ಮರದ ಕೆಲಸದವರು ಕೊಡಲಿಯನ್ನು ಬೀಸಿ ಮರದ ತುಂಡಿಗೆ ಅಪ್ಪಳಿಸುತ್ತಾರೆ – ಕಚಕ್‌ ಎನ್ನುತ್ತದೆ – ಹತ್ತು ಅಡಿ ದೂರದಲ್ಲಿರುವ ನಾನು ಬೆಚ್ಚಿ ಒಂದಷ್ಟು ಹಿಂದಕ್ಕೆ ಸರಿಯುತ್ತೇನೆ. ಅವರ ಬೆನ್ನಿನಿಂದ ಇಳಿಯುವ ಬೆವರು ಸೊಂಟಕ್ಕೆ ಸುತ್ತಿಕೊಂಡಿದ್ದ ಟವೆಲ್ಲನ್ನು ಒದ್ದೆಯಾಗಿಸುತ್ತದೆ. ಅವರು ಮತ್ತೆ ಮತ್ತೆ ಮರಕ್ಕೆ ಕಚ್ಚು ಹಾಕುತ್ತಾರೆ. ಕೊನೆಗೂ ಅದು ಸೀಳು ಬಿಡುತ್ತದೆ. ಮರ ಕಡಿಯುವ ವ್ಯಕ್ತಿಯ ಹೆಸರು ಎಮ್.‌ ಕಾಮಾಚ್ಚಿ. ಬಹಳ ಹಿಂದೆ ಅವರು ಕೃಷಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಅವರು ತಲೆಯೆತ್ತದೆ ಕೊಡಲಿಯ ತುದಿಯತ್ತ ನೋಡುತ್ತಲೇ ನನ್ನೊಂದಿಗೆ ಮಾತನಾಡುತ್ತಿದ್ದರು.

ತಂಜಾವೂರಿನ ಭವ್ಯವಾದ ಹಳೆಯ ಉದ್ಯಾನವಾದ ಶಿವಗಂಗೈ ಪೂಂಗಾ ಬಳಿಯ ಶೆಡ್ ಒಂದರಲ್ಲಿ ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿರುವ ಅವರಿಗೆ ಪ್ರಸ್ತುತ 67 ವರ್ಷ. ಅವರ ಕೆಲಸದ ಸ್ಥಳ ಪಕ್ಕದಲ್ಲಿರುವ ಉದ್ಯಾನಕ್ಕೆ ಈಗ 150 ವರ್ಷ. ಅಲ್ಲೇ ಹತ್ತಿರದಲ್ಲಿರುವ ಬೃಹದೀಶ್ವರ ದೇವಸ್ಥಾನ 1,100 ವರ್ಷಗಳಷ್ಟು ಹಳೆಯದು. ಬೃಹದೀಶ್ವರನ ಕೈಯಲ್ಲಿರುವ ಉಪಕರಣದ ಇತಿಹಾಸ ಅದಕ್ಕೂ ಹಿಂದಿನದು. ಕಾಮಾಚ್ಚಿಯವರು ನಾಲ್ಕು ಅಡಿ ಉದ್ದದ ಹಲಸಿನ ಮರವನ್ನು ವೀಣೆಯ ಅಗತ್ಯಕ್ಕೆ ತಕ್ಕಂತೆ ಕತ್ತರಿಸುತ್ತಿದ್ದಾರೆ.

ಮರದ ತುಂಡು ಅಲುಗಾಡದ ಹಾಗೆ ಅದನ್ನು ಅವರು ತಮ್ಮ ಬಲ ಪಾದದಿಂದ ಮೆಟ್ಟಿಕೊಳ್ಳುತ್ತಾರೆ. ಕೆತ್ತನೆ ಪೂರ್ತಿಯಾದ ನಂತರ ಅದು ಕುಡಮ್‌ (ಅನುರಣಕ) ಆಗಿ ಬದಲಾಗುತ್ತದೆ. ಅವರ ಕೆಲಸದ ಶೆಡ್‌ ನೆರಳಿನಡಿಯಿದ್ದರೂ ಅಲ್ಲಿ ಬಹಳ ಸೆಕೆಯಿತ್ತು. ಕಾಮಾಚ್ಚಿಯವರ ಕೆಲಸ ಬಹಳ ಕಷ್ಟದ್ದು. ಅವರ ಒಂದು ದಿನದ ಶ್ರಮ ಮತ್ತು ಕೌಶಲಕ್ಕೆ ಪ್ರತಿಯಾಗಿ ಅವರಿಗೆ 600 ರೂಪಾಯಿ ಹಣ ಕೂಲಿಯಾಗಿ ದೊರೆಯುತ್ತದೆ. ಪ್ರತಿ ಬಾರಿ ಕೊಡಲಿಯಿಂದ ಕತ್ತರಿಸುವಾಗಲೂ ಹೂಂಕರಿಸುತ್ತಾರೆ ಆಗೊಮ್ಮೆ ಈಗೊಮ್ಮೆ ತಮ್ಮ ಬಳಿಯಿರುವ ಒರಟು ಟವೆಲ್‌ ಬಳಸಿ ಮುಖ ಒರೆಸಿಕೊಳ್ಳುತ್ತಾರೆ.

ಕೆಲವೇ ಗಂಟೆಗಳಲ್ಲಿ ಅವರು 30 ಕೇಜಿ ತೂಕದ ದಿಮ್ಮಿಯನ್ನು 20 ಕೇಜಿಗೆ ಇಳಿಸುತ್ತಾರೆ. ನಂತರ ಅದು ಮುಂದಿ ಪ್ರಕ್ರಿಯೆಗಾಗಿ ಪಟ್ಟರೈ (ವರ್ಕ್‌ಶಾಪ್)‌ ಗೆ ಹೋಗುತ್ತದೆ. ಅಲ್ಲಿ ಕುಶಲ ಕರ್ಮಿಗಳು ಅದನ್ನು ಕೆತ್ತಿ, ಹೊಳಪು ನೀಡುತ್ತಾರೆ. ಒಂದು ತಿಂಗಳ ಕಾಲದ ಹಲವು ಪ್ರಕ್ರಿಯೆಗಳ ನಂತರ ವೀಣೆಯಾಗಿ ಪೂರ್ಣಗೊಳ್ಳುವ ಅದು ಸಂಗೀತಗಾರರ ಕೈ ತಲುಪಿ ಮಧುರ ಸಂಗೀತವನ್ನು ಹೊರಹೊಮ್ಮಿಸುತ್ತದೆ.

Left: Logs of jackfruit wood roughly cut at the saw mill wait for their turn to become a veenai
PHOTO • Aparna Karthikeyan
Right: Using an axe, Kamachi splitting, sizing and roughly carving the timber
PHOTO • Aparna Karthikeyan

ಎಡಕ್ಕೆ: ಮರದ ಮಿಲ್ಲಿನಲ್ಲಿ ಕತ್ತರಿಸಲ್ಪಟ್ಟ ಹಲಸಿನ ಮರದ ದಿಮ್ಮಿಗಳು ವೀಣೆಯಾಗಲು ತಮ್ಮ ಸರದಿಗಾಗಿ ಕಾಯುತ್ತಿವೆ. ಬಲ: ಕೊಡಲಿಯನ್ನು ಬಳಸಿ, ಕಾಮಾಚ್ಚಿ ಮರವನ್ನು ಇಬ್ಭಾಗ ಮಾಡುವುದು, ಗಾತ್ರಕ್ಕೆ ಹೊಂದಿಸುವುದು ಮತ್ತು ಒರಟಾಗಿ ಕೆತ್ತುವುದನ್ನು ಮಾಡುತ್ತಾರೆ

Left: Veenais are lined up in the workshop, waiting for the finishing touches .
PHOTO • Aparna Karthikeyan
Right: Different musical instruments made by Kuppusami Asari from jackfruit wood, including mridangam, tavil, kanjira and udukkai
PHOTO • Aparna Karthikeyan

ಎಡ: ವರ್ಕ್‌ಶಾಪಿನಲ್ಲಿ ಅಂತಿಮ ಸ್ಪರ್ಶಕ್ಕಾಗಿ ಸಾಲಾಗಿ ನಿಂತು ಕಾಯುತ್ತಿರುವ ವೀಣೆಗಳು. ಬಲ: ಬಲ: ಮೃದಂಗ, ತವಿಲ್, ಕಂಜಿರಾ ಮತ್ತು ಉಡುಕ್ಕೈ ಸೇರಿದಂತೆ ಹಲಸಿನ ಮರದಿಂದ ಕುಪ್ಪುಸಾಮಿ ಆಸಾರಿ ತಯಾರಿಸಿದ ವಿವಿಧ ಸಂಗೀತ ವಾದ್ಯಗಳು

ವೀಣೆಯ ತವರೂರು ತಂಜಾವೂರು. ತಂಜಾವೂರು ವೀಣೆಯ ಹಳೆಯ ಆವೃತ್ತಿಯಾದ ಸರಸ್ವತಿ ವೀಣೆ ಭಾರತದ ರಾಷ್ಟ್ರೀಯ ವಾದ್ಯವಾಗಿ ಗುರುತಿಸಿಕೊಂಡಿದೆ. ಮತ್ತು ಮೃದಂಗ ಮತ್ತು ಕೊಳಲಿನ ಜೊತೆಗೆ 'ವೈದಿಕ ಕಾಲದ' ಉಲ್ಲೇಖಗಳನ್ನು ಹೊಂದಿರುವ ಮೂರು ' ಅಲೌಕಿಕ ವಾದ್ಯಗಳಲ್ಲಿ ' ಒಂದಾಗಿದೆ.

ಮೃದಂಗ, ಕಂಜೀರಾ, ತವಿಲ್, ಉಡುಕ್ಕೈ - ಇತರ ಅನೇಕ ತಾಳವಾದ್ಯಗಳಂತೆ ವೀಣೆ ಕೂಡ ಸಿಹಿ ಮತ್ತು ಮಾಂಸಲ ರೂಪದ ಹಲಸಿನ ಹಣ್ಣಿಗೆ ಹೆಸರುವಾಸಿಯಾದ ಕಡಲೂರು ಜಿಲ್ಲೆಯ ಸಣ್ಣ ಪಟ್ಟಣವಾದ ಪನ್ರುಟ್ಟಿ ಬಳಿಯ ತೋಪುಗಳಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಭಾರತದ ಕೆಲವು ಅಪ್ರತಿಮ ಸಂಗೀತ ವಾದ್ಯಗಳೊಂದಿಗೆ ಹಲಸಿನ ಮರವು ಹೊಂದಿರುವ ಸಂಪರ್ಕ ಅಷ್ಟೇನೂ ಪ್ರಚಲಿತವಲ್ಲ.

*****

"ನನ್ನ ಮಾತುಗಳನ್ನು ಕೇಳಿದ ಅವನು ಉಳಿಯಲು ಒಪ್ಪಿದ
ಅಂಕುಶಕ್ಕೆ ಬೆದರದ ಮದ್ದಾನೆ ಯಾಳ್‌ ಸದ್ದಿಗೆ ಬೆದರುವಂತೆ.”

ಕಳಿತೋಕೈ 2, ಸಂಗಮ್ ಕವಿತೆ

ತಂಜಾವೂರು ವೀಣೆಗೆ 2013ರಲ್ಲಿ ಗ್ಲೋಬಲ್‌ ಇಂಡಿಕೇಷನ್‌ ದೊರಕಿತು. ಈ ಗುರುತಿಗಾಗಿ ಸಲ್ಲಿಸಿದ ಅರ್ಜಿಯಲ್ಲಿ ವೀಣೆಯ ಇತಿಹಾಸದ ಭಾಗವಾಗಿ ಹಲವು ಉಲ್ಲೇಖಗಳನ್ನು ಕಳುಹಿಸಲಾಗಿತ್ತು. ಅವುಗಳಲ್ಲಿ ಕೆಲವು ಸಂಗಮ್‌ ಕಾಲಕ್ಕೆ ಸೇರಿವೆ (ಸುಮಾರು 2,000 ವರ್ಷಗಳಷ್ಟು ಹಿಂದಿನದು). ಆಗ ಬಳಸಲಾಗುತ್ತಿದ್ದ ವೀಣೆಗೆ ಯಾಳ್‌ ಎನ್ನುವ ಹೆಸರಿತ್ತು.

ಅವನು ಬರುವನೇ? ನೀನು ಬೇರೆ ಹೆಂಗಸರ ಬಳಿ ಹೋದರೆ
ನಿನ್ನಿಂದ ಮರೆಮಾಚುವುದಿಲ್ಲವೆಂದು
ತನ್ನ ಯಾಳ್‌ ಮೇಲೆ ಪ್ರಮಾಣ ಮಾಡಿದ ಕವಿ?
ಬಂದು ವಿವರಿಸುವನೆ ನಿನ್ನ ಸುಳ್ಳುಗಳ ನಂಬಿ ನಿನ್ನೊಡನೆ ಸೇರಿದ ಮಹಿಳೆಯರ
ಬಳೆ ತಾಕಿ ನಿನ್ನ ಕುತ್ತಿಗೆಯ ಬಳಿಯ ಆಗಿರುವ ಗಾಯಗಳ ಕುರಿತು?”

ಕಳಿತೋಕೈ 71, ಸಂಗಮ್ ಕವಿತೆ , ಉಪಪತ್ನಿ ನಾಯಕನಿಗೆ ಹೇಳುವ ಮಾತು

ಜಿಯೋಗ್ರಾಫಿಕಲ್‌ ಇಂಡಿಕೇಷನ್‌ ದಾಖಲೆಯು ಹಲಸಿನ ಮರವನ್ನು ವೀಣೆಯ ಕಚ್ಚಾ ವಸ್ತುವೆಂದು ನಿರ್ದಿಷ್ಟಪಡಿಸುತ್ತದೆ ಮತ್ತು ಅದರ ನಿರ್ಮಾಣದ ವಿವರವಾದ ವಿವರಗಳನ್ನು ಹೊಂದಿದೆ. ನಾಲ್ಕು ಅಡಿ ಉದ್ದದ ವೀಣೆಯು "ದಪ್ಪವಾದ, ಅಗಲವಾದ ಕುತ್ತಿಗೆಯನ್ನು ಹೊಂದಿರುವ ದೊಡ್ಡ, ದುಂಡಗಿನ ಮೈಯನ್ನು ಹೊಂದಿದೆ, ಅದರ ತುದಿಯನ್ನು ಡ್ರ್ಯಾಗನ್ ಆಕಾರದಲ್ಲಿ ಕೆತ್ತಲಾಗಿರುತ್ತದೆ" ಎಂದು ಅದು ಹೇಳುತ್ತದೆ.

ವೀಣೆಯು ಈ ವರ್ಣನೆಗಿಂತಲೂ ಸೊಗಸಾಗಿದೆ. ಹಲವು ಸ್ಥಳಗಳಲ್ಲಿ ಮೋಹಕ ಬಾಗುಗಳನ್ನು ಹೊಂದಿದ್ದರೆ ಉಳಿದೆಡೆ ಕೆತ್ತನೆಯನ್ನು ಹೊಂದಿರುತ್ತದೆ. ಯಾಳಿ ಎಂದು ಕರೆಯಲ್ಪಡುವ ಅದರ ತುದಿಯು ಆಕರ್ಷಕ ಮತ್ತು ವರ್ಣರಂಜಿತ. ಅದರ ತಲೆಯು 24 ಸ್ಥಿರ ಗೆರೆಗಳು ಮತ್ತು ಮತ್ತು ನುಡಿಸುವ ತಂತಿಗಳನ್ನು ಹೊಂದಿದ್ದು ಇದು ಎಲ್ಲಾ ಬಗೆಯ ರಾಗವನ್ನು ಹೊರಡಿಸಬಲ್ಲದು. ʼವಿಶೇಷʼ ವೀಣೆಗಳಲ್ಲಿ ಕುಡಮ್ (ಅನುರಣಕ) ಸಂಕೀರ್ಣ ವಿನ್ಯಾಸಗಳನ್ನು ಹೊಂದಿದ್ದು, ಅವುಗಳು ಸಾಮಾನ್ಯ ವೀಣೆಗಳಿಗಿಂತ ಕನಿಷ್ಠ ಎರಡು ಪಟ್ಟು ಹೆಚ್ಚು ಬೆಲೆಯನ್ನು ಹೊಂದಿರುತ್ತವೆ.

ಮನುಷ್ಯರ ಕೈಯಲ್ಲಿ ವೀಣೆಯಾಗಿ ಪರಿವರ್ತನೆ ಹೊಂದುವ ಮೊದಲು ಇದು ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುಟ್ಟಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪಾಲಮರದ (ಹಲಸು) ತೋಪುಗಳಲ್ಲಿ ಬೆಳೆಯುತ್ತದೆ. ಜಾನುವಾರುಗಳಂತೆ ಜನರ ಪಾಲಿಗೆ ಇವು ಕೂಡಾ ಹೂಡಿಕೆಯಂತೆ. ಇವುಗಳ ಮೌಲ್ಯವು ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗುತ್ತದೆ. ಮತ್ತು ಅವುಗಳನ್ನು ಒಳ್ಳೆಯ ಲಾಭಕ್ಕೆ ಮಾರಲೂಬಹುದು. ಪನ್ರುಟ್ಟಿ ಪಟ್ಟಣದ ಹಲಸಿನ ವ್ಯಾಪಾರಿ 40 ವರ್ಷದ ಆರ್. ವಿಜಯಕುಮಾರ್, ಮರದ ಕಾಂಡವು ಎಂಟು ಕೈಗಳ ಅಗಲ ಮತ್ತು 7 ಅಥವಾ 9 ಅಡಿ ಎತ್ತರವಿದ್ದರೆ, "ಕೇವಲ ಮರವೊಂದೇ 50,000 ರೂಪಾಯಿಗಳ ಬೆಲೆ ಪಡೆಯುತ್ತದೆ" ಎಂದು ವಿವರಿಸುತ್ತಾರೆ.

Left: Jackfruit growing on the trees in the groves near Panruti, in Cuddalore district.
PHOTO • Aparna Karthikeyan
Right: Finishing touches being made on the veenai in the passageway next to Narayanan’s workshop
PHOTO • Aparna Karthikeyan

ಎಡ: ಕಡಲೂರು ಜಿಲ್ಲೆಯ ಪನ್ರು ಟ್ಟಿ ಬಳಿಯ ತೋಪುಗಳಲ್ಲಿನ ಮರಗಳ ಲ್ಲಿನ ಹಲಸಿನ ಹಣ್ಣು. ಬಲ: ನಾರಾಯಣನ್ ಅವರ ವರ್ಕ್‌ಶಾಪಿನ ಪಕ್ಕದ ಹಾದಿಯಲ್ಲಿ ವೀಣೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ

Left: Details on the finished veenai , including the yali (dragon head).
PHOTO • Aparna Karthikeyan & Roy Benadict Naveen
Right: Murugesan, a craftsman in Narayanan's workshop sanding down and finishing a veenai
PHOTO • Aparna Karthikeyan

ಎಡ: ಯಾಳಿ (ಡ್ರ್ಯಾಗನ್ ಹೆಡ್) ಸೇರಿದಂತೆ ಪೂರ್ಣಗೊಂಡ ವೀಣೆಯ ವಿವರಗಳು. ಬಲ: ನಾರಾಯಣನ್ ಅವರ ವರ್ಕ್ ಶಾಪಿನಲ್ಲಿ ಕುಶಲಕರ್ಮಿಯಾಗಿರುವ ಮುರುಗೇಶನ್ ಅವರು ಸ್ಯಾಂಡಿಂಗ್‌ ಮಾಡಿ ವೀಣೆಯ ಅಂತಿಮ ಹಂತದ ಕೆಲಸಗಳನ್ನು ಮುಗಿಸುತ್ತಿರುವುದು

ತೀರಾ ತುರ್ತು ಪರಿಸ್ಥಿತಿಯಿಲ್ಲದೆ ರೈತರು ಮರಗಳನ್ನು ಕಡಿಯುವುದಿಲ್ಲ. “ಆದರೆ ಅನಾರೋಗ್ಯ ಸಂಬಂಧಿ ತುರ್ತುಗಳಿಗೆ ಅಥವಾ ಮನೆಯಲ್ಲಿ ಮದುವೆಗೆ ದೊಡ್ಡ ಮೊತ್ತದ ಅಗತ್ಯವಿದ್ದಾಗ ನಾವು ದೊಡ್ಡ ಮರಗಳನ್ನು ಆಯ್ಕೆ ಮಾಡಿ ಕತ್ತರಿಸಿ ಮಾರುತ್ತೇವೆ” ಎಂದು ವಿವರಿಸುತ್ತಾರೆ 47 ವರ್ಷದ ಹಲಸು ಕೃಷಿಕ ಕೆ. ಪಟ್ಟುಸ್ವಾಮಿ. “ಒಂದು ಮರ ಒಂದೆರಡು ಲಕ್ಷದಷ್ಟು ಹಣವನ್ನು ಹೊಂದಿಸಿ ಕೊಡುತ್ತದೆ. ಅದು ವೈದ್ಯಕೀಯ ಬಿಕ್ಕಟ್ಟು ಅಥವಾ ಮದುವೆಯ ಖರ್ಚುಗಳನ್ನು ನಿಭಾಯಿಸಲು ಸಾಕಾಗುತ್ತದೆ…”

ದಿಮ್ಮಿಗಳನ್ನು ತಂಜಾವೂರಿಗೆ ಕಳುಹಿಸುವ ಮೊದಲು ಮರದ ಉತ್ತಮ ಭಾಗಗಳನ್ನು ಮೃದಂಗ ತಯಾರಿಕೆಗಾಗಿ ಎತ್ತಿಟ್ಟುಕೊಳ್ಳಲಾಗುತ್ತದೆ. ಟಿ.ಎಂ.ಕೃಷ್ಣ (ಸಂಗೀತಗಾರ, ಬರಹಗಾರ, ಭಾಷಣಕಾರ ಮತ್ತು ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ) ತಮ್ಮ ಸೆಬಾಸ್ಟಿಯನ್ ಅಂಡ್ ಸನ್ಸ್: ಎ ಬ್ರೀಫ್ ಹಿಸ್ಟರಿ ಆಫ್ ಮೃದಂಗಂ ಪುಸ್ತಕದಲ್ಲಿ ಈ ವಾದ್ಯವನ್ನು ತಯಾರಿಸುವ ಅಜ್ಞಾತ ಹೀರೋಗಳ ಕುರಿತು ಬರೆದಿದ್ದಾರೆ.

ಈ ಪುಸ್ತಕದಲ್ಲಿ ಕೃಷ್ಣ ಅವರು ಈ ವಾದ್ಯವನ್ನು “ಮೃದಂಗ 101” ಎಂದು ಕರೆಯುತ್ತಾರೆ. ಮೃದಂಗ ಎನ್ನುವುದು “ಕೊಳವೆಯಾಕಾರದ ಎರಡು ಮುಖಗಳುಳ್ಳ ವಾದ್ಯ. ಇದು ಕರ್ನಾಟಕ ಸಂಗೀತ ಪ್ರದರ್ಶನ ಮತ್ತು ಭರತನಾಟ್ಯ ಗಾಯನಗಳಲ್ಲಿ ಬಳಸಲಾಗುವ ಪ್ರಾಥಮಿಕ ತಾಳವಾದ್ಯ. ಹಲಸಿನ ಮರದಿಂದ ತಯಾರಿಸಿದ ಟೊಳ್ಳಾಗಿರುವ ಇದರ ಮೈ ಅನುರಣ ಕೋಣೆಯಾಗಿ ಕೆಲಸ ಮಾಡುತ್ತದೆ.” ಮೃದಂಗದ ಎರಡೂ ತುದಿಗಳಿಗೆ ತಲಾ ಮೂರು ಪದರಗಳ ಚರ್ಮವನ್ನು ಆಳವಡಿಸಿರಲಾಗುತ್ತದೆ.

ಹಲಸಿನ ಮರವು ಮೃದಂಗ ತಯಾರಿಕೆಯಲ್ಲಿ “ಪವಿತ್ರ ಬಟ್ಟಲಿನಂತೆ” ಕೆಲಸ ಮಾಡುತ್ತದೆ ಎಂದು ಬರೆಯುತ್ತಾರೆ ಕೃಷ್ಣ. “ದೇವಾಲಯದ ಬಳಿ ಹಲಸಿನ ಮರ ಬೆಳೆದರೆ ಅದರ ಪವಿತ್ರತೆ ಮತ್ತಷ್ಟು ಹೆಚ್ಚಾಗುತ್ತದೆ. ಮರವು ದೇವಾಲಯದ ಗಂಟೆಗಳು ಮತ್ತು ವೈದಿಕ ಮಂತ್ರಗಳ ಶಬ್ದಗಳಿಗೆ ಒಡ್ಡಿಕೊಳ್ಳುವುದರಿಂದಾಗಿ ಅಂತಹ ಮರದಿಂದ ಮಾಡಿದ ವಾದ್ಯದ ಅನುರಣನಕ್ಕೆ ಸಾಟಿಯಿಲ್ಲ ಎಂದು ಅವರು ಹೇಳುತ್ತಾರೆ. ಮಣಿ ಅಯ್ಯರ್ ಅವರಂತಹ ಕಲಾವಿದರು ಈ ರೀತಿಯ ಮಂಗಳಕರ ಮರದಿಂದ ಮೃದಂಗವನ್ನು ಪಡೆಯಲು ಯಾವುದೇ ಮಟ್ಟಕ್ಕೆ ಹೋಗಬಲ್ಲರು.

ತನ್ನ ಕುಟುಂಬದ ಮೂರನೇ ತಲೆಮಾರಿನ ವಾದ್ಯ ತಯಾರಕರಾಗಿರುವ ಕುಪ್ಪುಸ್ವಾಮಿ ಆಸಾರಿಯವರು, “ಚರ್ಚ್ ಅಥವಾ ದೇವಾಲಯ, ಅಥವಾ ಜನರು ನಡೆಯುವ ಮತ್ತು ಮಾತನಾಡುವ ರಸ್ತೆ, ಅಥವಾ ಗಂಟೆಗಳು ಬಾರಿಸಲ್ಪಡುವ ಸ್ಥಳದ ಬಳಿಯ ಮರಗಳು ಕಂಪನಗಳನ್ನು ಹೀರಿಕೊಂಡಿರುತ್ತವೆಯಾದ್ದರಿಂದ ಅವು ಉತ್ತಮ ಶಬ್ಧ ಹೊರಡಿಸುತ್ತವೆಯೆನ್ನುವುದು ಕಾಲದಿಂದ ನಂಬಿಕೆ” ಎಂದು ಕೃಷ್ಣ ಅವರ ಬಳಿ ಹೇಳಿದ್ದಾರೆ.

“ಮೃದಂಗ ಕಲಾವಿದರು ಹಿಂದೂ ದೇವಾಲಯದ ಗಂಟೆಗಳು ಮತ್ತು ಮಂತ್ರಗಳು ಮರದ ಮಾಂತ್ರಿಕ ಬದಲಾವಣೆಗೆ ಕಾರಣವೆಂದು ನಂಬುತ್ತಾರೆಯಾದರೂ, ಈ ಕುಶಲಕರ್ಮಿ ಸಕಾರಾತ್ಮಕ ಕಂಪನಗಳ ವಿಷಯದಲ್ಲಿ ಹೆಚ್ಚು ಕ್ಯಾಥೋಲಿಕ್‌ ಆಗಿ ಕಾಣುತ್ತಾರೆ” ಎಂದು ಕೃಷ್ಣ ಹೇಳುತ್ತಾರೆ.

Kuppusami Asari in his workshop in Panruti town, standing next to the musical instruments made by him
PHOTO • Aparna Karthikeyan

ಪನ್ರುಟ್ಟಿ ಪಟ್ಟಣದಲ್ಲಿನ ತಮ್ಮ ಕಾರ್ಯಾಗಾರದಲ್ಲಿ ತಾವು ತಯಾರಿಸಿದ ಸಂಗೀತ ವಾದ್ಯಗಳ ಪಕ್ಕದಲ್ಲಿ ಕುಪ್ಪುಸಾಮಿ ಅಸಾರಿ

ಏಪ್ರಿಲ್ 2022ರಲ್ಲಿ, ನಾನು ಹಲಸು ಬೆಳೆಗಾರರು ಮತ್ತು ವ್ಯಾಪಾರಿಗಳನ್ನು ಭೇಟಿಯಾಗಲು ಪನ್ರುಟ್ಟಿ ಪಟ್ಟಣಕ್ಕೆ ಭೇಟಿ ನೀಡಿದ್ದೆ. ಕುಪ್ಪುಸ್ವಾಮಿ ಆಸಾರಿಯವ ಚಟುವಟಿಕೆಯಿಂದ ಕೂಡಿದ ವರ್ಕ್‌ಶಾಪಿಗೆ ನಾನು ಭೇಟಿ ನೀಡುವಾಗ ಮಧ್ಯಾಹ್ನವಾಗಿತ್ತು. ಮೃದಂಗ ತಯಾರಿಕೆಯ ವಿಚಾರದಲ್ಲಿ ಕುಪ್ಪುಸ್ವಾಮಿಯವರ ಮನಸ್ಥಿತಿ ಇರುವಂತೆಯೇ ಅವರ ವರ್ಕ್‌ಶಾಪ್‌ ಇತ್ತು. ಅಲ್ಲಿ ಆಧುನಿಕ ಲೇಥ್‌ ಮತ್ತು ಯಂತ್ರಗಳು ಹಾಗೂ ಸಾಂಪ್ರದಾಯಿಕ ಶೈಲಿಯ ಹಳೆಯ ದೇವರ ಪಟಗಳೂ ಇದ್ದವು.

“ನೀವು ಪ್ರಶ್ನೆಗಳನ್ನು ಕೇಳುತ್ತಾ ಹೋಗಿ” ಎಂದ ಕುಪ್ಪುಸ್ವಾಮಿ ಗಡಿಬಿಡಿಯಲ್ಲಿದ್ದರು; ಅವರಿಗೆ ಸಾಕಷ್ಟು ಕೆಲಸವಿತ್ತು. “ನಿಮಗೆ ಏನು ತಿಳಿದುಕೊಳ್ಳುವುದಿತ್ತು?” ಹಲಸಿನ ಮರವೇ ಏಕೆ ಎಂದು ನಾನು ಕೇಳಿದೆ. “ಏಕೆಂದರೆ ಪಾಲಮರಂ ಪರಿಪೂರ್ಣವಾದುದು” ಎಂದು ಅವರು ಹೇಳಿದರು. “ಇದು ಬಹಳ ಕಡಿಮೆ ತೂಕ ಹೊಂದಿರುವುದರ ಜೊತೆಗೆ ಉತ್ತಮ ನಾದವನ್ನೂ ಹೊರಡಿಸುತ್ತದೆ. ನಾವಿಲ್ಲಿ ವೀಣೆಯೊಂದನ್ನು ಬಿಟ್ಟು ಉಳಿದೆಲ್ಲ ತಾಳವಾದ್ಯಗಳನ್ನೂ ತಯಾರಿಸುತ್ತೇವೆ.” ಕುಪ್ಪುಸ್ವಾಮಿ ಬಹಳ ಗೌರವಾನ್ವಿತ ವಾದ್ಯ ತಜ್ಞ. "ಟಿ.ಎಂ. ಕೃಷ್ಣ ಅವರ ಪುಸ್ತಕದಲ್ಲಿ ನೀವು ನಮ್ಮ ಬಗ್ಗೆ ಓದಬಹುದು" ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. “ಅದರಲ್ಲಿ ಲೇಥ್‌ ಬಳಿ ನಿಂತಿರುವ ನನ್ನ ಫೋಟೊ ಕೂಡಾ ಇದೆ.”

ಕುಪ್ಪುಸಾಮಿ ಚೆನ್ನೈಯ ಉಪನಗರ ಮಾಧವರಂನಲ್ಲಿ ವೃತ್ತಿ ತರಬೇತಿ ಪಡೆದರು ಮತ್ತು ಅವರು ಪ್ರಸ್ತುತ "ಸುಮಾರು 50 ವರ್ಷಗಳ ಅನುಭವವನ್ನು" ಹೊಂದಿದ್ದಾರೆ. ಅವರು 10 ವರ್ಷದವರಿದ್ದಾಗ ಕೆಲಸ ಕಲಿಯಲು ಪ್ರಾರಂಭಿಸಿದರು, ಕಡಿಮೆ ಶಿಕ್ಷಣ ಹೊಂದಿದ್ದರೂ ಮರದ ಕೆಲಸದಲ್ಲಿ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದರು. "ಆ ಸಮಯದಲ್ಲಿ, ಎಲ್ಲಾ ಕೆಲಸಗಳನ್ನು ಕೈಯಿಂದ ಮಾಡಲಾಗುತ್ತಿತ್ತು. ನನ್ನ ತಂದೆ ಪಾಲಮರವನ್ನು ವಂಡಿ ಸಕ್ಕರಂ (ಗಾಡಿ ಚಕ್ರ) ಮೇಲೆ ಇರಿಸಿ ಒಳಭಾಗವನ್ನು ಟೊಳ್ಳಾಗಿಸುವ ಕೆಲಸ ಮಾಡುತ್ತಿದ್ದರು. ಇಬ್ಬರು ಗಂಡಸರು ಚಕ್ರವನ್ನು ತಿರುಗಿಸಿದರೆ ಅಪ್ಪ ಒಳಭಾಗವನ್ನು ಕೊರೆಯುತ್ತಿದ್ದರು." ಆದರೆ ಕಾಲ ಕಳೆದಂತೆ ಕುಟುಂಬವು ತಂತ್ರಜ್ಞಾನಕ್ಕೆ ಹೊಂದಿಕೊಂಡಿತು. "ಕಾಲಕ್ಕೆ ತಕ್ಕಂತೆ ನಾವು ಬದಲಾಗಿದ್ದೇವೆ."

ಇವರು ಇತರ ಕುಶಲಕರ್ಮಿಗಳಂತಲ್ಲದೆ, ಹೊಸ ಬಗೆಯ ಯಂತ್ರಗಳ ಕುರಿತು ಬಹಳಷ್ಟು ಆಸಕ್ತಿಯನ್ನು ಹೊಂದಿದ್ದಾರೆ. “ಮೊದಲು ಕೈಯಿಂದ ಮೃದಂಗದ ಒಳ ಭಾಗವನ್ನು ಕೊರೆಯಲು ಇಡೀ ದಿನ ಬೇಕಾಗುತ್ತಿತ್ತು. ಈಗ ಲೇಥ್‌ ಬಳಸಿ ಬಹಳ ಬೇಗನೆ ನಿಖರವಾಗಿ ಮತ್ತು ಪರಿಣಾಮಕಾರಿಯಾಗಿ ಕೊರೆಯಬಹುದು.” ಅವರು ಪನ್ರುಟ್ಟಿಯಲ್ಲಿ ಲೇಥ್‌ ಬಳಸಿದವರಲ್ಲಿ ಮೊದಲಿಗರಾಗಿದ್ದರು. ಕುಪ್ಪುಸ್ವಾಮಿ 25 ವರ್ಷಗಳ ಹಿಂದೆಯೇ ಯಂತ್ರವನ್ನು ಸ್ಥಾಪಿಸಿದ್ದರು. ನಂತರ ಇವರ ಈ ಉಪಾಯವನ್ನು ಅನೇಕ ಪಟ್ಟಣಗಳ ಉದ್ಯಮಿಗಳು ನಂತರ ಬಳಸಿಕೊಂಡರು.

“ಜೊತೆಗೆ” ನಾನು ನಾಲ್ಕೈದು ಜನರಿಗೆ ತಾಳವಾದ್ಯಗಳ ತಯಾರಿಕೆಯನ್ನು ಕಲಿಸಿದ್ದೇನೆ. ಕೆಲಸ ಕಲಿತ ಅವರು ತಮ್ಮದೇ ಅಂಗಡಿಯನ್ನು ಸ್ಥಾಪಿಸಿ ನಾನು ಉಪಕರಣಗಳನ್ನು ಮಾರುತ್ತಿದ್ದ ಚೈನ್ನೈಯ ಮೈಲಾಪುರದ ಚಿಲ್ಲರೆ ವ್ಯಾಪಾರಿಗೆ ತಾವು ತಯಾರಿಸಿದ ವಸ್ತುಗಳನ್ನು ಮಾರುತ್ತಿದ್ದರು. ಅವರು ತಮ್ಮನ್ನು ಅವರಿಗೆ ಕುಪ್ಪುಸ್ವಾಮಿಯವರ ಬಳಿ ಕೆಲಸ ಕಲಿತವರೆಂದೇ ಪರಿಚಯಿಸಿಕೊಂಡಿದ್ದರು. ಆಗೆಲ್ಲ ಅಂಗಡಿ ಮಾಲಿಕ ನನಗೆ ಕರೆ ಮಾಡಿ “ಅದೆಷ್ಟು ಜನರಿಗೆ ಕೆಲಸ ಕಲಿಸಿದ್ದೀರಿ” ಎಂದು ಕೇಳುತ್ತಿದ್ದರು ಎಂದು ಕುಪ್ಪುಸ್ವಾಮಿ ನಗುತ್ತಾರೆ. ಅವರು ತನ್ನ ಕತೆಯನ್ನು ವಿವರಿಸುತ್ತಿದ್ದರೆ ಕೇಳುತ್ತಾ ಅವರೊಂದಿಗೆ ನಾನೂ ನಗುತ್ತಿದ್ದೆ.

ಅವರ ಮಗ ಶಬರಿನಾಥನ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. "ನಾನು ಅವನಿಗೆ ಅಳತೆ ತೆಗೆಯುವುದನ್ನು ಮತ್ತು ಉಪಕರಣಗಳನ್ನು ಹೇಗೆ ತಯಾರಿಸಬೇಕೆನ್ನುವುದನ್ನು ಕಲಿಯಲು ಹೇಳಿದೆ. ಅವನಿಗೆ ಕೆಲಸವಿದೆಯಾದರೂ, ಇದನ್ನು ಕೆಲಸದವರನ್ನು ಇಟ್ಟುಕೊಂಡು ಮುಂದುವರಿಸಬಹುದು, ಅಲ್ಲವೇ?"

Lathe machines make Kuppusami’s job a little bit easier and quicker
PHOTO • Aparna Karthikeyan

ಲೇಥ್‌ ಯಂತ್ರಗಳು ಕುಪ್ಪುಸ್ವಾಮಿಯವರ ಕೆಲಸವನ್ನು ಒಂದಷ್ಟು ಸುಲಭಗೊಳಿಸುವುದರ ಜೊತೆಗೆ ಬೇಗನೆ ಮುಗಿಯುವಂತೆಯೂ ಸಹಾಯ ಮಾಡುತ್ತವೆ

*****

“ಆಸಾರಿಗಳು ವಿಶ್ವಕರ್ಮ ಸಮುದಾಯಕ್ಕೆ ಸೇರಿದವರು. ಲೋಹ, ಕಲ್ಲು, ಮತ್ತು ಮರದಿಂದ ವಿವಿಧ ಬಗೆಯ ವಸ್ತುಗಳನ್ನು ತಯಾರಿಸುವ ಕೌಶಲ ಅವರಲ್ಲಿದೆ. ಅವರು ಈಗೀಗ ತಮ್ಮ ಸೃಜನಶೀಲ ಅನ್ವೇಷಣಾ ಪ್ರವೃತ್ತಿಯನ್ನು ತೊರೆದು ಜಾತಿ ಆಧಾರಿತ ಕೆಲಸಕ್ಕೆ ಸೀಮಿತರಾಗಿ ಉಳಿದಿದ್ದಾರೆ. ಈಗಿನ ಯುವ ಪೀಳಿಗೆ ವೈಟ್‌ ಕಾಲರ್‌ ಕೆಲಸಗಳತ್ತ ಹೋಗುತ್ತಿದೆ ಎಂದು ಟಿ.ಎಂ. ಕೃಷ್ಣ ತಮ್ಮ ಪುಸ್ತಕ ಸೆಬಾಸ್ಟಿಯನ್ ಅಂಡ್ ಸನ್ಸ್ ಪುಸ್ತಕದಲ್ಲಿ ಬರೆದಿದ್ದಾರೆ.

“ನಾವು ಅನುವಂಶಿಕ, ಜಾತಿ-ಸಂಬಂಧಿತ ಉದ್ಯೋಗಗಳ ಕುರಿತು ಮಾತನಾಡುವಾಗ ಅದನ್ನು ಜ್ಞಾನ ಸೃಷ್ಟಿಯಲ್ಲಿ ಅಂತರ-ಪೀಳಿಗೆಯ ನಿರಂತರತೆ ಎಂದು ರೊಮ್ಯಾಂಟಿಸೈಸ್‌ ಮಾಡದೆ ನೋಡಬೇಕಾಗುತ್ತದೆ. ಯಾಕೆಂದರೆ ಏಕೆಂದರೆ ನಮ್ಮ ಸಾಮಾಜಿಕ ಏಣಿ-ಶ್ರೇಣಿಯಲ್ಲಿ ಎಲ್ಲಾ ಬಗೆಯ ಜನರು ಮತ್ತು ಉದ್ಯೋಗಗಳನ್ನು ಸಮಾನವಾಗಿ ನೋಡಲಾಗುವುದಿಲ್ಲವೆನ್ನುವುದನ್ನು ನಾನು ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದು ಕೃಷ್ಣ ಒತ್ತಿ ಹೇಳುತ್ತಾರೆ. "ಜಾತಿ-ಸವಲತ್ತು ಪಡೆದ ಕುಟುಂಬಗಳ ಪಾರಂಪರಿಕ ಕೆಲಸವನ್ನು ಜ್ಞಾನವೆಂದು ಪರಿಗಣಿಸಲಾಗುತ್ತದೆ ಮತ್ತು ಸಂರಕ್ಷಣೆಯಂತಹ ವಿಷಯದಲ್ಲಿ ಜಾತಿ-ಸೀಮಿತ ಹಂಚಿಕೆಯ ಶಾಶ್ವತತೆಯನ್ನು ಪರಿಗಣಿಸಲಾಗುತ್ತದೆ. ಮತ್ತು ಅದನ್ನು ಅಭ್ಯಾಸ ಮಾಡುವವರು ಯಾವುದೇ ರೀತಿಯ ದಬ್ಬಾಳಿಕೆಯನ್ನು ಅನುಭವಿಸುವುದಿಲ್ಲ. ಆದರೆ ತುಳಿತಕ್ಕೊಳಗಾದ ಅಥವಾ ಅಂಚಿನಲ್ಲಿರುವ ಸಮುದಾಯಗಳಲ್ಲಿ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುವ ಉದ್ಯೋಗಗಳು ಮತ್ತು ಕೆಲಸದ ರೂಪಗಳನ್ನು ಜ್ಞಾನವೆಂದು ಪರಿಗಣಿಸಲಾಗುವುದಿಲ್ಲ. ಜನರನ್ನು ಜ್ಞಾನ ಸೃಷ್ಟಿಕರ್ತರು ಎಂದು ಪರಿಗಣಿಸಲಾಗುವುದಿಲ್ಲ. ಅವರನ್ನು ಕೀಳಾಗಿ ನೋಡಲಾಗುತ್ತದೆ, ಕಡೆಗಣಿಸಲಾಗುತ್ತದೆ ಮತ್ತು ಅವರ ಕೆಲಸವನ್ನು ದೈಹಿಕ ಶ್ರಮ ಎಂದು ವರ್ಗೀಕರಿಸಲಾಗುತ್ತದೆ. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಈ ಉದ್ಯೋಗಗಳನ್ನು ಅಭ್ಯಾಸ ಮಾಡುವವರು ಜಾತಿ ಆಧಾರಿತ ದಬ್ಬಾಳಿಕೆ ಮತ್ತು ಹಿಂಸಾಚಾರವನ್ನು ಅನುಭವಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ಸಾಮಾಜಿಕ ಪರಿಸ್ಥಿತಿಗಳಿಂದಾಗಿ ಅವರಿಗೆ ಕುಟುಂಬ-ಜಾತಿ-ಗೊತ್ತುಪಡಿಸಿದ ಕೆಲಸವನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ."

"ಈ ದೇಶದ ಎಲ್ಲಾ ವಾದ್ಯ ತಯಾರಕರ ಬಗ್ಗೆಯೂ ತಾಂತ್ರಿಕ ಪರಿಭಾಷೆಯಲ್ಲಿ ಮಾತನಾಡಲಾಗುತ್ತದೆ" ಎಂದು ಕೃಷ್ಣ ಹೇಳುತ್ತಾರೆ . "ಅವರನ್ನು ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುವ ಮೇಸ್ತ್ರಿ (ಬಡಗಿ) ಯಂತೆ ನೋಡಿದರೆ ಅದನ್ನು ನುಡಿಸುವವರನ್ನು ವಾಸ್ತುಶಿಲ್ಪಿಯಂತೆ ನೋಡಲಾಗುತ್ತದೆ. ಅವರಿಗೆ ಸಲ್ಲಬೇಕಾದ ಖ್ಯಾತಿಯನ್ನು ನೀಡಲು ನಿರಾಕರಿಸಿರುವುದರ – ಅಥವಾ ಚೂರು ಪಾರು ನೀಡಿರುವುದರ – ಹಿಂದೆ ಜಾತಿ ರಾಜಕಾರಣವಿದೆ.”

ಮೃದಂಗ ತಯಾರಿಕೆ ಬಹುತೇಕ ಪುರುಷ ಪ್ರಾಬಲ್ಯವನ್ನು ಹೊಂದಿಯೆಂದು ಕುಪ್ಪುಸ್ವಾಮಿ ಹೇಳುತ್ತಾರೆ. “ಚರ್ಮದ ಕೆಲಸದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿದ್ದಾರೆ. ಆದರೆ ಮರದ ಕೆಲಸವನ್ನು ಗಂಡಸರಷ್ಟೇ ಮಾಡುತ್ತಾರೆ. ಸಾಮಾನ್ಯವಾಗಿ ಉಪಕರಣಗಳಿಗೆಂದು ಕಾಯಿ ಬಿಡುವುದನ್ನು ನಿಲ್ಲಿಸಿರುವ ಮರಗಳನ್ನು ಕಡಿಯಲಾಗುತ್ತದೆ. “ಬೆಳೆಗಾರರು ಅನುತ್ಪಾದಕ ಮರವನ್ನು ಕಡಿಯುತ್ತಾರೆ” ಎನ್ನುತ್ತಾರೆ ಕುಪ್ಪುಸ್ವಾಮಿ. “ಹತ್ತು ಮರ ಕಡಿದರೆ ಅದಕ್ಕೆ ಬದಲಾಗಿ ಅವರು 30 ಸಸಿಗಳನ್ನು ನೆಡುತ್ತಾರೆ.”

ಕುಪ್ಪುಸ್ವಾಮಿ ಮರದ ಆಯ್ಕೆಯಲ್ಲಿ ಒಂದಷ್ಟು ಮಾನದಂಡಗಳನ್ನು ಹೊಂದಿದ್ದಾರೆ. ಅವರಿಗೆ ಸುಮಾರು 9 ಅಥವಾ 10 ಅಡಿ ಎತ್ತರವಿರುವ, ಸಾಕಷ್ಟು ಅಗಲ ಮತ್ತು ಬಲವಾದ ಮರಗಳು ಬೇಕು ಮತ್ತು ಅದು ಬೇಲಿಯ ಬಳಿ ಅಥವಾ ರಸ್ತೆಯ ಪಕ್ಕದಲ್ಲಿ ಬೆಳೆದಿರಬೇಕು. ಸಾಮಾನ್ಯವಾಗಿ ಅವರು ಮರದ ಬುಡದ ಭಾಗವನ್ನು ತೆಗೆದುಕೊಳ್ಳುತ್ತಾರೆ. ಅದರ ಗಾಢ ಬಣ್ಣ ಉತ್ತಮ ಅನುರಣನವನ್ನು ಹೊಂದಿರುತ್ತದೆ ಎನ್ನುವುದು ಅವರ ಅನುಭವದ ಮಾತು.

ಒಂದೇ ದಿನದಲ್ಲಿ ಅವರು ಸುಮಾರು ಆರು ಮೃದಂಗಗಳಿಗಾಗುವಷ್ಟು ಮರವನ್ನು ಕತ್ತರಿಸಿ ಸೈಜ್‌ ಮಾಡಬಲ್ಲರು. ಆದರೆ ಫಿನಿಶಿಂಗ್‌ ಕೆಲಸಕ್ಕೆ ಇನ್ನೂ ಎರಡು ದಿನ ಬೇಕಾಗುತ್ತದೆ. ಇಷ್ಟೆಲ್ಲ ಶ್ರಮ ಬೇಡುವ ಈ ಮೃದಂಗದ ಮಾರಾಟದಿಂದ ಬರುವ ಲಾಭ ಅತ್ಯಲ್ಪ – ಒಂದು ಮೃದಂಗ ಮೇಲೆ 1,000 ರೂಪಾಯಿ ಸಿಕ್ಕರೆ ನಮಗೆ ಅದೇ ದೊಡ್ಡದು ಎಂದು ಅವರು ಹೇಳುತ್ತಾರೆ. ಕೆಲಸಗಾರರಿಗೆ 1,000 ರೂಪಾಯಿ ಪಾವತಿಸಬೇಕು. ಇದು ಬಹಳ ಕಷ್ಟದ ಕೆಲಸ, ಅಷ್ಟು ಕೊಡದಿದ್ದರೆ ಅವರು ಬರುವುದಿಲ್ಲ.”

ಮರದ ಲಭ್ಯತೆ ವರ್ಷವಿಡೀ ಇರುವುದಿಲ್ಲ. ಹಣ್ಣು ಬಿಡುವ ಮರಗಳನ್ನು ಯಾರೂ ಮರವನ್ನು ಕಡಿಯುವುದಿಲ್ಲ ಎಂದು ಅವರು ಒತ್ತಿ ಹೇಳುತ್ತಾರೆ. “ಹೀಗಾಗಿ ಯಾವಾಗಲೂ ಮರವನ್ನು ಸಂಗ್ರಹಿಸಿ ಇಟ್ಟುಕೊಂಡಿರಬೇಕು.” ತಲಾ 25,000 ರೂಪಾಯಿಗಳ ಬೆಲೆಯ 20 ದಿಮ್ಮಿಗಳನ್ನು ಖರೀದಿಸಲು ಅವರು ಐದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡುತ್ತಾರೆ. ಮತ್ತು ಈ ವಿಷಯದಲ್ಲಿ ಅವರು ಸರ್ಕಾರದ ನೆರವನ್ನು ಬಯಸುತ್ತಾರೆ. “ಸರ್ಕಾರವು ಮರವನ್ನು ಖರೀದಿಸಲು ನಮಗೆ ಸಬ್ಸಿಡಿ ಅಥವಾ ಸಾಲವನ್ನು ನೀಡಿದರೆ... ತುಂಬಾ ಒಳ್ಳೆಯದು!"

ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಂದ ಮೃದಂಗಗಳಿಗೆ ಬೇಡಿಕೆ ಉತ್ತಮವಾಗಿದೆ ಎಂದು ಕುಪ್ಪುಸಾಮಿ ಹೇಳುತ್ತಾರೆ. "ಒಂದು ತಿಂಗಳಲ್ಲಿ, ನಾನು 50 ಮೃದಂಗಗಳು ಮತ್ತು 25 ತವಿಲ್‌ಗಳನ್ನು ಮಾರಾಟ ಮಾಡುತ್ತೇನೆ." ಸರಿಯಾದ ಮರವನ್ನು ಹುಡುಕುವುದು ಮತ್ತು ಅದನ್ನು ಸುಮಾರು ನಾಲ್ಕು ತಿಂಗಳ ಕಾಲ ಒಣಗಿಸುವುದು ಕಷ್ಟದ ಕೆಲಸ. ಪನ್ರುಟ್ಟಿಯ ಹಲಸಿನ ಮರ “ಉತ್ತಮ ಗುಣಮಟ್ಟ ಹೊಂದಿವೆಯಾದ್ದರಿಂದ ಅವುಗಳಿಗೆ ಬಹಳ ಬೇಡಿಕೆಯಿದೆ” ಎನ್ನುತ್ತಾರೆ ಕುಪ್ಪುಸ್ವಾಮಿ. ಅದು ಕೆಂಪು ಮಣ್ಣಿನಲ್ಲಿ ಬೆಳೆಯುತ್ತದೆಯಾದ್ದರಿಂದ ಉತ್ತಮ ನಾದವನ್ನು ಹೊಮ್ಮಿಸುತ್ತದೆ ಎನ್ನುವುದು ಅವರ ಅಭಿಪ್ರಾಯ.

Left: Kuppusami Asari in the workshop.
PHOTO • Aparna Karthikeyan
Right: The different tools used to make the instruments
PHOTO • Aparna Karthikeyan

ಎಡ: ಕುಪ್ಪುಸಾಮಿ ಆಸಾರಿ ತಮ್ಮ ಕೆಲಸದ ಸ್ಥಳದಲ್ಲಿ. ಬಲ: ಉಪಕರಣಗಳನ್ನು ತಯಾರಿಸಲು ಬಳಸುವ ವಿವಿಧ ಉಪಕರಣಗಳು

"ಸುಮಾರು 25,000 ರೂಪಾಯಿಗಳ ವೆಚ್ಚದ ಹತ್ತು ಅಡಿ ಉದ್ದದ ಒಂದು ದಿಮ್ಮಿಯಿಂದ ನೀವು ಕೇವಲ ಮೂರು ಮೃದಂಗಗಳನ್ನಷ್ಟೇ ತಯಾರಿಸಲು ಸಾಧ್ಯ. ಖರೀದಿಸಿದ ಮರಗಳೆಲ್ಲವೂ ಮೃದಂಗ ತಯಾರಿಕೆಗೆ ಬರುವುದಿಲ್ಲ. ಕೆಲವು ಮರಗಳನ್ನು ಕತ್ತರಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಕುಪ್ಪುಸ್ವಾಮಿಯವರ ಸಹಾಯಕ್ಕೆ ಬರುವುದೆಂದರೆ ಉಡುಕ್ಕೈ ಎನ್ನುವ ಸಣ್ಣ ಸಂಗೀತ ಉಪಕರಣ (ಕೈಯಲ್ಲಿ ಹಿಡಿಯುವ ವಾದ್ಯ).

ಒಂದು ಉತ್ತಮ “ಕಟ್ಟೈ ಎಟ್ಟು ರುಬಾ” ಬೆಲೆ ಬಾಳುತ್ತದೆ ಎನ್ನುತ್ತಾರೆ ಕುಪ್ಪುಸ್ವಾಮಿ. ಅವರು ಮೃದಂಗವನ್ನು ತಯಾರಿಸಲು ಬೇಕಾಗುವ ಮರಕ್ಕೆ ಕಟ್ಟೈ ಎನ್ನುವ ಪದವನ್ನು ಬಳಸುತ್ತಾರೆ. “ಎಟ್ಟು ರುಬಾ” - ಎಂದರೆ ಎಂಟು ರೂಪಾಯಿ – 8,000 ರೂಪಾಯಿಗೆ ಅವರು ಬಳಸುವ ಪದ. ಇದು “ಒಣ್ಣಾವುಮ್‌ ನಂಬರ್”‌ (ಮೊದಲ ದರ್ಜೆ). ಇಂತಹದ್ದನ್ನು ಗಿರಾಕಿಗಳು ವಾಪಸ್‌ ತರುವುದಿಲ್ಲ. “ಒಂದು ವೇಳೆ ಮರ ಬಿರುಕು ಬಿಟ್ಟರೆ, ನಾದ ಉತ್ತಮವಾಗಿರದಿದ್ದರೆ ಖಂಡಿತವಾಗಿಯೂ ವಾಪಸ್‌ ಕೊಟ್ಟುಬಿಡುತ್ತಾರೆ.”

ಸಾಮಾನ್ಯವಾಗಿ, ಮೃದಂಗವೊಂದು 22 ಅಥವಾ 24 ಇಂಚು ಉದ್ದವಿರುತ್ತದೆ. ಈ ವಾದ್ಯಗಳನ್ನು ಸಾಮಾನ್ಯವಾಗಿ ಮೈಕ್ರೊಫೋನ್ ಜೊತೆ ನುಡಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ. "ಮೈಕ್ ಇಲ್ಲದೆ ನುಡಿಸಲಾಗುವ ಕುತ್ತು [ರಂಗಭೂಮಿ], ಮೃದಂಗವು 28 ಇಂಚು ಉದ್ದವಿರುತ್ತದೆದೆ. ಮತ್ತು ಅದರ ಬಾಯಿ ಒಂದು ಬದಿಯಲ್ಲಿ ಕಿರಿದಾಗಿರುತ್ತದೆ ಮತ್ತು ಇನ್ನೊಂದು ಬದಿಯಲ್ಲಿ ಅಗಲವಾಗಿರುತ್ತದೆ. ಇದರ ಶಬ್ದವು ತುಂಬಾ ಚೆನ್ನಾಗಿ ಚಲಿಸುವುದರಿಂದ ವಾದನ ಬಹಳ ದೂರದವರೆಗೆ ಕೇಳುತ್ತದೆ.”

ಕುಪ್ಪುಸಾಮಿ ಮೃದಂಗದ ಮರದ ಭಾಗವನ್ನು ಚೆನ್ನೈ ನಗರದ ಮ್ಯೂಸಿಕ್ ಕಂಪನಿಗಳಿಗೆ ತಲುಪಿಸುತ್ತಾರೆ. ಅವರು ತಿಂಗಳಿಗೆ 20ರಿಂದ 30 ಕಟ್ಟೈಗಳಿಗೆ ಬೇಡಿಕೆ ಸಲ್ಲಿಸುತ್ತಾರೆ. ಮತ್ತು ಅವರು ಅದನ್ನು ಸ್ವೀಕರಿಸಿದ ನಂತರ, ಅವರು ಅದನ್ನು ಮೃದಂಗ ತಯಾರಿಸುವ ಚರ್ಮದ ಕೆಲಸಗಾರರಿಗೆ ನೀಡುತ್ತಾರೆ. ಈ ಪ್ರಕ್ರಿಯೆಯು ಮೃದಂಗದ ಬೆಲೆಗೆ ಇನ್ನೂ 4,500 ರೂಪಾಯಿಗಳನ್ನು ಸೇರಿಸುತ್ತದೆ. "ನಂತರ ಜಿಪ್ ಹೊಂದಿರುವ ಚೀಲವನ್ನೂ ನೀಡಲಾಗುತ್ತದೆ" ಎಂದು ಕುಪ್ಪುಸಾಮಿ ವಿವರಿಸುತ್ತಾರೆ, ಹೀಗೆ ಹೇಳುವಾಗ ಅವರ ಕೈಗಳು ಮೃದಂಗದ ಮೇಲೆ ಕಾಲ್ಪನಿಕ ಜಿಪ್ಪರ್ ಒಂದನ್ನು ಎಳೆಯುತ್ತಿದ್ದವು.

ಉತ್ತಮ ಗುಣಮಟ್ಟದ ಮೃದಂಗಗಳಿಗೆ ಸುಮಾರು 15,000 ರೂಪಾಯಿಗಳಷ್ಟು ಬೆಲೆಯಿದೆ. ಅವುಗಳನ್ನು 50 ಮತ್ತು 75 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದ ಕಾಲವನ್ನು ಕುಪ್ಪುಸಾಮಿ ನೆನಪಿಸಿಕೊಳ್ಳುತ್ತಾರೆ. "ಗುರುಗಳಿಗೆ ಮೃದಂಗಗಳನ್ನು ತಲುಪಿಸಲು ನನ್ನ ತಂದೆ ನನ್ನನ್ನು ಮದ್ರಾಸಿನ (ಈಗಿನ ಚೆನ್ನೈ) ಮೈಲಾಪುರಕ್ಕೆ ಕರೆದೊಯ್ಯುತ್ತಿದ್ದರು. ಅವರು ನಮಗೆ ಗರಿಗರಿಯಾದ ಕರೆನ್ಸಿ ನೋಟುಗಳಲ್ಲಿ ಪಾವತಿಸುತ್ತಿದ್ದರು! ಆಗ ನಾನು ಚಿಕ್ಕ ಹುಡುಗನಾಗಿದ್ದೆ" ಎಂದು ಅವರು ಮುಗುಳ್ನಕ್ಕರು.

ಕಾರೈಕುಡಿ ಮಣಿ, ಉಮಯಾಳ್ಪುರಂ ಶಿವರಾಮನ್ - ಕರ್ನಾಟಕ ಸಂಗೀತ ಪ್ರಪಂಚದ ಕೆಲವು ಶ್ರೇಷ್ಠ ಮೃದಂಗ ಕಲಾವಿದರು – ಅವರಂತಹ ಕಲಾವಿದರು ಕುಪ್ಪುಸ್ವಾಮಿಯವರಿಂದ ಮೃದಂಗವನ್ನು ಮಾಡಿಸಿದ್ದಾರೆ. "ಅನೇಕ ವಿದ್ವಾನರು ಇಲ್ಲಿಗೆ ಬಂದು ಖರೀದಿಸುತ್ತಾರೆ" ಎಂದು ಅವರು ತಮ್ಮ ಮಾತಿಗೆ ಹೆಮ್ಮೆಯ ಸ್ಪರ್ಶ ನೀಡಿ ಹೇಳುತ್ತಾರೆ. "ಇದು ಪ್ರಸಿದ್ಧ ಅಂಗಡಿ, ಸಾಂಪ್ರದಾಯಿಕ ಅಂಗಡಿ..."

Kuppusami’s workshop stacked with blades, saw, spanners, lumber and machinery
PHOTO • Aparna Karthikeyan
Kuppusami’s workshop stacked with blades, saw, spanners, lumber and machinery
PHOTO • Aparna Karthikeyan

ಕುಪ್ಪುಸಾಮಿಯ ವರ್ಕ್ ಶಾಪಿನಲ್ಲಿ ಬ್ಲೇಡುಗಳು, ಗರಗಸ, ಸ್ಪ್ಯಾನರುಗಳು, ಮರಮುಟ್ಟು ಮತ್ತು ಯಂತ್ರೋಪಕರಣಗಳು ತುಂಬಿದ್ದವು

ಕುಪ್ಪುಸಾಮಿ ಮೃದಂಗಕ್ಕೆ ಸಂಬಂಧಿಸಿದ ಹಲವಾರು ಉಪಕಥೆಗಳನ್ನು ಹಂಚಿಕೊಳ್ಳುತ್ತಾರೆ. ಅವರ ಕಥೆಗಳು ಹಳೆಯ ಮತ್ತು ಹೊಸದರ ನಡುವಿನ ಅದ್ಭುತ ವ್ಯತ್ಯಾಸಗಳ ಕುರಿತು ಮಾತನಾಡುತ್ತವೆ. "ದಿವಂಗತ ಪಾಲ್ಘಾಟ್ ಮಣಿ ಅಯ್ಯರ್ ನಿಮಗೆ ಗೊತ್ತೆ? ಅವರು ಬಳಸುತ್ತಿದ್ದ ಮೃದಂಗ ಬಹಳ ಭಾರವಿರುತ್ತಿತ್ತು. ಅದನ್ನು ಸಾಗಿಸಲೆಂದೇ ಜೊತೆಯಲ್ಲಿ ಒಬ್ಬ ವ್ಯಕ್ತಿಯಿರುತ್ತಿದ್ದ!” ಭಾರದ ಮೃದಂಗಗಳು “ಗಣೀರ್‌ʼ ಗಣೀರ್”‌ (ಸ್ಪಷ್ಟ ಮತ್ತು ಏರುಧ್ವನಿಯಲ್ಲಿ) ಎಂದು ಶಬ್ಧ ಹೊರಡಿಸುತ್ತಿದ್ದವು. ಆದರೆ ಇದು ಎಲ್ಲಾ ಸಮಯದಲ್ಲೂ ಕೆಲಸಕ್ಕೆ ಬರುತ್ತಿರಲಿಲ್ಲ” ಎನ್ನುತ್ತಾರೆ ಕುಪ್ಪುಸ್ವಾಮಿ.

“ಅವರು ವಿದೇಶಕ್ಕೆ ಹೋಗುವಾಗ ಭಾರವಾದ ಮೃದಂಗಗಳ ಬದಲು ಹಗುರವಾದ ಮೃದಂಗಗಳು ಬೇಕಾಗುತ್ತಿದ್ದವು. ಇದಕ್ಕಾಗಿ ಅವರು ತಮ್ಮ ಮೃದಂಗವನ್ನು ನನ್ನ ಬಳಿ ತರುತ್ತಿದ್ದರು. ನಾನು ಅದನ್ನು 12ಕೇಜಿಗಳಿಂದ ಆರು ಕೇಜಿಗಳಿಗೆ ಇಳಿಸಿ ಕೊಡುತ್ತಿದ್ದೆ.” ಅದು ಹೇಗೆ ಸಾಧ್ಯ ಎಂದು ನಾನು ಕೇಳಿದೆ. “ನಾವು ಮೃದಂಗದ ಮರದ ಹೊಟ್ಟೆಯನ್ನು ಕೆತ್ತಿ ಹೊರತೆಗೆಯುತ್ತಿದ್ದೆವು. ಉಪಕರಣವನ್ನು ಆಗಾಗ ತೂಕ ಮಾಡುತ್ತಾ ಆರು ಕೇಜಿಗೆ ಬರುವ ತನಕವೂ ಅದರ ಹೊಟ್ಟೆಯನ್ನು ಕೆತ್ತುತ್ತಿದ್ದೆವು.”

ನೀವು ಬಯಸಿದಲ್ಲಿ ಮೃದಂಗಳಿಗೂ ಇವರ ಬಳಿ ಡಯಟ್‌ ಲಭ್ಯ…

ಅವರು ಕೇವಲ ಮೃದಂಗ ಮಾತ್ರವಲ್ಲದೆ ಇತರ ಸಂಗೀತ ಉಪಕರಣಗಳನ್ನು ಸಹ ಪ್ರಪಂಚದಾದ್ಯಂತ ಕಳುಹಿಸುತ್ತಾರೆ. "ನಾನು ಕಳೆದ 20 ವರ್ಷಗಳಿಂದ ಮಲೇಷ್ಯಾಕ್ಕೆ ಉರುಮಿ ಮೇಳಗಳನ್ನು (ಎರಡು ಬದಿಯ ಡೋಲು) ಕಳುಹಿಸುತ್ತಿದ್ದೇನೆ. ಕೋವಿಡ್ ಸಮಯದಲ್ಲಿ ಅದು ನಿಂತುಹೋಯಿತು..."

ಮೃದಂಗ, ತವಿಲ್, ತಬೇಲಾ, ವೀಣೆ, ಕಾಂಜಿರಾ, ಉಡುಕೈ, ಉಡುಮಿ, ಪಂಬೈ ತಯಾರಿಸಲು ಹಲಸಿನ ಮರ ಸೂಕ್ತ... ಕುಪ್ಪುಸಾಮಿ ಹೆಸರುಗಳನ್ನು ಪಟ್ಟಿ ಮಾಡುತ್ತಾರೆ. "ನಾನು ಸುಮಾರು 15 ಬಗೆಯ ಸಂಗೀತ ಉಪಕರಣಗಳನ್ನು ತಯಾರಿಸಬಲ್ಲೆ."

ಅವರಿಗೆ ಕುಶಲಕರ್ಮಿಗಳು ಮತ್ತು ಇತರ ಸಂಗೀತ ಉಪಕರಣ ತಯಾರಕರ ಪರಿಚಯವೂ ಇದೆ. “ನಿಮಗೆ ವೀಣೆ ತಯಾರಕರಾದ ನಾರಯಣನ್‌ ಅವರೂ ಗೊತ್ತೆ? ಅವರು ತಂಜಾವೂರಿನ ಸೌತ್‌ ಮೇನ್‌ ರೋಡಿನಲ್ಲಿ ಇರುವುದಲ್ಲವೆ? ಅವರು ನಮಗೆ ಗೊತ್ತು.” ವೀಣೆ ಮಾಡುವುದು ಬಹಳ ಕಷ್ಟದ ಕೆಲಸ ಎಂದು ಕುಪ್ಪುಸಾಮಿ ಹೇಳುತ್ತಾರೆ. “ಆಸಾರಿಯೊಬ್ಬರು ವೀಣೆ ತಯಾರಿಸುವುದನ್ನು ನಾನು ನೋಡಿದ್ದೆ. ಅವರು ವೀಣೆಯ ಬಾಗಿದ ಭಾಗವನ್ನು ತಯಾರಿಸುತ್ತಿದ್ದರು. ನಾನು ಎರಡು ಗಂಟೆಗಳ ಕಾಲ ಮೌನವಾಗಿ ಕುಳಿತು ಗಮನಿದ್ದೆ. ಅವರು ಕೆಲವು ಮರಗಳನ್ನು ಕತ್ತರಿಸಿ, ಅವುಗಳಿಗೆ ಆಕಾರ ನೀಡಿ ಪರಿಶೀಲಿಸುತ್ತಿದ್ದರು. ಅದೊಂದು ಅದ್ಭುತ ಮತ್ತು ರೋಮಾಂಚಕಾರಿ ಅನುಭವವಾಗಿತ್ತು…”

*****

Left: Narayanan during my first visit to his workshop, in 2015, supervising the making of a veenai.
PHOTO • Aparna Karthikeyan
Right: Craftsmen in Narayanan’s workshop
PHOTO • Aparna Karthikeyan

ಎಡ: ನಾರಾಯಣನ್ 2015ರಲ್ಲಿ ಅವರ ವರ್ಕ್‌ಶಾಪಿಗೆ ನಾನು ಮೊದಲ ಬಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ವೀಣೆ ತಯಾರಿಕೆಯ ಮೇಲ್ವಿಚಾರಣೆ ನಡೆಸುತ್ತಿದ್ದರು. ಬಲ: ನಾರಾಯಣನ್ ಅವರ ವರ್ಕ್‌ಶಾಪಿನ ಕುಶಲಕರ್ಮಿಗಳು

ನಾನು ಮೊದಲ ಬಾರಿ ವೀಣೆ ತಯಾರಕ ಎಮ್.‌ ನಾರಾಯಣ್‌ ಅವರನ್ನು ಭೇಟಿಯಾಗಿದ್ದು 2015ರಲ್ಲಿ. ಅದು ತಂಜಾವೂರಿನಲ್ಲಿರುವ ಅವರ ವರ್ಕ್‌ಶಾಪಿನಲ್ಲಿ. ಅವರು ಆಗಸ್ಟ್‌ 2023ರಲ್ಲಿ ಇನ್ನೊಮ್ಮೆ ಬರುವಂತೆ ಕರೆದರು. “ನಿಮಗೆ ಮನೆ ನೆನಪಿದೆಯಲ್ಲವೆ? ಮನೆಯ ಹೊರಗೊಂದು ಮರವಿದೆ,” ಎಂದಿದ್ದರು. ಮನೆಯ ಮುಂದೆ ಮರವಿದೆಯೆಂದು ಹೇಳಿ ಗುರುತು ಹೇಳುವುದು ಸ್ವಲ್ಪ ವಿಚಿತ್ರ ಎನ್ನಿಸಬಹುದು. ಆದರೆ ಆ ಸೌತ್‌ ಮೇನ್‌ ಸ್ಟ್ರೀಟ್ ಬೀದಿಯಲ್ಲಿ ಅವರ ಮನೆಯ ಮುಂದೆ ಮಾತ್ರವೇ ಪುಂಗೈ ಮರವಿತ್ತು (ಹೊಂಗೆ ಮರ). ಸಿಮೆಂಟಿನಿಂದ ಮಾಡಿದ ವೀಣೆಯು ಅವರ ಮನೆಯ ಮೊದಲ ಮಹಡಿಯ ಮುಂಭಾಗವನ್ನು ಅಲಂಕರಿಸಿತ್ತು. ಮನೆಯ ಹಿಂಭಾಗದಲ್ಲಿದ್ದ ಕೆಲಸದ ಸ್ಥಳ ಈಗಲೂ ಕಣ್ಣಿಗೆ ಕಟ್ಟಿದಂತಿದೆ; ಸಿಮೆಂಟ್‌ ಸೆಲ್ಫಿನ ಮೇಲಿರಿಸಲಾಗಿದ್ದ ಉಪಕರಣಗಳು, ಗೋಡೆಯ ಮೇಲಿನ ಫೋಟೊಗಳು ಹಾಗೂ ಕ್ಯಾಲೆಂಡರುಗಳು ಹಾಗೂ ನೆಲದ ಮೇಲಿನ ಅಪೂರ್ಣ ವೀಣೆಗಳು.

ವೀಣೆ ತಯಾರಿಸುವ ಮರಗಳು ಸಿವಗಂಗೈ ಪೂಂಗಾ ತಲುಪುವಾಗ ಒಂದಷ್ಟು ಒರಟು ಮತ್ತು ದಪ್ಪದ ದಿಮ್ಮಿಗಳಷ್ಟೇ ಆಗಿರುತ್ತವೆ. ಆದರೆ ಈ ಮರ ಕೆಲಸದ ಸ್ಥಳ ತಲುಪಿದ ನಂತರ ಅದನ್ನು ಉಪಕರಣಗಳು, ಪ್ರಕ್ರಿಯೆಗಳನ್ನು ಬಳಸಿ ಹದಗೊಳಿಸಲಾಗುತ್ತದೆ. ಹದಗೊಳಿಸಿದಂತೆ ಅದು ಉತ್ತಮ ನಾದವನ್ನೂ ಹೊರಡಿಸುತ್ತದೆ. 16 ಇಂಚುಗಳಷ್ಟು ಅಗಲದ ದಿಮ್ಮಿಯಿಂದ 14.5 ಇಂಚು ಅಗಲದ ಬಟ್ಟಲಿನ ಆಕಾರವನ್ನು ನಾರಯಣನ್‌ ಮತ್ತು ಅವರ ತಂಡ ಕೆತ್ತುತ್ತದೆ. ವೃತ್ತಾಕಾರವನ್ನು ಅವರು ಕಂಪಾಸ್‌ ಬಳಸಿ ಗುರುತಿಸುತ್ತಾರೆ. ನಂತರ ಉಳಿ ಬಳಸಿ ಮರದ ಒಳಗಿನ ಭಾಗದ ಹೆಚ್ಚುವರಿ ಅಂಶಗಳನ್ನು ಕೆತ್ತಿ ತೆಗೆಯುತ್ತಾರೆ.

ಉಪಕರಣವಾಗುವ ಮೊದಲು ಮರವು ಸಾಕಷ್ಟು ಮಧ್ಯಂತರ ಕೆತ್ತನೆಗೆ ಒಳಗಾಗುತ್ತದೆ. ಈ ವಿರಾಮವು ಮರವು ಒಣಗಿ ಹದಗೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಶಿವಗಂಗೈ ಪೂಂಗಾ ತಂಜಾವೂರಿಗೆ ಬರುವಾಗ 30 ಕಿಲೋಗ್ರಾಮ್‌ ತೂಗುವ ಮರವನ್ನು ಒಳಗೂ ಹೊರಗೂ ತೂಕ ಇಳಿಸಿ ಅದನ್ನು 20 ಕಿಲೋಗ್ರಾಮ್‌ ತೂಗುವಂತೆ ಮಾಡಲಾಗುತ್ತದೆ. ವೀಣೆ ಪಟ್ಟರೈಯಲ್ಲಿ ಇದರ ತೂಕವನ್ನು ಎತ್ತಿ ಹಿಡಿಯಲು ಸುಲಭವಾಗುವಂತೆ ಎಂಟು ಕೇಜಿಗಳಷ್ಟು ತೂಗುವಂತೆ ಮತ್ತೆ ಕೆತ್ತಲಾಗುತ್ತದೆ.

ತಮ್ಮ ವರ್ಕ್‌ಶಾಪಿನ ಮುಂದೆ ಇರುವ ಮನೆಯಲ್ಲಿ ಕುಳಿತು ನಾರಾಯಣನ್‌ ನನ್ನ ಕೈಗೊಂದು ವೀಣೆ ಕೊಟ್ಟರು “ತಗೊಳ್ಳಿ ಇದನ್ನು ಹಿಡಿದು ನೋಡಿ” ಎಂದರು. ಅದು ಹಗುರವಾಗಿ ನಯವಾದ ಫಿನಿಷಿಂಗ್‌ ಹೊಂದಿತ್ತು. ಅದರ ಪ್ರತಿಯೊಂದು ಭಾಗವನ್ನು ಉತ್ತಮವಾಗಿ ನಯಗೊಳಿಸಿ ವಾರ್ನಿಷ್‌ ಹಚ್ಚಲಾಗಿತ್ತು. “ಇದನ್ನು ಪೂರ್ತಿಯಾಗಿ ಕೈಯಿಂದಲೇ ತಯಾರಿಸಲಾಗಿದೆ” ಎಂದ ನಾರಾಯಣನ್‌ ಅವರ ದನಿಯಲ್ಲಿ ಹೆಮ್ಮೆ ಬೆರೆತಿತ್ತು.

“ವೀಣೆ ತಯಾರಾಗುವುದು ತಂಜಾವೂರಿನಲ್ಲಿ ಮಾತ್ರ. ಇಲ್ಲಿಂದ ಜಗತ್ತಿನ ಎಲ್ಲೆಡೆಗೂ ಸರಬರಾಜು ನಡೆಯುತ್ತದೆ. ನಮ್ಮ ಬಳಿ ಇದ ಗ್ಲೋಬಲ್‌ ಇಂಡಿಕೇಷನ್‌ ಇದೆ. ಇದಕ್ಕೆ ಅರ್ಜಿ ಸಲ್ಲಿಸಿ ಸರ್ಟಿಫಿಕೇಟ್‌ ಪಡೆದವರು ವಕೀಲ ಸಂಜಯ್ ಗಾಂಧಿ” ಎಂದು ನಾರಾಯಣನ್ ಹೇಳುತ್ತಾರೆ.

Left: Kudams (resonators) carved from jackfruit wood.
PHOTO • Aparna Karthikeyan
Right: Craftsman Murugesan working on a veenai
PHOTO • Aparna Karthikeyan

ಎಡ: ಹಲಸಿನ ಮರದಿಂದ ಕೆತ್ತಲಾದ ಕುಡಮಗಳು (ಅನುರಣಕಗಳು). ಬಲ: ವೀಣೆಯ ಕೆಲಸ ಮಾಡುತ್ತಿರುವ ಕುಶಲಕರ್ಮಿ ಮುರುಗೇಶನ್

ಈ ಉಪಕರಣವನ್ನು ತಯಾರಿಸಲು ಹಲಸಿನ ಮರವನ್ನೇ ಬಳಸಲಾಗುತ್ತದೆ. “ಏಕೆಂದರೆ ಪಾಲಮರಂ ಎಲ್ಲ ವಾತಾವರಣಕ್ಕೂ ಹೊಂದಿಕೊಳ್ಳುತ್ತದೆ. ಇವತ್ತು ತಂಜಾವೂರಿನಲ್ಲಿ 39 ಡಿಗ್ರಿ [ಸೆಲ್ಸಿಯಸ್]‌ ಬಿಸಿಲಿದೆ. ಅದೇ ಅಮೇರಿಕಾದಲ್ಲಿ ಒಮ್ಮೊಮ್ಮೆ ಸೊನ್ನೆ ಡಿಗ್ರಿಯಿರುತ್ತದೆ. ಈ ಮರ ಅಲ್ಲಿಗೂ ಇಲ್ಲಿಗೂ ಹೊಂದಿಕೊಳ್ಳಬಲ್ಲದು. ಅದರಿಂದ ತಯಾರಿಸಿದ ವೀಣೆ ಸರಿಯಾಗಿ ಕೆಲಸ ಮಾಡಬಲ್ಲದು. ಅಥವಾ ನೀವು ಇದನ್ನು ಇಲ್ಲಿಂಗಿಂತಲೂ ಬಿಸಿಲಿರುವ ದೇಶಗಳಿಗೆ - ಉದಾಹರಣೆಗೆ ಪಶ್ಚಿಮ ಏಷ್ಯಾದ ದೇಶಗಳಿಗೆ - ಕೊಂಡೊಯ್ದರೂ ಇದನ್ನು ನುಡಿಸಬಹುದು. ಸ್ವರದಲ್ಲಿ ಯಾವ ವ್ಯತ್ಯಾಸವೂ ಉಂಟಾಗುವುದಿಲ್ಲ. ಇದು ಅಪರೂಪದ ಗುಣಮಟ್ಟದ್ದು. ಹೀಗಾಗಿಯೇ ಇದಕ್ಕೆ ಹಲಸಿನ ಮರವನ್ನೇ ಉಪಯೋಗಿಸುತ್ತೇವೆ.”

“ಇದನ್ನು ನೀವು ಮಾವಿನ ಮರ ಬಳಸಿ ತಯಾರಿಸಲು ಸಾಧ್ಯವಿಲ್ಲ. ಬೇಸಗೆಯಲ್ಲಿ ಮಾವಿನ ಮರದಿಂದ ಮಾಡಿದ ಬಾಗಿಲುಗಳನ್ನು ಸುಲಭವಾಗಿ ಮುಚ್ಚಬಹುದು. ಆದರೆ ಮಳೆಗಾಲದಲ್ಲಿ ಅದನ್ನು ಜೋರಾಗಿ ತಳ್ಳಬೇಕಾಗುತ್ತದೆ.. ಜೊತೆಗೆ ಅದಕ್ಕೆ ನೀವು ಎಷ್ಟೇ ಫಿನಿಷಿಂಗ್‌ ಮಾಡಿದರು ಅದನ್ನು ಹಲಸಿನ ಮರದ ವೀಣೆಯಂತೆ ʼನಯವಾಗಿಸುವುದುʼ ಕಷ್ಟ. ಎಂದು ವಿವರಿಸುವ ನಾರಾಯಣನ್‌ “ಹಲಸಿನ ಮರದಲ್ಲಿ ಕೂದಲಿಗಿಂತಲೂ ಚಿಕ್ಕದಾದ ರಂಧ್ರಗಳಿದ್ದು ಅವು ಮರಕ್ಕೆ ಉಸಿರಾಡಲು ಸಹಾಯ ಮಾಡುತ್ತವೆ” ಎನ್ನುತ್ತಾರೆ.

ಹಲಸನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. "ಆದರೆ ನನಗೆ ತಿಳಿದ ಮಟ್ಟಿಗೆ, ಕೆಲವು ಪ್ರದೇಶಗಳಲ್ಲಿ - ಪಟ್ಟುಕೋಟ್ಟೈ [ತಂಜಾವೂರು ಜಿಲ್ಲೆ] ಮತ್ತು ಗಂಧರ್ವಕೋಟ್ಟೈ [ಪುದುಕೊಟ್ಟೈ ಜಿಲ್ಲೆ] ಸುತ್ತಮುತ್ತ ಅನೇಕ ಮರಗಳನ್ನು ಕಡಿದುಹಾಕಲಾಗಿದೆ. ಆದರೆ ಆ ಜಾಗದಲ್ಲಿ ಹೊಸ ಗಿಡಗಳನ್ನು ನೆಟ್ಟಿಲ್ಲ. ತೋಪುಗಳ ಮಾಲೀಕರು ತಮ್ಮ ಭೂಮಿಯನ್ನು ವಸತಿ ನಿವೇಶನಗಳಾಗಿ ಮಾರಾಟ ಮಾಡಿ ಹಣವನ್ನು ಬ್ಯಾಂಕಿನಲ್ಲಿ ಇಟ್ಟಿದ್ದಾರೆ. ಅಲ್ಲಿ ಈಗ ಮರಗಳಿಲ್ಲದೆ, ಒಂದು ಸಣ್ಣ ನೆರಳು ಸಹ ಇಲ್ಲ" ಎಂದು ನಾರಾಯಣನ್ ಹೇಳುತ್ತಾರೆ. ಸಂಗೀತ ಬಿಡಿ. ನಮ್ಮ ಮನೆಯಿರುವ ಬೀದಿಯನ್ನು ನೋಡಿ, ಅಲ್ಲಿ ನನ್ನ ಮನೆ ಮುಂದಿನ ಮರ ಮಾತ್ರ ಇದೆ... ಉಳಿದೆಲ್ಲವನ್ನೂ ಕತ್ತರಿಸಲಾಗಿದೆ!"

ಹೊಸ ಹಲಸಿನ ಮರವು ಹಳದಿ ಬಣ್ಣದಲ್ಲಿರುತ್ತದೆ. ದಿನ ಕಳೆದಂತೆ ಮತ್ತು ಒಣಗುತ್ತಿದ್ದಂತೆ, ಅದು ಗಾಢ ಕೆಂಪು ಬಣ್ಣವನ್ನು ಪಡೆಯುತ್ತದೆ. ಮತ್ತು ಹಳೆಯ ಮರದ ಕಂಪನವು ಅದ್ಭುತವಾಗಿರುತ್ತದೆ. ಈ ಕಾರಣಕ್ಕಾಗಿಯೇ ಹಳೆಯ ವೀಣೆಗಳಿಗೆ ಬೇಡಿಕೆ ವಿಶೇಷ ಬೇಡಿಕೆಯಿದೆ ಎಂದು ನಾರಾಯಣನ್ ಹೇಳುತ್ತಾರೆ. “ಸಾಮಾನ್ಯವಾಗಿ ವೀಣೆಗಳ ಮಾಲಿಕರನ್ನು ತಮ್ಮ ಹಳೆಯ ವೀಣೆಯನ್ನು ಮತ್ತೆ ಕಟ್ಟಿಸುವುದು, ರಿಪೇರಿ ಮಾಡಿಸುವುದನ್ನು ಮಾಡಿ ತಮ್ಮಲ್ಲೇ ಉಳಿಸಿಕೊಳ್ಳಲು ಬಯಸುತ್ತಾರೆ. ಹೀಗಾಗಿಯೇ ಹಳೆಯ ವೀಣೆಗಳು ಮಾರಾಟಕ್ಕೆ ಸಿಗುವುದಿಲ್ಲ” ಎಂದು ಅವರು ನಗುತ್ತಾರೆ. “ಸಾಮಾನ್ಯವಾಗಿ ಅವು ಕುಟುಂಬದೊಳಗೇ ಕೈಬದಲಾಗುತ್ತವೆ.”

Narayanan shows an elaborately worked veenai , with Ashtalakshmis carved on the resonator
PHOTO • Aparna Karthikeyan
Narayanan shows an elaborately worked veenai , with Ashtalakshmis carved on the resonator
PHOTO • Aparna Karthikeyan

ನಾರಯಣನ್‌ ವಿಸ್ತಾರವಾದ ಕೆಲಸವಿರುವ ವೀಣೆಯೊಂದನ್ನು ತೋರಿಸುತ್ತಿದ್ದಾರೆ. ಇದರ ಅನುರಣಕದ ಮೇಲೆ ಅಷ್ಟ ಲಕ್ಷ್ಮಿಯರ ಚಿತ್ರಗಳನ್ನು ಕೆತ್ತಲಾಗಿದೆ

ನಾರಾಯಣನ್‌ ತಾನು ತಯಾರಿಸುವ ವೀಣೆಗಳಿಗೆ ಒಂದಷ್ಟು ಆಧುನಿಕ ಸ್ಪರ್ಶವನ್ನು ಸಹ ನೀಡುತ್ತಾರೆ. “ವೀಣೆಯ ತಂತಿಯನ್ನು ಟ್ಯೂನ್‌ ಮಾಡಲು ಸುಲಭವಾಗುವಂತೆ ನಾವು ಅವುಗಳನ್ನು ಗಿಟಾರ್‌ ಕೀ ಬಳಸುತ್ತೇವೆ.” ಆದರೆ ಅವರು ವೀಣೆ ಕಲಿಸುವುದರಲ್ಲಿನ ಬದಲಾವಣೆಗಳ ಕುರಿತು ತಕರಾರು ಹೊಂದಿದ್ದಾರೆ. ಅವರು ಅಂತಹ ವಿಧಾನಗಳನ್ನು ಶಾರ್ಟ್‌ ಕಟ್‌ (ಶಿಕ್ಷಕರು ವಿದ್ಯಾರ್ಥಿಗಳಿಗೆ ವೀಣೆಯನ್ನು ಪಿಚ್‌ ಮಾಡುವುದನ್ನು ಹೇಳಿ ಕೊಡದಿರುವುದು) ಎಂದು ಕರೆಯುತ್ತಾರೆ. ಅವರು ವೀಣೆಯನ್ನು ಟ್ಯೂನ್‌ ಮಾಡಿ ತೋರಿಸಿ ಆ ಕುರಿತು ವಿವರಿಸುತ್ತಾರೆ. ಹಲಸು ಮತ್ತು ಲೋಹದ ತಂತಿ ಇಂಪಾದ ಸ್ವರವನ್ನು ಉತ್ಪಾದಿಸಿ ನಮ್ಮ ಮಾತುಕತೆಗೆ ಹಿನ್ನೆಲೆ ಸಂಗೀತವನ್ನು ಒದಗಿಸುತ್ತಿದ್ದವು.

ಅನೇಕ ಇತರ ತಯಾರಕರಂತೆ, ನಾರಾಯಣನ್ ಕೂಡ ತಾವು ತಯಾರಿಸಿದ ವಾದ್ಯವನ್ನು ನುಡಿಸಬಲ್ಲರು. “ಒಂದಷ್ಟು ಮಾತ್ರ ಕಲಿತಿದ್ದೇನೆ” ಎಂದು ವೀಣೆಯ ತಂತಿಯನ್ನು ಎಳೆದು ಬಿಗಿಗೊಳಿಸುತ್ತಾ ಅವರು ವಿನಮ್ರವಾಗಿ ಹೇಳುತ್ತಾರೆ. “ಗ್ರಾಹಕರಿಗೆ ಏನು ಬೇಕು ಎನ್ನುವುದನ್ನು ತಿಳಿಯಲು ಸಾಕಾಗುವಷ್ಟು ಕಲಿತಿದ್ದೇನೆ.”

ಅವರ ತೊಡೆಯ ಮೇಲೊಂದು ಏಕಾಂತ ವೀಣೆಯಿತ್ತು. ಅದನ್ನು ಒಂದೇ ಮರದ ತುಂಡಿನಿಂದ ತಯಾರಿಸಲಾಗಿರುತ್ತದೆ. ಅವರು ಅದನ್ನು ಮಲಗಿರುವ ಮಗುವನ್ನು ತಾಯಿ ಎತ್ತಿಕೊಳ್ಳುವಂತೆ ಸೂಕ್ಷ್ಮವಾಗಿ ಎತ್ತಿಕೊಂಡರು. “ಒಂದು ಕಾಲದಲ್ಲಿ ಅಲಂಕಾರಕ್ಕಾಗಿ ಜಿಂಕೆ ಕೊಂಬುಗಳನ್ನು ಬಳಸುತ್ತಿದ್ದೆವು. ಈಗ ಅದರ ಜಾಗಕ್ಕೆ ಬಾಂಬೆ ಐವರಿ ಪ್ಲಾಸ್ಟಿಕ್‌ ಬಂದಿದೆ.”

ಒಬ್ಬನೇ ವ್ಯಕ್ತಿ ಒಂದು ವೀಣೆಯನ್ನು ಪೂರ್ತಿಯಾಗಿ ತಯಾರಿಸಲು 25 ದಿನಗಳು ಬೇಕು. “ಹೀಗಾಗಿ ನಾವು ಒಂದೊಂದು ಭಾಗಗಳ ಕೆಲಸವನ್ನು ಒಬ್ಬೊಬ್ಬರಿಗೆ ನೀಡುತ್ತೇವೆ. ನಂತರ ಅದನ್ನು ಚುರುಕಾಗಿ ಜೋಡಿಸುತ್ತೇವೆ. ಈ ರೀತಿಯಲ್ಲಿ ತಿಂಗಳಿಗೆ ನಾವು ಎರಡು ಅಥವಾ ಮೂರು ವೀಣೆಗಳನ್ನು ತಯಾರಿಸಬಹುದು. ಒಂದು ವೀಣೆಗೆ 25,000 ರಿಂದ 75,000 ರೂಪಾಯಿಗಳವರೆಗೆ ವೆಚ್ಚವಾಗಬಹುದು.

Narayanan (left) showing the changes in the structures of the veena where he uses guitar keys to tighten the strings.
PHOTO • Aparna Karthikeyan
Narayanan (left) showing the changes in the structures of the veena where he uses guitar keys to tighten the strings. Plucking the strings (right)
PHOTO • Aparna Karthikeyan

ನಾರಾಯಣನ್ (ಎಡ) ವೀಣೆಯ ರಚನೆಗಳಲ್ಲಿನ ಬದಲಾವಣೆಗಳನ್ನು ತೋರಿಸುತ್ತಾರೆ, ಇದರಲ್ಲಿ ಅವರು ತಂತಿಗಳನ್ನು ಬಿಗಿಗೊಳಿಸಲು ಗಿಟಾರ್ ಕೀಗಳನ್ನು ಬಳಸುತ್ತಾರೆ. ತಂತಿಗಳನ್ನು ಕೀಳುತ್ತಿರುವುದು (ಬಲಕ್ಕೆ)

Narayanan with a veena made by him.
PHOTO • Aparna Karthikeyan
Right: Hariharan, who works with Narayanan, holds up a carved veenai
PHOTO • Aparna Karthikeyan

ನಾರಾಯಣನ್ ತಾನು ತಯಾರಿಸಿದ ವೀಣೆಯೊಂದಿಗೆ. ಬಲ: ನಾರಾಯಣನ್ ಅವರೊಂದಿಗೆ ಕೆಲಸ ಮಾಡುವ ಹರಿಹರನ್ ಕೆತ್ತಿ ಮುಗಿಸಿದ ವೀಣೆಯನ್ನು ಕೈಯಲ್ಲಿ ಹಿಡಿದಿದ್ದಾರೆ

ಇತರ ವೀಣೆ ತಯಾರಕರ ಹಾಗೆ ನಾರಯಣನ್‌ ಕೂಡಾ ಮರವನ್ನು ಪನ್ರುಟ್ಟಿಯಿಂದ ತರಿಸುತ್ತಾರೆ. "ಒಂದೋ ನಾವು ಅಲ್ಲಿಗೆ ಹೋಗಿ 'ಬಹಳಷ್ಟು' ಖರೀದಿಸುತ್ತೇವೆ, ಅಥವಾ ಅವರು ಅದನ್ನು ಇಲ್ಲಿಗೆ ತರುತ್ತಾರೆ. ನಮ್ಮ ಕೆಲಸಕ್ಕೆ ಪ್ರಬುದ್ಧವಾದ 40 ಅಥವಾ 50 ವರ್ಷ ಹಳೆಯ ಮರಗಳು ಸೂಕ್ತ. ವ್ಯಾಪಾರಿಗಳು ನಮಗೆ 10 ಅಡಿ ಮರದ ದಿಮ್ಮಿಯನ್ನು 20,000 ರೂಪಾಯಿಗಳಿಗೆ ಮಾರುತ್ತಾರೆ. ಬೆಲೆಯಲ್ಲಿ ಚೌಕಾಶಿಗೆ ಅವಕಾಶವಿರುತ್ತದೆ. ದಿಮ್ಮಿಯನ್ನು ಬಳಸಿ ನಾವು ಏಕಾಂತ ವೀಣೆಯನ್ನು ತಯಾರಿಸುತ್ತೇವೆ. ಮರವನ್ನು ಖರೀದಿಸಿದ ನಂತರ ಅದನ್ನು ಸೈಜ್‌ ಮಾಡಿಸಿ ನಂತರ ನಂತರ ಶಿವಗಂಗೈ ಪೂಂಗಾದಲ್ಲಿನ ಅಸೋಸಿಯೇಷನ್ ಜಾಗದಲ್ಲಿ ಅದಕ್ಕೆ ಶೇಪ್‌ ಮಾಡಿಸುತ್ತೇವೆ. ಅದೇನೇ ಇದ್ದರೂ ಮರದ ವ್ಯಾಪಾರ ಬಹಳಷ್ಟು ಅಪಾಯವನ್ನು ಹೊಂದಿರುವ ವ್ಯವಹಾರ ಎನ್ನುತ್ತಾರೆ ನಾರಾಯಣನ್. “ಕೆಲವೊಮ್ಮೆ ಮರದಲ್ಲಿ ಸಣ್ಣ ಬಿರುಕು ಉಂಟಾಗಿ ಅದರ ಮೂಲಕ ಮರದೊಳಗೆ ನೀರು ಹೊಕ್ಕಿದ್ದರೆ ಮರ ಹಾಳಾಗಿರುತ್ತದೆ. ಆದರೆ ಇದು ನಮಗೆ ಮರವನ್ನು ಕತ್ತರಿಸುವ ತನಕವೂ ಗೊತ್ತಾಗುವುದಿಲ್ಲ!”

ತಂಜಾವೂರಿನಲ್ಲಿ ಹತ್ತು ಪೂರ್ಣ ಸಮಯದ ವೀಣೆ ತಯಾರಕರಿದ್ದು ಇನ್ನೂ ಅನೇಕರು ಅರೆಕಾಲಿಕವಾಗಿ ಕೆಲಸ ಮಾಡುತ್ತಾರೆನ್ನುವುದು ನಾರಾಯಣನ್ ಅಂದಾಜು. ಒಟ್ಟಾಗಿ ಅವರು ತಿಂಗಳಿಗೆ ಸುಮಾರು 30 ವೀಣೆಗಳನ್ನು ತಯಾರಿಸುತ್ತಾರೆ. ಮರದ ದಿಮ್ಮಿ ತಂಜಾವೂರನ್ನು ತಲುಪಿದ ದಿನದಿಂದ ಅದು ಒಂದು ವಾದ್ಯವಾಗಿ ಸಿದ್ಧವಾಗಲು ಸುಮಾರು 30 ದಿನಗಳನ್ನು ತೆಗೆದುಕೊಳ್ಳುತ್ತದೆ. "ಖಂಡಿತವಾಗಿಯೂ ಉತ್ತಮ ಬೇಡಿಕೆ ಇದೆ" ಎಂದು ನಾರಾಯಣನ್ ಹೇಳುತ್ತಾರೆ.

"ಚಿಟ್ಟಿಬಾಬು ಮತ್ತು ಶಿವಾನಂದಂ ಅವರಂತಹ ಅನೇಕ ದೊಡ್ಡ ಕಲಾವಿದರು ನನ್ನ ತಂದೆಯಿಂದ ವೀಣೆ ಖರೀದಿಸಿದ್ದಾರೆ. ಹೊಸ ವಿದ್ಯಾರ್ಥಿ ಕಲಾವಿದರೂ ಬಹಳಷ್ಟು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ಚೆನ್ನೈಯಲ್ಲಿರುವ 'ಮ್ಯೂಸಿಕಲ್ಸ್' ನಿಂದ ಖರೀದಿಸುತ್ತಾರೆ. ಕೆಲವರು ನೇರವಾಗಿ ಇಲ್ಲಿಗೆ ಬಂದು ನಿರ್ದಿಷ್ಟ ವಿನ್ಯಾಸ ಅಥವಾ ಬದಲಾವಣೆಗಳನ್ನು ಬಯಸಿ ಮಾಡಿಸಿಕೊಳ್ಳುತ್ತಾರೆ.” ಮತ್ತು ನಾರಾಯಣನ್ ಅವರಿಗೆ ಅಂತಹ ಗ್ರಾಹಕರನ್ನು ಕಂಡರೆ ಪ್ರೀತಿ.

ವ್ಯಾಪಾರ ಅಭಿವೃದ್ಧಿ ಹೊಂದುವುದನ್ನು ಅವರು ಇಷ್ಟಪಡುತ್ತಾರೆ. “ನಾನು 45 ವರ್ಷಗಳಿಂದ ಈ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ನನ್ನ ಇಬ್ಬರು ಗಂಡಮಕ್ಕಳಿಗೆ ಇದರಲ್ಲಿ ಆಸಕ್ತಿಯಿಲ್ಲ. ಅವರು ವಿದ್ಯಾವಂತರು. ಕೆಲಸವೂ ಇದೆ. ಅವರು ಇದರಲ್ಲಿ ತೋರಿಸದಿರಲು ಕಾರಣವೇನು ಗೊತ್ತೆ?” ಎಂದು ನಂತರ ತಮ್ಮ ಮಾತಿಗೆ ಅವರು ಒಂದು ನಿಟ್ಟುಸಿರಿನ ವಿರಾಮ ನೀಡಿದರು. “ಅಲ್ಲಿದ್ದಾರಲ್ಲ ಮೇಸ್ತ್ರಿ?” ಅಲ್ಲಿ ಕೆಲಸ ಮಾಡುತ್ತಿದ್ದ ಮೇಸ್ತ್ರಿಯತ್ತ ಕೈ ತೋರಿಸಿ ಅವರು ಮಾತು ಮುಂದುವರೆಸಿದರು. "ಈ ಮೇಸ್ತ್ರಿ ದಿನಕ್ಕೆ 1,200 ರೂಪಾಯಿಗಳನ್ನು ಸಂಪಾದಿಸುತ್ತಾರೆ. ಜೊತೆಗೆ ನಾನು ಅವರಿಗೆ ದಿನಕ್ಕೆ ಎರಡು ಬಾರಿ ಚಹಾ ಮತ್ತು ವಡೆ ಕೊಡಿಸುತ್ತೇನೆ. ನಾವು ಮಾಡುವ ಇಂತಹ ಕೌಶಲದ ಕೆಲಸಕ್ಕೆ ಹೋಲಿಸಿದರೆ ಸಂಪಾದನೆ ಅರ್ಧದಷ್ಟು ಸಹ ಇಲ್ಲ. ವಿಶ್ರಾಂತಿಯಿಲ್ಲ, ಸಮಯವೂ ಸಿಗುವುದಿಲ್ಲ. ಇದು ಖಂಡಿತವಾಗಿಯೂ ಉತ್ತಮ ವ್ಯವಹಾರ. ಆದರೆ ಲಾಭವೆಲ್ಲವನ್ನೂ ಮಧ್ಯವರ್ತಿಗಳು ತಿನ್ನುತ್ತಾರೆ. ನನ್ನ ವರ್ಕ್‌ಶಾಪ್‌ 10 ಅಡಿ ಗುಣಿಸು 10 ಹತ್ತು ಅಡಿ ಅಳತೆಯಲ್ಲಿದೆ. ನೀವೇ ನೋಡುತ್ತಿದ್ದೀರಿ. ಇಲ್ಲಿ ನಾವು ಎಲ್ಲವನ್ನೂ ಕೈಯಿಂದಲೇ ಮಾಡುತ್ತೇವೆ. ಆದರೂ ನಮಗೆ ವಿದ್ಯುತ್‌ ಕಮರ್ಷಿಯಲ್‌ ದರದಲ್ಲಿ ಪೂರೈಕೆಯಾಗುತ್ತದೆ. ಇದು ಗುಡಿ ಕೈಗಾರಿಕೆಯೆಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಸಲು ನಾವು ಪ್ರಯತ್ನಿಸಿ ಸೋತಿದ್ದೇವೆ. ನಮಗೆ ಯಾವುದೇ ಪ್ರಾತಿನಿಧ್ಯತೆ ಸಿಗುತ್ತಿಲ್ಲ. ಅದನ್ನು ಪಡೆಯುವಲ್ಲಿ ನಾವು ಸೋಲುತ್ತಿದ್ದೇವೆ…”

ಮಾತು ಮುಗಿಸಿದ ನಾರಾಯಣನ್‌ ನಿಟ್ಟುಸಿರು ಬಿಟ್ಟರು. ವರ್ಕ್‌ ಶಾಪಿನಲ್ಲಿದ್ದ ಹಿರಿಯರೊಬ್ಬರು ಕುಡಂ ಅನ್ನು ಸ್ಯಾಂಡ್ ಮಾಡುತ್ತಿದ್ದರು.‌ ಉಳಿ, ಡ್ರಿಲ್‌ ಮತ್ತು ಬ್ಲೇಡು ಬಳಸಿ ಅವರು ಹಲಸಿನಿಂದ ಸಂಗೀತವನ್ನು ಹೊರಡಿಸುತ್ತಾರೆ…


ಈ ಸಂಶೋಧನಾ ಅಧ್ಯಯನಕ್ಕೆ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ಧನಸಹಾಯ ಕಾರ್ಯಕ್ರಮ 2020ರ ಭಾಗವಾಗಿ ಧನಸಹಾಯ ನೀಡಿರುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು


Aparna Karthikeyan

اپرنا کارتی کیئن ایک آزاد صحافی، مصنفہ اور پاری کی سینئر فیلو ہیں۔ ان کی غیر فکشن تصنیف ’Nine Rupees and Hour‘ میں تمل ناڈو کے ختم ہوتے ذریعہ معاش کو دستاویزی شکل دی گئی ہے۔ انہوں نے بچوں کے لیے پانچ کتابیں لکھیں ہیں۔ اپرنا اپنی فیملی اور کتوں کے ساتھ چنئی میں رہتی ہیں۔

کے ذریعہ دیگر اسٹوریز اپرنا کارتکیئن

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru