ವೀಡಿಯೊಗಳು, ಸಾಕ್ಷ್ಯಚಿತ್ರಗಳು, ಕಿರು ತುಣುಕುಗಳು ಮತ್ತು ಗ್ರಾಮೀಣ ಭಾರತದ ಜನರ ಕುರಿತಾದ ಚಲನಚಿತ್ರಗಳು - ಪರಿಯ ಚಲನಚಿತ್ರ ವಿಭಾಗಕ್ಕೆ 2023 ಅತ್ಯಂತ ಪ್ರತಿಫಲದಾಯಕ ವರ್ಷವಾಗಿತ್ತು.

ಒಂದು ಆನ್ ಲೈನ್ ನಿಯತಕಾಲಿಕವಾಗಿ, ನಮ್ಮ ಸುತ್ತಲಿನ ಸುದ್ದಿ ಮತ್ತು ಘಟನೆಗಳನ್ನು ತೀಕ್ಷ್ಣವಾಗಿ ನೋಡುವ ಚಲನಚಿತ್ರಗಳನ್ನು ನಾವು ಪ್ರೋತ್ಸಾಹಿಸುತ್ತೇವೆ. ಬಿಹಾರದ ಮದ್ರಸಾ ಅಜೀಜಿಯಾ ಕುರಿತ ನಮ್ಮ ಚಲನಚಿತ್ರವು ಬಿಹಾರದ ಬಿಹಾರ್ ಶರೀಫ್ ಪಟ್ಟಣದಲ್ಲಿ ಕೋಮು ಪ್ರೇರಿತವಾಗಿ 113 ವರ್ಷ ಹಳೆಯ ಗ್ರಂಥಾಲಯವನ್ನು ಸುಟ್ಟುಹಾಕಿದ ಘಟನೆಯ ನಂತರದ ಪರಿಣಾಮಗಳನ್ನು ಪರಿಶೀಲಿಸಿತು. ಜೈಸಲ್ಮೇರ್ ಜಿಲ್ಲೆಯ ಪವಿತ್ರ ತೋಪುಗಳನ್ನು – ಓರಾಣ್‌ಗಳನ್ನು ನವೀಕರಿಸಬಹುದಾದ ಇಂಧನ ಉತ್ಪಾದನೆಗಾಗಿ ಸ್ವಾಧೀನಪಡಿಸಿಕೊಳ್ಳುವುದರ ಕುರಿತು ಚರ್ಚೆಯನ್ನು ಒಳಗೊಂಡಿದ್ದ ನಮ್ಮ ಚಲನಚಿತ್ರವು ಸರ್ಕಾರ ಈ ಕುರುಚಲು ಕಾಡುಗಳನ್ನು ಸೌರ ಮತ್ತು ಪವನ ಶಕ್ತಿ ಸ್ಥಾವರಗಳಿಗೆ ಹಸ್ತಾಂತರಿಸಲು 'ಬಂಜರು ಭೂಮಿ' ಎಂದು ವರ್ಗೀಕರಿಸುವುದನ್ನು ಪ್ರಶ್ನಿಸಿತು.

ಅಸ್ಸಾಂ ರಾಜ್ಯದ ಬ್ರಹ್ಮಪುತ್ರಾ ನದಿ ತಟದ ಆದಿವಾಸಿ ಎಮ್ಮೆ ಸಾಕಾಣೆದಾರರೊಬ್ಬರ ಲಿಲ್ಲಿಂಗ್ ಪ್ರೇಮಗೀತೆಯೊಂದಿಗೆ ನಾವು ಈ ವರ್ಷವನ್ನು ಪ್ರಾರಂಭಿಸಿದೆವು. ವರ್ಷವಿಡೀ ನಾವು ಪಶ್ಚಿಮ ಬಂಗಾಳ, ಛತ್ತೀಸಗಢ, ಕರ್ನಾಟಕ, ರಾಜಸ್ಥಾನ ಮತ್ತು ಇತರ ದೇಶದ ವಿವಿಧ ಭಾಗಗಳಿಂದ ಹಾಡುಗಳು ಮತ್ತು ನೃತ್ಯಗಳನ್ನು ನಮ್ಮ ಸಂಗ್ರಹದಲ್ಲಿ ಸೇರಿಸುವ ಕಾರ್ಯವನ್ನು ಮುಂದುವರೆಸಿದೆವು.

ಮತ್ತು ದಶಕಗಳ ಕಾಲದ ಅಸಾಧಾರಣ ಕೆಲಸವಾದ ಪರಿ ಗ್ರೈಂಡ್‌ ಮಿಲ್‌ ಸಾಂಗ್ಸ್‌ ಪ್ರಾಜೆಕ್ಟಿನ ಪ್ರಯಾಣದ ಇತಿಹಾಸವನ್ನು ತಿಳಿಸುವ ಚಲನಚಿತ್ರದೊಂದಿಗೆ ನಾವು ಈ ವರ್ಷವನ್ನು ಕೊನೆಗೊಳಿಸಿದೆವು.

ಈ ವರ್ಷ ನಾವು ವರ್ತ್ ಎನ್ನುವ ಶೀರ್ಷಿಕೆಯ ಪ್ರಮುಖ ಚಲನಚಿತ್ರವೊಂದನ್ನು ಸೇರಿಸಿದ್ದೇವೆ, ಅದು ಪುಣೆಯ ಮಹಿಳಾ ತ್ಯಾಜ್ಯ ಸಂಗ್ರಾಹಕರ ದನಿಯನ್ನು ತೆರೆಯ ಮೇಲೆ ತಂದಿದೆ, ಅವರು "ಕಸವನ್ನು ಉತ್ಪಾದಿಸುವವರು ನೀವಾಗಿರುವಾಗ, ನಾವು 'ಕಚ್ರೇವಾಲಿʼ ['ಕಸದ ಮಹಿಳೆಯರು') ಹೇಗಾಗುತ್ತೇವೆ?" ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಮತ್ತು ಬದಲಾಗುತ್ತಿರುವ ಹವಾಮಾನ ಮಾದರಿಯಿಂದ ಉಂಟಾಗುತ್ತಿರುವ ಪರಿಣಾಮಗಳ ಕುರಿತಾದ ನಮ್ಮ ಚಲನಚಿತ್ರಗಳ ಪಟ್ಟಿಗೆ ಈ ಬಾರಿ ಅಲ್ಫೋನ್ಸೋ ಮಾವಿನ ಕುರಿತಾದ ಚಿತ್ರವೊಂದನ್ನು ಸೇರಿಸಿದ್ದೇವೆ. ಈ ಬೆಳೆಗಾರರು ಹವಮಾನ ವೈಪರೀತ್ಯದ ಸಂತ್ರಸ್ತರಾಗಿದ್ದಾರೆ.

ಈ ವರ್ಷವಿಡೀ, ನಾವು ಸಮುದಾಯಗಳ ಕುರಿತಾದ ನಮ್ಮ ಚಲನಚಿತ್ರಗಳ ಸಂಗ್ರಹಕ್ಕೆ ಹಲವು ಚಿತ್ರಗಳನ್ನು ಸೇರಿಸಿದ್ದೇವೆ: ಮೇಡಪುರಂನಲ್ಲಿ ಮಾದಿಗ ಸಮುದಾಯದ ಜನರು ಯುಗಾದಿ ಆಚರಣೆಯ ಕುರಿತಾದ ಈ ಚಿತ್ರವು ಹೊಸ ದಲಿತ ಸಂಪ್ರದಾಯದ ಧ್ವನಿ ಮತ್ತು ಬಣ್ಣವನ್ನು ಜೀವಂತಗೊಳಿಸಿತು. ಮಲಬಾರ್ ಪ್ರದೇಶದ ವಿವಿಧ ಜಾತಿಗಳು ಮತ್ತು ಸಮುದಾಯಗಳನ್ನು ಒಳಗೊಂಡ ತೋಳ್‌ಪಾವಕೂತ್ತು ಹೋರಾಟದ ಕಲೆಯ ಕುರಿತಾದ ಈ ದೀರ್ಘ ಚಲನಚಿತ್ರವು ನೆರಳು ಬೊಂಬೆಯಾಟವನ್ನು ಬಳಸಿಕೊಂಡು ಬಹು ಸಾಂಸ್ಕೃತಿಕ ಕಥೆಗಳನ್ನು ಹೇಳುತ್ತದೆ. ಮತ್ತು ನೆರೆಯ ರಾಜ್ಯವಾದ ಕರ್ನಾಟಕದ ಈ ಚಿತ್ರದಲ್ಲಿ, ತುಳುನಾಡಿನ ಭೂತಾರಾಧನೆಯ ನಿರ್ಣಾಯಕ ಭಾಗವಾಗಿರುವ ನಾದಸ್ವರ ವಾದಕರ ಜೀವನವನ್ನು ಸಮೃದ್ಧವಾಗಿ ವಿವರಿಸಲಾಗಿದೆ. ಈಗ ಬಹುತೇಕ ಕಣ್ಮರೆಯಾಗಿರುವ ಲೋಹದ ಆಕೃತಿಗಳನ್ನು ತಯಾರಿಸಲು ಬಳಸುವ ಮೇಣದ ಕಾಸ್ಟಿಂಗ್ ತಂತ್ರದ ಕುರಿತು – ಡೋಕ್ರಾ - ಪಶ್ಚಿಮ ಬಂಗಾಳದಲ್ಲಿ ಚಿತ್ರವೊಂದನ್ನು ತಯಾರಿಸಲಾಗಿದೆ.

ಈ ಚಿತ್ರಗಳನ್ನು ನೋಡಿ!

ಮದ್ರಸಾ ಅಜೀಜಿಯಾ ನೆನಪಿನಲ್ಲಿ

ಬಿಹಾರ್‌ ಶರೀಫ್‌ ಎನ್ನುವಲ್ಲಿ 113 ವರ್ಷ ಹಳೆಯ ಮದರಸಾ ಮತ್ತು ಅದರ 4,000 ಕ್ಕೂ ಹೆಚ್ಚು ಪುಸ್ತಕಗಳ ಗ್ರಂಥಾಲಯಕ್ಕೆ ಗಲಭೆಕೋರರು ಬೆಂಕಿ ಹಚ್ಚಿದ ಕುರಿತಾದ ಚಿತ್ರ.

ಮೇ 12, 2023 | ಶ್ರೇಯಾ ಕಾತ್ಯಾಯಿನಿ

ಓರಾಣ್‌ ಉಳಿಸುವ ಹೋರಾಟ

ಸರ್ಕಾರಿ ದಾಖಲೆಗಳಲ್ಲಿ 'ಬಂಜರು ಭೂಮಿ' ಎಂದು ತಪ್ಪಾಗಿ ವರ್ಗೀಕರಿಸಲಾದ ಹುಲ್ಲುಗಾವಲುಗಳಲ್ಲಿ ಸ್ಥಾಪಿಸಲಾದ ಪವಿತ್ರ ತೋಪುಗಳಾದ ರಾಜಸ್ಥಾನದ ಓರಾಣ್ ವನಗಳನ್ನು ಸೌರ ಮತ್ತು ಪವನ ಶಕ್ತಿ ಕಂಪನಿಗಳು ಸ್ಥಿರವಾಗಿ ಅತಿಕ್ರಮಿಸುತ್ತಿವೆ. ಅವುಗಳ ವೇಗವಾಗಿ ಬೆಳೆಯುತ್ತಿರುವ ಉಪಸ್ಥಿತಿಯು ಇಲ್ಲಿನ ಪರಿಸರ ಮತ್ತು ಜೀವನೋಪಾಯವನ್ನು ತೀವ್ರವಾಗಿ ಬದಲಾಯಿಸುತ್ತಿದೆ.

ಜುಲೈ 25, 2023 | ಊರ್ಜಾ


ಎಮ್ಮೆ ಸಾಕಾಣೆದಾರನ ಪ್ರೇಮಗೀತೆ

ಸತ್ಯಜಿತ್ ಮೊರಾಂಗ್ ಅಸ್ಸಾಂನ ಮಿಸಿಂಗ್ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಈ ವೀಡಿಯೊದಲ್ಲಿ ಅವರು ಒನಿಟೊಮ್ ಶೈಲಿಯಲ್ಲಿ ಪ್ರೇಮಗೀತೆಯನ್ನು ಹಾಡುತ್ತಾರೆ ಜೊತೆಗೆ ಬ್ರಹ್ಮಪುತ್ರ ನದಿಯಲ್ಲಿ ರೂಪುಗೊಂಡ ದ್ವೀಪಗಳಲ್ಲಿ ಎಮ್ಮೆಗಳನ್ನು ಮೇಯಿಸುವ ಬಗ್ಗೆ ಮಾತನಾಡುತ್ತಾರೆ.

ಜನವರಿ. 2, 2023 | ಹಿಮಾಂಶು ಚುಟಿಯಾ ಸೈಕಿಯಾ


ಗ್ರಾಮೀಣ ಭಾರತದ ಅಡುಗೆಮನೆ ಹಾಡುಗಳು

ನೂರಾರು ಹಳ್ಳಿಗಳಲ್ಲಿನ ಜನರ ಮನೆ-ಮನಗಳಲ್ಲಿದ್ದ 100,000ಕ್ಕೂ ಹೆಚ್ಚು ಹಾಡುಗಳು ಮತ್ತು 3,000ಕ್ಕೂ ಹೆಚ್ಚು ಜನಸಾಮಾನ್ಯ ಪ್ರದರ್ಶಕ ಮಹಿಳೆಯರ ದನಿಯನ್ನು ಸೆರೆ ಹಿಡಿಯುವ ಅದ್ಭುತ ಪ್ರಯತ್ನವೇ ಗ್ರೈಂಡ್‌ ಮಿಲ್‌ ಸಾಂಗ್ಸ್‌ ಪ್ರಾಜೆಕ್ಟ್‌ (ಜಿಎಸ್‌ಪಿ). ಈ ಯೋಜನೆಯಡಿ ಹಾಡಿರುವ ಮಹಿಳೆಯರು ರೈತರು, ಮೀನುಗಾರರು ಮತ್ತು ಕಾರ್ಮಿಕರು. ಜೊತೆ ಜೊತೆಗೆ ಅವರು ತಾಯಂದಿರು, ಮಕ್ಕಳು, ಹೆಂಡತಿಯರು ಮತ್ತು ಅಕ್ಕ-ತಂಗಿಯರೂ ಹೌದು. ಈ ಬೀಸುಕಲ್ಲಿನ ಪದಗಳ ಕುರಿತಾಗಿ ಪರಿ ನಿರ್ಮಿಸಿರುವ ಸಾಕ್ಷ್ಯಚಿತ್ರವೇ ʼಜಾತ್ಯಾವರ್ಚ್ಯ ಓವ್ಯಾʼ. ಈ ಸಾಕ್ಷ್ಯ ಚಿತ್ರವು ಜಿಎಸ್‌ಪಿ ಎನ್ನುವ ಕಾವ್ಯಪರಂಪರೆ ಮತ್ತು ಅದರ ಉಗಮದ ಕುರಿತು ಮಾತನಾಡುತ್ತದೆ.

ಡಿಸೆಂಬರ್ 7, 2023 | ಪರಿ ತಂಡ


ಮೌಲ್ಯ | मोल

ಅಕ್ಟೋಬರ್ 2ರಂದು, ಸ್ವಚ್ಛ ಭಾರತ್ ದಿವಸ್ ದಿನದ ವಿಶೇಷ ಸಂದರ್ಭದಲ್ಲಿ ಪುಣೆಯ ಮಹಿಳಾ ತ್ಯಾಜ್ಯ ಸಂಗ್ರಾಹಕರ ಕುರಿತಾದ ಚಲನಚಿತ್ರ.

ಅಕ್ಟೋಬರ್ 2, 2023 | ಕವಿತಾ ಕಾರ್ನೆರೊ

ಮುಗಿಯುತ್ತಿದೆ ಆಲ್ಫನ್ಸೋ ಮಾವಿನ ಆಡಳಿತ

ಕೊಂಕಣದಲ್ಲಿ ಅಲ್ಫೋನ್ಸೋ ಮಾವು ಉತ್ಪಾದನೆ ತೀವ್ರವಾಗಿ ಕುಸಿಯುತ್ತಿದ್ದು, ಇದು ರೈತರ ಕಳವಳವನ್ನು ಹೆಚ್ಚಿಸಿದೆ.

ಅಕ್ಟೋಬರ್‌, 13, 2023 | ಜಯಸಿಂಗ್ ಚವಾಣ್

ಬಲ ಮತ್ತು ಅಸ್ಮಿತೆಯ ಯುಗಾದಿ ಆಚರಣೆ

ಆಂಧ್ರಪ್ರದೇಶದ ಮೇದಪುರಂನಲ್ಲಿ ಯುಗಾದಿ ಹಬ್ಬವನ್ನು ಪ್ರತಿವರ್ಷವೂ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಮಾದಿಗ ಸಮುದಾಯ ಆಯೋಜಿಸುವ ಈ ಹಬ್ಬದಲ್ಲಿ ಅವರು ತಮ್ಮ ದೇವರ ಮೂರ್ತಿಯನ್ನು ಈ ಪಟ್ಟಣಕ್ಕೆ ತರುತ್ತಾರೆ.

ಅಕ್ಟೋಬರ್‌, 27, 2023 | ನಾಗ ಚರಣ್

ತೋಳ್‌ಪಾವಕೂತ್‌ ಗೊಂಬೆಯಾಟ: ಮಲಬಾರಿನ ಸೌಹಾರ್ದತೆಯ ಪ್ರತೀಕ

ಕೇರಳದ ಮಲಬಾರ್‌ ಪ್ರದೇಶದ ಗೊಂಬೆಯಾಟದ ಕುರಿತಾದ ಒಂದು ಕಿರುಚಿತ್ರ.

ಮೇ 29, 2023 | ಸಂಗೀತ್ ಶಂಕರ್

ತುಳುನಾಡಿನ ಭೂತಗಳು: ಸಾಮರಸ್ಯ ಸಂಪ್ರದಾಯದ ಚೈತನ್ಯ

ಅರಬ್ಬಿ ಸಮುದ್ರ ತೀರದ ಕರ್ನಾಟಕದ ಕರಾವಳಿಯ ಈ ಭಾಗದಲ್ಲಿ ಭೂತದ ಪೂಜೆಗಾಗಿ ವಿವಿಧ ಸಮುದಾಯಗಳು ಒಂದಾಗುತ್ತವೆ. ಈ ಆಚರಣೆಯಲ್ಲಿ ಪ್ರದರ್ಶನ ನೀಡುವ ಸೈಯದ್‌ ನಾಸಿರ್‌ ಅವರ ಪರಿಚಯ ಈ ಕಿರುಚಿತ್ರದಲ್ಲಿದೆ.

ಏಪ್ರಿಲ್ 26, 2023 | ಫೈಸಲ್ ಅಹ್ಮದ್

ಡೋಕ್ರಾ, ಎನ್ನುವ ಅದ್ಭುತ ಶಿಲ್ಪಕಲೆ

ಪಿಯೂಷ್ ಮಂಡಲ್ ಲಾಸ್ಟ್‌ - ಕ್ಯಾಸ್ಟ್ (ಮೇಣ ಮತ್ತು ರಾಳ) ವಿಧಾನ‌ ಬಳಸಿಕೊಂಡು ಲೋಹದ ವಿಗ್ರಹಗಳನ್ನು ಎರಕಹೊಯ್ದು ತಯಾರಿಸುತ್ತಾರೆ. ಆದರೆ ಈ ಡೋಕ್ರಾ ಕಲಾವಿದ ಪ್ರಸ್ತುತ ತನ್ನ ಕಲೆಗೆ ಬೇಕಾಗುವ ಕಚ್ಚಾ ವಸ್ತು ಹಾಗೂ ವಾತಾವರಣದ ಕುರಿತು ಚಿಂತಿತರಾಗಿದ್ದಾರೆ. ಇವೆರಡೂ ಈ ಪ್ರಕ್ರಿಯೆಯಲ್ಲಿ ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ಆಗಸ್ಟ್ 26, 2023 | ಶ್ರೇಯಶಿ ಪಾಲ್


ನಮಗೆ ಚಲನಚಿತ್ರ ಅಥವಾ ವೀಡಿಯೊವನ್ನು ಕಳುಹಿಸಲು, [email protected] ಬರೆಯಿರಿ

ನಾವು ಮಾಡುತ್ತಿರುವ ಕೆಲಸಗಳು ನಿಮ್ಮಲ್ಲಿ ಆಸಕ್ತಿಯನ್ನು ಹುಟ್ಟಿಸಿದ್ದಲ್ಲಿ ಮತ್ತು ನೀವೂ ಪರಿಯೊಡನೆ ಕೈ ಜೋಡಿಸಲು ಬಯಸಿದಲ್ಲಿ, ದಯವಿಟ್ಟು mailto:[email protected] ಮೂಲಕ ನಮ್ಮನ್ನು ಸಂಪರ್ಕಿಸಿ. ಫ್ರೀಲಾನ್ಸ್ ಮತ್ತು ಸ್ವತಂತ್ರ ಬರಹಗಾರರು, ವರದಿಗಾರರು, ಛಾಯಾಗ್ರಾಹಕರು, ಚಲನಚಿತ್ರ ತಯಾರಕರು, ಅನುವಾದಕರು, ಸಂಪಾದಕರು, ಚಿತ್ರಕಾರರು ಮತ್ತು ಸಂಶೋಧಕರನ್ನು ನಮ್ಮೊಂದಿಗೆ ಕೆಲಸ ಮಾಡಲು ನಾವು ಸ್ವಾಗತಿಸುತ್ತೇವೆ.

ಪರಿ ಒಂದು ಲಾಭೋದ್ದೇಶ ರಹಿತ ಸಂಸ್ಥೆಯಾಗಿದ್ದು, ಇದು ನಮ್ಮ ಬಹುಭಾಷಾ ಆನ್ಲೈನ್ ಜರ್ನಲ್ ಮತ್ತು ಆರ್ಕೈವ್ ಕೆಲಸಗಳನ್ನು ಮೆಚ್ಚುವ ಜನರ ದೇಣಿಗೆಗಳನ್ನು ಅವಲಂಬಿಸಿ ಮುಂದುವರೆಯುತ್ತಿದೆ. ನೀವು ಪರಿಗೆ ಕೊಡುಗೆ ನೀಡಲು ಬಯಸಿದರೆ ದಯವಿಟ್ಟು DONATE ಬಟನ್‌ ಕ್ಲಿಕ್ ಮಾಡಿ.

ಅನುವಾದ: ಶಂಕರ. ಎನ್. ಕೆಂಚನೂರು

Shreya Katyayini

ಶ್ರೇಯಾ ಕಾತ್ಯಾಯಿನಿ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಚಲನಚಿತ್ರ ನಿರ್ಮಾಪಕರು ಮತ್ತು ಹಿರಿಯ ವೀಡಿಯೊ ಸಂಪಾದಕರಾಗಿದ್ದಾರೆ. ಅವರು ಪರಿಗಾಗಿ ಚಿತ್ರವನ್ನೂ ಬರೆಯುತ್ತಾರೆ.

Other stories by Shreya Katyayini
Sinchita Maji

ಸಿಂಚಿತಾ ಮಾಜಿ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಹಿರಿಯ ವೀಡಿಯೊ ಸಂಪಾದಕರಾಗಿ ಕೆಲಸ ಮಾಡುತ್ತಿದ್ದು, ಸ್ವತಂತ್ರ ಛಾಯಾಗ್ರಾಹಕರು ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ.

Other stories by Sinchita Maji

ಊರ್ಜಾ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಹಿರಿಯ ವೀಡಿಯೊ ಸಹಾಯಕ ಸಂಪಾದಕರು. ಸಾಕ್ಷ್ಯಚಿತ್ರ ನಿರ್ಮಾಪಕಿ, ಅವರು ಕರಕುಶಲ ವಸ್ತುಗಳು, ಜೀವನೋಪಾಯಗಳು ಮತ್ತು ಪರಿಸರ ಸಂಬಂಧಿ ವಿಷಯಗಳನ್ನು ವರದಿ ಮಾಡುವಲ್ಲಿ ಆಸಕ್ತಿ ಹೊಂದಿದ್ದಾರೆ. ಊರ್ಜಾ ಪರಿಯ ಸಾಮಾಜಿಕ ಮಾಧ್ಯಮ ತಂಡದೊಂದಿಗೂ ಕೆಲಸ ಮಾಡುತ್ತಾರೆ.

Other stories by Urja
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru