ಒಂದು ದಿನ ಬೆಳಗಿನ ಹೊತ್ತು ಅನು ಮರವೊಂದರ ಕೆಳಗೆ ಅರ್ಧ ಹರಿದ ಪ್ಲಾಸ್ಟಿಕ್ ಚಾಪೆಯ ಮೇಲೆ ಕುಳಿತಿದ್ದರು, ಅವರ ಕೂದಲುಗಳು ಹರಡಿಕೊಂಡು ಬಹಳ ಬಳಲಿದಂತೆ ಕಾಣುತ್ತಿದ್ದರು. ಹಾದುಹೋಗುವ ಜನರು ಅವರೊಂದಿಗೆ ದೂರದಿಂದಲೇ ಮಾತನಾಡಿ ಮುಂದಕ್ಕೆ ಹೋಗುತ್ತಿದ್ದರು. ಹತ್ತಿರದಲ್ಲಿದ್ದ ಜಾನುವಾರು ಕಟ್ಟುವ ಜಾಗ ಮತ್ತು ಮೇವಿನ ರಾಶಿಗಳು ಬಿಸಿಲಿನಲ್ಲಿ ಒಣಗುತ್ತಿದ್ದವು.
“ಮಳೆ ಬಂದಾಗಲೂ ನಾನು ಇದೇ ಮರದಡಿ ಕೊಡೆ ಹಿಡಿದುಕೊಂಡು ಕೂರುತ್ತೇನೆ, ಮತ್ತೆ ಮನೆಯೊಳಗೆ ಹೋಗುವುದಿಲ್ಲ. ನನ್ನ ನೆರಳು ಕೂಡ ಇನ್ನೊಬ್ಬರ ಮೇಲೆ ಬೀಳುವಂತಿಲ್ಲ. ನಮಗೆ ನಮ್ಮ ದೇವರ ಕೋಪವನ್ನು ಭರಿಸುವಷ್ಟು ಶಕ್ತಿಯಿಲ್ಲ.” ಎನ್ನುತ್ತಾರೆ ಅನು.
ಆ ಅವರ ಮನೆಯಿಂದ ಸುಮಾರು 100 ಮೀಟರ್ ದೂರದ ತೆರೆದ ಮೈದಾನವೊಂದರಲ್ಲಿತ್ತು. ಅವರು ಪ್ರತಿ ತಿಂಗಳು ಮುಟ್ಟಾದ ದಿನದಿಂದ ಮೂರು ದಿನಗಳ ಕಾಲ ಅವರಿಗೆ ಆ ಮರದ ಬುಡವೇ ಮನೆಯಾಗಿರುತ್ತದೆ.
“ನನ್ನ ಮಗಳು ತಟ್ಟೆಯಲ್ಲ ಊಟ ತಿಂಡಿಗಳನ್ನು ತಂದಿಟ್ಟು ಹೋಗುತ್ತಾಳೆ” ಎಂದು ಮುಂದುವರೆದು ಹೇಳುತ್ತಾರೆ ಅನು (ಹೆಸರು ಬದಲಾಯಿಸಲಾಗಿದೆ) ಅವರು ಬೇರೆ ಇರುವಷ್ಟು ದಿನವೂ ಪ್ರತ್ಯೇಕ ತಟ್ಟೆ-ಪಾತ್ರೆಗಳನ್ನು ಬಳಸುತ್ತಾರೆ. “ಇದರ ಅರ್ಥ ನನಗೆ ಇಲ್ಲಿ ವಿರಮಿಸುವುದೆಂದರೆ ಬಹಳ ಇಷ್ಟವೆಂದಲ್ಲ. ನನಗೆ ಮನೆಯಲ್ಲಿ ಕೆಲಸ ಮಾಡಬೇಕೆನ್ನಿಸುತ್ತದೆ, ಆದರೂ ನಮ್ಮ ಸಂಸ್ಕೃತಿಗೆ ಬೆಲೆ ಕೊಡುವ ಸಲುವಾಗಿ ಇಲ್ಲಿರುತ್ತೇನೆ. ಆದರೂ ನಮ್ಮ ಹೊಲದಲ್ಲಿ ಹೆಚ್ಚು ಕೆಲಸಗಳಿದ್ದಾಗ ಅಲ್ಲಿ ಕೆಲಸ ಮಾಡುತ್ತೇನೆ. ಸುಮ್ಮನೆ ಕೂರುವುದಿಲ್ಲ.” ಅನು ಅವರ ಕುಟುಂಬವು ತಮ್ಮ ಒಂದೂವರೆ ಎಕರೆ ಹೊಲದಲ್ಲಿ ರಾಗಿಯನ್ನು ಬೆಳೆಯುತ್ತದೆ.
ಆದರೂ ಒಟ್ಟಾರೆಯಾಗಿ ಅನು ಅವರ ಈ ಪ್ರತ್ಯೇಕ ವಾಸ ಅವರಿಗೆ ಮಾತ್ರ ಮೀಸಲಾಗಿಲ್ಲ. ಅವರ 19 ಮತ್ತು 17 ವರ್ಷದ ಹೆಣ್ಣು ಮಕ್ಕಳೂ ಈ ಆಚರಣೆಯನ್ನು ಪಾಲಿಸುತ್ತಾರೆ. (21 ವರ್ಷದ ಇನ್ನೊಬ್ಬ ಮಗಳಿಗೆ ಮದುವೆಯಾಗಿದೆ). ಅವರ ಹಳ್ಳಿಯಲ್ಲಿನ ಎಲ್ಲಾ ಎಂದರೆ ಸುಮಾರು 25 ಕಾಡುಗೊಲ್ಲ ಕುಟುಂಬಗಳೂ ಇದೇ ರೀತಿಯಲ್ಲಿ ಪ್ರತ್ಯೇಕವಾಸವನ್ನು ಆಚರಿಸಲೇಬೇಕು.
ಆಗಷ್ಟೇ ಮಗುವನ್ನು ಹೆತ್ತಿರುವ ಹೆಂಗಸರೂ ಒಂದಿಷ್ಟು ನಿರ್ಬಂಧಗಳನ್ನು ಪಾಲಿಸಲೇಬೇಕು. ಅನು ಅವರು ಕುಳಿತಿದ್ದ ಮರದ ಬಳಿಯೇ ಸುಮಾರು ಆರು ಗುಡಿಸಲುಗಳಿದ್ದವು. ಎಲ್ಲವೂ ಒಂದರಿಂದ ಒಂದಕ್ಕೆ ಅಂತರದಲ್ಲಿದ್ದವು. ಆ ಗುಡಿಸಲುಗಳೇ ಬಾಣಂತಿ ಮತ್ತು ಮಗುವಿಗೆ ಇರಲು ಮನೆ. ಈ ಗುಡಿಸಲುಗಳು ಬೇರೆ ಸಮಯದಲ್ಲಿ ಖಾಲಿ ಇರುತ್ತವೆ. ಮುಟ್ಟಾದವರು ಮರದ ಕೆಳಗೇ ದಿನ ಕಳೆಯಬೇಕೆಂದು ನಿರೀಕ್ಷಿಸಲಾಗುತ್ತದೆ.















