"ಮಿರ್ಚಿ, ಲೆಹ್ಸುನ್, ಅದ್ರಕ್... ಸೋರೆಕಾಯಿ, ಕರೇಲ ಎಲೆಗಳು... ಬೆಲ್ಲ."
ಇದು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ಹಾಗಲಕಾಯಿ ಹಾಕಿ ಮಾಡುವ ಅಡುಗೆಯ ಮಾಹಿತಿಯಲ್ಲ. ಸಾವಯವ ಕೃಷಿಕರಾದ ಗುಲಾಬ್ ರಾಣಿ ತನ್ನ ಹೊಲಕ್ಕೆ ಬಳಸುವ ಪ್ರಬಲ ರಸಗೊಬ್ಬರ ಮತ್ತು ಕೀಟನಾಶಕಗಳ ಮಾಹಿತಿ. ಪನ್ನಾ ಹುಲಿ ಮೀಸಲು ಪ್ರದೇಶದ ಅಂಚಿನಲ್ಲಿರುವ ಚುಂಗುನಾ ಗ್ರಾಮದಲ್ಲಿ ಅವರು ಈ ವಸ್ತುಗಳನ್ನು ಬಳಸಿ ಕೃಷಿ ಮಾಡುತ್ತಾರೆ.
53 ವರ್ಷದ ಅವರು ತಾನೂ ಈ ಪಟ್ಟಿಯನ್ನು ಮೊದಲ ಸಲ ಕೇಳಿದಾಗ ನಕ್ಕಿದ್ದನ್ನು ನೆನಪಿಸಿಕೊಳ್ಳುತ್ತಾರೆ. “ಇದನ್ನೆಲ್ಲ ಎಲ್ಲಿಂದು ತರುವುದು? ಇದು ನನ್ನಲ್ಲಿ ಮೊದಲು ಮೂಡಿದ ಪ್ರಶ್ನೆ. ಕಡೆಗೆ ನೆನಪಾಯಿತು ಹಾಗಲ, ಸೋರೆ ಹಿತ್ತಲಿನಲ್ಲಿ ಬೆಳೆಯುತ್ತದೆ….” ಬೆಲ್ಲದಂತಹ ವಸ್ತುಗಳನ್ನು ಅವರು ಮಾರುಕಟ್ಟೆಯಿಂದ ಖರೀದಿಸಿದರು.
ಅವರು ಏನು ಮಾಡುತ್ತಿದ್ದಾರೆನ್ನು ಕುತೂಹಲದೊಂದಿಗೆ ನೋಡುತ್ತಿದ್ದ ನೆರೆಹೊರೆಯ ಜನರಿಂದ ಅವರಿಗೆ ಯಾವುದೇ ಸಹಾಯ ದೊರೆಯಲಿಲ್ಲ. ಹಾಗೆಂದು ಗುಲಾಬ್ ರಾಣಿಯವರು ಜನರು ಏನು ಯೋಚಿಸುತ್ತಿರಬಹುದು ಎನ್ನುವ ಕುರಿತಾಗಿ ತಲೆ ಕೆಡಿಸಿಕೊಂಡವರೂ ಅಲ್ಲ. ಈ ಸರಿಸುಮಾರು 500 ಜನರಿರುವ ಊರಿನಲ್ಲಿ ಸಾವಯವ ಕೃಷಿಯತ್ತ ಮುಖ ಮಾಡಿದವರಲ್ಲಿ ಅವರೇ ಮೊದಲಿಗರು ಎನ್ನುವುದರಲ್ಲಿ ಯಾವ ಅಚ್ಚರಿಯೂ ಇಲ್ಲ.
“ನಾವು ಮಾರುಕಟ್ಟೆಯಿಂದ ಖರೀದಿಸುವ ಆಹಾರ ಪದಾರ್ಥಗಳಲ್ಲಿ ಔಷಧಿಗಳನ್ನು ಬಳಸಲಾಗುತ್ತದೆ ಮತ್ತು ಅವುಗಳಿಗೆ ಹಲವು ಬಗೆಯ ರಾಸಾಯನಿಕಗಳನ್ನು ಚುಚ್ಚಲಾಗುತ್ತದೆ. ಹೀಗಿರುವಾಗ ನಾವು ಅವುಗಳನ್ನು ಏಕೆ ಬಳಸಬೇಕು ಎಂದು ಯೋಚಿಸತೊಡಗಿದೆವು” ಎಂದು ಅವರು ನಾಲ್ಕು ವರ್ಷಗಳ ಕೆಳಗೆ ತಮ್ಮ ಮನೆಯಲ್ಲಿ ಆರಂಭವಾದ ಸಾವಯವ ಕೃಷಿ ಕುರಿತ ಮಾತುಗಳನ್ನು ನೆನಪಿಸಿಕೊಂಡರು.
“ನಮ್ಮ ಕುಟುಂಬವು ಸಾವಯವ ಆಹಾರ ಸೇವನೆಯ ಕುರಿತು ಯೋಚಿಸತೊಡಗಿತು. ನಾವು ಜೈವಿಕ (ಸಾವಯವಾಗಿ ಬೆಳೆದ) ಬೆಳೆದ ಆಹಾರವನ್ನು ಸೇವಿಸಿದರೆ ಅದರಿಂದ ಆರೋಗ್ಯವೂ ಸುಧಾರಿಸುತ್ತದೆ. ಜೈವಿಕ ಗೊಬ್ಬರದಿಂದ ನಮ್ಮ ಸ್ವಾಸ್ಥ್ಯ ಉತ್ತಮಗೊಂಡರೆ ಕೀಟಗಳದ್ದ ಅಸ್ವಸ್ಥವಾಗುತ್ತದೆ” ಎಂದು ಅವರು ಹಾಸ್ಯದೊಂದಿಗೆ ನಗುತ್ತಾ ಹೇಳಿದರು.
















