ತಮಿಳುನಾಡಿನ ಹೊಸೂರು ತಾಲ್ಲೂಕಿನಲ್ಲಿ, ಜನವರಿ ತಿಂಗಳಲ್ಲಿ ಕೊಯ್ಲು ಮಾಡಿದ ಬೆಳೆಗಳನ್ನು ಹೊಲದಲ್ಲಿ ಒಣಗಲು ಇಡಲಾಗುತ್ತದೆ. ಒಂದು ವಾರ ಬಿಸಿಲಿನಲ್ಲಿ ಭತ್ತದ ಬೆಳೆಗಳನ್ನು ಒಣಗಿಸುವುದರಿಂದ ಕಾಂಡದಲ್ಲಿನ ಎಲ್ಲಾ ಪೋಷಕಾಂಶಗಳು ರಾಗಿ ಧಾನ್ಯಗಳಲ್ಲಿ ಸಂಗ್ರಹಣೆ ಆಗುತ್ತದೆ ಎಂದು ರೈತರು ಹೇಳುತ್ತಾರೆ.

ಬಿಸಿಲ ಬೇಗೆಯನ್ನು ಸಹಿಸಲಾಗದೆ ಒಂದಷ್ಟು ಜನ ಗಂಡಸರು ಶಿಥಿಲಗೊಂಡಿರುವ ಒಂದು ಶೆಡ್ಡಿನ ಕೆಳಗೆ ನಿಂತಿದ್ದಾರೆ. ಅವರಲ್ಲಿ ಒಬ್ಬರಾದ 52 ವರ್ಷದ ನಾರಾಯಣಪ್ಪ ನೀಲಿ ಬಣ್ಣದ ಖಾದಿ ಧೋತಿಯನ್ನು ಧರಿಸಿ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಒಂದು ಸಣ್ಣ ಟವೆಲ್ ಅನ್ನು ತಮ್ಮ ತಲೆಯಮೇಲೆ ಹಾಕಿಕೊಂಡಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪಲವನಪಲ್ಲಿ ಗ್ರಾಮದವರಾದ ಇವರು, 1.5 ಎಕರೆ ಜಮೀನನ್ನು ಗುತ್ತಿಗೆ ಪಡೆದು ಮಳೆಗಾಲದ ನಂತರ, ರಾಗಿ ಮತ್ತು ಹುರುಳಿಕಾಳು ಬೆಳೆಯುತ್ತಾರೆ. ಅವರ ಹಳ್ಳಿಯಿಂದ ಒಂದು ಗಂಟೆ ನಡಿಗೆ ಅಷ್ಟು ದೂರದಲ್ಲಿದೆ ಅವಿಶ್ರಾಂತ ಕೈಗಾರಿಕಾ ಕ್ಷೇತ್ರ ಹೊಸೂರು.

*****

“ಕೃಷಿ ನಮ್ಮ ಕೌಟುಂಬಿಕ ಉದ್ಯೋಗ. ನಾನು ಚಿಕ್ಕ ವಯಸ್ಸಿನಲ್ಲೇ ಈ ಉದ್ಯೋಗಕ್ಕೆ ಬಲವಂತವಾಗಿ ಬರಬೇಕಾಯಿತು. ಭತ್ತದ ಕೃಷಿ ಬೆಳೆಯುವ ಅನುಕೂಲವೆಂದರೆ ಇದಕ್ಕೆ ಮಳೆನೀರು ಮಾತ್ರ ಸಾಕಾಗುವುದರಿಂದ ಬಾಹ್ಯ ನೀರಾವರಿ ಅಗತ್ಯವಿಲ್ಲ. ಹಾಗೆ, ಕೀಟಗಳು ದಾಳಿ ಮಾಡುವುದಿಲ್ಲ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿತ್ತನೆ ಮಾಡಿದರೆ ಉತ್ತಮ ಫಸಲು ಸಿಗುತ್ತದೆ. ಬಿತ್ತನೆ ಮಾಡಿದ ಐದು ತಿಂಗಳೊಳಗೆ ಕೊಯ್ಲು ಮಾಡಬಹುದು. ಒಕ್ಕಣೆಯನ್ನು ನಾವೇ ಕೈಯಾರೆ ಮಾಡಬೇಕು. ನಾನು ತಲಾ 100 ಕೆಜಿ ತೂಕದ 13-15 ಗೊಂಚಲು ರಾಗಿಯನ್ನು ಕೊಯ್ಲು ಮಾಡುತ್ತೇನೆ. ಕೆಲವನ್ನು ನಾವೇ ಇಟ್ಟುಕೊಂಡು ಉಳಿದದ್ದನ್ನು ಕೆಜಿಗೆ 30 ರೂಪಾಯಿಯಂತೆ ಮಾರಾಟ ಮಾಡುತ್ತೇವೆ. 80ರಷ್ಟು ಆದಾಯವನ್ನು ಮುಂದಿನ ಬೆಳೆಗೆ ಮರು ಹೂಡಿಕೆ ಮಾಡುತ್ತೇನೆ.

PHOTO • TVS Academy Hosur

ತಮಿಳುನಾಡಿನ ಹೊಸೂರು ತಾಲೂಕಿನ ಪಲವನಪಲ್ಲಿ ಗ್ರಾಮದಲ್ಲಿನ ತಮ್ಮ ಹೊಲದಲ್ಲಿ ಕೊಯ್ಲು ಮಾಡಿದ ರಾಗಿಯೊಂದಿಗೆ ನಾರಾಯಣಪ್ಪ

ಬೆಳೆ ಬೆಳೆಯುವ ಅವಧಿಯಲ್ಲಿ ನಾವು ಅನೇಕ ಸವಾಲುಗಳನ್ನು ಎದುರಿಸುತ್ತೇವೆ. ನವಿಲುಗಳು ಮತ್ತು ಕೋತಿಗಳು ಗುಂಪು ಗುಂಪಾಗಿ ಬಂದು ಬೆಳೆಗಳನ್ನು ನಾಶಮಾಡುತ್ತವೆ. ನಾನು ಜಾಗರೂಕನಾಗದಿದ್ದರೆ, ಇಡೀ ಬೆಳೆ ಒಂದೇ ರಾತ್ರಿಯಲ್ಲಿ ನಾಶವಾಗುತ್ತದೆ. ನಾವು ಯಾವಾಗಲೂ ಮಳೆ, ಶೀತ ಹವಾಮಾನ ಮತ್ತು ತಂಗಾಳಿಯ ಕರುಣೆಯಲ್ಲಿದ್ದೇವೆ. ಅನಿರೀಕ್ಷಿತ ಮಳೆ ಹಲವಾರು ಬಾರಿ ನಮ್ಮ ಶ್ರಮದ ಫಲವನ್ನು ಕೊಚ್ಚಿಕೊಂಡು ಹೋಗುತ್ತದೆ.

ಪೂರ್ಣಾವಧಿ ಕೃಷಿಕನಾಗಿ ಜೀವನ ನಡೆಸುವುದು ಅಸಾಧ್ಯ. ನಾನು ಸುಮಾರು 45,000 ರೂಪಾಯಿಗಳು ದುಡಿದು, ಅದರಲ್ಲಿ ಸುಮಾರು 35,000 ದಿಂದ 38,000 ರೂಪಾಯಿಗಳವರೆಗೆ ಖರ್ಚು ಮಾಡಿದರೆ, ಪ್ರತಿ ಋತುವಿಗೆ 10,000 ನನ್ನಲ್ಲಿ ಲಭ್ಯವಿರುತ್ತದೆ. ಇದರಿಂದ ದಿನನಿತ್ಯದ ಖರ್ಚಿಗೆ ಹಣ ಸಾಕಾಗದೆ ನಾನು ಸಾಲ ಮಾಡಬೇಕಾಗಿ ಬರುತ್ತದೆ.

ಮುಂದಿನ ಕಟಾವಿಗೆ ಜಮೀನು ಸಿದ್ಧಪಡಿಸಲು, ನೀರಿನ ಬಿಲ್ ಕಟ್ಟಲು ಹಾಗು ಹಳೇ ಸಾಲ ತೀರಿಸಲು ನನ್ನ ಸಂಪೂರ್ಣ ಹಣವನ್ನು ನಾನು ಖರ್ಚು ಮಾಡುತ್ತೇನೆ.

ಮುಂದಿನ ಐದು ತಿಂಗಳುಗಳವರೆಗೂ ನನ್ನ ಕುಟುಂಬವನ್ನು ಪೋಷಿಸಲು ನನ್ನ ಬಳಿ ಕೇವಲ 5000 ರೂಪಾಯಿ ಅಷ್ಟು ಹಣ ಮಾತ್ರ ಉಳಿದಿರುತ್ತದೆ. ನನ್ನ ಹೆಂಡತಿ ದಿನಗೂಲಿ ಕೆಲಸ ಮಾಡುತ್ತಾಳೆ. ನನ್ನ ಮಗ ನನಗೆ ಕೃಷಿಯಲ್ಲಿ ಸಹಾಯ ಮಾಡುತ್ತಾನೆ. ಹಣವಿಲ್ಲದೆ ನನ್ನ ಮಗನನ್ನು ಓದಿಸಲಾಗುತ್ತಿಲ್ಲ. ಕೊಯ್ಲು ಮತ್ತು ಕಳೆ ಕೀಳಲು ನನ್ನ ಹಳ್ಳಿಯಿಂದ ಕಾರ್ಮಿಕರನ್ನು ಕರೆತರುತ್ತೇನೆ. ಇದಕ್ಕಾಗಿ ಅವರಿಗೆ ದಿನಗೂಲಿಯಾಗಿ 400 ರೂಪಾಯಿಗಳನ್ನು ನೀಡುತ್ತೇನೆ.

PHOTO • TVS Academy Hosur

ನಾರಾಯಣಪ್ಪ (ಮೇಲ್ಭಾಗ) ರಾಗಿಯನ್ನು ಒಣಗಿಸಲು ಅದನ್ನು ಒಣಹುಲ್ಲಿನಿಂದ ಮುಚ್ಚುತ್ತಾರೆ

ನನ್ನ ಬಳಿ ಎರಡು ದೇಶಿ ಹಸುಗಳಿವೆ. ಇವು ದಿನಕ್ಕೆ ಸುಮಾರು 10 ಲೀಟರ್ ಹಾಲು ಕೊಡುತ್ತವೆ. ಅವುಗಳ ನಿರ್ವಹಣೆ ಮತ್ತು ಪೋಷಣೆಯ ವೆಚ್ಚವನ್ನು ಕಳೆದು, ಹಾಲು ಮಾರಾಟದಿಂದ ತಿಂಗಳಿಗೆ ಸುಮಾರು 2000 ರೂಪಾಯಿಗಳು ದುಡಿಯುತ್ತೇನೆ.

ನಾನು ಕಡಿಮೆ ಆದಾಯವನ್ನು ಗಳಿಸುವುದರಿಂದ ನನ್ನ ಕುಟುಂಬದ ಮೂಲಭೂತ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಕಳೆದ 20 ವರ್ಷಗಳಿಂದ ಪಂಚಾಯಿತಿಯಿಂದ ನೆರವು ಕೋರುತ್ತಿದ್ದೇವೆ. ಎಂಟು ನಾಯಕರು ಬದಲಾದರೂ ನಮ್ಮ ಬದುಕು ಅಷ್ಟಾಗಿ ಬದಲಾಗಿಲ್ಲ. ಪ್ರಕೃತಿ ವಿಕೋಪದಲ್ಲಿ ಬೆಳೆಗಳು ನಾಶವಾದರೂ ಸಹ ಸರಕಾರ ಸಬ್ಸಿಡಿ ಮೊತ್ತ ಹೆಚ್ಚಿಸಲು ಹಿಂದೇಟು ಹಾಕುತ್ತದೆ.

ಇಷ್ಟೆಲ್ಲಾ ಹೋರಾಟಗಳ ನಡುವೆಯೂ ತೆರೆದ ಗದ್ದೆಗಳ ವಿಶಾಲತೆಯಲ್ಲಿ ಕೆಲಸ ಮಾಡುವುದು ನನಗೆ ಸಂತಸ ತಂದಿದೆ. ನಾನು ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ.”

ಈ ಲೇಖನಕ್ಕೆ ತಮಿಳುನಾಡಿನ ಹೊಸೂರಿನ ಟಿವಿಎಸ್ ಅಕಾಡೆಮಿಯ ಸಹನಾ, ಪ್ರಣವ್ ಅಕ್ಷಯ್, ದಿವ್ಯಾ, ಉಷಾ ಎಂ.ಆರ್. ಎಂಬ ವಿದ್ಯಾರ್ಥಿಗಳು ಸುದ್ದಿ ಸಂಗ್ರಹಿಸಿದರು. PARI ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿರುತ್ತಾರೆ.

ಅನುವಾದ: ಚೇತನ ವಿ

Sahana

ಸಹನಾ ಹೊಸೂರಿನ ಟಿವಿಎಸ್ ಅಕಾಡೆಮಿಯ ವಿದ್ಯಾರ್ಥಿ.

Other stories by Sahana
Pranav Akshay

ಪ್ರಣವ ಅಕ್ಷಯ ಹೊಸೂರಿನ ಟಿವಿಎಸ್ ಅಕಾಡೆಮಿಯ ವಿದ್ಯಾರ್ಥಿ.

Other stories by Pranav Akshay
Dhivya

ದಿವ್ಯ ಹೊಸೂರಿನ ಟಿವಿಎಸ್ ಅಕಾಡೆಮಿಯ ವಿದ್ಯಾರ್ಥಿ.

Other stories by Dhivya
Usha M.R.

ಉಷಾ ಎಮ್‌ ಆರ್ ಹೊಸೂರಿನ ಟಿವಿಎಸ್ ಅಕಾಡೆಮಿಯ ವಿದ್ಯಾರ್ಥಿ

Other stories by Usha M.R.
Editor : PARI Education Team

ನಾವು ಗ್ರಾಮೀಣ ಭಾರತದ ಮತ್ತು ಅಂಚಿನಲ್ಲಿರುವ ಜನರ ಬದುಕಿನ ಕಥೆಗಳನ್ನು ಮುಖ್ಯವಾಹಿನಿಯ ಶಿಕ್ಷಣದ ಪಠ್ಯಕ್ರಮದಲ್ಲಿ ತರಲು ದುಡಿಯುತ್ತಿದ್ದೇವೆ. ಈ ನಿಟ್ಟಿನಲ್ಲಿ ತಮ್ಮ ಸುತ್ತಲಿನ ಸಮಸ್ಯೆಗಳನ್ನು ವರದಿ ಮಾಡಲು ಮತ್ತು ದಾಖಲಿಸಲು ಬಯಸುವ ಯುವಕರೊಂದಿಗೆ ನಾವು ಕೆಲಸ ಮಾಡುತ್ತೇವೆ, ಪತ್ರಿಕಾ ಮಾಧ್ಯಮದ ಭಾಷೆಯಲ್ಲಿ ಕಥೆ ಹೇಳುವಲ್ಲಿ ಅವರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುತ್ತೇವೆ. ನಾವು ಇದನ್ನು ಸಣ್ಣ ಕೋರ್ಸುಗಳು, ಸೆಷನ್‌ಗಳು ಮತ್ತು ಕಾರ್ಯಾಗಾರಗಳ ಮೂಲಕ ಸಾಧಿಸುತ್ತೇವೆ ಮತ್ತು ಜನ ಸಾಮಾನ್ಯರ ದೈನಂದಿನ ಜೀವನದ ಬಗ್ಗೆ ವಿದ್ಯಾರ್ಥಿಗಳಿಗೆ ಉತ್ತಮ ತಿಳುವಳಿಕೆಯನ್ನು ನೀಡುವ ಪಠ್ಯಕ್ರಮಗಳನ್ನು ಅವರಿಗಾಗಿ ವಿನ್ಯಾಸಗೊಳಿಸುತ್ತೇವೆ.

Other stories by PARI Education Team
Translator : Chethana Vageesh

ಚೇತನ ವಾಗೀಶ್‌ ಅವರಿಗೆ ಪರಿಸರ, ಶಿಕ್ಷಣ ಮತ್ತು ಸಾರ್ವಜನಿಕ ನೀತಿ ವಿಷಯಗಳಲ್ಲಿ ಅಪಾರ ಆಸಕ್ತಿ ಇದೆ. ಅವರು ಇತ್ತೀಚೆಗೆ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಿಂದ ಪರಿಸರ ಕಾನೂನಿನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿಯನ್ನು ಪಡೆದಿದ್ದಾರೆ.

Other stories by Chethana Vageesh