ಹೊಲಗಳಲ್ಲಿ ದುಡಿಯುವ ಕೃಷಿ ಕಾರ್ಮಿಕರು. ಅಥವಾ ಉಪ್ಪಿನ ಆಗರಗಳಲ್ಲಿ ಕೆಲಸ ಮಾಡುವ ಕೆಲಸಗಾರರ ಗುಂಪು, ಅಂಬಿಗರು ಅಥವಾ ಮೀನುಗಾರರು ದೋಣಿಯಲ್ಲಿ ಹೋಗುವಾಗ ಹಾಡಿಕೊಳ್ಳುವುದು ತೀರಾ ಅಪರೂಪದ ಸಂಗತಿಯೇನಲ್ಲ. ಸಾಂಪ್ರದಾಯಿಕ ಸಂಸ್ಕೃತಿಗಳಲ್ಲಿ ದೈಹಿಕ ಶ್ರಮದ ದುಡಿಮೆಯ ಸಮಯದಲ್ಲಿ ಹಾಡಿಕೊಳ್ಳುವ ಶ್ರಮದ ಕುರಿತಾದ ಹಾಡುಗಳೂ ಬೆಸೆದುಕೊಂಡಿವೆ. ಉದ್ಯೋಗಗಳಿಗೆ ಸಂಬಂಧಿಸಿದ ಹಾಡುಗಳು ಭಾರತದ ಜಾನಪದ ಪರಂಪರೆಯ ಒಂದು ಅವಿಭಾಜ್ಯ ಅಂಗವೇ ಆಗಿಹೋಗಿದೆ. ಕೆಲವೊಮ್ಮೆ ಈ ಹಾಡುಗಳು ಕೆಲಸ ಮಾಡುವ ಗುಂಪನ್ನು ಪ್ರೋತ್ಸಾಹಿಸುವುದರ ಜೊತೆಗೆ ಅವರಲ್ಲಿ ಒಗ್ಗಟ್ಟು ಮತ್ತು ಹುಮ್ಮಸ್ಸನ್ನೂ ಮೂಡಿಸುತ್ತವೆ. ಕೆಲವೊಮ್ಮೆ ಈ ಕಾರ್ಮಿಕರ ದಣಿವು ಮತ್ತು ಬೇಸರ ನೀಗಿಸುವ ನಿಟ್ಟಿನಲ್ಲೂ ಕೆಲಸ ಮಾಡುತ್ತವೆ.
170 ಮೀಟರ್ ಉದ್ದಕ್ಕೆ ಕಛ್ಛ್ ಕೊಲ್ಲಿ, ಅದರ ಉಪಧಾರೆ, ಅಳಿವೆಗಳು ಮತ್ತು ಮುಂಗರೆ ಪ್ರದೇಶಗಳ ಜಾಲವನ್ನು ಹೊಂದಿರುವ ವಿಶಾಲವಾದ ಅಂತರ-ಸಮುದ್ರ ವಲಯವಾಗಿದ್ದು, ದೊಡ್ಡ ಪರಿಸರ ವ್ಯವಸ್ಥೆಯನ್ನು ಹೊಂದಿದೆ ಮತ್ತು ಅನೇಕ ಸಮುದ್ರ ಜೀವಿಗಳಿಗೆ ಸಂತಾನೋತ್ಪತ್ತಿ ವಲಯವಾಗಿದೆ. ಇಲ್ಲಿನ ಮೀನುಗಾರಿಕೆಯು ಕರಾವಳಿ ಪ್ರದೇಶದ ಅನೇಕರಿಗೆ ಸಾಂಪ್ರದಾಯಿಕ ಉದ್ಯೋಗದ ಮೂಲ. ಕರಾವಳಿ ಅಭಿವೃದ್ಧಿ ಚಟುವಟಿಕೆಗಳ ಅಲೆಗಳಿಂದ ಜೀವನೋಪಾಯವು ಸ್ಥಿರವಾಗಿ ಕ್ಷೀಣಿಸುತ್ತಿರುವ ಕುರಿತು, ಮೀನುಗಾರ ಸಮುದಾಯಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಇಲ್ಲಿನ ಹಾಡು ಮಾತನಾಡುತ್ತದೆ.
ಕಛ್ಛ್ ಮೀನುಗಾರರ ಒಕ್ಕೂಟಗಳು, ಶಿಕ್ಷಣ ತಜ್ಞರು ಮತ್ತು ಇತರರು ಈ ಚಟುವಟಿಕೆಗಳ ವ್ಯತಿರಿಕ್ತ ಪರಿಣಾಮಗಳ ಕುರಿತು ಹಲವು ವರದಿಗಳು ಮಾಡಿದ್ದಾರೆ. ಸಮುದ್ರ ವೈವಿಧ್ಯತೆಯ ತ್ವರಿತ ಕುಸಿತಕ್ಕೆ ಮುಂದ್ರಾ ಥರ್ಮಲ್ ಪ್ಲಾಂಟ್ (ಟಾಟಾ) ಮತ್ತು ಮುಂದ್ರಾ ಪವರ್ ಪ್ರಾಜೆಕ್ಟ್ (ಅದಾನಿ ಗ್ರೂಪ್) ಕಾರಣ ಎಂದು ಈ ವರದಿಗಳು ಆರೋಪಿಸುತ್ತವೆ, ಇದು ಈ ಪ್ರದೇಶದ ಮೀನುಗಾರ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ. ಇಲ್ಲಿ ಪ್ರಸ್ತುತಪಡಿಲಾದ ಹಾಡು, ತನ್ನ ಭಾಷೆಯಲ್ಲಿ ಸಂಪೂರ್ಣ ಸರಳವಾಗಿದ್ದು, ಈ ಸವಾಲುಗಳನ್ನು ಸೂಕ್ಷ್ಮವಾಗಿ ವಿವರಿಸುತ್ತದೆ.
ಈ ಕೃತಿ-ಗೀತೆಯನ್ನು ಮುಂದ್ರಾ ತಾಲ್ಲೂಕಿನ ಜುಮಾ ವಘೇರ್ ಹೆಸರಿನ ಮೀನುಗಾರ ಸುಂದರವಾಗಿ ಹಾಡಿದ್ದಾರೆ. ಅವರು ಈ ಪ್ರಮುಖ ಗಾಯಕ, ಮತ್ತು ಅವರ ಜೊತೆಗೆ ಕೋರಸ್ ಪಲ್ಲವಿಯನ್ನು ಹಾಡುತ್ತದೆ - ಹೋ ಜಮಾಲೋ (ಹೇ, ಮೀನುಗಾರ ಜನರೇ). ಹಾಡಿನ ಆಕರ್ಷಕ ರಾಗವು ನಮ್ಮನ್ನು ವೇಗವಾಗಿ ಬದಲಾಗುತ್ತಿರುವ, ಕಛ್ಛ್ ಪ್ರದೇಶದ ದೂರ ತೀರಕ್ಕೆ ಕರೆದೊಯ್ಯುತ್ತದೆ.



