ಕಳೆದ ಚುನಾವಣೆಯಲ್ಲಿ ಬಬ್ಲು ಮೊದಲ ಬಾರಿಗೆ ಮತ ಚಲಾಯಿಸಲು ಹೋದಾಗ, ಅಧಿಕಾರಿಗಳು ಅವರನ್ನು ನೇರವಾಗಿ ಒಳಗೆ ಬಿಟ್ಟರು. ಅವರು ಸರತಿ ಸಾಲಿನಲ್ಲಿ ಕಾಯುವಂತಿರಲಿಲ್ಲ. ಆದರೆ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಪಾಲ್ಮಾ ಗ್ರಾಮದ ಮತಗಟ್ಟೆಗೆ ವೋಟ್‌ ಮಾಡಲೆಂದು ಹೋದ ಅವರಿಗೆ ತಾನು ಹೇಗೆ ಮತ ಹಾಕಬೇಕು ಎನ್ನುವುದರ ಕುರಿತು ಖಾತರಿಯಿರಲಿಲ್ಲ.

24 ವರ್ಷದ ಬಬ್ಲು ದೃಷ್ಟಿಹೀನ ವ್ಯಕ್ತಿಯಾಗಿದ್ದು, 2019ರ ಸಾರ್ವತ್ರಿಕ ಚುನಾವಣೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ಬ್ರೈಲ್ ಮತಪತ್ರ ಅಥವಾ ಬ್ರೈಲ್ ಇವಿಎಂ (ಎಲೆಕ್ಟ್ರಾನಿಕ್ ಮತದಾನ ಯಂತ್ರ) ಲಭ್ಯವಿರಲಿಲ್ಲ.

“ನನಗೆ ಏನು ಮಾಡುವುದೆಂದು ತಿಳಿಯಲಿಲ್ಲ. ಒಂದು ವೇಳೆ ನನಗೆ ಸಹಾಯ ಮಾಡುತ್ತಿರುವ ವ್ಯಕ್ತಿ ಚಿಹ್ನೆಗಳ ವಿಷಯದಲ್ಲಿ ಸುಳ್ಳು ಹೇಳಿದರೆ ಏನು ಮಾಡುವುದು?” ಎಂದು ಎರಡನೇ ವರ್ಷದ ಪದವಿಪೂರ್ವ ತರಗತಿಯ ವಿದ್ಯಾರ್ಥಿ ಬಬ್ಲು ಕೇಳುತ್ತಾರೆ. ಒಂದು ವೇಳೆ ಆ ವ್ಯಕ್ತಿ ನಿಜವನ್ನೇ ಹೇಳಿದರೂ ತನಗೆ ನೀಡಲಾಗಿರುವ ರಹಸ್ಯ ಮತದಾನದ ಹಕ್ಕನ್ನು ಇಲ್ಲಿ ಉಲ್ಲಂಘಿಸಿದಂತಾಗುವುದಿಲ್ಲವೆ ಎಂದು ಅವರು ವಾದಿಸುತ್ತಾರೆ. ಆದರೂ ಒಂದಷ್ಟು ಹಿಂಜರಿಕೆಯಿಂದಲೇ ಬಬ್ಲು ತನಗೆ ಸೂಚಿಸಲಾದ ಗುಂಡಿಯನ್ನು ಒತ್ತಿ ಮತ ಚಲಾಯಿಸಿ ಬಂದು ನಂತರ ಹೊರಗೆ ತಮ್ಮ ಮತವನ್ನು ಖಾತರಿಪಡಿಸಿಕೊಂಡರು. "ಅದೃಷ್ಟವಶಾತ್, ಆ ವ್ಯಕ್ತಿ ನನಗೆ ಸುಳ್ಳು ಹೇಳಲಿಲ್ಲ" ಎಂದು ಅವರು ಹೇಳುತ್ತಾರೆ.

ಭಾರತದ ಚುನಾವಣಾ ಆಯೋಗವು ಪಿಡಬ್ಲ್ಯೂಡಿ ಸ್ನೇಹಿ (ಅಂಗವಿಕಲರು) ಮತಗಟ್ಟೆಗಳಲ್ಲಿ ಬ್ರೈಲ್ ಮತಪತ್ರಗಳು ಮತ್ತು ಇವಿಎಂಗಳ ಬಳಕೆಯನ್ನು ಕಡ್ಡಾಯಗೊಳಿಸಿದೆ. "ಕಾಗದದ ಮೇಲೆ ಅನೇಕ ನಿಬಂಧನೆಗಳಿವೆ" ಎಂದು ಕೋಲ್ಕತ್ತಾ ಮೂಲದ ಶ್ರುತಿ ಅಂಗವೈಕಲ್ಯ ಹಕ್ಕುಗಳ ಕೇಂದ್ರದ ನಿರ್ದೇಶಕಿ ಶಂಪಾ ಸೇನ್‌ಗುಪ್ತಾ ಹೇಳುತ್ತಾರೆ. “ಆದರೆ ಅನುಷ್ಠಾನ ಸರಿಯಾಗಿ ನಡೆಯುತ್ತಿಲ್ಲ.”

ಸಾರ್ವತ್ರಿಕ ಚುನಾವಣೆಗಳು ಮತ್ತೆ ಸಮೀಪಿಸುತ್ತಿವೆ, ಆದರೆ 2024ರ ಸಾರ್ವತ್ರಿಕ ಚುನಾವಣೆಯ ಆರನೇ ಹಂತದಲ್ಲಿ ಮತ ಚಲಾಯಿಸಲು ಊರಿಗೆ ಹೋಗಬೇಕೋ ಬೇಡವೋ ಎನ್ನುವ ಗೊಂದಲದಲ್ಲಿ ಬಬ್ಲು ಇದ್ದಾರೆ. ಅವರು ಮೇ 25ರಂದು ಚುನಾವಣೆ ಎದುರಿಸಲಿರುವ ಪುರುಲಿಯಾಕ್ಕೆ ಸೇರಿದವರು.

PHOTO • Prolay Mondal

ಬಬ್ಲು ಕೈಬರ್ತಾ 25ರಂದು ನಡೆಯಲಿರುವ ಚುನಾವಣೆಯಲ್ಲಿ ಮತ ಹಾಕಲು ಊರಿಗೆ ಹೋಗಬೇಕೋ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ. ಕಳೆದ ಬಾರಿ ಮತ ಚಲಾಯಿಸಲು ಊರಿಗೆ ಹೋಗಿದ್ದಾಗ ಅಲ್ಲಿ ಬ್ರೈಲ್‌ ಮತಪತ್ರ ಅಥವಾ ಬ್ರೈಲ್‌ ಇವಿಎಮ್‌ ವ್ಯವಸ್ಥೆ ಇದ್ದಿರಲಿಲ್ಲ. ಆದರೆ ಅವರನ್ನು ಕಾಡುವುತ್ತಿರುವುದು ಇದೊಂದೆ ಚಿಂತೆಯಲ್ಲ. ಅವರ ಬಳಿ ಊರಿಗೆ ಹೋಗಲು ಸಾಕಾಗುವಷ್ಟು ಹಣವೂ ಇಲ್ಲ

ಬಬ್ಲು ಅವರನ್ನು ಸೌಲಭ್ಯಗಳ ಕೊರತೆಯೊಂದೇ ಕಾಡುತ್ತಿಲ್ಲ. ಪುರುಲಿಯಾ ತಲುಪಲು ಕೊಲ್ಕತಾದಿಂದ ಆರೇಳು ಗಂಟೆಗಳ ಕಾಲದ ರೈಲು ಪ್ರಯಾಣ ಮಾಡಬೇಕು. ಪ್ರಸ್ತುತ ಅವರು ಇಲ್ಲಿ ವಿಶ್ವವಿದ್ಯಾಲಯದ ಹಾಸ್ಟೆಲ್ಲಿನಲ್ಲಿ ತಂಗಿದ್ದಾರೆ.

“ನಾನು ಊರಿಗೆ ಹೋಗುವುದಕ್ಕೆ ಬೇಕಾದ ಹಣವನ್ನು ಒಟ್ಟುಗೂಡಿಸಬೇಕಿದೆ. ರೈಲು ಟಿಕೆಟ್‌ ಮತ್ತು ರೇಲ್ವೇ ನಿಲ್ದಾಣಕ್ಕೆ ಹೋಗುವ ಬಸ್ಸಿನ ಟಿಕೆಟಿಗೆ ಹಣ ಹೊಂದಿಸಬೇಕು” ಎಂದು ಬಬ್ಲು ಹೇಳುತ್ತಾರೆ. ಭಾರತದಲ್ಲಿ ಸಾಮಾನ್ಯ ಅಂಗವೈಕಲ್ಯ ಹೊಂದಿರುವ 26.8 ಮಿಲಿಯನ್ ಜನರಲ್ಲಿ, 18 ದಶಲಕ್ಷಕ್ಕೂ ಹೆಚ್ಚು ಜನರು ಗ್ರಾಮೀಣ ಪ್ರದೇಶಗಳಿಂದ ಬಂದವರು ಮತ್ತು 19 ಪ್ರತಿಶತದಷ್ಟು ಅಂಗವೈಕಲ್ಯಗಳು ದೃಷ್ಟಿ ಸಂಬಂಧಿತವಾಗಿವೆ (ಜನಗಣತಿ 2011). ಯೋಜನೆಗಳ ಅನುಷ್ಟಾನವು ನಗರ ಪ್ರದೇಶಗಳಿಗೆ ಸೀಮಿತವಾಗಿದೆ ಎಂದು ಶಂಪಾ ಹೇಳುತ್ತಾರೆ ಮತ್ತು "ಚುನಾವಣಾ ಆಯೋಗವು ಕ್ರಮ ತೆಗೆದುಕೊಂಡರೆ ಮಾತ್ರ ಈ ರೀತಿಯ ಜಾಗೃತಿ ಸಾಧ್ಯ ಮತ್ತು ಅದಕ್ಕೆ ಸರಿಯಾದ ಮಾಧ್ಯಮವೆಂದರೆ ರೇಡಿಯೋ" ಎಂದು ಹೇಳುತ್ತಾರೆ.

ಕೋಲ್ಕತಾದ ಜಾದವ್ಪುರ ವಿಶ್ವವಿದ್ಯಾಲಯದ ಅಂಗವಿಕಲರ ಕೇಂದ್ರದಲ್ಲಿ ಪರಿ ವರದಿಗಾರರೊಂದಿಗೆ ಮಾತನಾಡಿದ ಬಬ್ಲು “ಯಾರಿಗೆ ವೋಟು ಹಾಕಬೇಕು ಎನ್ನುವ ವಿಷಯದಲ್ಲಿ ಗೊಂದಲದಲ್ಲಿದ್ದೇನೆ” ಎನ್ನುತ್ತಾರೆ.

“ನಾನು ಒಂದು ಪಕ್ಷ ಅಥವಾ ಅದರ ನಾಯಕ ಒಳ್ಳೆಯ ಕೆಲಸ ಮಾಡುತ್ತಿದ್ದಾರೆಂದು ಅವರಿಗೆ ವೋಟು ಹಾಕಿದರೆ ಚುನಾವಣೆಯ ನಂತರ ಆತ ಪಕ್ಷ ಬದಲಾಯಿಸುವುದಿಲ್ಲವೆನ್ನುವುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ” ಎಂದು ಬಬ್ಲು ದೂರುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ, ವಿಶೇಷವಾಗಿ 2021ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಪಶ್ಚಿಮ ಬಂಗಾಳದಲ್ಲಿ ಹಲವಾರು ರಾಜಕಾರಣಿಗಳು ಪಕ್ಷಾಂತರ ಮಾಡಿದ್ದಾರೆ.

*****

ಬಬ್ಲು ಶಾಲೆ ಅಥವಾ ಕಾಲೇಜು ಶಿಕ್ಷಕರಾಗಲು ಬಯಸುತ್ತಾರೆ - ಸ್ಥಿರ ಆದಾಯವನ್ನು ಒದಗಿಸುವ ಸರ್ಕಾರಿ ಉದ್ಯೋಗ.

ರಾಜ್ಯದ ಶಾಲಾ ಸೇವಾ ಆಯೋಗ (ಎಸ್ಎಸ್‌ಸಿ) ಪ್ರಸ್ತುತ ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿದೆ. "ಆಯೋಗವು [ಯುವಕರಿಗೆ] ಉದ್ಯೋಗದ ಉತ್ತಮ ಮೂಲವಾಗಿತ್ತು" ಎಂದು ನಿವೃತ್ತ ಪ್ರಾಧ್ಯಾಪಕ ಮತ್ತು ರಾಜ್ಯದ ಹೈಯರ್ ಸೆಕೆಂಡರಿ ಕೌನ್ಸಿಲ್ ಅಧ್ಯಕ್ಷ ಗೋಪಾ ದತ್ತಾ ಹೇಳುತ್ತಾರೆ. "ಏಕೆಂದರೆ ಎಲ್ಲೆಡೆ ಶಾಲೆಗಳಿವೆ - ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳು ಮತ್ತು ದೊಡ್ಡ ನಗರಗಳಲ್ಲಿ." "ಶಾಲಾ ಶಿಕ್ಷಕರಾಗುವುದು ಅನೇಕ ಗುರಿಯಾಗಿತ್ತು" ಎಂದು ಅವರು ಹೇಳುತ್ತಾರೆ.

PHOTO • Prolay Mondal

'ಯಾರಿಗೆ ಮತ ಹಾಕಬೇಕೆಂದು ನನಗೆ ತಿಳಿಯುತ್ತಿಲ್ಲ' ಎಂದು ಬಬ್ಲು ಹೇಳುತ್ತಾರೆ. ಕಳೆದ ಐದು ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಹೊರಹೊಮ್ಮಿರುವ ಪ್ರವೃತ್ತಿಯಾದ ಫಲಿತಾಂಶಗಳು ಪ್ರಕಟವಾದ ನಂತರ ತಾನು ಮತ ಚಲಾಯಿಸಿದ ಅಭ್ಯರ್ಥಿ ಪಕ್ಷಾಂತರಗೊಳ್ಳಬಹುದು ಎಂದು ಅವರು ಕಳವಳ ವ್ಯಕ್ತಪಡಿಸುತ್ತಾರೆ

ಕಳೆದ ಏಳೆಂಟು ವರ್ಷಗಳಿಂದ ನಡೆದ ನೇಮಕಾತಿ ಪ್ರಕ್ರಿಯೆ ತನಿಖೆಗೆ ಒಳಪಟ್ಟಿದೆ. ಅಪಾರ್ಟ್ಮೆಂಟಿನಲ್ಲಿ ನೋಟಿನ ಕಟ್ಟುಗಳು ರಾಶಿ ಬಿದ್ದಿರುವುದು ಕಂಡುಬಂದಿದೆ, ಮಂತ್ರಿಗಳು ಜೈಲಿಗೆ ಹೋಗಿದ್ದಾರೆ, ನ್ಯಾಯಯುತ ಮತ್ತು ಪಾರದರ್ಶಕ ಪ್ರಕ್ರಿಯೆಗೆ ಒತ್ತಾಯಿಸಿ ಅಭ್ಯರ್ಥಿಗಳು ತಿಂಗಳುಗಟ್ಟಲೆ ಶಾಂತಿಯುತ ಧರಣಿ ನಡೆಸುತ್ತಿದ್ದಾರೆ ಮತ್ತು ಇತ್ತೀಚೆಗೆ, ಕಲ್ಕತ್ತಾ ಹೈಕೋರ್ಟ್ 25,000ಕ್ಕೂ ಹೆಚ್ಚು ಅಭ್ಯರ್ಥಿಗಳ ನೇಮಕಾತಿಯನ್ನು ರದ್ದುಗೊಳಿಸಿದೆ. ಮೇ ಮೊದಲ ವಾರದಲ್ಲಿ, ಭಾರತದ ಸುಪ್ರೀಂ ಕೋರ್ಟ್ ಈ ಆದೇಶವನ್ನು ತಡೆಹಿಡಿದಿತು, ಅದು ಅರ್ಹ ಮತ್ತು ಅನರ್ಹ ಅಭ್ಯರ್ಥಿಗಳನ್ನು ಪ್ರತ್ಯೇಕಿಸಬೇಕಿದೆ ಎಂದು ಹೇಳಿದೆ.

"ನನಗೆ ಭಯವಾಗುತ್ತಿದೆ" ಎಂದು ಬಬ್ಲು ಪರಿಸ್ಥಿತಿಯನ್ನು ಉಲ್ಲೇಖಿಸಿ ಹೇಳುತ್ತಾರೆ. "ದೃಷ್ಟಿ ವಿಕಲಚೇತನ 104 ಅಭ್ಯರ್ಥಿಗಳು ಇದ್ದಾರೆ ಎಂದು ನಾನು ಕೇಳಿದೆ. ಬಹುಶಃ ಅವರು ಅರ್ಹರಾಗಿರಬಹುದು. ಯಾರಾದರೂ ಅವರ ಬಗ್ಗೆ ಯೋಚಿಸುತ್ತಿದ್ದಾರೆಯೇ?"

ಎಸ್ಎಸ್ಸಿ ನೇಮಕಾತಿಯ ವಿಷಯದಲ್ಲಿ ಮಾತ್ರವಲ್ಲ, ಅಂಗವಿಕಲ ವ್ಯಕ್ತಿಗಳ ಅಗತ್ಯಗಳನ್ನು ಅಧಿಕಾರಿಗಳು ಹೆಚ್ಚಾಗಿ ಕಡೆಗಣಿಸಿದ್ದಾರೆ ಎಂದು ಬಬ್ಲು ಅಭಿಪ್ರಾಯಪಡುತ್ತಾರೆ. "ಪಶ್ಚಿಮ ಬಂಗಾಳದಲ್ಲಿ ದೃಷ್ಟಿ ವಿಕಲರಿಗೆ ಸಾಕಷ್ಟು ಶಾಲಾ ಸೌಲಭ್ಯಗಳಿಲ್ಲ" ಎಂದು ಅವರು ಹೇಳುತ್ತಾರೆ, "ಶಿಕ್ಷಣದ ಬಲವಾದ ಅಡಿಪಾಯವನ್ನು ರೂಪಿಸಲು ನಮಗೆ ವಿಶೇಷ ಶಾಲೆಗಳು ಬೇಕಾಗುತ್ತವೆ." ಆಯ್ಕೆಗಳ ಕೊರತೆಯಿಂದಾಗಿ ಅವರು ತಮ್ಮ ಮನೆಯನ್ನು ತೊರೆಯಬೇಕಾಯಿತು ಮತ್ತು ಅವರು ಬಯಸಿದರೂ, ಕಾಲೇಜನ್ನು ಆಯ್ಕೆ ಮಾಡುವ ಸಮಯ ಬಂದಾಗ ಹಿಂತಿರುಗಲು ಸಾಧ್ಯವಾಗಲಿಲ್ಲ. "ಅಂಗವಿಕಲರ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಯಾವುದೇ ಸರ್ಕಾರ ಹೇಳುವುದನ್ನು ನಾನು ಇದುವರೆಗೆ ಕೇಳಿಲ್ಲ.”

ಆದರೆ ಬಬ್ಲು ಭರವಸೆ ಕಳೆದುಕೊಂಡಿಲ್ಲ. “ನನಗೆ ಕೆಲಸ ಹುಡುಕುವುದಕ್ಕೆ ಇನ್ನೂ ಕೆಲವು ವರ್ಷಗಳಿವೆ” ಎಂದು ಹೇಳುವ ಅವರು “ಮುಂದೆ ಸಮಯ ಬದಲಾಗಬಹುದು” ಎನ್ನುತ್ತಾರೆ.

ಬಬ್ಲು ತನಗೆ 18 ವರ್ಷ ತುಂಬಿದಾಗಿನಿಂದ ಮನೆಯ ಏಕೈಕ ದುಡಿಯುವ ಕೈ ಎನ್ನಿಸಿಕೊಂಡಿದ್ದಾರೆ. ಅವರ ತಂಗಿ ಬುನುರಾನಿ ಕೈಬರ್ತಾ ಕೊಲ್ಕತಾ ಅಂಧರ ಶಾಲೆಯಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿ. ಅವರ ತಾಯಿ ಸಂಧ್ಯಾ ಪಾಮಾದಲ್ಲಿ ವಾಸಿಸುತ್ತಿದ್ದಾರೆ. ಈ ಕುಟುಂಬವು ಕೈಬರ್ತಾ ಸಮುದಾಯಕ್ಕೆ ಸೇರಿದೆ (ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಡಿ ಪಟ್ಟಿ ಮಾಡಲಾಗಿದೆ) ಅವರ ಸಾಂಪ್ರದಾಯಿಕ ಉದ್ಯೋಗ ಮೀನುಗಾರಿಕೆ. ಬಬ್ಲುವಿನ ತಂದೆ ಮೀನು ಹಿಡಿದು ಮಾರಾಟ ಮಾಡುತ್ತಿದ್ದರು, ಆದರೆ ಅವರು ಉಳಿಸಿದ್ದ ಅಲ್ಪಸ್ವಲ್ಪ ಹಣವನ್ನು ಕ್ಯಾನ್ಸರ್ ಪತ್ತೆಯಾದ ನಂತರ ಅವರ ಚಿಕಿತ್ಸೆಗಾಗಿ ಖರ್ಚು ಮಾಡಲಾಯಿತು.

2012ರಲ್ಲಿ ಬಬ್ಲು ಅವರ ತಂದೆ ನಿಧನರಾದ ನಂತರ, ಅವರ ತಾಯಿ ಕೆಲವು ವರ್ಷಗಳ ಕಾಲ ಹೊರಗೆ ಕೆಲಸ ಮಾಡಿದರು. "ಅವಳು ತರಕಾರಿ ವ್ಯಾಪಾರ ಮಾಡುತ್ತಿದ್ದಳು, ಆದರೆ ಈಗ, ಅವಳಿಗೆ 50 ವರ್ಷವಾಗಿದೆ, ಹೆಚ್ಚು ಕಷ್ಟಪಟ್ಟು ಕೆಲಸ ಮಾಡಲು ಸಾಧ್ಯವಿಲ್ಲ" ಎಂದು ಬಬ್ಲು ಹೇಳುತ್ತಾರೆ. ಸಂಧ್ಯಾ ಕೈವರ್ತಾ ವಿಧವಾ ಪಿಂಚಣಿಯಾಗಿ ಪ್ರತಿ ತಿಂಗಳು 1,000 ರೂ.ಗಳನ್ನು ಪಡೆಯುತ್ತಾರೆ. "ಕಳೆದ ವರ್ಷದ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಿಂದ ಅದು ಸಿಗುತ್ತಿದೆ" ಎಂದು ಬಬ್ಲು ಹೇಳುತ್ತಾರೆ.

PHOTO • Antara Raman

'ಇದುವರೆಗೆ ಅಂಗವಿಕಲರ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಯಾವುದೇ ಸರ್ಕಾರ ಹೇಳುವುದನ್ನು ನಾನು ಕೇಳಿಲ್ಲ'

ಅವರ ಸ್ವಂತ ಆದಾಯದ ಮೂಲವೆಂದರೆ ಟ್ಯೂಷನ್ ಮತ್ತು ಪುರುಲಿಯಾದಲ್ಲಿನ ಸ್ಥಳೀಯ ಸ್ಟುಡಿಯೋಗಳಲ್ಲಿ ಸಂಗೀತ ಸಂಯೋಜಿಸುವುದು. ಮನಬಿಕ್ ಪಿಂಚಣಿ ಯೋಜನೆಯಡಿ ಅವರು ಪ್ರತಿ ತಿಂಗಳು 1,000 ರೂ.ಗಳನ್ನು ಪಡೆಯುತ್ತಾರೆ. ತರಬೇತಿ ಪಡೆದ ಗಾಯಕನಾದ ಬಬ್ಲು ಕೊಳಲು ಮತ್ತು ಸಿಂಥಸೈಸರ್ ಸಹ ನುಡಿಸುತ್ತಾರೆ. ಅವರ ಮನೆಯಲ್ಲಿ ಸದಾ ಸಂಗೀತದ ಸಂಸ್ಕೃತಿ ಇತ್ತು ಎಂದು ಬಬ್ಲು ಹೇಳುತ್ತಾರೆ. "ನನ್ನ ಠಾಕೂರ್ದಾ [ತಂದೆಯ ಅಪ್ಪ] ರಬಿ ಕೈಬರ್ತಾ ಪುರುಲಿಯಾದಲ್ಲಿ ಪ್ರಸಿದ್ಧ ಜಾನಪದ ಕಲಾವಿದರಾಗಿದ್ದರು. ಅವರು ಕೊಳಲು ನುಡಿಸುತ್ತಿದ್ದರು." ಬಬ್ಲು ಜನಿಸುವ ಮೊದಲೇ ಅವರು ನಿಧನರಾದರೂ, ಅವರ ಮೊಮ್ಮಗ ತಾನು ಸಂಗೀತದ ಮೇಲಿನ ಪ್ರೀತಿಯನ್ನು ಆನುವಂಶಿಕವಾಗಿ ಪಡೆದಿರಬೇಕು ಎಂದು ಭಾವಿಸುತ್ತಾರೆ. "ನನ್ನ ತಂದೆಯೂ ಇದನ್ನೇ ಹೇಳುತ್ತಿದ್ದರು."

ಬಬ್ಲು ಮೊದಲ ಬಾರಿ ಕೊಳಲಿನ ದನಿ ಕೇಳಿದ್ದು ಪುರುಲಿಯಾದಲ್ಲಿದ್ದಾಗ. “ಬಾಂಗ್ಲಾ ದೇಶದ ಖುಲ್ನಾ ನಿಲಯದಿಂದ ಮತ್ತು ಅದು ಪ್ರಾರಂಭವಾಗುವ ಮೊದಲು ಅವರು ಪರಿಚಯವನ್ನು ನುಡಿಸುತ್ತಿದ್ದರು. ಆ ಸಂಗೀತ ಯಾವುದು ಎಂದು ನಾನು ನನ್ನ ತಾಯಿಯನ್ನು ಕೇಳಿದೆ.” ಆಗ ಅಮ್ಮ ಹೇಳಿದ ಮಾತು ಕೇಳಿ ಬಬ್ಲು ಗೊಂದಲಕ್ಕೆ ಒಳಗಾದರು. ಅವರಿಗೆ ಭ್ನೆಪು ಮಾತ್ರವೇ ಗೊತ್ತಿತ್ತು. ಅದೊಂದು ಜೋರಾಗಿ ಸದ್ದು ಮಾಡುವ ಕೊಳಲಾಗಿತ್ತು. ಅವರು ಅದನ್ನು ಬಾಲ್ಯದಲ್ಲಿ ನುಡಿಸಿದ್ದರು. ಕೆಲವು ವಾರಗಳ ನಂತರ, ಅವರ ತಾಯಿ ಸ್ಥಳೀಯ ಜಾತ್ರೆಯಿಂದ 20 ರೂಪಾಯಿ ಕೊಟ್ಟು ಕೊಳಲೊಂದನ್ನು ಖರೀದಿಸಿ ತಂದುಕೊಟ್ಟರು. ಆದರೆ ಅದನ್ನು ನುಡಿಸುವುದು ಹೇಗೆಂದು ಕಲಿಸಬಲ್ಲವರು ಅಲ್ಲಿ ಯಾರೂ ಇದ್ದಿರಲಿಲ್ಲ.

2011ರಲ್ಲಿ, ಪುರುಲಿಯಾದಲ್ಲಿನ ಅಂಧರ ಶಾಲೆಯಲ್ಲಿ ಆದ ಭಯಾನಕ ಅನುಭವದ ನಂತರ ಬಬ್ಲು ಕೋಲ್ಕತಾದ ಹೊರವಲಯದಲ್ಲಿರುವ ನರೇಂದ್ರಪುರದ ಅಂಧರ ಬಾಲಕರ ಅಕಾಡೆಮಿಗೆ ತೆರಳಿದರು. "ಒಂದು ರಾತ್ರಿ ಒಂದು ಘಟನೆ ನಡೆಯಿತು, ಅದು ನನ್ನನ್ನು ಹೆದರಿಸಿತು. ಶಾಲೆ ಬಹಳ ಕಳಪೆ ಮೂಲಸೌಕರ್ಯಗಳನ್ನು ಹೊಂದಿತ್ತು ಮತ್ತು ವಿದ್ಯಾರ್ಥಿಗಳನ್ನು ರಾತ್ರಿಯಲ್ಲಿ ಒಬ್ಬಂಟಿಯಾಗಿ ಬಿಡಲಾಗುತ್ತಿತ್ತು. ಆ ಘಟನೆಯ ನಂತರ, ನನ್ನನ್ನು ಮನೆಗೆ ಕರೆದೊಯ್ಯುವಂತೆ ನಾನು ನನ್ನ ಹೆತ್ತವರನ್ನು ವಿನಂತಿಸಿದೆ" ಎಂದು ಬಬ್ಲು ಹೇಳುತ್ತಾರೆ.

ಈ ಹೊಸ ಶಾಲೆಯಲ್ಲಿ, ಬಬ್ಲು ಅವರ ಸಂಗೀತ ಅಭ್ಯಾಸಕ್ಕೆ ಪ್ರೋತ್ಸಾಹ ದೊರೆಯಿತು. ಅವರು ಕೊಳಲು ಮತ್ತು ಸಿಂಥಸೈಸರ್ ಎರಡನ್ನೂ ನುಡಿಸಲು ಕಲಿತರು ಮತ್ತು ಅಲ್ಲಿನ ಶಾಲಾ ಆರ್ಕೆಸ್ಟ್ರಾದ ಭಾಗವಾಗಿದ್ದರು. ಈಗ, ಪುರುಲಿಯಾದಲ್ಲಿ ಕಲಾವಿದರು ಹಾಡಿದ ಹಾಡುಗಳನ್ನು ರೆಕಾರ್ಡ್ ಮಾಡುವುದರ ಜೊತೆಗೆ ಅವರು ಆಗಾಗ ಸಮಾರಂಭಗಳಲ್ಲಿ ಪ್ರದರ್ಶನವನ್ನೂ ನೀಡುತ್ತಾರೆ. ಪ್ರತಿ ಸ್ಟುಡಿಯೋ ರೆಕಾರ್ಡಿಂಗ್ ಒಂದಕ್ಕೆ ಅವರು 500 ರೂ.ಗಳನ್ನು ಗಳಿಸುತ್ತಾರೆ. ಆದರೆ ಇದು ಸ್ಥಿರವಾದ ಆದಾಯದ ಮೂಲವಲ್ಲ ಎಂದು ಬಬ್ಲು ಹೇಳುತ್ತಾರೆ.

"ನಾನು ಸಂಗೀತವನ್ನು ವೃತ್ತಿಯಾಗಿ ಮುಂದುವರಿಸಲು ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ, "ಅದಕ್ಕೆ ಮೀಸಲಿಡಬಹುದಾದಷ್ಟು ಸಮಯವಿಲ್ಲ ನನ್ನ ಬಳಿ. ನಮ್ಮಲ್ಲಿ ಹಣವಿಲ್ಲದ ಕಾರಣ ನನಗೆ ಸಾಕಷ್ಟು ಕಲಿಯಲು ಸಾಧ್ಯವಾಗಲಿಲ್ಲ. ಈಗ, ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಹೆಗಲಿಗೇರಿದೆ.”

ಅನುವಾದ: ಶಂಕರ. ಎನ್. ಕೆಂಚನೂರು

Sarbajaya Bhattacharya

ସର୍ବଜୟା ଭଟ୍ଟାଚାର୍ଯ୍ୟ ପରୀର ଜଣେ ବରିଷ୍ଠ ସହାୟିକା ସମ୍ପାଦିକା । ସେ ମଧ୍ୟ ଜଣେ ଅଭିଜ୍ଞ ବଙ୍ଗଳା ଅନୁବାଦିକା। କୋଲକାତାରେ ରହୁଥିବା ସର୍ବଜୟା, ସହରର ଇତିହାସ ଓ ଭ୍ରମଣ ସାହିତ୍ୟ ପ୍ରତି ଆଗ୍ରହୀ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Sarbajaya Bhattacharya
Editor : Priti David

ପ୍ରୀତି ଡେଭିଡ୍‌ ପରୀର କାର୍ଯ୍ୟନିର୍ବାହୀ ସମ୍ପାଦିକା। ସେ ଜଣେ ସାମ୍ବାଦିକା ଓ ଶିକ୍ଷୟିତ୍ରୀ, ସେ ପରୀର ଶିକ୍ଷା ବିଭାଗର ମୁଖ୍ୟ ଅଛନ୍ତି ଏବଂ ଗ୍ରାମୀଣ ପ୍ରସଙ୍ଗଗୁଡ଼ିକୁ ପାଠ୍ୟକ୍ରମ ଓ ଶ୍ରେଣୀଗୃହକୁ ଆଣିବା ଲାଗି ସ୍କୁଲ ଓ କଲେଜ ସହିତ କାର୍ଯ୍ୟ କରିଥାନ୍ତି ତଥା ଆମ ସମୟର ପ୍ରସଙ୍ଗଗୁଡ଼ିକର ଦସ୍ତାବିଜ ପ୍ରସ୍ତୁତ କରିବା ଲାଗି ଯୁବପିଢ଼ିଙ୍କ ସହ ମିଶି କାମ କରୁଛନ୍ତି।

ଏହାଙ୍କ ଲିଖିତ ଅନ୍ୟ ବିଷୟଗୁଡିକ Priti David
Illustration : Antara Raman

ଅନ୍ତରା ରମଣ ଜଣେ ଚିତ୍ରକର ଏବଂ ସାମାଜିକ ପ୍ରକ୍ରିୟା ଓ ପୌରାଣିକ ଚିତ୍ର ପ୍ରତି ଆଗ୍ରହ ରହିଥିବା ଜଣେ ୱେବସାଇଟ୍ ଡିଜାଇନର୍। ବେଙ୍ଗାଲୁରୁର ସୃଷ୍ଟି ଇନଷ୍ଟିଚ୍ୟୁଟ୍ ଅଫ୍ ଆର୍ଟ, ଡିଜାଇନ୍ ଏବଂ ଟେକ୍ନୋଲୋଜିର ସ୍ନାତକ ଭାବେ ସେ ବିଶ୍ୱାସ କରନ୍ତି ଯେ କାହାଣୀ ବର୍ଣ୍ଣନା ଏବଂ ଚିତ୍ରକଳା ସହଜୀବୀ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Antara Raman
Photographs : Prolay Mondal

ପ୍ରଳୟ ମଣ୍ଡଳ ଯାଦବପୁର ବିଶ୍ୱବିଦ୍ୟାଳୟର ବଙ୍ଗଳା ବିଭାଗରୁ ଏମ୍‌.ଫିଲ୍‌. ଉପାଧି ହାସଲ କରିଛନ୍ତି । ସଂପ୍ରତି ସେ ଏହି ବିଶ୍ୱବିଦ୍ୟାଳୟର ସ୍କୁଲ ଅଫ୍‌ କଲଚରାଲ ଟେକ୍‌ସଟସ ଆଣ୍ଡ ରେକର୍ଡସ୍‌ରେ କାର୍ଯ୍ୟରତ ଅଛନ୍ତି ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Prolay Mondal
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru