“ಪಂಖೇ ವಾಲೇ (ಗಾಳಿ ವಿದ್ಯುತ್), ಬ್ಲೇಡ್ ವಾಲೇ [ಸೋಲಾರ್ ಫಾರ್ಮ್ಗಳು] ನಮ್ಮ ಒರಾಣ್ ನಾಶ ಮಾಡುತ್ತಿವೆ” ಎನ್ನುತ್ತಾರೆ ಸೋಂಟಾ ಗ್ರಾಮದ ಸುಮೇರ್ ಸಿಂಗ್ ಭಾಟಿ. ರೈತ ಮತ್ತು ಪಶುಪಾಲಕನಾಗಿರುವ ಅವರ ಮನೆ ಜೈಸಲ್ಮೇರ್ ಜಿಲ್ಲೆಯ ದೇಗ್ರಾಯ್ ಒರಾಣ್ ಪಕ್ಕದಲ್ಲಿದೆ.
ಒರಾಣ್ ಎನ್ನುವುದು ಎನ್ನುವುದು ದೇವರ ಕಾಡುಗಳಾಗಿದ್ದು ಅಲ್ಲಿಗೆ ಎಲ್ಲಾ ಜನರಿಗೂ ಪ್ರವೇಶವಿದೆ. ಅದನ್ನೂ ಊರಿನ ಸಾಮಾನ್ಯ ಆಸ್ತಿ ಸಂಪನ್ಮೂಲವೆಂದು ಪರಿಗಣಿಸಲಾಗುತ್ತದೆ. ಇಂತಹ ಪ್ರತಿ ಒರಾಣ್ನಲ್ಲೂ ಒಂದು ದೇವರಿರುತ್ತದೆ ಮತ್ತು ಅದು ಅದರ ಸುತ್ತಲಿನ ಊರಿನ ಜನರಿಂದ ಪೂಜಿಸಲ್ಪಡುತ್ತದೆ. ಈ ದೇವರು ಊರಿನ ಜನರು ಈ ಜಾಗವನ್ನು ಆಕ್ರಮಿಸದಂತೆ ಕಾಯುತ್ತದೆ. ಈ ಕಾಡುಗಳಲ್ಲಿ ಊರಿನ ಜನರು ಬಿದ್ದಿರುವ ಸೌದೆ ತರಬಹುದು ಆದರೆ ಮರಗಳನ್ನು ಕಡಿಯುವಂತಿಲ್ಲ. ಇಲ್ಲಿ ಯಾವುದೇ ನಿರ್ಮಾಣಗಳಿಗೆ ಅವಕಾಶವಿರುವುದಿಲ್ಲ ಮತ್ತು ಇಲ್ಲಿನ ಜಲಮೂಲಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ.
ಆದರೆ, ಸುಮೇರ್ ಸಿಂಗ್ ಹೇಳುತ್ತಾರೆ, "ಅವರು [ನವೀಕರಿಸಬಹುದಾದ ಇಂಧನ ಕಂಪನಿಗಳು] ಶತಮಾನಗಳಷ್ಟು ಹಳೆಯ ಮರಗಳನ್ನು ಕಡಿದುಹಾಕಿದ್ದಾರೆ ಮತ್ತು ಹುಲ್ಲು ಮತ್ತು ಪೊದೆಗಳನ್ನು ಬೇರುಸಹಿತ ಕಿತ್ತುಹಾಕಿದ್ದಾರೆ. ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆನ್ನಿಸುತ್ತದೆ.”
ಸುಮೇರ್ ಸಿಂಗ್ ಅವರ ಆಕ್ರೋಶ ಜೈಸಲ್ಮೇರ್ ಜಿಲ್ಲೆಯ ನೂರಾರು ಹಳ್ಳಿಗಳ ಜನರ ಮಾತಿನಲ್ಲಿ ಪ್ರತಿಧ್ವನಿಸುತ್ತದೆ. ಅವರು ರಿನಿವೇಬಲ್ ಎನರ್ಜಿ (ಆರ್ ಇ) ಕಂಪನಿಗಳು ಅವರ ಊರಿನ ಒರಾಣ್ಗಳನ್ನು ವಶಪಡಿಸಿಕೊಳ್ಳುವುದನ್ನು ಅಸಹಾಯಕರಾಗಿ ನೋಡುತ್ತಿದ್ದಾರೆ. ಕಳೆದ 15 ವರ್ಷಗಳಲ್ಲಿ ಸಾವಿರಾರು ಹೆಕ್ಟೇರುಗಳಷ್ಟು ಭೂಮಿಯನ್ನು ವಿಂಡ್ ಮಿಲ್ ಮತ್ತು ಬೇಲಿ ಹಾಕಲ್ಪಟ್ಟಿರುವ ಸೋಲಾರ್ ಫಾರ್ಮ್ಗಳಿಗೆ ನೀಡಲಾಗಿದೆ ಎನ್ನುತ್ತಾರೆ. ಇದರ ಜೊತೆಗೆ ಹೈ ಟೆನ್ಷನ್ ವೈರ್ಗಳು ಮತ್ತು ಮೈಕ್ರೋ ಗ್ರಿಡ್ಗಳನ್ನೂ ವಿದ್ಯುತ್ತನ್ನು ಜಿಲ್ಲೆಯಿಂದ ಹೊರಗೆ ಕೊಂಡೊಯ್ಯುವ ಸಲುವಾಗಿ ಆಳವಡಿಸಲಾಗಿದೆ.
“ಜಾನುವಾರುಗಳನ್ನು ಮೇಯಿಸಲು ಸ್ಥಳವೇ ಉಳಿದಿಲ್ಲ. ಹುಲ್ಲು ಆಗಲೇ ಮುಗಿದು ಹೋಗಿದೆ [ಮಾರ್ಚ್ ತಿಂಗಳಿನಲ್ಲಿ] ಈಗ ನಮ್ಮ ಜಾನುವಾರುಗಳಿಗೆ ತಿನ್ನಲು ಇರುವುದು ಕೇರ್ ಮತ್ತು ಕೇಜ್ರಿ ಮರದ ಎಲೆಗಳು ಮಾತ್ರ. ಅವುಗಳಿಗೆ ಸಾಕಷ್ಟು ಮೇವು ಸಿಗದ ಕಾರಣ ಹಾಲಿನ ಕರಾವು ಕೂಡಾ ಕಡಿಮೆಯಾಗಿದೆ. ಮೊದಲು 5 ಲೀಟರ್ ಕರೆಯುತ್ತಿದ್ದವು ಈಗ 2 ಲೀಟರ್ ಕರೆಯುತ್ತಿವೆ” ಎನ್ನುತ್ತಾರೆ ಪಶುಪಾಲಕ ಜೋರಾ ರಾಮ್.
ಈ ಅರೆ-ಶುಷ್ಕ ಸವನ್ನಾ ಹುಲ್ಲುಗಾವಲು ಒರಾಣ್ಗಳು ಸಮುದಾಯದ ಕಲ್ಯಾಣಕ್ಕಾಗಿ ಇವೆ - ಅವು ತಮ್ಮ ಸುತ್ತಲೂ ವಾಸಿಸುವ ಸಾವಿರಾರು ಜನರಿಗೆ ಮೇವು, ಹುಲ್ಲು, ನೀರು, ಆಹಾರ ಮತ್ತು ಉರುವಲು ಒದಗಿಸುತ್ತವೆ.





























