ಪ್ರಸ್ತುತ ಕುನೋ ಚೀತಾಗಳಿಗೆ ಸಂಬಂಧಿಸಿದ ವಿಷಯಗಳು ರಾಷ್ಟ್ರೀಯ ಭದ್ರತೆಯೊಂದಿಗೆ ಸಂಬಂಧ ಹೊಂದಿವೆ. ಈ ಮಾಹಿತಿಯ ವಿಷಯದಲ್ಲಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅದು ಭಾರತದ ಜೊತೆಗಿನ ವಿದೇಶಗಳ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು.
ಇದು ಚಿರತೆಗಳ ನಿರ್ವಹಣೆಯ ಬಗ್ಗೆ ವಿವರಗಳನ್ನು ಕೋರಿ ಜುಲೈ 2024 ರಲ್ಲಿ ಮಾಹಿತಿ ಹಕ್ಕು (ಆರ್ಟಿಐ) ಕೋರಿಕೆಯನ್ನು ತಿರಸ್ಕರಿಸುವಾಗ ಮಧ್ಯಪ್ರದೇಶ ಸರ್ಕಾರ ನೀಡಿದ ಕಾರಣ. ಆರ್ಟಿಐ ಅರ್ಜಿ ಸಲ್ಲಿಸಿದ ಭೋಪಾಲ್ ಮೂಲದ ಕಾರ್ಯಕರ್ತ ಅಜಯ್ ದುಬೆ, "ಹುಲಿಗಳ ಬಗ್ಗೆ ಎಲ್ಲಾ ಮಾಹಿತಿ ಪಾರದರ್ಶಕವಾಗಿದೆ, ಹಾಗಿದ್ದರೆ ಚೀತಾಗಳ ವಿಷಯದಲ್ಲಿ ಮಾತ್ರ ಹೀಗೇಕೆ? ವನ್ಯಜೀವಿಗಳ ನಿರ್ವಹಣೆಯ ವಿಷಯದಲ್ಲಿ ಪಾರದರ್ಶಕತೆಯೇ ಅದರ ಮುಖ್ಯ ಮಾನದಂಡ” ಎಂದು ಹೇಳುತ್ತಾರೆ.
ಕುನೋ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಅಗರ ಎನ್ನುವ ಊರಿನವರಾದ ರಾಮಗೋಪಾಲ್ ಎನ್ನುವವರಿಗೆ ತಮ್ಮ ಜೀವನೋಪಾಯ ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ರಾಜತಾಂತ್ರಿಕ ಸಂಬಂಧಗಳಿಗೆ ಅಪಾಯವೊಡ್ಡುತ್ತದೆ ಎನ್ನುವ ವಿಷಯವೇ ತಿಳಿದಿಲ್ಲ. ಅವರು ಮತ್ತು ಅವರಂತಹ ಇಲ್ಲಿನ ಸಾವಿರಾರು ಆದಿವಾಸಿ ಜನರಿಗೆ ಇದಕ್ಕಿಂತಲೂ ಹೆಚ್ಚಿನ ಚಿಂತೆಗೀಡುಮಾಡುವ ಸಂಗತಿಗಳಿವೆ.
ಅವರು ಇತ್ತೀಚೆಗೆ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿಸುತ್ತಿದ್ದಾರೆ. ಇದಕ್ಕೆ ಕಾರಣ ಅವರು ಎತ್ತುಗಳ ಬದಲು ಈ ಯಂತ್ರವನ್ನು ಖರೀದಿಸಬಲ್ಲಷ್ಟು ಶ್ರೀಮಂತರಾದರು ಎಂದಲ್ಲ. ಅವರು ಅಂತಹ ಶ್ರೀಮಂತಿಕೆಯಿಂದ ಮೈಲುಗಟ್ಟಲೆ ದೂರದಲ್ಲಿದ್ದಾರೆ.
“ಮೋದಿಯವರು ನಮ್ಮ ಎತ್ತುಗಳನ್ನು ಹೊರಗೆ ಬಿಡದಂತೆ ಆದೇಶಿಸಿದ್ದಾರೆ. ನಮಗೆ ಎತ್ತು ಮೇಯಿಸಲು ಇರುವ ಸ್ಥಳವೆಂದರೆ ಕಾಡು [ಕುನೋ] ಆದರೆ ಆದರೆ ಅಲ್ಲಿ ಎತ್ತುಗಳನ್ನು ಮೇಯಿಸಲು ಅಲ್ಲಿಗೆ ಹೋದರೆ ಫಾರೆಸ್ಟ್ ರೇಂಜರುಗಳು ನಮ್ಮನ್ನು ಹಿಡಿದು ಜೈಲಿಗೆ ಹಾಕುತ್ತಾರೆ. ನಮಗೆ ಅದರ ಬದಲು ಟ್ರ್ಯಾಕ್ಟರ್ ಬಾಡಿಗೆಗೆ ಪಡೆಯುವುದೇ ಲೇಸು ಎನ್ನಿಸಿತು.”
ಆದರೆ ರಾಮಗೋಪಾಲ್ ಅವರ ಕುಟುಂಬ ಟ್ರ್ಯಾಕ್ಟರ್ ಬಾಡಿಗೆ ಭರಿಸುವ ಸ್ಥಿತಿಯಲ್ಲಿಲ್ಲ. ಅವರದು ಬಡತನದ ರೇಖೆಗಿಂತಲೂ ಕೆಳಗಿರುವ ಕುಟುಂಬ. ಕುನೋ ರಾಷ್ಟ್ರೀಯ ಉದ್ಯಾನವು ಚಿರತೆಗೆಳ ನೆಲೆಯಾದ ನಂತರ ಅವರು ತಮ್ಮ ಜೀವನೋಪಾಯವನ್ನು ಕಳೆದುಕೊಂಡು ತೀವ್ರ ನಷ್ಟದಲ್ಲಿದ್ದಾರೆ.






















