ಈ ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಈ ಎಲ್ಲಾ ಚಿತ್ರಗಳನ್ನು ಪಿ.ಸಾಯಿನಾಥ್ ಅವರು 1993ರಿಂದ 2002ರ ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಈ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.
ಬದುಕಿನ ಮೇಲೆ ಹಿಡಿತ ಸಾಧಿಸುತ್ತಾ…
ಇಲ್ಲಿಗೆ ಬರಲು ಮತ್ತು ಸೈಕಲ್ ಓಡಿಸುವುದನ್ನು ಕಲಿಯಲು ಅವರು ತನ್ನಲ್ಲಿದ್ದ ಅತ್ಯುತ್ತಮ ಸೀರೆಯನ್ನು ಉಟ್ಟಿದ್ದರು. ಈ ದೃಶ್ಯ ತಮಿಳುನಾಡಿನ ಪುದುಕೋಟ್ಟೈನಲ್ಲಿ ನಡೆದ ಈ 'ಸೈಕ್ಲಿಂಗ್ ತರಬೇತಿ ಶಿಬಿರ'ದಲ್ಲಿ ಕಂಡಿದ್ದು. ಅವರು ಇಲ್ಲಿರಲು ತುಂಬಾ ಉತ್ಸುಕಳಾಗಿದ್ದರು. ಅವರ ಜಿಲ್ಲೆಯ ಸುಮಾರು 4,000 ಅತ್ಯಂತ ಬಡ ಮಹಿಳೆಯರು ಗಣಿಗಳನ್ನು ನಿಯಂತ್ರಿಸಲು ಇಲ್ಲಿಗೆ ಧಾವಿಸಿದ್ದರು, ಅಲ್ಲಿ ಅವರು ಒಂದು ಕಾಲದಲ್ಲಿ ಗುತ್ತಿಗೆ ಕಾರ್ಮಿಕರಾಗಿದ್ದರು. ಚೈತನ್ಯ, ಸಾಕ್ಷರತಾ ಆಂದೋಲನದೊಂದಿಗೆ ರಾಜಕೀಯವಾಗಿ ಸಾಗುತ್ತಿದ್ದ ಅವರ ಸಂಘಟಿತ ಹೋರಾಟ ಪುದುಕೋಟ್ಟೈನಲ್ಲಿ ಬದಲಾವಣೆ ತಂದಿತ್ತು.
ಸಂಪನ್ಮೂಲಗಳ ಮಾಲೀಕತ್ವ ಮತ್ತು ನಿಯಂತ್ರಣದ ಹಕ್ಕನ್ನು ಕೇಳುವುದು ಹೋರಾಟದ ಮುಖ್ಯ ಉದ್ದೇಶವಾಗಿತ್ತು ಮತ್ತು ಈಗಲೂ ಬೇಡಿಕೆ ಹಾಗೆಯೇ ಇದೆ. ಕೋಟ್ಯಂತರ ಗ್ರಾಮೀಣ ಮಹಿಳೆಯರ ಬದುಕು ಹಸನಾಗಬೇಕಾದರೆ ಅವರಿಗೆ ಈ ಹಕ್ಕುಗಳನ್ನು ನೀಡಬೇಕು.
ಇದು ಮಧ್ಯಪ್ರದೇಶದ ಝಬುವಾ ಪಂಚಾಯತ್ನ ಒಂದು ಗುಂಪು, ಇದರ ಸದಸ್ಯರೆಲ್ಲರೂ ಮಹಿಳೆಯರೇ. ಸ್ಥಳೀಯ ಆಡಳಿತದಲ್ಲಿ ಭಾಗಿಗಳಾಗುವುದು ಅವರ ಸ್ಥಿತಿಯನ್ನು ಸುಧಾರಿಸಿದೆ ಮತ್ತು ಅವರ ಸ್ವಾಭಿಮಾನವನ್ನು ಹೆಚ್ಚಿಸಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅವರ ಸ್ವಂತ ಹಳ್ಳಿಗಳಲ್ಲಿ ಅವರ ಪ್ರಭಾವ ಇನ್ನೂ ಸೀಮಿತವಾಗಿದೆ. ಅವರು ಕೆಲವೇ ಕೆಲವು ವಿಷಯಗಳ ಮೇಲೆ ಮಾಲೀಕತ್ವ ಮತ್ತು ನಿಯಂತ್ರಣವನ್ನು ಹೊಂದಿರುತ್ತಾರೆ. ಉದಾಹರಣೆಗೆ, ಅವರಿಗೆ ಭೂಮಿ ಮೇಲೆ ಯಾವುದೇ ಹಕ್ಕಿಲ್ಲ. ಮತ್ತು ಹೆಚ್ಚಿನ ವಿಷಯಗಳಲ್ಲಿ ಯಾರೂ ಅವರ ಹಕ್ಕುಗಳನ್ನು ಗುರುತಿಸುವುದಿಲ್ಲ, ಅವರು ಕಾನೂನುಬದ್ಧವಾಗಿ ಅರ್ಹರಾಗಿರುವ ವಿಷಯಗಳಲ್ಲಿಯೂ ಸಹ. ದಲಿತ ಮಹಿಳಾ ಸರಪಂಚ್ ತನ್ನ ಉಪ ಸರಪಂಚ ಅಥವಾ ಸಹಾಯಕ ಜಮೀನ್ದಾರ ಎನ್ನುವುದನ್ನು ತಿಳಿದರೆ ಏನಾಗಬಹುದು? ಸ್ಥಾನದ ಆಧಾರದ ಮೇಲೆ ಅವರ ಹಿರಿತನವನ್ನು ನೋಡಿ ಅವರು (ಜಮೀಂದಾರ್) ಅವರ ಮಾತನ್ನು ಕೇಳುತ್ತಾರೆಯೇ? ಅಥವಾ ಜಮೀನ್ದಾರನು ತನ್ನ ಕೆಲಸಗಾರನನ್ನು ನಡೆಸಿಕೊಳ್ಳುವಂತೆ ಅವನು ಅವರನ್ನು ನಡೆಸಿಕೊಳ್ಳುತ್ತಾನೆಯೇ? ಅಥವಾ ಮಹಿಳೆಯನ್ನು ಪುರುಷನೊಬ್ಬ ಗೌರವದಿಂದ ನಡೆಸಿಕೊಳ್ಳುತ್ತಾನಾ? ಇಲ್ಲಿ ಮಹಿಳಾ ಸರಪಂಚರು ಮತ್ತು ಪಂಚಾಯತ್ ಸದಸ್ಯರ ಬಟ್ಟೆ ಹರಿದು ಹಾಕಲಾಗುತ್ತದೆ, ಹೊಡೆಯಲಾಗುತ್ತದೆ, ಅತ್ಯಾಚಾರ ಮತ್ತು ಅಪಹರಣ ಮಾಡಲಾಗುತ್ತದೆ ಮತ್ತು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತದೆ. ಆದರೂ ಇಲ್ಲಿನ ಪಂಚಾಯಿತಿಯ ಮಹಿಳೆಯರು ಬೆರಗುಗೊಳಿಸುವ ಗುರಿ ಸಾಧಿಸಿದ್ದಾರೆ. ಇನ್ನು ಊಳಿಗಮಾನ್ಯ ಪದ್ಧತಿ ಕೊನೆಗೊಂಡರೆ, ಅವರು ಏನನ್ನು ಸಾಧಿಸಲು ಸಾಧ್ಯವಿಲ್ಲ ಹೇಳಿ?






