ಅವರು ದೊಡ್ಡ ಒಣಹುಲ್ಲಿನ ಕಟ್ಟೊಂದರ ಮೇಲೆ ಕುಳಿತಿದ್ದಾರೆ. ಸುತ್ತ ಕಣ್ಣು ಹಾಯಿಸಿದಷ್ಟೂ ದೂರ ಎಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು ಕಾಣುತ್ತಿವೆ. ಮುರಿದ ಬಿದಿರಿನ ಕೋಲುಗಳು, ಹರಿದ ತಾಡಪತ್ರಿಯ ಹಾಳೆಗಳು, ಪ್ಲೈವುಡ್ ಹಲಗೆಗಳು, ಹಗ್ಗದ ತುಂಡುಗಳು, ಹರಿದ ಸೀರೆ, ಮನೆಯ ಕೆಲವು ಪಾತ್ರೆಗಳು, ಮಣ್ಣು ಹಿಡಿದ ಬಟ್ಟೆಗಳು ಮತ್ತು ಮನೆಯ ಇನ್ನಿತರ ವಸ್ತುಗಳು... ಎಲ್ಲವೂ ನೆಲದ ಮೇಲೆ ಅಸ್ತವ್ಯಸ್ತವಾಗಿ ಬಿದ್ದಿವೆ. ಇದೇ ಅವರು ಮೊದಲು 'ಮನೆ' ಎಂದು ಕರೆಯುತ್ತಿದ್ದ ಸ್ಥಳವಾಗಿತ್ತು. ಮತ್ತು ಈಗಲೂ ಅದು ಅವರ ಪಾಲಿಗೆ ಮನೆಯೇ ಹೌದು. ಆದರೆ ಇಂದು ಅದು ಬೇರೆ ರೀತಿಯಾಗಿ ಕಾಣುತ್ತಿದೆ. ಕೆಲವು ದಿನಗಳ ಹಿಂದೆ ದೆಹಲಿ ಅಭಿವೃದ್ಧಿ ಪ್ರಾಧಿಕಾರವು (ಡಿಡಿಎ) ಅವರ ಗುಡಿಸಲುಗಳನ್ನು ಕೆಡವಿ, ಒಂದು ಮೂಲೆಗೆ ತಳ್ಳಿದೆ. ಚಿಲ್ಲಾ ಸರೋದಾ ಖಾದರ್ನ ಜನಗಣತಿ ನಗರದಲ್ಲಿರುವ ಬುಲ್ಡೋಜರ್ಗೆ ಬಲಿಯಾದ 10-15 ಗುಡಿಸಲುಗಳಲ್ಲಿ ರೀತಾ ದೇವಿಯವರ ಮನೆಯೂ ಒಂದಾಗಿತ್ತು.
ಆದರೆ ಅವರ ಮುಖದಲ್ಲಿ ಯಾವುದೇ ಆತಂಕದ ಸುಳಿವೇ ಇಲ್ಲ, ಅವರ ಮುಖ ನಿಶ್ಚಿಂತೆಯಿಂದ ಕೂಡಿದಂತೆ ಕಾಣುತ್ತಿತು. ಅವರು ಒಂದು ಕೈಯಲ್ಲಿ ಹೊಂಬಣ್ಣದ, ಉದ್ದದ, ಸುಮಾರು ಒಂದು ಇಂಚು ಅಗಲದ ಮತ್ತು ಸ್ವಲ್ಪ ಮೊನಚಾದ ಹುಲ್ಲನ್ನು ಹಿಡಿದಿದ್ದಾರೆ. ಅದನ್ನು ಇನ್ನೊಂದು ಕೈಯಲ್ಲಿ ಹಿಡಿದಿರುವ ಕುಡುಗೋಲಿನಿಂದ ಎರಡು ಅಥವಾ ಮೂರು ತೆಳುವಾದ ಪಟ್ಟಿಗಳಾಗಿ ಸೀಳುತ್ತಿದ್ದಾರೆ. ಬುಲ್ಡೋಜರ್ ಬಳಸಿ ಅವರ ಗುಡಿಸಲನ್ನು ಪದೇ ಪದೇ ಕೆಡವುವುದು, ಅವರಿಗೆ ಅಥವಾ ಯಮುನಾ ನದಿಯ ಬಳಿಯ ಗುಡಿಸಲುಗಳಲ್ಲಿ ವಾಸಿಸುವ ಜನರಿಗೆ ಹೊಸ ಸಂಗತಿಯಲ್ಲ. ಹೀಗಾಗಿ ಅದು ಭಯ ಹುಟ್ಟಿಸುವುದಿಲ್ಲ. ದೆಹಲಿ ಸರ್ಕಾರವು ಇಲ್ಲಿ ಆರು ಜೀವವೈವಿಧ್ಯ ಉದ್ಯಾನವನಗಳಲ್ಲಿ ಒಂದನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಹೊಂದಿದೆ. ರೀತಾ ಹೇಳುತ್ತಾರೆ, ""ಯಹ್ ಜಮೀನ್ ಸರ್ಕರಿ ಹೈ ಇಸಲಿಯೇ ತೊ ಝುಗ್ಗಿ-ವುಗ್ಗಿ ತೋಡ್ ದೇತಾ ಹೈ. ಪಟ್ಟೆ ಪರ್ ಜಮೀನ್ ಯಹ್ ವಹೀ ಲೋಗ್ ಸಾಲ್ ಭರ್ ಕೇ ಲಿಯೇ ಲೇತೇ ಹೈ ಜೋ ಖೇತಿ ಕರ್ತೇ ಹೈ. [ಇದು ಸರ್ಕಾರಿ ಜಾಗ, ಗುಡಿಸಲುಗಳನ್ನು ಒಡೆದುಹಾಕುವುದಕ್ಕೆ ಕಾರಣ ಇದೇ. ಇಲ್ಲಿ ವ್ಯವಸಾಯ ಮಾಡುವವರು ಮಾತ್ರ ವರ್ಷಪೂರ್ತಿ ಗುತ್ತಿಗೆ ಆಧಾರದ ಮೇಲೆ ಜಮೀನನ್ನು ತೆಗೆದುಕೊಳ್ಳುತ್ತಾರೆ]."
"ನಾವು ಅಕ್ಷರಧಾಮದ ಬಳಿ ವಾಸಿಸುತ್ತಿದ್ದಾಗಲೂ ಇದೇ ರೀತಿ ನಡೆಯುತ್ತಿತ್ತು" ಎಂದು ರೀತಾ ಹೇಳುತ್ತಾರೆ. "ಅದರ [ಅಕ್ಷರಧಾಮದ] ಪಕ್ಕದಲ್ಲಿ ಯಾರೋ ಮೀನು ಕತ್ತರಿಸುತ್ತಿದ್ದರು, ಆಗ ಕಾಗೆಯೊಂದು ಮೀನಿನ ಬಿಸಾಡಿದ ತುಂಡನ್ನು ಹೊತ್ತುಕೊಂಡು ದೇವಸ್ಥಾನದ ಒಳಗೆ ಹೋಗಿಬಿಟ್ಟಿತು. ಇದೇ ಕಾರಣಕ್ಕೆ ನಾವೆಲ್ಲ ವಾಸವಿದ್ದ ಗುಡಿಸಲುಗಳನ್ನು ಒಡೆದು ಹಾಕಿದರು. ಇದು ನಡೆದಿದ್ದು 2015ರಲ್ಲಿ. ನಂತರ ನಾವು ಆ ಸ್ಥಳದಿಂದ ಚಿಲ್ಲಾ ಖಾದರ್ ಪ್ರದೇಶಕ್ಕೆ ಬಂದು, ಆಗಿನಿಂದ ಇಲ್ಲಿಯೇ ವಾಸಿಸಲು ಪ್ರಾರಂಭಿಸಿದೆವು. ಈ ಗುಡಿಸಲುಗಳನ್ನು ಈಗಾಗಲೇ 4ರಿಂದ 5 ಬಾರಿ ಒಡೆದು ಹಾಕಿದ್ದಾರೆ, ಆದರೂ ನಾವು ಇಲ್ಲಿಯೇ ವಾಸಿಸುತ್ತಿದ್ದೇವೆ." ಅವರ ಕುಟುಂಬ ಸುಮಾರು 8ರಿಂದ 10 ಗಜಗಳಷ್ಟು ಜಾಗವನ್ನು ಬಾಡಿಗೆಗೆ ತೆಗೆದುಕೊಂಡಿದ್ದು, ಅದರ ಮೇಲೆ ಸಣ್ಣ ಗುಡಿಸಲು ನಿರ್ಮಿಸಿದ್ದಾರೆ. ಈ ಜಾಗಕ್ಕೆ ಪ್ರತಿ ತಿಂಗಳು 500 ರೂಪಾಯಿ ಬಾಡಿಗೆ ಪಾವತಿಸುತ್ತಾರೆ.
"ನಾವು ಒಬ್ಬ ಗುಜ್ಜರ್ ವ್ಯಕ್ತಿಗೆ ಬಾಡಿಗೆ ನೀಡುತ್ತೇವೆ. ಅವನ ಹೆಸರು ರಾಜ್ವೀರ್. ಇಲ್ಲೇ ಚಿಲ್ಲಾದಲ್ಲಿಯೇ ಇರುತ್ತಾನೆ. ಈ ಜಮೀನನ್ನು ಅವನ ಅಜ್ಜ ಸರ್ಕಾರಕ್ಕೆ ಮಾರಿದ್ದಾರೆ. ಅದಕ್ಕೆ ಪರಿಹಾರವನ್ನೂಪಡೆದುಕೊಂಡಿದ್ದಾರೆ. ಆದರೆ ಅವನು ಈಗಲೂ ಈ ಜಾಗದ ಒಡೆತನ ನನ್ನದೇ ಎನ್ನುತ್ತಾನೆ. ಅವನು ನಮ್ಮಂತಹ ಬಡ ಜನರನ್ನು ಹೊಡೆದು-ಬಡಿದುಹಣ ವಸೂಲಿ ಮಾಡುತ್ತಾನೆ" ಎಂದು ರೀತಾ ಹೇಳುತ್ತಾರೆ. "ತುಮ್ಹಾರಾ ಖೇತ್, ತುಮ್ಹಾರಿ ಜಮೀನ್, ತೂ ಜಾನ್. ಹಮಾರಾ ತೊ ರೆಹನೇ ಸೆ ಮತ್ಲಬ್ ಹೈ [ನಿಮ್ಮ ಗದ್ದೆ, ನಿಮ್ಮ ಜಮೀನು, ನಿಮಗೆ ಗೊತ್ತು. ನಮಗೇನು? ನಮಗೆ ಇರಲು ಜಾಗ ಬೇಕಷ್ಟೇ]. ನಾವು ಎಂದಿಗೂ ಕಾಯಂ [ಪಕ್ಕಾ] ಮನೆಗಳನ್ನು ಕಟ್ಟುವುದಿಲ್ಲ. ಅವರು ಪ್ರತಿ ಬಾರಿ ಗುಡಿಸಲು ಕೆಡವಿದಾಗ ಯಾರು ತಾನೇ ಮತ್ತೆ ಮತ್ತೆ ಹೊಸ ಮನೆ ಕಟ್ಟುತ್ತಾರೆ?" ಇಷ್ಟು ಹೇಳಿ, ಅವರು ಕತ್ತರಿಸಿದ ಹುಲ್ಲಿನ ಪಟ್ಟಿಗಳನ್ನು ಕಟ್ಟಿ ಒಂದು ಸಣ್ಣ ಗಂಟು ತಯಾರಿಸುವ ಕೆಲಸದಲ್ಲಿ ನಿರತರಾಗುತ್ತಾರೆ.
ಇತ್ತೀಚೆಗೆ ನಡೆದ ಬುಲ್ಡೋಜರ್ ಕಾರ್ಯಾಚರಣೆಯ ನಂತರ, ರೀತಾ ಅವರ ಕುಟುಂಬವು ಹೇಗೋ ಕಷ್ಟಪಟ್ಟು ಪ್ಲಾಸ್ಟಿಕ್ ಹಾಳೆಗಳು ಮತ್ತು ತಾಡಪತ್ರಿಯ ಸಹಾಯದಿಂದ ತಮ್ಮ ಗುಡಿಸಲನ್ನು ಮತ್ತೆ ಎಬ್ಬಿಸಿ ನಿಲ್ಲಿಸಿದ್ದಾರೆ. ಇಲ್ಲಿ ವಾಸಿಸುವ ಹೆಚ್ಚಿನ ಕುಟುಂಬಗಳು ಉತ್ತರ ಪ್ರದೇಶ (ಯುಪಿ) ಮತ್ತು ಬಿಹಾರದಿಂದ ವಲಸೆ ಬಂದ ದಿನಗೂಲಿ ಕಾರ್ಮಿಕರು. ಸ್ವತಃ ರೀತಾ ಬಿಹಾರದಸುಪೌಲ್ ಜಿಲ್ಲೆಯವರು. ಉದ್ಯೋಗವನ್ನು ಹುಡುಕಿಕೊಂಡು ಅವರ ತಂದೆ-ತಾಯಿಗಳು ಬಸ್ಬಿಟ್ಟಿ ಗ್ರಾಮದಿಂದ ದೆಹಲಿಗೆ ಬಂದಿದ್ದು 1993ರಲ್ಲಿ. ಅಂದಿನಿಂದ ರೀತಾ ದೆಹಲಿಯಲ್ಲೇ ಇದ್ದಾರೆ. 2011ರ ಜನಗಣತಿಯ ಪ್ರಕಾರ, ಸುಮಾರು 93 ಲಕ್ಷ ಜನರು ಉದ್ಯೋಗ ಅರಸಿ ಬಿಹಾರದಿಂದ ಇತರ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ರೀತಾ ಮಲ್ಲಾ ಸಮುದಾಯಕ್ಕೆ ಸೇರಿದವರು. ಇದು ಮೀನುಗಾರರ ಸಮುದಾಯವಾಗಿದ್ದು, ಇವರನ್ನು ನಿಷಾದ್ ಮತ್ತು ಧೀಮರ್ ಎನ್ನುವಹೆಸರಿನಿಂದಲೂ ಕರೆಯಲಾಗುತ್ತದೆ. ಪ್ರಸ್ತುತ, ಈ ಸಮುದಾಯವನ್ನು ಬಿಹಾರದಲ್ಲಿ ಪರಿಶಿಷ್ಟ ಜಾತಿಗಳಡಿ ಪಟ್ಟಿ ಮಾಡಲಾಗಿದೆ.




















