“ನಾವು ಇಲ್ಲಿಗೆ ಬರಲು ಸೇಟ್‌ಗಳಿಂದ [ಕೃಷಿ ಮಾಲೀಕರಿಂದ] 1,000 ರೂಪಾಯಿ ಸಾಲ ಪಡೆದಿದ್ದೇವೆ. ಇದಕ್ಕೆ ಪ್ರತಿಯಾಗಿ, ನಾವು ಅವರ ಹೊಲಗಳಲ್ಲಿ 4-5 ದಿನಗಳ ಕಾಲ ಕೆಲಸ ಮಾಡುತ್ತೇವೆ” ಎಂದು 45 ವರ್ಷದ ವಿಜಯ್‌ಬಾಯಿ ಗಂಗೋರ್ಡೆ ಹೇಳಿದರು. ಅವರು  ನೀಲಿ ಮತ್ತು ಕಿತ್ತಳೆ ಬಣ್ಣದ ಟೆಂಪೊದಲ್ಲಿ ಜನವರಿ 23ರಂದು ಮಧ್ಯಾಹ್ನ ನಾಸಿಕ್ ತಲುಪಿದರು, ಮುಂಬೈ ತಲುಪಲಿರುವ ವಾಹನ ಜಾಥಾವನ್ನು ಸೇರಿಕೊಳ್ಳಲು ನಗರದ ಗಾಲ್ಫ್ ಕ್ಲಬ್ ಮೈದಾನವನ್ನು ತಲುಪಿದ ಮೊದಲಿಗರಲ್ಲಿ ಇವರೂ ಇದ್ದಾರೆ.

ವಿಜಯಬಾಯಿಯವರ 41 ವರ್ಷದ ಸೋದರಸಂಬಂಧಿ, ತಾರಾಬಾಯಿ ಜಾಧವ್, ನಾಸಿಕ್ ಜಿಲ್ಲೆಯ ದಿಂಡೋರಿ ತಾಲ್ಲೂಕಿನಲ್ಲಿರುವ ಅವರ ಹಳ್ಳಿಯಾದ ಮೊಹಾದಿಯಿಂದ ಅವರೊಂದಿಗೆ ಪ್ರಯಾಣಿಸುತ್ತಿದ್ದರು. ಅವರಿಬ್ಬರೂ ಅಲ್ಲಿ ಕೃಷಿ ಕಾರ್ಮಿಕರಾಗಿ ದಿನಕ್ಕೆ ರೂ. 200-250 ದುಡಿಯುತ್ತಾರೆ.

ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಇಲ್ಲಿಂದ 180 ಕಿ.ಮೀ ದೂರದಲ್ಲಿರುವ ಮುಂಬೈನ ಆಜಾದ್ ಮೈದಾನದಲ್ಲಿ ನಡೆಯಲಿರುವ ಆಂದೋಲನದಲ್ಲಿ ಭಾಗವಹಿಸಲು ಇಬ್ಬರು ಸಹೋದರಿಯರು ಇಲ್ಲಿಗೆ ಬಂದಿದ್ದಾರೆ. ಮುಖ್ಯವಾಗಿ ನಾಂದೇಡ್, ನಂದೂರ್ಬಾರ್, ನಾಸಿಕ್ ಮತ್ತು ಪಾಲ್ಘರ್ ನಿಂದ ಸುಮಾರು 15 ಸಾವಿರ ರೈತರು ಇಲ್ಲಿ ಜಮಾಯಿಸಿದ್ದಾರೆ. "ನಾವು ನಮ್ಮ ಉಪಜೀವಿಕಕ್ಕಾಗಿ ( ಜೀವನೋಪಾಯಕ್ಕಾಗಿ) ಪ್ರದರ್ಶನ ಮೆರವಣಿಗೆ ಮಾಡುತ್ತಿದ್ದೇವೆ" ಎಂದು ತಾರಾಬಾಯಿ ಹೇಳುತ್ತಾರೆ.

ದೆಹಲಿಯ ಗಡಿಯಲ್ಲಿ ಪ್ರತಿಭಟನಾ ನಿರತ ರೈತರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ದಕ್ಷಿಣ ಮುಂಬೈಯಲ್ಲಿರುವ ರಾಜ್ಯಪಾಲರ ನಿವಾಸವಾದ ರಾಜ ಭವನದವರೆಗೆ ಮೆರವಣಿಗೆ ಮತ್ತು ಅಲ್ಲಿ ಧರಣಿಯನ್ನು ಜನವರಿ 25-26ರಂದು ಸಯುಂಕ್ತ ಶೆಟ್ಕರಿ ಕಮಗರ್ ಮೋರ್ಚಾ ಆಯೋಜಿಸಿದೆ. ಮಹಾರಾಷ್ಟ್ರದ 21 ಜಿಲ್ಲೆಗಳ ಸಂಘಟಿತ ರೈತರು ಈ ಪ್ರತಿಭಟನೆಗಳಿಗಾಗಿ ಮುಂಬೈಯಲ್ಲಿ ಸೇರುತ್ತಿದ್ದಾರೆ.

PHOTO • Shraddha Agarwal

ಮೇಲಿನ ಎಡ: ನಾಸಿಕ್‌ನಲ್ಲಿ ವಿಜಯಬಾಯಿ ಗಂಗೋರ್ಡೆ (ಎಡ) ಮತ್ತು ತಾರಾಬಾಯಿ ಜಾಧವ್. ಮೇಲಿನ ಬಲ: ಮುಕುಂದ ಕೊಂಗಿಲ್ (ಟೋಪಿ ಧರಿಸಿರುವವರು) ಮತ್ತು ಜಾನಿಬಾಯಿ ಧಂಗರೆ (ಹಿಂಭಾಗದಲ್ಲಿ, ನೀಲಿ ಸೀರೆಯಲ್ಲಿ) ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಕೆಳಗೆ: ಮುಂಬೈಗೆ ಹೋಗಲು ನಾಸಿಕ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಸುಮಾರು 15 ಸಾವಿರ ರೈತರು ಜಮಾಯಿಸಿದ್ದಾರೆ

ಕಳೆದ ಎರಡು ತಿಂಗಳಿನಿಂದ, ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣದಿಂದ ಬಂದ ಲಕ್ಷಾಂತರ ರೈತರು ದೆಹಲಿಯ ಗಡಿಯಲ್ಲಿರುವ ಐದು ತಾಣಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರವು ಮೊದಲು ಜೂನ್ 5, 2020 ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಮಸೂದೆಯಾಗಿ ಪರಿಚಯಿಸಲಾಯಿತು ಮತ್ತು ಅದೇ ತಿಂಗಳ 20ರಂದು ಕಾನೂನಾಗಿ ಅಂಗೀಕರಿಸಲಾಯಿತು. ಈ ಕಾನೂನುಗಳ ವಿರುದ್ಧವೇ ರೈತರು ದೆಹಲಿಯ ಗಡಿಗಳಲ್ಲಿ ಹೋರಾಡುತ್ತಿದ್ದಾರೆ.

ಆ ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020.

ರೈತರು ಈ ಮಮೂರು ಕಾನೂನುಗಳನ್ನು ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಗೆಡವುತ್ತವೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದಲೂ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

ಪರಿಶಿಷ್ಟ ಪಂಗಡದ ಕೋಲಿ ಮಲ್ಹಾರ್ ಆದಿವಾಸಿ ಸಮುದಾಯಕ್ಕೆ ಸೇರಿದ ವಿಜಯಬಾಯಿ ಮತ್ತು ತಾರಾಬಾಯಿ ಅವರು ಮುಂಬೈ ಹೋಗಲು ಮತ್ತು  ಊರಿಗೆ ಹಿಂತಿರುಗಲು ಟೆಂಪೋದಲ್ಲಿ ಸೀಟಿಗೆ ತಲಾ 1,000 ರೂ ನೀಡಿದ್ದಾರೆ. ಅವರು ಯಾವುದೇ ಉಳಿತಾಯದ ಹಣವಿಲ್ಲದ ಕಾರಣ ಈ ಮೊತ್ತಕ್ಕಾಗಿ ಸಾಲ ಮಾಡಿದರು. "[ಕೋವಿಡ್ -19] ಲಾಕ್‌ಡೌನ್ ಸಮಯದಲ್ಲಿ ನಮಗೆ ಯಾವುದೇ ಕೆಲಸ ಇರಲಿಲ್ಲ" ಎಂದು ತಾರಾಬಾಯ್ ಹೇಳಿದರು. "ಪ್ರತಿ ಕುಟುಂಬಕ್ಕೆ 20 ಕಿಲೋ ಗೋಧಿ ಉಚಿತವಾಗಿ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಭರವಸೆ ನೀಡಿತ್ತು, ಆದರೆ ಕೇವಲ 10 ಕಿಲೋ ಮಾತ್ರ ವಿತರಿಸಿದರು."

Left: Many had packed a simple meal from home for dinner. Right: At night, the protestors lit up the slogan 'Save Farmers, Save Nation'
PHOTO • Shraddha Agarwal
Left: Many had packed a simple meal from home for dinner. Right: At night, the protestors lit up the slogan 'Save Farmers, Save Nation'
PHOTO • Shraddha Agarwal

ಎಡ: ಹಲವರು ಮನೆಯಿಂದ ಸರಳವಾದ ಊಟವನ್ನು ರಾತ್ರಿಯೂಟಕ್ಕೆ ಕಟ್ಟಿಕೊಂಡು ತಂದಿದ್ದರು. ಬಲ: ರಾತ್ರಿಯಲ್ಲಿ ಪ್ರತಿಭಟನಾಕಾರರು 'ರೈತರನ್ನು ಉಳಿಸಿ, ರಾಷ್ಟ್ರವನ್ನು ಉಳಿಸಿ' ಎಂಬ ಘೋಷಣೆಯನ್ನು ಬೆಳಗಿಸಿದರು

ವಿಜಯಬಾಯಿ ಮತ್ತು ತಾರಾಬಾಯಿ ಪ್ರತಿಭಟನಾ ಮೆರವಣಿಗೆಯಲ್ಲಿ ನಡೆಯುತ್ತಿರುವುದು ಇದೇ ಮೊದಲಲ್ಲ. "ನಾವು 2018 ಮತ್ತು 2019ರ ಎರಡೂ ಮೆರವಣಿಗೆಗಳಲ್ಲಿ ಭಾಗವಹಿಸಿದ್ದೆವು" ಎಂದು ಅವರು ಹೇಳುತ್ತಾರೆ, ಮಾರ್ಚ್ 2018ರಲ್ಲಿ ನಾಸಿಕ್‌ನಿಂದ ಮುಂಬೈಗೆ ಕಿಸಾನ್ ಲಾಂಗ್ ಮಾರ್ಚ್ ನಡೆದಿತ್ತು ಮತ್ತು ನಂತರ 2019ರ ಫೆಬ್ರವರಿಯಲ್ಲಿ ಫಾಲೋ-ಅಪ್ ರ‍್ಯಾಲಿ ನಡೆದಿತ್ತು, ಈ ರ‍್ಯಾಲಿಗಳಲ್ಲಿ ರೈತರು ಭೂ ಹಕ್ಕುಗಳು, ಕೃಷಿ ಸರಕುಗಳಿಗೆ ನ್ಯಾಯಯುತ ಬೆಲೆಗಳು, ಸಾಲ ಮನ್ನಾ ಮತ್ತು ಬರ ಪರಿಹಾರಕ್ಕಾಗಿ ತಮ್ಮ ಬೇಡಿಕೆಗಳನ್ನು ಮಂಡಿಸಿದ್ದರು. ಮತ್ತು ಹೊಸ ಕಾನೂನುಗಳ ವಿರುದ್ಧ ನಾಸಿಕ್‌ನಿಂದ ಬರುತ್ತಿರುವ ಮೊದಲ ಜಾಥಾವೂ ಇದಲ್ಲ. ಡಿಸೆಂಬರ್ 21, 2020ರಂದು ಸುಮಾರು 2 ಸಾವಿರ ರೈತರು ನಾಸಿಕ್‌ನಲ್ಲಿ ಜಮಾಯಿಸಿದ್ದರು. ಮತ್ತು ಅವರಲ್ಲಿ ಸಾವಿರ ಜನರು ದೆಹಲಿಯಲ್ಲಿ ಹೋರಾಡುತ್ತಿರುವ ರೈತ ಸಹೋದರರ ಬೆಂಬಲಕ್ಕಾಗಿ ದೆಹಲಿಗೆ ತೆರಳಿದ್ದರು.

"ಆದಿವಾಸಿಗಳಾದ ನಮಗೆ ನಮ್ಮ ಹಕ್ಕುಗಳನ್ನು ಪಡೆಯಲು ಪ್ರದರ್ಶನ ಮೆರವಣಿಗೆ ಮಾಡುವುದೊಂದೇ ದಾರಿ. ಸರ್ಕಾರ ನಮ್ಮ ದನಿಯನ್ನು ಕೇಳುವಂತೆ ಮಾಡಲು ಇದರಿಂದ ಮಾತ್ರ ಸಾಧ್ಯ." ಎಂದು ವಿಜಯ್‌ಬಾಯ್, ತಾರಾಬಾಯ್ ಅವರೊಂದಿಗೆ ಗಾಲ್ಫ್ ಕ್ಲಬ್ ಮೈದಾನದ ಮಧ್ಯಭಾಗಕ್ಕೆ ತೆರಳಿ, ಎಐಕೆಎಸ್ ನಾಯಕರ ಭಾಷಣಗಳನ್ನು ಕೇಳಲು ಹೊರಡುತ್ತಾ ತಿಳಿಸಿದರು.

ಎಲ್ಲಾ ವಾಹನಗಳು ಒಟ್ಟಾದ ನಂತರ, ಮೆರವಣಿಗೆ ಸಂಜೆ 6ರ ಸುಮಾರಿಗೆ ನಾಸಿಕ್‌ನಿಂದ ಹೊರಟಿತು. ನಾಸಿಕ್ ಜಿಲ್ಲೆಯ ಇಗತ್‌ಪುರಿ ತಾಲ್ಲೂಕಿನ ಘಟಂಡೇವಿ ದೇವಸ್ಥಾನದಲ್ಲಿ ರಾತ್ರಿಯ ತಂಗುವಿಕೆಗಾಗಿ ಈ  ಹೋರಾಟಗಾರರ ತಂಡ ನಿಂತಿತು. ಹಲವರು ಸರಳ ಚಟ್ನಿ- ರೊಟ್ಟಿಯನ್ನು ಊಟಕ್ಕೆ ತಂದಿದ್ದರು. ಊಟದ ನಂತರ, ದೇವಾಲಯದ ಪಕ್ಕದಲ್ಲಿ ನೆಲದ ಮೇಲೆ ಹಾಸಲಾಗಿದ್ದ ಟಾರ್ಪಾಲಿನ್ ಹಾಳೆಗಳ ಮೇಲೆ ದಪ್ಪ ಹೊದಿಕೆಗಳನ್ನು ಹರಡಿ ನಿದ್ರೆಗೆ ಜಾರಿದರು.

ಆಜಾದ್ ಮೈದಾನವು 135 ಕಿಲೋಮೀಟರ್ ದೂರದಲ್ಲಿತ್ತು.

The protesting farmers walked down the Kasara ghat raising slogans against the new farm laws
PHOTO • Shraddha Agarwal
PHOTO • Shraddha Agarwal

ಪ್ರತಿಭಟನಾ ರೈತರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಕಸರಾ ಘಾಟ್‌ನಲ್ಲಿ ಪ್ರದರ್ಶನಾ ಮೆರವಣಿಗೆ ನಡೆಸಿದರು

ಮರುದಿನ, ಇಗತ್‌ಪುರಿ ಬಳಿಯ ಕಾಸರಾ ಘಾಟ್‌ನಲ್ಲಿ ಇಳಿದು ಮುಂಬೈ-ನಾಸಿಕ್ ಹೆದ್ದಾರಿಯನ್ನು ತಲುಪುವ ಯೋಜನೆಯಿತ್ತು. ಅವರು ಬೆಳಿಗ್ಗೆ 8 ಗಂಟೆಗೆ ಹೊರಡಲು ತಯಾರಾಗುತ್ತಿದ್ದಂತೆ, ಕೃಷಿ ಕಾರ್ಮಿಕರ ಗುಂಪೊಂದು ಕೃಷಿ ಕ್ಷೇತ್ರದಲ್ಲಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚರ್ಚಿಸುತ್ತಿತ್ತು. “ನನ್ನ ಮಗ ಮತ್ತು ಮಗಳು ಇಬ್ಬರೂ ತಮ್ಮ ಪದವಿಗಳನ್ನು ಪೂರ್ಣಗೊಳಿಸಿದ್ದರೂ, ಅವರು ಹೊಲಗಳಲ್ಲಿ ರೂ. 100-150 [ದಿನಕ್ಕೆ] ಕೂಲಿಗೆ ದುಡಿಯುತ್ತಿದ್ದಾರೆ,” ಎಂದು ನಾಸಿಕ್ ಜಿಲ್ಲೆಯ ತ್ರಿಯಂಬಕೇಶ್ವರ ತಾಲ್ಲೂಕಿನ ನಂದೂರ್ಕಿಪಾಡ ಗ್ರಾಮದ 48 ವರ್ಷದ ಮುಕುಂದ ಕೊಂಗಿಲ್ ಹೇಳುತ್ತಿದ್ದರು. ಮುಕುಂದ ಅವರ ಮಗನ ಬಳಿ ಬಿಕಾಂ ಪದವಿ ಇದೆ, ಮತ್ತು ಅವರ ಮಗಳು ಬಿಇಡಿ ಮುಗಿಸಿದ್ದಾಳೆ, ಆದರೆ ಅವರಿಬ್ಬರೂ ಈಗ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. "ಉದ್ಯೋಗಗಳು ಆದಿವಾಸಿಗಳಲ್ಲದವರಿಗೆ ಮಾತ್ರ ಹೋಗುತ್ತವೆ" ಎಂದು ಮುಕುಂದ ಹೇಳುತ್ತಾರೆ, ಅವರು ಪರಿಶಿಷ್ಟ ಪಂಗಡದ ವಾರ್ಲಿ (ಅಥವಾ ವರ್ಲಿ) ಆದಿವಾಸಿ ಸಮುದಾಯಕ್ಕೆ ಸೇರಿದವರು.

"ನನ್ನ ಮಗ ತನ್ನ ಕಾಲೇಜು ಓದಿಗೆ ತುಂಬಾ ಶ್ರಮವಹಿಸಿದ್ದಾನೆ ಮತ್ತು ಈಗ ಅವನು ಪ್ರತಿದಿನ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಾನೆ" ಎಂದು ನಂದೂರ್ಕಿಪಾಡಾದ ವಾರ್ಲಿ ಆದಿವಾಸಿ 47 ವರ್ಷದ ಜಾನಿಬಾಯಿ ಧಂಗರೆ ಹೇಳಿದರು. “ನನ್ನ ಮಗಳು ತನ್ನ ಪಂಧ್ರವಿ [15 ನೇ ತರಗತಿ, ಅಂದರೆ ಬಿಎ ಪದವಿ] ಮುಗಿಸಿದಳು. ಅವಳು ತ್ರಯಂಬಕೇಶ್ವರದಲ್ಲಿ ಕೆಲಸ ಪಡೆಯಲು ಪ್ರಯತ್ನಿಸಿದಳು, ಆದರೆ ಅವಳಿಗೆ ಯಾವುದೇ ಕೆಲಸ ಸಿಗಲಿಲ್ಲ. ಅವಳಿಗೆ ನನ್ನನ್ನು ಬಿಟ್ಟು ಮುಂಬೈಗೆ ಹೋಗಲು ಇಷ್ಟವಿರಲಿಲ್ಲ. ಆ ನಗರವು ತುಂಬಾ ದೂರದಲ್ಲಿದೆ ಮತ್ತು ಮನೆಯ ಊಟ ಅಲ್ಲಿ ಸಿಗುವುದಿಲ್ಲ” ಎಂದು ಹೇಳುತ್ತಾ, ತನ್ನ ಉಳಿದಿರುವ ಭಕ್ರಿಗಳನ್ನು ಪ್ಯಾಕ್ ಮಾಡಿ ತನ್ನ ಬ್ಯಾಗನ್ನು ಟೆಂಪೊದಲ್ಲಿ ಇರಿಸಿದರು.

ರೈತರು ಮತ್ತು ಕೃಷಿ ಕಾರ್ಮಿಕರು ತಮ್ಮ ಧ್ವಜಗಳೊಂದಿಗೆ ಘಾಟ್‌ನಿಂದ ಹೆದ್ದಾರಿಗೆ 12 ಕಿಲೋಮೀಟರ್ ನಡೆದು ಹೊಸ ಕೃಷಿ ಕಾನೂನುಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಅವರ ಬೇಡಿಕೆಯು ಮೂರು ಕಾನೂನುಗಳನ್ನು ಮತ್ತು ಹೊಸ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು, ಜೊತೆಗೆ ಕನಿಷ್ಠ ಬೆಂಬಲ ಬೆಲೆಗಳು (ಎಂಎಸ್ಪಿ) ಮತ್ತು ದೇಶಾದ್ಯಂತ ಖರೀದಿ ಸೌಲಭ್ಯಗಳನ್ನು ಖಾತರಿಪಡಿಸುವ ಕಾನೂನನ್ನು ತರಬೇಕೆನ್ನುವುದಾಗಿದೆ ಎಂದು ಎಐಕೆಎಸ್ ಅಧ್ಯಕ್ಷ ಅಶೋಕ್ ಧವಾಲೆ ಹೇಳಿದರು. "ಈ ಪ್ರದರ್ಶನ ಮೆರವಣಿಗೆ ಕೇಂದ್ರ ಸರ್ಕಾರದ ನಿಯೋ ಲಿಬರಲ್ ಮತ್ತು ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ದೆಹಲಿ ಮತ್ತು ದೇಶಾದ್ಯಂತ ಲಕ್ಷಾಂತರ ರೈತರು ನಡೆಸುತ್ತಿರುವ ಐತಿಹಾಸಿಕ ರಾಷ್ಟ್ರವ್ಯಾಪಿ ಹೋರಾಟಕ್ಕೆ ಮಹತ್ವದ ಕೊಡುಗೆಯಾಗಿದೆ" ಎಂದು ಗುಂಪಿನೊಂದಿಗೆ ಪ್ರಯಾಣಿಸುತ್ತಿದ್ದ ಧವಾಲೆ ಹೇಳಿದರು.

Arriving at night at Azad Maidan in Mumbai, the tired farmers celebrated with the tarpa, a musical instrument (left)
PHOTO • Shraddha Agarwal
Arriving at night at Azad Maidan in Mumbai, the tired farmers celebrated with the tarpa, a musical instrument (left)
PHOTO • Shraddha Agarwal

ರಾತ್ರಿಯಲ್ಲಿ ಆಜಾದ್ ಮೈದಾನಕ್ಕೆ ಆಗಮಿಸಿದ ದಣಿದ ರೈತರು ಟಾರ್ಪಾ(ಎಡ) ವಾದ್ಯಸಂಗೀತಕ್ಕೆ ನರ್ತಿಸಿದರು

ಹೆದ್ದಾರಿಯನ್ನು ತಲುಪಿದ ನಂತರ, ರೈತರು ವಾಹನಗಳಲ್ಲಿ ತಮ್ಮ ಸ್ಥಳದಲ್ಲಿ ಕುಳಿತು ಥಾಣೆಯ ಕಡೆಗೆ ಹೊರಟರು. ದಾರಿಯುದ್ದಕ್ಕೂ ವಿವಿಧ ಸಂಸ್ಥೆಗಳು ಅವರಿಗೆ ನೀರಿನ ಬಾಟಲಿಗಳು, ತಿಂಡಿಗಳು ಮತ್ತು ಬಿಸ್ಕತ್ತುಗಳನ್ನು ಪೂರೈಸುತ್ತಿದ್ದವು. ಅವರು ಥಾಣೆಯ ಗುರುದ್ವಾರದಲ್ಲಿ ಊಟದ ವಿರಾಮಕ್ಕಾಗಿ ನಿಲ್ಲಿಸಿದರು.

ಜನವರಿ 24ರಂದು ಸಂಜೆ 7 ಗಂಟೆಗೆ ಈ ಗುಂಪು ದಕ್ಷಿಣ ಮುಂಬೈನ ಆಜಾದ್ ಮೈದಾನವನ್ನು ತಲುಪಿತು. ಅವರು ದಣಿದಿದ್ದರೂ, ದೇಹವು ಅದರ ಚೈತನ್ಯವನ್ನು ಕಳೆದುಕೊಳ್ಳಲಿಲ್ಲ. ನಂತರ ಪಾಲ್ಘಾರ್‌ನ ಕೆಲವು ರೈತರು ಟಾರ್ಪಾ ಸಂಗೀತಕ್ಕೆ ನರ್ತಿಸಲು ಪ್ರಾರಂಭಿಸಿದರು.

"ನನಗೆ ಹಸಿವಾಗಿದೆ. ನನ್ನ ಇಡೀ ದೇಹವು ನೋಯುತ್ತಿದೆ. ಆದರೆ ಊಟ ಮಾಡಿ ವಿಶ್ರಾಂತಿ ಪಡೆದ ನಂತರ ನಾನು ಮತ್ತೆ ಗುಣಮುಖಳಾಗುತ್ತೇನೆ”ಎಂದು ವಿಜಯ್‌ಬಾಯಿ ತನ್ನ ಕೃಷಿ ಕಾರ್ಮಿಕರ ಗುಂಪಿನೊಂದಿಗೆ ಸೇರಿದ ನಂತರ ಹೇಳಿದರು. "ಇದು ನಮಗೆ ಹೊಸದಲ್ಲ" ಎಂದು ಅವರು ಹೇಳಿದರು. "ನಾವು ಹಿಂದೆಯೂ ಪ್ರದರ್ಶನ ಮೆರವಣಿಗೆ ಮಾಡಿದ್ದೇವೆ ಮತ್ತು ನಾವು ಮುಂದೆಯೂ ಮೆರವಣಿಗೆ ಮಾಡುತ್ತೇವೆ."

ಅನುವಾದ - ಶಂಕರ ಎನ್. ಕೆಂಚನೂರು

Shraddha Agarwal

শ্রদ্ধা অগরওয়াল পিপলস আর্কাইভ অফ রুরাল ইন্ডিয়ার সাংবাদিক এবং কন্টেন্ট সম্পাদক।

Other stories by Shraddha Agarwal
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru