ಭಾರತದ ಬಹುತೇಕ ಎಲ್ಲಾ ರೈತರಿಗೂ ತಿಳಿದಿರುವ ಇಂಗ್ಲಿಷ್ ಭಾಷೆಯ ಕೆಲವೇ ಪದಗಳಲ್ಲಿ ಸ್ವಾಮಿನಾಥನ್ ರಿಪೋರ್ಟ್ ಅಥವಾ ಸ್ವಾಮಿನಾಥನ್ ಕಮಿಷನ್ ರಿಪೋರ್ಟ್ ಕೂಡಾ ಸೇರಿವೆ. ಜೊತೆಗೆ ಕನಿಷ್ಠ ಬೆಂಬಲ ಬೆಲೆ = ಸಮಗ್ರ ಉತ್ಪಾದನಾ ವೆಚ್ಚ + 50 ಪ್ರತಿಶತ (ಸಿ 2 + 50 ಶೇಕಡಾ ಎಂದೂ ಕರೆಯಲಾಗುತ್ತದೆ) ಎಂಬುದು ಅವರಿಗೆ ತಿಳಿದಿದೆ.
ಪ್ರೊಫೆಸರ್ ಎಮ್.ಎಸ್. ಸ್ವಾಮಿನಾಥನ್ ಅವರನ್ನು ಕೇವಲ ಸರ್ಕಾರ ಮತ್ತು ಅದರ ನೌಕರಶಾಹಿ ಅಥವಾ ವಿಜ್ಞಾನ ಸಂಸ್ಥೆಗಳು ಮಾತ್ರವಲ್ಲದೆ, ರಾಷ್ಟ್ರೀಯ ರೈತ ಆಯೋಗದ (ಎನ್ಸಿಎಫ್) ವರದಿಯನ್ನು ಜಾರಿಗೆ ತರಬೇಕೆಂದು ಆಗ್ರಹಿಸುತ್ತಿರುವ ರೈತರೂ ಸದಾ ಸ್ಮರಿಸಲಿದ್ದಾರೆ.
ವರದಿಯ ಹೆಸರು ಏನೇ ಇದ್ದರೂ ಭಾರತದ ರೈತರು ಅದನ್ನು ಕರೆಯುವುದು ಸ್ವಾಮಿನಾಥನ್ ವರದಿಯೆಂದೇ. ಏಕೆಂದರೆ ಅವರು ಅಧ್ಯಕ್ಷರಾಗಿದ್ದ ಎನ್ಸಿಎಫ್ ವರದಿಗೆ ಅವರು ನೀಡಿರುವ ಕೊಡುಗೆ, ಅದರ ಮೇಳಿನ ಅವರ ಪ್ರಭಾವ ಎಂದಿಗೂ ಅಳಿಸಲಾಗದ್ದು.
ಈ ವರದಿಗಳ ನಿರೂಪಣೆಯೆಂದರೆ ಯುನೈಟೆಡ್ ಪ್ರೋಗ್ರೆಸಿವ್ ಅಲಯನ್ಸ್ (ಯುಪಿಎ) ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಎರಡೂ ಸರ್ಕಾರಗಳು ವರದಿಗಳನ್ನು ಹತ್ತಿಕ್ಕಿದವು ಮತ್ತು ಆಯೋಗದ ಉದ್ದೇಶಗಳನ್ನು ಧಿಕ್ಕರಿಸಿದವು. ಮೊದಲ ವರದಿಯನ್ನು 2004ರಲ್ಲಿ ಸಲ್ಲಿಸಲಾಯಿತು ಮತ್ತು ಐದನೇ ಅಥವಾ ಅಂತಿಮ ವರದಿಯನ್ನು ಅಕ್ಟೋಬರ್ 2006ರಲ್ಲಿ ಸಲ್ಲಿಸಲಾಯಿತು. ವಾಸ್ತವದಲ್ಲಿ ಕೃಷಿ ಪಿಡುಗಿನ ಕುರಿತು ಸಂಸತ್ತಿನ ವಿಶೇಷ ಅಧಿವೇಶನ ಕರೆದಾಗ ಒಂದು ಗಂಟೆಯೂ ಕೃಷಿಯ ಬಗ್ಗೆ ವಿಶೇಷ ಚರ್ಚೆ ನಡೆದಿರಲಿಲ್ಲ. ಆಯೋಗದ ಮೊದಲ ವರದಿ ಸಲ್ಲಿಕೆಯಾಗಿ 19 ವರ್ಷಗಳು ಕಳೆದಿವೆ.
2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬರಲು ಸ್ವಾಮಿನಾಥನ್ ವರದಿ ಜಾರಿ, ಕನಿಷ್ಟ ಬೆಂಬಲ ಬೆಲೆ ಕುರಿತು ಅದು ನೀಡಿದ ಭರವಸೆಗಳೂ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ, ಅಧಿಕಾರಕ್ಕೆ ಬಂದ ಈ ಸರ್ಕಾರ ಅದನ್ನು ಜಾರಿ ಮಾಡಿದರೆ ಮಾರುಕಟ್ಟೆ ಬೆಲೆಯಲ್ಲಿ ಏರಿಳಿತವಾಗುತ್ತದೆ ಮತ್ತು ಹೀಗಾಗಿ ಈ ಸೂತ್ರವನ್ನು ಬಳಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿತು.
ಬಹುಶಃ ಎನ್ಡಿಎ ಮತ್ತು ಯುಒಇಎ ಸರ್ಕಾರಗಳು ಈ ವರದಿಗಳು ತುಂಬಾ ರೈತ ಸ್ನೇಹಿ ಎಂದು ಭಾವಿಸುತ್ತವೆ. ಏಕೆಂದರೆ ಎರಡೂ ಸರ್ಕಾರಗಳು ಕೃಷಿಯನ್ನು ಕಾರ್ಪೊರೇಟ್ ವಲಯದ ಮಡಿಲಿನಲ್ಲಿ ಇಡಲು ಆಸಕ್ತಿ ಹೊಂದಿದ್ದವು. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ವರದಿಯು ಕೃಷಿ ಕ್ಷೇತ್ರಕ್ಕೆ ಬಲವಾದ ಮತ್ತು ಸಕಾರಾತ್ಮಕ ಯೋಜನೆಯನ್ನು ಪ್ರಸ್ತುತಪಡಿಸಿದೆ. ಏಕೆಂದರೆ ಈ ಆಯೋಗಕ್ಕೆ ವಿಭಿನ್ನ ಚೌಕಟ್ಟನ್ನು ರಚಿಸಲು ಬಯಸುವ ವ್ಯಕ್ತಿ ಅಧ್ಯಕ್ಷರಾಗಿದ್ದರು. ಕೃಷಿ ಕ್ಷೇತ್ರದ ಬೆಳವಣಿಗೆಯನ್ನು ಅಳೆಯುವ ಸಂದರ್ಭದಲ್ಲಿ ಡಾ. ಸ್ವಾಮಿನಾಥನ್ ಕೇವಲ ಇಳುವರಿಯನ್ನು ನೋಡದೆ ರೈತರ ಆದಾಯ ಕುರಿತೂ ಯೋಚಿಸಬೇಕು ಎಂದು ನಂಬಿದ್ದರು.






