ಶ್ಯಾಮಲಾಲ್ ಕಶ್ಯಪ್ ಅವರ ಶವವನ್ನು ಮುಂದಿಟ್ಟುಕೊಂಡು ಅವರ ಕುಟುಂಬವನ್ನು ಅಕ್ಷರಶಃ ಬ್ಲ್ಯಾಕ್‌ಮೇಲ್ ಮಾಡಲಾಗಿತ್ತು.

2023ರ ಮೇ ತಿಂಗಳಲ್ಲಿ ಅರಕೋಟ್‌ನ 20 ವರ್ಷದ ಈ ಕೂಲಿ ಕಾರ್ಮಿಕ ತನ್ನ 20 ವರ್ಷದ ಗರ್ಭಿಣಿ ಪತ್ನಿ ಮಾರ್ಥಾಳನ್ನು ಅನಾಥೆಯನ್ನಾಗಿಸಿ ತನ್ನ ಜೀವವನ್ನು ತಾನೇ ಬಲಿ ತೆಗೆದುಕೊಂಡಿದ್ದರು.

“ಇದು ಆತ್ಮಹತ್ಯೆ. ಇಲ್ಲಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಹತ್ತಿರದ ಆಸ್ಪತ್ರೆಗೆ ಶವವನ್ನು ತೆಗೆದುಕೊಂಡು ಹೋದೆವು” ಎಂದು ಅವರ ಅತ್ತಿಗೆ ಸುಕ್ಮಿತಿ ಕಶ್ಯಪ್ (30) ಹೇಳುತ್ತಾರೆ. ಅರಕೋಟ್ ಗ್ರಾಮದ ಬಂಜರು ಭೂಮಿಯ ಅಂಚಿನಲ್ಲಿರುವ ಮಂದಬೆಳಕಿನ ಗುಡಿಸಲಿನ ಹೊರಗೆ ಅವರು ಕುಳಿತುಕೊಂಡು, "ಪೋಸ್ಟ್ ಮಾರ್ಟಮ್ ವರದಿಯಲ್ಲಿ ಯಾವುದೇ ಅನುಮಾನಗಳು ಕಂಡು ಬಂದಿಲ್ಲ,” ಎಂದು ಹೇಳುತ್ತಾರೆ.

ಸರ್ಕಾರಿ ಆಸ್ಪತ್ರೆಯಿಂದ ಶ್ಯಾಮಲಾಲ್ ಅವರ ಶವವನ್ನು ತೆಗೆದುಕೊಂಡು, ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ಅವರ ಕೆಲವು ಸಂಬಂಧಿಕರು ಕಾಯುತ್ತಿದ್ದರು. ಗ್ರಾಮದಲ್ಲಿ ಸಾವಿನ ನೋವಿನಿಂದ ದಿಕ್ಕೆಟ್ಟ ಕುಟುಂಬದ ಸದಸ್ಯರು ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುತ್ತಿದ್ದರು. ಇಡೀ ಕುಟುಂಬ ಆಘಾತಕ್ಕೊಳಗಾಗಿತ್ತು. ಅವರು ಇನ್ನೂ ಆ ದುರಂತದಿಂದ ಹೊರಬರಲು ಸಾಧ್ಯವಾಗಿಲ್ಲ.

ಆ ಹೊತ್ತಿನಲ್ಲೇ ಕೆಲವು ಸ್ಥಳೀಯರು ಈ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರಗೊಂಡರೆ ಮಾತ್ರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲು ಅನುಮತಿ ನೀಡುವುದಾಗಿ ಕುಟುಂಬಕ್ಕೆ ತಿಳಿಸಿದ್ದರು.

ಈ ಕುಟುಂಬವು ಛತ್ತೀಸ್‌ಗಢದ ಬಸ್ತಾರ್‌ನ ಜಿಲ್ಲೆಯಲ್ಲಿ ಕೂಲಿ ಕೆಲಸ ಮಾಡಿ, ಮೂರು ಎಕರೆ ಹೊಲದಲ್ಲಿ ಕೃಷಿ ಮಾಡಿ ಜೀವನ ಸಾಗಿಸುತ್ತಿದೆ. ಇಲ್ಲಿ ಅವರು ಮನೆ ಬಳಕೆಗಾಗಿ ಭತ್ತವನ್ನು ಬೆಳೆಯುತ್ತಾರೆ. ಅವರ ಏಕೈಕ ಆದಾಯವೆಂದರೆ ಶ್ಯಾಮಲಾಲ್ ಅವರು ಕಷ್ಟಪಟ್ಟು ದುಡಿದು ತಿಂಗಳಿಗೆ ಗಳಿಸುವ 3,000 ರುಪಾಯಿ.

ಈಗ ಈ ಕಡು ಬಡತನದ ನಡುವೆ ಮಗುವನ್ನು ಸಾಕುವ ಹೊರೆ ಕೂಡ ತನ್ನ ಮೇಲೆ ಬಿದ್ದಿದೆ ಎಂದು ಸುಕ್ಮಿತಿ ವ್ಯಥೆ ಪಡುತ್ತಾರೆ. "ಅವನು ಆತ್ಯಹತ್ಯೆ ಮಾಡಿಕೊಳ್ಳುವ ಮೊದಲು ಒಂದು ಚೀಟಿ ಕೂಡ ಬರೆದಿಡಲಿಲ್ಲ," ಎಂದು ಅವರು ಹೇಳುತ್ತಾರೆ.

Sukmiti, sister-in-law of the late Shyamlal Kashyap, holding her newborn in front of the family home.
PHOTO • Parth M.N.

ಮೃತ ಶ್ಯಾಮಲಾಲ್ ಕಶ್ಯಪ್ ಅವರ ಅತ್ತಿಗೆ ಸುಕ್ಮಿತಿ ನವಜಾತ ಶಿಶುವನ್ನು ಹಿಡಿದುಕೊಂಡು ಮನೆಯ ಮುಂದೆ ನಿಂತಿರುವುದು

ಇವರ ಕುಟುಂಬ ಕ್ರೈಸ್ತ ಧರ್ಮವನ್ನು ಪಾಲಿಸುವ ಛತ್ತೀಸ್‌ಗಢದ ಶೇಕಡಾ ಎರಡರಷ್ಟು ಜನಸಂಖ್ಯೆಯಿರುವ ಮಡಿಯಾ ಬುಡಕಟ್ಟಿಗೆ ಸೇರಿದೆ. ಅವರಲ್ಲಿ ಹಲವರು ರಾಜ್ಯದ ದಕ್ಷಿಣ ಭಾಗದಲ್ಲಿರುವ ಬಸ್ತಾರ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಈ ವರ್ಷದ ಮೇ ತಿಂಗಳ ಎರಡನೇ ವಾರದಲ್ಲಿ ಶ್ಯಾಮಲಾಲ್ ಕಶ್ಯಪ್ ನಾಪತ್ತೆಯಾಗಿದ್ದರು. ಆಗ ರಾತ್ರಿಯಿಡೀ ಮನೆಯವರು ಬಸ್ತಾರ್ ಕಾಡುಗಳಲ್ಲಿ ಹುಡುಕಾಡಿದ್ದರು.

ಮರುದಿನ ಬೆಳಿಗ್ಗೆ ಅವರ ನಿರ್ಜೀವ ದೇಹವು ಮನೆಯಿಂದ ತುಂಬಾ ದೂರದಲ್ಲಿರುವ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು. “ನಾವು ಗೊಂದಲಕ್ಕೊಳಗಾಗಿದ್ದೆವು, ಅದುರಿ ಹೋಗಿದ್ದೆವು ಮತ್ತು ದಿಗ್ಭ್ರಮೆಗೊಂಡಿದ್ದೆವು. ನಮಗೆ ಯೋಚಿಸಲೂ ಸಾಧ್ಯವಿರಲಿಲ್ಲ,” ಎಂದು ಸುಕ್ಮಿತಿ ನೆನಪಿಸಿಕೊಳ್ಳುತ್ತಾರೆ.

ಅರಕೋಟ್ ಕೇವಲ 2,500ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಸಣ್ಣ ಹಳ್ಳಿ. "ಇಂತಹ ಪರಿಸ್ಥಿತಿಯಲ್ಲಿ ನಾವು ನೀವು ಹಳ್ಳಿಯ ಜನರು ಭಾವನಾತ್ಮಕವಾದ ಬೆಂಬಲವನ್ನು ನೀಡುತ್ತಾರೆ ಎಂದು ನಿರೀಕ್ಷಿಸುತ್ತೇವೆ" ಎಂದು ಸುಕ್ಮಿತಿ ಹೇಳುತ್ತಾರೆ.

ಆದರೆ, ಕುಟುಂಬ ಬೈಗುಳ, ಬೆದರಿಕೆಯನ್ನು ಎದುರಿಸಿತು. ಹಳ್ಳಿಯ ಪ್ರಭಾವಿ ಜನರು, ಬಲಪಂಥೀಯ ನಾಯಕರ ಹಿಂಬಾಲಕರು ಅವರ ಅಸಹಾಯಕತೆಯ ಲಾಭವನ್ನು ಪಡೆಯಲು ಯೋಜನೆ ಹಾಕುತ್ತಿದ್ದರು. ಷರತ್ತೊಂದರ ಮೇಲೆ ಗ್ರಾಮದಲ್ಲಿ ಶ್ಯಾಮಲಾಲ್ ಅವರ ಅಂತ್ಯಕ್ರಿಯೆಯನ್ನು ನಡೆಸಲು ಅನುಮತಿ ನೀಡಲಾಗುವುದು ಎಂದು ಅವರು ಹೇಳಿದ್ದರು. ಅದೇನೆಂದರೆ, ಇಡೀ ಕುಟುಂಬ ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಬೇಕು ಮತ್ತು ಹಿಂದೂ ಸಂಪ್ರದಾಯಗಳ ಪ್ರಕಾರ ಅಂತ್ಯಕ್ರಿಯೆಯನ್ನು ನಡೆಸಬೇಕು ಎಂಬುದು.

ಕ್ರೈಸ್ತ ಪಾದ್ರಿಯ ಸಮಾಧಿಯ ಪಕ್ಕ ದಫನ ಮಾಡುವುದು ಸಾಧ್ಯವಿಲ್ಲದ ಮಾತಾಗಿತ್ತು.

ಸುಮಾರು 40 ವರ್ಷಗಳಿಂದ ಅವರ ಕುಟುಂಬ ಕ್ರೈಸ್ತ ಧರ್ಮವನ್ನು ಪಾಲಿಸುತ್ತಿದೆ ಎಂದು ಸುಕ್ಮಿತಿ ಹೇಳುತ್ತಾರೆ. "ಇದು ನಮ್ಮ ಜೀವನ ವಿಧಾನ," ಎನ್ನುತ್ತಾ ಬಾಗಿಲಿನ ಮೇಲೆ ಹಾಕಿರುವ ಶಿಲುಬೆಯನ್ನು ತೋರಿಸುತ್ತಾರೆ. "ನಾವು ನಿತ್ಯ ಪ್ರಾರ್ಥಿಸುತ್ತೇವೆ. ಇದು ಸಂಕಷ್ಟದ ಸಮಯದಲ್ಲಿ ನಮಗೆ ಶಕ್ತಿಯನ್ನು ನೀಡುತ್ತದೆ. ರಾತ್ರೋರಾತ್ರಿ ನಿಮ್ಮ ನಂಬಿಕೆಯನ್ನು ಹೇಗೆ ಬಿಡಲು ಸಾಧ್ಯ?” ಎಂದು ಕೇಳುತ್ತಾರೆ.

ದುಃಖದಲ್ಲಿರುವ ಕುಟುಂಬವನ್ನು ಒಂದುಕಡೆ ಸೇರಿಸಿ ಬಲಪಂಥೀಯ ಬೆಂಬಲಿಗರು ಇಷ್ಟು ವರ್ಷಗಳಿಂದ ಸಮಾಧಿ ಮಾಡುತ್ತಾ ಬಂದಿದ್ದ ಅವರ ಗ್ರಾಮದ ಸ್ಮಶಾನಕ್ಕೆ ಈ ಕುಟುಂಬಕ್ಕೆ ಪ್ರವೇಶವಿಲ್ಲ ಎಂದು ಹೇಳಿದ್ದರು. “ನಾವು ನಿರ್ದಿಷ್ಟ ನಂಬಿಕೆಯನ್ನು ಆಯ್ಕೆ ಮಾಡಿಕೊಂಡಿದ್ದರಿಂದಾಗಿ ನಮ್ಮನ್ನು ಗುರಿಯಾಗಿಸುತ್ತಿದ್ದಾರೆ. ಆದರೆ ನಾವು ಯಾವ ಧರ್ಮವನ್ನು ಬೇಕಾದರೂ ಅನುಸರಿಸಬಹುದು ಎಂದು ನ್ಯೂಸ್‌ನಲ್ಲಿ ಓದಿದ್ದೇನೆ,” ಎನ್ನುತ್ತಾರೆ ಸುಕ್ಮಿತಿ.

ಅದಕ್ಕಿಂತ ಹೆಚ್ಚಾಗಿ, "ಅವರು ನಮ್ಮ ಹಿತ್ತಿಲಲ್ಲೂ ಶ್ಯಾಮಲಾಲನ ಹೆಣ ಹೂಳಲು ಬಿಡಲಿಲ್ಲ. ಅಲ್ಲಿಯೇ ನಾವು ಅವರ ಅಜ್ಜಿಯನ್ನೂ ಸಮಾಧಿ ಮಾಡಿದ್ದೆವು. ಇಬ್ಬರಿಬ್ಬರೂ ಅಕ್ಕಪಕ್ಕವೇ ವಿಶ್ರಮಿಸಬಹುದು ಎಂದು ನಾವು ಭಾವಿಸಿಕೊಂಡಿದ್ದೆವು. ಆದರೆ ನಾವು ಆ ಜನರ ಎದುರು ನಿಂತು ಮತಾಂತರಗೊಳ್ಳಲು ನಿರಾಕರಿಸಿದ್ದರಿಂದ ಅಲ್ಲಿ ದಫನ ಮಾಡಲು ಸಾಧ್ಯವಿಲ್ಲದಾಯಿತು,” ಎಂದು ಅವರು ಹೇಳುತ್ತಾರೆ.

The backyard in Sukmiti's home where the family wanted to bury Shyamlal.
PHOTO • Parth M.N.

ಸುಕ್ಮಿತಿಯ ಮನೆಯ ಹಿತ್ತಿಲಿನಲ್ಲಿಯೇ ಶ್ಯಾಮಲಾಲನನ್ನು ದಫನ ಮಾಡಲು ಮನೆಯವರು ಬಯಸಿದ್ದರು

ಶ್ಯಾಮಲಾಲ್ ಕುಟುಂಬವು ಮಡಿಯಾ ಬುಡಕಟ್ಟಿಗೆ ಸೇರಿದ್ದು, ಕ್ರೈಸ್ತ ಧರ್ಮವನ್ನು ಪಾಲಿಸುತ್ತದೆ. ಅವರು ಸತ್ತಾಗ, ಗ್ರಾಮದ ಪ್ರಭಾವಿಗಳು ಒಂದು ಷರತ್ತಿನ ಮೇಲೆ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆಯನ್ನು ಅನುಮತಿ ನೀಡಿದರು. ಅದೇನೆಂದರೆ: ಕುಟುಂಬವು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಸಂಪ್ರದಾಯಗಳ ಪ್ರಕಾರ ಅಂತ್ಯಕ್ರಿಯೆಗಳನ್ನು ನಡೆಸಬೇಕು

ಬುಡಕಟ್ಟು ಕ್ರಿಶ್ಚಿಯನ್ನರ ಮೇಲೆ ಹಿಂದೂ ಗುಂಪುಗಳು ಸಾಧಿಸುತ್ತಿರುವ ಹಗೆತನ ಛತ್ತೀಸ್‌ಗಢದಲ್ಲಿ ಹೊಸದೇನಲ್ಲ. ಆದರೆ  ಸಾವಿನ ನಂತರ ಕುಟುಂಬವನ್ನು ಬ್ಲ್ಯಾಕ್‌ಮೇಲ್ ಮಾಡುವ ಅಥವಾ ಬೆದರಿಕೆ ಹಾಕುವ ಘಟನೆಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ ಎಂದು ಬಸ್ತಾರ್‌ನಲ್ಲಿರುವ ಛತ್ತೀಸ್‌ಗಢ ಕ್ರಿಶ್ಚಿಯನ್ ಫೋರಂನ ಉಪಾಧ್ಯಕ್ಷ ರತ್ನೇಶ್ ಬೆಂಜಮಿನ್ ಹೇಳುತ್ತಾರೆ.

ಇಲ್ಲಿ ಬಲಪಂಥೀಯ ಗುಂಪುಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳನ್ನು ಗುರಿಯಾಗಿಸುತ್ತಿವೆ. ಜೊತೆಗೆ, ಕ್ರಿಶ್ಚಿಯನ್‌ ಧರ್ಮವನ್ನು ಅನುಸರಿಸದ ಆದಿವಾಸಿ ಗುಂಪುಗಳೂ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಹೊಂದಿದವರಿಗೆ ಕಿರುಕುಳ ನೀಡುತ್ತಿದ್ದಾರೆ. ಒಂದು ಗ್ರಾಮಸಭೆಯಂತೂ ಅದು ಕ್ರಿಶ್ಚಿಯನ್‌ ಧರ್ಮ ಅನುಸರಿಸುವವರಿಗೆ ತನ್ನ ಗ್ರಾಮದ ಗಡಿಯೊಳಗೆ ಶವಸಂಸ್ಕಾರ ನಡೆಸಲು ಅನುಮತಿ ನೀಡುವುದಿಲ್ಲ ಎನ್ನುವ ನಿರ್ಣಯವನ್ನು ಅಂಗೀಕರಿಸಿತ್ತು.

ಕೊನೆಯಲ್ಲಿ, ಶ್ಯಾಮಲಾಲ್ ಅವರ ಶವವನ್ನು ಗ್ರಾಮಕ್ಕೆ ತರುವ ಬದಲು ನೇರವಾಗಿ ಅರಕೋಟ್‌ನಿಂದ 40 ಕಿಲೋಮೀಟರ್‌ ದೂರ ಇರುವ ಜಗ್ದಲ್‌ಪುರದ ಜಿಲ್ಲಾ ರಾಜಧಾನಿಗೆ ಕೊಂಡೊಯ್ದು, ಅಲ್ಲೇ ದಫನ ಮಾಡಲಾಯಿತು. "ನಮ್ಮ ಪ್ರೀತಿಪಾತ್ರರ ಸಾವನ್ನು ಅರಗಿಸಿಕೊಳ್ಳಲು ಆದಷ್ಟು ಬೇಗ ದಫನ ಮಾಡಬೇಕು," ಎಂದು ಸುಕ್ಮಿತಿ ಹೇಳುತ್ತಾರೆ.

ಶ್ಯಾಮಲಾಲ್ ಅವರ ಅಂತಿಮ ಸಂಸ್ಕಾರವು ಕೇವಲ ಲಾಜಿಸ್ಟಿಕ್ಸ್‌ನಂತೆ ತೋರುತ್ತಿತ್ತು. ಬೇಗ ಬೇಗ ನಡೆದುಹೋಯಿತು. "ನಾವು ಅವನನ್ನು ಸರಿಯಾಗಿ ಕಳುಹಿಸಲೇ ಇಲ್ಲ" ಎಂದು ಕುಟುಂಬದವರು ಭಾವಿಸುತ್ತಾರೆ.

ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಅವರು ನಿರಾಕರಿಸಿದ್ದು ಶ್ಯಾಮಲಾಲ್ ಸಾವಿನ ನಂತರದ ದಿನಗಳಲ್ಲಿ ಗ್ರಾಮದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿತು. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರನ್ನು ನಿಯೋಜಿಸಲಾಗಿತ್ತು. ದುರದೃಷ್ಟವಶಾತ್, ಶಾಂತಿಗಾಗಿ ಇದ್ದ ಏಕೈಕ ಪರಿಹಾರವೆಂದರೆ ಬಹುಸಂಖ್ಯಾತ ಬೇಡಿಕೆಗಳಿಗೆ ಮಣಿಯುವುದು.

"ಇದು ಕೋವಿಡ್ ನಂತರದ ಸಂಗತಿಗಳಾಗಿವೆ" ಎಂದು ಬೆಂಜಮಿನ್ ಹೇಳುತ್ತಾರೆ. "ಅದಕ್ಕೂ ಮೊದಲು, ಬಲಪಂಥೀಯರು ವಿವಿಧ ವಿಧಾನಗಳನ್ನು ಬಳಸಿಕೊಂಡು ಕ್ರೈಸ್ತರನ್ನು ಹಿಂದೂ ಧರ್ಮಕ್ಕೆ ಮತಾಂತರಿಸಲು ಪ್ರಯತ್ನಿಸಿದರು. ಆದರೆ ಸಾವನ್ನು ಗೌರವಿಸಲಾಗುತ್ತಿತ್ತು. ದುರದೃಷ್ಟವಶಾತ್, ಇನ್ನು ಮುಂದೆ ಅದೂ ಇಲ್ಲ,” ಎನ್ನುತ್ತಾರೆ ಬೆಂಜಮಿನ್.

*****

ಬಸ್ತಾರ್ ಪ್ರದೇಶವು ಖನಿಜ ಸಂಪತ್ತಿನಿಂದ ಸಮೃದ್ಧವಾಗಿದ್ದರೂ, ಅಲ್ಲಿನ ಜನರು ಮಾತ್ರ ಭಾರತದಲ್ಲಿಯೇ ಅತ್ಯಂತ ಕಡು ಬಡವರಾಗಿದ್ದಾರೆ. ರಾಜ್ಯದ ಬಹುಪಾಲು ಬುಡಕಟ್ಟು ಗ್ರಾಮೀಣ ಜನಸಂಖ್ಯೆಯ ಸುಮಾರು 40 ಶೇಕಡಾದಷ್ಟು ಜನರು ಬಡತನ ರೇಖೆಯ ಕೆಳಗೆ ಜೀವಿಸುತ್ತಿದ್ದಾರೆ.

ಈ ಪ್ರದೇಶವು 1980ರ ದಶಕದಿಂದಲೂ ಸಶಸ್ತ್ರ ಸಂಘರ್ಷಗಳ ಮಧ್ಯೆ ಸಿಲುಕಿಕೊಂಡಿದೆ. ಮಾವೋವಾದಿ ಬಂಡುಕೋರರು, ಅಥವಾ ಸಶಸ್ತ್ರ ಗೆರಿಲ್ಲಾಗಳು, ರಾಜ್ಯ ಮತ್ತು ಶ್ರೀಮಂತ ನಿಗಮಗಳ ಕಣ್ಣಿಗೆ ಬಿದ್ದಿರುವ ಅರಣ್ಯಗಳನ್ನು ರಕ್ಷಿಸುವ ಮೂಲಕ ಬುಡಕಟ್ಟು ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ ಎಂದು ಜನರು ಹೇಳಿಕೊಳ್ಳುತ್ತಾರೆ. ಕಳೆದ 25 ವರ್ಷಗಳಲ್ಲಿ ಸಶಸ್ತ್ರ ಸಂಘರ್ಷವು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. 2018 ರಲ್ಲಿ, 15 ವರ್ಷಗಳ ಬಿಜೆಪಿ-ಆಡಳಿತ ಕೊನೆಗೊಂಡು ರಾಜ್ಯದ ಅಧಿಕಾರ ಬದಲಾದಾಗ, ಬಸ್ತಾರ್ ಜಿಲ್ಲೆ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ಪ್ರದೇಶದ 12 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತ್ತು.

Arracote is a small village with a population of just over 2,500. 'In moments like these you expect people in your village to provide emotional support,' says Sukmiti, seen here with her newborn in front of the house.
PHOTO • Parth M.N.

ಅರಕೋಟ್ ಕೇವಲ 2,500 ಜನಸಂಖ್ಯೆಯನ್ನು ಹೊಂದಿರುವ ಒಂದು ಸಣ್ಣ ಹಳ್ಳಿ. 'ಇಂತಹ ಪರಿಸ್ಥಿತಿಯಲ್ಲಿ ನಾವು ನೀವು ಹಳ್ಳಿಯ ಜನರು ನೀಡುವ ಭಾವನಾತ್ಮಕವಾದ ಬೆಂಬಲವನ್ನು ನಿರೀಕ್ಷಿಸುತ್ತೇವೆ,' ಎಂದು ಸುಕ್ಮಿತಿ  ನವಜಾತ ಶಿಶುವಿನೊಂದಿಗೆ ಮನೆಯ ಮುಂದೆ ನಿಂತು ಹೇಳುತ್ತಾರೆ

ಛತ್ತೀಸ್‌ಗಢದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಬಲಪಂಥೀಯ ಸಂಘಟನೆಗಳ ಸದಸ್ಯರು ಈಗ ರಾಜ್ಯವನ್ನು ಕೋಮುಧ್ರುವೀಕರಣದ ಮೂಲಕ ಜನರನ್ನು ಒಡೆಯಲು ತಳಮಟ್ಟದಿಂದಲೇ ಕೆಲಸ ಮಾಡುತ್ತಿದ್ದಾರೆ.

ಕಳೆದ ಒಂದೂವರೆ ವರ್ಷದಲ್ಲಿ ವಿಎಚ್‌ಪಿ ಮತ್ತು ಬಜರಂಗದಳ ಇಂತಹ 70 ಕ್ಕೂ ಹೆಚ್ಚು ಅಂತ್ಯಕ್ರಿಯೆಗಳನ್ನು ಮಾಡಿವೆ ಎಂದು ಬಸ್ತಾರ್‌ನ ವಿಶ್ವ ಹಿಂದೂ ಪರಿಷತ್‌ನ ಹಿರಿಯ ನಾಯಕ ರವಿ ಬ್ರಹ್ಮಚಾರಿ ಹೇಳುತ್ತಾರೆ. ಇಲ್ಲೆಲ್ಲಾ ಹಿಂದೂಗಳು ಮಧ್ಯಪ್ರವೇಶಿಸಿ ಬುಡಕಟ್ಟು ಕ್ರೈಸ್ತರಿಗೆ ತಮ್ಮ ಪ್ರೀತಿಪಾತ್ರರ ಶವಸಂಸ್ಕಾರ ನಡೆಸಲು ಕಷ್ಟವಾಗುವಂತೆ ಮಾಡಿದ್ದರು. "ಕ್ರೈಸ್ತ ಮಿಷನರಿಗಳು ಬಡವರನ್ನು ಬೇಟೆಯಾಡುತ್ತಿದ್ದಾರೆ. ಅವರ ಅನಕ್ಷರತೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ" ಎಂದು ರವಿ ಬ್ರಹ್ಮಚಾರಿ ಹೇಳುತ್ತಾರೆ. “ನಾವು ಘರ್‌ ವಾಪ್ಸಿಗಾಗಿ [ಮರಳಿ ಮೂಲ ಧರ್ಮಕ್ಕೆ ಹಿಂತುರುಗಿಸುವ] ಕೆಲಸ ಮಾಡುತ್ತೇವೆ. ಹಿಂದೂಗಳನ್ನು ಜಾಗೃತಗೊಳಿಸುವುದು ನಮ್ಮ ಕೆಲಸ. ನಮ್ಮಿಂದ ‘ಪ್ರಜ್ಞಾವಂತʼರಾದವರು ಬುಡಕಟ್ಟು ಕ್ರೈಸ್ತರಿಗೆ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲು ಬಿಡುವುದಿಲ್ಲ,” ಎನ್ನುತ್ತಾರೆ ಅವರು.

ಅರಕೋಟ್‌ನಿಂದ ತುಂಬಾ ದೂರದಲ್ಲಿರುವ ನಾಗಲ್‌ಸರ್ ಗ್ರಾಮದಲ್ಲಿ ಕ್ರೈಸ್ತ ಧರ್ಮವನ್ನು ಪಾಲಿಸುತ್ತಿದ್ದ ಬುಡಕಟ್ಟು ಕುಟುಂಬಕ್ಕೆ ಬಜರಂಗದಳದ ಸದಸ್ಯರು ಕಿರುಕುಳ ನೀಡುವಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದರು.

ಆಗಸ್ಟ್ 2022 ರಂದು 32 ವರ್ಷ ಪ್ರಾಯದ  ಪಾಂಡುರಾಮ್ ನಾಗ್ ತಮ್ಮ ಅಜ್ಜಿ ಆಯತಿಯವರನ್ನು ಕಳೆದುಕೊಂಡರು. 65 ವರ್ಷ ವಯಸ್ಸಿನ ಅಜ್ಜಿ ಅನಾರೋಗ್ಯದಿಂದ ಬಳಲುತ್ತಿದ್ದರು. ನೆಮ್ಮದಿಯಿಂದ ಕೊನೆಯುಸಿರೆಳೆದರು. ಆದರೆ ಅವರ ಅಂತ್ಯಕ್ರಿಯೆ ಮಾತ್ರ ಅಷ್ಟೊಂದು ಶಾಂತಿಯುತವಾಗಿರಲಿಲ್ಲ.

"ನಾವು ಅವರನ್ನು ಸ್ಮಶಾನಕ್ಕೆ ಹೊತ್ತುಕೊಂಡು ಹೋದಾಗ ಬಜರಂಗದಳದ ಸದಸ್ಯರನ್ನು ಒಳಗೊಂಡ ಗ್ರಾಮಸ್ಥರ ಗುಂಪು ನಮ್ಮನ್ನು ತಳ್ಳಲು ಪ್ರಾರಂಭಿಸಿತು" ಎಂದು ಧುರ್ವಾ ಬುಡಕಟ್ಟಿಗೆ ಸೇರಿದ ನಾಗ್ ನೆನಪಿಸಿಕೊಳ್ಳುತ್ತಾರೆ. "ನಾವು ಸಮತೋಲನವನ್ನು ಕಳೆದುಕೊಂಡಿದ್ದೆವು. ನನ್ನ ಅಜ್ಜಿಯ ಶವವು ಬಹುತೇಕ ನೆಲಕಚ್ಚಿತ್ತು. ಅವರು ಶವದ ಕೆಳಗಿದ್ದ ಹೊದಿಕೆಯನ್ನೂ ಎಳೆದರು. ಏಕೆಂದರೆ ನಾವು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ್ದೆವು,” ಎಂದು ಪಾಂಡುರಾಮ್ ನಾಗ್ ಹೇಳುತ್ತಾರೆ.

ಕುಟುಂಬವು ತನ್ನ ನಂಬಿಕೆಯ ಮೇಲೆ ಗಟ್ಟಿಯಾಗಿ ನಿಂತಿತ್ತು. ಇತರರ ಒತ್ತಡಕ್ಕೆ ಮಣಿಯಬಾರದು ಎಂದು ನಾಗ್ ಒತ್ತಾಯಿಸಿದ್ದರು. "ನಾವು ಮೂರು ಎಕರೆ ಕೃಷಿಭೂಮಿಯನ್ನು ಹೊಂದಿದ್ದೇವೆ ಮತ್ತು ನಾವು ಅದರಲ್ಲಿ ಏನು ಮಾಡುತ್ತೇವೆ ಎಂಬುದು ನಮ್ಮ ವೈಯಕ್ತಿಕ ವ್ಯವಹಾರ. ನಾವು ಅವರನ್ನು ಅಲ್ಲಿಯೇ ದಫನ ಮಾಡಲು ನಿರ್ಧರಿಸಿದೆವು. ನಾವು ಅದನ್ನು ಬೇರೆ ಕಡೆ ಮಾಡಲು ಸಾಧ್ಯವೇ ಇಲ್ಲ,” ಎಂದು ಅವರು ಹೇಳುತ್ತಾರೆ.

ಕೊನೆಯಲ್ಲಿ ಬಜರಂಗದಳದ ಸದಸ್ಯರು ಹಿಂದೆ ಸರಿದರು. ಅಂತ್ಯಕ್ರಿಯೆಯು ಮತ್ತೆ ಯಾವುದೇ ಅಡೆತಡೆಗಳಿಲ್ಲದೆ ನಡೆಯಿತು. ಆಗಲೂ ಜನರು ವಿಚಲಿತರಾಗಿದ್ದರು. ಆಯತಿಯವರನ್ನು ಗೌರವಪೂರ್ವಕವಾಗಿ ಕಳುಹಿಸಿಕೊಡುವುದನ್ನು ನೋಡುತ್ತಿದ್ದರು. "ಅಂತ್ಯಕ್ರಿಯೆ ನಡೆಸುವಾಗ ಶಾಂತಿಯನ್ನು ನಿರೀಕ್ಷಿಸಬೇಡವೇ?" ಎಂದು ಅವರು ಕೇಳುತ್ತಾರೆ. “ಹೌದು, ನಾವು ಸದ್ಯ ಆ ಯುದ್ಧವನ್ನು ಗೆದ್ದಿದ್ದೇವೆ. ಆದರೆ ನಮ್ಮ ಮಕ್ಕಳು ಈ ವಾತಾವರಣದಲ್ಲಿ ಬೆಳೆಯುವುದನ್ನು ನಾವು ಬಯಸುವುದಿಲ್ಲ. ಗ್ರಾಮದ ಮುಖಂಡರೂ ನಮ್ಮ ಬೆಂಬಲಕ್ಕೆ ನಿಂತಿಲ್ಲ,” ಎಂದು ಹೇಳಿದರು.

*****

When Kosha’s wife, Ware, passed away in the village of Alwa in Bastar district, a group of men suddenly barged into their home and started beating the family up. 'Nobody in the village intervened,' says his son, Datturam (seated on the left). 'We have lived here all our life. Not a single person in the village had the courage to stand up for us.' The Christian family belongs to the Madiya tribe and had refused to convert to Hinduism
PHOTO • Parth M.N.

ಕೋಶಾ ಅವರ ಪತ್ನಿ ವಾರೆ ಬಸ್ತಾರ್ ಜಿಲ್ಲೆಯ ಆಳ್ವಾ ಗ್ರಾಮದಲ್ಲಿ ನಿಧನರಾದಾಗ ಪುರುಷರ ಗುಂಪೊಂದು ಅವರ ಮನೆಗೆ ಏಕಾಏಕಿ ನುಗ್ಗಿ ಕುಟುಂಬದವರನ್ನು ಥಳಿಸಲು ಪ್ರಾರಂಭಿಸಿತು. 'ಗ್ರಾಮದಲ್ಲಿ ಯಾರೊಬ್ಬರೂ ರಕ್ಷಣೆಗೆ ಬರಲಿಲ್ಲ' ಎಂದು ಅವರ ಮಗ ದತ್ತುರಾಮ್ (ಎಡಭಾಗದಲ್ಲಿ ಕುಳಿತಿರುವ) ಹೇಳುತ್ತಾರೆ. 'ಜೀವನ ಪೂರ್ತಿ ಇಲ್ಲೇ ಬದುಕಿದ್ದೇವೆ. ನಮ್ಮ ಪರವಾಗಿ ನಿಲ್ಲುವ ಧೈರ್ಯ ಹಳ್ಳಿಯ ಒಬ್ಬ ವ್ಯಕ್ತಿಗೂ ಇರಲಿಲ್ಲʼಎಂದರು. ಮಡಿಯಾ ಬುಡಕಟ್ಟಿಗೆ ಸೇರಿರುವ ಈ ಕ್ರೈಸ್ತ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿತ್ತು

ಭಯ ಎಷ್ಟು ಘೋರವಾಗಿತ್ತು ಎಂದರೆ ಬಲಪಂಥೀಯ ಗುಂಪುಗಳನ್ನು ಒಪ್ಪದವರು ಕೂಡಾ ಹತ್ತಿರ ಬರಲಿಲ್ಲ.

ಈ ವರ್ಷದ ಮೇ ತಿಂಗಳ ಒಂದು ದಿನ, ತಮ್ಮ ಸಣ್ಣ ಗುಡಿಸಲಿನಲ್ಲಿ 23 ವರ್ಷದ ದತ್ತುರಾಮ್ ಪೋಯಮ್ ಮತ್ತು 60 ವರ್ಷದ ಅವರ ತಂದೆ ಕೋಶ, ಅವರ ತಾಯಿ ವಾರೆಯವರ ಪಕ್ಕದಲ್ಲಿ ಕುಳಿತುಕೊಂಡಿದ್ದರು. ಸ್ವಲ್ಪ ಸಮಯದವರೆಗೆ ಹಾಸಿಗೆ ಹಿಡಿದಿದ್ದ ವಾರೆಯವರು ಅದೇ ದಿನ ನಿಧನರಾದರು. ಇವರ ಮನೆ ಇರುವುದು ಜಗದಲ್ಪುರದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಬಸ್ತಾರ್ ಜಿಲ್ಲೆಯ ಅಲ್ವಾ ಗ್ರಾಮದಲ್ಲಿ.

ಇದ್ದಕ್ಕಿದ್ದಂತೆ ಅವರ ಮನೆಗೆ ನುಗ್ಗಿದ ಪುರುಷರ ಗುಂಪೊಂದು ಅವರನ್ನು ಥಳಿಸಲು ಪ್ರಾರಂಭಿಸಿತು. "ಗ್ರಾಮದಲ್ಲಿ ಯಾರೂ ಮಧ್ಯೆ ಬರಲಿಲ್ಲ" ಎಂದು ದತ್ತುರಾಮ್ ಹೇಳುತ್ತಾರೆ. “ನಾವು ನಮ್ಮ ಜೀವನದುದ್ದಕ್ಕೂ ಇಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಪರವಾಗಿ ನಿಲ್ಲುವ ಧೈರ್ಯ ಹಳ್ಳಿಯ ಒಬ್ಬ ವ್ಯಕ್ತಿಗೂ ಇರಲಿಲ್ಲ,” ಎಂದು ಖೇದದಿಂದ ಹೇಳುತ್ತಾರೆ.

ಈ ಕ್ರಿಶ್ಚಿಯನ್ ಕುಟುಂಬವು ಮಡಿಯಾ ಬುಡಕಟ್ಟಿಗೆ ಸೇರಿದ್ದು, ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿತ್ತು. ಬಜರಂಗದಳದ ಸದಸ್ಯರನ್ನು ಒಳಗೊಂಡ ಹಿಂದೂ ಪುರುಷರ ಗುಂಪು ವಾರೆಯವರ ಮೃತದೇಹವಿರುವ ಶವಪೆಟ್ಟಿಗೆ ಇನ್ನೂ ಮನೆಯಲ್ಲಿದೆ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಇಬ್ಬರ ದೇಹ ಕಡು ನೀಲಿ ಬಣ್ಣಕ್ಕೆ ತಿರುಗುವಂತೆ ಥಳಿಸಿದರು. ಕೋಶಾ ಪ್ರಜ್ಞೆ ಕಳೆದುಕೊಂಡು ಒಂದು ವಾರ ಆಸ್ಪತ್ರೆಯಲ್ಲಿ ದಾಖಲಾಗಬೇಕಾಯಿತು.

"ನನ್ನ ಜೀವನದಲ್ಲಿ ನಾನು ಎಂದಿಗೂ ಇಂತಹ ಅಸಹಾಯಕತೆಯನ್ನು ಅನುಭವಿಸಿರಲಿಲ್ಲ. ನನ್ನ ಹೆಂಡತಿ ತೀರಿಕೊಂಡಿದ್ದಾಳೆ ಮತ್ತು ಅವಳ ಸಾವಿಗೆ ದುಃಖಿಸಲು ನನ್ನ ಮಗನ ಜೊತೆ ಇರಲು ನನಗೆ ಸಾಧ್ಯವಾಗಲಿಲ್ಲ," ಎಂದು ಕೋಶಾ ಹೇಳುತ್ತಾರೆ.

ಬಿಜೆಪಿಯೇತರ ಸರ್ಕಾರವು ಅಲ್ಪಸಂಖ್ಯಾತರನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಸುಳ್ಳು ಎಂದು ಬೆಂಜಮಿನ್ ಹೇಳುತ್ತಾರೆ. ಏಕೆಂದರೆ 2018 ರಿಂದ ಕಾಂಗ್ರೆಸ್ ಆಡಳಿತದ ಇತ್ತೀಚಿನ ಆಡಳಿತದಲ್ಲಿಯೂ ಬಸ್ತಾರ್‌ನಲ್ಲಿ ಕ್ರೈಸ್ತರು ಸತತ ದಾಳಿಗೆ ಒಳಗಾಗಿದ್ದಾರೆ.

Kosha (left) was beaten and fell unconscious; he had to be admitted to a hospital for a week. 'I have never felt so helpless in my life,' he says. 'My wife had died and I couldn’t be with my son (Datturam on the right) to mourn her loss'.
PHOTO • Parth M.N.
Kosha (left) was beaten and fell unconscious; he had to be admitted to a hospital for a week. 'I have never felt so helpless in my life,' he says. 'My wife had died and I couldn’t be with my son (Datturam on the right) to mourn her loss'.
PHOTO • Parth M.N.

ಹಲ್ಲೆಗೆ ಒಳಗಾದ ಕೋಶಾ (ಎಡ) ಪ್ರಜ್ಞಾಹೀನರಾಗಿ ಒಂದು ವಾರ ಆಸ್ಪತ್ರೆಗೆ ದಾಖಲಾಗಬೇಕಾಯಿತು. ನನ್ನ ಜೀವನದಲ್ಲಿ ನಾನು ಎಂದಿಗೂ ಇಂತಹ ಅಸಹಾಯಕತೆಯನ್ನು ಅನುಭವಿಸಿರಲಿಲ್ಲ ಎಂದು ಅವರು ಹೇಳುತ್ತಾರೆ. ʼನನ್ನ ಹೆಂಡತಿ ತೀರಿಕೊಂಡಿದ್ದಾಳೆ ಮತ್ತು ಅವಳ ಸಾವಿಗೆ ದುಃಖಿಸಲು ನನ್ನ ಮಗನ ಜೊತೆ ಇರಲು ನನಗೆ ಸಾಧ್ಯವಾಗಲಿಲ್ಲ'

ದತ್ತುರಾಮ್ ಕೂಡ ಅವರ ಅಂತಿಮ ವಿಧಿಗಳನ್ನು ನಡೆಸಲು ಜಗದಲ್ಪುರಕ್ಕೆ ಹೋಗಬೇಕಾಯಿತು. “ನಾವು ಪಿಕ್-ಅಪ್ ಟ್ರಕ್ಕೊಂದನ್ನು 3,500 ರುಪಾಯಿಗೆ ಬಾಡಿಗೆಗೆ ಪಡೆದಿದ್ದೆವು. ನಮ್ಮದು ಕೂಲಿ ಕಾರ್ಮಿಕರ ಕುಟುಂಬ. ನಾವು ಆ ಹಣವನ್ನು ಕಷ್ಟಪಟ್ಟು ಒಂದು ತಿಂಗಳಲ್ಲಿ ಗಳಿಸಿದ್ದೆವು,” ಎಂದು ಅವರು ಹೇಳುತ್ತಾರೆ

ಈ ಘಟನೆಯು ಭಯಾನಕ - ಆತಂಕಕಾರಿಯಾಗಿತ್ತು ಎಂದು ಅವರು ಹೇಳುತ್ತಾರೆ. “ಈ ಘಟನೆ ಬೇರೆಲ್ಲೋ ನಡೆದದ್ದಲ್ಲ. ನಾವು ಕ್ರೈಸ್ತ ಧರ್ಮವನ್ನು ಪಾಲಿಸುವುದಾದರೆ ಗ್ರಾಮವನ್ನು ತೊರೆಯಲು ನಮಗೆ ಸೂಚಿಸಲಾಗಿದೆ, ” ಎಂದು ಅವರು ಹೇಳುತ್ತಾರೆ.

ಬುಡಕಟ್ಟು ಕ್ರೈಸ್ತರನ್ನು ಕಡೆಗಣಿಸುವ ಕೆಲಸ ಸತತವಾಗಿ ನಡೆಯುತ್ತಿದೆ. "ಗ್ರಾಮದಲ್ಲಿರುವ ಸಾರ್ವಜನಿಕ ಬಾವಿಯಿಂದ ನೀರು ತರಲು ನಮಗೆ ಇನ್ನು ಮುಂದೆ ಅನುಮತಿ ಸಿಗುವುದಿಲ್ಲ. ಅದನ್ನೂ ನಾವು ಯಾರಿಗೂ ಗೊತ್ತಾಗದಂತೆ ಮಾಡಬೇಕಾಗಿದೆ," ಎಂದು ಕೋಶಾ ಹೇಳುತ್ತಾರೆ.

ಬಸ್ತಾರ್‌ನ ಇತರ ಭಾಗಗಳಲ್ಲೂ ಇಂತಹ ಕಿರುಕುಳಗಳು ವರದಿಯಾವೆ. 2022 ಡಿಸೆಂಬರ್‌ನಲ್ಲಿ ನಾರಾಯಣಪುರ ಜಿಲ್ಲೆಯ 200ಕ್ಕೂ ಹೆಚ್ಚು ಬುಡಕಟ್ಟು ಕ್ರಿಶ್ಚಿಯನ್ನರನ್ನು ಅವರ ಗ್ರಾಮದಿಂದ ಬಲವಂತವಾಗಿ ಹೊರಹಾಕಲಾಯಿತು. ಈ ಘಟನೆಯು ನೂರಾರು ಸ್ಥಳೀಯರನ್ನು ಬಲಪಂಥೀಯ ಹಿಂದುತ್ವವಾದಿ ಗುಂಪುಗಳ ಕಿರುಕುಳದ ವಿರುದ್ಧ ಪ್ರತಿಭಟಿಸಿ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಕ್ಯಾಂಪ್ ಹಾಕುವಂತೆ ಮಾಡಿತ್ತು.

ಪ್ರತಿಭಟನಾಕಾರರು 2022ರ ಡಿಸೆಂಬರ್‌ನಲ್ಲಿ ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಮೇಲೆ ನಡೆದಿರುವ ಹತ್ತಾರು ದಾಳಿಗಳನ್ನು ದಾಖಲಿಸಿದ ಪತ್ರವೊಂದನ್ನು ಕಲೆಕ್ಟರ್‌ಗೆ ಸಲ್ಲಿಸಿದ್ದು ವರದಿಯಾಗಿದೆ.

ಮತ್ತೆ ಅರಾಕೋಟ್‌ ವಿಚಾರಕ್ಕೆ ಬಂದರೆ, ಸುಕ್ಮಿತಿಯವರಿಗೆ ಪಕ್ಕದ ಹಳ್ಳಿಯ ಮದುವೆಯೊಂದಕ್ಕೆ ಹೋಗಲೂ ಅನುಮತಿ ಸಿಗುತ್ತಿಲ್ಲ ಎಂದು ಅವರು ಹೇಳುತ್ತಾರೆ. ಏಕೆಂದರೆ ಅದು ಕ್ರಿಶ್ಚಿಯನ್ ಕುಟುಂಬದ ಮದುವೆ. “ಅತಿಥಿಗಳಿಗಾಗಿ ತಯಾರಿಸಿದ ಮದುವೆಯ ಊಟವನ್ನು ಯಾರೂ ಬಾರದ ಕಾರಣ ಎಸೆಯಬೇಕಾಯಿತು, ” ಎನ್ನುತ್ತಾರೆ ಅವರು.

ಸಂವಿಧಾನದ (ಆರ್ಟಿಕಲ್ 25) "ಆತ್ಮಸಾಕ್ಷಿಯ ಮತ್ತು ಮುಕ್ತ ವೃತ್ತಿ, ಆಚರಣೆ ಮತ್ತು ಧರ್ಮ ಪ್ರಚಾರದ ಸ್ವಾತಂತ್ರ್ಯ"ದ ಬಗ್ಗೆ ಹೇಳಿದರೂ, ಬುಡಕಟ್ಟು ಕ್ರಿಶ್ಚಿಯನ್ನರು ಮಾತ್ರ ಹಗೆತನ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ.

“ಪರಿಸ್ಥಿತಿ ಹೇಗಿದೆಯೆಂದರೆ, ಕ್ರೈಸ್ತ ಕುಟುಂಬದಲ್ಲಿ ಯಾರಾದರೂ ಸತ್ತಾಗ, ನಮಗೆ ದುಃಖದ ಬದಲು ಮೊದಲು ಭಯವಾಗುತ್ತದೆ. ಇದು ಯಾವ ರೀತಿಯ ಸಾವು?” ಅವರು ಹೇಳಿದರು.

ಅನುವಾದ: ಚರಣ್‌ ಐವರ್ನಾಡು

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad