ಅದು ಮಹಾರಾಷ್ಟ್ರದ ಉಲ್ಲಾಸ ನಗರ ತಾಲ್ಲೂಕು, ಅಲ್ಲಿ ಅಂದಿನ ಮಧ್ಯಾಹ್ನ ಆಗಷ್ಟೇ ಹನಿ ಮಳೆ ಬಂದು ನಿಂತಿತ್ತು.

ಥಾಣೆ ಜಿಲ್ಲೆಯ ಉಲ್ಲಾಸ್ ನಗರದ ಸೆಂಟ್ರಲ್ ಆಸ್ಪತ್ರೆಯ ಪ್ರವೇಶದ್ವಾರದವರೆಗೆ ಆಟೋ ರಿಕ್ಷಾ ಮೂಲಕ ಬಂದ ಜ್ಞಾನೇಶ್ವರ ಅಲ್ಲಿ ಕೆಂಪು ಬೆತ್ತದ ಸಹಾಯದಿಂದ ರಿಕ್ಷಾ ಬಿಟ್ಟು ಇಳಿಯುತ್ತಾರೆ. ಅವರ ಪತ್ನಿ ಅರ್ಚನ ಗಂಡನ ಹಿಂದೆಯೇ ಬಂದು ಅವರ ಭುಜವನ್ನು ಹಿಡಿದು ನಡೆಯಲು ಆಸರೆಯಾದರು.ನಂತರ ಮೆಲ್ಲನೆ ಚಪ್ಪಲಿ ಕಾಲಿನಲ್ಲಿ ಕಾಲಡಿಯಿದ್ದ ಕೆಸರು ನೀರನ್ನು ಚಿಮ್ಮತ್ತಾ ಮುಂದೆ ನಡೆಯತೊಡಗಿದರು.

ಅಲ್ಲಿಂದ ಹೊರಡುವ ಮೊದಲು ಜ್ಞಾನೇಶ್ವರ ತನ್ನ ಕಿಸೆಯಿಂದ 500 ರೂಪಾಯಿಗಳ ಎರಡು ನೋಟನ್ನು ಹೊರತೆಗೆದು ಅದರಲ್ಲಿ ಒಂದನ್ನು ಆಟೋರಿಕ್ಷಾದವನಿಗೆ ಕೊಟ್ಟರು. ಆತ ತನ್ನ ಕಿಸೆಯಿಂದ ಚಿಲ್ಲರೆ ತೆಗದುಕೊಟ್ಟ. ಅದನ್ನು ಮುಟ್ಟಿ ನೋಡಿದ ಜ್ಞಾನೇಶ್ವರ “ಐದು ರೂಪಾಯಿ,” ಎನ್ನುತ್ತಾ ಅದು ಬೀಳದಂತೆ ಜಾಗ್ರತೆ ವಹಿಸುತ್ತಾ ಜೇಬಿಗಿಳಿಸಿದರು. ಈ 33 ವರ್ಷದ ವ್ಯಕ್ತಿ ಅವರ ಮೂರನೇ ವರ್ಷದಲ್ಲಿ ಕಾರ್ನಿಯಲ್ ಹುಣ್ಣಿನಿಂದ ದೃಷ್ಟಿ ಕಳೆದುಕೊಂಡರು.

ಅಂಬರನಾಥ ತಾಲ್ಲೂಕಿನ ವಂಗನಿ ಪಟ್ಟಣದಲ್ಲಿರುವ ಅವರ ಮನೆಯಿಂದ 25 ಕಿಲೋಮೀಟರ್‌ ದೂರದಲ್ಲಿರುವ ಉಲ್ಲಾಸ್ ನಗರ್ ಆಸ್ಪತ್ರೆಗೆ ತಲುಪಲು ಅವರಿಗೆ ಒಂದು ಬದಿಯ ದಾರಿಗೆ ರಿಕ್ಷಾ ಬಾಡಿಗೆ 480-520 ರೂ. ತಗಲುತ್ತದೆ. ಈ ಆಸ್ಪತ್ರೆಗೆ ಅವರು ಅರ್ಚನಾ ಅವರಿಗೆ ಡಯಾಲಿಸಿಸ್‌ ಮಾಡಿಸುವ ಸಲುವಾಗಿ ಬರುತ್ತಾರೆ. “ಈ ಬಾರಿ ಆಸ್ಪತ್ರೆಗೆ ಬರುವ ದಾರಿ ಖರ್ಚಿಗಾಗಿ ಸ್ನೇಹಿತನೊಬ್ಬನಿಂದ 1,000 ರೂಪಾಯಿಗಳನ್ನು ಸಾಲವಾಗಿ ಪಡೆದೆ,” ಎನ್ನುತ್ತಾರೆ ಜ್ಞಾನೇಶ್ವರ್.‌ “ಪ್ರತಿ ಬಾರಿಯೂ (ಆಸ್ಪತ್ರೆಗೆ ಬರಲು ಹೀಗೆ ಸಾಲ ಮಾಡಬೇಕಾಗುತ್ತದೆ.” ಎಂದ ಜ್ಞಾನೇಶ್ವರ್‌ ಪತ್ನಿಯೊಡನೆ ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಡಯಾಲಿಸಿಸ್ ಕೊಠಡಿಯ ಕಡೆಗೆ ಜಾಗರೂಕತೆಯಿಂದ ನಡೆಯಲು ಪ್ರಾರಂಭಿಸಿದರು.

ಭಾಗಶಃ ಅಂಧರಾಗಿರುವ ಅರ್ಚನಾ ಈ ವರ್ಷದ ಮೇ ತಿಂಗಳಲ್ಲಿ ಮುಂಬೈನ ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆಯಲ್ಲಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವುದು ಪತ್ತೆಯಾಯಿತು. "ಅವಳ ಎರಡೂ ಮೂತ್ರಪಿಂಡಗಳು ವಿಫಲವಾಗಿವೆ" ಎಂದು ಜ್ಞಾನೇಶ್ವರ್ ಹೇಳುತ್ತಾರೆ; 28 ವರ್ಷದ ಅರ್ಚನಾರಿಗೆ ವಾರಕ್ಕೆ ಮೂರು ಬಾರಿ ಹಿಮೋಡಯಾಲಿಸಿಸ್ ಮಾಡಿಸಬೇಕು.

"ಮೂತ್ರಪಿಂಡಗಳು ದೇಹದ ಅತ್ಯಗತ್ಯ ಅಂಗಗಳಾಗಿವೆ - ಅವು ನಿಮ್ಮ ದೇಹದಿಂದ ತ್ಯಾಜ್ಯ ಮತ್ತು ದೇಹದಲ್ಲಿನ ಹೆಚ್ಚುವರಿ ದ್ರವವನ್ನು ತೆಗೆದುಹಾಕುತ್ತವೆ. ಅವು ವಿಫಲವಾದಾಗ, ಒಬ್ಬ ವ್ಯಕ್ತಿಯು ಜೀವಂತವಾಗಿರಲು ಡಯಾಲಿಸಿಸ್ ಅಥವಾ ಕಸಿಯ ಅಗತ್ಯವಿದೆ," ಎಂದು ಉಲ್ಲಾಸನಗರದ ಕೇಂದ್ರೀಯ ಆಸ್ಪತ್ರೆಯ ನೆಫ್ರಾಲಜಿಸ್ಟ್ ಡಾ. ಹಾರ್ದಿಕ್ ಶಾ ಹೇಳುತ್ತಾರೆ. ಪ್ರತಿ ವರ್ಷ, ಭಾರತವು ಕೊನೆಯ ಹಂತದ ಮೂತ್ರಪಿಂಡ ಕಾಯಿಲೆ (ಇಎಸ್ಆರ್‌ಡಿ) ಯ ಸುಮಾರು 2.2 ಲಕ್ಷ ಹೊಸ ರೋಗಿಗಳನ್ನು ವರದಿ  ಮಾಡುತ್ತದೆ, ಇದು 3.4 ಕೋಟಿ ಡಯಾಲಿಸಿಸ್ ಪ್ರಕ್ರಿಯೆಗಳಿಗೆ ಹೆಚ್ಚುವರಿ ಬೇಡಿಕೆಯನ್ನು ಸೃಷ್ಟಿಸುತ್ತದೆ.

Archana travels 25 kilometres thrice a week to receive dialysis at Central Hospital Ulhasnagar in Thane district
PHOTO • Jyoti Shinoli
Archana travels 25 kilometres thrice a week to receive dialysis at Central Hospital Ulhasnagar in Thane district
PHOTO • Jyoti Shinoli

ಥಾಣೆ ಜಿಲ್ಲೆಯ ಉಲ್ಲಾಸನಗರದ ಸೆಂಟ್ರಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಪಡೆಯಲು ಅರ್ಚನಾ ವಾರಕ್ಕೆ ಮೂರು ಬಾರಿ 25 ಕಿಲೋಮೀಟರ್ ದೂರ ಪ್ರಯಾಣಿಸುತ್ತಾರೆ

ಮೂತ್ರಪಿಂಡಗಳು ವಿಫಲವಾಗಿರುವ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ರೋಗಿಗಳಿಗೆ ಉಚಿತ ಡಯಾಲಿಸಿಸ್ ಒದಗಿಸುವ ಉದ್ದೇಶದಿಂದ 2016ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮ (ಪಿಎಮ್‌ಎನ್‌ಡಿಪಿ) ಅಡಿಯಲ್ಲಿ ಅರ್ಚನಾ ಉಲ್ಲಾಸನಗರ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆಯನ್ನು ಪಡೆಯುತ್ತಾರೆ. ಈ ಸೇವೆಯನ್ನು ದೇಶದ ಜಿಲ್ಲಾ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ.

“ಡಯಾಲಿಸಿಸ್‌ ಮಾಡಿಸಲು ನನಗೆ ಏನೂ ಖರ್ಚು ಬೀಳುವುದಿಲ್ಲ, ಆದರೆ ಹೋಗಿ ಬರುವ ಖರ್ಚನ್ನು ನಿಭಾಯಿಸುವುದೇ ಕಷ್ಟ,” ಎನ್ನುತ್ತಾರೆ ಜ್ಞಾನೇಶ್ವರ್.‌ ಅವರು ಅರ್ಚನಾರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗಿ ರಿಕ್ಷಾ ಬಾಡಿಗೆಗೆ ಹಣ ಹೊಂದಿಸಲಾಗದೆ ಸ್ನೇಹಿತರು ಮತ್ತು ನೆರೆಹೊರೆಯವರಿಂದ ಹಣವನ್ನು ಸಾಲವಾಗಿ ಪಡೆಯಬೇಕಾಗುತ್ತದೆ. ಲೋಕಲ್‌ ರೈಲಿನಲ್ಲಿ ಪ್ರಯಾಣಿಸುವುದು ಸುಲಭದ ಆಯ್ಕೆಯಾಗಿದ್ದರೂ, "ಅವಳು ತುಂಬಾ ದುರ್ಬಲಳಾಗಿದ್ದಾಳೆ ಮತ್ತು ನಿಲ್ದಾಣದಲ್ಲಿ ಮೆಟ್ಟಿಲುಗಳನ್ನು ಹತ್ತಿಳಿಯಲು ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ. “ನನಗೆ ಕಣ್ಣು ಕಾಣುವುದಿಲ್ಲ, ಇಲ್ಲವಾಗಿದ್ದರೆ ನಾನವಳನ್ನು ನನ್ನ ತೋಳುಗಳಲ್ಲಿ ಎತ್ತಿಕೊಂಡು ಹೋಗುತ್ತಿದ್ದೆ.”

*****

ಅರ್ಚನಾ ಮತ್ತು ಜ್ಞಾನೇಶ್ವರ ಉಲ್ಲಾಸನಗರದ ಸರ್ಕಾರಿ ಸ್ವಾಮ್ಯದ ಸೌಲಭ್ಯದಲ್ಲಿ 12 ಡಯಾಲಿಸಿಸ್ ಸೆಷನ್‌ಳಿಗಾಗಿ ಪ್ರತಿ ತಿಂಗಳು ಒಟ್ಟು 600 ಕಿಲೋಮೀಟರ್ ಪ್ರಯಾಣಿಸುತ್ತಾರೆ.

2017ರ ಒಂದು ಅಧ್ಯಯನವು ಡಯಾಲಿಸಿಸ್‌ಗೆ ಒಳಗಾದ ಸುಮಾರು 60 ಪ್ರತಿಶತದಷ್ಟು ಭಾರತೀಯ ರೋಗಿಗಳು ಹಿಮೋಡಯಾಲಿಸಿಸ್ ಸೌಲಭ್ಯ ಪಡೆಯಲು 50 ಕಿಲೋಮೀಟರಿಗಿಂತಲೂ ಹೆಚ್ಚು ದೂರ ಪ್ರಯಾಣಿಸುತ್ತಾರೆ ಮತ್ತು ಸುಮಾರು ಕಾಲು ಭಾಗದಷ್ಟು ಜನರು ಸೌಲಭ್ಯದಿಂದ 100 ಕಿಲೋಮೀಟರಿಗಿಂತ ಹೆಚ್ಚು ದೂರದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದೆ.

ಭಾರತದಲ್ಲಿ ಸುಮಾರು 4,950 ಡಯಾಲಿಸಿಸ್ ಕೇಂದ್ರಗಳಿವೆ, ಅವುಗಳಲ್ಲಿ ಹೆಚ್ಚಿನವು ಖಾಸಗಿ ವಲಯದಲ್ಲಿವೆ. 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 569 ಜಿಲ್ಲೆಗಳಲ್ಲಿ 1,045 ಕೇಂದ್ರಗಳ ಮೂಲಕ ಪಿಎಂಎನ್‌ಡಿಪಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಒಟ್ಟು 7,129 ಹಿಮೋಡಯಾಲಿಸಿಸ್ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ಸರ್ಕಾರದ ವರದಿಯೊಂದು ತಿಳಿಸಿದೆ .

ಮಹಾರಾಷ್ಟ್ರದಲ್ಲಿ 53 ಉಚಿತ ಡಯಾಲಿಸಿಸ್ ಕೇಂದ್ರಗಳಿವೆ ಎಂದು ಮುಂಬೈನ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಸಹ-ನಿರ್ದೇಶಕ ನಿತಿನ್ ಅಂಬಾಡೇಕರ್ ಹೇಳುತ್ತಾರೆ. "ಹೆಚ್ಚಿನ ಕೇಂದ್ರಗಳನ್ನು ಸ್ಥಾಪಿಸಲು ನಮಗೆ ನೆಫ್ರಾಲಜಿಸ್ಟ್ ಗಳು, ತಂತ್ರಜ್ಞರು ಬೇಕು," ಎಂದು ಅವರು ಹೇಳುತ್ತಾರೆ.

Archana and Dnyaneshwar at their home in Vangani in 2020
PHOTO • Jyoti Shinoli

ಅರ್ಚನಾ ಮತ್ತು ಜ್ಞಾನೇಶ್ವರ 2020ರಲ್ಲಿ ವಂಗನಿಯಲ್ಲಿರುವ ತಮ್ಮ ಮನೆಯಲ್ಲಿ

'ಆರ್ಚುಗೆ ಜೀವಮಾನವಿಡೀ ಡಯಾಲಿಸಿಸ್ ಅಗತ್ಯವಿದೆ,' ಎಂದು ಧ್ಯಾನೇಶ್ವರ ಪಿಸುಗುಟ್ಟಿದರು, ಹವಾನಿಯಂತ್ರಿತ ಡಯಾಲಿಸಿಸ್ ಕೋಣೆಯ ಹೊರಗೆ ಲೋಹದ ಬೆಂಚಿನ ಮೇಲೆ ಕುಳಿತು, ಅಲ್ಲಿಯೇ ಒಳಗೆ ಅವರ ಹೆಂಡತಿಗೆ ನಾಲ್ಕು ಗಂಟೆಗಳ ಚಿಕಿತ್ಸೆ ನೀಡಲಾಗುತ್ತಿದೆ

ಅರ್ಚನಾ ಮತ್ತು ಜ್ಞಾನೇಶ್ವರ್ ವಾಸಿಸುವ ವಂಗನಿ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆಯಿಲ್ಲ. ಮತ್ತೊಂದೆಡೆ, 2021ರ ಜಿಲ್ಲಾ ಸಾಮಾಜಿಕ ಮತ್ತು ಆರ್ಥಿಕ ಪರಾಮರ್ಶೆಯು ಥಾಣೆಯಲ್ಲಿ ಸುಮಾರು 71 ಖಾಸಗಿ ಆಸ್ಪತ್ರೆಗಳಿವೆ ಎಂದು ಹೇಳುತ್ತದೆ.  "ಕೆಲವು ಖಾಸಗಿ ಆಸ್ಪತ್ರೆಗಳು ನಮ್ಮ ಮನೆಯಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿವೆ, ಆದರೆ ಅವರು ಒಂದು ಸೆಷನ್‌ಗೆ 1,500 ರೂಪಾಯಿಗಳ ಶುಲ್ಕವನ್ನು ವಿಧಿಸುತ್ತಾರೆ," ಎಂದು ಜ್ಞಾನೇಶ್ವರ ಹೇಳುತ್ತಾರೆ.

ಹೀಗಾಗಿ, 25 ಕಿಲೋಮೀಟರ್ ದೂರದಲ್ಲಿರುವ ಕೇಂದ್ರ ಆಸ್ಪತ್ರೆ ಉಲ್ಲಾಸ ನಗರ, ಅರ್ಚನಾ ಅವರ ಡಯಾಲಿಸಿಸ್ ಸಲುವಾಗಿ ಮಾತ್ರವಲ್ಲದೆ ಕುಟುಂಬದಲ್ಲಿನ ಯಾವುದೇ ವೈದ್ಯಕೀಯ ತುರ್ತುಸ್ಥಿತಿಗೆ ಮೊದಲ ಆಯ್ಕೆಯಾಗಿದೆ. ಅವರನ್ನು ಆಸ್ಪತ್ರೆಗೆ ಕರೆದೊಯ್ದ ಘಟನೆಗಳ ಅನುಕ್ರಮವನ್ನು ಜ್ಞಾನೇಶ್ವರ್ ವಿವರಿಸುತ್ತಾರೆ.

ಏಪ್ರಿಲ್ 15, 2022ರಂದು, ಅರ್ಚನಾ ತಲೆತಿರುಗುವಿಕೆ ಮತ್ತು ತನ್ನ ಪಾದಗಳಲ್ಲಿ ಜುಮ್ಮೆನಿಸುವ ಅನುಭವದ ಕುರಿತು ಹೇಳಿದ್ದರು. "ನಾನು ಅವಳನ್ನು ಸ್ಥಳೀಯ ಖಾಸಗಿ ಕ್ಲಿನಿಕ್ ಗೆ ಕರೆದೊಯ್ದೆ, ಅಲ್ಲಿ ಆಕೆಗೆ ನಿಶ್ಯಕ್ತಿಗಾಗಿ ಕೆಲವು ಔಷಧಿಗಳನ್ನು ನೀಡಲಾಯಿತು," ಎಂದು ಅವರು ಹೇಳುತ್ತಾರೆ.

ಆದಾಗ್ಯೂ, ಮೇ 2ರ ರಾತ್ರಿ ಅವಳ ಆರೋಗ್ಯವು ಹದಗೆಟ್ಟಿತು, ಅಂದು ಅವರಿಗೆ ಎದೆನೋವು ಕಾಣಿಸಿಕೊಂಡು ಪ್ರಜ್ಞೆ ತಪ್ಪಿದರು. "ಅವಳು ಕದಲುತ್ತಿರಲಿಲ್ಲ. ನಾನು ತುಂಬಾ ಹೆದರುತ್ತಿದ್ದೆ," ಎಂದು ಜ್ಞಾನೇಶ್ವರ್ ಹೇಳುತ್ತಾರೆ, ಅರ್ಚನಾರಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ನಾಲ್ಕು ಚಕ್ರದ ಬಾಡಿಗೆ ವಾಹನದಲ್ಲಿ ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ಅಲೆದಾಡಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ.

"ನಾನು ಮೊದಲು ಅವಳನ್ನು ಉಲ್ಲಾಸನಗರದ ಸೆಂಟ್ರಲ್ ಆಸ್ಪತ್ರೆಗೆ ಕರೆದೊಯ್ದೆ, ಅಲ್ಲಿ ಅವರು ತಕ್ಷಣ ಅವಳಿಗೆ ಆಮ್ಲಜನಕ ಹಾಕಿದರು. ನಂತರ, ಆಕೆಯ ಸ್ಥಿತಿ ತುಂಬಾ ಗಂಭೀರವಾಗಿರುವುದರಿಂದ ಅವಳನ್ನು ಕಲ್ವಾದಲ್ಲಿನ (ಉಲ್ಲಾಸ್ ನಗರದಿಂದ 27 ಕಿಲೋಮೀಟರ್ ದೂರದಲ್ಲಿರುವ) ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದರು," ಎಂದು ಅವರು ಹೇಳುತ್ತಾರೆ. "ಆದರೆ ನಾವು ಕಲ್ವಾ ಆಸ್ಪತ್ರೆಯನ್ನು ತಲುಪಿದಾಗ, ಅಲ್ಲಿ ಉಚಿತ ಐಸಿಯು ಹಾಸಿಗೆ ಇಲ್ಲ ಎಂದು ನಮಗೆ ತಿಳಿಸಲಾಯಿತು. ಅವರು ನಮ್ಮನ್ನು ಸಿಯಾನ್ ಆಸ್ಪತ್ರೆಗೆ ಕಳುಹಿಸಿದರು."

ಆ ರಾತ್ರಿ ಅರ್ಚನಾ ಮತ್ತು ಜ್ಞಾನೇಶ್ವರ್ ಬಾಡಿಗೆ ಕ್ಯಾಬ್ ಒಂದರಲ್ಲಿ ಸುಮಾರು 78 ಕಿಲೋಮೀಟರ್ ದೂರವನ್ನು ಕ್ರಮಿಸಿದರು ಮತ್ತು ತುರ್ತು ವೈದ್ಯಕೀಯ ಸೇವೆ ಪಡೆಯಲು 4,800 ರೂ.ಗಳನ್ನು ಖರ್ಚು ಮಾಡಿದರು. ಅಂದಿನಿಂದ  ಖರ್ಚಿಗೆ, ಪ್ರಯಾಣಕ್ಕೆ ಕೊನೆಯೇ ಸಿಗಲಿಲ್ಲ.

*****

ಮೂಲತಃ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯವರಾದ ಅರ್ಚನಾ ಮತ್ತು ಜ್ಞಾನೇಶ್ವರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಸೇರಿದವರು. ಭಾರತದ ಜನಸಂಖ್ಯೆಯ ಶೇಕಡಾ 22ರಷ್ಟು ಜನರು ಬಡತನ ರೇಖೆಗಿಂತಲೂ ಕೆಳಗಿದ್ದಾರೆ ಎಂದು 2013ರಲ್ಲಿ ಯೋಜನಾ ಆಯೋಗವು ಪ್ರಕಟಿಸಿದ ವರದಿಯಲ್ಲಿ ತಿಳಿಸಲಾಗಿದೆ. ಅರ್ಚನಾ ಅವರಿಗೆ ಖಾಯಿಲೆಯಿರುವುದು ಪತ್ತೆಯಾದ ನಂತರ ಅವರ ಖರ್ಚು ಇನನಷ್ಟು ಹೆಚ್ಚಿತು. ಇಂತಹ ಖಾಯಿಲೆಗಳ ಆರೈಕೆಯ ಖರ್ಚನ್ನು 'ವಿನಾಶಕಾರಿ ಆರೋಗ್ಯ ಆರೈಕೆ ವೆಚ್ಚ' ಎಂದೇ ಕರೆಯಲಾಗುತ್ತದೆ. ಇದು ಈ ಕುಟುಂಬಕ್ಕೆ ಹೊರಲಾಗದ ಹೊರೆಯಾಗಿ ಪರಿಣಮಿಸಿದೆ. ಈ ಖರ್ಚನ್ನು ಮಾಸಿಕ ಆಹಾರೇತರ ವೆಚ್ಚದ ಶೇಕಡಾ 40ಕ್ಕಿಂತ ಹೆಚ್ಚಿನ ವೆಚ್ಚ ಎಂದು ವ್ಯಾಖ್ಯಾನಿಸಲಾಗುತ್ತದೆ.

ದಂಪತಿಗಳಿಗೆ 12 ದಿನಗಳ ಡಯಾಲಿಸಿಸ್ ಒಂದಕ್ಕೇ ತಗುಲುವ ಪ್ರಯಾಣದ ವೆಚ್ಚವು ತಿಂಗಳಿಗೆ 12,000 ರೂ. ಇದಲ್ಲದೆ ಔಷಧಿಗಳಿಗೆ ತಿಂಗಳಿಗೆ 2000 ರೂ. ವೆಚ್ಚವಾಗುತ್ತದೆ.

The door to the dialysis room prohibits anyone other than the patient inside so Dnyaneshwar (right) must wait  outside for Archana to finish her procedure
PHOTO • Jyoti Shinoli
The door to the dialysis room prohibits anyone other than the patient inside so Dnyaneshwar (right) must wait  outside for Archana to finish her procedure
PHOTO • Jyoti Shinoli

ಎಡ: ಡಯಾಲಿಸಿಸ್ ಕೊಠಡಿಯ ಒಳಗೆ ರೋಗಿಯನ್ನು ಹೊರತುಪಡಿಸಿ ಬೇರೆ ಯಾರೂ ಹೋಗುವಂತಿಲ್ಲ, ಆದ್ದರಿಂದ ಜ್ಞಾನೇಶ್ವರ್ (ಬಲ) ಅರ್ಚನಾ ತನ್ನ ಚಿಕಿತ್ಸೆ ಮುಗಿಸಿ ಹೊರಬರುವ ತನಕ ಬಾಗಿಲಿನಲ್ಲಿ ಕುಳಿತು ಕಾಯುತ್ತಾರೆ

ಈ ನಡುವೆ, ಅವರ ಆದಾಯವು ಸಹ ಕಡಿಮೆಯಾಗಿದೆ. ಅರ್ಚನಾ ಅವರ ಅನಾರೋಗ್ಯಕ್ಕೆ ಮೊದಲು, ಒಂದು ಒಳ್ಳೆಯ ದಿನದಂದು, ವಂಗನಿಯಿಂದ 53 ಕಿಲೋಮೀಟರ್ ದೂರದಲ್ಲಿರುವ ಥಾಣೆ ರೈಲ್ವೆ ನಿಲ್ದಾಣದ ಹೊರಗೆ ಫೈಲ್ ಗಳು ಮತ್ತು ಕಾರ್ಡ್ ಹೋಲ್ಡರ್‌ಗಳನ್ನು ಮಾರಾಟ ಮಾಡುವ ಮೂಲಕ ದಂಪತಿಗಳು ಸುಮಾರು 500 ರೂ.ಗಳನ್ನು ಗಳಿಸುತ್ತಿದ್ದರು. ಇತರ ದಿನಗಳಲ್ಲಿ, ಆ ಮೊತ್ತವು ಸುಮಾರು 100 ರೂ.ಗಳಷ್ಟಿರುತ್ತಿತ್ತು. ಅವರು ಏನನ್ನೂ ಗಳಿಸದ ದಿನಗಳೂ ಇದ್ದವು. "ನಾವು ತಿಂಗಳಿಗೆ ಕೇವಲ 6,000 ರೂಪಾಯಿಗಳನ್ನು ಮಾತ್ರ ಗಳಿಸುತ್ತಿದ್ದೆವು - ಅದಕ್ಕಿಂತ ಹೆಚ್ಚು ಸಂಪಾದಿಸಿದ್ದಿಲ್ಲ," ಎಂದು ಜ್ಞಾನೇಶ್ವರ ಹೇಳುತ್ತಾರೆ. (ಇದನ್ನೂ ಓದಿ: ಸಾಂಕ್ರಾಮಿಕ ರೋಗದ ಸಮಯದಯಲ್ಲಿ 'ಸ್ಪರ್ಶದ ಮೂಲಕ ಜಗತ್ತನ್ನು' ನೋಡುವುದು )

ಅವರಿಗಿರುವ ಸಾಧಾರಣ ಮತ್ತು ಅಸ್ಥಿರ ಆದಾಯವು ಅವರ ಮಾಸಿಕ ಮನೆ ಬಾಡಿಗೆ 2,500 ರೂ.ಗಳು ಮತ್ತು ಇತರ ಮನೆಯ ಖರ್ಚುಗಳನ್ನು ಒಳಗೊಂಡಿತ್ತು. ಅರ್ಚನಾ ಅವರ ರೋಗನಿರ್ಣಯವು ಈಗಾಗಲೇ ಅನಿಶ್ಚಿತವಾಗಿರುವ ಅವರ ಆರ್ಥಿಕ ಪರಿಸ್ಥಿತಿಯ ಮೇಲೆ ಭಾರಿ ಹೊಡೆತವನ್ನು ನೀಡಿದೆ.

ಅರ್ಚನಾರನ್ನು ನೋಡಿಕೊಳ್ಳಲು ಹತ್ತಿರದಲ್ಲಿ ಯಾವುದೇ ಕುಟುಂಬವಿಲ್ಲದ ಕಾರಣ, ಜ್ಞಾನೇಶ್ವರ ಅವರಿಗೆ ಕೆಲಸ ಮಾಡಲು ಹೊರಗೆ ಕಾಲಿಡಲು ಸಾಧ್ಯವಾಗುತ್ತಿಲ್ಲ. "ಅವಳು ತುಂಬಾ ದುರ್ಬಲಳಾಗಿದ್ದಾಳೆ," ಎಂದು ಅವರು ಹೇಳುತ್ತಾರೆ. "ಯಾರದ್ದಾದರೂ ಸಹಾಯವಿಲ್ಲದೆ ಮನೆಯೊಳಗೆ ನಡೆಯಲು ಅಥವಾ ಶೌಚಾಲಯವನ್ನು ಬಳಸಲು ಸಹ ಸಾಧ್ಯವಿಲ್ಲ."

ಏತನ್ಮಧ್ಯೆ, ಸಾಲಗಳು ಹೆಚ್ಚಾಗುತ್ತಿವೆ. ಜ್ಞಾನೇಶ್ವರ ಈಗಾಗಲೇ ಸ್ನೇಹಿತರು ಮತ್ತು ನೆರೆಹೊರೆಯವರಿಂದ 30,000 ರೂ.ಗಳನ್ನು ಸಾಲ ಪಡೆದಿದ್ದಾರೆ. ಎರಡು ತಿಂಗಳ ಬಾಡಿಗೆ ಬಾಕಿ ಉಳಿದಿದೆ. ಅರ್ಚನಾ ಅವರ ಡಯಾಲಿಸಿಸ್ ಮುಂದುವರಿಸಲು ಪ್ರಯಾಣದ ವೆಚ್ಚಗಳನ್ನು ನಿರ್ವಹಿಸುವುದು ದಂಪತಿಗಳ ಪಾಲಿಗೆ ನಿರಂತರ ಸವಾಲಾಗಿದೆ. ಸಂಜಯ್ ಗಾಂಧಿ ನಿರಾಧರ್ ಪಿಂಚಣಿ ಯೋಜನೆಯಡಿ ಸಿಗುವ ಮಾಸಿಕ 1,000 ರೂ.ಗಳ ಪಿಂಚಣಿ ಮಾತ್ರವೇ ಪ್ರಸ್ತುತ ಅವರ ಸ್ಥಿರವಾದ ಆದಾಯ ಮೂಲವಾಗಿದೆ.

"ಆರ್ಚುಗೆ ಜೀವಮಾನವಿಡೀ ಡಯಾಲಿಸಿಸ್ ಅಗತ್ಯವಿದೆ," ಎಂದು ಧ್ಯಾನೇಶ್ವರ ಪಿಸುಗುಟ್ಟಿದರು, ಹವಾನಿಯಂತ್ರಿತ ಡಯಾಲಿಸಿಸ್ ಕೋಣೆಯ ಹೊರಗೆ ಲೋಹದ ಬೆಂಚಿನ ಮೇಲೆ ಕುಳಿತು, ಅಲ್ಲಿಯೇ ಒಳಗೆ ಅವರ ಹೆಂಡತಿಗೆ ನಾಲ್ಕು ಗಂಟೆಗಳ ಚಿಕಿತ್ಸೆ ನೀಡಲಾಗುತ್ತಿದೆ. "ನಾನು ಅವಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ," ಎಂದು ಅವರು ಹೇಳುತ್ತಾರೆ, ಪಾನ್ ಕಲೆಗಳಿಂದ ಬಣ್ಣ ಮುಚ್ಚಿ ಹೋಗಿರುವ ಗೋಡೆಗೆ ತನ್ನ ತಲೆಯನ್ನು ಒರಗಿಸಿಕೊಳ್ಳಲು ಅವನು ಹಿಂದಕ್ಕೆ ಬಾಗುವಾಗ ಅವರ  ಧ್ವನಿ  ನಡುಗುತ್ತಿತ್ತು.

ಭಾರತದ ಹೆಚ್ಚಿನ ಜನಸಂಖ್ಯೆಯಂತೆ, ಅರ್ಚನಾ ಮತ್ತು ಜ್ಞಾನೇಶ್ವರ ಅವರು ಆರೋಗ್ಯ ಸೇವೆಗಳನ್ನು ಪಡೆಯುವಲ್ಲಿ ತಮ್ಮ ಮಿತಿಯ ಹೊರಗಿರುವ ವೆಚ್ಚದ (ಒಒಪಿಇ/burden of high out-of-pocket expenditure) ಹೊರೆಯಿಂದ ತತ್ತರಿಸುತ್ತಿದ್ದಾರೆ. 2020-21ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತವು "ವಿಶ್ವದಲ್ಲೇ ಅತ್ಯುನ್ನತ ಮಟ್ಟದ ಒಒಪಿಇಯನ್ನು ಹೊಂದಿದೆ, ಇದು ವಿನಾಶಕಾರಿ ವೆಚ್ಚಗಳು ಮತ್ತು ಬಡತನದ ಹೆಚ್ಚಳಕ್ಕೆ ನೇರವಾಗಿ ಕೊಡುಗೆ ನೀಡುತ್ತದೆ."

When Archana goes through her four-hour long dialysis treatment, sometimes Dnyaneshwar steps outside the hospital
PHOTO • Jyoti Shinoli
Travel expenses alone for 12 days of dialysis for Archana set the couple back by Rs. 12,000 a month
PHOTO • Jyoti Shinoli

ಎಡ: ಅರ್ಚನಾ ತನ್ನ ನಾಲ್ಕು ಗಂಟೆಗಳ ಸುದೀರ್ಘ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುವಾಗ, ಕೆಲವೊಮ್ಮೆ ಜ್ಞಾನೇಶ್ವರ್ ಆಸ್ಪತ್ರೆಯ ಹೊರಗೆ ಹೆಜ್ಜೆ ಹಾಕುತ್ತಾರೆ. ಬಲ: ಅರ್ಚನಾಗೆ 12 ದಿನಗಳ ಡಯಾಲಿಸಿಸ್ ಮಾಡಿಸಲು ಹೋಗುವ ಪ್ರಯಾಣದ ವೆಚ್ಚವಾಗಿ ದಂಪತಿಗಳಿಗೆ ತಿಂಗಳಿಗೆ 12,000 ರೂ. ವ್ಯಯಿಸಬೇಕಾಗುತ್ತದೆ

"ಗ್ರಾಮೀಣ ಪ್ರದೇಶಗಳಲ್ಲಿ ಡಯಾಲಿಸಿಸ್ ಆರೈಕೆಯ ಲಭ್ಯತೆಯು ಸಾಕಷ್ಟಿಲ್ಲ. ಪಿಎಂಎನ್‌ಡಿಪಿ ಅಡಿಯಲ್ಲಿ, ತಲಾ ಮೂರು ಹಾಸಿಗೆಗಳ ಸಾಮರ್ಥ್ಯದೊಂದಿಗೆ ಉಪ-ಜಿಲ್ಲಾ ಮಟ್ಟದಲ್ಲಿ ಕೇಂದ್ರಗಳನ್ನು ಸ್ಥಾಪಿಸಬೇಕು," ಎಂದು ಜನ ಸ್ವಾಸ್ಥ್ಯ ಅಭಿಯಾನದ ರಾಷ್ಟ್ರೀಯ ಸಹ-ಸಂಚಾಲಕ ಡಾ. ಅಭಯ್ ಶುಕ್ಲಾ ಹೇಳುತ್ತಾರೆ.  "ಮತ್ತು ಸರ್ಕಾರವು ರೋಗಿಗೆ ಸಾರಿಗೆ ವೆಚ್ಚವನ್ನು ಮರುಪಾವತಿಸಬೇಕು."

ಅವರ ಮಿತಿಯ ಹೊರಗಿರುವ ಹೆಚ್ಚಿನ ವೆಚ್ಚವು ರೋಗಿಯ ಮೇಲೆ ಇತರ ಪರಿಣಾಮಗಳನ್ನು ಬೀರುತ್ತದೆ. ಉದಾಹರಣೆಗೆ, ಇದು ಸೂಕ್ತವಾದ ಆಹಾರಕ್ಕಾಗಿ ಖರ್ಚು ಮಾಡುವುದನ್ನು ನಿರ್ಬಂಧಿಸುತ್ತದೆ. ಅರ್ಚನಾ ಅವರಿಗೆ ಪೌಷ್ಟಿಕ ಆಹಾರವನ್ನು ಸೇವಿಸಲು ಮತ್ತು ಸಾಂದರ್ಭಿಕವಾಗಿ ಹಣ್ಣುಗಳನ್ನು ತನ್ನ ಆಹಾರದಲ್ಲಿರುವಂತೆ ನೋಡಿಕೊಳ್ಳಲು ಹೇಳಲಾಗಿದೆ.  ಆದಾಗ್ಯೂ, ದಿನಕ್ಕೆ ಒಂದು ಹೊತ್ತಿನ ಊಟವು ಸಹ ದಂಪತಿಗಳಿಗೆ ಸವಾಲಾಗಿ ಪರಿಣಮಿಸುತ್ತಿದೆ. "ನಮ್ಮ ಮನೆಯ ಮಾಲೀಕರು ನಮಗೆ ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟವನ್ನು ನೀಡುತ್ತಾರೆ; ಕೆಲವೊಮ್ಮೆ ನನ್ನ ಸ್ನೇಹಿತ ಸ್ವಲ್ಪ ಆಹಾರವನ್ನು ಕಳುಹಿಸುತ್ತಾನೆʼ" ಎಂದು ಜ್ಞಾನೇಶ್ವರ ಹೇಳುತ್ತಾರೆ.

ಕೆಲವು ದಿನ ಅವರು ಖಾಲಿ ಹೊಟ್ಟೆಯಲ್ಲೇ ಮಲಗುತ್ತಾರೆ.

"ಹೊರಗಿನವರ ಬಳಿ ಆಹಾರ ಹೇಗೆ ಕೇಳುವುದು? ಹೀಗಾಗಿ, ನಾನು ಅಡುಗೆ ಮಾಡಲು ಪ್ರಯತ್ನಿಸುತ್ತೇನೆ," ಎಂದು ಜ್ಞಾನೇಶ್ವರ ಹೇಳುತ್ತಾರೆ, ಅವರಿಗೆ ಹಿಂದೆಂದೂ ಅಡುಗೆ ಮಾಡಿದ ಅನುಭವವಿಲ್ಲ. "ನಾನು ಅಕ್ಕಿ, ಗೋಧಿ ಹಿಟ್ಟು ಮತ್ತು ಸ್ವಲ್ಪ  ಬೇಳೆಯನ್ನು ಒಂದು ತಿಂಗಳವರೆಗೆ ಖರೀದಿಸಿದೆ." ಗಂಡ ಅಡುಗೆ ಮಡುವ ದಿನಗಳಲ್ಲಿ ಅರ್ಚನಾ ತಾನು ಮಲಗಿದ ಹಾಸಿಗೆಯಿಂದಲೇ ಅಡುಗೆಗೆ ಅಗತ್ಯ ಸೂಚನೆಗಳನ್ನು ನೀಡುತ್ತಿದ್ದರು.”

ಅರ್ಚನಾ ಅವರಂತಹ ರೋಗಿಗಳು, ರೋಗ ಮತ್ತು ಅದಕ್ಕೆ ಬೇಕಾದ ವೈದ್ಯಕೀಯ ಆರೈಕೆಯನ್ನು ಪಡೆಯಲು ತಗಲುವ ಹೆಚ್ಚಿನ ವೆಚ್ಚಗಳಿಂದ ದುಪ್ಪಟ್ಟು ಹೊರೆಯಾಗಿ, ಆರೋಗ್ಯ ಸೇವೆಗಳ ಜನಸಂಖ್ಯೆಯ ವ್ಯಾಪ್ತಿಯನ್ನು ಸುಧಾರಿಸುವ ಮತ್ತು ರೋಗಿಗಳ ಖರ್ಚಿನ ಮಿತಿಯಿಂದ ಹೊರಗಿರುವ ವೆಚ್ಚವನ್ನು ತೀವ್ರವಾಗಿ ಕಡಿಮೆ ಮಾಡುವ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತಾರೆ. 2021-22ರಲ್ಲಿ, ಸಾರ್ವಜನಿಕ ಆರೋಗ್ಯ ವೆಚ್ಚವು ದೇಶದ ಜಿಡಿಪಿಯ ಶೇಕಡಾ 2.1ರಷ್ಟಿತ್ತು. 2020-21ರ ಆರ್ಥಿಕ ಸಮೀಕ್ಷೆಯು " ರಾಷ್ಟ್ರೀಯ ಆರೋಗ್ಯ ನೀತಿ 2017ರಲ್ಲಿ ಸೂಚಿಸಿದಂತೆ ಸಾರ್ವಜನಿಕ ಆರೋಗ್ಯ ವೆಚ್ಚವನ್ನು ಜಿಡಿಪಿಯ ಶೇಕಡಾ 1 ರಿಂದ 2.5-3 ಕ್ಕೆ ಹೆಚ್ಚಿಸಿದರೆ - ಒಟ್ಟಾರೆ ಆರೋಗ್ಯ ವೆಚ್ಚದ ಶೇಕಡಾ 65ರಿಂದ 3 ಕ್ಕೆ ಒಒಪಿಇಯನ್ನು ಕಡಿಮೆ ಮಾಡಬಹುದು," ಎಂದು ಸೂಚಿಸಿದೆ.

ಅರ್ಚನಾ ಮತ್ತು ಜ್ಞಾನೇಶ್ವರ ಅವರಿಗೆ ಈ ಆರ್ಥಿಕ ನಿಯಮಗಳು ಮತ್ತು ಶಿಫಾರಸುಗಳ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ. ಅವರಿಗೆ ಅರ್ಚನಾರ ಡಯಾಲಿಸಿಸ್‌ ಸಲುವಾಗಿ ಸುದೀರ್ಘ, ದುಬಾರಿ ಪ್ರಯಾಣದ ನಂತರ ಮತ್ತೆ ಅವರ ಮನೆಗೆ ಮರಳಬೇಕು. ಜ್ಞಾನೇಶ್ವರ ತನ್ನ ಹೆಂಡತಿಯ ತೋಳನ್ನು ಮೃದುವಾಗಿ ಹಿಡಿದು ಆಸ್ಪತ್ರೆಯಿಂದ ಹೊರಗೆ ಕರೆದೊಯ್ಯುತ್ತಾರೆ, ಬೆಳಗಿನ ಪ್ರಯಾಣದ ನಂತರ ಉಳಿದಿದ್ದ ಹಣ 505 ರೂಪಾಯಿಗಳು ಜೇಬಲ್ಲಿರುವುದನ್ನು ಖಚಿತಪಡಿಸಿಕೊಂಡು ಆಟೊ ರಿಕ್ಷಾ ಕರೆಯುತ್ತಾರೆ.

“ಮನೆಗೆ ಹೋಗೋದಕ್ಕೆ ಸಾಕಾಗುವಷ್ಟು ಹಣ ನಮ್ಮ ಹತ್ರ ಇದೆಯಾ?” ಅರ್ಚನಾ ಕೇಳಿದರು.

“ಹೌದು…,” ಎಂದ ಜ್ಞಾನೇಶ್ವರ ಅವರ ದನಿಯಲ್ಲಿ ಒಂದಿಷ್ಟು ಅನಿಶ್ಚಿತತೆ ತುಂಬಿತ್ತು.

ಅನುವಾದ: ಶಂಕರ. ಎನ್. ಕೆಂಚನೂರು

Jyoti Shinoli is a Senior Reporter at the People’s Archive of Rural India; she has previously worked with news channels like ‘Mi Marathi’ and ‘Maharashtra1’.

Other stories by Jyoti Shinoli
Editor : Sangeeta Menon

Sangeeta Menon is a Mumbai-based writer, editor and communications consultant.

Other stories by Sangeeta Menon
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru