“ಯಮುನೆಯೊಂದಿಗಿನ ನಮ್ಮ ಸಂಬಂಧವು ಒಡಹುಟ್ಟಿದವರ ರೀತಿಯದ್ದು. ನಾವು ಅದರ ದಡದಲ್ಲಿ ಬೆಳೆದಿದ್ದೇವೆ."
ಇದು ವಿಜೇಂದರ್ ಸಿಂಗ್ ತಮ್ಮ ಕುಟುಂಬವು ಈ ನದಿಯೊಡನೆ ಹೊಂದಿರುವ ಸಂಬಂಧದ ಬಗ್ಗೆ ಮಾತನಾಡುತ್ತಿರುವುದು. ಮಲ್ಲಾ (ನಾವಿಕರು) ಸಮುದಾಯವು ತಲೆಮಾರುಗಳಿಂದ ಯಮುನಾ ನದಿಯ ದಡದಲ್ಲಿ ವಾಸಿಸುತ್ತಿದೆ ಮತ್ತು ದೆಹಲಿಯಲ್ಲಿ ಅದರ ಪಕ್ಕದ ಕರಾವಳಿ ಬಯಲು ಪ್ರದೇಶವನ್ನು ಕೃಷಿ ಮಾಡುತ್ತಿದೆ. ಈ 1,376 ಕಿಮೀ ಉದ್ದದ ನದಿಯು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ 22 ಕಿಮೀ ದೂರದವರೆಗೆ ಹರಿಯುತ್ತದೆ ಮತ್ತು ಅದರ ಕರಾವಳಿ ಬಯಲು ಪ್ರದೇಶವು ಸುಮಾರು 97 ಚದರ ಕಿಮೀ ವರೆಗೆ ವಿಸ್ತರಿಸುತ್ತದೆ.
ವಿಜೇಂದರ್ ಸಿಂಗ್ ಅವರಂತಹ 5,000 ಕ್ಕೂ ಹೆಚ್ಚು ರೈತರು ಈ ಪ್ರದೇಶದಲ್ಲಿ 99 ವರ್ಷಗಳ ಕೃಷಿ ಗುತ್ತಿಗೆಯನ್ನು ಹೊಂದಿದ್ದರು.
ಅದು ಅಲ್ಲಿಗೆ ಬುಲ್ಡೋಜರ್ಗಳು ಬರುವ ಮೊದಲು.
2020ರ ಜನವರಿಯ ಕೊರೆಯುವ ಚಳಿಯಲ್ಲಿ, ಪ್ರಸ್ತಾವಿತ ಜೀವವೈವಿಧ್ಯ ಉದ್ಯಾನವನದ ನಿರ್ಮಾಣಕ್ಕೆ ದಾರಿಯನ್ನು ತೆರವುಗೊಳಿಸಲು ಪುರಸಭೆಯ ಅಧಿಕಾರಿಗಳು ಈ ಹೊಲಗಳ ತೂಗಾಡುತ್ತಿರುವ ಬೆಳೆಗಳನ್ನು ಬುಲ್ಡೋಜ್ ಮಾಡಿದರು. ವಿಜೇಂದರ್ ತನ್ನ ಕುಟುಂಬವನ್ನು ಹತ್ತಿರದ ಗೀತಾ ಕಾಲೋನಿಯಲ್ಲಿನ ಬಾಡಿಗೆ ಮನೆಗೆ ಸ್ಥಳಾಂತರಿಸಿದರು.
38 ವರ್ಷದ ಈ ರೈತ ರಾತ್ರೋರಾತ್ರಿ ತನ್ನ ಜೀವನೋಪಾಯವನ್ನು ಕಳೆದುಕೊಂಡು ತನ್ನ ಐದು ಜನರ ಕುಟುಂಬವನ್ನು ಪೋಷಿಸಲು ಡ್ರೈವಿಂಗ್ ವೃತ್ತಿಯನ್ನು ಮಾಡಬೇಕಾದ ಅನಿವಾರ್ಯತೆಗೆ ಒಳಗಾದರು. ಅವರು ಮತ್ತು ಅವರ ಹೆಂಡತಿಯನ್ನು ಹೊರತುಪಡಿಸಿ, ಕುಟುಂಬದಲ್ಲಿ ಮೂರು ಗಂಡು ಮಕ್ಕಳಿದ್ದಾರೆ ಮತ್ತು ಅವರೆಲ್ಲರೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಈ ಬಿಕ್ಕಟ್ಟು ಎದುರಿಸುತ್ತಿರುವವರು ಅವರೊಬ್ಬರೇ ಅಲ್ಲ. ಇನ್ನೂ ಅನೇಕರು, ತಮ್ಮ ಜಮೀನು ಮತ್ತು ಉದ್ಯೋಗಗಳನ್ನು ಕಸಿದುಕೊಂಡು, ಮೆಟ್ರೋ ನಿಲ್ದಾಣಗಳಲ್ಲಿ ಪೇಂಟರ್ಗಳು, ತೋಟಗಾರರು, ಭದ್ರತಾ ಸಿಬ್ಬಂದಿ ಮತ್ತು ಕ್ಲೀನರ್ಗಳಾಗಿ ಕೆಲಸ ಮಾಡಬೇಕಾಯಿತು.
ಅವರು ಹೇಳುತ್ತಾರೆ, “ನೀವು ಲೋಹಾ ಪುಲ್ನಿಂದ ಐಟಿಒವರೆಗಿನ ರಸ್ತೆಯನ್ನು ನೋಡಿದರೆ, ಸೈಕಲ್ಗಳಲ್ಲಿ ಕಚೋರಿಗಳನ್ನು ಮಾರಾಟ ಮಾಡುವ ಮಾರಾಟಗಾರರ ಸಂಖ್ಯೆ ಸಾಕಷ್ಟು ಹೆಚ್ಚಾಗಿರುವುದನ್ನು ನೀವು ನೋಡುತ್ತೀರಿ. ರೈತನನ್ನು ತನ್ನ ಭೂಮಿಯಿಂದ ಹೊರಹಾಕಿದರೆ ಅವನು ಏನು ಮಾಡಬಲ್ಲ?"










