ಅಂದು ಆ ರಕ್ತಸಿಕ್ತ ಸ್ಟ್ರೆಚರ್ ನೋಡಿದ ಶ್ರೀಕೃಷ್ಣ ಬಾಜಪೇಯಿ ಗಾಬರಿಯಾಗಿದ್ದರು. “ಹೆರಿಗೆ ಸುಲಭವಾಗಿ ಆಗುವುದಿಲ್ಲವೆಂದು ನಮಗೆ ಮೊದಲೇ ತಿಳಿಸಲಾಗಿತ್ತು,” ಎಂದು ನೆನಪಿಸಿಕೊಳ್ಳುತ್ತಾರೆ. 70 ವರ್ಷ ಪ್ರಾಯದ ಹಿರಿಯ ರೈತನಾಗಿರುವ ಅವರು ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿಯವರು. ಆ ದಿನ ಫೆಬ್ರವರಿ ತಿಂಗಳ ಮೈಕೊರೆಯುವ ಚಳಿಯ ಮಧ್ಯಾಹ್ನ ಮನೆಯ ಹೊರಗೆ ಬೆಂಕಿಯೆದುರು ಕುಳಿತು ಮೈ ಬೆಚ್ಚಗಾಗಿಸಿಕೊಳ್ಳುತ್ತಿದ್ದರು. “ನಮ್ಮೂರಿನ ಆಶಾ ಕಾರ್ಯಕರ್ತೆ ನನ್ನ ಸೊಸೆಯ ಹೆರಿಗೆಯನ್ನು ʼಅತ್ಯಂತ ಕ್ಲಿಷ್ಟʼ ಹೆರಿಗೆಯೆಂದು ಮಾರ್ಕ್ ಮಾಡಿದ್ದರು.”
ಇದು ಸೆಪ್ಟೆಂಬರ್ 2019ರಲ್ಲಿ ನಡೆದಿದ್ದಾದರೂ, ಶ್ರೀಕೃಷ್ಣ ಅದನ್ನು ನಿನ್ನೆ ಮೊನ್ನೆ ನಡೆದಿರುವಂತೆ ನೆನಪಿಟ್ಟುಕೊಂಡಿದ್ದಾರೆ. "[ಪ್ರವಾಹ] ನೀರು ಆಗತಾನೇ ಕಡಿಮೆಯಾಗಿತ್ತು, ಆದರೆ ಅದು ರಸ್ತೆಗಳನ್ನು ಹಾನಿಗೊಳಿಸಿತ್ತು, ಹೀಗಾಗಿ ಆಂಬ್ಯುಲೆನ್ಸ್ ನಮ್ಮ ಮನೆ ಬಾಗಿಲಿಗೆ ಬರಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳುತ್ತಾರೆ. ಶ್ರೀಕೃಷ್ಣ ಅವರ ಕುಗ್ರಾಮ ತಾಂಡಾ ಖುರ್ದ್, ಲಾಹರ್ಪುರ್ ಬ್ಲಾಕಿನಲ್ಲಿದೆ, ಇದು ಶಾರದಾ ಮತ್ತು ಘಾಘ್ರಾ ನದಿಗಳಿಗೆ ಹತ್ತಿರದಲ್ಲಿದೆ. ಇಲ್ಲಿನ ಗ್ರಾಮಗಳು ಪದೇ ಪದೇ ಪ್ರವಾಹಕ್ಕೆ ತುತ್ತಾಗುತ್ತವೆ, ಇದರಿಂದಾಗಿ ಇಲ್ಲಿ ತುರ್ತು ಸಂದರ್ಭಗಳಲ್ಲಿ ಸಾರಿಗೆ ವ್ಯವಸ್ಥೆ ಮಾಡುವುದು ಕಷ್ಟ.
ತಾಂಡಾ ಖುರ್ದದಿಂದ ಸೀತಾಪುರದ ಜಿಲ್ಲಾಸ್ಪತ್ರೆಯವರೆಗಿನ 42 ಕಿ.ಮೀ ಪ್ರಯಾಣವು ಯಾವುದೇ ಗರ್ಭಿಣಿ ಮಹಿಳೆಗೆ ಹೆರಿಗೆಯ ಸಮಯದಲ್ಲಿ ದೀರ್ಘವಾಗಿರುತ್ತದೆ - ಮೊದಲ ಐದು ಕಿಲೋಮೀಟರ್ ದಾರಿಯನ್ನು ಏರುತಗ್ಗಿನ, ಜಾರು ರಸ್ತೆಗಳಲ್ಲಿ ದ್ವಿಚಕ್ರ ವಾಹನದಿಂದ ಕ್ರಮಿಸಬೇಕಾಗುತ್ತದೆ. "ಆಂಬ್ಯುಲೆನ್ಸ್ ಬಳಿ ಹೋಗಲು ನಾವು ಆ ದಾರಿಯಲ್ಲಿ ಹೋಗಬೇಕಾಗಿತ್ತು" ಎಂದು ಶ್ರೀಕೃಷ್ಣ ಹೇಳುತ್ತಾರೆ. "ಆದರೆ ನಿಜವಾದ ಸಮಸ್ಯೆಗಳು ನಾವು ಜಿಲ್ಲಾಸ್ಪತ್ರೆಗೆ ಬಂದ ನಂತರ ಪ್ರಾರಂಭವಾದವು."
ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರವೂ ಮಮತಾ ಅವರಿಗೆ ರಕ್ತಸ್ರಾವ ನಿಂತಿರಲಿಲ್ಲ. ಎಲ್ಲವೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಿದ್ದೆ ಎಂದು ಶ್ರೀಕೃಷ್ಣ ಹೇಳುತ್ತಾರೆ. “ಇದೇನೂ ತೀರಾ ಅನಿರೀಕ್ಷಿತವಾಗಿರಲಿಲ್ಲ. ಸಮಸ್ಯೆಯಾಗಬಹುದು ಎಂದು ನಮಗೆ ತಿಳಿದಿತ್ತು. ಆದರೆ ವೈದ್ಯರು ಅವಳನ್ನು ಉಳಿಸುತ್ತಾರೆ ಎಂದು ನಾವು ನಂಬಿದ್ದೆವು.”
ಆದರೆ ಆಕೆಯನ್ನು ವಾರ್ಡಿಗೆ ಸ್ಥಳಾಂತರಿಸುವಾಗ ಸ್ಟ್ರೆಚರ್ ಮೇಲಿದ್ದ ಬಿಳಿ ಬಟ್ಟೆಯನ್ನು ಶ್ರೀ ಕೃಷ್ಣ ಅವರಿಗೆ ನೋಡಲಾಗಲಿಲ್ಲ. “ಅದರಲ್ಲಿ ವಿಪರೀತ ರಕ್ತವಿತ್ತು. ನೋಡಿ ನನಗೆ ಹೊಟ್ಟೆಯಲ್ಲಿ ಕತ್ತರಿಯಾಡಿಸಿದಂತಾಯಿತು,” ಎನ್ನುತ್ತಾರವರು.
ಆಕೆಗೆ 25 ವರ್ಷ ವಯಸ್ಸಾಗಿತ್ತು.









