“ಮತದಾನದ ದಿನದಂದು ಇಲ್ಲಿ ಹಬ್ಬದ ವಾತಾವರಣವಿರುತ್ತದೆ” ಎಂದು ಮರ್ಜಿನಾ ಖಾತುನ್‌ ಹೇಳುತ್ತಾರೆ. ಅವರು ರಜಾಯಿ ನೇಯ್ಗೆ ಮಾಡಲು ಇಟ್ಟುಕೊಂಡಿದ್ದ ಬಟ್ಟೆಯ ತುಂಡುಗಳನ್ನು ವಿಂಗಡಿಸುತ್ತಾ ನಮ್ಮೊಂದಿಗೆ ಮಾತನಾಡುತ್ತಿದ್ದರು. “ಕೆಲಸದ ಸಲುವಾಗಿ ಹೊರ ರಾಜ್ಯಗಳಿಗೆ ಹೋದ ಜನರು ಈ ಸಂದರ್ಭದಲ್ಲಿ ಮತ ಚಲಾಯಿಸಲೆಂದು ಊರಿಗೆ ಮರಳುತ್ತಾರೆ.”

ಅವರು ವಾಸವಿರುವ ರೂಪಾಕುಚಿ ಗ್ರಾಮವು ಧುಬ್ರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ, ಅಲ್ಲಿ ಮೇ 7, 2024ರಂದು ಮತದಾನ ನಡೆಯಿತು.

ಆದರೆ 48 ವರ್ಷದ ಮರ್ಜಿನಾ ಅಂದು ಮತ ಚಲಾಯಿಸಲಿಲ್ಲ. "ನಾನು ಆ ದಿನವನ್ನು ನಿರ್ಲಕ್ಷಿಸುತ್ತೇನೆ. ಜನರಿಂದ ತಪ್ಪಿಸಿಕೊಳ್ಳಲು ಸಲುವಾಗಿ ಮನೆಯೊಳಗೆ ಅಡಗಿಕೊಳ್ಳುತ್ತೇನೆ."

ತಮ್ಮ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸಲು ಸಾಧ್ಯವಾಗದ ಈ ವರ್ಗದ ಮತದಾರರನ್ನು ಅನುಮಾನಸ್ಪದ ಮತದಾರರು (ಡಿ-ವೋಟರ್/ಡೌಟ್‌ಫುಲ್‌ ವೋಟರ್ಸ್) ಎಂದು ಪಟ್ಟಿ ಮಾಡಲಾಗಿದೆ. ಅಂತಹ 99,942 ಜನರಲ್ಲಿ ಮರ್ಜಿನಾ ಕೂಡಾ ಒಬ್ಬರು. ಮತದಾರರ ಪಟ್ಟಿಯಲ್ಲಿನ ಅನುಮಾನಾಸ್ಪದ ಮತದಾರರಲ್ಲಿ  ಹೆಚ್ಚಿನವರು ಅಸ್ಸಾಂನ ಬಂಗಾಳಿ ಮಾತನಾಡುವ ಹಿಂದೂಗಳು ಮತ್ತು ಮುಸ್ಲಿಮರು.

ಡಿ-ಮತದಾರರನ್ನು ಹೊಂದಿರುವ ಏಕೈಕ ಭಾರತೀಯ ರಾಜ್ಯವಾದ ಅಸ್ಸಾಮಿನಲ್ಲಿ, ಬಾಂಗ್ಲಾದೇಶಿ ಅಕ್ರಮ ವಲಸೆ ಚುನಾವಣಾ ರಾಜಕೀಯದಲ್ಲಿ ಪ್ರಮುಖ ವಿಷಯ. ಭಾರತದ ಚುನಾವಣಾ ಆಯೋಗವು 1997ರಲ್ಲಿ ಡಿ-ವೋಟರ್ ವ್ಯವಸ್ಥೆಯನ್ನು ಪರಿಚಯಿಸಿತು, ಅದೇ ವರ್ಷ ಮರ್ಜಿನಾ ಅವರು ಮತದಾರರ ಪಟ್ಟಿಯಲ್ಲಿ ಸೇರಿಸಲು ಗಣತಿದಾರರಿಗೆ ತಮ್ಮ ಹೆಸರನ್ನು ನೀಡಿದರು. "ಆ ಕಾಲದಲ್ಲಿ, ಶಾಲಾ ಶಿಕ್ಷಕರು ಮತದಾರರ ಪಟ್ಟಿಯಲ್ಲಿ ಜನರ ಹೆಸರನ್ನು ಸೇರಿಸಲು ಮನೆಗಳಿಗೆ ಭೇಟಿ ನೀಡುತ್ತಿದ್ದರು. ನಾನು ನನ್ನ ಹೆಸರನ್ನೂ ಕೊಟ್ಟೆ" ಎಂದು ಮರ್ಜಿನಾ ಹೇಳುತ್ತಾರೆ. "ಆದರೆ ಮುಂದಿನ ಚುನಾವಣೆಯಲ್ಲಿ ನಾನು ಮತ ಚಲಾಯಿಸಲು ಹೋದಾಗ, ನನಗೆ ಮತ ಚಲಾಯಿಸಲು ಅವಕಾಶ ನೀಡಲಿಲ್ಲ. ನಾನು ಡಿ-ವೋಟರ್ ಎಂದು ಅವರು ಹೇಳಿದರು.”

PHOTO • Mahibul Hoque

ಮರ್ಜಿನಾ ಖಾತುನ್ (ಎಡ) ಅಸ್ಸಾಂನ ರೂಪಾಕುಚಿ ಗ್ರಾಮದ ನೇಯ್ಗೆ ಗುಂಪಿನ ಭಾಗವಾಗಿದ್ದಾರೆ ಮತ್ತು ಸಾಮಾನ್ಯವಾಗಿ ಸ್ಥಳೀಯವಾಗಿ ಖೇಟಾ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ರಜಾಯಿಗಳನ್ನು ನೇಯುತ್ತಾರೆ. ಇದೇ ರೀತಿಯ ವಿನ್ಯಾಸವನ್ನು ಹೊಂದಿರುವ ದಿಂಬಿನ ಕವರ್‌ ಒಂದನ್ನು ಅವರು ಕೈಯಲ್ಲಿ ಹಿಡಿದಿದ್ದಾರೆ

2018-19ರಲ್ಲಿ, ವಿದೇಶಿಯರ ನ್ಯಾಯಮಂಡಳಿಯಲ್ಲಿ ಅಕ್ರಮ ವಲಸಿಗರು ಎಂದು ಘೋಷಿಸಿದ ನಂತರ ಅಸ್ಸಾಂನ ಅನೇಕ ಡಿ-ವೋಟರುಗಳನ್ನು ಬಂಧಿಸಲಾಯಿತು ಎಂದು ಮರ್ಜಿನಾ ತಮ್ಮ ಮನೆಗೆ ಹೋಗುವ ದಾರಿಯಲ್ಲಿ ಹೇಳಿದರು.

ಮರ್ಜಿನಾ ತನ್ನನ್ನು ಡಿ-ವೋಟರ್ ಎಂದು ಏಕೆ ಗುರುತಿಸಲಾಗಿದೆ ಎಂದು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. “ಕೋವಿಡ್‌ ಲಾಕ್‌ಡೌನ್‌ಗೂ ಮೊದಲು ನಾನು ಮೂರು ಜನ ವಕೀಲರಿಗೆ ಸುಮಾರು 10,000 ರೂಪಾಯಿಗಳನ್ನು ನೀಡಿದ್ದೇನೆ. ಅವರು [ಮಂಡಿಯಾದಲ್ಲಿರುವ] ವೃತ್ತ ಕಚೇರಿಯಲ್ಲಿನ ಮತ್ತು [ಬಾರ್ಪೇಟಾದಲ್ಲಿನ] ನ್ಯಾಯಮಂಡಳಿಯಲ್ಲಿನ ದಾಖಲೆಗಳನ್ನು ಪರಿಶೀಲಿಸಿ ನೋಡಿದರು. ಆದರೆ ಅಲ್ಲಿ ನನ್ನ ವಿರುದ್ಧ ಯಾವುದೇ ಆರೋಪ ಕಂಡುಬಂದಿರಲಿಲ್ಲ” ಎಂದು ಅವರ ತಮ್ಮ ಕಚ್ಚಾ ಮನೆಯೆದುರು ಕುಳಿತು ದಾಖಲೆಗಳನ್ನು ಹುಡುಕುತ್ತಾ ತಿಳಿಸಿದರು.

ಮರ್ಜಿನಾ ಓರ್ವ ಗೇಣಿದಾರ ರೈತ ಮಹಿಳೆ - ಅವರು ಮತ್ತು ಅವರ ಪತಿ ಹಾಶೆಮ್ ಅಲಿ ಎರಡು ಬಿಘಾ (0.66 ಎಕರೆ) ನೀರಾವರಿ ರಹಿತ ಭೂಮಿಯನ್ನು ತಲಾ 8,000 ರೂ.ಗಳಿಗೆ ಗುತ್ತಿಗೆಗೆ ಪಡೆದಿದ್ದಾರೆ ಮತ್ತು ಅದರಲ್ಲಿ ಭತ್ತ ಮತ್ತು ಬದನೆಕಾಯಿ, ಮೆಣಸಿನಕಾಯಿ, ಸೌತೆಕಾಯಿಯಂತಹ ತರಕಾರಿಗಳನ್ನು ತಮ್ಮ ಸ್ವಂತ ಬಳಕೆಗಾಗಿ ಬೆಳೆಯುತ್ತಾರೆ.

ತನ್ನ ಪ್ಯಾನ್‌ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ ಹುಡುಕುತ್ತಿದ್ದ ಅವರು, “ನಾನು ನನ್ನ ಮತದಾನದ ಹಕ್ಕಿನಿಂದ ವಂಚಿತಳಾಗಿಲ್ಲವೆ?” ಎಂದು ಕೇಳುತ್ತಾರೆ. ಅವರ ತವರಿನ ಕುಟುಂಬದ ಎಲ್ಲರ ಬಳಿಯೂ ಮತದಾರರ ಗುರುತಿನ ಚೀಟಿಗಳಿವೆ. 1965ರ ಮತದಾರರ ಪಟ್ಟಿಯ ಪ್ರಮಾಣೀಕೃತ ಪ್ರತಿಯಲ್ಲಿ ಮರ್ಜಿನಾ ಅವರ ತಂದೆ ನಚಿಮ್ ಉದ್ದೀನ್ ಅವರನ್ನು ಬಾರ್ಪೇಟಾ ಜಿಲ್ಲೆಯ ಮಾರಿಚಾ ಗ್ರಾಮದ ನಿವಾಸಿ ಎಂದು ತೋರಿಸಲಾಗಿದೆ. "ನನ್ನ ಹೆತ್ತವರಿಬ್ಬರಿಗೂ ಬಾಂಗ್ಲಾದೇಶದೊಂದಿಗೆ ಯಾವುದೇ ಸಂಬಂಧವಿಲ್ಲ" ಎಂದು ಮರ್ಜಿನಾ ಹೇಳುತ್ತಾರೆ.

ಆದರೆ ಪ್ರಜಾಸತ್ತಾತ್ಮಕವಾಗಿ ತಮ ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದೊಂದೇ ಅವರ ಸಮಸ್ಯೆಯಲ್ಲ.

“ಅವರು ನನ್ನನ್ನು ಎಲ್ಲಿ ಡಿಟೆನ್ಷನ್‌ ಸೆಂಟರ್‌ಗೆ ಹಾಕುತ್ತಾರೋ ಎನ್ನುವ ಭಯ ಕಾಡುತ್ತಿತ್ತು” ಎಂದು ಮರ್ಜಿನಾ ಖಾತುನ್‌ ಸಣ್ಣ ದನಿಯಲ್ಲಿ ಹೇಳಿದರು. “ಆ ಸಮಯದಲ್ಲಿ ತುಂಬಾ ಸಣ್ಣವರಾಗಿದ್ದ ನನ್ನ ಮಕ್ಕಳನ್ನು ಬಿಟ್ಟು ಹೇಗೆ ಇರುವುದೆಂದು ಚಿಂತೆಗೆ ಒಳಗಾಗಿದ್ದೆ. ಸಾಯುವ ಕುರಿತಾಗಿಯೂ ಯೋಚಿಸುತ್ತಿದ್ದೆ.”

PHOTO • Mahibul Hoque
PHOTO • Kazi Sharowar Hussain

ಎಡ: ಮರ್ಜಿನಾ ಮತ್ತು ಅವರ ಪತಿ ಹಾಶೆಮ್ ಅಲಿ ಗೇಣಿ ರೈತರು. ತವರಿನ ಇತರ ಸದಸ್ಯರು ಮಾನ್ಯ ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದರೂ ಮರ್ಜಿನಾ ಅವರನ್ನು ಮತದಾರರ ಪಟ್ಟಿಯಲ್ಲಿ ಅನುಮಾನಾಸ್ಪದ ಮತದಾರರ ಪಟ್ಟಿಯಲ್ಲಿ ಗುರುತಿಸಲಾಗಿದೆ. ಆದರೆ ತನ್ನದೇ ಆದ ಮಾನ್ಯ ಮತದಾರರ ಗುರುತಿನ ಚೀಟಿಯಿಲ್ಲದೆ, ಮರ್ಜಿನಾ ತನ್ನ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಬಲ: ಚೌಲ್ಖೋವಾ ನದಿಯ ದಡದಲ್ಲಿರುವ ಹಳ್ಳಿಯಲ್ಲಿರುವ ಇನುವಾರಾ ಖಾತುನ್ ಅವರ (ಬಲದಿಂದ ಮೊದಲನೆಯ) ಮನೆಯಲ್ಲಿ ಸೇರುವ ತನ್ನ ನೇಯ್ಗೆ ಗುಂಪಿನಲ್ಲಿ ಮರ್ಜಿನಾ ಸಮಾಧಾನವನ್ನು ಕಂಡುಕೊಂಡಿದ್ದಾರೆ

ನೇಯ್ಗೆ ಗುಂಪಿನ ಭಾಗವಾಗಿರುವುದು ಮತ್ತು ಇತರ ಮಹಿಳೆಯರ ಒಡನಾಟದಿಂದ ಮರ್ಜಿನಾ ಅವರಿಗೆ ಒಂದಷ್ಟು ನಿರಾಳತೆ ದೊರಕಿದೆ. ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ ಅವರು ಮೊದಲ ಬಾರಿ ಗುಂಪಿನ ಬಗ್ಗೆ ತಿಳಿದುಕೊಂಡರು. ಆ ಸಮಯದಲ್ಲಿ ಸಹಾಯ ನೀಡಲು ಗ್ರಾಮಕ್ಕೆ ಬಂದಿದ್ದ ಬಾರ್ಪೇಟಾ ಮೂಲದ ಸಂಸ್ಥೆ ಅಮ್ರಾ ಪರಿ ನೇಯ್ಗೆ ಗುಂಪನ್ನು ಸ್ಥಾಪಿಸಿತು, ಆಗ "ಬೈದೇಯು [ಮೇಡಂ] ಕೆಲವು ಮಹಿಳೆಯರಿಗೆ ಖೇಟಾ ನೇಯ್ಗೆ ಪ್ರಾರಂಭಿಸಲು ಹೇಳಿದರು" ಎಂದು ಮರ್ಜಿನಾ ಹೇಳುತ್ತಾರೆ. ಊರಿನ ಮಹಿಳೆಯರು ಹೊರಗೆ ಹೋಗದೆ ಸಂಪಾದಿಸುವ ಸಾಧ್ಯತೆಯನ್ನು ಇದರಲ್ಲಿ ನೋಡಿದರು. "ಖೇಟಾ ನೇಯ್ಗೆ ನನಗೆ ಈಗಾಗಲೇ ತಿಳಿದಿತ್ತು, ಹೀಗಾಗಿ ನನಗೆ ಈ ಕೆಲಸ ಸುಲಭವಾಯಿತು" ಎಂದು ಅವರು ಹೇಳುತ್ತಾರೆ.

ಒಂದು ರಜಾಯಿ ನೇಯಲು ಅವರಿಗೆ ಸುಮಾರು ಮೂರರಿಂದ ಐದು ದಿನಗಳು ಬೇಕಾಗುತ್ತದೆ. ಒಂದು ರಜಾಯಿ ಮಾರಾಟದಿಂಧ ಅವರಿಗೆ ಸುಮಾರು 400-500 ರೂ. ದೊರೆಯುತ್ತದೆ.

ರೂಪಾಕುಚಿಯಲ್ಲಿರುವ ಇನುವಾರಾ ಖಾತುನ್ ಅವರ ಮನೆಯಲ್ಲಿ ಸ್ಥಳೀಯವಾಗಿ ಖೇಟಾ ಎಂದು ಕರೆಯಲ್ಪಡುವ ಈ ಸಾಂಪ್ರದಾಯಿಕ ರಜಾಯಿಗಳನ್ನು ನೇಯಲು ಒಟ್ಟುಗೂಡಿದ್ದ ಮರ್ಜಿನಾ ಮತ್ತು ಅವರೊಂದಿಗಿದ್ದ ಸುಮಾರು 10 ಮಹಿಳೆಯರನ್ನು ಪರಿ ಭೇಟಿ ಮಾಡಿತು.

ಗುಂಪಿನಲ್ಲಿರುವ ಮಹಿಳೆಯರು ಮತ್ತು ತನ್ನನ್ನು ಭೇಟಿಯಾದ ಮಾನವ ಹಕ್ಕುಗಳ ಕಾರ್ಯಕರ್ತರೊಂದಿಗಿನ ಮಾತುಕತೆಯಿಂದಾಗಿ ತನ್ನಲ್ಲಿನ ಆತ್ಮವಿಶ್ವಾಸ ಮರಳಿದೆ ಎಂದು ಮರ್ಜಿನಾ ಹೇಳುತ್ತಾರೆ. “ಹೊಲಗಳಲ್ಲಿ ದುಡಿಯುವುದರ ಜೊತೆಗೆ ಖೇಟಾ ಅಥವಾ ಇತರ ಕಸೂತಿ ಕೆಲಸಗಳನ್ನೂ ಮಾಡುತ್ತೇನೆ. ಹಗಲಿನಲ್ಲಿ ಕೆಲಸದ ಗುಂಗಿನಲ್ಲಿ ಎಲ್ಲವನ್ನೂ ಮರೆತಿರುತ್ತೇನೆ. ಆದರೆ ರಾತ್ರಿಗಳಲ್ಲಿ ಈ ಒತ್ತಡ ಕಾಡುತ್ತದೆ” ಎಂದು ಅವರು ಹೇಳುತ್ತಾರೆ.

ಅವರು ತನ್ನ ಮಕ್ಕಳ ಭವಿಷ್ಯದ ಬಗ್ಗೆಯೂ ಚಿಂತಿತರಾಗಿದ್ದಾರೆ. ಮರ್ಜಿನಾ ಮತ್ತು ಅವರ ಪತಿ ಹಾಶೆಮ್ ಅಲಿಯವರಿಗೆ ನಾಲ್ಕು ಮಕ್ಕಳಿದ್ದಾರೆ - ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಇಬ್ಬರು ಹಿರಿಯ ಹೆಣ್ಣುಮಕ್ಕಳಿಗೆ ಮದುವೆಯಾಗಿದೆ, ಆದರೆ ಸಣ್ಣ ಮಕ್ಕಳು ಇನ್ನೂ ಶಾಲೆ ಕಲಿಯುತ್ತಿದ್ದಾರೆ. ಮತ್ತು ಅವರು ಈಗಾಗಲೇ ಉದ್ಯೋಗ ಸಿಗದಿರುವ ಬಗ್ಗೆ ಚಿಂತಿತರಾಗಿದ್ದಾರೆ. "ಶಿಕ್ಷಣ ಪಡೆದರೂ, ನನ್ನ ಪೌರತ್ವ ದಾಖಲೆಗಳಿಲ್ಲದೆ [ಸರ್ಕಾರಿ] ಉದ್ಯೋಗವನ್ನು ಪಡೆಯಲು ಸಾಧ್ಯವಿಲ್ಲ ಎಂದು ನನ್ನ ಮಕ್ಕಳು ಹೇಳುತ್ತಾರೆ" ಎಂದು ಮರ್ಜಿನಾ ಹೇಳುತ್ತಾರೆ.

ಮರ್ಜಿನಾ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮತ ಚಲಾಯಿಸುವ ಬಯಕೆಯನ್ನು ಹೊಂದಿದ್ದಾರೆ. "ಇದು ನನ್ನ ಪೌರತ್ವವನ್ನು ಸಾಬೀತುಪಡಿಸುತ್ತದೆ ಮತ್ತು ನನ್ನ ಮಕ್ಕಳು ಅವರು ಬಯಸುವ ಯಾವುದೇ ಕೆಲಸವನ್ನು ಹುಡುಕಿಕೊಳ್ಳಲು ಸಾಧ್ಯವಾಗುತ್ತದೆ" ಎಂದು ಅವರು ಹೇಳುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Mahibul Hoque

ମାହିବୁଲ ହକ୍‌ ଆସାମରେ ରହୁଥିବା ଜଣେ ମଲ୍ଟିମିଡିଆ ସାମ୍ବାଦିକ ଏବଂ ଗବେଷକ। ସେ ୨୦୨୩ର ପରୀ-ଏମଏମଏଫ ଫେଲୋ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Mahibul Hoque
Editor : Sarbajaya Bhattacharya

ସର୍ବଜୟା ଭଟ୍ଟାଚାର୍ଯ୍ୟ ପରୀର ଜଣେ ବରିଷ୍ଠ ସହାୟିକା ସମ୍ପାଦିକା । ସେ ମଧ୍ୟ ଜଣେ ଅଭିଜ୍ଞ ବଙ୍ଗଳା ଅନୁବାଦିକା। କୋଲକାତାରେ ରହୁଥିବା ସର୍ବଜୟା, ସହରର ଇତିହାସ ଓ ଭ୍ରମଣ ସାହିତ୍ୟ ପ୍ରତି ଆଗ୍ରହୀ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Sarbajaya Bhattacharya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru