ಈ ಅಕ್ಟೋಬರ್ ತಿಂಗಳ ಆರಂಭದ ಆ ರಾತ್ರಿ ಗುಡಿಸಲಿನಲ್ಲಿ ದೀಪಗಳು ಇದ್ದಕ್ಕಿದ್ದಂತೆ ಆರಿದ ತಕ್ಷಣ, ಶೋಭಾ ಚವಾಣ್ ಅವರ ಕುಟುಂಬಕ್ಕೆ ಇಲ್ಲಿ ಏನೋ ಸರಿಯಿಲ್ಲ ಎನ್ನಿಸತೊಡಗಿತ್ತು. ಆದರೆ ಅವರು ಏನಾಗುತ್ತಿದೆಯೆಂದು ತಿಳಿಯುವ ಮೊದಲೇ, ಅಲ್ಲಿಗೆ ಬಂದಿದ್ದ ಜನರ ಗುಂಪು ಒಳಗೆ ನುಗ್ಗಿ ಎಂಟು ಜನರ ಕುಟುಂಬವನ್ನು ರಾಡ್ಗಳು ಮತ್ತು ದೊಣ್ಣೆಗಳಿಂದ ನಿರ್ದಯವಾಗಿ ಹೊಡೆಯಲಾರಂಭಿಸಿದರು. ಒಂದು ಗಂಟೆಯ ನಂತರ, ಅವರ ಕುಟುಂಬದಲ್ಲಿ ಏಳು ಜನರಷ್ಟೇ ಉಳಿದಿದ್ದರು- ಶೋಭಾ ಅವರ ಎರಡು ವರ್ಷದ ಮೊಮ್ಮಗ ದಾಳಿಯಲ್ಲಿ ಕೊಲ್ಲಲ್ಪಟ್ಟನು. ಅದರ ಮರುದಿನ ಅವರ ಕುಟುಂಬದಲ್ಲಿ ಆರು ಜನರಷ್ಟೇ ಆದರು, ಈಗ ಶೋಭಾ ಅವರ ಗಾಯಗೊಂಡ ಪತಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ತಡರಾತ್ರಿ ಹನ್ನೆರಡಕ್ಕೂ ಮೊದಲು ಮನೆಗೆ ನುಗ್ಗಿದ ದಾಳಿಕೋರ ಗುಂಪು ಕುಟುಂಬದ ಎಲ್ಲಾ ಸದಸ್ಯರನ್ನೂ ಒದೆಯುವುದು, ಥಳಿಸುವುದರ ಮೂಲಕ ಹಲ್ಲೆ ಮಾಡಲಾರಂಭಿಸಿತು. ಕುಟುಂಬದಲ್ಲಿ ಶುಭಾ (65) ಅವರ ಪತಿ ಮಾರುತಿ (70) ಅವರ ಮಗ ಮತ್ತು ಸೊಸೆ ಹಾಗೂ ಒಬ್ಬ ಮೊಮ್ಮಗ ಮೊಮ್ಮಗಳು ಇದ್ದರು. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅವರ ಊರಿನ ಅಂಚಿನಲ್ಲಿದ್ದ ಕುಟುಂಬದ ಗುಡಿಸಲು ಮತ್ತು ಅವರ ಕುರಿ ಕೊಟ್ಟಿಗೆಯನ್ನೂ ಸುಟ್ಟು ಹಾಕಲಾಯಿತು. ಶೋಭಾ ಅವರು ಪೊಲೀಸರು ಸಲ್ಲಿಸಿರುವ ಮೊದಲ ಮಾಹಿತಿ ವರದಿಯಲ್ಲಿ (ಎಫ್ ಐಆರ್) ಆ ರಾತ್ರಿಯ ಘಟನೆಗಳನ್ನು ವಿವರಿಸಿದ್ದಾರೆ.
"ಆ ರಾತ್ರಿ ನಾವು ಮೂವರು ಅತ್ಯಾಚಾರಕ್ಕೊಳಗಾದೆವು" ಎಂದು ಶೋಭಾ ಅವರ 30 ವರ್ಷದ ವಿವಾಹಿತ ಮಗಳು ಅನಿತಾ ಹೇಳುತ್ತಾರೆ. ದಾಳಿಕೋರರು ತನ್ನ ಮೇಲೆ, ತನ್ನ 23 ವರ್ಷದ ನಾದಿನಿ ಮತ್ತು 17 ವರ್ಷದ ಸೋದರ ಸೊಸೆಯ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಅವರು ಹೇಳುತ್ತಾರೆ.
ದಾಳಿಕೋರರ ಗುಂಪು ಅನಿತಾರ ತಾಯಿಯ ಗುಡಿಸಲಿನಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಅವರ ಗುಡಿಸಲಿಗೂ ದಾಳಿಯಿಕ್ಕಿ ರಾತ್ರಿಯ ಕರಾಳ ಸಮಯದಲ್ಲಿ ಕುಟುಂಬವನ್ನು ಹಿಂಸಿಸಿ ಅತ್ಯಾಚಾರವೆಸಗಿತು. "ಅವರು ಬೆಳಗಿನ ಜಾವ ಸುಮಾರು 2 ಗಂಟೆಯ ಹೊತ್ತಿಗೆ ನಮ್ಮ ಗುಡಿಸಲನ್ನು ತಲುಪಿದರು" ಎಂದು ಅನಿತಾ ಹೇಳುತ್ತಾರೆ. "ಅವರು ನಮ್ಮನ್ನು ಹಳ್ಳಿಯಿಂದ ಓಡಿಸಲು ಬಯಸಿದ್ದರು. ನಮ್ಮ ಬಳಿ ಮೋಟಾರು ಬೈಕಿಗೆ ಬೆಂಕಿ ಹಚ್ಚಲಾಗಿತ್ತು, ಮತ್ತು ನಮ್ಮ ಜಾನುವಾರುಗಳನ್ನು ನಮ್ಮಿಂದ ಕದಿಯಲಾಯಿತು." ಅವರು ಆಕೆಯ ಗುಡಿಸಲಿಗೂ ಬೆಂಕಿ ಹಚ್ಚಿದರು.
ಆರೋಪಿಗಳು ಚವಾಣ್ ಕುಟುಂಬದ ಮೇಲೆ ಹಲ್ಲೆ ನಡೆಸುತ್ತಿದ್ದಾಗ, "ನೀವು ಕಳ್ಳರು. ನೀವು ನಮ್ಮ ಊರಿನಲ್ಲಿರುವುದು ನಮಗೆ ಇಷ್ಟವಿಲ್ಲ." ಎಂದು ಹೇಳುತ್ತಲೇ ಇದ್ದರು ಎಂದು ಶೋಭಾ ಎಫ್ಐಆರ್ನಲ್ಲಿ ಹೇಳಿದ್ದಾರೆ.
ಚವಾಣರು ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಪಂಗಡವೆಂದು ಪಟ್ಟಿ ಮಾಡಲಾಗಿರುವ ಪಾರ್ಧಿ ಸಮುದಾಯಕ್ಕೆ ಸೇರಿದವರು. ಪಾರ್ಧಿಗಳು ಒಂದು ಕಾಲದಲ್ಲಿ ಬೇಟೆಗಾರರಾಗಿದ್ದರು, ಆದರೆ ವಸಾಹತುಶಾಹಿ ಆಳ್ವಿಕೆಯಲ್ಲಿ, ಸಮುದಾಯವನ್ನು 1871ರ ಕ್ರಿಮಿನಲ್ ಟ್ರೈಬ್ಸ್ ಕಾಯ್ದೆ (ಸಿಟಿಎ) ಅಡಿಯಲ್ಲಿ 'ಕ್ರಿಮಿನಲ್ ಬುಡಕಟ್ಟು' ಎಂದು ಗುರುತಿಸಲಾಯಿತು. ಅವರನ್ನು 'ಹುಟ್ಟಿನಿಂದ ಅಪರಾಧಿಗಳು' ಎಂದು ಕರೆಯಲಾಗುತ್ತಿತ್ತು ಮತ್ತು ಅವರ ಚಲನವಲನಗಳನ್ನು ಆಗಿನಿಂದ ನಿರ್ಬಂಧಿಸಲಾಯಿತು. ಭಾರತ ಸರ್ಕಾರವು ಸಿಟಿಎಯನ್ನು ರದ್ದುಗೊಳಿಸಿದಾಗ, ಪಾರ್ಧಿಗಳು ಸೇರಿದಂತೆ 198 'ಅಪರಾಧಿ ಬುಡಕಟ್ಟು'ಗಳನ್ನು ' ಡಿ-ನೋಟಿಫೈ' ಮಾಡಲಾಯಿತು. ಆದರೆ ಸಿಟಿಎ ಬದಲಿಗೆ ಬಂದ 1952ರ ಹ್ಯಾಬಿಚುವಲ್ ಅಫೆಂಡರ್ಸ್ ಆಕ್ಟ್ ಆ ಸಮುದಾಯಗಳಿಗೆ ಅಂಟಿದ 'ಕ್ರಿಮಿನಲ್' ಎನ್ನುವ ಹಣೆಪಟ್ಟಿಯನ್ನು ಕಳಚಲು ಸಹಾಯ ಮಾಡಲಿಲ್ಲ.







