ದಕ್ಷಿಣದಲ್ಲಿ ಗ್ರೇಟ್‌ ರಣ್‌ ಆಫ್‌ ಕಛ್‌ ಹಾಗೂ ಉತ್ತರಕ್ಕೆ ಕಲೋ ಡುಂಗಾರ್‌ (ಕಪ್ಪು ಬೆಟ್ಟಗಳು) ಅನ್ನು ಒಳಗೊಂಡಿರುವ ಏಷ್ಯಾದ ಎರಡನೇ ಅತಿ ದೊಡ್ಡ ‘ಬನ್ನಿ’ ಹುಲ್ಲುಗಾವಲು ಪ್ರದೇಶವು ಸುಮಾರು 3,847 ಚ.ಕಿ. ಮೀವರೆಗೆ ವ್ಯಾಪಿಸಿದೆ. ಈ ಹಿಂದೆ ಸಿಂಧೂ ನದಿಯೂ ಈ ಪ್ರದೇಶದ ಮೂಲಕ ಹರಿಯುತ್ತಿತ್ತು. 1819ರಲ್ಲಿ ಆದ ಒಂದು ದೊಡ್ಡ ಭೂಕಂಪವು ಸಿಂಧೂ ನದಿಯ ಹಾದಿಯನ್ನು ಬದಲಾಯಿಸಿತು. ಇದರ ನಂತರ ಈ ಬನ್ನಿ ಪ್ರದೇಶವು ಶುಷ್ಕ ಹುಲ್ಲುಗಾವಲು ಪ್ರದೇಶವಾಗಿ ರೂಪಾಂತರಗೊಂಡಿತು. ಪ್ರಸ್ತುತ ಕಳೆದ ಕೆಲ ಶತಮಾನಗಳಲ್ಲಿ ಈ ಪ್ರದೇಶದಲ್ಲಿ ಇರಾನ್‌ ಅಫ್ಘಾನಿಸ್ತಾನ, ಸಿಂಧ್‌ ಹಾಗೂ ಬಲೂಚಿಸ್ತಾನದಿಂದ ವಲಸೆ ಬಂದ ಸಮುದಾಯಗಳು ಇಲ್ಲಿ ವಾಸಿಸುತ್ತಿವೆ. ಈ ವಲಸೆ ಸಮುದಾಯಗಳು ಕಾಲಾಂತರದಲ್ಲಿ ಒಣ ಭೂಪ್ರದೇಶಕ್ಕೆ ಹೊಂದಿಕೊಳ್ಳುತ್ತಾ ಪಶುಪಾಲನೆಯನ್ನು ಮುಖ್ಯ ಕಸುಬನ್ನಾಗಿ ನಡೆಸಲು ಆರಂಭಿಸಿದರು. ಈ ಸಮುದಾಯದವರು ಈಗಲೂ ಈ ಹುಲ್ಲುಗಾವಲುಗಳನ್ನು ಹೊಂದಿರುವ ಗುಜರಾತಿನ 48 ಕುಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ.

ಜಾಟ್‌, ರಾಬರಿ ಮತ್ತು ಸಾಮಾ ಸೇರಿದಂತೆ ಬನ್ನಿ ಸಮುದಾಯಗಳನ್ನು ಒಳಗೊಂಡಿರುವ ಬುಡಕಟ್ಟುಗಳನ್ನು ಒಟ್ಟಾಗಿ 'ಮಾಲ್ಧಾರಿ' ಎಂದು ಕರೆಯಲಾಗುತ್ತದೆ. ಕಛ್ಛಿ ಭಾಷೆಯಲ್ಲಿ ‘ಮಾಲ್’  ಪ್ರಾಣಿಗಳನ್ನು ಸೂಚಿಸುತ್ತದೆ. ‘ಧಾರಿ’ ಎಂದರೆ ಒಡೆಯ ಎಂದರ್ಥ. ಕಛ್‌ನಾದ್ಯಂತ, ಮಾಲ್ಧಾರಿಗಳ ಹಿಂದೆ ಹಸುಗಳು, ಎಮ್ಮೆಗಳು, ಒಂಟೆಗಳು, ಕುದುರೆಗಳು, ಕುರಿಗಳು ಮತ್ತು ಮೇಕೆಗಳು ಇರುವುದು ಸಾಮಾನ್ಯ. ಅವರ ಜೀವನ ಮತ್ತು ಸಾಂಸ್ಕೃತಿಕ ಆಚರಣೆಗಳು ಪ್ರಾಣಿಗಳ ಸುತ್ತ ಸುತ್ತುತ್ತವೆ ಮತ್ತು ಅವರ ಹಾಡುಗಳು ಕೂಡ ಪ್ರಾಣಿಗಳ ಹಿಂಡಿನ ಕುರಿತಾಗಿಯೇ ಇರುತ್ತವೆ. ಕೆಲವು ಮಾಲ್ಧಾರಿಗಳು ತಾವು ಸಾಕಿರುವ ಪ್ರಾಣಿಗಳ ಮೇವಿಗಾಗಿ ಹುಲ್ಲುಗಾವಲುಗಳನ್ನು ಹುಡುಕಲು ಕಛ್‌ನೊಳಗೆ ಕಾಲಕ್ಕೆ ತಕ್ಕಂತೆ ವಲಸೆ ಹೋಗುತ್ತಾರೆ. ಈ ಕುಟುಂಬಗಳು ಸಾಮಾನ್ಯವಾಗಿ ಮೇ ಕೆಲವೊಮ್ಮೆ ಜೂನ್ ಅಥವಾ ಜುಲೈ ತಿಂಗಳಲ್ಲಿ ವಲಸೆ ಹೊರಟು, ಸೆಪ್ಟೆಂಬರ್ ತಿಂಗಳ ಅಂತ್ಯದ ವೇಳೆಗೆ ಅಂದರೆ ಮಳೆಗಾಲದ ಸಮಯದಲ್ಲಿ ಹಿಂತಿರುಗುತ್ತಾರೆ.

ಈ ಸಮುದಾಯಗಳ ಸಾಮಾಜಿಕ ಸ್ಥಾನಮಾನವು ಅವರು ಸಾಕಿರುವ ಪ್ರಾಣಿಗಳ ಹಿಂಡಿನ ಗಾತ್ರ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದೆ. ಈ ಸಮುದಾಯಗಳು ತಮ್ಮ ಸ್ಥಾನಮಾನವನ್ನು ತೋರ್ಪಡಿಸಲು ಮತ್ತು ಸಮುದಾಯಗಳ ಸಂಸ್ಕೃತಿಯನ್ನು ಆಚರಿಸಲು ಪ್ರತಿವರ್ಷ ಹುಲ್ಲುಗಾವಲುಗಳಲ್ಲಿ ಎರಡು ದಿನಗಳ ಕಾಲ ನಡೆಯುವ ದೊಡ್ಡ ಜಾತ್ರೆಗೆ ಎಲ್ಲರೂ ಒಟ್ಟಿಗೆ ಬಂದು ಸೇರುತ್ತಾರೆ. ಈ ಜಾತ್ರೆಯು ಸಾಮಾನ್ಯವಾಗಿ ಡಿಸೆಂಬರ್‌-ಜನವರಿಯಲ್ಲಿ ನಡೆಯಲಿದ್ದು, ಸಮುದಾಯದವರು ಒಟ್ಟಿಗೆ ಸೇರಿ ಜಾತ್ರೆಯ ದಿನಾಂಕವನ್ನು ಸಾಮೂಹಿಕವಾಗಿ ನಿರ್ಧರಿಸುತ್ತಾರೆ. ನೀವು ನೋಡುತ್ತಿರುವ ಚಿತ್ರದಲ್ಲಿ ಕಾಣಿಸುತ್ತಿರುವುದು ಮಾಲ್ದಾರಿ ವ್ಯಕ್ತಿಯೊಬ್ಬ ಜಾತ್ರೆಗಾಗಿ ತಾತ್ಕಾಲಿಕವಾಗಿ ಸ್ಥಾಪಿಸಲಾದ ಕುಡಿಯುವ ನೀರಿನ ಟ್ಯಾಂಕಿನಿಂದ ನೀರು ಸಂಗ್ರಹಿಸುತ್ತಿರುವುದು.

ಅನುವಾದ: ಕಾವ್ಯ ಎಸ್.‌ ಬೆಂಗಳೂರು

Ritayan Mukherjee

କୋଲକାତାରେ ରହୁଥିବା ରୀତାୟନ ମୁଖାର୍ଜୀଙ୍କର ଫଟୋଗ୍ରାଫି ପ୍ରତି ଆଗ୍ରହ ରହିଛି ଏବଂ ସେ ୨୦୧୬ର ପରୀ ବ୍ୟକ୍ତିତ୍ୱ । ସେ ତିବ୍ଦତୀୟ ମାଳଭୂମି ଅଞ୍ଚଳରେ ଯାଯାବର ପଶୁପାଳକ ସଂପ୍ରଦାୟର ଜୀବନ ଉପରେ ତଥ୍ୟ ସଂଗ୍ରହ କରୁଥିବା ଏକ ଦୀର୍ଘକାଳୀନ ପ୍ରକଳ୍ପରେ କାମ କରୁଛନ୍ତି ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Ritayan Mukherjee
Translator : Kavya S. Bengaluru