“ಕ್ಯಾಮೆರಾ ಎನ್ನವುದು ಕೇವಲ ಒಂದು ರಂಧ್ರವನ್ನು ಹೊಂದಿರುವ ಲೋಹದ ತುಂಡು. ಚಿತ್ರ ನಿಮ್ಮ ಹೃದಯದಲ್ಲಿರುತ್ತದೆ. ನಮ್ಮ ಉದ್ದೇಶ ಚಿತ್ರ ಹೇಗಿರಬೇಕೆನ್ನುವುದನ್ನು ನಿರ್ಧರಿಸುತ್ತದೆ.”

ಪಿ. ಸಾಯಿನಾಥ್‌

ಬಾಗುವಿಕೆ, ಸಮತೋಲನಗೊಳಿಸುವುದು, ನಿರ್ಮಾಣ, ಭಾರ ಎತ್ತುವುದು, ಗುಡಿಸುವುದು, ಅಡುಗೆ ಮಾಡುವುದು, ಕುಟುಂಬವನ್ನು ನೋಡಿಕೊಳ್ಳುವುದು, ಜಾನುವಾರು ಮೇಯಿಸುವುದು, ಓದುವುದು, ಬರೆಯುವುದು, ನೇಯುವುದು, ಸಂಗೀತ ನುಡಿಸುವುದು, ಹಾಡುವುದು, ಕುಣಿಯುವುದು ಮತ್ತು ಆಚರಿಸುವುದು… ಹೀಗೆ ಗ್ರಾಮೀಣ ಜನರ ಬದುಕು ಮತ್ತು ಅವರ ಕೆಲಸಗಳ ಕುರಿತು ತಿಳಿಯುವಲ್ಲಿ, ತಿಳಿಸುವಲ್ಲಿ ಬರಹಗಳೊಡನೆ ಫೋಟೊಗಳು ಸಹ ತಮ್ಮದೇ ಆದ ಸ್ಥಾನವನ್ನು ಹೊಂದಿ ಅವುಗಳೊಡನೆ ಬೆಸೆದುಕೊಂಡಿರುತ್ತವೆ.

ಪರಿಯಲ್ಲಿ ಫೋಟೊಗಳು ಸಾಮೂಹಿಕ ಸ್ಮರಣೆಯ ದೃಶ್ಯ ರಕ್ಷಕರ ಪಾತ್ರವನ್ನು ವಹಿಸುತ್ತವೆ. ಅವು ಕೇವಲ ನಾವು ವಾಸಿಸುವ ಸ್ಥಳಗಳ ನಿಷ್ಪಕ್ಷಪಾತ ದಾಖಲೀಕರವಷ್ಟೇ ಅಲ್ಲ. ನಮ್ಮ ಸುತ್ತಲಿನ ಜಗತ್ತಿನೊಡನೆ ಸಂಪರ್ಕವನ್ನು ಸಾಧಿಸಿಕೊಡುವ ಹೆಬ್ಬಾಗಿಲು. ನಮ್ಮಲ್ಲಿರುವ ವಿಶಾಲ ವ್ಯಾಪ್ತಿಯ ಫೋಟೊ ಸಂಗ್ರಹಗಳು ಮುಖ್ಯವಾಹಿನಿ ಮಾಧ್ಯಮಗಳು ನಿಮಗೆ ಹೇಳದ ಕತೆಗಳನ್ನು ಹೇಳುತ್ತವೆ. ಇವು ಅಂಚಿನಲ್ಲಿರುವ ಜನರು, ಸ್ಥಳಗಳು, ಭೂಮಿ,ಜೀವನೋಪಾಯ ಮತ್ತು ಕಾರ್ಮಿಕರ ಕುರಿತು ಮಾತನಾಡುತ್ತವೆ.

ಈ ಚಿತ್ರಗಳು ಆ ಜನರ ಸೂಕ್ಷ್ಮತೆ ಮತ್ತು ದೌರ್ಬಲ್ಯದ ಜೊತೆಜೊತೆಯಲ್ಲೇ ಅವರ ಬದುಕಿನ ಸಂತೋಷ, ಸೌಂದರ್ಯ, ಸಂತೋಷ, ದುಃಖ, ದುಃಖ, ವಿಸ್ಮಯ ಮತ್ತು ಭಯಾನಕ ಸತ್ಯಗಳನ್ನು ತೆರೆದಿಡುತ್ತವೆ. ನಮ್ಮ ಚಿತ್ರಗಳಲ್ಲಿ ಕಂಡು ಬರುವ ಮನುಷ್ಯ ಕೇವಲ ಆ ಕತೆಯ ಸಬ್ಜೆಕ್ಟ್‌ ಅಷ್ಟೇ ಅಲ್ಲ. ಚಿತ್ರದಲ್ಲಿರುವ ವ್ಯಕ್ತಿಯ ಹೆಸರು ನಮಗೆ ಆ ಕತೆ ಮತ್ತು ಚಿತ್ರದ ಅನುಭೂತಿಗೆ ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿಯ ಕತೆ ಹಲವು ದೊಡ್ಡ ಸತ್ಯಗಳ ಕುರಿತು ಮಾತನಾಡುತ್ತದೆ.

ಆದರೆ ಇಂತಹ ಚಿತ್ರವೊಂದನ್ನುತೆಗೆಯಬೇಕಿದ್ದರೆ ಫೋಟೊಗ್ರಾಫರ್‌ ಮತ್ತು ವ್ಯಕ್ತಿಯ ನಡುವೆ ಒಂದು ಸಹಯೋಗ ಬಹಳ ಮುಖ್ಯ. ಅವರು ಅಪಾರ ನೋವು ಮತ್ತು ವಿವರಿಸಲಾಗದ ಸಂಕಟವನ್ನು ಅನುಭವಿಸುತ್ತಿರುವ ಹೊತ್ತಿನಲ್ಲಿ ಅವರ ಫೋಟೊ ತೆಗಯಲು ನಮಗೆ ಅನುಮತಿಯಿದೆಯೇ ಎನ್ನುವುದು ಬಹಳ ಮುಖ್ಯ. ಹಾಗಿದ್ದರೆ ಸಮಾಜದ ಅತ್ಯಂತ ಅಂಚಿನಲ್ಲಿರುವ ಜನರ ಫೋಟೊ ಒಂದನ್ನು ನಾವು ಘನತೆಯಿಂದ ಹೇಗೆ ತೆಗೆಯುತ್ತೇವೆ? ವ್ಯಕ್ತಿ ಅಥವಾ ಜನರ ಫೋಟೊಗಳನ್ನು ಯಾವ ಸನ್ನಿವೇಶದಲ್ಲಿ ತೆಗೆಯುತ್ತೇವೆ? ಜನಸಾಮಾನ್ಯರ ದೈನಂದಿನ ಬದುಕಿನ ಚಿತ್ರಗಳ ಸರಣಿಯನ್ನು ರಚಿಸುವುದರ ಹಿಂದಿನ ಉದ್ದೇಶವೇನು?

ಇವು ನಮ್ಮ ಛಾಯಾಗ್ರಾಹಕರು ಈ ಕ್ಷೇತ್ರದಲ್ಲಿ ಎದುರಿಸುವ ಬಹಳ ನಿರ್ಣಾಯಕ ಪ್ರಶ್ನೆಗಳಿವು. ಅದು ಒಂದೇ ಕತೆಯನ್ನು ವರ್ಷಗಳ ಕಾಲ ಶೂಟ್‌ ಮಾಡುವುದಿರಬಹುದು, ಅಪ್ರತಿಮ ಪ್ರದರ್ಶನಕಾರರನ್ನು ಚಿತ್ರೀಕರಿಸುವುದಿರಬಹುದು, ಆದಿವಾಸಿಗಳ ಹಬ್ಬಗಳು, ರೈತರ ಪ್ರತಿಭಟನೆ ಚಿತ್ರಗಳಿರಬಹುದು ಇಲ್ಲೆಲ್ಲವೂ ಈ ಪ್ರಶ್ನೆ ಎದ್ದು ನಿಲ್ಲುತ್ತದೆ.

ವಿಶ್ವ ಛಾಯಾಗ್ರಹಣ ದಿನದಂದು ಪರಿಯಲ್ಲಿ ಪ್ರಕಟವಾದ ಫೋಟೊಗಳ ಸಂಗ್ರಹವನ್ನು ನಾವು ನಿಮ್ಮ ಮುಂದಿರಿಸುತ್ತಿದ್ದೇವೆ. ಕುರಿತು ಅವುಗಳ ಛಾಯಾಗ್ರಾಹಕರೇ ತಾವು ಫೋಟೊ ತೆಗೆಯುವಾಗಿನ ತಮ್ಮ ಅನುಭವಗಳ ಕುರಿತು ವಿವರಿಸಿದ್ದಾರೆ. ಅವುಗಳನ್ನು ಇಂಗ್ಲಿಷ್ ವರ್ಣಮಾಲೆಯ ಅನುಕ್ರಮದಲ್ಲಿ ಕೆಳಗೆ ಜೋಡಿಸಲಾಗಿದೆ:

ಆಕಾಂಕ್ಷಾ – ಮುಂಬಯಿ, ಮಹಾರಾಷ್ಟ್ರ

PHOTO • Aakanksha

ನಾನು ಈ ಫೋಟೊ ತೆಗೆದಿದ್ದು, ನಾನೇ ಬರೆದ ʼಮುಂಬಯಿ ಲೋಕಲ್ ರೈಲುಗಳು ಮತ್ತು ಬದುಕಿನ ಸ್ವರ ಹೊರಡಿಸದ ತಂತಿಗಳು ʼ ಎನ್ನುವ ಕತೆಗಾಗಿ. ಈ ಕತೆಯಲ್ಲಿ ಕಿಶನ್‌ ಜೋಗಿ ಎನ್ನುವವರು ಮುಂಬಯಿ ಲೋಕಲ್‌ ರೈಲುಗಳಲ್ಲಿ ಸಾರಂಗಿ ನುಡಿಸುತ್ತಾರೆ, ಅವರ ಆರು ವರ್ಷದ ಮಗಳು ಭಾರತಿ ಅಪ್ಪನಿಗೆ ಸಹಾಯವಾಗಿ ಅವರ ಜೊತೆಯಲ್ಲೇ ತಿರುಗುತ್ತಾಳೆ.

ಈ ಕತೆಯಲ್ಲಿ ನನ್ನ ಬದುಕಿನಲ್ಲಿ ಬಾಲ್ಯದಿಂದ ಇಂದಿನವರೆಗೆ ಹಾದು ಹೋದ ಹಲವು ಕಲಾವಿದರ ಕತೆ ಅನುರಣಿಸುತ್ತದೆ. ನಾನು ಆ ಕಲಾವಿದರನ್ನು ನೋಡುತ್ತಾ, ಕೇಳುತ್ತಾ ಬೆಳೆದಿದ್ದೇನಾದರೂ ಅವರನ್ನು ಕಲಾವಿದರೆಂದು ಒಪ್ಪಿಕೊಂಡಿರಲಿಲ್ಲ. ಹೀಗಾಗಿ ನನಗೆ ಈ ಕಥೆ ಮಾಡುವುದು ಬಹಳ ಮುಖ್ಯವೆನ್ನಿಸಿತ್ತು.

ಚಲಿಸುವ ರೈಲಿನಲ್ಲಿ ಕಿಕ್ಕಿರಿದ ಬೋಗಿಗಳ ನಡುವೆ ಓಡಾಡುತ್ತಾ, ಒಂದು ರೈಲಿನಿಂದ ಇನ್ನೊಂದು ರೈಲಿಗೆ ಜಿಗಿಯುವ ಅವರ ಈ ಪ್ರಯಾಣದ ತೀವ್ರ ಲಯಕ್ಕೆ ವಿರುದ್ಧವಾಗಿ ಈ ಫೋಟೋವನ್ನು ಚಿತ್ರೀಕರಿಸಲಾಗಿದೆ.

ಅವರ ವೇಗದ ಓಡಾಟಕ್ಕೆ ಹೊಂದಿಕೊಳ್ಳಲು ಹೆಣಗಾಡುತ್ತಿದ್ದ ನಾನು ರೈಲಿನಲ್ಲಿ ಸ್ಥಳಮಾಡಿಕೊಳ್ಳುವುದಕ್ಕೆ ಪರದಾಡುತ್ತಿದ್ದರೆ, ಕಿಶನ್‌ ಭಯ್ಯಾ ಅಡೆತಡೆಯಿಲ್ಲದೆ ತನ್ನ ಪ್ರದರ್ಶನ ಮುಂದುವರೆಸಿದ್ದರು. ಅವರು ಆ ಇಕ್ಕಟ್ಟಿನ ನಡುವೆ ಒಂದು ಕಂಪಾರ್ಟ್‌ಮೆಂಟಿನಿಂದ ಇನೊಂದಕ್ಕೆ ಹೋಗುತ್ತಿರುವಾಗಲೂ ಅವರ ಸಂಗೀತ ಯಾವುದೇ ಅಡೆತಡೆಯಿಲ್ಲದ ನಿನಾದ ಹೊರಡಿಸುತ್ತಿತ್ತು.

ನನ್ನ ಕೆಮೆರಾದ ವೀವ್‌ ಫೈಂಡರ್‌ ಮೂಲಕ ಕ್ಯಾಮೆರಾವನ್ನು ಹೊಂದಿಸುವಾಗ ಅವರಿಗೆ ಹಿಂಜರಿಕೆ ಕಾಡಬಹುದು ಮತ್ತು ಈ ಕುರಿತು ಕಾನ್ಷಿಯಸ್‌ ಆಗಬಹುದು ಎನ್ನಿಸಿತ್ತು. ಆದರೆ ಈ ಅಪ್ರತಿಮ ಕಲಾವಿದ ಹಾಗೆ ಮಾಡದೆ ತನ್ನದೇ ಸಂಗೀತ ಲೋಕದಲ್ಲಿ ಕಳೆದು ಹೋಗಿದ್ದರು.

ಅವರ ಕಲೆಯ ಆಕರ್ಷಣೆಯು ಸಾಂಕ್ರಾಮಿಕವಾಗಿತ್ತಾದರೂ, ಅದು ರೈಲಿನಲ್ಲಿದ್ದ ದಣಿದ ಪ್ರಯಾಣಿಕರನ್ನು ಸೆಳೆದಂತಿರಲಿಲ್ಲ. ನಾನು ಈ ದ್ವಂದ್ವವನ್ನು ಚಿತ್ರದಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದ್ದೆ.

*****

ಬಿನೈಫರ್ ಭರೂಚಾ - ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್

PHOTO • Binaifer Bharucha

ನಾನು ಈ ಚಿತ್ರವನ್ನು ʼ ಅರುಣಾಚಲದ ಹಕ್ಕಿಗಳು: ಕಲ್ಲಿದ್ದಲು ಗಣಿಯಲ್ಲಿನ ಕ್ಯಾನರಿ ಹಕ್ಕಿ ʼ ಎನ್ನುವ ಕತೆಗಾಗಿ ತೆಗೆದಿದ್ದೆ.

ಈ ಚಿತ್ರ ತೆಗೆಯುವಾಗ ಐತಿ ಥಾಪಾ (ಚಿತ್ರದಲ್ಲಿರುವವರು) ಅವರ ಹಿಂದೆ ಹಾವಿನಂತೆ ಸಾಗಿದ್ದ ಜಾರು ಹಾದಿಯಲ್ಲಿ ಓಡುತ್ತಿದ್ದೆ. ಸುತ್ತಲೂ ಸೊಂಪಾದ ಗಿಡ ಮರಗಳಿದ್ದವು. ಅಲ್ಲಿ ನೆಲೆಯಾಗಿದ್ದ ಮೌನದಲ್ಲಿ ತಿಗಣೆಗಳು ಕಚ್ಚದಿರಲಿ ಎಂದು ಪ್ರಾರ್ಥಿಸುತ್ತಿರುವಾಗಲೇ ಅಲ್ಲೊದು ಹಕ್ಕಿ ಕೂಗಿ ಕಾಡಿನ ಮೌನವನ್ನು ಕಲಕಿತ್ತು.

ಐತಿ 2021ರಿಂದ ಇಲ್ಲಿನ ಹಕ್ಕಿ ಸಂಶೋಧನಾ ತಂಡದೊಡನೆ ಕೆಲಸ ಮಾಡುತ್ತಿದ್ದಾರೆ. ಕಾಡಿನಲ್ಲಿ ಮಂಜಿನ ಬಲೆ ಹಾಕಿ ಹಕ್ಕಿಗಳನ್ನು ಸಂಶೋಧನೆಗಾಗಿ ಹಿಡಿಯಲಾಗುತ್ತದೆ. ಅವುಗಳನ್ನು ನಿಧಾನವಾಗಿ ಬಲೆಯಿಂದ ಬಿಡಿಸಿ ಹೊರತರುವುದು ಬಹಳ ಕಷ್ಟದ ಕೆಲಸ. ಆದರೆ ಅವರು ಅದನ್ನು ಬಹಳ ಎಚ್ಚರಿಕೆ ಬೆರೆತ ಚುರುಕು ಮತ್ತು ವೇಗದೊಡನೆ ಮಾಡುತ್ತಾರೆ.

ಅರಿಶಿನ ಬುರುಡೆ ಹಕ್ಕಿಯನ್ನು ನೋಡುತ್ತಿರುವ ಸೂಕ್ಷ್ಮ ಫ್ರೇಮ್‌ನಲ್ಲಿನ ಫೋಟೊ ತೆಗೆಯುವಾಗ ನನ್ನ ಎದೆ ಬಡಿತ ಒಮ್ಮ ತಪ್ಪಿ ಹೋಗಿತ್ತು. ಮನುಷ್ಯ ಮತ್ತು ಹಕ್ಕಿಯ ನಡುವಿನ ಸಂಪರ್ಕ ಮತ್ತು ವಿಶ್ವಾಸದ ಆ ಘಳಿಗೆಯು ಮಾಂತ್ರಿಕವಾಗಿತ್ತು. ಹೆಚ್ಚು ಪುರುಷರೇ ಇರುವ ಈ ತಂಡದ ಇಬ್ಬರು ಮಹಿಳಾ ಸದಸ್ಯರಲ್ಲಿ ಐತಿ ಕೂಡಾ ಒಬ್ಬರು.

ಈ ಚಿತ್ರದಲ್ಲಿ ಐತಿ ಸೌಮ್ಯವಾಗಿ ಯಾವುದೇ ಸದ್ದಿಲ್ಲದೆ ಲಿಂಗ ತಾರತಮ್ಯದ ತಡೆಗೋಡೆಯೊಂದನ್ನು ಒಡೆದು ದೃಢವಾಗಿ ನಿಂತಿರುವ ಈ ಚಿತ್ರವು ಕತೆಯಲ್ಲಿನ ಬಹಳ ಮಹತ್ವದ ಚಿತ್ರವಾಗಿದೆ.

*****

ದೀಪ್ತಿ ಅಸ್ತಾನಾ - ರಾಮನಾಥಪುರಂ, ತಮಿಳುನಾಡು

PHOTO • Deepti Asthana

ಧನುಷ್ಕೋಡಿ ತಮಿಳುನಾಡಿನ ಯಾತ್ರಾ ಸ್ಥಳವಾದ ರಾಮೇಶ್ವರಂನಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿದೆ. ಒಂದು ಕಡೆ ಬಂಗಾಳಕೊಲ್ಲಿ ಮತ್ತು ಇನ್ನೊಂದು ಕಡೆ ಹಿಂದೂ ಮಹಾಸಾಗರದೊಂದಿಗೆ, ಇದು ಸಮುದ್ರ ಸುತ್ತುವರೆದಿರುವ ಒಂದು ಸಣ್ಣ ಭೂಪ್ರದೇಶ. ಆದರೆ ಅಷ್ಟೇ ಅದ್ಭುತವಾದದ್ದು! ಬೇಸಿಗೆಯ ಆರು ತಿಂಗಳು ಜನರು ಬಂಗಾಳ ಕೊಲ್ಲಿಯಲ್ಲಿ ಮೀನು ಹಿಡಿಯುತ್ತಾರೆ, ಮತ್ತು ಗಾಳಿಯ ದಿಕ್ಕು ಬದಲಾದಾಗ, ಅವರು ಹಿಂದೂ ಮಹಾಸಾಗರಕ್ಕೆ ಇಳಿಯುತ್ತಾರೆ.

ನಾನು ಇಲ್ಲಿಗೆ ʼ ಮುರಿದ ಬಿಲ್ಲು: ಧನುಷ್ಕೋಡಿಯ ಮರೆಯಲ್ಪಟ್ಟ ಜನರು ʼ ಎನ್ನುವ ಕತೆಯನ್ನು ವರದಿ ಮಾಡಲು ಬಂದ ಸಮಯದಲ್ಲಿ ಇಲ್ಲಿನ ಜನರು ನೀರಿನ ಸಮಸ್ಯೆ ಎದುರಿಸುತ್ತಿರುವುದನ್ನು ಗಮನಿಸಿದೆ.

ಎರಡೂ ಕಡೆಗಳಿಂದಲೂ ಸಮುದ್ರ ಆವರಿಸಿಕೊಂಡಿರುವ ಈ ಪ್ರದೇಶದಲ್ಲಿ ಸಿಹಿ ನೀರನ್ನು ಹುಡುಕುವುದು ಸವಾಲಿನ ಕೆಲಸವಾಗಿದೆ. ಇಲ್ಲಿನ ಮಹಿಳೆಯರು ದೈನಂದಿನ ಬಳಕೆಯ ನೀರನ್ನು ಪಡೆಯುವ ಸಲುವಾಗಿ ಆಗಾಗ್ಗೆ ತಮ್ಮ ಕೈಗಳಿಂದಲೇ ಗುಂಡಿಗಳನ್ನು ತೋಡುತ್ತಿರುತ್ತಾರೆ.

ಇಲ್ಲಿ ನೀರು ಬಹಳ ಬೇಗ ಉಪ್ಪು ನೀರಾಗಿ ಮಾರ್ಪಡುವುದರಿಂದಾಗಿ ಈ ಗುಂಡಿ ತೋಡುವ ಕೆಲಸವೆನ್ನುವುದು ನಿರಂತರ.

ಈ ಚಿತ್ರವು ವಿಶಾಲವಾದ ಪ್ರದೇಶವೊಂದರಲ್ಲಿ ನಿಂತಿರುವ ಮಹಿಳೆಯರ ಗುಂಪಿನೊಂದಿಗೆ ನೋಡುವವರ ಆಸಕ್ತಿಯನ್ನು ಕೆರಳಿಸುತ್ತದೆ. ಅದೇ ಸಮಯದಲ್ಲಿ ಪ್ರತಿಯೊಬ್ಬ ಮನುಷ್ಯನ ಹಕ್ಕಾದ ಬದುಕಿನ ಮೂಲಭೂತ ಹಕ್ಕುಗಳ ಕೊರತೆಯನ್ನೂ ತೋರಿಸುತ್ತದೆ.

*****

ಇಂದ್ರಜಿತ್ ಖಾಂಬೆ - ಸಿಂಧುದುರ್ಗ್, ಮಹಾರಾಷ್ಟ್ರ

PHOTO • Indrajit Khambe

ಓಂ ಪ್ರಕಾಶ್‌ ಚವಾಣ್‌ ಅವರು ಕಳೆದ 35 ವರ್ಷಗಳಿಂದ ದಶಾವತಾರ ರಂಗಭೂಮಿಯಲ್ಲಿ ಸ್ತ್ರೀ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 8,000ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ವಹಿಸಿರುವ ಅವರು ಈ ಕಲಾ ಪ್ರಕಾರದ ಪ್ರಸಿದ್ಧ ಕಲಾವಿದರಲ್ಲಿ ಒಬ್ಬರು. ಈ ಕತೆಯಲ್ಲಿ ಹೇಳಿರುವಂತೆ ಅವರು ದಶಾವತಾರ ಕತೆಗೆ ಗ್ಲಾಮರ್‌ ತಂದುಕೊಡುತ್ತಾರೆ.

ನಾನು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಅವರ ಬದುಕನ್ನು ದಾಖಲಿಸುವ ಕೆಲಸ ಮಾಡುತ್ತಿದ್ದೇನೆ. ಇದಕ್ಕಾಗಿ ಅವರ ಕತೆಯನ್ನು ಹೇಳುವ ಅಪ್ರತಿಮ ಚಿತ್ರವೊಂದನ್ನು ತೆಗೆಯುವ ಪ್ರಯತ್ನದಲ್ಲಿದ್ದೆ. ಕೆಲವು ವರ್ಷಗಳ ಹಿಂದೆ ಅವರು ಸತರ್ಡಾದಲ್ಲಿ ಪ್ರದರ್ಶನಕ್ಕೆಂದು ಹೋಗಿದ್ದಾಗ ನನಗೆ ಈ ಅವಕಾಶ ದೊರಕಿತು. ಇಲ್ಲಿ (ಮೇಲೆ) ಅವರು ನಾಟಕಕ್ಕಾಗಿ ಸ್ತ್ರೀ ವೇಷ ಧರಿಸುತ್ತಿರುವುದನ್ನು ನೋಡಬಹುದಾಗಿದೆ.

ಈ ಚಿತ್ರದಲ್ಲಿ ಅವರ ಎರಡೂ ಅವತಾರಗಳನ್ನು ನೋಡಬಹುದಾಗಿದೆ. ಈ ಒಂದೇ ಚಿತ್ರವು ಒಬ್ಬ ಸ್ತ್ರೀ ವೇಷಧಾರಿ ಪುರುಷನಾದ ಅವರ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.

*****

ಜಯದೀಪ್‌ ಮಿತ್ರ – ಛತ್ತೀಸಗಢದ ರಾಯಗಢ

PHOTO • Joydip Mitra

ಕೆಲವು ದಶಕಗಳಿಂದ ಹಿಂದೂ ಬಲಪಂಥೀಯತೆಯು ಕಟ್ಟಿದ ರಾಮನ ಕತೆಯು ಭಾರತವನ್ನು ಗೆಲ್ಲುತ್ತಿರುವ ಹೊತ್ತಿನಲ್ಲೇ ನಾನು ರಾಮದಾಸ್‌ ಲಾಂಬ್‌ ಅವರ ರಾಪ್ಟ್‌ ಇನ್‌ ದಿ ನೇಮ್‌ ಎನ್ನುವ ಪುಸ್ತಕವನ್ನು ಓದಿದೆ.

ಇದನ್ನು ಓದಿದ ಕೂಡಲೇ ನಾನು ಈ ಬಹುಸಂಖ್ಯಾತ ನಿರೂಪಣೆಯ ಪರ್ಯಾಯವನ್ನು ಹುಡುಕಲು ತೊಡಗಿದೆ. ಈ ಹುಡುಕಾಟ ನನ್ನನ್ನು ರಾಮನಾಮಿಗಳ ಬಳಿಗೆ ಕರೆದೊಯ್ಯಿತು. ಅನೇಕ ವರ್ಷಗಳ ಕಾಲ ಅವರೊಡನೆ ಬೆರೆತು ಅವರನ್ನು ಅರಿಯುವ ಪ್ರಕ್ರಿಯೆಯಲ್ಲಿ ನಾನೂ ಅವರಲ್ಲಿ ಒಬ್ಬನಾದೆ.

ʼ ಇನ್‌ ದಿ ನೇಮ್‌ ಆಫ್‌ ರಾಮ ʼ ಹೆಸರಿನ ಕತೆಯಲ್ಲಿನ ಈ ಚಿತ್ರವು ಈ ತಳ ಸಮುದಾಯವನ್ನು ಸಶಕ್ತಗೊಳಿಸಿದ್ದರೆ ಭಾರತವು ಈಗಿನ ಸ್ವರೂಪಕ್ಕೆ ಜಾರುವುದನ್ನು ಹೇಗೆ ತಡೆಯುತ್ತಿತ್ತು ಎನ್ನುವುದರ ಪ್ರತೀಕವಾಗಿದೆ.

*****

ಮುಜಮಿಲ್ ಭಟ್ - ಶ್ರೀನಗರ, ಜಮ್ಮು ಮತ್ತು ಕಾಶ್ಮೀರ

PHOTO • Muzamil Bhat

ಜಿಗರ್‌ ದೇಡ್‌ ಅವರ ಬದುಕಿನ ಕತೆಯನ್ನು ಹೇಳುವ ʼ ಜಿಗರ್‌ ದೇದ್‌ನ ವ್ಯಥೆ ʼ ಎನ್ನುವ ನಾನು ಬರೆದ ಕತೆಗೆ ಆಕೆಯ ಮುಖಭಾವದ ಈ ಚಿತ್ರ ಬಹಳ ಮುಖ್ಯವಾದುದು. ಯಾಕೆಂದರೆ ಈ ಚಿತ್ರವೇ ಆಕೆಯ ಬದುಕಿನ ಕುರಿತು ಸಾಕಷ್ಟು ಕಥೆಗಳನ್ನು ಹೇಳುತ್ತದೆ.

ಕೋವಿಡ್‌ - 19 ಪಿಡುಗು ಹರಡಿದ್ದ ಸಮಯದಲ್ಲಿ ಸ್ಥಳೀಯ ಪತ್ರಿಕೆಯೊಂದರ ವರದಿಯ ಮೂಲಕ ನನಗೆ ಜಿಗರ್‌ ದೇದ್‌ ಕುರಿತು ತಿಳಿಯಿತು. ಅಂದಿನಿಂದಲೇ ನಾನು ಅವರನ್ನು ಭೇಟಿಯಾಗಲು ಹಾಗೂ ಅವರ ಕತೆಯನ್ನು ಕೇಳಲು ಉತ್ಸುಕನಾಗಿದ್ದೆ.

ನಾನು ದಾಲ್‌ ಸರೋವರದಲ್ಲಿರುವ ಅವರ ದೋಣಿ ಮನೆಗೆ ಹೋದ ಸಂದರ್ಭದಲ್ಲಿ ಅವರು ಯಾವುದೋ ಆಳವಾದ ಯೋಚನೆಯಲ್ಲಿ ಮುಳುಗಿದ್ದರು. ನಾನು ಅದರ ನಂತರ 8-10 ದಿನಗಳವರೆಗೆ ಅವರ ಮನೆಗೆ ಹೋಗುತ್ತಲೇ ಇದ್ದೆ.. ತನ್ನ ಬದುಕಿನ 30 ವರ್ಷಗಳ ಏಕಾಂಗಿ ಹೋರಾಟದ ಕತೆಯನ್ನು ಅವರು ನನ್ನೆದುರು ಹೇಳಿಕೊಂಡಿದ್ದರು.

ಈ ಕತೆ ವರದಿ ಮಾಡುವಲ್ಲಿ ನನಗೆ ಇದ್ದ ದೊಡ್ಡ ಸವಾಲೆಂದರೆ ಅವರಿಗೆ ಚಿತ್ತ ವೈಕಲ್ಯತೆ ಇರುವ ಕಾರಣ ನಿರಂತರವಾಗಿ ಅವರಿಗೆ ವಿಷಯಗಳನ್ನು ಪುನರ್‌ಮನನ ಮಾಡಬೇಕಿತ್ತು. ಅವರಿಗೆ ಸಂಗತಿಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ನನ್ನನ್ನು ನೆನಪಿನಲ್ಲಿರಿಸಿಕೊಳ್ಳುವುದು ಬಹಳ ಕಷ್ಟವಾಗುತ್ತಿತ್ತು.

ನಾನು ತೆಗೆದ ಫೋಟೋಗಳಲ್ಲಿ ಇದು ನನ್ನ ನೆಚ್ಚಿನ ಫೋಟೊ ಆಗಿರುವುದಕ್ಕೆ ಕಾರಣ ಈ ಚಿತ್ರದಲ್ಲಿ ಆಕೆಯ ಮುಖದಲ್ಲಿನ ಪ್ರತಿಯೊಂದು ಸುಕ್ಕು ಕೂಡಾ ಒಂದೊಂದು ಕತೆಯನ್ನು ಹೇಳುತ್ತವೆ.

*****

ಪಳನಿ ಕುಮಾರ್ - ತಿರುವಳ್ಳೂರು, ತಮಿಳುನಾಡು

PHOTO • M. Palani Kumar

ಗೋವಿಂದಮ್ಮನವರ ಕುರಿತು ವರದಿ ಮಾಡುವುದು ದೀರ್ಘಕಾಲೀನಯೋಜನೆಯಾಗಿತ್ತು. ಲಾಕ್‌ಡೌನ್‌ಗೂ ಮೊದಲು ಮತ್ತು ನಂತರ ನಾನು ಅವರೊಡನೆ 2-3 ವರ್ಷಗಳ ಒಡನಾಡಿ ಮಾತನಾಡಿದ್ದೆ. ಅವರ ಕುಟುಂಬದ ಮೂರು ತಲೆಮಾರುಗಳ – ಗೋವಿಂದಮ್ಮ, ಅವರ ತಾಯಿ ಮತ್ತು ಗೋವಿಂದಮ್ಮನ ಮಗ ಮತ್ತು ಮೊಮ್ಮಗಳ – ಚಿತ್ರಗಳನ್ನು ನಾನು ಸೆರೆಹಿಡಿದಿದ್ದೇನೆ.

ಈ ಚಿತ್ರ ʼಗೋವಿಂದಮ್ಮ: ʼ' ನನ್ನ ಇಡೀ ಬದುಕನ್ನು ನೀರಿನಲ್ಲಿ ಕಳೆದಿದ್ದೇನೆ' ʼ ಎನ್ನುವ ಕತೆಯದ್ದು. ಇದು ಪ್ರಕಟಗೊಂಡ ಸಂದರ್ಭದಲ್ಲಿ, ಈ ಕತೆಯಲ್ಲಿ ಉತ್ತರ ಚೆನ್ನೈ ಪ್ರದೇಶದ ಪರಿಸರ ಸಮಸ್ಯೆಗಳ ಕುರಿತು ಹೇಳಿದ್ದ ಕಾರಣ ಜನರು ಅದನ್ನು ವ್ಯಾಪಕವಾಗಿ ಹಂಚಿಕೊಂಡರು.

ಈ ವರದಿಯ ಪರಿಣಾಮವಾಗಿ ತಿರುವಳ್ಳೂರ್‌ ಜಿಲ್ಲಾಧಿಕಾರಿಯು ಇಲ್ಲಿನ ಜನರಿಗೆ ಪಟ್ಟಾ (ಭೂಮಿಯ ಮಾಲಕತ್ವದ ದಾಖಲೆಗಳು) ನೀಡುವುದರೊಂದಿಗೆ, ಪಿಂಚಣಿ ಪಡೆಯುವುದಕ್ಕೂ ವ್ಯವಸ್ಥೆ ಮಾಡಿದರು. ಅಲ್ಲದೆ ಅವರಿಗಾಗಿ ಹೊಸ ಮನೆಗಳನ್ನೂ ನಿರ್ಮಿಸಿಕೊಡಲಾಯಿತು. ಈ ಕಾರಣಕ್ಕಾಗಿಯೇ ವರದಿಯಲ್ಲಿನ ಈ ಫೋಟೊ ನನಗೆ ಬಹಳ ಮುಖ್ಯವೆನ್ನಿಸುತ್ತದೆ. ಇದರಿಂದಾಗಿ ಸಾಕಷ್ಟು ಜನರ ಬದುಕಿನಲ್ಲಿ ಬದಲಾವಣೆ ಹುಟ್ಟಿತು.

ಈ ಚಿತ್ರ ನನ್ನ ಮಟ್ಟಿಗೆ ಬದುಕು ಬದಲಿಸಿದ ಚಿತ್ರವೆಂದೇ ಹೇಳಬಹುದು.

*****

ಪುರುಷೋತ್ತಮ್‌ ಠಾಕೂರ್‌ - ಒಡಿಶಾ, ರಾಯಗಡ

PHOTO • Purusottam Thakur

ನಾನು ಈ ಪುಟ್ಟ ಹುಡುಗಿಯನ್ನು ಭೇಟಿಯಾಗಿದ್ದು ʼ ನಿಯಮಗಿರಿಯಲ್ಲೊಂದು ಮದುವೆ ʼ ಎನ್ನುವ ಕತೆಯ ವರದಿಗೆಂದು ಹೋದಾಗ. ಅವಳೂ ಈ ಮದುವೆಯಲ್ಲಿ ಪಾಲ್ಗೊಂಡಿದ್ದಳು. ನಾನು ಈ ಫೋಟೊ ಕ್ಲಿಕ್ಕಿಸುವಾಗ ಅವಳು ಅವರ ಮನೆಯ ಹೊರಗಿನ ವರಾಂಡದಲ್ಲಿ ತನ್ನ ತಂದೆಯೊಂದಿಗೆ ನಿಂತಿದ್ದಳು.

ಈ ಪುಟ್ಟ ಹುಡುಗಿ ಆಗ ಗುಡಾಖು (ತಂಬಾಕು ಮತ್ತು ಕೊಳೆತ ಬೆಲ್ಲದಿಂದ ಮಾಡಿದ ಪೇಸ್ಟ್) ಬಳಸಿ ಹಲ್ಲುಜ್ಜುತ್ತಿದ್ದಳು . ಅವಳು ಫೋಟೊ ತೆಗೆಯುವಾಗಲು ಸಹಜವಾಗಿದ್ದಿದ್ದು ನನಗೆ ಸಂತಸ ಕೊಟ್ಟಿತ್ತು.

ಈ ಫೋಟೊ ನಮಗೆ ಆದಿವಾಸಿಗಳ ಫಿಲಾಸಫಿಯನ್ನು ನೆನಪಿಸುತ್ತದೆ. ಇವರು ತಮ್ಮ ಸ್ವಂತ ನೆಲ ಮತ್ತು ನಿಯಮಗಿರಿ ಬೆಟ್ಟವನ್ನು ಮಾತ್ರವಲ್ಲದೆ, ತಮ್ಮ ಸಾಮಾಜಿಕ-ಸಾಂಸ್ಕೃತಿಕ ಮತ್ತು ಆರ್ಥಿಕ ಜೀವನಕ್ಕಾಗಿ ತಾವು ಅವಲಂಬಿಸಿರುವ ಸುತ್ತಲಿನ ಸಂಪೂರ್ಣ ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಅವರು ನಡೆಸಿದ ಹೋರಾಟವನ್ನು ಸಹ ತೋರಿಸುತ್ತದೆ.

ಹೀಗೆ ಮಾಡುವುದು ಮಾನವ ನಾಗರಿಕತೆಗೆ ಎಷ್ಟು ಮುಖ್ಯವೆನ್ನುವ ಸಂದೇಶವನ್ನು ಇದು ಜಗತ್ತಿಗೆ ನೀಡುತ್ತದೆ.

*****

ರಾಹುಲ್‌ ಎಮ್‌ - ಆಂಧ್ರಪ್ರದೇಶ, ಪೂರ್ವ ಗೋದಾವರಿ

PHOTO • Rahul M.

ನಾನು ಈ ಫೋಟೊ ತೆಗೆದಿದ್ದು 2019ರಲ್ಲಿ ʼʼ ಓಹ್‌, ಆ ಮನೇನಾ? ಅದೀಗ ಸಮುದ್ರದಲ್ಲಿದೆ – ಅಗೋ ಅಲ್ಲಿ! ʼʼ ಎನ್ನುವ ಕತೆಯನ್ನು ವರದಿ ಮಾಡಲು ಹೋದಾಗ. ನನಗೆ ಒಂದು ಕಾಲದಲ್ಲಿ ಇಲ್ಲಿನ ಮೀನುಗಾರರ ಕಾಲೋನಿ ಹೇಗೆ ಕಾಣುತ್ತಿತ್ತು ಎನ್ನುವುದನ್ನು ತೋರಿಸಬೇಕಿತ್ತು.

ಹವಮಾನ ವೈಪರೀತ್ಯದ ಕುರಿತು ಕಥೆಗಳನ್ನು ಹುಡುಕುತ್ತಿದ್ದ ಸಮಯದಲ್ಲಿ ಏರುತ್ತಿರುವ ಸಮುದ್ರ ಮಟ್ಟವು ಹಳ್ಳಿಗಳ ಮೇಲೆ ಪರಿಣಾಮ ಬೀರುತ್ತಿರುವುದು ನನ್ನ ಗಮನಕ್ಕೆ ಬಂದಿತು. ಫೋಟೋದಲ್ಲಿ ಎಡಭಾಗದಲ್ಲಿರುವ ನೆಲಸಮಗೊಂಡ ಕಟ್ಟಡವು ನನ್ನ ಗಮನವನ್ನು ಸೆಳೆಯಿತು. ನಂತರ ಅದು ನನ್ನ ಫೋಟೋಗಳು ಮತ್ತು ಕತೆಯಾಗಿ ಆ ಕಟ್ಟಡ ಒದಗಿ ಬಂತು.

ಇದು ಒಂದು ಕಾಲದಲ್ಲಿ ಸದಾ ಮನುಷ್ಯರ ಕಲರವದಿಂದ ಕೂಡಿದ್ದ ಕಟ್ಟಡವಿದು. 50 ವರ್ಷಗಳ ಹಿಂದೆ ಈ ಕಟ್ಟಡದಲ್ಲಿ ನೆಲೆಗೊಂಡಿದ್ದ ಕುಟುಂಬವಿಂದು ಅದರ ಪಕ್ಕದ ಬೀದಿಯ ಉದ್ದಕ್ಕೂ ಹರಡಿಕೊಂಡಿದೆ. ಉಪ್ಪಡದಲ್ಲಿನ ಹಳೆಯ ಮನೆ ಇತ್ಯಾದಿ ಎಲ್ಲವನ್ನೂ ಸಮುದ್ರ ನುಂಗಿ ನೀರು ಕುಡಿದಿದೆ.

ಮುಂದಿನ ಸರದಿ ಈ ಪಾಳು ಕಟ್ಟಡದ್ದಿರಬಹುದೆಂದು ನನಗೆ ಅನ್ನಿಸಿತು. ಅಲ್ಲಿದ್ದ ಹಲವರೂ ಅದೇ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕಾರಣಕ್ಕಾಗಿಯೇ ನಾನು ಮತ್ತೆ ಮತ್ತೆ ಆ ಕಟ್ಟಡದ ಬಳಿಗೆ ಹೋಗುತ್ತಿದ್ದೆ ಹಾಗೂ ಅವುಗಳ ಫೋಟೊ ತೆಗೆಯುತ್ತಿದ್ದೆ. ಕೊನೆಗೆ 2020ರಲ್ಲಿ ನಾನು ಅಂದುಕೊಂಡಿದ್ದಕ್ಕಿಂತಲೂ ಬೇಗ ಸಮುದ್ರ ಈ ಕಟ್ಟಡವನ್ನು ತನ್ನ ಬಾಯಿಗೆ ಹಾಕಿಕೊಂಡಿತು.

*****

ರಿತಾಯನ್ ಮುಖರ್ಜಿ - ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ

PHOTO • Ritayan Mukherjee

ʼ ಸುಂದರ ಬನ್ಸ್‌ನಲ್ಲೊಂದು ಹುಲಿಯ ನೆರಳಿನಡಿಯ ಮದುವೆ ʼ ಎನ್ನುವ ಕತೆಯ ವರದಿ ಮಾಡುವಾಗ ಆ ಮದುವೆಗೆ ಬಂದಿದ್ದ ಕಲಾವಿದ ನಿತ್ಯಾನಂದ ಸರ್ಕಾರ್‌ ಅವರ ನಟನಾ ಕೌಶಲ ಮದುವೆಗೆ ಬಂದಿದ್ದ ಅತಿಥಿಗಳ ಮನಸ್ಸನ್ನು ಸಂತೋಷಗೊಳಿಸಿತ್ತು. ನಾನು ನಿಮಗೆ ಇಂದು ಅದೇ ಚಿತ್ರವನ್ನು ತೋರಿಸಲು ಬಯಸುತ್ತೇನೆ.

ಇಲ್ಲಿನ ರಜತ್ ಜುಬಿಲಿ ಗ್ರಾಮದ, ಗಂಗಾ ಮುಖಜಭೂಮಿಯಲ್ಲಿ 2019ರಲ್ಲಿ ಹುಲಿ ದಾಳಿಯಲ್ಲಿ ಸಾವನ್ನಪ್ಪಿದ ವಧುವಿನ ತಂದೆ ಅರ್ಜುನ್ ಮೊಂಡಲ್ ಅವರ ನೆನಪುಗಳ ನಡುವೆ ಕುಟುಂಬವು ಮದುವೆಯನ್ನು ಆಚರಿಸುತ್ತಿತ್ತು.

ರೈತ ಮತ್ತು ಕಲಾವಿದರಾಗಿರುವ ನಿತ್ಯಾನಂದ ಸರ್ಕಾರ್‌ ಜುಮೂರ್‌ ಹಾಡುಗಳು, ಮಾ ಬೊನ್‌ಬೀಬಿ ನಾಟಕಗಳು ಮತ್ತು ಪಾಲಗಾನ್‌ನಂತಹ ನಾಟಕ ಪ್ರಕಾರಗಳನ್ನು ಪ್ರದರ್ಶಿಸುತ್ತಾರೆ. 53 ವರ್ಷದ ಅವರು ಕಳೆದ 25 ವರ್ಷಗಳಿಂದ ಈ ಕಲಾ ಪ್ರಕಾರದಲ್ಲಿ ತೊಡಗಿಕೊಂಡಿದ್ದಾರೆ. ಅವರು ಬೇರೆ ಬೇರೆ ಪ್ರಕಾರಗಳ ಪ್ರದರ್ಶನಕ್ಕಾಗಿ ಒಂದಕ್ಕಿಂತಲೂ ಹೆಚ್ಚಿನ ತಂಡದೊಡನೆ ಕೆಲಸ ಮಾಡುತ್ತಾರೆ.


*****

ರಿಯಾ ಬೆಹ್ಲ್ - ಮುಂಬೈ, ಮಹಾರಾಷ್ಟ್ರ

PHOTO • Riya Behl

ಜನವರಿ 24, 2021ರಂದು ಸಂಯುಕ್ತ ಶೇತ್ಕರಿ ಕಾಮಗಾರಿ ಮೋರ್ಚಾ ಆಯೋಜಿಸಿದ್ದ ಎರಡು ದಿನಗಳ ಧರಣಿಯಲ್ಲಿ ಭಾಗವಹಿಸುವ ಸಲುವಾಗಿ ಮಹಾರಾಷ್ಟ್ರದೆಲ್ಲೆಡೆಯ ಸಾವಿರಾರು ರೈತರು ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಒಟ್ಟುಗೂಡಿದ್ದರು. ಅದರ ಕುರಿತು ನಾನೊಂದು ಕತೆ ಬರೆದಿದ್ದೇನೆ: ಮುಂಬೈ ರೈತ ಧರಣಿ: ʼಕರಾಳ ಕಾನೂನುಗಳನ್ನು ಹಿಂಪಡೆಯಿರಿ ʼ

ನಾನು ಆ ದಿನ ಅಲ್ಲಿಗೆ ತಲುಪುವ ಹೊತ್ತಿಗೆ, ರೈತರು ತಂಡ ತಂಡವಾಗಿ ಬರಲಾರಂಭಿಸಿದ್ದರು. ಇದೇ ಘಳಿಗೆಗಾಗಿ ನಾವು ಫೋಟೊಗ್ರಾಫರ್‌ಗಳು ಒಳ್ಳೆಯ ಫೋಟೊ ಸಿಗುವ ಭರವಸೆಯಲ್ಲಿ ಕಾಯುತ್ತಿದ್ದೆವು. ಫೋಟೋಗ್ರಾಫರ್‌ಗಳು ತಮ್ಮ ಬಳಿಯಿದ್ದ ಕೆಮೆರಾ ಲೆನ್ಸ್‌ ಅವಲಂಬಿಸಿ ರೋಡ್‌ ಡಿವೈಡರ್‌, ವಾಹನಗಳು ಮತ್ತು ಸಾಧ್ಯವಿರುವ ಎಲ್ಲೆಡೆ ನಿಂತಿದ್ದರು. ಎಲ್ಲರೂ ರೈತರ ದೊಡ್ಡ ಗುಂಪು ಮೈದಾನ ಪ್ರವೇಶಿಸುವುದನ್ನು ನೋಡಲು ಕಣ್ಣು ಮಿಟುಕಿಸದೆ ಕಾಯುತ್ತಿದ್ದರು.

ನನಗೆ ಅದೇ ಮೊದಲ ಬಾರಿಗೆ ಪರಿಯಿಂದ ವರದಿಯೊಂದನ್ನು ಅಸೈನ್‌ ಮಾಡಲಾಗಿತ್ತು. ಪ್ರಕಟಗೊಳ್ಳಲಿರುವ ಕತೆಯಲ್ಲಿ ಆಳವಡಿಸಲಿರುವ ಚಿತ್ರವನ್ನು ತೆಗೆದುಕೊಳ್ಳಲು ನನಗೆ ಐದೇ ನಿಮಿಷಗಳಷ್ಟು ಸಮಯವಿತ್ತು. ಇದಕ್ಕಾಗಿ ನಾನು ಸರಿಯಾದ ಸ್ಥಳದಲ್ಲಿ ನಿಲ್ಲುವುದು ಬಹಳ ಮುಖ್ಯವಾಗಿತ್ತು. ಆದರೆ ಅದನ್ನು ಈ ನಗರ ಸುಲಭವಾಗಿಸಿತ್ತು. ನಮ್ಮ ಎದುರಿಗೇ ಐತಿಹಾಸಿಕ ಛತ್ರಪತಿ ಶಿವಾಜಿ ಟರ್ಮಿನಸ್‌ ಹಳದಿ, ನೀಲಿ ಮತ್ತು ಹಸಿರು ಬಣ್ಣಗಳನ್ನು ಹೊದ್ದು ಬೆಳಗುತ್ತಿತ್ತು. ಇದು ನನ್ನ ಫೋಟೊಗೆ ಸರಿಯಾದ ಹಿನ್ನೆಲೆಯಾಗಿ ಒದಗಲಿದೆ ಎಂದು ನನಗೆ ಅನ್ನಿಸಿತ್ತು.

ಇದ್ದಕ್ಕಿದ್ದಂತೆ ಬೀದಿ ರೈತರಿಂದ ತುಂಬಿಕೊಂಡಿತು. ಅವರಲ್ಲಿ ಅನೇಕರು ಕೆಂಪು ಎಐಕೆಎಸ್ಎಸ್ ಟೋಪಿಗಳನ್ನು ಧರಿಸಿದ್ದರು. ನನ್ನ ಮುಂದೆ ಹಾದು ಹೋಗುತ್ತಿದ್ದವರಲ್ಲಿ ಇಬ್ಬರು ಹೆಣ್ಣುಮಕ್ಕಳು ನನ್ನ ಗಮನ ಸೆಳೆದರು. ಅವರು ಬಹುಶಃ ಇದೇ ಮೊದಲ ಬಾರಿ ನಗರಕ್ಕೆ ಬಂದಿದ್ದಾರೆ. ಅವರು ಎಲ್ಲವನ್ನೂ ಕಣ್ತುಂಬಿಕೊಳ್ಳುವ ಧಾವಂತದಲ್ಲಿ ಒಂದು ಕ್ಷಣ ಅಲ್ಲಿ ನಿಂತಿದ್ದರು. ಅಲ್ಲೊಂದು ಶಾಂತ ವಿರಾಮವಿತ್ತು. ಇದೆಲ್ಲವನ್ನೂ ಸೆರೆ ಹಿಡಿದಿರುವ ಕಾರಣಕ್ಕೆ ಇದು ನನ್ನ ನೆಚ್ಚಿನ ಫೋಟೊ. ಅವರು ಭಾರವಾದ ತಮ್ಮ ವಸ್ತುಗಳು ಮತ್ತು ಆಹಾರದ ಜೊತೆ ಪ್ರಯಾಣದಲ್ಲೇ ಒಂದು ದಿನವನ್ನು ಕಳೆದಿದ್ದರು. ಪ್ರಯಾಣದಿಂದ ದಣಿದಿದ್ದ ಜನರು ಒಮ್ಮೆ ಹೋಗಿ ದಣಿವಾರಿಸಿಕೊಳ್ಳುವ ಗಡಿಬಿಡಿಯಲ್ಲಿದ್ದ ಜನರ ಓಟವನ್ನು ಈ ಇಬ್ಬರು ಯುವತಿಯರು ನಿಧಾನಗೊಳಿಸಿದ್ದರು. ಅವರು ತಮ್ಮದೇ ಆದ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು ಮತ್ತು ನಾನು ಆ ಕ್ಷಣಕ್ಕೆ ಸಾಕ್ಷಿಯಾಗಿದ್ದೆ.

*****

ಪಿ.ಸಾಯಿನಾಥ್ - ಒಡಿಶಾದ ರಾಯಗಡದಲ್ಲಿ

PHOTO • P. Sainath

ದಿ ಇಂಡಿಯಾ ಫೋಟೋ

ಈ ಭೂಮಾಲಿಕ ಹೆಮ್ಮೆಯಿಂದ ಫೋಟೋಗಾಗಿ ನಿಂತಿದ್ದ. ಅವನು ನೇರವಾಗಿ, ಎತ್ತರದಲ್ಲಿ ನಿಂತಿದ್ದರೆ, ಅವನ ಹೊಲದಲ್ಲಿ ಒಂಬತ್ತು ಮಹಿಳೆಯರು ಸಾಲಾಗಿ ಬಾಗಿಕೊಂಡು ನಾಟಿ ಮಾಡುತ್ತಿದ್ದರು. ಅವನು ತನ್ನ ಹೊಲದಲ್ಲಿ ದುಡಿಯುವ ಈ ಮಹಿಳೆಯರಿಗೆ ಒಂದು ದಿನದ ಕೆಲಸಕ್ಕೆ ನ್ಯಾಯವಾಗಿ ನೀಡಬೇಕಾದ ಮೊತ್ತಕ್ಕಿಂತಲೂ ಶೇಕಡಾ 60ರಷ್ಟು ಕಡಿಮೆ ಮೊತ್ತವನ್ನು ಕೂಲಿಯಾಗಿ ನೀಡುತ್ತಿದ್ದ.

2001 ರ ಜನಗಣತಿ ಆಗಷ್ಟೇ ಹೊರಬಂದಿತ್ತು, ಮತ್ತು ಭಾರತದ ಜನಸಂಖ್ಯೆಯು ಮೊದಲ ಬಾರಿಗೆ ಒಂಬತ್ತು ಅಂಕಿಯ ಗಡಿಯನ್ನು ದಾಟಿತ್ತು. ಮತ್ತು ನಾವು ಭಾರತದ ಬಹು ವಾಸ್ತವಗಳನ್ನು ಒಂದೇ ನೋಟದಲ್ಲಿ ನೋಡುತ್ತಿದ್ದೆವು.

ಪುರುಷ ಭೂಮಾಲಿಕ ಹೆಮ್ಮೆಯಿಂದ ಸೆಟೆದು ಎತ್ತರದಲ್ಲಿ ನಿಂತಿದ್ದ. ಮಹಿಳೆಯರು ಪೂರ್ತಿಯಾಗಿ ಬಾಗಿದ್ದರು. ಹತ್ತು ಶೇಕಡಾ ಜನರು ಹೆಮ್ಮೆಯಿಂದ ಸೆಟೆದು ನಿಂತಿದ್ದಾರೆ ಮತ್ತು 90 ಶೇಕಡಾ ಜನರು ನೆಲದೆಡೆ ಬಾಗಿ ದೈನ್ಯರಾಗಿ ನಿಂತಿದ್ದಾರೆ.

ನನಗೆ ಲೆನ್ಸ್‌ ಮೂಲಕ ಆ ವ್ಯಕ್ತಿ ಒಂದರಂತೆ ಕಂಡರೆ, ಉಳಿದವರು ಸೊನ್ನೆಯಂತೆ ಕಾಣುತ್ತಿದ್ದರು. ಎಂದರೆ ಒಂದು ಬಿಲಿಯನ್‌ ಭಾರತದ ಜನರು.

*****

ಸಂಕೇತ್ ಜೈನ್ – ಮಹಾರಾಷ್ಟ್ರ, ಕೊಲ್ಹಾಪುರ

PHOTO • Sanket Jain

ಈ ಚಿತ್ರವು ನನ್ನ ʼ ಕೊಲ್ಲಾಪುರ: ಕುಸ್ತಿಪಟುಗಳ ಆಹಾರ ಕ್ರಮಗಳು, ಭಾರವಾದ ಸಮಸ್ಯೆಗಳು ʼ ಎನ್ನುವ ಕತೆಯದ್ದು.

ಕುಸ್ತಿಪಟುಗಳು ಅದು ಪಂದ್ಯವಿರಲಿ, ಅಥವಾ ತರಬೇತಿಯಿರಲಿ, ಅವರು ಬಹಳ ಎಚ್ಚರದಿಂದಿರುತ್ತಾರೆ. ಅವರು ತಮ್ಮ ಎದುರಾಳಿ ಚಲನೆಗಳನ್ನು ಗಮನಿಸುತ್ತಿರುತ್ತಾರೆ. ಒಂದು ಕ್ಷಣದಲ್ಲೇ ಅವರು ಹೇಗೆ ಎದುರಾಳಿಯ ಮೇಲೆ ದಾಳಿ ಮಾಡಬೇಕು ಅಥವಾ ಪಟ್ಟಿನಿಂದ ತಪ್ಪಿಸಿಕೊಳ್ಳಬೇಕು ಎನ್ನುವುದನ್ನು ಲೆಕ್ಕ ಹಾಕುತ್ತಿರುತ್ತಾರೆ.

ಅದೇನೇ ಇದ್ದರೂ, ಈ ಚಿತ್ರದಲ್ಲಿ ಕುಸ್ತಿಪಟು ಸಚಿನ್‌ ಸಾಳುಂಕೆ ಸೋತವರಂತೆ ಹಾಗೂ ದುಃಖದಲ್ಲಿರುವಂತೆ ಕಾಣುತ್ತಾರೆ. ಪದೇಪದೇ ಎದುರಾದ ಪ್ರವಾಹ ಹಾಗೂ ಕೋವಿಡ್‌ ಗ್ರಾಮೀಣ ಪ್ರದೇಶದ ಕುಸ್ತಿಪಟುಗಳ ಬದುಕನ್ನು ನಾಶ ಮಾಡಿತ್ತು. ಅವರು ಸಣ್ಣಪುಟ್ಟ ಕೆಲಸಗಳಲ್ಲಿ ಅಥವಾ ಕೃಷಿ ಕಾರ್ಮಿಕರಾಗಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾದರು. ಇದರ ಪರಿಣಾಮ ಅವರ ಮೇಲೆ ಬಹಳವಾಗಿ ಬೀರಿತ್ತು. ಏನೇ ಮಾಡಿದರೂ ಸಚಿನ್‌ ಅವರಿಗೆ ಆಟದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ.

ಹೆಚ್ಚುತ್ತಿರುವ ಹವಾಮಾನ ವಿಪತ್ತುಗಳು ಕುಸ್ತಿಪಟುಗಳ ಬದುಕಿನಲ್ಲಿ ಬೀರಿದ ಪರಿಣಾಮವನ್ನು ತೋರಿಸುವ ಈ ಚಿತ್ರವನ್ನು ಹೀಗೆ ಸೆರೆ ಹಿಡಿಯಲಾಯಿತು.

*****

ಎಸ್. ಸೆಂಥಲಿರ್ - ಹಾವೇರಿ, ಕರ್ನಾಟಕ

PHOTO • S. Senthalir

ನಾನು ಮೊದಲ ಬಾರಿಗೆ ಹಾವೇರಿ ಜಿಲ್ಲೆಯ ಕೋಣನತಲೆ ಗ್ರಾಮದ ರತ್ನವ್ವ ಅವರ ಮನೆಗೆ ಭೇಟಿ ನೀಡಿದ್ದು ಕೊಯ್ಲಿನ ಸಮಯದಲ್ಲಿ. ಅಂದು ರತ್ನವ್ವ ಟೊಮೆಟೊ ಕೊಯ್ಲು ಮಾಡುತ್ತಿದ್ದರು. ಹಾಗೆ ಕೊಯ್ಲು ಮಾಡಿದ ಟೊಮ್ಯಾಟೋವನ್ನು ಕಿವುಚಿ ಅದರ ಬೀಜಗಳನ್ನು ಬೇರ್ಪಡಿಸಲಾಗುತ್ತಿತ್ತು. ನಂತರ ಈ ಬೀಜಗಳನ್ನು ಒಣಗಿಸಿ ಒಣಗಿಸಿ ಜಿಲ್ಲಾ ಕೇಂದ್ರದಲ್ಲಿರುವ ಬೃಹತ್ ಬೀಜ ಉತ್ಪಾದನಾ ಕಂಪನಿಗಳಿಗೆ ಕಳುಹಿಸಲಾಗುತ್ತದೆ.

ಕ್ರಾಸಿಂಗ್‌ ಎಂದು ಸ್ಥಳೀಯವಾಗಿ ಕರೆಯಲ್ಪಡುವ ಕೈಯಿಂದ ಮಾಡುವ ಪರಾಗಸ್ಪರ್ಶದ ಪ್ರಕ್ರಿಯೆ ನೋಡುವುದಕ್ಕೆ ನಾನು ಇನ್ನೂ ಮೂರು ತಿಂಗಳು ಕಾಯಬೇಕಿತ್ತು. ಈ ಹೂವುಗಳಿಗೆ ಪರಾಗಸ್ಪರ್ಶ ಮಾಡಿಸುವ ಪ್ರಕ್ರಿಯೆಯನ್ನು ಮಹಿಳೆಯರು ಮುಂಜಾನೆಯೇ ಆರಂಭಿಸುತ್ತಿದ್ದರು.

ನಾನು ಅವರ ಹಿಂದೆ ಹೊಲದ ದಾರಿಗುಂಟ ಹಿಂಬಾಲಿಸಿ ನಡೆಯುತ್ತಿದ್ದೆ. ಅವರ ಕೆಲಸದ ಕ್ಷಣಗಳನ್ನು ಸೆರೆಹಿಡಿಯುವ ಸಲುವಾಗಿ ಸಾಲು ಗಿಡಗಳ ನಡುವೆ ಗಂಟೆಗಟ್ಟಲೆ ನಡೆಯುತ್ತಿದ್ದೆ. ಇದೆಲ್ಲವನ್ನೂ ʼ ಹಾವೇರಿ: ಬದುಕಿನ ಸಂಕಷ್ಟದ ಹೊಲದಲ್ಲಿ ಭರವಸೆಯ ಹೂವರಳಿಸುವ ಯತ್ನದಲ್ಲಿರುವ ರತ್ನವ್ವ ʼ ಎನ್ನುವ ಕತೆಯಲ್ಲಿ ದಾಖಲಿಸಿದ್ದೇನೆ.

ಈ ಕತೆಯನ್ನು ವರದಿ ಮಾಡುವ ಮೊದಲು ರತ್ನವ್ವನ ವಿಶ್ವಾಸ ಗಳಿಸುವ ಸಲುವಾಗಿ ಸುಮಾರು ಆರು ತಿಂಗಳ ಕಾಲ ನಾನು ಅವರ ಮನೆಗೆ ಹೋಗಿ ಬರುತ್ತಿದ್ದೆ.

ಇದು ನನ್ನ ಮೆಚ್ಚಿನ ಚಿತ್ರಗಳಲ್ಲಿ ಒಂದು. ಯಾಕೆಂದರೆ ಇದು ರತ್ನವ್ವ ಕೆಲಸದಲ್ಲಿ ತೊಡಗಿಕೊಂಡಿರುವ ಭಂಗಿಯನ್ನು ತೋರಿಸುತ್ತದೆ. ಅವರು ನಿಂತಿರುವ ಭಂಗಿಯೇ ಈ ಕೆಲಸದಲ್ಲಿರು ಶ್ರಮದ ಕುರಿತು ವಿವರಿಸುತ್ತದೆ. ಹೈಬ್ರೀಡ್‌ ಬೀಜ ತಯಾರಿಸುವಲ್ಲಿ ಮಹಿಳೆಯರು ಪಡುವ ಕಷ್ಟದ ಸಂಕೇತದಂತಿದೆ ಈ ಚಿತ್ರ. ಬೀಜೋತ್ಪಾದನೆಯ ಬಹುಮುಖ್ಯ ಭಾಗವಾದ ಕ್ರಾಸಿಂಗಿನಲ್ಲಿ ಅವರು ದಿನಕ್ಕೆ ಮೂರರಿಂದ ನಾಲ್ಕು ಗಂಟೆಗಳ ಕೆಲಸ ಮಾಡುತ್ತಾರೆ.

*****

ಶ್ರೀರಂಗ್ ಸ್ವರ್ಗ್ – ಮಹಾರಾಷ್ಟ್ರ, ಮುಂಬೈ

PHOTO • Shrirang Swarge

ಈ ಚಿತ್ರವನ್ನು ಲಾಂಗ್‌ ಮಾರ್ಚ್:‌ ಉರಿಯುವ ಪಾದಗಳು ಮತ್ತು ದಣಿಯದ ಚೈತನ್ಯ ಎನ್ನುವ ಕತೆಯಿಂದ ಆರಿಸಿಕೊಳ್ಳಲಾಗಿದೆ. ರೈತ ಮೆರವಣಿಗೆಯಲ್ಲಿ ತೆಗೆದ ಚಿತ್ರಗಳಲ್ಲಿ ಇದು ನನ್ನ ಮೆಚ್ಚಿನದು. ಯಾಕೆಂದರೆ ಇದು ಮೆರವಣಿಗೆಯಲ್ಲಿದ್ದ ಉತ್ಸಾಹ ಮತ್ತು ಕತೆಗಳನ್ನು ಹೇಳುತ್ತದೆ.

ಸಭೆಯಲ್ಲಿ ನಾಯಕರು ರೈತರನ್ನುದ್ದೇಶಿಸಿ ಮಾತನಾಡುತ್ತಿರುವಾಗ, ಈ ರೈತ ಟ್ರಕ್ಕಿನ ಮೇಲೆ ಕುಳಿತು ದ್ವಜ ಬೀಸುತ್ತಿರುವುದನ್ನು ನಾನು ಗಮನಿಸಿದೆ. ನಾನು ತಕ್ಷಣವೇ ಟ್ರಕ್ಕನ್ನು ದಾಟಿ ಮುಖ್ಯರಸ್ತೆಗೆ ಹೋಗಿ ರೈತರ ಸಾಗರವನ್ನು ನನ್ನ ಫ್ರೇಮಿನೊಳಗೆ ಹೊಂದಿಸಿಕೊಂಡು ಈ ಚಿತ್ರವನ್ನು ಚಕಚಕನೆ ಕ್ಲಿಕ್ಕಿಸಿದೆ. ಯಾಕೆಂದರೆ ಹೆಚ್ಚು ಹೊತ್ತು ಕಾದರೆ ಇಂತಹ ಚಿತ್ರ ಸಿಗುವುದಿಲ್ಲವೆಂದು ನನಗೆ ತಿಳಿದಿತ್ತು.

ಈ ಚಿತ್ರವು ಮೆರವಣಿಗೆಯ ಹುಮ್ಮಸ್ಸನ್ನು ಚಿತ್ರಿಸುತ್ತದೆ. ಇದು ಪಾರ್ಥ್‌ ಅವರು ಬರೆದ ಕತೆಯನ್ನು ಚೆನ್ನಾಗಿ ಪ್ರತಿನಿಧಿಸುತ್ತದೆ. ಹಾಗೂ ರೈತರ ಅವಿಚ್ಛಿನ್ನ ಮನೋಭಾವದ ಒಂದು ನೋಟವನ್ನು ನಮ್ಮೆದುರಿಗಿಡುತ್ತದೆ. ಮುಂದಿನ ದಿನಗಳಲ್ಲಿ ಈ ಫೋಟೋ ಮೆರವಣಿಗೆಯ ಜನಪ್ರಿಯ ದೃಶ್ಯವಾಯಿತು, ಇದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಯಿತು ಮತ್ತು ಪ್ರಕಟಿಸಲಾಯಿತು.

*****

ಶುಭ್ರಾ ದೀಕ್ಷಿತ್ - ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆ

PHOTO • Shubhra Dixit

ತೈಸುರು ಮತ್ತು ಪುರ್ಗಿಯಲ್ಲಿ ಮಾತನಾಡುವ ಭಾಷೆ ಇಲ್ಲಿನ ಶಾಲೆಗಳ ಬೋಧನಾ ಮಾಧ್ಯಮವಾಗಿಲ್ಲ. ಇಲ್ಲಿನ ಶಾಲೆಗಳಲ್ಲಿ ಉರ್ದು ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಕಲಿಸಲಾಗುತ್ತದೆ. ಈ ಎರಡೂ ಭಾ಼ಷೆಗಳು ಇಲ್ಲಿನ ಮಕ್ಕಳಿಗೆ ದೂರ ಮತ್ತು ಕಲಿಯಲು ಕಷ್ಟ. ಅದರಲ್ಲೂ ಇಂಗ್ಲಿಷ್‌ ಬಹಳ ಕಷ್ಟ. ಭಾಷೆ ಮಾತ್ರವಲ್ಲದೆ ದೈನಂದಿನ ವಿಷಯಗಳ ಕುರಿತಾದ ಉದಾಹರಣೆಗಳು ಕೂಡಾ ಇಲ್ಲಿನ ಜನರ ಬದುಕಿನಿಂದ ಬಹಳ ದೂರದಲ್ಲಿವೆ.

ನನ್ನ ಕತೆ ʼ ಸುರು ಕಣಿವೆಯ ಮೊಹರಮ್‌ ಆಚರಣೆ ʼಯಲ್ಲಿ ಬರುವ ಹಾಜಿರಾ ಮತ್ತು ಬತುಲ್ ತಮ್ಮ ಪಾಠ ಪುಸ್ತಕಗಳ ಕುರಿತು ಅಷ್ಟಾಗಿ ಆಸಕ್ತಿ ಹೊಂದಿಲ್ಲ. ಸೌರವ್ಯೂಹದ ಕುರಿತು ಕಲಿಯುತ್ತಿರುವ ಅವರು, ತಮ್ಮದೇ ರೀತಿಯಲ್ಲಿ ತಮ್ಮ ಪುಸ್ತಕದಲ್ಲಿ ಕಳೆದುಹೋಗಿದ್ದಾರೆ. ಗ್ರಹಗಳು, ಚಂದ್ರ ಮತ್ತು ಸೂರ್ಯನ ಕುರಿತು ತಿಳಿಯಲು ಅವರಿಗೆ ಸಾಕಷ್ಟು ಆಸಕ್ತಿಯಿದೆ.

ಈ ಚಿತ್ರವನ್ನು ಮೊಹರಂ ತಿಂಗಳಲ್ಲಿ ತೆಗೆಯಲಾಯಿತು. ಹೀಗಾಗಿ ಅವರು ಕಪ್ಪು ಬಟ್ಟೆ ಧರಿಸಿದ್ದಾರೆ. ಅವರು ತಮ್ಮ ಓದು ಮುಗಿಸಿ ಇಮಾಂಬರಕ್ಕೆ ಹೊರಡುವವರಿದ್ದರು.

*****

ಸ್ಮಿತಾ ತುಮುಲೂರು - ತಿರುವಳ್ಳೂರು, ತಮಿಳುನಾಡು

PHOTO • Smitha Tumuluru

ಕೃಷ್ಣನ್‌ ರಸಭರಿತ ಹಣ್ಣೊಂದನ್ನು ತಿಂದು ವಿಶಾಲವಾಗಿ ಮುಗುಳ್ನಕ್ಕರು. ಅವರ ಬಾಯಿ ಹೊಳೆಯುವ ಕೆಂಪು – ಗುಲಾಬಿ ಬಣ್ಣಕ್ಕೆ ತಿರುಗಿತ್ತು. ಅವರನ್ನು ನೋಡಿ ಅಲ್ಲಿದ್ದ ಉಳಿದ ಮಕ್ಕಳೂ ಹಣ್ಣು ಹುಡುಕಾಡತೊಡಗಿದರು. ಅವರೆಲ್ಲ ಸೇರಿ ಒಂದು ಮುಷ್ಟಿಯಷ್ಟು ನಾದೆಲ್ಲಿ ಪಳಮ್‌ ಎನ್ನುವ ಹಣ್ಣನ್ನು ಕೊಯ್ದರು. ಇದು ಮರುಕಟ್ಟೆಯಲ್ಲಿ ಸಿಗುವ ಹಣ್ಣಲ್ಲ. ಅವರು ಅದನ್ನು ಅದರ ಗುಣಕ್ಕೆ ತಕ್ಕಂತೆ “ಲಿಪ್‌ಸ್ಟಿಕ್‌ ಹಣ್ಣು” ಎಂದು ಕರೆಯುತ್ತಾರೆ. ನಾವೆಲ್ಲರೂ ಹಣ್ಣನ್ನು ಕಚ್ಚಿ ಗುಲಾಬಿ ತುಟಿಗಳೊಡನೆ ಸೆಲ್ಫಿ ಕ್ಲಿಕ್ಕಿಸಿಕೊಂಡೆವು.

ಇದು ʼ ಬಂಗಾಳಮೇಡುವಿನಲ್ಲಿ ಅವಿತ ಖಜಾನೆಯ ಹುಡುಕಾಟ ʼ ಎನ್ನುವ ಕತೆಯಲ್ಲಿ ಬಳಸಿಕೊಂಡಿರುವ ಚಿತ್ರ. ಇದು ಇರುಳ ಪುರುಷರು ಮತ್ತು ಮಕ್ಕಳು ತಮ್ಮ ಕುಗ್ರಾಮದ ಬಳಿಯ ಕುರುಚಲು ಕಾಡಿನಲ್ಲಿ ಹಣ್ಣು ಹುಡುಕಲು ಹೋದಾಗ ಸೃಷ್ಟಿಯಾದ ಒಂದು ಲಘು ಕ್ಷಣವನ್ನು ಚಿತ್ರಿಸುತ್ತದೆ.

ನನ್ನ ಮಟ್ಟಿಗೆ ಹಿನ್ನೆಲೆಯಲ್ಲಿ ಕಳ್ಳಿ ಮತ್ತು ಎತ್ತರದ ಹುಲ್ಲಿನ ನಡುವೆ ಹಣ್ಣು ಹುಡುಕುವ ಬಾಲಕಿಯಿಲ್ಲದಿದ್ದರೆ ಈ ಚಿತ್ರ ಅಪೂರ್ಣವೆನ್ನಿಸುತ್ತದೆ. ಇರುಳ ಸಮುದಾಯದ ಮಕ್ಕಳು ತಮ್ಮ ಸುತ್ತಲಿನ ಕಾಡಿನ ಕುರಿತು ಬಾಲ್ಯದಿಂದಲೇ ಅರಿವು ಬೆಳೆಸಿಕೊಂಡಿರುತ್ತಾರೆ. ಈ ಕತೆಯೂ ಅದರ ಕುರಿತಾಗಿಯೇ ಮಾತನಾಡುತ್ತದೆ.

ಈ "ಲಿಪ್ ಸ್ಟಿಕ್ ಹಣ್ಣು" ತಿಂದ ಪ್ರಸಂಗವು ಇರುಳರೊಂದಿಗಿನ ನನ್ನ ಕ್ಷೇತ್ರ ಕಾರ್ಯ ಅನುಭವದ ಸ್ಮರಣೀಯ ಭಾಗವಾಗಿ ಉಳಿಯುತ್ತದೆ

*****

ಶ್ವೇತಾ ಡಾಗಾ – ರಾಜಸ್ಥಾನ, ಉದಯಪುರ

PHOTO • Sweta Daga

ನಾನು ಆಗಿನ್ನೂ ಒಳ್ಳೆಯ ಚಿತ್ರಗಳನ್ನು ಸೆರೆ ಹಿಡಿಯುವುದು ಹೇಗೆಂದು ಕಲಿಯುತ್ತಿದ್ದೆ. ಹೀಗಾಗಿ ನನಗೆ ನಿಯೋಜಿಸಿಸಲಾಗಿದ್ದʼ ಬೀಜ ರಕ್ಷಕರು ʼ ಎನ್ನುವ ಕತೆಗೆ ಹಲವು ಫೋಟೋಗಳನ್ನು ತೆಗೆದುಕೊಂಡಿದ್ದೆ.

ಈಗ ಹಿಂತಿರುಗಿ ನೋಡಿದಾಗ ನಾನು ಅನೇಕ ವಿಷಯಗಳನ್ನು ಭಿನ್ನವಾಗಿ ಮಾಡಿದ್ದೇನೆ. ಆದರೆ ತಪ್ಪುಗಳಿಲ್ಲದೆ ಈ ಪ್ರಯಾಣ ಸಾಧ್ಯವಿಲ್ಲ ಬದುಕು ಇರುವುದೇ ಹಾಗೆ.

ಚಮ್ನಿ ಮೀರಾ ನಗುತ್ತಿರುವ ಈ ಆರಂಭಿಕ ಫೋಟೊ ಬಹಳಷ್ಟು ಗಮನಸೆಳೆಯುತ್ತದೆ. ಇಂತಹ ನಗುವನ್ನು ಸೆರೆಹಿಡಿಯುವ ಭಾಗ್ಯ ನನಗೆ ದೊರಕಿದ್ದು ನನ್ನ ಅದೃಷ್ಟವೆನ್ನವುದು ನನ್ನ ನಂಬಿಕೆ!

*****

ಉಮೇಶ್‌ ಸೋಲಂಕಿ – ಗುಜರಾತ್‌, ದಹೇಜ್‌

PHOTO • Umesh Solanki

ಅದು 2023ರ ಎಪ್ರಿಲ್‌ ತಿಂಗಳ ಆರಂಭಿಕ ದಿನಗಳು. ನಾನು ಗುಜರಾತ್ ನ ದಾಹೋಡ್ ಜಿಲ್ಲೆಯ ಖರಸನಾ ಗ್ರಾಮದಲ್ಲಿದ್ದೆ. ಐದು ಆದಿವಾಸಿ ಯುವಕರಲ್ಲಿ ಮೂವರು ಒಂದು ವಾರದ ಹಿಂದೆ ಈ ಜಿಲ್ಲೆಯಲ್ಲಿ ವಿಷಕಾರಿ ಒಳಚರಂಡಿ ಕೋಣೆಯನ್ನು ಸ್ವಚ್ಛಗೊಳಿಸುವಾಗ ಸಾವನ್ನಪ್ಪಿದ್ದರು. ʼ ಗುಜರಾತ್: ವಿಷಾನಿಲ ಸೇವಿಸಿ ಸಾವು ʼ ಎನ್ನುವ ವರದಿಗಾಗಿ ನಾನು ಈ ಘಟನೆಯಲ್ಲಿ ಬದುಕುಳಿದವರ ಮತ್ತು ಅವರ ಕುಟುಂಬದವರನ್ನು ಭೇಟಿಯಾಗಬೇಕಿತ್ತು.

ಘಟನೆಯಲ್ಲಿ ಬದುಕುಳಿದ 20 ವರ್ಷದ 'ಅದೃಷ್ಟಶಾಲಿ' ಭವೇಶ್ ಅವರ ಕುಟುಂಬದೊಂದಿಗೆ ನಾನು ಉಳಿಯಬೇಕಾಗಿತ್ತು, ಆದರೆ ಭವೇಶ್ ಅವರ ಅಣ್ಣ ಪರೇಶ್ (24) ಸೇರಿದಂತೆ ಮೂವರು ಪುರುಷರು ಅವರ ಕಣ್ಣ ಮುಂದೆಯೇ ಸಾಯುವುದನ್ನು ನೋಡಿದವರು. ಕುಟುಂಬದ ಪುರುಷರೊಂದಿಗೆ ಸ್ವಲ್ಪ ಸಮಯ ಮಾತನಾಡಿದ ನಂತರ, ನಾನು ಮನೆಯ ಕಡೆಗೆ ನಡೆದಾಗ, ಪರೇಶ್ ಕಟಾರಾ ಅವರ ತಾಯಿ ಸಪ್ನಾ ಬೆನ್ ಮಣ್ಣಿನ ಮನೆಯ ಹೊರಗೆ ಮಲಗಿರುವುದನ್ನು ನೋಡಿದೆ. ನನ್ನನ್ನು ನೋಡಿದ ಅವರು ಎದ್ದು ಕುಳಿತುಕೊಂಡರು, ನಂತರ ಬೆನ್ನನ್ನು ಗೋಡೆಗೆ ಒರಗಿಸಿ ಕುಳಿತುಕೊಂಡರು. ನಾನು ಒಂದು ಫೋಟೊ ತೆಗೆದುಕೊಳ್ಳಲೇ ಎಂದು ಕೇಳಿದೆ. ಅವರು ಸರಿ ಎನ್ನವಂತೆ ಮೆಲ್ಲ ತಲೆಯಾಡಿಸಿದರು.

ಸಂಪೂರ್ಣ ದುಃಖ, ದುರ್ಬಲತೆ ಮತ್ತು ಕೋಪದಿಂದ ತುಂಬಿದ ಕಣ್ಣುಗಳೊಂದಿಗೆ ಅವರು ನೇರವಾಗಿ ಕ್ಯಾಮೆರಾದತ್ತ ನೋಡಿದರು. ಅವರನ್ನು ಸುತ್ತುವರೆದಿದ್ದ ಹಳದಿ ಛಾಯೆಗಳು ಅವರ ಮನಸ್ಸಿನ ದುರ್ಬಲತೆಯನ್ನು ಸೆರೆಹಿಡಿಯುವಂತೆ ತೋರಿತು. ಇದು ನಾನು ತೆಗೆದ ಅತ್ಯಂತ ಪ್ರಚೋದನಕಾರಿ ಚಿತ್ರಗಳಲ್ಲಿ ಒಂದಾಗಿದೆ. ಇದೊಂದು ಚಿತ್ರದಲ್ಲೇ ಎಲ್ಲವನ್ನೂ ಹೇಳಿದ್ದೇನೆ ಎಂದು ನಾನು ಭಾವಿಸಿದೆ. ಇದು ನಾಲ್ಕು ಕುಟುಂಬಗಳ ಸಂಪೂರ್ಣ ಕಥೆಯನ್ನು ಒಂದೇ ಫ್ರೇಮಿನಲ್ಲಿ ತೋರಿಸಿದೆ.

*****

ಝೀಶಾನ್‌ ಎ ಲತೀಫ್‌ - ನಂದೂರ್‌ಬಾರ್‌ ಮಹಾರಾಷ್ಟ್ರ

PHOTO • Zishaan A Latif

ಪಲ್ಲವಿ (ಹೆಸರು ಬದಲಾಯಿಸಲಾಗಿದೆ) ಚಿಕಿತ್ಸೆಯಾಗದ ಗರ್ಭಾಶಯದೊಂದಿಗೆ ಭಯಾನಕ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿದ್ದರು. ಪುರುಷರಿಗೆ ಎಂದಿಗೂ ಅರ್ಥವಾಗದ ದೈಹಿಕ ನೋವನ್ನು ಅವಳು ಸಹಿಸಬೇಕಾಗಿತ್ತು. ಕಡಿದಾದ ಬಂಡೆಯ ಮೇಲೆ ಕುಳಿತಿರುವ ಎರಡು ಗುಡಿಸಲುಗಳ ಕುಗ್ರಾಮದಲ್ಲಿ ಅವರ ಸಣ್ಣ ಗುಡಿಸಲಿನ ಒಳಗೆ ಅವರ ಫೋಟೊ ತೆಗೆದಾಗ ತೆಗೆದಾಗ ಅವರ ಅಪಾರ ಸ್ಥಿತಿಸ್ಥಾಪಕತ್ವವು ಸ್ಪಷ್ಟವಾಗಿ ಗೋಚರಿಸಿತು. ಅವರ ಅಸ್ವಸ್ಥತೆಗೆ ಚಿಕಿತ್ಸೆ ನೀಡಬಹುದಾದ ಹತ್ತಿರದ ಸರ್ಕಾರಿ ಚಿಕಿತ್ಸಾಲಯವನ್ನು ತಲುಪಲು ಸಾಮಾನ್ಯವಾಗಿ ಎರಡು ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಅದು ಕೂಡ ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರವಲ್ಲ. 'ನನ್ನ ಕಾಟ್ [ಗರ್ಭಾಶಯ] ಹೊರಬರುತ್ತಲೇ ಇರುತ್ತದೆ' ಎನ್ನುವ ಕತೆಯಲ್ಲಿ ಈ ಚಿತ್ರವನ್ನು ಬಳಸಿಕೊಳ್ಳಲಾಗಿದೆ.

ಅವರು ಕಾಡುವ ದೌರ್ಬಲ್ಯದ ನಡುವೆಯೂ ಎತ್ತರಕ್ಕೆ ನಿಂತಿದ್ದರು. ಅವರು ಭಿಲ್‌ ಆದಿವಾಸಿ ಸಮುದಾಯದ ಮಹಿಳೆಯರ ಸಂಕೇತವಾಗಿದ್ದರು. ಅವರು ತನ್ನೆಲ್ಲಾ ಅನಾರೋಗ್ಯದ ನಡುವೆಯೂ ಕುಟುಂಬ ಮತ್ತು ಸಮುದಾಯಕ್ಕೆ ಆತ್ಮೀಯತೆಯನ್ನು ಹಂಚುತ್ತಲೇ ಇದ್ದರು.

ಸಾನ್ವಿತಿ ಅಯ್ಯರ್ ಅವರ ಕವರ್ ಡಿಸೈನ್.

ಅನುವಾದ: ಶಂಕರ. ಎನ್. ಕೆಂಚನೂರು

Binaifer Bharucha

Binaifer Bharucha is a freelance photographer based in Mumbai, and Photo Editor at the People's Archive of Rural India.

Other stories by Binaifer Bharucha
Editor : PARI Team
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru