ಕಮಲಾ ತಾನು ನಾಲ್ಕನೇ ಬಾರಿಗೆ ಗರ್ಭಿಣಿಯಾದಾಗ ಆ ಮಗುವನ್ನು ಉಳಿಸಿಕೊಳ್ಳದೆ ಗರ್ಭಪಾತ ಮಾಡಿಸಿಕೊಳ್ಳಲು ತೀರ್ಮಾನಿಸಿದರು. ಆದರೆ ಅವರು ಅದಕ್ಕಾಗಿ ಆರಿಸಿಕೊಂಡಿದ್ದು ತನ್ನ ಹಾಡಿಯಿಂದ 30 ಕಿಲೋಮೀಟರ್ ದೂರದಲ್ಲಿರುವ ಬೆನೂರ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಲ್ಲ. ಅವರು ಎಂದೂ ಅಷ್ಟು ದೂರದ ಪ್ರಯಾಣವನ್ನು ಪ್ರಯಾಣಿಸಿದವರಲ್ಲ. ಕಾಲ್ನಡಿಗೆ ದೂರದಲ್ಲಿ ನಡೆಯುವ ವಾರದ ಸಂತೆಗೆ ಹೋಗಿದ್ದು ಬಿಟ್ಟರೆ ಇನ್ನೆಲ್ಲೂ ಹೋದವರಲ್ಲ. ಅವರು ಹೇಳುವಂತೆ "ಈ ಆಸ್ಪತ್ರೆಯ ಕುರಿತು ನನಗೆ ಗೊತ್ತಿರಲಿಲ್ಲ. ನಂತರ ನನ್ನ ಗಂಡನಿಗೆ ಈ  ಬಗ್ಗೆ ತಿಳಿಯಿತು."

ತನ್ನ 30 ಹರೆಯದ ಆರಂಭದಲ್ಲಿರುವ ಕಮಲಾ ಮತ್ತು ಅವರ ಪತಿ ರವಿ (ಹೆಸರುಗಳನ್ನು ಬದಲಾಯಿಸಲಾಗಿದೆ), 35, ಇಬ್ಬರೂ ಗೊಂಡ್ ಆದಿವಾಸಿ ಸಮುದಾಯಕ್ಕೆ ಸೇರಿದವರು. ಅವರು ಮೊದಲು ಹತ್ತಿರದಲ್ಲಿರುವ ಸ್ಥಳೀಯ "ಡಾಕ್ಟರ್‌" ಒಬ್ಬರನ್ನು ಸಂಪರ್ಕಿಸಿದರು. "ನನ್ನ ಸ್ನೇಹಿತರೊಬ್ಬರು ಅವರ ಕುರಿತು ಹೇಳಿದ್ದು" ಎಂದು ಅವರು ಹೇಳುತ್ತಾರೆ. ಕಮಲಾ ತಮ್ಮ ಮನೆಯ ಹತ್ತಿರದಲ್ಲೇ ತುಂಡು ಭೂಮಿಯಲ್ಲಿ ತರಕಾರಿ ಬೆಳೆದು ಊರಿನ ಸಂತೆಯಲ್ಲಿ (ಹಾತ್) ಮಾರುತ್ತಾರೆ. ಪತಿ ರವಿ ಸ್ಥಳೀಯ ಮಂಡಿಯೊಂದರಲ್ಲಿ ಕೆಲಸ ಮಾಡುತ್ತಾರೆ ಹಾಗೂ ತನ್ನ ಇಬ್ಬರು ಸಹೋದರರೊಂದಿಗೆ ಸೇರಿ ಮೂರು ಎಕರೆ ಹೊಲದಲ್ಲಿ ಜೋಳ ಬೆಳೆಯುತ್ತಾರೆ. ಕಮಲಾ ಆಸ್ಪತ್ರೆಯೆಂದು ಕರೆಯುವ ಸ್ಥಳವು ಹೆದ್ದಾರಿಯಲ್ಲೇ ಇದ್ದು ಗುರುತಿಸುವುದು ಸುಲಭ. ಇದು ತನ್ನನ್ನು ತಾನು ಆಸ್ಪತ್ರೆಯೆಂದು ಕರೆದುಕೊಳ್ಳುತ್ತದೆಯಾದರೂ ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಯಾವುದೇ ನಾಮಫಲಕಗಳು ಕಾಣುವುದಿಲ್ಲ. ಕಾಂಪೌಂಡ್‌ ಗೋಡೆಯ ಉದ್ದಕ್ಕೂ ಇರುವ ಫ್ಲೆಕ್ಸ್ ಪ್ಯಾನೆಲ್‌ಗಳು ಕಾಂಪೌಂಡ್ ಮೇಲೆ ಸಣ್ಣಗೆ ಬರೆದಿರುವ‌ "ವೈದ್ಯರ" ಹೆಸರನ್ನು ಮರೆಮಾಚುತ್ತವೆ.

ʼವೈದ್ಯರುʼ ಕಮಲಾ ಕೈಗೆ ಐದು ಮಾತ್ರೆಗಳನ್ನು ಇರಿಸಿ ಮೂರು ದಿನ ತೆಗೆದುಕೊಳ್ಳುವಂತೆ ಹೇಳಿ ಮುಂದಿನ ರೋಗಿಗೆ ಒಳಬರುವಂತೆ ಹೇಳಿದರು. ಅವರಿಗೆ ಮಾತ್ರೆಯ ರಿಯಾಕ್ಷನ್‌ ಇತ್ಯಾದಿ ಕುರಿತಾದ ಮಾಹಿತಿಗಳನ್ನು ಅಲ್ಲಿನ ವೈದ್ಯರು ನೀಡಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ  ಯಾವಾಗ ಮತ್ತು ಹೇಗೆ ಗರ್ಭಪಾತವಾಗುತ್ತದೆ ಎನ್ನುವ ಕುರಿತು ಯಾವ ಮಾಹಿತಿಯನ್ನೂ ನೀಡಲಿಲ್ಲ.

ಔಷಧ ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಕಮಲಾರಿಗೆ ರಕ್ತಸ್ರಾವವಾಗಲು ಪ್ರಾರಂಭಿಸಿತು. "ನಾನು ಕೆಲವು ದಿನ ಕಾಯ್ದೆ ಆದರೆ ರಕ್ತ ಹೋಗುವುದು ನಿಲ್ಲಲಿಲ್ಲ. ಕೊನೆಗೆ ಔಷಧಿ ನೀಡಿದ ವೈದ್ಯರ ಬಳಿ ಹಿಂದಿರುಗಿದೆವು. ಅಲ್ಲಿ ಅವರು ಪಿಎಚ್‌ಸಿಗೆ ಹೋಗಿ ತೊಳೆಸಿಕೊಳ್ಳಲು ಹೇಳಿದರು" ಅವರು ಹೇಳುವ ತೊಳೆಸಿಕೊಳ್ಳುವುದೆಂದರೆ ಗರ್ಭಕೋಶವನ್ನು ಸ್ವಚ್ಛಗೊಳಿಸಿಕೊಳ್ಳುವುದು.

ನವಿರಾದ ಚಳಿಗಾಲದ ಬಿಸಿಲಿನಲ್ಲಿ ಬೆನೂರ್ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ಹೊರಗಿನ ಬೆಂಚ್‌ನಲ್ಲಿ ಕುಳಿತಿದ್ದ ಕಮಲಾ ಮೆಡಿಕಲ್‌ ಟರ್ಮಿನೇಷನ್‌ ಆಫ್‌ ಪ್ರಗ್ನೆನ್ಸಿ (ಎಮ್‌ಟಿಪಿ) ಮಾಡಿಸಿಕೊಳ್ಳಲು ತನ್ನ ಸರದಿಗಾಗಿ ಕಾಯುತ್ತಿದ್ದರು. ಇದನ್ನು ನಿರ್ವಹಿಸಲು ಸುಮಾರು 30 ನಿಮಿಷಗಳ ಕಾಲ ಬೇಕಾಗುತ್ತದೆ. ಆದರೆ ಆಕೆಗೆ ಅದಕ್ಕೂ ಮೊದಲು ಮತ್ತು ನಂತರ ಮೂರರಿಂದ ನಾಲ್ಕು ಗಂಟೆಗಳ ಕಾಲ ವಿಶ್ರಾಂತಿಯ ಅವಶ್ಯಕತೆಯಿರುತ್ತದೆ. ಇದಕ್ಕಾಗಿ ಹಿಂದಿನ ದಿನ ಕಡ್ಡಾಯ ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗಿತ್ತು.

ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲೇ ದೊಡ್ಡದಾದ ಈ ಪಿಎಚ್‌ಸಿಯನ್ನು 2019ರ ಕೊನೆಯಲ್ಲಿ ನವೀಕರಿಸಲಾಗಿದೆ. ಈ ಆಸ್ಪತ್ರೆಯು ತಾಯಿ ಮತ್ತು ಮಕ್ಕಳ ಸುಂದರವಾದ ಚಿತ್ರಗಳಿರುವ ವಿಶೇಷ ಹೆರಿಗೆ ಕೊಠಡಿಗಳನ್ನು ಹೊಂದಿದೆ. ಅಲ್ಲದೆ 10 ಹಾಸಿಗೆಗಳ ವಾರ್ಡ್‌, ಮೂರು ಹಾಸಿಗೆಗಳ ಹೆರಿಗೆ ಕೊಠಡಿ, ಆಟೋಕ್ಲೇವ್ ಯಂತ್ರ, ಅವಧಿ ತುಂಬಿ ಹೆರಿಗಾಗಿ ಕಾಯುತ್ತಿರುವ ಮಹಿಳೆಯರಿಗಾಗಿ ವಿಶೇಷ ವಸತಿ ಸೌಲಭ್ಯ, ಗಾರ್ಡನ್‌ ಕಿಚನ್‌ ಕೂಡ ಹೊಂದಿದೆ. ಇದು ಬಸ್ತಾರ್‌ನ ಆದಿವಾಸಿಗಳೇ ಅಧಿಕವಾಗಿರುವ ಪ್ರದೇಶದ ಜನರ ಆರೋಗ್ಯ ಸೇವೆಯ ಭರವಸೆಯ ಪ್ರತೀಕದಂತೆ ಕಾಣುತ್ತದೆ.

Clinics such as this, with unqualified practitioners, are the first stop for many Adiasvi women in Narayanpur, while the Benoor PHC often remains out of reach
PHOTO • Priti David
Clinics such as this, with unqualified practitioners, are the first stop for many Adiasvi women in Narayanpur, while the Benoor PHC often remains out of reach
PHOTO • Priti David

ಈ ರೀತಿಯ ಕ್ಲಿನಿಕ್‌ಗಳು, ಅನರ್ಹ ವೈದ್ಯರು, ನಾರಾಯಣಪುರದ ಅನೇಕ ಆದಿವಾಸಿ ಮಹಿಳೆಯರಿಗೆ ಮೊದಲ ಚಿಕಿತ್ಸೆಯ ತಾಣವಾಗಿದೆ, ಆದರೆ ಬೆನೂರ್ ಪಿಎಚ್‌ಸಿ ಅವರಿಂದ ದೂರವೇ ಉಳಿಯುತ್ತದೆ

"ನಾರಾಯಣಪುರ ಬ್ಲಾಕ್‌ನಲ್ಲಿರುವ ಬೆನೂರ್ ಪಿಎಚ್‌ಸಿ, ಜಿಲ್ಲೆಯ ಅತ್ಯುತ್ತಮ ಸುಸಜ್ಜಿತ ಮತ್ತು ಉತ್ತಮ ಸೇವೆ ನೀಡುವ ಆಸ್ಪತ್ರೆಯಾಗಿದೆ" ಎಂದು ಮಾಜಿ ರಾಜ್ಯ ಮೆಟರ್ನಲ್‌ ಹೆಲ್ತ್‌ ಕನ್ಸಲ್ಟೆಂಟ್ ಡಾ. ರೋಹಿತ್ ಬಾಗೆಲ್ ಹೇಳುತ್ತಾರೆ. "ಈ ಆರೋಗ್ಯ ಕೇಂದ್ರದಲ್ಲಿರುವ  22 ಸಿಬ್ಬಂದಿಗಳಲ್ಲಿ ಒಬ್ಬ ವೈದ್ಯರು, ಒಬ್ಬ ಆಯುಷ್ [ಸ್ಥಳೀಯ ವೈದ್ಯಕೀಯ ವ್ಯವಸ್ಥೆ] ವೈದ್ಯಕೀಯ ಅಧಿಕಾರಿ, ಐದು ದಾದಿಯರು, ಇಬ್ಬರು ಲ್ಯಾಬ್ ತಂತ್ರಜ್ಞರು ಮತ್ತು ಸ್ಮಾರ್ಟ್‌ಕಾರ್ಡ್ ಕಂಪ್ಯೂಟರ್ ಆಪರೇಟರ್ ಕೂಡ ಸೇರಿದ್ದಾರೆ."

ಈ ಆರೋಗ್ಯ ಕೇಂದ್ರವು ಇಲ್ಲಿನ 30 ಕಿಲೋಮೀಟರ್ ವ್ಯಾಪ್ತಿಯ ರೋಗಿಗಳನ್ನು ಒಳಗೊಳ್ಳುತ್ತದೆ. ಅವರಲ್ಲಿ ಹೆಚ್ಚಿನವರು ಆದಿವಾಸಿಗಳು. ಈ ಜಿಲ್ಲೆಯ ಜನಸಂಖ್ಯೆಯ ಶೇಕಡಾ 77.36ರಷ್ಟು ಜನರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ಮುಖ್ಯವಾಗಿ ಗೊಂಡ್, ಅಭೂಜ್ ಮಾರಿಯಾ, ಹಲ್ಬಾ, ಧುರ್ವಾ, ಮುರಿಯಾ ಮತ್ತು ಮಾರಿಯಾ ಸಮುದಾಯಗಳಿಂದ ಬಂದವರು.

ತನ್ನ ಮುಖವನ್ನು ಪೋಲ್ಕ ಎನ್ನುವ ಚುಕ್ಕಿಗಳಿಂದ ಕೂಡಿದ ಶಾಲಿನಿಂದ ಮರೆಮಾಡಿಕೊಂಡಿದ್ದ ಕಮಲಾ "ಇಲ್ಲಿ ಇದನ್ನೆಲ್ಲ ಮಾಡಿಸಬಹುದೆಂದು ನಮಗೆ ಗೊತ್ತೇ ಇರಲಿಲ್ಲ" ಎನ್ನುತ್ತಾರೆ. ಅವರ ಮೂವರು ಮಕ್ಕಳು - ಇಬ್ಬರು 12 ಮತ್ತು 9 ವರ್ಷದ ಹೆಣ್ಣುಮಕ್ಕಳು, ಮತ್ತು 10 ವರ್ಷದ ಗಂಡು ಮಗ - ಗೊಂಡ್ ಆದಿವಾಸಿ ಸೂಲಗಿತ್ತಿಯ ಸಹಾಯದಿಂದ ಮನೆಯಲ್ಲಿಯೇ ಜನಿಸಿದರು. ಕಮಲಾ ಹೆರಿಗೆ ಮೊದಲು ಮತ್ತು ನಂತರ ಯಾವುದೇ ವಿಶ್ರಾಂತಿಯನ್ನು ಪಡೆದಿರಲಿಲ್ಲ. ಅವರಿಗೆ ಆರೋಗ್ಯ ಸೇವೆಗಳ ಮೊದಲ ಅನುಭವವಿದು "ನಾನು ಮೊದಲ ಬಾರಿಗೆ ಆಸ್ಪತ್ರೆಗೆ ಬಂದಿದ್ದೇನೆ" ಎಂದು ಅವರು ಹೇಳುತ್ತಾರೆ. "ಅಂಗನವಾಡಿಯಲ್ಲಿ ಮಾತ್ರೆಗಳನ್ನು ಕೊಡುತ್ತಾರೆಂದು ಕೇಳಿದ್ದೆ, ಆದರೆ ನಾನು ಅಲ್ಲಿಗೆ ಹೋಗಿರಲಿಲ್ಲ." ಕಮಲಾ ಹೇಳಿದ್ದು ಫಾಲಿಕ್ ಆಸಿಡ್ ಮಾತ್ರೆಗಳನ್ನು ವಿತರಿಸಲು ಮತ್ತು ಪ್ರಸವಪೂರ್ವ ತಪಾಸಣೆ ನಡೆಸಲು ಗ್ರಾಮಗಳು ಮತ್ತು ಕುಗ್ರಾಮಗಳಿಗೆ ಭೇಟಿ ನೀಡುವ ಗ್ರಾಮೀಣ ಆರೋಗ್ಯ ಸಂಘಟಕರನ್ನು (ಆರ್‌ಎಚ್‌ಒ) ಕುರಿತು.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಿಂದ ಕಮಲಾರಂತಹ ಮಹಿಳೆಯರು ದೂರವಿರುವುದು ಇಲ್ಲಿ ಅಸಾಮಾನ್ಯ ಘಟನೆಯೇನೂ ಅಲ್ಲ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -4 (2015-16) , ಗ್ರಾಮೀಣ ಛತ್ತೀಸ್‌ಗಢದಲ್ಲಿ ಶೇಕಡಾ 33.2ರಷ್ಟು ಮಹಿಳೆಯರು ಸಾಂಸ್ಥಿಕ ಹೆರಿಗೆಗಳನ್ನು ಹೊಂದಿಲ್ಲ ಎಂದು ಹೇಳುತ್ತದೆ. ಕಮಲಾರಂತೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಗರ್ಭನಿರೋಧಕಗಳನ್ನು ಬಳಸದ ಮಹಿಳೆಯರಲ್ಲಿ ಕೇವಲ 28 ಪ್ರತಿಶತದಷ್ಟು ಮಹಿಳೆಯರು ಮಾತ್ರ ಆರೋಗ್ಯ ಕಾರ್ಯಕರ್ತರೊಂದಿಗೆ ಕುಟುಂಬ ಯೋಜನೆ ಬಗ್ಗೆ ಮಾತನಾಡಿದ್ದಾರೆ ಎಂದು ಅದು ಹೇಳಿದೆ. ‘ಯೋಜಿತವಲ್ಲದ ಗರ್ಭಧಾರಣೆಗಳು ಹೆಚ್ಚು ಸಾಮಾನ್ಯ’ ಮತ್ತು ‘ಗರ್ಭಪಾತವನ್ನು ಹೊಂದುವ ಮಹಿಳೆಯರಲ್ಲಿ ನಾಲ್ಕನೇ ಒಂದು ಭಾಗದಷ್ಟು ಮಹಿಳೆಯರು ಗರ್ಭಪಾತದಿಂದ ಉಂಟಾಗುವ ಸಮಸ್ಯೆಗಳನ್ನು ಹೊಂದಿರುವುದು ಕಂಡುಬಂದಿದೆ’ ಎಂದು ಎನ್‌ಎಫ್‌ಹೆಚ್‌ಎಸ್ -4 ಹೇಳುತ್ತದೆ.

Left: Dr. Rohit Baghel, former state maternal health consultant, explaining delivery procedures to staff nurses and RMAs at a PHC. 'The Benoor PHC [is the best-equipped and serviced in the district', he says. Right: Dr. Paramjeet Kaur says she has seen many botched abortion cases in the nearly two years she has been posted in this part of Bastar
PHOTO • Priti David
Left: Dr. Rohit Baghel, former state maternal health consultant, explaining delivery procedures to staff nurses and RMAs at a PHC. 'The Benoor PHC [is the best-equipped and serviced in the district', he says. Right: Dr. Paramjeet Kaur says she has seen many botched abortion cases in the nearly two years she has been posted in this part of Bastar
PHOTO • Priti David

ಎಡ: ಪಿಎಚ್‌ಸಿಯಲ್ಲಿ ಸ್ಟಾಫ್‌ ನರ್ಸ್ ಮತ್ತು ಆರ್‌ಎಂಎಗಳಿಗೆ ಹೆರಿಗೆ ಪ್ರಕ್ರಿಯೆಗಳನ್ನು ವಿವರಿಸುತ್ತಿರುವ ಮಾಜಿ ಸ್ಟೇಟ್‌ ಮೆಟರ್ನಲ್ ಹೆಲ್ತ್‌ ಕನ್ಸಲ್ಟೆಂಟ್ ಡಾ. ರೋಹಿತ್ ಬಾಗೆಲ್. 'ಬೆನೂರ್ ಪಿಎಚ್‌ಸಿ ಜಿಲ್ಲೆಯ ಅತ್ಯುತ್ತಮ ಸುಸಜ್ಜಿತ ಮತ್ತು ‌ಉತ್ತಮ ಸೇವೆ ಲಭ್ಯವಿರುವ ಆಸ್ಪತ್ರೆಯಾಗಿದೆ' ಎಂದು ಅವರು ಹೇಳುತ್ತಾರೆ. ಬಲ: ಡಾ. ಪರಮಜೀತ್ ಕೌರ್ ಅವರು ಬಸ್ತಾರ್‌ನಲ್ಲಿ ಅನೇಕ ನಿರ್ಲಕ್ಷಿತ ಗರ್ಭಪಾತ ಪ್ರಕರಣಗಳನ್ನು ನೋಡಿದ್ದಾಗಿ ಹೇಳುತ್ತಾರೆ

ನಾರಾಯಣಪುರದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಸುಮಾರು 90 ಪ್ರತಿಶತದಷ್ಟು ಜನಸಂಖ್ಯೆಯು ಕಳಪೆ ರಸ್ತೆ ಅಥವಾ ರಸ್ತೆಗಳಿಲ್ಲದಿರುವ ಕಾರಣದಿಂದ ಸಂತಾನೋತ್ಪತ್ತಿ ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ. ನಾರಾಯಣಪುರ ಜಿಲ್ಲೆಯ ಸಾರ್ವಜನಿಕ ಆರೋಗ್ಯ ಜಾಲದಲ್ಲಿ ಎಂಟು ಪಿಎಚ್‌ಸಿ, ಒಂದು ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ) ಮತ್ತು 60 ಉಪ ಆರೋಗ್ಯ ಕೇಂದ್ರಗಳಿವೆಯಾದರೂ ಅಲ್ಲಿ ವೈದ್ಯರ ಕೊರತೆಯೂ ಇದೆ. "ಶೇಕಡಾ 60ಕ್ಕೂ ಹೆಚ್ಚು ತಜ್ಞ ವೈದ್ಯರ ಹುದ್ದೆಗಳು ಖಾಲಿ ಇವೆ. ಜಿಲ್ಲಾ ಆಸ್ಪತ್ರೆಯ ಹೊರಗೆ ಸ್ತ್ರೀರೋಗತಜ್ಞರು ಲಭ್ಯವಿಲ್ಲ." ಎಂದು ಡಾ. ಬಾಗೆಲ್ ಗಮನಸೆಳೆಯುತ್ತಾರೆ.  ಓರ್ಚಾ ಬ್ಲಾಕ್‌ನಲ್ಲಿರುವ ಗಾರ್ಪಾ ಮತ್ತು ಹಂದವಾಡಾದ ಎರಡು ಪಿಎಚ್‌ಸಿಗಳು ಒಂದೇ ಕೋಣೆಯಿಂದ ಕಾರ್ಯನಿರ್ವಹಿಸುತ್ತಿವೆ. ಅವುಗಳಿಗೆ ಕಟ್ಟಡವಾಗಲಿ. ಹುದ್ದೆಗಳಿಗೆ ವೈದ್ಯರಾಗಲಿ ಲಭ್ಯವಿಲ್ಲ.

ಇದರಿಂದಾಗಿ ಕಮಲಾರಂತಹ ಮಹಿಳೆಯರು ತಮ್ಮ ಸಂತಾನೋತ್ಪತ್ತಿ ಆರೋಗ್ಯ ಅಗತ್ಯಗಳಿಗಾಗಿ ಅವರು ಸಂಪರ್ಕಿಸಿದಂತಹ ಅನರ್ಹ ವೈದ್ಯಕೀಯ ವೈದ್ಯರನ್ನು ಅವಲಂಬಿಸುವ ಬಲವಂತಕ್ಕೆ ಒಳಗಾಗುತ್ತಾರೆ. "ನಮ್ಮ ಆದಿವಾಸಿ ಜನರಲ್ಲಿ ಬಹಳಷ್ಟು ಜನರಿಗೆ ಯಾರು ಆಲೊಪಥಿ ವೈದ್ಯರು ಯಾರು ಅಲ್ಲ ಎನ್ನುವುದು ತಿಳಿಯುವುದಿಲ್ಲ. ನಮ್ಮಲ್ಲಿ ಝೋಲಾ ಚಾಪ್‌ ವೈದ್ಯರು ಜಾಸ್ತಿ ಅವರು ಮೂಲದಲ್ಲಿ ನಕಲಿಗಳು [ಸಂಪೂರ್ಣವಾಗಿ ತಪ್ಪಾದ ಔಷಧಿ ಕೊಡುವವರು] ಇವರು ಡ್ರಿಪ್ಸ್‌, ಚುಚ್ಚುಮದ್ದು ಹಾಗೂ ಔಷಧಿಗಳನ್ನು ನೀಡುತ್ತಾರೆ ಆದರೆ ಇವರನ್ನು ಯಾರೂ ಪ್ರಶ್ನಿಸುವುದಿಲ್ಲ." ಎಂದು ಜಿಲ್ಲೆಯ ಬಸ್ತಾರ್‌ನಲ್ಲಿ ಆರೋಗ್ಯ ಮತ್ತು ಪೋಷಣೆ ಕುರಿತ ಯುನಿಸೆಫ್ ಬೆಂಬಲಿತ ಯೋಜನೆಯನ್ನುನಡೆಸುವ ಎನ್‌ಜಿಒ ಸಾಥಿ ಸಮಾಜ ಸೇವಾ ಸೇವಾ ಸಂಸ್ಥೆಯಲ್ಲಿ ಸಹಾಯಕ ಯೋಜನಾ ಸಂಯೋಜಕರಾಗಿರುವ ಗೊಂಡ್ ಆದಿವಾಸಿ ಪ್ರಮೋದ್ ಪೊಟೈ ವಿವರಿಸುತ್ತಾರೆ.

ಈ ಕೊರತೆಯನ್ನು ತುಂಬಲು ರಾಜ್ಯ ಸರ್ಕಾರವು ಗ್ರಾಮೀಣ ವೈದ್ಯಕೀಯ ಸಹಾಯಕರ (ಆರ್‌ಎಂಎ) ಹುದ್ದೆಯನ್ನು ರಚಿಸಿತು. 2001ರಲ್ಲಿ ಛತ್ತೀಸ್‌ಗಢ್ ರಾಜ್ಯವನ್ನು ರಚಿಸಿದಾಗ ಪಿಎಚ್‌ಸಿ ಮಟ್ಟದಲ್ಲಿ ಒಟ್ಟು ಮಂಜೂರಾದ 1,455 ಹುದ್ದೆಗಳಲ್ಲಿ ಕೇವಲ 516 ವೈದ್ಯಕೀಯ ಅಧಿಕಾರಿಗಳು ಇದ್ದರು. 2001ರ ಛತ್ತೀಸ್‌ಗಢ್ ಚಿಕಿತ್ಸ ಮಂಡಲ್ ಕಾಯ್ದೆಯು ಗ್ರಾಮೀಣ ಪ್ರದೇಶಗಳಿಗಾಗಿ ಆರೋಗ್ಯ ಸೇವೆ ಪ್ರಾಕ್ಟೀಷನರ್‌ಗಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿತ್ತು. ಮೂಲತಃ ‘ಪ್ರಾಕ್ಟೀಶನರ್ಸ್ ಇನ್ ಮಾಡರ್ನ್ ಮೆಡಿಸಿನ್ & ಸರ್ಜರಿ’ ಎಂಬ ಮೂರು ವರ್ಷದ ಕೋರ್ಸ್ ಅನ್ನು ‌ಪ್ರಾರಂಭಿಸಿದ ಮೂರು ತಿಂಗಳೊಳಗೆ ‘ಡಿಪ್ಲೊಮಾ ಇನ್ ಆಲ್ಟರ್ನೇಟಿವ್ ಮೆಡಿಸಿನ್’ ಎಂದು ಮರುನಾಮಕರಣ ಮಾಡಲಾಯಿತು. ಈ ವಿಷಯದಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ)ಯನ್ನು ಸಂಪರ್ಕಿಸಿಲ್ಲ, ಮತ್ತು ‘ಮಾಡರ್ನ್ ’ ಮತ್ತು ‘ಸರ್ಜರಿ’ ಪದಗಳ ಬಳಕೆಯ ಬಗ್ಗೆ ಕಾನೂನು ಕಾಳಜಿಗಳಿವೆ ಎನ್ನುವ ಕಾರಣದಿಂದ ಬದಲಿಸಬೇಕಾಯಿತು. ಕೋರ್ಸ್‌ನಲ್ಲಿ ಬಯೋಕೆಮಿಕ್‌ ಮೆಡಿಸಿನ್, ಹರ್ಬೊ-ಮಿನರಲ್‌ ಮೆಡಿಸಿನ್, ಆಕ್ಯುಪ್ರೆಶರ್, ಫಿಸಿಯೋಥೆರಪಿ, ಮ್ಯಾಗ್ನೆಟೋ-ಥೆರಪಿ, ಯೋಗ ಮತ್ತು ಫ್ಲವರ್‌ ರೆಮಿಡಿಗಳು ಸೇರಿವೆ. ಆರ್‌ಎಂಎಗಳಾಗಿ ಅರ್ಹತೆ ಪಡೆದ ವ್ಯಕ್ತಿಗಳನ್ನು ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ‘ಸಹಾಯಕ ವೈದ್ಯಕೀಯ ಅಧಿಕಾರಿ’ ಎಂಬ ಹೆಸರಿನೊಂದಿಗೆ ನೇಮಿಸುವುದು ಇದರ ಉದ್ದೇಶವಾಗಿತ್ತು.

Although the Benoor PHC maternity room (left) is well equipped, Pramod Potai, a Gond Adivasi and NGO health worker says many in his community seek healthcare from unqualified practitioners who 'give injections, drips and medicines, and no one questions them'
PHOTO • Priti David
Although the Benoor PHC maternity room (left) is well equipped, Pramod Potai, a Gond Adivasi and NGO health worker says many in his community seek healthcare from unqualified practitioners who 'give injections, drips and medicines, and no one questions them'
PHOTO • Avinash Awasthi

ಬೆನೂರ್‌ ಪಿಎಚ್‌ಸಿಯ ಸುಸಜ್ಜಿತ ಹೆರಿಗೆ ಕೋಣೆ (ಎಡ), ಗೊಂಡ್ ಆದಿವಾಸಿ ಮತ್ತು ಎನ್‌ಜಿಒ ಆರೋಗ್ಯ ಕಾರ್ಯಕರ್ತ ಪ್ರಮೋದ್ ಪೊಟೈ (ಬಲ, ನೋಟ್‌ಬುಕ್‌ನೊಂದಿಗೆ), ಅವರ ಸಮದಾಯದ ಜನರು ಆರೋಗ್ಯ ಸೇವೆಗಳಿಗೆ ನಕಲಿ ವೈದ್ಯರ ಮೊರೆ ಹೋಗುತ್ತಿದ್ದು ಅವರನ್ನು ಯಾರೂ ಪ್ರಶ್ನಿಸುತ್ತಿಲ್ಲ.

ಆದಾಗ್ಯೂ, ವೈದ್ಯಕೀಯ ವೃತ್ತಿಯ ಗುಣಮಟ್ಟವನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆಯೆಂದು ಎಂಸಿಐ ಈ ಡಿಪ್ಲೊಮಾ ಕೋರ್ಸ್ ಅನ್ನು ತಿರಸ್ಕರಿಸಿತು. ಮೂರು ರಿಟ್ ಅರ್ಜಿಗಳು (ಮೊದಲನೆಯದು 2001ರಲ್ಲಿ ಭಾರತೀಯ ವೈದ್ಯಕೀಯ ಸಂಘದ ಛತ್ತೀಸ್‌ಗಢ್ ರಾಜ್ಯ ಶಾಖೆ, ಮತ್ತು ಉಳಿದವು ಆರೋಗ್ಯ ಕಾರ್ಯಕರ್ತರ ಸಂಘಗಳು, ದಾದಿಯರ ಸಂಘಗಳು ಮತ್ತು ಇತರರು) ಬಿಲಾಸ್ಪುರದ ಛತ್ತೀಸ್‌ಗಢ್ ಹೈಕೋರ್ಟ್‌ನಲ್ಲಿ ಸಲ್ಲಿಸಲ್ಪಟ್ಟವು. ಆರ್‌ಎಂಎಗಳಿಗಾಗಿ ‘ಸಹಾಯಕ ವೈದ್ಯಕೀಯ ಅಧಿಕಾರಿ’ ಎಂಬ ಹೆಸರನ್ನು ರದ್ದುಗೊಳಿಸಲು ರಾಜ್ಯವು ‘ನೀತಿ ನಿರ್ಧಾರ’ ತೆಗೆದುಕೊಂಡಿದೆ ಎಂದು ಫೆಬ್ರವರಿ 4, 2020ರಂದು ನ್ಯಾಯಾಲಯವು ಗಮನಿಸಿತು. ಆರ್‌ಎಂಎಗಳು 'ಡಾ||' ಎಂಬ ಶೀರ್ಷಿಕೆಯನ್ನು ಬಳಸುವಂತಿಲ್ಲ, ಸ್ವತಂತ್ರವಾಗಿ ಕೆಲಸ ಮಾಡುವಂತಿಲ್ಲ ಆದರೆ ಎಂಬಿಬಿಎಸ್ ವೈದ್ಯರ ಮೇಲ್ವಿಚಾರಣೆಯಡಿ ಕೆಲಸ ಮಾಡಬಹುದು, ಮತ್ತು ರೋಗ/ಗಂಭೀರ ಪರಿಸ್ಥಿತಿಗಳು/ತುರ್ತು ಪರಿಸ್ಥಿತಿಗಳಲ್ಲಿ 'ಪ್ರಥಮ ಚಿಕಿತ್ಸೆ/ಸ್ಟೆಬಿಲೈಸೇಷನ್ ಮಾತ್ರ ಮಾಡಬಲ್ಲದು ಎಂದು ನ್ಯಾಯಾಲಯ ಹೇಳಿದೆ '.

ಆರ್‌ಎಮ್‌ಎ ಹುದ್ದೆಗಳು ವೈದ್ಯರ ಕೊರತೆಯ ಗಂಭೀರತೆಯನ್ನು ಒಂದಷ್ಟು ಕಡಿಮೆಗೊಳಿಸಿವೆ. "ವೈದ್ಯರ ಕೊರತೆಯಿಂದಾಗಿ ನಕಲಿ ವೈದ್ಯರನ್ನು ಕಾಣುತ್ತಿದ್ದವರು ಈಗ ಆರ್‌ಎಮ್‌ಎಗಳನ್ನು ಸಂಪರ್ಕಿಸಬಹುದಾಗಿದೆ." ಎಂದು ಬಾಗೆಲ್‌ ಹೇಳುತ್ತಾರೆ.  "ಆರ್‌ಎಮ್‌ಎಗಳಿಗೆ ಒಂದಿಷ್ಟು ವೈದ್ಯಕೀಯ ತರಬೇತಿಯಿರುತ್ತದೆ. ಅವರು ಗರ್ಭನಿರೋಧಕಗಳ ಕುರಿತು ಸರಳ ಸಲಹೆಗಳನ್ನು ನೀಡಬಹುದಾದರೂ ಗರ್ಭಪಾತಕ್ಕೆ ಸಂಬಂಧಿಸಿದಂತೆ ಅರ್ಹ ಎಂಬಿಬಿಎಸ್ ವೈದ್ಯರು ಮಾತ್ರ ಸೂಕ್ತ ಔಷಧಿಗಳನ್ನು ಸಲಹೆ ಮತ್ತು ಶಿಫಾರಸು ಮಾಡಬಹುದು."

ರಾಜ್ಯದಲ್ಲಿನ "ತಾಯಿಯ ಮರಣ ಪ್ರಮಾಣ ಮತ್ತು ಶಿಶು ಮರಣ ಪ್ರಮಾಣ ಕುಸಿತದಲ್ಲಿ ಆರ್‌ಎಮ್‌ಎಗಳಿಗೂ ನಾವು ಒಂದಿಷ್ಟು ಪಾಲು ನೀಡಬೇಕಾಗುತ್ತದೆ.” ಎಂದು ಬಾಗೆಲ್‌ ಹೇಳುತ್ತಾರೆ. ಬಾಗೆಲ್‌ ಪಟ್ಟಿ ಮಾಡುವಂತೆ, 2019-20ರಲ್ಲಿ 1,411 ಆರ್‌ಎಂಎಗಳು ರಾಜ್ಯದಲ್ಲಿ ಪ್ರಾಕ್ಟೀಸ್‌ ಮಾಡುತ್ತಿದ್ದಾರೆ. ಛತ್ತೀಸ್‌ಗಢದ ಶಿಶು ಮರಣ ಪ್ರಮಾಣವು 2005-06ರಲ್ಲಿ ಪ್ರತಿ ಸಾವಿರಕ್ಕೆ 71ರಿಂದ 2015-16ರಲ್ಲಿ 54ಕ್ಕೆ ಇಳಿದಿದೆ, ಜೊತೆಗೆ ಸಾರ್ವಜನಿಕ ಸೌಲಭ್ಯದಲ್ಲಿ ಸಾಂಸ್ಥಿಕ ಹೆರಿಗೆಗಳು 2005-06ರಲ್ಲಿ ಶೇ 6.9ರಷ್ಟಿತ್ತು ಈಗ ಶೇ 55.9ಕ್ಕೆ ಏರಿದೆ (ಎನ್‌ಎಫ್‌ಎಚ್‌ಎಸ್ -4).

ಕಮಲಾ ಅವರು ಮೊದಲ ಬಾರಿ ಸಂಪರ್ಕಿಸಿದ ವೈದ್ಯರು ಆರ್‌ಎಮ್‌ಎ ಅಥವಾ ಅನರ್ಹ ವೈದ್ಯರೋ ಎನ್ನುವ ಕುರಿತು ತಿಳಿದಿಲ್ಲ. ಆದರೆ ಗರ್ಭಪಾತಕ್ಕಾಗಿ ಬಳಸಲಾಗುವ ಮಿಸ್‌ಪ್ರೊಸ್ಟಾಲ್ ಮತ್ತು ಮೈಫೆಪ್ರೆಸ್ಟೋನ್ ಅನ್ನು ಶಿಫಾರಸು ಮಾಡಲು ಇಬ್ಬರಿಗೂ ಅಧಿಕಾರವಿಲ್ಲ. "ಎಂಬಿಬಿಎಸ್ ವೈದ್ಯರು ಸಹ ಈ ಔಷಧಿಗಳನ್ನು ಶಿಫಾರಸು ಮಾಡಲು ಅರ್ಹರಾಗುವ ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ಎಂಟಿಪಿಯಲ್ಲಿ 15 ದಿನಗಳ ತರಬೇತಿ ತರಬೇತಿಯನ್ನು ಪಡೆಯಬೇಕಾಗುತ್ತದೆ" ಎಂದು ಬೆನೂರ್ ಪಿಎಚ್‌ಸಿಯ ಮುಖ್ಯಸ್ಥರಾಗಿರುವ 26 ವರ್ಷದ ಅಲೋಪಥಿ ಡಾಕ್ಟರ್ ಪರಮ್‌ಜೀತ್ ಕೌರ್ ಒತ್ತಿ ಹೇಳುತ್ತಾರೆ.“ಈ ಸಮಯದಲ್ಲಿ ನೀವು ರೋಗಿಯನ್ನು ಗಮನಿಸುತ್ತಿರಬೇಕು ಇದರಿಂದ ಅವರಿಗೆ ಹೆಚ್ಚು ರಕ್ತಸ್ರಾವವಾಗುವುದಿಲ್ಲ ಮತ್ತು ಗರ್ಭಪಾತವು ಅಪೂರ್ಣವಾಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬಹುದು. ಇಲ್ಲವಾದಲ್ಲಿ, ಅದು ಮಾರಕವಾಗಬಹುದು."

Left: 'The Dhodai PHC covers 47 villages, of which 25 have no approach road', says L. K. Harjpal (standing in the centre), the RMA at Dhodai. Right: To enable more women to approach public health services, the stage government introduced bike ambulances in 2014
PHOTO • Priti David
Left: 'The Dhodai PHC covers 47 villages, of which 25 have no approach road', says L. K. Harjpal (standing in the centre), the RMA at Dhodai. Right: To enable more women to approach public health services, the stage government introduced bike ambulances in 2014
PHOTO • Priti David

ಎಡ: 'ಧೋಡೈ ಪಿಎಚ್‌ಸಿ 47 ಗ್ರಾಮಗಳನ್ನು ಒಳಗೊಂಡಿದೆ, ಅದರಲ್ಲಿ 25 ಹಳ್ಳಿಗಳಿಗೆ ಸಂಪರ್ಕ ರಸ್ತೆಗಳಿಲ್ಲ' ಎಂದು ಆರ್‌ಎಂಎ ಎಲ್. ಕೆ. ಹರ್ಜ್‌ಪಾಲ್ (ಮಧ್ಯದಲ್ಲಿ ನಿಂತಿರುವವರು) ಹೇಳುತ್ತಾರೆ. ಬಲ: ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಬಳಕೆಗೆ ಹೆಚ್ಚಿನ ಮಹಿಳೆಯರಿಗೆ ಅನುವು ಮಾಡಿಕೊಡಲು, ರಾಜ್ಯ ಸರ್ಕಾರವು 2014ರಲ್ಲಿ ಬೈಕ್ ಆಂಬ್ಯುಲೆನ್ಸ್‌ಗಳನ್ನು ಪರಿಚಯಿಸಿತು

ಸುಮಾರು ಎರಡು ವರ್ಷಗಳ ಅವಧಿಯಲ್ಲಿ ಕಮಲಾರಂತಹ ಅನೇಕ ಪ್ರಕರಣಗಳನ್ನು ತಾನು ನೋಡಿರುವುದಾಗಿ ಕೌರ್‌ ಹೇಳುತ್ತಾರೆ. ಅವರ ಹೊರರೋಗಿ ದಾಖಲಾತಿ ಪುಸ್ತಕದಲ್ಲಿ ದಿನವೊಂದಕ್ಕೆ ಸರಾಸರಿ 60 ವಿವಿಧ ಬಗೆಯ ರೋಗಿಗಳ ದೂರುಗಳು ದಾಖಲಾಗುತ್ತವೆ. ಮತ್ತು ಶನಿವಾರ (ಆ ಪ್ರದೇಶದ ಸಂತೆಯ ದಿನ) ಈ ಸಂಖ್ಯೆ ಸುಮಾರು 100ಕ್ಕೆ ಏರುತ್ತದೆ. "ನಾನು ಒಪಿಡಿಯಲ್ಲಿ ಅನೇಕ [ಸಂತಾನೋತ್ಪತ್ತಿ ಆರೋಗ್ಯ ಸಂಬಂಧಿ] ಪ್ರಕರಣಗಳನ್ನು ನೋಡುತ್ತೇನೆ. ಈ ರೀತಿಯ ಪ್ರಕರಣಗಳಿಗೆ ಕಾರಣ ಅನರ್ಹ ವೈದ್ಯಕೀಯ ಸಿಬ್ಬಂದಿಗಳಿಂದ ಚಿಕಿತ್ಸೆ ಪಡೆಯುವುದು. ಈ ರೀತಿಯ ಅಸಮರ್ಪಕ ರೀತಿಯ ಗರ್ಭಪಾತವು ಬಂಜೆತನ, ಗಂಭೀರ ಕಾಯಿಲೆಗಳು ಅಥವಾ ಸಾವಿಗೂ ಕಾರಣವಾಗಬಹುದು." ಎಂದು ಅವರು ಹೇಳುತ್ತಾರೆ. "ಇಲ್ಲಿ ಬರುವ ಸಾಕಷ್ಟು ಮಹಿಳೆಯರಿಗೆ ಈ ಕುರಿತು ಅರಿವಿರುವುದಿಲ್ಲ." ಎನ್ನುತ್ತಾರೆ. "ಈ ಮಹಿಳೆರಿಗೆ ಕೇವಲ ಮಾತ್ರೆಯನ್ನು ಕೊಟ್ಟು ಯಾವುದೇ ಪೂರಕ ಮಾಹಿತಿ ನೀಡದೆ ಕಳಿಸಲಾಗುತ್ತದೆ. ಜೊತೆಗೆ ಈ ಔಷಧಿಯನ್ನು ಕೊಡುವ ಮೊದಲು ರಕ್ತಹೀನತೆ ಮತ್ತು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸಹ ಪರೀಕ್ಷಿಸಬೇಕು."

ಬೆನೂರಿನಿಂದ ಸುಮಾರು 57 ಕಿಲೋಮೀಟರ್ ದೂರದಲ್ಲಿರುವ ಧೋಡೈನ ಮತ್ತೊಂದು ಪಿಎಚ್‌ಸಿಯಲ್ಲಿ, 19 ವರ್ಷದ ಹಲ್ಬಿ ಆದಿವಾಸಿ ಮಹಿಳೆ ಸೀತಾ (ಹೆಸರು ಬದಲಾಯಿಸಲಾಗಿದೆ), ತನ್ನ ಎರಡು ವರ್ಷದ ಮಗುವಿನೊಂದಿಗೆ ಬಂದಿದ್ದಾರೆ. "ನನಗೆ ಮನೆಯಲ್ಲೇ ಹೆರಿಗೆಯಾಯಿತು. ಗರ್ಭಿಣಿಯಾಗಿದ್ದಾಗ ಮತ್ತು ಹೆರಿಗೆಯ ನಂತರ ನಾನು ಯಾರನ್ನೂ ಸಂಪರ್ಕಿಸಿಲ್ಲ." ಎಂದು ಹೇಳುತ್ತಾರೆ. ಪ್ರಸವಪೂರ್ವ ಮತ್ತು ಪ್ರಸವ ನಂತರದ ಆರೋಗ್ಯ ತಪಾಸಣೆ ಲಭ್ಯವಿರುವ ಅಂಗನವಾಡಿಯು ಆಕೆಯ ಮನೆಯಿಂದ ಕೇವಲ 15 ನಿಮಿಷಗಳ ನಡಿಗೆಯ ದೂರದಲ್ಲಿದೆ. "ಅಲ್ಲಿ ಅವರು ಏನು ಹೇಳುತ್ತಾರೆನ್ನುವುದು ನನಗೆ ಅರ್ಥವಾಗುವುದಿಲ್ಲ" ಎನ್ನುತ್ತಾರೆ ಸೀತಾ.

ನಾನು ಭೇಟಿಯಾದ ಅನೇಕ ಹೆಲ್ತ್‌ ಪ್ರೊಫೆಷನಲ್‌ಗಳು ವೈದ್ಯಕೀಯ ಸಲಹೆಯನ್ನು ನೀಡಲು ಭಾಷೆ ದೊಡ್ಡ ತೊಡಕಾಗಿದೆ ಎಂದು ಹೇಳುತ್ತಾರೆ. ಗ್ರಾಮೀಣ ಬಸ್ತಾರ್‌ನ ಹೆಚ್ಚಿನ ಆದಿವಾಸಿಗಳು ಗೊಂಡಿ ಅಥವಾ ಹಲ್ಬಿಯನ್ನು ಮಾತನಾಡುತ್ತಾರೆ ಮತ್ತು ಸ್ವಲ್ಪ ಛತ್ತೀಸ್‌ಗರ್ಹಿಯನ್ನು ಅರ್ಥಮಾಡಿಕೊಳ್ಳುತ್ತಾರೆ.  ಆದರೆ ಹೆಲ್ತ್‌ ಪ್ರೊಫೆಷನಲ್‌ಗಳು ಸ್ಥಳೀಯರಾಗಿರುವುದಿಲ್ಲ ಅಥವಾ ಈ ಭಾಷೆಗಳಲ್ಲಿ ಕೇವಲ ಒಂದು ಭಾಷೆಯನ್ನು ಮಾತ್ರ ಅರಿತಿರುತ್ತಾರೆ. ಇಲ್ಲಿ ಸಂಪರ್ಕ ಇನ್ನೊಂದು ಸಮಸ್ಯೆ. ಧೋಡೈ ಪಿಎಚ್‌ಸಿ 47 ಗ್ರಾಮಗಳನ್ನು ಒಳಗೊಂಡಿದೆ, ಅದರಲ್ಲಿ 25 ಹಳ್ಳಿಗಳಿಗೆ ಸಂಪರ್ಕ ರಸ್ತೆ ಇಲ್ಲ ಎಂದು ಧೋಡೈನ ಆರ್‌ಎಂಎ ಎಲ್. ಕೆ. ಹರ್ಜ್‌ಪಾಲ್ (38) ಹೇಳುತ್ತಾರೆ. "ಒಳನಾಡಿನ ಪ್ರದೇಶಗಳನ್ನು ತಲುಪುವುದು ಕಷ್ಟ, ಮತ್ತು ಇಲ್ಲಿ ಭಾಷೆ ಕೂಡ ಒಂದು ಸಮಸ್ಯೆಯಾಗಿದೆ, ಇದರಿಂದ ನಾವು [ಪ್ರಸವ ಸಂಬಂಧಿ ಆರೈಕೆ] ನಮ್ಮ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ" ಎಂದು ಅವರು ಹೇಳುತ್ತಾರೆ. "ನಮ್ಮ ಆಕ್ಸಿಲರಿ ನರ್ಸ್‌ ಮಿಡ್‌ವೈವ್ಸ್‌ಗಳು (ಎಎನ್‌ಎಂಗಳು) ಎಲ್ಲಾ ಮನೆಗಳನ್ನು ತಲುಪಲು ಕಷ್ಟಪಡುತ್ತಾರೆ, ಆದರೆ ಮನೆಗಳು ದೂರ ದೂರವಿರುತ್ತವೆ." ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಹೆಚ್ಚಿನ ಮಹಿಳೆಯರಿಗೆ ತಲುಪುವಂತೆ ಅನುವು ಮಾಡಿಕೊಡಲು, ರಾಜ್ಯ ಸರ್ಕಾರವು 2014ರಲ್ಲಿ ಬೈಕ್ ಆಂಬ್ಯುಲೆನ್ಸ್‌ಗಳನ್ನು ಪರಿಚಯಿಸಿತು, ಮತ್ತು ಈಗ ಐದು ಜಿಲ್ಲೆಗಳಲ್ಲಿ ಇವು ಕಾರ್ಯನಿರ್ವಹಿಸುತ್ತಿವೆ.

ಈ ಆಂಬುಲೆನ್ಸ್‌ ಸೇವಯನ್ನು ಬಳಸಿದವರಲ್ಲಿ 22 ವರ್ಷದ ದಾಶ್ಮತಿ ಯಾದವ್‌ ಕೂಡ ಒಬ್ಬರು. ಅವರು ಅವರು ಮತ್ತು ಪತಿ ಪ್ರಕಾಶ್‌ ಒಂದು ತಿಂಗಳ ಹೆಣ್ಣು ಮಗುವಿನ ತಂದೆ ತಾಯಿ. ಅವರು ವೃತ್ತಿಯಿಂದ ಕೃಷಿಕರಾಗಿದ್ದು ಐದು ಎಕರೆ ಜಮೀನು ಹೊಂದಿದ್ದಾರೆ. “ನಾನು ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾಗ, ಹಳ್ಳಿಯ ಸಿರ್ಹಾ [ಸಾಂಪ್ರದಾಯಿಕ ವೈದ್ಯ] ಅಂಗನವಾಡಿ ಅಥವಾ ಆಸ್ಪತ್ರೆಗೆ ಹೋಗದಂತೆ ಹೇಳಿದ್ದರು. ತಾನೇ ನೋಡಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಮನೆಯಲ್ಲೇ ಹೆರಿಗೆಯಾಗಿ ಗಂಡು ಮಗು ಜನಿಸಿದ ಕೂಡಲೇ ತೀರಿಕೊಂಡಿತು." ಎಂದು ದಾಶ್ಮತಿ ಹೇಳುತ್ತಾರೆ.  “ಹೀಗಾಗಿ ಈ ಸಲ ನನ್ನ ಗಂಡ ಆಂಬುಲೆನ್ಸ್‌ಗೆ ಫೋನ್‌ ಮಾಡಿದರು. ಅದರಲ್ಲಿ ನನ್ನನ್ನು ಹೆರಿಗಾಗಿ ಬೆನೂರಿಗೆ ಕರೆದೊಯ್ಯಲಾಯಿತು" ತನ್ನ ಹಳ್ಳಿಯಿಂದ 17 ಕಿಲೋಮೀಟರ್ ದೂರದಲ್ಲಿರುವ ಪಿಎಚ್‌ಸಿಯಲ್ಲಿ ಮಹತಾರಿ ಎಕ್ಸ್‌ಪ್ರೆಸ್ ಹೆಸರಿನ ಆಂಬುಲೆನ್ಸ್ ಇದ್ದು ('ಮಹತಾರಿ' ಎಂದರೆ ಛತ್ತೀಸ್‌ಗರೀಯಲ್ಲಿ 'ತಾಯಿ' ಎಂದರ್ಥ) 102 ನಂಬರ್‌ಗೆ ಕರೆ ಮಾಡುವ ಮೂಲಕ ಕಾಯ್ದಿರಿಸಬಹುದು. ಆಕೆ ನಗುಮೊಗದಿಂದ ಹೇಳುತ್ತಾರೆ.

Left: Dr. Meenal Indurkar, district consultant for health in Narayanpur, speaking to young mothers about malnutrition. Right: Dashmati Yadav (with her husband Prakash and their baby girl), says, '...my baby boy died after birth at home. So this time my husband called the ambulance and I was taken to Benoor for my delivery'
PHOTO • Priti David
Left: Dr. Meenal Indurkar, district consultant for health in Narayanpur, speaking to young mothers about malnutrition. Right: Dashmati Yadav (with her husband Prakash and their baby girl), says, '...my baby boy died after birth at home. So this time my husband called the ambulance and I was taken to Benoor for my delivery'
PHOTO • Avinash Awasthi

ಎಡ: ಅಪೌಷ್ಟಿಕತೆ ಕುರಿತು ಯುವ ತಾಯಂದಿರೊಂದಿಗೆ ಮಾತನಾಡುತ್ತಿರುವ ನಾರಾಯಣಪುರದ ಆರೋಗ್ಯ ಜಿಲ್ಲಾ ಸಲಹೆಗಾರರಾದ ಡಾ.ಮೀನಲ್ ಇಂದೂರ್ಕರ್. ಬಲ: ದಾಶ್ಮತಿ ಯಾದವ್ (ಪತಿ ಪ್ರಕಾಶ್ ಮತ್ತು ಅವರ ಹೆಣ್ಣು ಮಗುವಿನೊಂದಿಗೆ), '... ನನ್ನ ಗಂಡು ಮಗು ಹುಟ್ಟಿದ ನಂತರ ಮನೆಯಲ್ಲಿ ತೀರಿಕೊಂಡಿತು. ಹೀಗಾಗಿ ಈ ಬಾರಿ ನನ್ನ ಪತಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ನನ್ನ ಹೆರಿಗೆಗಾಗಿ ನನ್ನನ್ನು ಬೆನೂರಿಗೆ ಕರೆತಂದರು'

"ಹೆಚ್ಚಿನ ಮಹಿಳೆಯರನ್ನು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸಲು, ಜನನಿ ಶಿಶು ಸುರಕ್ಷ ಕಾರ್ಯಕ್ರಮವನ್ನು 2011ರಲ್ಲಿ [ಕೇಂದ್ರ ಸರ್ಕಾರ] ಪ್ರಾರಂಭಿಸಿತು, ಆಸ್ಪತ್ರೆ ತಲುಪಲು ಪ್ರಯಾಣ ವೆಚ್ಚ, ಉಚಿತ ಆಸ್ಪತ್ರೆಯ ವಾಸ್ತವ್ಯ, ಉಚಿತ ಆಹಾರ ಮತ್ತು ಅಗತ್ಯವಿರುವ ಔಷಧಿಗಳನ್ನು ಈ ಯೋಜನೆಯಡಿ ನೀಡಲಾಗುತ್ತದೆ" ಎಂದು ಡಾ. ಮೀನಲ್ ಹೇಳುತ್ತಾರೆ. ನಾರಾಯಣಪುರದ ಆರೋಗ್ಯ ಜಿಲ್ಲಾ ಸಲಹೆಗಾರರಾದ ಇಂದೂರ್ಕರ್ “ಮತ್ತು ಪ್ರಧಾನ್ ಮಂತ್ರಿ ಮಾತೃ ವಂದನ ಯೋಜನೆಯಡಿ ನಾಲ್ಕು ಪ್ರಸವಪೂರ್ವ ತಪಾಸಣೆಗಳನ್ನು ಪೂರ್ಣಗೊಳಿಸಿದ, ಆಸ್ಪತ್ರೆಯಲ್ಲಿ ಹೆರುವ ಮತ್ತು ನವಜಾತ ಶಿಶುವಿನ ರೋಗನಿರೋಧಕಗಳನ್ನು ಪೂರ್ತಿಯಾಗಿ ಹಾಕಿಸುವ ತಾಯಿಗೆ 5,000 ರೂಪಾಯಿ ನಗದು ಪ್ರೋತ್ಸಾಹವನ್ನು ನೀಡಲಾಗುತ್ತದೆ” ಎಂದು ಹೇಳುತ್ತಾರೆ.

ಬೆನೂರ್ ಪಿಎಚ್‌ಸಿಯಲ್ಲಿ, ಕಮಲಾ ತನ್ನ ಎಂಟಿಪಿಗಾಗಿ ಕಾಯುತ್ತಿದ್ದರೆ, ರವಿ ತನ್ನ ಹೆಂಡತಿಗಾಗಿ ಒಂದು ಕಪ್ ಚಹಾದೊಂದಿಗೆ ಬಂದರು. ಉದ್ದನೆಯ ತೋಳಿನ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದ ಅವರು ಆರೋಗ್ಯ ಕೇಂದ್ರಕ್ಕೆ ಯಾಕೆ ಬಂದಿದ್ದೇವೆಂದು ಅವರು ತಮ್ಮ ಕುಟುಂಬಕ್ಕೆ ತಿಳಿಸಿಲ್ಲ ಎಂದು ನಮಗೆ ತಿಳಿಸಿದರು. "ನಾವು ಅವರಿಗೆ ಎಲ್ಲ ಮುಗಿದ ಮೇಲೆ ಹೇಳುತ್ತೇವೆ" ಎಂದು ಅವರು ಹೇಳುತ್ತಾರೆ. “ನಾವು ಮೂರು ಮಕ್ಕಳನ್ನು ಬೆಳೆಸಬೇಕಿದೆ; ಇನ್ನೊಂದು ಮಗುವನ್ನು ಸಾಕುವುದು ಕಷ್ಟವಾಗುತ್ತದೆ... ”

ಕಮಲಾ ಒಬ್ಬ ಅನಾಥ ಯುವತಿಯಾಗಿದ್ದು ಅವರ ತಂದೆಯ ಕಡೆಯ ಸಂಬಂಧಿಯೊಬ್ಬರು ಅವರನ್ನು ಪಾಲಿಸಿ ಮದುವೆಯನ್ನೂ ಮಾಡಿಸಿದರು. ಮದುವೆಗೆ ಮೊದಲು ಕಮಲಾ ತನ್ನ ಗಂಡನನ್ನು ನೋಡಿರಲಿಲ್ಲ. "ನಾನು ಋತುಮತಿಯಾದ ಕೆಲವೇ ದಿನಗಳಲ್ಲಿ ನನ್ನ ಮದುವೆಯಾಯಿತು. ನನ್ನ ಸಮುದಾಯದಲ್ಲಿ ಮದುವೆಗಳು ಹೀಗೇ ನಡೆಯುತ್ತವೆ. ಮದುವೆಯೆಂದರೇನೆಂದು ನನಗೆ ತಿಳಿದಿರಲಿಲ್ಲ. ನನ್ನ ಮುಟ್ಟಿನ ಬಗ್ಗೆ ಚಿಕ್ಕಮ್ಮ ಕೇವಲ ʼಡೇಟ್‌ ಆಯೇಗಾʼ ['ಡೇಟ್' ಅಥವಾ ಮುಟ್ಟು ಬರುತ್ತದೆ] ಎಂದು ಮಾತ್ರ ತಿಳಿಸಿದ್ದರು. ನಾನು ಶಾಲೆ ಕಲಿತಿಲ್ಲ ಹೀಗಾಗಿ ನನಗೆ ಓದು-ಬರಹ ಗೊತ್ತಿಲ್ಲ ಆದರೆ ನನ್ನ ಮೂರು ಮಕ್ಕಳೂ ಶಾಲೆಗೆ ಹೋಗುತ್ತಿದ್ದಾರೆ" ಎಂದು ಕಮಲಾ ಹೆಮ್ಮೆಯಿಂದ ಹೇಳುತ್ತಾರೆ.

ಕಮಲಾ ಕೆಲವು ತಿಂಗಳುಗಳ ನಂತರ ಟ್ಯೂಬಲ್‌ ಲೆಗೇಷನ್‌ಗಾಗಿ (ಸಂತಾನ ಶಕ್ತಿ ಹರಣ) ಮತ್ತೆ ಪಿಎಚ್‌ಸಿಗೆ ಬರಲು ತೀರ್ಮಾನಿಸಿದ್ದಾರೆ. ಆಕೆಯ ಗಂಡ ವ್ಯಾಸೆಕ್ಟಮಿ ಮಾಡಿಸಿಕೊಳ್ಳಲು ಒಪ್ಪುವುದಿಲ್ಲ ಆತ ಅದರಿಂದ ತನ್ನ ಪುರುಷತ್ವ ಹೋಗಬಹುದೆಂಬ ಭಯವನ್ನು ಹೊಂದಿದ್ದಾರೆ. ಕಮಲಾ ಈ ಬಾರಿಯ ಭೇಟಿಯಲ್ಲಿ ಗರ್ಭನಿರೋಧಕ ಮತ್ತು ಸ್ಟೆರಿಲೈಸೇಷನ್‌ ಮುಂತಾದ ಪರಿಕಲ್ಪನೆಗಳ ಕುರಿತು ಮಾತ್ರ ಕೇಳಿದ್ದಾರೆ, ಆದರೆ ಅದೆಲ್ಲವನ್ನೂ  ಅವರು ಬಹುಬೇಗ ಅರಿತುಕೊಂಡಿದ್ದಾರೆ. "ನನಗೆ ಗರ್ಭಿಣಿಯಾಗುವುದು ಇಷ್ಟವಿಲ್ಲದಿದ್ದಲ್ಲಿ, ಇದೊಂದು ಆಯ್ಕೆಯಾಗಿದೆ ಎಂದು ವೈದ್ಯರು ಹೇಳಿದ್ದಾರೆ" ಎಂದು ಅವರು ಹೇಳುತ್ತಾರೆ. ಕುಟುಂಬ ಯೋಜನೆ ತಂತ್ರಗಳ ಕುರಿತ ಕಮಲಾ ಅವರ ಶಿಕ್ಷಣವು 30ರ ಪ್ರಾಯದ ನಡುವಿನಲ್ಲಿ ಪ್ರಾರಂಭವಾಯಿತು, ಅದೂ ಅವರು ಮೂರು ಮಕ್ಕಳನ್ನು ಪಡೆದ ನಂತರ, ಹಾಗೂ ಶಸ್ತ್ರಚಿಕಿತ್ಸೆಯು ಅವರ ಸಂತಾನೋತ್ಪತ್ತಿ ಚಕ್ರವನ್ನು ಸಂಪೂರ್ಣವಾಗಿ ನಿಲ್ಲಿಸುವ ಸಮಯದಲ್ಲಿ.

ಈ ವರದಿಯನ್ನು ತಯಾರಿಸಲು ಹೆಚ್ಚಿನ ಬೆಂಬಲ ಮತ್ತು ಸಹಾಯ ನೀಡಿದ ಭೂಪೇಶ್ ತಿವಾರಿ, ಅವಿನಾಶ್ ಅವಸ್ಥಿ ಮತ್ತು ವಿದುಶಿ ಕೌಶಿಕ್ ಅವರಿಗೆ ವರದಿಗಾರರು ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.

ಕವರ್ ಇಲ್ಲಸ್ಟ್ರೇಷನ್: ಪ್ರಿಯಾಂಕಾ ಬೋರಾರ್ ಹೊಸ ಮಾಧ್ಯಮ ಕಲಾವಿದೆ, ಹೊಸ ಪ್ರಕಾರದ ಅರ್ಥ ಮತ್ತು ಅಭಿವ್ಯಕ್ತಿಯನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದ್ದಾರೆ. ಅವರು ಕಲಿಕೆ ಮತ್ತು ಆಟಕ್ಕೆ ಎಕ್ಸ್‌ಪಿರಿಯೆನ್ಸ್ ವಿನ್ಯಾಸ‌ ಮಾಡುತ್ತಾರೆ, ಸಂವಾದಾತ್ಮಕ ಮಾಧ್ಯಮದೊಂದಿಗೆ ಕೂಡ ಆಟವಾಡುತ್ತಾರೆ ಮತ್ತು ಸಾಂಪ್ರದಾಯಿಕ ಪೆನ್ ಮತ್ತು ಕಾಗದ ಇವರಿಗೆ ಹೆಚ್ಚು ಆಪ್ತವಾದ ಕಲಾ ಮಾಧ್ಯಮ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ ಎನ್ ಕೆಂಚನೂರು

Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Illustration : Priyanka Borar

Priyanka Borar is a new media artist experimenting with technology to discover new forms of meaning and expression. She likes to design experiences for learning and play. As much as she enjoys juggling with interactive media she feels at home with the traditional pen and paper.

Other stories by Priyanka Borar
Editor : Hutokshi Doctor
Series Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N Kenchanuru

Shankar N. Kenchanuru is a poet and freelance translator. He can be reached at [email protected].

Other stories by Shankar N Kenchanuru