"ಎಲ್ಲಾ 32 ಒಕ್ಕೂಟಗಳು ನವ್ ಜವಾನ್ [ಯುವಕರು] ಯಾವುದೇ ಹಾನಿ ಮಾಡದಂತೆ ವಿನಂತಿಸುತ್ತವೆ. ಯಾರೂ ಯಾವುದೇ ಹಾನಿ ಮಾಡಬಾರದು. ಯಾರೂ ಘರ್ಷಣೆ ಮಾಡಬಾರದು. ನಮ್ಮ ಈ ಹೋರಾಟವನ್ನು ಯಾರೂ ಹಾಳುಮಾಡಬಾರದು” ಎಂದು ಮನವಿಯನ್ನು ಸಲ್ಲಿಸಿದರು. "ದೆಹಲಿ ಪೊಲೀಸರು ನಮಗೆ ನಿಗದಿಪಡಿಸಿದ ಅಧಿಕೃತ ಮಾರ್ಗವನ್ನು ಎಲ್ಲರೂ ಅನುಸರಿಸುತ್ತಾರೆ. ಜಗತ್ತು ನೋಡುವಂತೆ ನಾವು ಶಾಂತಿಯುತ ಮೆರವಣಿಗೆ ನಡೆಸುತ್ತೇವೆ” ಎಂದು ಟ್ರ್ಯಾಕ್ಟರ್ನಲ್ಲಿ ಇರಿಸಲಾಗಿರುವ ಧ್ವನಿವರ್ಧಕದ ಮೂಲಕ ನಾಯಕ ಘೋಷಿಸಿದರು.
ಜನವರಿ 26 ರಂದು ಬೆಳಿಗ್ಗೆ 9: 45 ರ ಸುಮಾರಿಗೆ ಮುಂಡ್ಕಾ ಇಂಡಸ್ಟ್ರಿಯಲ್ ಏರಿಯಾ ಮೆಟ್ರೋ ನಿಲ್ದಾಣದಿಂದ ಟ್ರಾಕ್ಟರುಗಳ ಸಾಲು ಚಲಿಸುತ್ತಿದ್ದಾಗ, ಧ್ವನಿವರ್ಧಕ ಸದ್ದು ಮಾಡಿತು. ಸ್ವಯಂಸೇವಕರು ಮಾನವ ಸರಪಳಿಯನ್ನು ರೂಪಿಸಲು ವೇಗವಾಗಿ ಚಲಿಸಿದರು ಮತ್ತು ಎಲ್ಲರನ್ನೂ ನಿಲ್ಲಿಸಿ ನಾಯಕರ ಮನವಿಯನ್ನು ಕೇಳುವಂತೆ ವಿನಂತಿಸಿದರು.
ರ್ಯಾಲಿ ಪಶ್ಚಿಮ ದೆಹಲಿಯ ಟಿಕ್ರಿಯಿಂದ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಯಿತು. 'ಕಿಸಾನ್ ಮಜ್ದೂರ್ ಏಕ್ತಾ ಜಿಂದಾಬಾದ್' ಘೋಷಣೆಗಳನ್ನು ಜನಸಮೂಹ ಎಬ್ಬಿಸುತ್ತಿತ್ತು. ಟ್ರಾಕ್ಟರುಗಳ ಸಾಲಿನ ಜೊತೆಗೆ, ಅನೇಕ ಪ್ರತಿಭಟನಾಕಾರರು ಮತ್ತು ಸ್ವಯಂಸೇವಕರು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರು - ಕೆಲವರು ತಮ್ಮ ಕೈಯಲ್ಲಿ ರಾಷ್ಟ್ರೀಯ ಧ್ವಜವನ್ನು ಹೊಂದಿದ್ದರು, ಮತ್ತು ಇತರರು ತಮ್ಮ ರೈತ ಸಂಘದ ಧ್ವಜಗಳನ್ನು ಹೊತ್ತೊಯ್ಯುತ್ತಿದ್ದರು. "ನಾವು ದೂರದ ಪ್ರಯಾಣ ಮಾಡಬೇಕಾಗಿರುವುದರಿಂದ ಪಾದಚಾರಿಗಳಿಗೆ ಟ್ರಾಕ್ಟರುಗಳಲ್ಲಿ ಹತ್ತಲು ನಾವು ವಿನಂತಿಸುತ್ತೇವೆ" ಎಂದು ಧ್ವನಿವರ್ಧಕದಲ್ಲಿ ಮಾತನಾಡಿದ ನಾಯಕ ಹೇಳಿದರು. ಆದರೆ ಅವರಲ್ಲಿ ಹಲವರು ನಡೆಯುತ್ತಲೇ ಇದ್ದರು.
ಈ ಸಾಲು ಸರಾಗವಾಗಿ ಚಲಿಸುತ್ತಿದ್ದಂತೆ, ಮುಂಡ್ಕದಲ್ಲಿ ವಾಸಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ರಸ್ತೆಗಳ ಬದಿಯಲ್ಲಿ ಅಥವಾ ವಿಭಾಜಕಗಳ ಮೇಲೆ ನಿಲ್ಲಲು ಪ್ರಾರಂಭಿಸಿದರು. ಅವರಲ್ಲಿ ಹಲವರು ಈ ಅಭೂತಪೂರ್ವ ಮೆರವಣಿಗೆಯನ್ನು ತಮ್ಮ ಫೋನ್ಗಳಲ್ಲಿ ರೆಕಾರ್ಡ್ ಮಾಡಲು ಪ್ರಾರಂಭಿಸಿದರು, ಕೆಲವರು ಕೈ ಬೀಸುತ್ತಿದ್ದರು, ಇತರರು ರ್ಯಾಲಿಯಲ್ಲಿ ನುಡಿಸಲಾಗುತ್ತಿದ್ದ ಧೋಲ್ ಸದ್ದಿಗೆ ನರ್ತಿಸುತ್ತಿದ್ದರು.
ಅಲ್ಲಿದ್ದ ಮುಂಡ್ಕಾ ನಿವಾಸಿಗಳಲ್ಲಿ 32 ವರ್ಷದ ವಿಜಯ್ ರಾಣಾ ಕೂಡ ಒಬ್ಬರಾಗಿದ್ದರು. ಅವರು ತಮ್ಮ ಏರಿಯಾದ ಮೂಲಕ ಹಾದುಹೋಗುವ ರೈತರ ಮೇಲೆ ಚೆಂಡು ಹೂವುಗಳನ್ನು ಸುರಿಸಲು ಬಂದಿದ್ದರು. "ರಾಜಕಾರಣಿಗಳನ್ನು ಹೂವುಗಳಿಂದ ಸ್ವಾಗತಿಸಿದಾಗ, ರೈತರನ್ನು ಏಕೆ ಸ್ವಾಗತಿಸಬಾರದು?" ಎಂದು ಅವರು ಹೇಳಿದರು. ರಾಣಾ, ಸ್ವತಃ ಕೃಷಿಕರಾಗಿದ್ದು, ಮುಂಡ್ಕಾ ಗ್ರಾಮದಲ್ಲಿ 10 ಎಕರೆ ಭೂಮಿಯಲ್ಲಿ ಗೋಧಿ, ಭತ್ತ ಮತ್ತು ಸೋರೆಕಾಯಿ ಬೆಳೆಯುತ್ತಾರೆ. "ರೈತರು ಸೈನಿಕರಿಗಿಂತ ಕಡಿಮೆಯಿಲ್ಲ" ಎಂದು ಅವರು ಹೇಳಿದರು. “ಈ ದೇಶದ ಸೈನಿಕರು ಗಡಿಗಳನ್ನು ತೊರೆದರೆ, ಯಾರಾದರೂ ಈ ದೇಶವನ್ನು ಆಕ್ರಮಿಸಿಕೊಳ್ಳಬಹುದು. ಅದೇ ರೀತಿ ರೈತರಿಲ್ಲದೆ ದೇಶ ಹಸಿವಿನಿಂದ ಬಳಲುತ್ತದೆ."








