"ಪ್ರತಿಭಟನಾಕಾರರು ರಸ್ತೆಗಳ ಸಂಚಾರವನ್ನು ತಡೆಗಟ್ಟಿದಾಗ ಅಥವಾ ರಸ್ತೆಗಳಿಗೆ ಹಾನಿಗೊಳಿಸಿದಾಗ ಸರಕಾರಗಳು ಅವರನ್ನು ಅಪರಾಧಿಗಳು ಎಂದು ಬ್ರಾಂಡ್ ಮಾಡುತ್ತದೆ. ಆದರೆ ಅದೇ ಕೆಲಸವನ್ನು ಸರಕಾರ ಮಾಡಿದರೆ ಅಂತಹ ಸರಕಾರವನ್ನು ಏನೆಂದು ಕರೆಯುವುದು?" ಇದು 70 ವರ್ಷದ ಹರೀಂದರ್ ಸಿಂಗ್ ಲಖಾ ಎನ್ನುವ ಪಂಜಾಬ್ನ ಮೊಗಾ ಜಿಲ್ಲೆಯ ಮೆಹ್ನಾ ಗ್ರಾಮದ ರೈತನ ಪ್ರಶ್ನೆ.
ಲಖಾ ಹೇಳುತ್ತಿರುವುದು ಆಕ್ರೋಶಭರಿತ ಪಂಜಾಬ್ನ ರೈತರು ದೆಹಲಿಗೆ ಬರದಂತೆ ತಡೆಯಲು ಸರ್ಕಾರಿ ಅಧಿಕಾರಿಗಳು ರಸ್ತೆಯಲ್ಲಿ 10 ಅಡಿ ಆಳದ ಹೊಂಡಗಳನ್ನು ಅಗೆದಿರುವ ಕುರಿತು. ಕೆಲವು ದಿನಗಳಿಂದ, ಪಂಜಾಬ್ ಮತ್ತು ಉತ್ತರ ಪ್ರದೇಶ ಮತ್ತು ಹರಿಯಾಣದ ಅನೇಕ ರೈತರು ತಮ್ಮ ದೇಶದ ರಾಜಧಾನಿಯನ್ನು ಪ್ರವೇಶಿಸಲು ಪೊಲೀಸ್ ಮತ್ತು ಇತರ ಪಡೆಗಳೊಂದಿಗೆ ಹೋರಾಡುತ್ತಿದ್ದಾರೆ.
ಮೂರು ದಿನಗಳ ಹೋರಾಟದ ನಂತರ, ದೆಹಲಿ ಪೊಲೀಸರು ತಲೆಬಾಗಿದರು, ಆದರೆ ಹರಿಯಾಣ ಸರ್ಕಾರ ರೈತರಿಗೆ ರಾಜ್ಯದ ಗಡಿ ದಾಟಲು ಈಗಲೂ ಅವಕಾಶ ನೀಡಿಲ್ಲ. ಈಗ ರಾಜಧಾನಿಗೆ ಪ್ರವೇಶಿಸಲು ಸಾರ್ವಜನಿಕವಾಗಿ ಅನುಮತಿ ನೀಡಲಾಗಿದ್ದರೂ, ವಾಸ್ತವದಲ್ಲಿ ಅದನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಿಲ್ಲ. ‘ಅನುಮತಿ’ಯ ಹೊರತಾಗಿಯೂ, ಕಂದಕಗಳು, ಮುಳ್ಳುತಂತಿ, ಬ್ಯಾರಿಕೇಡ್ಗಳು - ಎಲ್ಲವೂ ಹಾಗೇ ಉಳಿದಿವೆ. ಮತ್ತು ಅಶ್ರುವಾಯು ಶೆಲ್ಗಳು ಮತ್ತು ಜಲ ಫಿರಂಗಿಗಳು ಚಳವಳಿ ಇನ್ನಷ್ಟು ಹೊತ್ತು ಅಲ್ಲೇ ನಿಲ್ಲುವಂತೆ ಮಾಡಿವೆ.
ಈ ವರ್ಷ ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (APMCs) ಕಾನೂನು ಜಾರಿಗೆ ಬಂದರೆ, ಅವರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಮಂಡಿ-ಮಾರುಕಟ್ಟೆ ಸಮಿತಿಗಳ ವ್ಯವಸ್ಥೆಯು ತೊಂದರೆಗೀಡಾಗುತ್ತದೆಂದು ರೈತರು ಹೇಳುತ್ತಾರೆ. ಮತ್ತು ಇದು ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ಪ್ರಕ್ರಿಯೆಯನ್ನು ನಾಶಪಡಿಸುತ್ತದೆ ಮತ್ತು ದೊಡ್ಡ ಕೃಷಿ ಸರಣಿ ಕಂಪನಿಗಳು ಮತ್ತು ನಿಗಮಗಳಿಗೆ ಬೆಲೆಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ. ಇದು ಮತ್ತು ಇನ್ನೆರಡು ಕಾನೂನುಗಳು ಕನಿಷ್ಟ ಬೆಂಬಲ ಬೆಲೆಯ ಖಾತರಿಯನ್ನು ನೀಡುವುದಿಲ್ಲವೆಂದು ರೈತರಿಗೆ ತಿಳಿದಿದೆ. ಜೊತೆಗೆ ಈ ಕಾಯಿದೆಗಳಲ್ಲಿ ಎಲ್ಲೂ ಸ್ವಾಮಿನಾಥನ್ ವರದಿಯ ಉಲ್ಲೇಖ ಕಾಣುವುದಿಲ್ಲ. ಎರಡನೆಯ ಕಾನೂನು, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020ರ ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದವು ಖಾಸಗಿ ವ್ಯಾಪಾರಿಗಳು ಮತ್ತು ದೊಡ್ಡ ಸಂಸ್ಥೆಗಳನ್ನು ಒಳಗೊಂಡ ಒಪ್ಪಂದಗಳೊಂದಿಗೆ ವ್ಯವಹರಿಸುತ್ತದೆ ವ್ಯಾಪಾರಿಗಳ ಪರವಾಗಿ ಕೆಲಸ ಮಾಡುತ್ತದೆಯೆನ್ನುವುದನ್ನು ರೈತರು ಕಂಡುಕೊಂಡಿದ್ದಾರೆ. ಅಗತ್ಯ ಸರಕುಗಳ ಕಾಯ್ದೆಯು ಅಂತಹ ದೊಡ್ಡ ಕಂಪನಿಗಳನ್ನು ಉತ್ತೇಜಿಸುತ್ತದೆ ಮತ್ತು ಸಂಗ್ರಹಣೆಯನ್ನು ಉತ್ತೇಜಿಸುತ್ತದೆ. ಇಲ್ಲಿ ರೈತರು ಚೌಕಾಶಿ ನಡೆಸಬಹುದಾದ ಸಾಧ್ಯತೆಗಳು ಸೀಮಿತವಾಗಿವೆ.
ಈ ಮೂರು ಕಾನೂನುಗಳನ್ನು ರದ್ದುಪಡಿಸಬೇಕೆನ್ನುವುದು ಪ್ರತಿಭಟನಾಕಾರರ ಒತ್ತಾಯ.








