ಒಂದಿಷ್ಟು ಸಮಯದ ಹಿಂದೆ, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಹಟ್ಕನಂಗ್ಲೆ ತಾಲ್ಲೂಕಿನ ಖೋಚಿ ಎಂಬ ಹಳ್ಳಿಯ ರೈತರು, ಒಂದು ಎಕರೆ ಜಮೀನಿನಲ್ಲಿ ಯಾರು ಗರಿಷ್ಠ ಕಬ್ಬನ್ನು ಉತ್ಪಾದಿಸುತ್ತಾರೆ ಎಂಬ ಬಗ್ಗೆ ಪರಸ್ಪರ ಸ್ಪರ್ಧೆಗಿಳಿದರು. ಈ ಆಚರಣೆಯು ಸುಮಾರು ಆರು ದಶಕಗಳಷ್ಟು ಹಳೆಯದು ಎಂದು ಗ್ರಾಮಸ್ಥರು ಹೇಳುತ್ತಾರೆ. ಈ ರೀತಿಯ ಆರೋಗ್ಯಕರ ಸ್ಪರ್ಧೆಯು ಇದರಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಉತ್ತಮ ಪ್ರತಿಫಲಗಳನ್ನು ನೀಡುತ್ತಿತ್ತು: ಕೆಲವು ರೈತರು ಎಕರೆಗೆ 80,000-100,000 ಕಿಲೋಗಳಷ್ಟು ಬೆಳೆಯುತ್ತಿದ್ದರು, ಇದು ಸಾಮಾನ್ಯ ಇಳುವರಿಯ ಸುಮಾರು 1.5 ಪಟ್ಟು ಹೆಚ್ಚು.
ಆಗಸ್ಟ್ 2019ರಲ್ಲಿ ಆ ಆಚರಣೆಯು ಹಠಾತ್ತಾಗಿ ಕೊನೆಗೊಂಡಿತು, ಆ ಅಲ್ಲಿ ಸುರಿದ ಮಳೆಯು ಗ್ರಾಮದ ಹಲವಾರು ಭಾಗಗಳನ್ನು ಸುಮಾರು 10 ದಿನಗಳವರೆಗೆ ಮುಳುಗಿಸಿ ಅದರ ಕಬ್ಬಿನ ಬೆಳೆಯ ಹೆಚ್ಚಿನ ಭಾಗವನ್ನು ಹಾನಿಗೊಳಿಸಿತು. ಎರಡು ವರ್ಷಗಳ ನಂತರ, ಜುಲೈ 2021ರಲ್ಲಿ, ಮತ್ತೆ ಸುರಿದ ಭಾರಿ ಮಳೆ ಮತ್ತು ಪ್ರವಾಹವು ಖೋಚಿಯ ಕಬ್ಬು ಮತ್ತು ಸೋಯಾಬೀನ್ ಬೆಳೆಗಳಿಗೆ ಮತ್ತೊಮ್ಮೆ ಭಾರಿ ಹಾನಿಯನ್ನುಂಟು ಮಾಡಿತು.
"ರೈತರು ಈಗ ಪೈಪೋಟಿಗಿಳಿಯುವುದಿಲ್ಲ; ಬದಲಾಗಿ, ತಾವು ಬೆಳೆದ ಕಬ್ಬಿನ ಕನಿಷ್ಠ ಅರ್ಧದಷ್ಟು ಉಳಿಯಲಿ ಎಂದು ಅವರು ಪ್ರಾರ್ಥಿಸುತ್ತಾರೆ," ಎಂದು 42 ವರ್ಷದ ಗೇಣಿದಾರ ರೈತ ಮಹಿಳೆ ಮತ್ತು ಖೋಚಿ ನಿವಾಸಿ ಗೀತಾ ಪಾಟೀಲ್ ಹೇಳುತ್ತಾರೆ. ಕಬ್ಬಿನ ಉತ್ಪಾದನೆಯನ್ನು ಹೆಚ್ಚಿಸಲು ಬೇಕಿರುವ ಎಲ್ಲಾ ತಂತ್ರಗಳನ್ನು ಕಲಿತಿದ್ದೇನೆ ಎಂದು ಒಮ್ಮೆ ನಂಬಿದ್ದ ಗೀತಾ, ಎರಡು ಪ್ರವಾಹಗಳಲ್ಲಿ 8 ಲಕ್ಷ ಕಿಲೋ ತೂಕಕ್ಕೂ ಹೆಚ್ಚು ಕಬ್ಬನ್ನು ಕಳೆದುಕೊಂಡರು. "ಏನೋ ತಪ್ಪಾಗಿದೆ," ಎಂದು ಅವರು ಹೇಳುತ್ತಾರೆ. ಹವಾಮಾನ ಬದಲಾವಣೆ ಕುರಿತು ಅವರು ಗಮನವಹಿಸಿಲ್ಲ.
"ಮಳೆಯ ಮಾದರಿ [2019ರ ಪ್ರವಾಹದಿಂದ] ಸಂಪೂರ್ಣವಾಗಿ ಬದಲಾಗಿದೆ," ಎಂದು ಅವರು ಹೇಳುತ್ತಾರೆ. 2019ರವರೆಗೆ ಅವರು ಒಂದು ನಿರ್ದಿಷ್ಟ ಬೆಳೆ ಮಾದರಿಯನ್ನು ಹೊಂದಿದ್ದರು. ಪ್ರತಿ ಕಬ್ಬಿನ ಕಟಾವಿನ ನಂತರ, ಸಾಮಾನ್ಯವಾಗಿ ಅಕ್ಟೋಬರ್-ನವೆಂಬರ್ ನ ಆಸುಪಾಸಿನಲ್ಲಿ, ವಿಭಿನ್ನ ಬೆಳೆಯನ್ನು ಬೆಳೆಯುತ್ತಿದ್ದರು - ಸೋಯಾಬೀನ್, ಭುಯಿಮುಗ್ (ನೆಲಗಡಲೆ), ವಿವಿಧ ರೀತಿಯ ಅಕ್ಕಿ, ಶಾಲು (ಹೈಬ್ರಿಡ್ ಜೋಳ) ಅಥವಾ ಸಜ್ಜೆ – ಇವು ಮಣ್ಣು ತನ್ನ ಪೋಷಕಾಂಶಗಳನ್ನು ಉಳಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತವೆ. ಅವರ ಬದುಕು ಮತ್ತು ಕೆಲಸದಲ್ಲಿ ಒಂದು ಸ್ಥಿರವಾದ ಮತ್ತು ಪರಿಚಿತವಾದ ಲಯವಿತ್ತು. ಅದು ಇಂದು ಇಲ್ಲವಾಗಿದೆ.
"ಈ ವರ್ಷ [2022] ಮಾನ್ಸೂನ್ ಒಂದು ತಿಂಗಳು ತಡವಾಗಿತ್ತು. ಆದರೆ ಮಳೆ ಪ್ರಾರಂಭವಾದಾಗ, ಒಂದು ತಿಂಗಳೊಳಗೆ ಗದ್ದೆಗಳು ಬಹುತೇಕ ಜಲಾವೃತಗೊಂಡವು." ಆಗಸ್ಟ್ ತಿಂಗಳಿನಲ್ಲಿ ಭಾರಿ ಮಳೆಯಾದ ಕಾರಣ ಹೊಲಗದ್ದೆಗಳ ದೊಡ್ಡ ಪ್ರದೇಶಗಳು ಸುಮಾರು ಎರಡು ವಾರಗಳ ಕಾಲ ಮುಳುಗಿದ್ದವು; ಆಗತಾನೇ ಕಬ್ಬು ಬೆಳೆದಿದ್ದ ರೈತರು ಅತಿಯಾದ ನೀರು ಬೆಳೆಗಳಿಗೆ ಹಾನಿಯುಂಟುಮಾಡಿದ್ದರಿಂದ ವ್ಯಾಪಕ ನಷ್ಟವನ್ನು ಅನುಭವಿದರು. ನೀರಿನ ಮಟ್ಟವು ಮತ್ತಷ್ಟು ಹೆಚ್ಚಾದರೆ ಜನರು ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಪಂಚಾಯತ್ ಎಚ್ಚರಿಕೆಗಳನ್ನು ಸಹ ನೀಡಿತು.



















