“ಶಾಲೆಯಲ್ಲಿ ಎರಡನೇ ಸಲ ಬಡಿಸುವಂತಿದ್ದರೆ ಚಂದವಿರುತ್ತಿತ್ತು.”
ಏಳು ವರ್ಷದ ಬಸವರಾಜು ತೆಲಂಗಾಣದ ಸೆರಿಲಿಂಗಂಪಲ್ಲಿ ಮಂಡಲದ ಮಂಡಲ ಪರಿಷತ್ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾನೆ. ರಂಗಾ ರೆಡ್ಡಿ ಜಿಲ್ಲೆಯಲ್ಲಿರುವ ಈ ಶಾಲೆಯು ದೇಶಾದ್ಯಂತ ಇರುವ 11.2 ಲಕ್ಷ ಶಾಲೆಗಳಲ್ಲಿ ಒಂದಾಗಿದೆ, ಅಲ್ಲಿ ಮಕ್ಕಳಿಗೆ ಬಿಸಿ ಬಿಸಿ ಬೇಯಿಸಿದ ಆಹಾರವನ್ನು ನೀಡಲಾಗುತ್ತದೆ. ಶಾಲೆಗೆ ಹೋಗುವ ಮೊದಲು ಕೇವಲ ಒಂದು ಲೋಟ ಗಂಜಿ ಕುಡಿಯುವ ಬಸವರಾಜುವಿನ ಸಹಪಾಠಿ 10 ವರ್ಷದ ಅಂಬಿಕಾಳ ಪಾಲಿಗೆ ಇದು ದಿನದ ಮೊದಲ ಊಟವಾಗಿದೆ.
ಭಾರತದ ಮಧ್ಯಾಹ್ನದ ಬಿಸಿಯೂಟ ಯೋಜನೆಯು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು ಮತ್ತು ಸರ್ವ ಶಿಕ್ಷಣ ಅಭಿಯಾನದ ಬೆಂಬಲಿತ ಸರ್ಕಾರಿ ಕಲಿಕಾ ಕೇಂದ್ರಗಳಲ್ಲಿ ಓದುತ್ತಿರುವ 1ರಿಂದ 8ನೇ ತರಗತಿಯ ಸುಮಾರು 118 ಮಿಲಿಯನ್ ವಿದ್ಯಾರ್ಥಿಗಳಿಗೆ ಕೆಲಸದ ದಿನಗಳಲ್ಲಿ ಯಾವುದೇ ಶುಲ್ಕವಿಲ್ಲದೆ ಆಹಾರವನ್ನು ನೀಡುತ್ತದೆ. ಪೂರ್ಣ ಹೊಟ್ಟೆಯು ಗಣಿತದ ಸಮಸ್ಯೆಗಳನ್ನು ಬಿಡಿಸುವುದು ಮತ್ತು ಕಾಗುಣಿತಗಳೊಂದಿಗಿನ ಕುಸ್ತಿಯನ್ನು ಸುಲಭಗೊಳಿಸುತ್ತದೆ ಎಂದು ಯಾರೂ ವಾದಿಸಲು ಸಾಧ್ಯವಿಲ್ಲ, ಆದರೆ ಮಧ್ಯಾಹ್ನದ ಊಟವು ಪ್ರಾಥಮಿಕವಾಗಿ ಮಕ್ಕಳನ್ನು ಶಾಲೆಗೆ ಕರೆತರುತ್ತದೆ ಎಂದು ನಿರೀಕ್ಷಿಸಲಾಗಿದೆ. (ಭಾರತದಲ್ಲಿ ಕನಿಷ್ಠ 150 ಮಿಲಿಯನ್ ಮಕ್ಕಳು ಮತ್ತು ಯುವಕರು ಔಪಚಾರಿಕ ಶಿಕ್ಷಣ ವ್ಯವಸ್ಥೆಯಿಂದ ಹೊರಗುಳಿದಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.)
ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಜೋಧ್ಗಡ್ ಗ್ರಾಮದ ರಾಜ್ಕಿಯಾ ಪ್ರಥಮ್ ವಿದ್ಯಾಲಯ ಎಂಬ ಶಾಲೆಗೆ ಭೇಟಿ ನೀಡಿದಾಗ ಆ ಶಾಲೆಯ ಹತ್ತು ವರ್ಷದ ದಕ್ಷ್ ಭಟ್ ಶಾಲೆಗೆ ಬರುವ ಮೊದಲು ಕೆಲವು ಬಿಸ್ಕತ್ತುಗಳನ್ನು ಮಾತ್ರ ಸೇವಿಸಿದ್ದನು. ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಅಸ್ಸಾಂನ ನಲ್ಬರಿ ಜಿಲ್ಲೆಯಲ್ಲಿ, ಅಲಿಶಾ ಬೇಗಂ ಶಾಲೆಗೆ ಹೊರಡುವ ಮೊದಲು ರೊಟ್ಟಿ ತಿಂದು ಕಪ್ಪು ಚಹಾವನ್ನು ಕುಡಿದು ಬಂದಿರುವುದಾಗಿ ಹೇಳುತ್ತಾಳೆ, ಅವಳು ಸಂಖ್ಯೆ 858 ನಿಜ್ ಖಗಾಟಾ ಕಿರಿಯ ಪ್ರಾಥಮಿಕ ಶಾಲೆಗೆ ಹೋಗುತ್ತಾಳೆ. ಅವಳ ತಂದೆ ಬೀದಿಬದಿ ವ್ಯಾಪಾರಿ ಮತ್ತು ತಾಯಿ ಗೃಹಿಣಿ.


































