ನನ್ನ ಜನರ ಸಾವಿನ ಕತೆಯನ್ನು ಬರೆಯಲು ಆರಂಭಿಸುವಾಗ, ಪ್ರತಿ ಬಾರಿಯೂ ನನ್ನ ಮನಸ್ಸು ಕೊನೆಯುಸಿರು ಬಿಟ್ಟು ಶವವಾಗುವ ಅವರ ದೇಹದಂತೆ ಖಾಲಿಯಾಗುತ್ತದೆ.
ನಮ್ಮ ಸುತ್ತ ಇರುವ ಪ್ರಪಂಚ ತುಂಬಾ ಮುಂದೆ ಹೋಗಿದೆ, ಆದರೆ ನಮ್ಮ ಸಮಾಜ ಮಾತ್ರ ಕೈಯಿಂದ ಮಲ ಎತ್ತುವವರ ಪ್ರಾಣದ ಬಗ್ಗೆ ಇನ್ನೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇವರ ಸಾವುಗಳನ್ನು ಸರ್ಕಾರ ನಿರ್ಲಕ್ಷಿಸುತ್ತಲೇ ಬಂದಿದೆ. ಈ ವರ್ಷ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠಾವಳೆಯವರು, 2019-2023ರ ನಡುವೆ ಅಪಾಯಕಾರಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛ ಮಾಡಲು ಹೋಗಿ 377ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಡೇಟಾ ಸಹಿತ ಉತ್ತರಿಸಿದ್ದರು.
ಕಳೆದ ಏಳು ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಜನರು ಮ್ಯಾನ್ಹೋಲ್ಗಳಲ್ಲಿ ಸತ್ತಿರುವುದಕ್ಕೆ ನಾನು ವೈಯಕ್ತಿಕವಾಗಿ ಸಾಕ್ಷಿಯಾಗಿದ್ದೇನೆ. ಚೆನ್ನೈ ಜಿಲ್ಲೆಯ ಆವಡಿ ಒಂದರಲ್ಲಿಯೇ 2022ರಿಂದ 12 ಜನ ಮ್ಯಾನ್ಹೋಲ್ಗಳಲ್ಲಿ ಮರಣ ಹೊಂದಿದ್ದಾರೆ.
ಆಗಸ್ಟ್ 11 ರಂದು ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ 25 ವರ್ಷ ಪ್ರಾಯದ ಆವಡಿ ನಿವಾಸಿ, ಅರುಂಧತಿಯಾರ್ ಸಮುದಾಯದ ಹರಿ ಎಂಬವರು ಒಳಚರಂಡಿ ಕಾಲುವೆಯನ್ನು ಸ್ವಚ್ಛಗೊಳಿಸಲು ಹೋಗಿ ನೀರಿನಲ್ಲಿ ಮುಳುಗಿ ಮರಣ ಹೊಂದಿದರು.
ಇದಾಗಿ ಹನ್ನೆರಡು ದಿನಗಳ ನಂತರ ನಾನು ಹರಿ ಅಣ್ಣನ ಸಾವಿನ ವರದಿ ಮಾಡಲು ಅವರ ಮನೆಗೆ ಹೋಗಿದ್ದೆ. ಅವರ ಶವ ಮನೆಯ ಫ್ರೀಜರ್ ಬಾಕ್ಸ್ನಲ್ಲಿ ಬಿದ್ದಿರುವುದನ್ನು ನಾನು ನೋಡಿದೆ. ವಿಧವೆಯೊಬ್ಬಳು ಮಾಡಬೇಕಾದ ಎಲ್ಲಾ ವಿಧಿವಿಧಾನಗಳನ್ನು ಮಾಡುವಂತೆ ಹರಿಯವರ ಪತ್ನಿ ತಮಿಳ್ ಸೆಲ್ವಿಯವರನ್ನು ಅವರ ಕುಟುಂಬ ಪರಿಪರಿಯಾಗಿ ಕೇಳಿಕೊಳ್ಳುತ್ತಿತ್ತು. ಅವರ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುವ ಸಂಬಂಧಿಕರು ತಮಿಳ್ ಸಲ್ವಿಯವರ ಕತ್ತಿನಲ್ಲಿರುವ ತಾಳಿಯನ್ನು ಕಡಿಯುವ ಮೊದಲು ಅವರ ಮೇಲೆ ಅರಿಶಿನವನ್ನು ಹಚ್ಚಿ ಸ್ನಾನ ಮಾಡಿಸಿದರು. ಇಡೀ ಆಚರಣೆಯುದ್ದಕ್ಕೂ ಅವರು ಗಂಭೀರ ಮತ್ತು ಮೌನವಾಗಿದ್ದರು.




















