ಗಜುವಾಸ್ ಗ್ರಾಮದ ಹೊರವಲಯದಲ್ಲಿರುವ ಖೇಜ್ರಿಮರದ ತೆಳು ನೆರಳಿನಡಿ ನೆಲದ ಮೇಲೆ ಕುಳಿತಿದ್ದ ಭಜರಂಗ್‌ ಗೋಸ್ವಾಮಿ “ಈ ಬಿಸಿಲಿನಿಂದಾಗಿ ನನ್ನ ಬೆನ್ನು ಸುಟ್ಟುಹೋಗಿದೆ,” ಎನ್ನುತ್ತಾರೆ. “ಬಿಸಿಲು, ಸೆಕೆ ಜಾಸ್ತಿಯಾಗಿ ಬೆಳೆ ಇಳುವರಿಯೂ ಕಡಿಮೆಯಾಗಿದೆ” ಎಂದು ಇತ್ತೀಚಿಗೆ ಕಟಾವು ಮಾಡಿದ ಸಜ್ಜೆಯ ಕೂಳೆಯತ್ತ ನೋಡುತ್ತಾ ತನ್ನ ಮಾತು ಮುಂದುವರೆಸುತ್ತಾರೆ. ಒಂಟೆಯೊಂದು ಒಂಟಿಯಾಗಿ ಅವರು ಮತ್ತು ಅವರ ಹೆಂಡತಿ ರಾಜ್‌ ಕೌರ್ ಗೇಣಿ ಬೆಳೆಗಾರರಾಗಿ ವ್ಯವಸಾಯ ಮಾಡುವ 22‌ ಭಿಘಾ ಹೊಲದಲ್ಲಿ ಒಣ ಹುಲ್ಲನ್ನು ಮೇಯುತ್ತಿದೆ. ಇವರ ಈ ಹೊಲವಿರುವುದು ರಾಜಸ್ಥಾನದ ಚುರೂ ಜಿಲ್ಲೆಯ ತಾರಾನಗರ್ ತೆಹಸಿಲ್‌ನಲ್ಲಿ.

“ತಲೆಯ ಮೇಲೆ ನೆತ್ತಿ ಸುಡುವ ಸೂರ್ಯ, ಕಾಲಿನ ಕೆಳಗೆ ಅಂಗಾಲು ಸುಡುವ ಮರಳು,” ಎನ್ನುತ್ತಾರೆ ಸುಜನಘರ್‌ ತೆಹಸಿಲ್‌ನ ತಾರಾ ನಗರ ದಕ್ಷಿಣದ ಗೀತಾ ದೇವಿ. ಗೀತಾ ದೇವಿಯವರು ಭೂರಹಿತ ವಿಧವೆಯಾಗಿದ್ದು ಭಗವಾನಿ ದೇವಿಯರ ಕುಟುಂಬದ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಇಬ್ಬರೂ ಆಗಷ್ಟೇ ದಿನದ ಕೆಲಸ ಮುಗಿಸುವ ಹೊತ್ತಿಗೆ ಗುಡಾವರಿ ಗ್ರಾಮದಲ್ಲಿ ಸುಮಾರು ಐದು ಗಂಟೆಯಾಗಿತ್ತು. “ಗರ್ಮಿ ಹೀ ಗರ್ಮಿ ಪಡೇ ಹೈ ಆಜ್‌ ಕಲ್”‌ [ಇತ್ತೀಚೆಗೆ ಸೆಕೆಯೆಂದರೆ ಸೆಕೆ] ಎನ್ನುತ್ತಾರೆ ಭಗವಾನಿ ದೇವಿ.

ಉತ್ತರ ರಾಜಸ್ಥಾನದ ಚುರೂ ಜಿಲ್ಲೆಯಲ್ಲಿ ಕಾಲ ಕೆಳಗಿನ ಮರಳಿನಿಂದ ಕೂಡಿದ ನೆಲ ಮೇ ಮತ್ತು ಜೂನ್‌ ತಿಂಗಳ ಬೇಸಿಗೆಯಲ್ಲಿ ದಗದಗಿಸುತ್ತಿದ್ದರೆ ಬೀಸುವ ಗಾಳಿಯು ಉರಿವ ಕುಲುಮೆಯ ಕೆನ್ನಾಲಿಗೆ ಸವರಿದಂತಿರುತ್ತದೆ. ಇನ್ನು ತಾಪಮಾನ ಮತ್ತು ಅದು ಏರುತ್ತಾ ಹೋಗುವದರ ಕುರಿತು ಮಾತನಾಡುವುದಾದರೆ – ಅದಿಲ್ಲಿ ಒಂದು ಸಾಮಾನ್ಯ ಪ್ರಕ್ರಿಯೆ. ಆ ತಿಂಗಳುಗಳಲ್ಲಿ ಇಲ್ಲಿನ ತಾಪಮಾನ ನಲವತ್ತು ಡಿಗ್ರಿಗಳ ತನಕ ಹೋಗುತ್ತದೆ. ಕಳೆದ ತಿಂಗಳಷ್ಟೇ ಎಂದರೆ ಮೇ 2020ರಲ್ಲಿ ಇಲ್ಲಿನ ತಾಪಮಾನ 50 ಡಿಗ್ರಿ ಸೆಲಿಷಿಯಸ್‌ಗೆ ಏರಿತ್ತು – ಮತ್ತಿದು ಜಗತ್ತಿನಲ್ಲೇ ದಾಖಲಾದ ಅತಿಹೆಚ್ಚಿನ ತಾಪಮಾನವಾಗಿದೆ, ಎಂದು ವರದಿಗಳು ಹೇಳುತ್ತವೆ.

ಹೀಗೆ ಕಳೆದ ವರ್ಷ ತಾಪಮಾನವು ಹಿಂದಿನ ದಾಖಲೆಗಳನ್ನು ಮುರಿದು ಮಾಪನದ ಪಾದರಸ 51 ಡಿಗ್ರಿ ಸೆಲ್ಸಿಯಸ್ ಮಟ್ಟವನ್ನು ತಲುಪಿತ್ತು. ಇದು ಕುದಿಯುವ ನೀರಿನ ತಾಪಮಾನದ ಅರ್ಧಕ್ಕಿಂತ ಹೆಚ್ಚು. ಆದರೆ ಇಲ್ಲಿನ ಬಹಳಷ್ಟು ಜನರಿಗೆ ಇದೊಂದು ವಿಷಯವೇ ಅಲ್ಲ. ಗಜುವಾಸ್ ಗ್ರಾಮದಲ್ಲಿರುವ ತನ್ನ ದೊಡ್ಡ ಮನೆಯಲ್ಲಿನ ಹಾಸಿಗೆಯ ಮೇಲೆ ಮಲಗಿರುವ ನಿವೃತ್ತ ಶಾಲಾ ಶಿಕ್ಷಕ ಮತ್ತು ಭೂಮಾಲಿಕ 75 ವರ್ಷದ ಹರ್‌ದಯಾಲ್‌ಜೀ ಸಿಂಗ್ ಹೇಳುವಂತೆ; “ಇದೇನೂ ಹೊಸದಲ್ಲ ಮೂವತ್ತು ವರ್ಷಗಳ ಹಿಂದೆಯೂ ಒಮ್ಮೆ 50 ಡಿಗ್ರಿ ತಲುಪಿತ್ತು”,

ಈ ಸೆಕೆಯ ದಿನಗಳ ಆರು ತಿಂಗಳ ನಂತರ ಮತ್ತೆ ಡಿಸೆಂಬರ್‌-ಜನವರಿಯಲ್ಲಿ ಚುರೂ ಸೊನ್ನೆ ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನವನ್ನೂ ಕಂಡಿದೆ. ಮತ್ತು ಫೆಬ್ರವರಿ 2020ರಲ್ಲಿ, ಭಾರತದ ಹವಾಮಾನ ಇಲಾಖೆಯು ಚುರೂವಿನಲ್ಲಿರುವ ಭಾರತದ ಬಯಲು ಪ್ರದೇಶಗಳಲ್ಲಿ 4.1 ಡಿಗ್ರಿಗಳಷ್ಟು ಕಡಿಮೆ ತಾಪಮಾನವನ್ನು ದಾಖಲಿಸಿದೆ.

Geeta Devi and Bhagwani Devi of of Sujangarh tehsil, Churu: ' Garmi hee garmi pade aaj kal' ('It’s heat and more heat nowadays')
PHOTO • Sharmila Joshi

ಚುರೂ, ಸುಜನ್‌ಘರ್‌ ತೆಹಸಿಲ್‌ನ ಗೀತಾ ದೇವಿ ಮತ್ತು ಭಗವಾನಿ ದೇವಿ; ʼಗರ್ಮಿ ಹೀ ಗರ್ಮಿ ಪಡೇ ಹೇ ಆಜ್‌ ಕಲ್‌ (ಇತ್ತೀಚೆಗೆ ಸೆಕೆಯೆಂದರೆ ಸೆಕೆʼ)

ಮೈನಸ್‌ 1ರಿಂದ 50ರವರೆಗಿನ ತಾಪಮಾನದ ಈ ಸರಣಿಯಲ್ಲಿ ಜಿಲ್ಲೆಯ ಜನರು ಹೆಚ್ಚು ಮಾತನಾಡವುದು ಹೆಚ್ಚಾದ ಸೆಕೆಯ ಕುರಿತಾಗಿಯೇ. ಆದರೆ ಅವರು ಜೂನ್‌ ಜೂನ್‌ 2019ರ ನಾಟಕೀಯ 50-ಪ್ಲಸ್‌ ಡಿಗ್ರಿಯ ಕುರಿತೋ ಅಥವಾ ಹಿಂದಿನ ತಿಂಗಳ 50 ಡಿಗ್ರಿಯ ಕುರಿತಾಗಿಯೋ ಮಾತನಾಡುವುದಿಲ್ಲ. ಅವರು ಮಾತನಾಡುತ್ತಿರುವುದು ಇತರ ಮಾಸಗಳಿಗೂ ವ್ಯಾಪಿಸುತ್ತಿರುವ ಬಿಸಿಲುಗಾಲದ ಕುರಿತು.

"ಹಿಂದೆ ಇದು [ಉರಿ ಸೆಖೆ] ಒಂದು ಅಥವಾ ಎರಡು ದಿನಗಳವರೆಗೆ ಮಾತ್ರ ಇರುತ್ತಿತ್ತು" ಎಂದು ಚುರೂ ಪಟ್ಟಣದ ನಿವಾಸಿ ಮತ್ತು ಹತ್ತಿರದ ಸಿಕಾರ್ ಜಿಲ್ಲೆಯ ಎಸ್. ಕೆ. ಸರ್ಕಾರಿ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಪ್ರೊ. ಹೆಚ್. ಆರ್. ಇಸ್ರಾನ್ ಹೇಳುತ್ತಾರೆ, ಅವರನ್ನು ಅನೇಕರು ಮಾರ್ಗದರ್ಶಕರಾಗಿ ಪರಿಗಣಿಸುತ್ತಾರೆ. “ಈಗ ಅಂತಹ ಉರಿ ಸೆಖೆ ಹಲವು ದಿನಗಳ ತನಕ ವ್ಯಾಪಿಸಿದೆ. ಒಟ್ಟಾರೆ ಬೇಸಿಗೆಯೂ ದೀರ್ಘವಾಗುತ್ತಿದೆ”

‌“ಅಂದು ಮಧ್ಯಾಹ್ನ ನಾವು ರಸ್ತೆಯಲ್ಲಿ ನಡೆಯಲು ಸಾಧ್ಯವಾಗಿರಲಿಲ್ಲ. ನಮ್ಮ ಚಪ್ಪಲಿಗಳು ರಸ್ತೆಗೆ ಅಂಟಿಕೊಳ್ಳುತ್ತಿದ್ದವು.” ಜೂನ್ 2019ರ ಘಟನೆಯನ್ನು ಅಮೃತಾ ಚೌಧರಿ ಹೀಗೆ ನೆನಪಿಸಿಕೊಳ್ಳುತ್ತಾರೆ. ಸುಜನ್‌ಘರ್‌ನಲ್ಲಿ ಟೈ ಎಂಡ್‌ ಡೈ ಗಾರ್ಮೆಂಟ್‌ಗಳನ್ನು ಉತ್ಪಾದಿಸುವ ಸಂಸ್ಥೆಯನ್ನು ನಡೆಸುವ ದಿಶಾ ಶೇಖಾವತಿ ಎಂಬ ಸಂಘಟನೆಯನ್ನು ನಡೆಸುತ್ತಿರುವ ಚೌಧರಿಯವರೂ ಅಲ್ಲಿನ ಇತರರಂತೆ ಬೇಸಿಗೆ ಇನ್ನಷ್ಟು ದೀರ್ಘವಾಗುತ್ತಿರುವ ಕುರಿತಾಗಿಯೇ ಹೆಚ್ಚು ಕಾಳಜಿ ಹೊಂದಿದ್ದಾರೆ. “ಈ ಉಷ್ಣಪ್ರದೇಶದಲ್ಲೂ ಸೆಕೆ ಹೆಚ್ಚಾಗುತ್ತಿದೆ ಮತ್ತು ಸೆಕೆಗಾಲ ಬೇಗನೆ ಪ್ರಾರಂಭವಾಗುತ್ತಿದೆ.”

ಗುಡಾವರಿ ಗ್ರಾಮದ ಭಗವಾನಿ ದೇವಿಯವರ ಅಂದಾಜಿನಂತೆ “ಬೇಸಿಗೆ ಕಾಲ ಒಂದೂವರೆ ತಿಂಗಳುಗಳಷ್ಟು ವಿಸ್ತರಿಸಿದೆ.” ಅವರಂತೆಯೇ ಚುರೂ ಜಿಲ್ಲೆಯ ಅನೇಕ ಗ್ರಾಮಸ್ಥರು ಹೇಗೆ ಬೇಸಿಗೆ ಕಾಲವು ಚಳಿ ಮತ್ತು ಮಳೆಗಾಲ ಎರಡನ್ನೂ ತಿನ್ನುತ್ತಿದೆ ಮತ್ತು ಹವಾಮಾನವು ಹೇಗೆ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುತ್ತಿದೆ ಎನ್ನುವುದನ್ನು ಸಹ ವಿವರಿಸುತ್ತಾರೆ. ಬೇಸಿಗೆಯು ಮೊದಲೇ ಪ್ರಾರಂಭವಾಗುವುದರಿಂದಾಗಿ ಚಳಿಯ ದಿನಗಳು ಕಡಿಮೆಯಾಗಿವೆ ಜೊತೆಗೆ ಮಳೆಗಾಲ ನಿಧಾನವಾಗಿ ಪ್ರಾರಂಭವಾಗುವುದರಿಂದ ಮಳೆಗಾಲದ ಅವಧಿಯೂ ಕಡಿಮೆಯಾಗಿದೆ. ಈ ರೀತಿಯಾಗಿ ಇಲ್ಲಿನ ಕ್ಯಾಲೆಂಡರ್‌ನ ದಿನಗಳು ಬೇಸಿಗೆಯ ಪಾಲಾಗುತ್ತಿವೆ.

ಸದ್ಯದ ತಾಪಮಾನ 51 ಡಿಗ್ರಿ ಸೆಲ್ಸಿಯಸ್, ಅಥವಾ ಕಳೆದ ತಿಂಗಳಿನ 50 ಡಿಗ್ರಿ ಸೆಲ್ಸಿಯಸ್, ಇವೆರಡೂ ಒಂದೇ ವಾರದಲ್ಲಿ ಸಂಭವಿಸಿಲ್ಲ. ಹವಾಮಾನದಲ್ಲಿ ಕಾಣುತ್ತಿರುವ ಈ ಕ್ರಮೇಣ ಬೆಳವಣಿಗೆಯ ಕುರಿತು ಜನರು ಚಿಂತಿತರಾಗಿದ್ದಾರೆ.

*****

2019ರ ಜೂನ್‌ 1ರಿಂದ ಸೆಪ್ಟಂಬರ್‌ 30ರ ನಡುವೆ ಚುರೂವಿನಲ್ಲಿ 369 ಮಿಲಿ ಮೀಟರ್‌ ಮಳೆಯಾಗಿದೆ. ಇದು ಅಲ್ಲಿ ಸಾಮಾನ್ಯವಾಗಿ ಬೀಳುವ ಮುಂಗಾರು ತಿಂಗಳುಗಳಲ್ಲಿ ಬೀಳುವ 314 ಮಿಲಿ ಮೀಟರ್‌ ಮಳೆಗಿಂತ ಒಂದಿಷ್ಟು ಹೆಚ್ಚು. ಭಾರತದ ಅತಿದೊಡ್ಡ ಮತ್ತು ಶುಷ್ಕ ರಾಜ್ಯವಾದ ರಾಜಸ್ಥಾನ್‌ ದೇಶದ ಒಟ್ಟು 10.4 ಶೇಕಡಾ ಭೂಮಿಯನ್ನು ಹೊಂದಿದೆ. ಇದು ಒಣ ಮತ್ತು ಅರೆ ಒಣ ಪ್ರದೇಶಗಳನ್ನು ಹೊಂದಿದೆ. ಇಲ್ಲಿನ ವಾರ್ಷಿಕ ಸರಾಸರಿ ಮಳೆಪ್ರಮಾಣ (ಅಧಿಕೃತ ಅಂಕಿ-ಅಂಶಗಳ ಪ್ರಕಾರ) ಸುಮಾರು 574 ಮಿಲಿ ಮೀಟರ್‌.

In the fields that Bajrang Goswami and his wife Raj Kaur cultivate as sharecroppers outside Gajuvas village in Taranagar tehsil
PHOTO • Sharmila Joshi
In the fields that Bajrang Goswami and his wife Raj Kaur cultivate as sharecroppers outside Gajuvas village in Taranagar tehsil
PHOTO • Sharmila Joshi
In the fields that Bajrang Goswami and his wife Raj Kaur cultivate as sharecroppers outside Gajuvas village in Taranagar tehsil
PHOTO • Sharmila Joshi

‌ತಾರಾ ನಗರ್‌ ತೆಹಸಿಲ್ ಗಜುವಾಸ್‌ ಗ್ರಾಮದ ಹೊರವಲಯದ ಹೊಲದಲ್ಲಿ ಗೇಣಿ ಆಧಾರದಲ್ಲಿ ಬೇಸಾಯ ನಡೆಸುವ ದಂಪತಿಗಳಾದ ಬಜರಂಗ್‌ ಗೋಸ್ವಾಮಿ ಮತ್ತು ರಾಜ್‌ ಕೌರ್

ರಾಜಸ್ಥಾನದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಸರಿಸುಮಾರು 70 ದಶಲಕ್ಷ ಜನರಲ್ಲಿ ಸುಮಾರು 75 ಪ್ರತಿಶತದಷ್ಟು ಜನರಿಗೆ ಕೃಷಿ ಮತ್ತು ಜಾನುವಾರು ಸಾಕಣೆ ಮುಖ್ಯ ಉದ್ಯೋಗಗಳಾಗಿವೆ. ಚುರೂ ಜಿಲ್ಲೆಯಲ್ಲಿನ ಸುಮಾರು 2.5 ಮಿಲಿಯನ್ ಜನರಲ್ಲಿ 72 ಪ್ರತಿಶತದಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ - ಅಲ್ಲಿ ಹೆಚ್ಚಿನ ಕೃಷಿ ಮಳೆಯಾಧಾರಿತ.

ಕಾಲ ಕಳೆದಂತೆ ಮಳೆಯ ಮೇಲಿನ ಈ ಅವಲಂಬನೆಯನ್ನು ಕಡಿಮೆ ಮಾಡಲು ಇಲ್ಲಿನ ಅನೇಕರು ಪ್ರಯತ್ನಿಸಿದ್ದಾರೆ. "1990ರ ದಶಕದಿಂದಲೂ, ಇಲ್ಲಿ ಬೋರ್‌ವೆಲ್‌ಗಳನ್ನು ಅಗೆಯುವ ಪ್ರಯತ್ನಗಳು ನಡೆದಿವೆ [500-600 ಅಡಿ ಆಳದವರೆಗೆ], ಆದರೆ [ಅಂತರ್ಜಲ] ಲವಣಾಂಶದಿಂದಾಗಿ ಅದು ಯಶಸ್ವಿಯಾಗಲಿಲ್ಲ" ಎಂದು ಪ್ರೊ. ಇಸ್ರಾನ್ ಹೇಳುತ್ತಾರೆ. ಜಿಲ್ಲೆಯ ಆರು ತಹಸಿಲ್‌ಗಳ 899 ಹಳ್ಳಿಗಳಲ್ಲಿ “ಸ್ವಲ್ಪ ಸಮಯದವರೆಗೆ, ಕೆಲವು ರೈತರು ನೆಲಗಡಲೆಯನ್ನು [ಬೋರ್‌ವೆಲ್ ನೀರನ್ನು ಬಳಸಿ] ಎರಡನೆಯ ಬೆಳೆಯಾಗಿ ಬೆಳೆದರು." "ಆದರೆ ನಂತರ ಭೂಮಿ ಅತಿಯಾಗಿ ಒಣಗಿತು ಮತ್ತು ಕೆಲವು ಹಳ್ಳಿಗಳನ್ನು ಹೊರತುಪಡಿಸಿ ಹೆಚ್ಚಿನ ಸ್ಥಳಗಳಲ್ಲಿ ಬೋರ್‌ವೆಲ್‌ಗಳು ಮುಚ್ಚಲ್ಪಟ್ಟವು."

ರಾಜಸ್ಥಾನದ ಒಟ್ಟು ಬಿತ್ತನೆ ಪ್ರದೇಶದ ಶೇಕಡಾ 38ರಷ್ಟು (ಅಥವಾ 62,94,000 ಹೆಕ್ಟೇರ್) ಪ್ರದೇಶದಲ್ಲಿ ನೀರಾವರಿಯಿದೆಯೆಂದು ರಾಜಸ್ಥಾನ್ ಸ್ಟೇಟ್‌ ಆಕ್ಷನ್‌ ಪ್ಲಾನ್‌ ಫಾರ್‌ ಕ್ಲೈಮೇಟ್‌ ಚೇಂಜ್ ( ಆರ್‌ಎಸ್‌ಎಪಿಸಿಸಿ , 2010) ಹೇಳುತ್ತದೆ. ಚುರೂವಿನಲ್ಲಿ ಅದು ಕೇವಲ ಶೇಕಡಾ 8ರಷ್ಟಿದೆ. ಈಗಿನ್ನೂ ಫೂರ್ಣಗೊಳ್ಳುತ್ತಿರುವ ಚೌಧರಿ ಕುಂಭರಂ ಲಿಫ್ಟ್ ಕಾಲುವೆ ಜಿಲ್ಲೆಯ ಕೆಲವು ಹಳ್ಳಿಗಳು ಮತ್ತು ಹೊಲಗಳಿಗೆ ನೀರನ್ನು ಒದಗಿಸುತ್ತಿದ್ದರೆ, ಚುರೂವಿನ ಕೃಷಿ ಮತ್ತು ಅದರ ನಾಲ್ಕು ಪ್ರಮುಖ ಖಾರಿಫ್ ಬೆಳೆಗಳಾದ ಭಜ್ರಾ, ಮೂಂಗ್, ಮೊಥ್ ಮತ್ತು ಗವರ್ ಬೀನ್ಸ್ - ಹೆಚ್ಚಾಗಿ ಮಳೆಯಾಧರಿತ‌ವಾಗಿವೆ.

ಆದರೆ ಕಳೆದ 20 ವರ್ಷಗಳಲ್ಲಿ ಮಳೆಯಲ್ಲಿ ಬದಲಾವಣೆಯೂ ಕಂಡುಬಂದಿದೆ. ಚುರೂವಿನ ಜನರು ಎರಡು ದೊಡ್ಡ ಬದಲಾವಣೆಗಳ ಬಗ್ಗೆಯೂ ಮಾತನಾಡುತ್ತಾರೆ: ಮಳೆಗಾಲದ ತಿಂಗಳುಗಳು ಮುಂದಕ್ಕೆ ಹೋಗುತ್ತಿವೆ ಮತ್ತು ಮಳೆ ಅಕಾಲಿಕವಾಗುತ್ತಿದೆ. ಕೆಲವು ಸ್ಥಳಗಳಲ್ಲಿ ತೀವ್ರ ಮಳೆಯಾದರೆ ಮತ್ತು ಕೆಲವೆಡೆ ಮಳೆಯೇ ಇಲ್ಲದ ಸ್ಥಿತಿ ಅಲ್ಲಿ ಏರ್ಪಟ್ಟಿದೆ.

ಹಿರಿಯ ರೈತರು ಹಿಂದಿನ ಕಾಲದಲ್ಲಿ ಸಕಾಲಕ್ಕೆ ಬರುತ್ತಿದ್ದ ಮಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಾರೆ. “ಆಗೆಲ್ಲ ಜೂನ್‌ ಮತ್ತು ಜುಲೈ ತಿಂಗಳುಗಳಲ್ಲಿ ಆಕಾಶದಲ್ಲಿ ಮಿಂಚು ಬಂದರೆ ಮಳೆ ಬಂತೆಂದು ಅರ್ಥ ಆಗ ನಾವು ಬೇಗನೆ ರೊಟ್ಟಿ ಮಾಡಿಕೊಂಡು ಹೊಲದಿಂದ ಗುಡಿಸಲು ಸೇರಿಕೊಳ್ಳುತ್ತಿದ್ದೆವು.” ಎಂದು ಜಾಟ್ ಸಮುದಾಯಕ್ಕೆ ಸೇರಿದ 59 ವರ್ಷದ ರೈತ ಗೋವರ್ಧನ್ ಸಹಾರನ್ ಹೇಳುತ್ತಾರೆ. ಅವರ ಕುಟುಂಬವು ಗಜುವಾಸ್ ಗ್ರಾಮದಲ್ಲಿ 180 ಬಿಘಾ (ಸುಮಾರು 120 ಎಕರೆ) ಭೂಮಿಯನ್ನು ಹೊಂದಿದೆ. ಚುರೂ ರೈತರಲ್ಲಿ ಜಾಟ್‌, ಚೌಧರಿಗಳು ಇವೆರಡೂ ಒಬಿಸಿ ಸಮುದಾಯಗಳು ಇಲ್ಲಿನ ಮುಖ್ಯ ಕೃಷಿ ಸಮುದಾಯಗಳಾಗಿವೆ. "ಇತ್ತೀಚಿನ ದಿನಗಳಲ್ಲಿ ಮಿಂಚು ಆಗಾಗ್ಗೆ ಬಡಿಯುತ್ತದೆ, ಆದರೆ ಮಳೆ ಬರುವುದಿಲ್ಲ" ಎಂದು ಸಹಾರನ್ ಹೇಳುತ್ತಾರೆ.

Bajrang Goswami and Raj Kaur (left) say their 'back has burnt with the heat', while older farmers like Govardhan Saharan (right) speak of the first rains of a different past
PHOTO • Sharmila Joshi
Bajrang Goswami and Raj Kaur (left) say their 'back has burnt with the heat', while older farmers like Govardhan Saharan (right) speak of the first rains of a different past
PHOTO • Sharmila Joshi

ಭಜರಂಗ್ ಗೋಸ್ವಾಮಿ ಮತ್ತು ರಾಜ್ ಕೌರ್ (ಎಡ) 'ಶಾಖದಿಂದಾಗಿ ನನ್ನ ಬೆನ್ನು ಸುಟ್ಟು ಹೋಗಿದೆ' ಎಂದು ಹೇಳಿದರೆ, ಹಿರಿಯ ಕೃಷಿಕರಾದ ಗೋವರ್ಧನ್ ಸಹಾರನ್ (ಬಲ) ಹಿಂದಿನ ಕಾಲದ ಬೇರೆ ಬೇರೆ ವರ್ಷಗಳ ಮೊದಲ ಮಳೆಯ ಬಗ್ಗೆ ಮಾತನಾಡುತ್ತಾರೆ

“ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಉತ್ತರದಲ್ಲಿ ಮೋಡಗಳನ್ನು ಕಂಡ ಕೂಡಲೇ ಮಳೆ ಬರಲಿದೆ ಎಂದು ಹೇಳಬಹುದಿತ್ತು, ಜೊತೆಗೆ ಅರ್ಧ ಗಂಟೆಯಲ್ಲಿ ಮಳೆಯೂ ಬರುತ್ತಿತ್ತು,” ಎಂದು ನೆರೆಯ ಸಿಕಾರ್ ಜಿಲ್ಲೆಯ ಸದಿನ್ಸಾರ್ ಗ್ರಾಮದ 80 ವರ್ಷದ ನರೈನ್ ಪ್ರಸಾದ್ ಹೇಳುತ್ತಾರೆ. “ಅದೇ ಈಗ ಆಕಾಶದಲ್ಲಿ ಮೋಡಗಳಿದ್ದರೂ ಹಾಗೇ ತೇಲಿ ಹೋಗುತ್ತವೆ” ಎನ್ನುತ್ತಾರೆ ಅವರು. ತನ್ನ ಹೊಲದಲ್ಲಿದ್ದ ಮಂಚದ ಮೇಲೆ ಕುಳಿತು ಮಾತನಾಡುತ್ತಿದ್ದ ಪ್ರಸಾದ್‌ ಅವರು ತನ್ನ 13 ಬಿಘಾ ಜಮೀನಿನಲ್ಲಿ (ಸುಮಾರು 8 ಎಕರೆ) ಒಂದು ದೊಡ್ಡ ಕಾಂಕ್ರೆಟ್‌ ತೊಟ್ಟಿಯನ್ನು ಮಳೆ ನೀರು ಸಂಗ್ರಹಕ್ಕಾಗಿ ಕಟ್ಟಿದ್ದಾರೆ. (ನಾನು ನವೆಂಬರ್‌ 2019ರಲ್ಲಿ ಅವರನ್ನು ಭೇಟಿಯಾಗಲು ಹೋಗಿದ್ದಾಗ ತೊಟ್ಟಿಯು ಖಾಲಿಯಿತ್ತು.)

ಈಗ ನಾವು ಸಜ್ಜೆ ಬಿತ್ತುವ ಸಮಯವಾದ ಜೂನ್‌ ಕೊನೆಯಲ್ಲಿ ಮೊದಲ ಮಳೆಯಾಗುವ ಬದಲು, ವಾಡಿಕೆಯ ಮಳೆ ವಾರಗಳಷ್ಟು ತಡವಾಗಿ ಬರುತ್ತದೆ ಮತ್ತು ಎಂದಿಗಿಂತ ಒಂದು ತಿಂಗಳು ಮೊದಲೇ ನಿಂತುಹೋಗುತ್ತದೆ. ಅಗಸ್ಟ್‌ ಕೊನೆಯ ವಾರದೊಳಗೆ ಇಲ್ಲಿ ಮಳೆಗಾಲ ಮುಗಿದು ಹೋಗುತ್ತದೆಂದು ಇಲ್ಲಿನ ರೈತರು ಹೇಳುತ್ತಾರೆ.

ಇದರಿಂದ ಬಿತ್ತನೆ ಮಾಡಲು ಮತ್ತು ಬೆಳೆಯ ಕಾಲ ನಿಗದಿ ಮಾಡಲು ಬಹಳ ತೊಂದರೆಯಾಗುತ್ತದೆ. “ನಮ್ಮ ತಾತನ ಕಾಲದಲ್ಲಿ ಅವರಿಗೆ ಗಾಳಿ, ನಕ್ಷತ್ರಗಳ ಸ್ಥಾನ, ಹಕ್ಕಿಯ ಹಾಡು ಇವೆಲ್ಲ ತಿಳಿಯುತ್ತಿತ್ತು ಮತ್ತು ಅದಕ್ಕೆ ಅನುಗುಣವಾಗಿ ಅವರು ತಮ್ಮ ಬೇಸಾಯದ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದ್ದರು,” ಎನ್ನುತ್ತಾರೆ ಅಮೃತಾ ಚೌಧರಿ.

“ಈಗ ಸಂಪೂರ್ಣ ವ್ಯವಸ್ಥೆಯೇ ಛಿದ್ರಗೊಂಡಿದೆ” ಎನ್ನುತ್ತಾರೆ ಬರಹಗಾರ-ರೈತ ದುಲಾರಾಮ್‌ ಸಹರನ್‌, ಒಟ್ಟಾರೆ ಎಲ್ಲವನ್ನೂ ಸರಳವಾಗಿ ಹೇಳುವ ಸಹಾರನ್ ಅವರ ಕೂಡು ಕುಟುಂಬವು ತಾರಾನಗರ್ ಬ್ಲಾಕ್‌ನ ಭರಂಗ್ ಗ್ರಾಮದಲ್ಲಿ ಸುಮಾರು 200 ಬಿಘಾಗಳಷ್ಟು ಭೂಮಿಯನ್ನು ಹೊಂದಿದ್ದಾರೆ.

ಮಾನ್ಸೂನ್ ತಡವಾಗಿ ಬಂದು ಬೇಗನೆ ಹೊರಡುವುದರ ಜೊತೆಗೆ, ವಾರ್ಷಿಕ ಸರಾಸರಿ ಸಾಕಷ್ಟು ಸ್ಥಿರವಾಗಿದ್ದರೂ ಸಹ ಮಳೆಯ ತೀವ್ರತೆಯು ಕಡಿಮೆಯಾಗಿದೆ. "ಈಗ ಮಳೆಯ ಬಲ ಕಡಿಮೆಯಾಗಿದೆ" ಎಂದು ಗಜುವಾಸ್‌ನಲ್ಲಿ 12 ಬಿಘಾ ಜಮೀನಿನಲ್ಲಿ ಬೇಸಾಯ ಮಾಡುವ ಧರಂಪಾಲ್ ಸಹಾರನ್ ಹೇಳುತ್ತಾರೆ. "ಅದು ಬರುತ್ತದೆಯೋ, ಬರುವುದಿಲ್ಲವೋ, ಯಾರಿಗೂ ತಿಳಿಯುವುದಿಲ್ಲ." ಮತ್ತು ಮಳೆಯ ಹರಡುವಿಕೆಯೂ ಅನಿಯಮಿತವಾಗಿದೆ. "ಹೊಲದ ಒಂದು ಭಾಗದಲ್ಲಿ ಮಳೆ ಬೀಳುವಾಗ, ಅದೇ ಹೊಲದ ಇನ್ನೊಂದು ಭಾಗದಲ್ಲಿ ಬೀಳುತ್ತಿರುವುದಿಲ್ಲ" ಎಂದು ಅಮೃತ ಹೇಳುತ್ತಾರೆ.

Left: Dharampal Saharan of Gajuvas village says, 'I am not sowing chana because there is no rain after September'. Right: Farmers in Sadinsar village speak of the changing weather – Raghubir Bagadiya (also a retired army captain), Narain Prasad (former high school lecturer) and Shishupal Narsara (retired school principal)
PHOTO • Sharmila Joshi
Left: Dharampal Saharan of Gajuvas village says, 'I am not sowing chana because there is no rain after September'. Right: Farmers in Sadinsar village speak of the changing weather – Raghubir Bagadiya (also a retired army captain), Narain Prasad (former high school lecturer) and Shishupal Narsara (retired school principal)
PHOTO • Sharmila Joshi

ಎಡ: 'ಸೆಪ್ಟೆಂಬರ್ ನಂತರ ಮಳೆ ಬಾರದ ಕಾರಣ ನಾನು ಕಡಲೆ ಬಿತ್ತನೆ ಮಾಡುತ್ತಿಲ್ಲ' ಎಂದು ಗಜುವಾಸ್ ಗ್ರಾಮದ ಧರಂಪಾಲ್ ಸಹಾರನ್ ಹೇಳುತ್ತಾರೆ. ಬಲ: ಬದಲಾಗುತ್ತಿರುವ ಹವಾಮಾನದ ಬಗ್ಗೆ ಮಾತನಾಡುತ್ತಿರುವ ಸದಿನ್ಸಾರ್ ಗ್ರಾಮದ ರೈತರು - ರಘುಬೀರ್ ಬಾಗಡಿಯಾ (ನಿವೃತ್ತ ಸೇನಾ ನಾಯಕ), ನರೈನ್ ಪ್ರಸಾದ್ (ಮಾಜಿ ಪ್ರೌಢಶಾಲಾ ಉಪನ್ಯಾಸಕರು) ಮತ್ತು ಶಿಶುಪಾಲ್ ನರಸಾರ (ನಿವೃತ್ತ ಶಾಲಾ ಪ್ರಾಂಶುಪಾಲರು)

ಆರ್‌ಎಸ್‌ಎಪಿಸಿಸಿ 1951ರಿಂದ 2007ರವರೆಗೆ ವಿಪರೀತ ಮಳೆಯಾದ ನಿದರ್ಶನಗಳನ್ನು ಸಹ ಉಲ್ಲೇಖಿಸುತ್ತದೆ. ಆದರೆ, ಅಧ್ಯಯನಗಳನ್ನು ಉಲ್ಲೇಖಿಸಿ, ಒಟ್ಟಾರೆ ಮಳೆಯು ರಾಜ್ಯದಲ್ಲಿ ಕಡಿಮೆಯಾಗಲಿದೆ ಮತ್ತು "ಹವಾಮಾನ ಬದಲಾವಣೆಯಿಂದಾಗಿ ಭೂಮಿ ಮತ್ತು ವಾತಾವರಣದಿಂದ ನೀರು ಗಾಳಿಯನ್ನು ಸೇರುವುದು (evapo-transpiration) ಹೆಚ್ಚಾಗುತ್ತದೆ" ಎಂದು ಅದು ಹೇಳಿದೆ.

ಚುರೂವಿನ ರೈತರು ಮೊದಲಿನಿಂದಲೂ ಮುಂಗಾರಿನ ನಂತರದ ಅಕ್ಟೋಬರ್‌ ಕೊನೆ ಮತ್ತು ಜನವರಿ ಹಾಗೂ ಫೆಬ್ರವರಿಯ ಕೆಲವು ಮಳೆಗಳ ಮೇಲೂ ಅವಲಂಬಿತರಾಗಿದ್ದಾರೆ.ಇದು ರಬಿ ಬೆಳೆಯಾದ ಬಾರ್ಲಿ ಅಥವಾ ನೆಲಗಡಲೆಗೆ ನೀರುಣಿಸುತ್ತಿತ್ತು. ಈ ಮಳೆ-“ಚಕ್ರಾವತ್‌ ಮಳೆಯು ಯುರೋಪ್‌ ಮತ್ತು ಅಮೇರಿಕಾ ನಡುವಿನ ಸಮುದ್ರದಿಂದ ಪಾಕಿಸ್ಥಾನ ಗಡಿಯುದ್ದಕ್ಕೂ ಬರುತ್ತದೆ” ಎನ್ನುತ್ತಾರೆ ಹರ್‌ದಯಾಲ್‌ ಜೀ – ಈಗ ಈ ಮಳೆಯೂ ಬಹುತೇಕ ಇಲ್ಲವಾಗಿದೆ.

ಅದೇ ಮಳೆ ಕಡಲೆ ಬೆಳೆಗೂ ನೀರೊದಗಿಸುತ್ತಿತ್ತು. ತಾರಾನಗರವನ್ನು ದೇಶದ ʼಕಡಲೆಯ ಬಟ್ಟಲುʼ ಎಂದು ಕರೆಯುತ್ತಿದ್ದರು. ಇದು ಇಲ್ಲಿನ ರೈತರಿಗೆ ಹೆಮ್ಮೆಯ ವಿಷಯವಾಗಿತ್ತೆಂದು ದುಲಾರಾಮ್‌ ಹೇಳುತ್ತಾರೆ. “ಕಡಲೆಯ ಇಳುವರಿ ತುಂಬಾ ಚೆನ್ನಾಗಿರುತ್ತಿತ್ತು ನಾವು ಅಂಗಳದ ತುಂಬಾ ಕಡಲೆ ರಾಶಿ ಮಾಡುತ್ತಿದ್ದೆವು” ಈಗ ಆ ಬಟ್ಟಲು ಬಹುತೇಕ ಖಾಲಿಯಾಗಿದೆ. “ಸುಮಾರು 2007ರ ನಂತರ ಸೆಪ್ಟಂಬರ್‌ ನಂತರದ ಮಳೆಯ ಕೊರತೆಯ ಕಾರಣದಿಂದಾಗಿ ನಾನು ಕಡಲೆ ಬಿತ್ತುವುದನ್ನೇ ಬಿಟ್ಟುಬಿಟ್ಟೆ” ಎನ್ನುತ್ತಾರೆ ಧರಮ್‌ಪಾಲ್.‌

ನವೆಂಬರ್ ವೇಳೆಗೆ ತಾಪಮಾನ ಕಡಿಮೆಯಾಗಲು ಪ್ರಾರಂಭಿಸಿದಾಗ ಚುರೂವಿನ ಕಡಲೆ ಬೆಳೆ ಚೆನ್ನಾಗಿ ಮೊಳಕೆಯೊಡೆಯುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಚಳಿಗಾಲವೂ ಬದಲಾಗಿದೆ.

*****

1901ರಿಂದ 1999ರವರೆಗೆ ಸುಮಾರು ಒಂದು ಶತಮಾನದಲ್ಲಿ ಜಮ್ಮು ಮತ್ತು ಕಾಶ್ಮೀರದ ನಂತರ, ಭಾರತದಲ್ಲಿ ಗರಿಷ್ಠ ಸಂಖ್ಯೆಯ ಶೀತ ಮಾರುತಗಳು ರಾಜಸ್ಥಾನದಲ್ಲಿ ಸಂಭವಿಸಿವೆ (1999ರ ನಂತರ ಇದರ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ) ಎಂದು ಆರ್‌ಎಸ್‌ಎಪಿಸಿಸಿ ವರದಿ ತಿಳಿಸಿದೆ. ರಾಜಸ್ಥಾನವು ಗರಿಷ್ಟ ತಾಪಮಾನವನ್ನು ದಾಖಲಿಸುತ್ತಿರುವಂತೆಯೇ ಕನಿಷ್ಟ ತಾಪಮಾನದ ಪ್ರವೃತ್ತಿಯನ್ನೂ ತೋರಿಸುತ್ತಿದೆ. 2020ರ ಫೆಬ್ರವರಿಯಲ್ಲಿ ಭಾರತದ ಬಯಲು ಪ್ರದೇಶಗಳಲ್ಲಿ ದಾಖಲಾದ ಕನಿಷ್ಟ ತಾಪಮಾನದಲ್ಲಿ ಚುರೂ 4.1 ಡಿಗ್ರಿ ತಾಪಮಾನ ದಾಖಲಿಸಿತ್ತು.

ಅದೇನೇ ಇದ್ದರೂ, ಚುರುವಿನ ಅನೇಕರಿಗೆ, ಚಳಿಗಾಲವು ಈಗ ಹೊಸದೇನಲ್ಲ. "ನಾನು ಸ‍ಣ್ಣವನಿದ್ದಾಗ (ಸುಮಾರು 50 ವರ್ಷಗಳ ಹಿಂದೆ), ನಾವು ನವೆಂಬರ್ ಆರಂಭದಲ್ಲಿ ಗಾದಿಯನ್ನು ಬಳಸಬೇಕಾಗಿತ್ತು ... ನಾನು ಬೆಳಿಗ್ಗೆ 4 ಗಂಟೆಗೆ ಜಮೀನಿಗೆ ಹೋಗುವಾಗ ಕಂಬಳಿ ಹೊದೆಯುತ್ತಿದ್ದೆ" ಎಂದು ಗಜುವಾಸ್ ಗ್ರಾಮದ ಗೋವರ್ಧನ್ ಸಹರನ್ ಹೇಳುತ್ತಾರೆ. "ನಾನು ಉಡುಪನ್ನು ಧರಿಸುತ್ತೇನೆ - ಈಗ 11ನೇ ತಿಂಗಳಲ್ಲಿ ತುಂಬಾ ಸೆಕೆಯಿರುತ್ತದೆ" ಖೇಜ್ರಿ ಮರಗಳ ನಡುವೆ ಕತ್ತರಿಸಿದ ನವಣೆ ಕೊಯ್ಲು ಮಾಡಿದ್ದ ಹೊಲದಲ್ಲಿ ಕುಳಿತು ಹೇಳುತ್ತಾರೆ.

Prof. Isran (left) of Churu town says: 'The entire summer has expanded'. Amrita Choudhary (right) of the Disha Shekhawati organisation in Sujangarh says, 'Even in this hot region, the heat is increasing'
PHOTO • Sharmila Joshi
Prof. Isran (left) of Churu town says: 'The entire summer has expanded'. Amrita Choudhary (right) of the Disha Shekhawati organisation in Sujangarh says, 'Even in this hot region, the heat is increasing'
PHOTO • Sharmila Joshi

ಚುರು ಪಟ್ಟಣದ ಪ್ರೊ.ಇಸ್ರಾನ್ (ಎಡ) ಹೇಳುತ್ತಾರೆ: 'ಸಂಪೂರ್ಣ ಬೇಸಿಗೆ ವಿಸ್ತಾರಗೊಂಡಿದೆ'. ಸುಜನ್‌ಘರ್‌ನ ದಿಶಾ ಶೇಖಾವತಿ ಸಂಘಟನೆಯ ಅಮೃತ ಚೌಧರಿ ಹೇಳುತ್ತಾರೆ (ಬಲ), 'ಈ ಉಷ್ಣ ಪ್ರದೇಶದಲ್ಲಿಯೂ ಸಹ ಸೆಕೆ ಹೆಚ್ಚುತ್ತಿದೆ'

"ಹಿಂದೆ, ನನ್ನ ಸಂಸ್ಥೆ ಮಾರ್ಚ್‌ನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಿದರೆ, ನಾವು ಛಳಿಗೆ ಸ್ವೆಟರ್‌ಗಳನ್ನು ಧರಿಸಬೇಕಾಗುತ್ತಿತ್ತು" ಎಂದು ಅಮೃತಾ ಚೌಧರಿ ಹೇಳುತ್ತಾರೆ. “ಆದರೆ ಈಗ ಫ್ಯಾನ್‌ ಇರಲೇಬೇಕು. ಅಲ್ಲದೇ ಇದೆಲ್ಲವೂ ವರ್ಷದಿಂದ ವರ್ಷಕ್ಕೆ ಬಹಳ ಅನಿರೀಕ್ಷಿತ ರೀತಿಯಲ್ಲಿ ಬದಲಾಗುತ್ತಿರುತ್ತದೆ.”

ಸುಜನ್‌ಘರ್‌ ಪಟ್ಟಣದಲ್ಲಿನ ಅಂಗನವಾಡಿಯಲ್ಲಿ ಕೆಲಸ ಮಾಡುವ ಸುಶೀಲಾ ಪುರೋಹಿತ್‌ 3-5 ವರ್ಷದ ಮಕ್ಕಳ ಒಂದು ಸಣ್ಣ ಗುಂಪನ್ನು ತೋರಿಸುತ್ತಾ, "ಅವರು ಚಳಿಗಾಲದ ಬಟ್ಟೆ ತೊಟ್ಟಿದ್ದರು. ಆದರೆ ನವೆಂಬರ್‌ನಲ್ಲೂ ಸೆಕೆಯಿದೆ. ಅವರಿಗೆ ಯಾವ ರೀತಿಯ ಬಟ್ಟೆ ತೊಡಲು ಹೇಳಬೇಕೆನ್ನುವುದರ ನಮಗೆ ಖಚಿತವಾಗಿ ತಿಳಿಯುತ್ತಿಲ್ಲ."

ಚುರೂವಿನ ಪ್ರಸಿದ್ಧ ಅಂಕಣಕಾರ ಮತ್ತು ಬರಹಗಾರರಾದ 83 ವರ್ಷದ ಮಾಧವ್ ಶರ್ಮಾ ಇದನ್ನು ಹೀಗೆ ಒಂದೇ ವಾಕ್ಯದಲ್ಲಿ ಹೇಳುತ್ತಾರೆ: "ಕಂಬಲ್‌ ಔರ್‌ ಕೋಟ್‌ ಕಾ ಜಮಾನಾ ಚಲಾ ಗಯಾ." ಕಂಬಳಿ ಮತ್ತು ಕೋಟುಗಳ ದಿನಗಳು (ನವೆಂಬರ್‌ನ) ಮುಗಿದಿವೆ.

*****

ವಿಸ್ತರಿಸುತ್ತಿರುವ ಬೇಸಿಗೆ ಕಾಲವು ಕಂಬಳಿ-ಕೋಟಿನ ದಿನಗಳನ್ನು ನುಂಗಿದೆ. "ಹಿಂದೆ, ನಾವು ನಾಲ್ಕು ಭಿನ್ನ ಋತುಗಳನ್ನು ಕಾಣುತ್ತಿದ್ದೆವು [ವಸಂತವೂ ಸೇರಿದಂತೆ]" ಎಂದು ಮಾಧವ್‌ ಜೀ ಹೇಳುತ್ತಾರೆ. "ಈಗ ಕೇವಲ ಒಂದು ಋತುವಿರುತ್ತದೆ ಅದುವೇ ಬೇಸಿಗೆ, ಇದು ಎಂಟು ತಿಂಗಳ ಕಾಲದವರೆಗೂ ಇರುತ್ತದೆ. ಇದು ಬಹಳ ದೀರ್ಘಕಾಲದ ಬದಲಾವಣೆಯಾಗಿದೆ"

"ಹಿಂದೆ, ಮಾರ್ಚ್ ತಿಂಗಳಿನಲ್ಲೂ ತಂಪಾದ ವಾತಾವರಣವಿರುತ್ತಿತ್ತು" ಎಂದು ತಾರಾನಗರದ ಕೃಷಿ ಕಾರ್ಯಕರ್ತ ನಿರ್ಮಲ್ ಪ್ರಜಾಪತಿ ಹೇಳುತ್ತಾರೆ. “ಈಗ ಫೆಬ್ರವರಿ ಅಂತ್ಯದ ವೇಳೆಗೆ ಕೆಲವೊಮ್ಮೆ ಸೆಖೆ ಪ್ರಾರಂಭವಾಗುತ್ತದೆ. ಮತ್ತು ಇದು ಆಗಸ್ಟ್‌ವರೆಗೆ ಬದಲಾಗಿ ಅಕ್ಟೋಬರ್ ಅಥವಾ ಅದನ್ನೂ ಮೀರಿ ಮುಂದುವರಿಯುತ್ತದೆ.”

ಚುರೂವಿನ ಹೊಲಗಳಲ್ಲಿ, ಈ ವಿಸ್ತೃತ ಸೆಕೆಯಿಂದಾಗಿ ಕೆಲಸದ ಸಮಯ ಬದಲಾಗಿದೆ ಎಂದು ಪ್ರಜಾಪತಿ ಹೇಳುತ್ತಾರೆ - ರೈತರು ಮತ್ತು ಕಾರ್ಮಿಕರು ಬೆಳಿಗ್ಗೆ ಮತ್ತು ಸಂಜೆ ತುಲನಾತ್ಮಕವಾಗಿ ಮುಂಜಾನೆ ಹೆಚ್ಚು ಕೆಲಸ ಮಾಡುವ ಮೂಲಕ ಸೆಕೆಯನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ.

ಇದಲ್ಲದೆ, ಈ ವಿಸ್ತೃತ ಸೆಕೆಗಾಲಕ್ಕೆ ಅಡೆತಡೆಯಿಲ್ಲದಾಗಿದೆ. ಒಂದು ಕಾಲವಿತ್ತು, ಇಲ್ಲಿನ ಕೆಲವರು ನೆನಪಿಸಿಕೊಳ್ಳುತ್ತಾರೆ, ಆಂಧಿ (ಮರಳಿ ಬಿರುಗಾಳಿ) ಹಳ್ಳಿಗಳ ಉದ್ದಕ್ಕೂ ಸಿಳ್ಳೆ ಹೊಡೆಯುತ್ತಾ ಬೀಸಿಕೊಂಡು ಹೋಗುವಾಗ ಎಲ್ಲೆಡೆಯೂ ಮರಳಿನ ಪರದೆಯನ್ನು ಹರಡಿ ಹೋಗುತ್ತಿತ್ತು. ರೈಲು ಹಳಿಗಳು ಸಂಪೂರ್ಣ ಮರಳಿನಿಂದ ಆವೃತ್ತವಾಗಿರುತ್ತಿದ್ದವು. ಅಂಗಳದಲ್ಲಿ ಮಲಗಿದ ರೈತನೂ ಮರಳಿನಡಿ ಮುಳುಗಿ ಹೋಗುತ್ತಿದ್ದ ಮರಳಿನ ದಿಬ್ಬಗಳು ಒಂದೆಡೆಯಿಂದ ಇನ್ನೊಂದೆಡೆಗೆ ಬದಲಾಗುತ್ತಿದ್ದವು. "ಪಶ್ಚಿಮ ಮಾರುತಗಳು ಆಂಧಿಯನ್ನು ತರುತ್ತಿದ್ದವು" ಎಂದು ನಿವೃತ್ತ ಶಾಲಾ ಶಿಕ್ಷಕ ಹರ್‌ದಯಾಲ್‌ ಜೀ ನೆನಪಿಸಿಕೊಳ್ಳುತ್ತಾರೆ. "ಮರಳು ನಮ್ಮ ಶೀಟ್‌ಗಳಲ್ಲೂ ತುಂಬಿಕೊಳ್ಳುತ್ತಿತ್ತು. ಆದರೆ ಈಗ ಅಂತಹ ಬಿರುಸಿನ ಆಂಧಿ ಬೀಸುವುದಿಲ್ಲ."

Left: The Chakravat drizzles have mostly disappeared, says Hardayalji Singh, retired teacher and landowner. Centre: Sushila Purohit, anganwadi worker in Sujangarh, says 'It is still hot in November. Right: Nirmal Prajapati, farm activist in Taranagar, says work hours have altered to adapt to the magnifying summer
PHOTO • Sharmila Joshi
Left: The Chakravat drizzles have mostly disappeared, says Hardayalji Singh, retired teacher and landowner. Centre: Sushila Purohit, anganwadi worker in Sujangarh, says 'It is still hot in November. Right: Nirmal Prajapati, farm activist in Taranagar, says work hours have altered to adapt to the magnifying summer
PHOTO • Sharmila Joshi
Left: The Chakravat drizzles have mostly disappeared, says Hardayalji Singh, retired teacher and landowner. Centre: Sushila Purohit, anganwadi worker in Sujangarh, says 'It is still hot in November. Right: Nirmal Prajapati, farm activist in Taranagar, says work hours have altered to adapt to the magnifying summer
PHOTO • Sharmila Joshi

ಎಡ: ಚಕ್ರಾವತ್‌ ತುಂತುರು ಮಳೆಗಳು ಈಗ ಬಹುತೇಕ ಕಣ್ಮರೆಯಾಗಿವೆ ಎಂದು ನಿವೃತ್ತ ಶಿಕ್ಷಕ ಮತ್ತು ಭೂಮಾಲೀಕರಾದ ಹರ್‌ದಯಾಲ್‌ಜೀ ಸಿಂಗ್ ಹೇಳುತ್ತಾರೆ. ಮಧ್ಯೆ: ಸುಜನ್‌ಘರ್‌ನ ಅಂಗನವಾಡಿ ಕೆಲಸಗಾರರಾದ ಸುಶೀಲಾ ಪುರೋಹಿತ್, 'ಈಗ ನವೆಂಬರ್‌ ತಿಂಗಳಿನಲ್ಲೂ ಸೆಕೆಯಿರುತ್ತದೆ.ʼ ಬಲ: ಈ ಅತಿಯಾದ ಬಿಸಿಲಿನಿಂದಾಗಿ ಕೆಲಸದ ಸಮಯ ಬದಲಾಗಿದೆ ಎಂದು ತಾರಾನಗರದ ಕೃಷಿ ಕಾರ್ಯಕರ್ತ ನಿರ್ಮಲ್ ಪ್ರಜಾಪತಿ ಹೇಳುತ್ತಾರೆ

ಧೂಳು ಬಿರುಗಾಳಿಗಳು ಶುಷ್ಕ, ಬಿಸಿಯಾದ, ಬಲವಾದ ಗಾಳಿಯೊಂದಿಗೆ ಗಂಟೆಗಳವರೆಗೆ ಮೇ ಮತ್ತು ಜೂನ್ ನಂತಹ ಬೇಸಿಗೆಯಲ್ಲಿ ಸಹ ಇರುತ್ತದೆ.  ಚುರೂವಿನಲ್ಲಿ ಆಂಧಿ ಮತ್ತು ಲೂ ಎರಡೂ 30 ವರ್ಷಗಳ ಹಿಂದೆ ಚುರುವಿನಲ್ಲಿ ನಿಯಮಿತವಾಗಿ ಸಂಭವಿಸುತ್ತಿದ್ದವು. ಇವು ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿದ್ದವು ಎಂದು ನಿರ್ಮಲ್ ಹೇಳುತ್ತಾರೆ. "ಮರಳಿನ ಬಿರುಗಾಳಿಗಳು ಎಲ್ಲೆಡೆ ಹರಡಿ ಧೂಳಿನ ಮರಳು ಮಣ್ಣನ್ನು ಉತ್ಕೃಷ್ಟಗೊಳಿಸಲು ಸಹಾಯ ಮಾಡುತ್ತದೆ." ಈಗ ಉರಿ ಬಿಸಿಲು ಇರುತ್ತದೆ. ತಾಪಮಾನ 40 ಕ್ಕೆ ಏರುತ್ತದೆ. "ಏಪ್ರಿಲ್ 2019ರಲ್ಲಿ ಮರಳು ಬಿರುಗಾಳಿ ಬಂದಿತ್ತು, ಇದು ಸುಮಾರು 5-7 ವರ್ಷಗಳ ನಂತರ ಎಂದು ನನಗನ್ನಿಸುತ್ತದೆ" ಎಂದು ಅವರು ಹೇಳಿದರು.

ಬೇಸಗೆಯ ವಿಪರೀತ ಉಷ್ಣವು ಬೇಸಿಗೆಯನ್ನು ವಿಸ್ತರಿಸುತ್ತಿದೆ. ಮತ್ತಷ್ಟು ಸೆಕೆ ಹೆಚ್ಚಿಸುತ್ತಿದೆ. "ರಾಜಸ್ಥಾನದಲ್ಲಿ ಕಡು ಸೆಖೆಯ ಬೇಸಿಗೆ ನಮಗೆ ಮೊದಲಿನಿಂದಲೂ ಅಭ್ಯಾಸವಿದೆ ಆದರೆ ಈಗೀಗ ರೈತನೂ ಇಲ್ಲಿನ ಬೇಸಿಗೆಗೆ ಹೆದರುತ್ತಿದ್ದಾನೆ." ಎಂದು ತಾರಾನಗರದ ಕೃಷಿ ಕಾರ್ಯಕರ್ತ ಮತ್ತು ಹರ್‌ದಯಾಲ್‌ಜೀ ಅವರ ಮಗ ಉಮ್ರಾವೋ ಸಿಂಗ್ ಹೇಳುತ್ತಾರೆ.

****

2019ರ ಜೂನ್‌ನಲ್ಲಿ ದಾಖಲಾದ ತಾಪಮಾನ 50 ಡಿಗ್ರಿ ದಾಟಿರುವುದು ರಾಜಸ್ಥಾನದಲ್ಲಿ ಇದೇ ಮೊದಲಲ್ಲ. ಜೈಪುರ ಹವಾಮಾನ ಇಲಾಖೆಯ ಪ್ರಕಾರ, ಜೂನ್ 1993ರಲ್ಲಿ ಅತ್ಯಧಿಕ ಮಟ್ಟ 49.8 ಆಗಿತ್ತು. ಮೇ 1995ರಲ್ಲಿ, ಬಾಮರ್‌ನಲ್ಲಿ ತಾಪಮಾನವು 0.1 ಡಿಗ್ರಿಗಳಿಗೆ ಇಳಿದಿತ್ತು. ಹಿಂದಿನ ಗರಿಷ್ಠ ತಾಪಮಾನವು 1934ರಲ್ಲಿ ಗಂಗನಗರದಲ್ಲಿ 50 ಡಿಗ್ರಿ ಸೆಲ್ಸಿಯಸ್ ಮತ್ತು ಮೇ 1956 ಲ್ಲಿ ಅಲ್ವಾರ್‌ನಲ್ಲಿ 50.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಕೆಲವು ವರದಿಗಳು ಚುರೂ ಜಗತ್ತಿನ ಅತ್ಯಂತ ಹೆಚ್ಚಿನ ತಾಪಮಾನ ಹೊಂದಿರುವ ಪ್ರದೇಶವೆಂದು ವರದಿ ಮಾಡಿದ್ದರೂ, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ನಡೆಸಿದ ಅಧ್ಯಯನದ ಪ್ರಕಾರ, ಅರಬ್ ಜಗತ್ತು ಸೇರಿದಂತೆ ವಿಶ್ವದ ಕೆಲವು ಭಾಗಗಳಲ್ಲಿ 50 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ, ಆದರೆ ಕೆಲವು ವರದಿಗಳು 2019ರ ಜೂನ್ ವೇಳೆಗೆ ಜುರಿಚ್ ವಿಶ್ವದ ಅತಿ ಹೆಚ್ಚು ತಾಪಮಾನ ಹೊಂದಿರುವ ಸ್ಥಳವಾಗಿದೆ ಎಂದು ಸೂಚಿಸುತ್ತದೆ. ಜಾಗತಿಕ ತಾಪಮಾನ ಏರಿಕೆಯು ಹೇಗೆ ಬದಲಾಗುತ್ತದೆ ಎಂಬುದರ ಆಧಾರದ ಮೇಲೆ 2025ರ ವೇಳೆಗೆ ಜಾಗತಿಕ ತಾಪಮಾನವು 1.1ರಿಂದ ಗರಿಷ್ಠ 3 ಡಿಗ್ರಿ ಸೆಲ್ಸಿಯಸ್‌ಗೆ ಬದಲಾಗುತ್ತದೆ ಎಂದು ವರ್ಕಿಂಗ್‌ ಆನ್‌ ವಾರ್ಮರ್‌ ಪ್ಲಾನೆಟ್ ವರದಿ ಮುನ್ಸೂಚಿಸುತ್ತದೆ.

ಪಶ್ಚಿಮ ರಾಜಸ್ಥಾನದ ಸಂಪೂರ್ಣ ಮರುಭೂಮಿ (19.61 ಲಕ್ಷ ಹೆಕ್ಟೇರ್) 21ನೇ ಶತಮಾನದ ಅಂತ್ಯದ ವೇಳೆಗೆ ಹೆಚ್ಚಿನ ತಾಪಮಾನದ ದಿನಗಳು, ಸೆಕೆಯಿಂದ ಕೂಡಿದ ರಾತ್ರಿಗಳು ಮತ್ತು ಕಡಿಮೆ ಮಳೆ ಇರಲಿದೆ ಎಂದು ಅಂತರರಾಜ್ಯ ಹವಾಮಾನ ಬದಲಾವಣೆ ಸಮಿತಿ ಮತ್ತು ಇತರ ಮೂಲಗಳು ಊಹಿಸಿವೆ.

ಚುರೂ ಪಟ್ಟಣದ ಡಾ. ಸುನಿಲ್ ಜಾಂಡು ಹೇಳುತ್ತಾರೆ, ಹೆಚ್ಚಿನ ಉಷ್ಣತೆಯ ಅಭ್ಯಾಸವಿರುವವರಿಗೂ ಸಹ, "ಸುಮಾರು 48 ಡಿಗ್ರಿ ಸೆಲ್ಸಿಯಸ್ ನಂತರ, ಒಂದೊಂದು  ಡಿಗ್ರಿಯ ಏರಿಕೆಯೂ ಬಹಳ ಮುಖ್ಯವಾದುದು." ಮಾನವ ದೇಹದ ಮೇಲೆ 48-ಪ್ಲಸ್ ಡಿಗ್ರಿಗಳ ಪ್ರಭಾವವು ದೊಡ್ಡದಾಗಿರುತ್ತದೆ - ಬಳಲಿಕೆ, ನಿರ್ಜಲೀಕರಣ, ಮೂತ್ರಪಿಂಡದ ಕಲ್ಲುಗಳು (ದೀರ್ಘಕಾಲೀನ ನಿರ್ಜಲೀಕರಣದ ಕಾರಣ) ಮತ್ತು ವಾಕರಿಕೆ, ತಲೆತಿರುಗುವಿಕೆ ಮತ್ತು ಇತರ ಪರಿಣಾಮಗಳ ಜೊತೆಗೆ ಹೀಟ್‌ ಸ್ಟ್ರೋಕ್‌ ಉಂಟಾಗಬಹುದು. ಆದಾಗ್ಯೂ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಯಾಗಿರುವ ಡಾ. ಜಾಂಡು ಅವರು, ಮೇ-ಜೂನ್ 2019ರಲ್ಲಿ ಇಂತಹ ಪ್ರಕರಣಗಳಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ ಎಂದು ಹೇಳುತ್ತಾರೆ. ಆ ಸಮಯದಲ್ಲಿ ಚುರೂವಿನಲ್ಲಿ ಯಾವುದೇ ಉಷ್ಣ-ಗಾಳಿ ಸಂಬಂಧಿತ ಸಾವುಗಳು ವರದಿಯಾಗಿಲ್ಲ.

ಐಎಲ್ಒ ವರದಿಯು ಅಧಿಕ ತಾಪದ ಅಪಾಯಗಳನ್ನು ಸಹ ತೋರಿಸುತ್ತದೆ: "ಜಾಗತಿಕ ತಾಪಮಾನವು ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ, ಮತ್ತು ತಾಪಮಾನದ ಒತ್ತಡವೂ ಸಾಮಾನ್ಯವಾಗುತ್ತದೆ ... ದೇಹವನ್ನು ತೀವ್ರ ಶಾಖಕ್ಕೆ ಒಡ್ಡಿಕೊಂಡರೆ ... ತಾಪಮಾನ ಹೆಚ್ಚಾದಾಗ ಅದು ಹೀಟ್‌ ಸ್ಟ್ರೋಕ್ ಮತ್ತು ಕೆಲವೊಮ್ಮೆ ಸಾವಿಗೂ ಕಾರಣವಾಗಬಹುದು."

Writer-farmer Dularam saharan (left) of Bharang village at the house of well-known veteran columnist Madhavji Sharma, in Churu town: 'Kambal and coat ka jamaana chala gaya'
PHOTO • Sharmila Joshi

ಚುರೂ ಪಟ್ಟಣದ ಪ್ರಸಿದ್ಧ ಹಿರಿಯ ಅಂಕಣಕಾರ ಮಾಧವ್‌ಜೀ ಶರ್ಮಾ ಅವರ ಮನೆಯಲ್ಲಿ ಭರಂಗ್ ಗ್ರಾಮದ ಬರಹಗಾರ-ರೈತ ದುಲಾರಾಮ್ ಸಹಾರನ್ (ಎಡ): 'ಕಂಬಲ್ ಔರ್ ಕೋಟ್ ಕಾ ಜಮಾನಾ ಚಲಾ ಗಯಾ'

ಕಾಲಾನಂತರದಲ್ಲಿ ಹೆಚ್ಚು ಪರಿಣಾಮ ಎದುರಿಸುವ ಪ್ರದೇಶಗಳಲ್ಲಿ ದಕ್ಷಿಣ ಏಷ್ಯಾ ಒಂದಾಗಿದೆಯೆಂದು ವರದಿಗಳು ಹೇಳುತ್ತವೆ, ಮತ್ತು ತಾಪಮಾನದ ಒತ್ತಡದ ಹೆಚ್ಚು ಪರಿಣಾಮ ಅನುಭವಿಸುವ ದೇಶಗಳು ಸಾಮಾನ್ಯವಾಗಿ ಹೆಚ್ಚಿನ ದರದಲ್ಲಿ ಬಡತನ, ಅನೌಪಚಾರಿಕ ಉದ್ಯೋಗ ಮತ್ತು ಜೀವನಾಧಾರವಾಗಿ ಕೃಷಿಯನ್ನು ಹೊಂದಿರುತ್ತವೆ.


ಆದರೆ ಎಲ್ಲಾ ಹಾನಿಕಾರಕವೆನಿಸುವ ಆಸ್ಪತ್ರೆಗಳಿಗೆ ಧಾವಿಸುವಂತಹ ಪರಿಣಾಮಗಳು ಸುಲಭವಾಗಿ ತಕ್ಷಣವೇ ಗೋಚರಿಸುವುದಿಲ್ಲ.


ಇತರ ಸಮಸ್ಯೆಗಳ ಜೊತೆಯಲ್ಲಿ, ಐಎಲ್ಒ ವರದಿಯು, ಉಷ್ಣದ ಒತ್ತಡವು "ಕೃಷಿ ಕಾರ್ಮಿಕರನ್ನು ಗ್ರಾಮೀಣ ಪ್ರದೇಶಗಳನ್ನು ಬಿಡಲು ಪ್ರೇರೇಪಿಸುವ ಅಂಶವಾಗಿ ಕಾರ್ಯನಿರ್ವಹಿಸಬಹುದು ... [ಮತ್ತು] 2005-15ರ ಅವಧಿಯಲ್ಲಿ, ಹೆಚ್ಚಿನ ಮಟ್ಟದ ವಲಸೆ ಹರಿವುಗಳಿಗೆ ಉಷ್ಣ ಒತ್ತಡವು ದೊಡ್ಡ

ರೀತಿಯಲ್ಲಿ ಕಾರಣವಾಗಿದೆ - ಹಿಂದಿನ ಹತ್ತು ವರ್ಷಗಳ ಅವಧಿಯಲ್ಲಿ ಈ ಪ್ರವೃತ್ತಿ ಕಾಣುವುದಿಲ್ಲ. ಇದು ಕುಟುಂಬಗಳು ತಮ್ಮ ವಲಸೆ ನಿರ್ಧಾರಗಳಲ್ಲಿ ಹವಾಮಾನ ಬದಲಾವಣೆಯನ್ನು ಗಣನೆಗೆ ತೆಗೆದುಕೊಳ್ಳುತ್ತಿದ್ದಾರೆ ಎಂಬುದರ ಸಂಕೇತವಾಗಿರಬಹುದು.


ಚುರೂವಿನಲ್ಲಿಯೂ, ಇಳುವರಿ ಕುಸಿತದಿಂದಾಗಿ ಆದಾಯದ ಕುಸಿತ - ಈಗಿನ ಭಾಗಶಃ ಅನಿಯಮಿತ ಮಾನ್ಸೂನ್ - ವಲಸೆಯನ್ನು ಪ್ರೇರೇಪಿಸುವ ದೀರ್ಘ ಸರಣಿಯ ಶಕ್ತಿಗಳಲ್ಲಿ ಒಂದಾಗಿದೆ. ದುಲಾರಾಮ್ ಸಹಾರನ್ ಹೇಳುತ್ತಾರೆ, “ಹಿಂದೆ ನಾವು ನಮ್ಮ ಜಮೀನಿನಿಂದ 100 ಮನ್ [ಸುಮಾರು 3,750 ಕೆಜಿ] ನವಣೆ ಇಳುವರಿ ಪಡೆಯುತ್ತಿದ್ದೆವು. ಈಗ ಹೆಚ್ಚೆಂದರೆ 20-30 ಮನ್‌ಗಳನ್ನು ಮಾತ್ರ ಪಡೆಯಲು ಸಾಧ್ಯ. ನನ್ನ ಗ್ರಾಮ ಭರಂಗ್‌ನಲ್ಲಿ, ಬಹುಶಃ ಕೇವಲ 50 ಪ್ರತಿಶತದಷ್ಟು ಜನರು ಮಾತ್ರ ಕೃಷಿ ಮಾಡುತ್ತಿದ್ದಾರೆ, ಉಳಿದ ಜನರು ಬೇಸಾಯವನ್ನು ಬಿಟ್ಟು ವಲಸೆ ಹೋಗುತ್ತಾರೆ.”


ಗಜುವಾಸ್ ಗ್ರಾಮದಲ್ಲಿ, ಧಾರಂಪಾಲ್ ಸಹರನ್ ಅವರ ಹೊಲದಲ್ಲಿನ ಇಳುವರಿ ಕೂಡ ತೀವ್ರವಾಗಿ ಕುಸಿದಿದೆ ಎಂದು ಹೇಳುತ್ತಾರೆ. ಹೀಗಾಗಿ ಅವರು ಕೆಲವು ವರ್ಷಗಳಿಂದ ಟೆಂಪೊ ಡ್ರೈವರ್ ಆಗಿ ಕೆಲಸ ಮಾಡಲು ವರ್ಷದಲ್ಲಿ 3-4 ತಿಂಗಳು ಜೈಪುರ ಅಥವಾ ಗುಜರಾತ್ ನಗರಗಳಿಗೆ ಹೋಗುತ್ತಿದ್ದಾರೆ.


ಕುಸಿಯುತ್ತಿರುವ ಕೃಷಿ ಆದಾಯದ ನಷ್ಟವನ್ನು ಸರಿದೂಗಿಸಲು ಚುರೂವಿನ ಅನೇಕರು ಗಲ್ಫ್ ದೇಶಗಳಿಗೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಪಂಜಾಬ್ ನಗರಗಳಲ್ಲಿನ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ವಲಸೆ ಹೋಗುತ್ತಿದ್ದಾರೆ ಎಂದು ಪ್ರೊಫೆಸರ್ ಇಸ್ರಾನ್ ಹೇಳುತ್ತಾರೆ. (ಸರ್ಕಾರದ ನೀತಿಯಿಂದ ಜಾನುವಾರುಗಳ ವ್ಯಾಪಾರವು ಸಹ ನಾಶವಾಗುತ್ತಿದೆ - ಆದರೆ ಇದು ಮತ್ತೊಂದು ಕಥೆ.)

ಮುಂದಿನ 10 ವರ್ಷಗಳಲ್ಲಿ ಸುಮಾರು 8 ಮಿಲಿಯನ್ ಪೂರ್ಣ ಸಮಯದ ಉದ್ಯೋಗಕ್ಕೆ ಸಮಾನಾದ ಉತ್ಪಾದನೆ ಹಾನಿಗೊಳಗಾಗಲಿದೆ ಎಂದು ಐಎಲ್ಒ ವರದಿ ಹೇಳುತ್ತದೆ. ಇಪ್ಪತ್ತೊಂದನೇ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಲಿದೆ ಎಂದು ಪ್ರಸ್ತುತ ಊಹಿಸಲಾಗಿದೆ.

*****

ಚುರೂವಿನಲ್ಲಿ ಹವಾಮಾನ ಏಕೆ ಬದಲಾಗುತ್ತಿದೆ?

ಪರಿಸರ ಮಾಲಿನ್ಯ, ಮಾಧವ್ ಶರ್ಮಾ ಅವರು ಹೇಳುವಂತೆಯೇ ಪ್ರೊ. ಇಸ್ರಾನ್ ಸಹ ಹೇಳುತ್ತಾರೆ. ಅದು ಶಾಖವನ್ನು ಸೆಳೆಯುತ್ತದೆ, ಹವಾಮಾನ ಮಾದರಿಗಳನ್ನು ಬದಲಾಯಿಸುತ್ತದೆ. "ಜಾಗತಿಕ ತಾಪಮಾನ ಏರಿಕೆಯಿಂದ ಮತ್ತು ಕಾಂಕ್ರೀಟಿಕರಣದ ಕಾರಣದಿಂದಾಗಿ ಶಾಖವು ಹೆಚ್ಚಾಗುತ್ತಿದೆ. ಕಾಡುಗಳು ಕಡಿಮೆಯಾಗಿವೆ, ವಾಹನಗಳ ಸಂಖ್ಯೆ ಅಧಿಕಗೊಳ್ಳುತ್ತಿವೆ" ಎಂದು ತಾರಾನಗರ ತೆಹಸಿಲ್‌ನ ಭಲೇರಿ ಗ್ರಾಮದ ರೈತ ಮತ್ತು ಮಾಜಿ ಶಾಲಾ ಪ್ರಾಂಶುಪಾಲರಾದ ರಾಮ್‌ಸ್ವರೂಪ್ ಸಹಾರನ್ ಹೇಳುತ್ತಾರೆ.

'After around 48 degrees Celsius,” says Dr. Sunil Jandu (left) in Churu town, even to people used to very high heat, 'every rise by a degree matters a lot'. Ramswaroop Saharan of Bhaleri village attributes the growing heat to global warming
PHOTO • Sharmila Joshi
'After around 48 degrees Celsius,” says Dr. Sunil Jandu (left) in Churu town, even to people used to very high heat, 'every rise by a degree matters a lot'. Ramswaroop Saharan of Bhaleri village attributes the growing heat to global warming
PHOTO • Sharmila Joshi

"ತಾಪಮಾನವು 48 ಡಿಗ್ರಿ ಸೆಲ್ಸಿಯಸ್ ದಾಟಿದೆ" ಎಂದು ಚುರುವಿನ ಡಾ.ಸುನಿಲ್ ಜಾಂಡು (ಎಡ) ಎಂದು ಹೇಳುತ್ತಾರೆ. ‘ಆದರೆ ಇಲ್ಲಿನ ಜನರಿಗೆ ಈ ಉಷ್ಣತೆಯು ಅಭ್ಯಾಸವಾಗಿದ್ದರೂ ಒಂದೊಂದು ಡಿಗ್ರಿಯ ಏರಿಕೆಯೂ ದೊಡ್ಡ ಪರಿಣಾಮ ಬೀರುತ್ತದೆ’. ಜಾಗತಿಕ ತಾಪಮಾನ ಏರಿಕೆ ಹೆಚ್ಚುತ್ತಿರುವ ಉಷ್ಣತೆಗೆ ಕಾರಣವಾಗಿದೆ ಎಂದು ಬಾಲೆರಿ ಗ್ರಾಮದ ರಾಮ್‌ಸ್ವರೂಪ್ ಸಹರನ್ ಹೇಳುತ್ತಾರೆ

"ಉದ್ಯಮಗಳು ಬೆಳೆಯುತ್ತಿವೆ, ಹವಾನಿಯಂತ್ರಣ ಬಳಕೆ ಹೆಚ್ಚಾಗುತ್ತಿದೆ, ಕಾರುಗಳು ಸಂಖ್ಯೆ ಬೆಳೆಯುತ್ತಿವೆ ಪರಿಸರ ಕಲುಷಿತವಾಗಿದೆ. ಇದೆಲ್ಲವೂ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿದೆ.” ಎಂದು ಜೈಪುರ ಮೂಲದ ಹಿರಿಯ ಪತ್ರಕರ್ತ ನಾರಾಯಣ್ ಬರೇತ್ ಹೇಳುತ್ತಾರೆ

ಕೆಲವು ಖಾತೆಗಳಲ್ಲಿ ‘ಥಾರ್ ಮರುಭೂಮಿಯ ಗೇಟ್‌ವೇ’ ಎಂದು ಕರೆಯಲ್ಪಡುವ ಚುರೂ, ಹವಾಮಾನ ಬದಲಾವಣೆಯ ದೊಡ್ಡ ಜಾಗತಿಕ ಸರಪಳಿಯಲ್ಲಿ ಕೇವಲ ಒಂದು ಕೊಂಡಿಯಾಗಿದೆ. ಹವಾಮಾನ ಬದಲಾವಣೆಯ ಕುರಿತಾದ ರಾಜಸ್ಥಾನ ರಾಜ್ಯ ಕ್ರಿಯಾ ಯೋಜನೆ 1970ರ ನಂತರ ಜಾಗತಿಕವಾಗಿ ಹಸಿರುಮನೆ ಅನಿಲ ಹೊರಸೂಸುವಿಕೆಯ ಬೆಳವಣಿಗೆಯನ್ನು ಚರ್ಚಿಸುತ್ತದೆ. ಇದು ರಾಜಸ್ಥಾನವನ್ನು ಮೀರಿ ರಾಷ್ಟ್ರವ್ಯಾಪಿ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ, ಅದು ದೊಡ್ಡ ಪ್ರಮಾಣದ ಜಿಎಚ್‌ಜಿ-ಚಾಲಿತ ಬದಲಾವಣೆಗಳಿಗೆ ಸಂಪರ್ಕ ನೀಡುತ್ತದೆ. ಪಳೆಯುಳಿಕೆ ಇಂಧನಗಳು, ಕೃಷಿ ಹೊರಸೂಸುವಿಕೆ, ಇಂಧನ ಕ್ಷೇತ್ರದಲ್ಲಿ ಬೃಹತ್ ಚಟುವಟಿಕೆ, ಕೈಗಾರಿಕಾ ಬೆಳವಣಿಗೆ, ಭೂ ಬಳಕೆಯಲ್ಲಿ ಬದಲಾವಣೆ, ಅರಣ್ಯನಾಶ ಇತ್ಯಾದಿ. ಇವೆಲ್ಲವೂ ಹವಾಮಾನ ಬದಲಾವಣೆಯ ಸಂಕೀರ್ಣ ಜಾಲಕ್ಕೆ ಸಂಬಂಧಿಸಿವೆ.

ಚುರೂ ಗ್ರಾಮಗಳ ಜನರು ಹಸಿರುಮನೆ ಅನಿಲಗಳ (GHG) ಬಗ್ಗೆ ಮಾತನಾಡುವುದಿಲ್ಲ. ಆದರೆ ಅವರು ಅದರ ಪ್ರಭಾವವವನ್ನು ಅನುಭವಿಸುತ್ತಿದ್ದಾರೆ. "ಮೊದಲು, ಫ್ಯಾನ್ ಮತ್ತು ಹವಾನಿಯಂತ್ರಣಗಳಿಲ್ಲದೆ ನಾವು ಬೇಸಿಗೆಯನ್ನು ನಿಭಾಯಿಸಬಹುದಿತ್ತು. ಆದರೆ ಈಗ ನಾನು ಅವುಗಳಿಲ್ಲದೆ ಬದುಕಲು ಸಾಧ್ಯವಿಲ್ಲ”ಎಂದು ಹರ್‌ದಯಾಲ್‌ಜೀ ಹೇಳುತ್ತಾರೆ.

ಅಮೃತಾ ಹರ್‌ದಯಾಲ್‌ಜೀ ಅವರ ಮಾತನ್ನು ಮುಂದುವರೆಸುತ್ತಾ, “ಬಡ ಕುಟುಂಬಗಳು ಫ್ಯಾನ್‌ಗಳು ಮತ್ತು ಕೂಲರ್‌ಗಳನ್ನು ಹೊಂದಲು ಸಾಧ್ಯವಿಲ್ಲ. ಅಸಹನೀಯ ಸೆಕೆಯು ಅತಿಸಾರ ಮತ್ತು ವಾಂತಿಯನ್ನು ತರುತ್ತದೆ (ಇತರ ಪರಿಣಾಮಗಳೊಂದಿಗೆ). ಮತ್ತು ಇದಕ್ಕಾಗಿ ವೈದ್ಯರ ಬಳಿಗೆ ಹೋಗುವುದು ಅವರ ಖರ್ಚನ್ನು ಹೆಚ್ಚಿಸುತ್ತದೆ.”

ಹೊಲದ ಕೆಲಸದ ನಂತರ ಸುಜನ್‌ಘರ್‌ನ ತನ್ನ ಮನೆಗೆ ಕರೆದೊಯ್ಯುವ ಬಸ್‌ಗಾಗಿ ಕಾಯುತ್ತಿದ್ದ ಭಗವಾನಿ ದೇವಿ, “ಬಿಸಿಲಿನಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ. ನಮಗೆ ವಾಕರಿಕೆ, ತಲೆತಿರುಗುವಿಕೆಯ ಅನುಭವವಾಗುತ್ತದೆ. ಆಗ ನಾವು ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತೇವೆ, ಸ್ವಲ್ಪ ನಿಂಬೆ ರಸವನ್ನು ಕುಡಿದು ಮತ್ತೆ ನಮ್ಮ ಕೆಲಸವನ್ನು ಪುನರಾರಂಭಿಸುತ್ತೇವೆ.” ಎಂದು ಹೇಳಿದರು.

ಉದಾರವಾಗಿ ಸಹಾಯ ಮಾಡಿ ಮಾರ್ಗದರ್ಶನ ನೀಡಿದ ಎಲ್ಲರಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳು: ಜೈಪುರದ ನಾರಾಯಣ್ ಪರೇತ್, ತಾರಾನಗರದ ನಿರ್ಮಲ್ ಪ್ರಜಾಪತಿ, ಉಮ್ರಾವ್ ಸಿಂಗ್, ಸುಜನ್‌ಘರ್‌ನ ಅಮೃತ ಚೌಧರಿ, ಚುರೂ ನಗರದ‌ ದಲೀಪ್ ಸರವಾಗ್.

ಹವಾಮಾನ ಬದಲಾವಣೆಯ ಕುರಿತು ಪರಿ (PARI)ಯ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಯುಎನ್‌ಡಿಪಿ ಬೆಂಬಲಿತ ಉಪಕ್ರಮದ ಒಂದು ಭಾಗವಾಗಿದ್ದು, ಆ ವಿದ್ಯಮಾನಗಳನ್ನು ಪರಿ ಸಾಮಾನ್ಯ ಜನರ ಜೀವಂತ ಅನುಭವ ಮತ್ತು ಧ್ವನಿಗಳ ಮೂಲಕ ಸೆರೆಹಿಡಿಯುತ್ತದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ ಎನ್. ಕೆಂಚನೂರು

Reporter : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Series Editors : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N Kenchanuru

Shankar N. Kenchanuru is a poet and freelance translator. He can be reached at [email protected].

Other stories by Shankar N Kenchanuru