ಮಾರ್ಚ್ 2020ರಲ್ಲಿ ಕೋವಿಡ್ -19 ಒಮ್ಮೆಗೆ ಹರಡಲಾರಂಭಿಸಿದಾಗ, ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯಲ್ಲಿದ್ದ ಅರುಣ್ ಗಾಯಕವಾಡ್ ಅವರ 10 ಎಕರೆ ಕೃಷಿಭೂಮಿ ನಿರ್ಜನ ರೂಪ ಧರಿಸಿತು. ಒಸ್ಮಾನಾಬಾದ್ ತಾಲ್ಲೂಕಿನ ಮಹಾಲಿಂಗಿ ಗ್ರಾಮದಲ್ಲಿರುವ ಅವರ ಪತ್ನಿ ರಾಜಶ್ರೀ (48) ಹೇಳುತ್ತಾರೆ, "ನಾವು ಆ ಸಮಯದಲ್ಲಿ ಜೋಳ, ಚನಾ[ಕಡಲೆ] ಮತ್ತು ಈರುಳ್ಳಿಯನ್ನು ಕಟಾವು ಮಾಡಿದ್ದೆವು.”
ಆದರೆ ಲಾಕ್ ಡೌನ್ ಕಾರಣದಿಂದಾಗಿ ದೇಶದೆಲ್ಲೆಡೆ ಮಾರುಕಟ್ಟೆಗಳು ಬಂದ್ ಆಗಿದ್ದವು. “ಆ ಸಮಯದಲ್ಲಿ ನಮ್ಮಿಂದ ಆ ಬೆಳೆಗಳನ್ನು ಮಂಡಿಗೆ ಸಾಗಿಸಲು ಸಾಧ್ಯವಾಗದ ಕಾರಣ ಅಷ್ಟೂ ಇಳುವರಿ ಕಣ್ಣ ಮುಂದೆಯೇ ನಾಶವಾದವು.” ಎನ್ನುತ್ತಾರೆ ರಾಜಶ್ರೀ.
ಅರುಣ್, 52, ಮತ್ತು ರಾಜಶ್ರೀ 10 ಕ್ವಿಂಟಾಲ್ ಜೋಳ, 100 ಕ್ವಿಂಟಾಲ್ ಈರುಳ್ಳಿ, ಮತ್ತು 15 ಕ್ವಿಂಟಾಲ್ ಚನಾ ಕೊಯ್ಲು ಮಾಡಿದ್ದರು. ಆ ಸಮಯದಲ್ಲಿ, ಜೋಳಕ್ಕೆ ಕ್ವಿಂಟಾಲ್ಗೆ 2,550 ಕಡಲೆಗೆ 4,800, ಮತ್ತು ಈರುಳ್ಳಿಗೆ ಸುಮಾರು ಪ್ರತಿ ಕ್ವಿಂಟಾಲ್ಗೆ 1,300 ರೂಪಾಯಿಗಳಷ್ಟು ಕನಿಷ್ಠ ಬೆಂಬಲ ಬೆಲೆಯಿತ್ತು. ಈ ಲೆಕ್ಕದಲ್ಲಿ ದಂಪತಿಗಳು ಕನಿಷ್ಠ 227,500 ರೂಪಾಯಿಗಳಷ್ಟು ನಷ್ಟವನ್ನು ಹೊಂದಿದ್ದಾರೆ, ಇದರಲ್ಲಿ ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಇತರ ಖರ್ಚುಗಳ ಮೇಲಿನ ಹೂಡಿಕೆಯನ್ನು ಸೇರಿಸಿಲ್ಲ.
ಇದಲ್ಲದೆ ಅವರಿಬ್ಬರ ಹಲವು ದಿನಗಳ ಶ್ರಮವೂ ಇದರಲ್ಲಿತ್ತೆಂದು ರಾಜಶ್ರೀ ಹೇಳುತ್ತಾರೆ. “ಕೋವಿಡ್ ಪಿಡುಗು ಆರಂಭಗೊಳ್ಳುವ ಸ್ವಲ್ಪ ಮೊದಲು ಅವರು ಹೊಸದಾಗಿ ಒಂದು ಟ್ರ್ಯಾಕ್ಟರ್ ಕೊಂಡಿದ್ದರು. ಅದರ ತಿಂಗಳ ಕಂತು 15,000 ರೂಪಾಯಿಗಳನ್ನು ಕಟ್ಟುವುದು ಕಷ್ಟವಾಗಿತ್ತು. ನಮಗೆ ಬ್ಯಾಂಕಿನಿಂದ ನೋಟೀಸುಗಳು ಬರಲು ಪ್ರಾರಂಭಗೊಂಡಿದ್ದವು.”
ಆದರೆ ಅರುಣ್ 2020ರ ಖಾರಿಫ್ ಹಂಗಾಮಿನಲ್ಲಿ (ಜುಲೈ-ಅಕ್ಟೋಬರ್) ನಷ್ಟವನ್ನು ಮರಳಿ ಪಡೆಯುವ ಭರವಸೆ ಹೊಂದಿದ್ದರು. ಕೋವಿಡ್-19ರ ಮೊದಲ ಅಲೆ ಜುಲೈ ವೇಳೆಗೆ ಇಳಿಮುಖವಾಗಿತ್ತು ಮತ್ತು ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿತ್ತು. ಅವರು ಕೆಟ್ಟ ಸಮಯ ಮುಗಿಯಿತೆಂದು ಭಾವಿಸಿದ್ದರು. "ನಾವು ಸದ್ಯದಲ್ಲೇ ಮೊದಲಿನ ಸ್ಥಿತಿಗೆ ಬರಲಿದ್ದೇವೆ ಮತ್ತು ವಿನಾಶದ ಕಾಲ ಮುಗಿಯಲಿದೆ ಎಂದು ಭಾವಿಸಿದ್ದೆವು. ಆರ್ಥಿಕ ಪರಿಸ್ಥಿತಿಯೂ ನಿಧಾನವಾಗಿ ಸುಧಾರಿಸುತ್ತಿತ್ತು” ಎಂದು ಅರುಣ್ ಅವರ 30 ವರ್ಷದ ಅಳಿಯ ಪ್ರದೀಪ ಧಾವ್ಳೆ ಹೇಳುತ್ತಾರೆ.
ಕಳೆದ ವರ್ಷದ ಜೂನ್ ಕೊನೆಯಲ್ಲಿ, ಅರುಣ್ ಮತ್ತು ರಾಜಶ್ರೀ ತಮ್ಮ ಹೊಲದಲ್ಲಿ ಸೋಯಾಬೀನ್ ಬಿತ್ತನೆ ಮಾಡಿದರು. ಆದರೆ ಅಕ್ಟೋಬರ್ ತಿಂಗಳಿನಲ್ಲಿ ಕೊಯ್ಲಿನ ಸಮಯದಲ್ಲಿ ಸುರಿದ ಅಕಾಲಿಕ ಮಳೆಯು ಒಸ್ಮಾನಾಬಾದ್ ಪ್ರದೇಶದೆಲ್ಲೆಡೆಯ ಸೋಯಾಬೀನ್ ಬೆಳೆಗಳನ್ನು ಕೊಚ್ಚಿಕೊಂಡು ಹೋಯಿತು. "ನಮ್ಮ ಇಡೀ ಕೃಷಿಭೂಮಿ ಪ್ರವಾಹಕ್ಕೆ ಸಿಲುಕಿತ್ತು" ಎಂದು ರಾಜಶ್ರೀ ಹೇಳುತ್ತಾರೆ. "ಫಸಲಿನ ಒಂದು ಸಣ್ಣ ಭಾಗವನ್ನೂ ಉಳಿಸಿಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ. ಆಗ ನಾವು ಅನುಭವಿಸಿದ ನಷ್ಟದ ಪ್ರಮಾಣವನ್ನು ಅವರು ನನಗೆ ಹೇಳಲಿಲ್ಲ, ಬಹುಶಃ ಅವರಿಗೆ ನನ್ನ ಆತಂಕವನ್ನು ಹೆಚ್ಚಿಸುವುದು ಬೇಕಿರಲಿಲ್ಲ.” ಕಳೆದ 4-5 ವರ್ಷಗಳಲ್ಲಿ ಸಾಲವು 10 ಲಕ್ಷ ರೂ.ಗಳಿಗೆ ಹತ್ತಿರದಲ್ಲಿದೆಯೆಂದು ಪತಿ ಹೇಳಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ.







