೆ ಅವುಗಳ ಪರಿಣಾಮ; ಆಹಾರ ಭದ್ರತೆಯ ಮೇಲೆ ಹವಮಾನ ಬದಲಾವಣೆಯ ಪರಿಣಾಮದ ಕುರಿತು ಹವಾಮಾನ ವಿಜ್ಞಾನಿಗಳು ತುಂಬಾ ಬಲವಾಗಿ ಎಚ್ಚರಿಸಿದ್ದಾರೆ.

ಅವರೆಲ್ಲರಿಗೂ ಇದು ಅವರ ಸ್ವಂತ ಅನುಭವ. ಮತ್ತು ವಾಸ್ತವವಾಗಿ ಅವರ ಅವಲೋಕನಗಳು ವಿಜ್ಞಾನಿಗಳ ಸಂಶೋಧನೆಗೆ ಹೋಲುತ್ತವೆ ಆದರೆ ಅದನ್ನು ಬೇರೆ ಭಾಷೆಯಲ್ಲಿ ಪ್ರಸ್ತುತಪಡಿಸುತ್ತಾರೆ. ಇವೆಲ್ಲವುಗಳೊಂದಿಗೆ, ಅಧಿಕಾರಿಗಳೊಂದಿಗೆ ಅವರ ಜಗಳ ಭಿನ್ನವಾದುದು ಈ ಗ್ರಾಮಗಳಲ್ಲಿ ಅವರು ಜಗಳವಿರುವುದು ಅರಣ್ಯ ಅಧಿಕಾರಿಗಳೊಂದಿಗೆ.

ಮಾಲು ಹೇಳುವಂತೆ: “ನಮ್ಮ ಹೋರಾಟ ಇದೊಂದೇ ಅಲ್ಲ ಇನ್ನೂ ಹಲವಿವೆ. ಅರಣ್ಯಾಧಿಕಾರಿಗಳೊಂದಿಗೆ [ಭೂ ಮಾಲೀಕತ್ವಕ್ಕಾಗಿ], ಪಡಿತರ ಅಧಿಕಾರಿಗಳೊಂದಿಗೆ. ಹೀಗಿರುವಾಗ ಮಳೆ ಮಾತ್ರವೇ ನಮ್ಮೊಂದಿಗೆ ಒಳ್ಳೆಯ ವರ್ತನೆ ತೋರಲು ಸಾಧ್ಯವೆ?”

ಅಲ್ಲಿ, 80 ವರ್ಷದ ಧರ್ಮ ಅವರು ಗರೇಲ್‌ ಪಾದದ, ತನ್ನ ಹೊಲದಲ್ಲಿ ನಿಂತು, “ಹವಾಮಾನ ಬದಲಾಗುತ್ತಿದೆ. ದಿನದಿಂದ ದಿನಕ್ಕೆ ಸೆಕೆ ಹೆಚ್ಚಾಗುತ್ತಿದೆ. ಮೊದಲಿನಂತೆ ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿಲ್ಲ. ಜನರು ಮೊದಲಿನಂತೆಯೇ ಇದ್ದಿದ್ದರೆ, ಪ್ರಕೃತಿ ಯಾಕೆ ಬದಲಾಗುತ್ತಿತ್ತು? ಜನರು ಬದಲಾಗಿದ್ದಾರೆ ಹಾಗಾಗಿ ಪ್ರಕೃತಿಯೂ ಬದಲಾಗುತ್ತಿದೆ ..."

ಹವಾಮಾನ ಬದಲಾವಣೆಯ ಕುರಿತು ಪರಿ (PARI)ಯ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಯುಎನ್‌ಡಿಪಿ ಬೆಂಬಲಿತ ಉಪಕ್ರಮದ ಒಂದು ಭಾಗವಾಗಿದ್ದು, ಆ ವಿದ್ಯಮಾನಗಳನ್ನು ಪರಿ ಸಾಮಾನ್ಯ ಜನರ ಜೀವಂತ ಅನುಭವ ಮತ್ತು ಧ್ವನಿಗಳ ಮೂಲಕ ಸೆರೆಹಿಡಿಯುತ್ತದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು  [email protected]. ಈ ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ ಎನ್. ಕೆಂಚನೂರು

Reporter : Jyoti Shinoli

Jyoti Shinoli is a Senior Reporter at the People’s Archive of Rural India; she has previously worked with news channels like ‘Mi Marathi’ and ‘Maharashtra1’.

Other stories by Jyoti Shinoli
Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Series Editors : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N Kenchanuru

Shankar N. Kenchanuru is a poet and freelance translator. He can be reached at [email protected].

Other stories by Shankar N Kenchanuru