ಕೈಯಿಂದ ಎಳೆಯುವ ರಿಕ್ಷಾಗಳು ಹೋಗುವಷ್ಟು ಕಿರಿದಾಗಿರುವ ಉತ್ತರ ಕೋಲ್ಕತ್ತಾದ ಕುಮೋರ್ತುಲಿಯ ರಸ್ತೆಗಳಲ್ಲಿ ನಾವು ವಿಗ್ರಹಗಳನ್ನು ತಯಾರಿಸುವ ಕುಂಬಾರರನ್ನು ನೋಡಬಹುದು. ಇಲ್ಲಿಂದಲೇ ಪ್ರತೀ ವರ್ಷ ಇಡೀ ಕೋಲ್ಕತ್ತಾಕ್ಕೆ ದುರ್ಗಾ ದೇವಿ ಮತ್ತು ಇತರ ದೇವತೆಗಳ ವಿಗ್ರಹಗಳು ಹೋಗುತ್ತವೆ.

ಇಲ್ಲಿ ಕಾರ್ತಿಕ್ ಪಾಲ್ ಅವರ ಸ್ವಂತ ವರ್ಕ್‌ಶಾಪ್‌ ಇದೆ. ಬಿದಿರು ಮತ್ತು ಪ್ಲಾಸ್ಟಿಕ್ ಶೀಟ್‌ಗಳಿಂದ ಮಾಡಿರುವ ಈ ಶೆಡ್‌ಗೆ 'ಬ್ರಜೇಶ್ವರ್ ಅಂಡ್ ಸನ್ಸ್' ಎಂದು ತಮ್ಮ ತಂದೆಯ ಹೆಸರಿಟ್ಟಿದ್ದಾರೆ. ಅವರು ವಿಗ್ರಹವನ್ನು ತಯಾರಿಸುವ ವಿವಿಧ ಹಂತಗಳನ್ನು ಒಳಗೊಂಡ ಸುದೀರ್ಘವಾದ ಪ್ರಕ್ರಿಯೆಯ ಬಗ್ಗೆ ನಮಗೆ ಹೇಳಿದರು. ನದಿಯ ದಡದಿಂದ ತಂದ ಗಂಗೋ ಮಠಿ ಎಂಬ ಮಣ್ಣು ಮತ್ತು ಸೆಣಬಿನ ಕಣಗಳು ಹಾಗೂ ಗಂಗೋ ಮಾಠಿಯ ಮಿಶ್ರಣವಾದ ಪಾಟ್ ಮಾಠಿಯಂತಹ ಮಣ್ಣಿನ ವಿವಿಧ ಮಿಶ್ರಣಗಳನ್ನು ಈ ವಿಗ್ರಹವನ್ನು ಮಾಡುವ ವಿವಿಧ ಹಂತಗಳಲ್ಲಿ ಬಳಸುತ್ತಾರೆ.

Karthik Paul at his workshop in Kumartuli

ಕುಮೋರ್ತುಲಿಯ ತನ್ನ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿರುವ ಕಾರ್ತಿಕ್‌ ಪಾಲ್

ನಾವು ಮಾತನಾಡುತ್ತಿರುವಾಗ ಪಾಲ್ ಅವರು ಒದ್ದೆಯಾದ ಜೇಡಿಮಣ್ಣಿನಿಂದ ಕಾರ್ತಿಕೇಯ ದೇವರ ಮುಖವನ್ನು ಮಾಡುತ್ತಿದ್ದರು. ತಮ್ಮ ಅನುಭವಿ ಕೈಗಳಿಂದ ಆ ಮುಖಕ್ಕೆ ರೂಪವೊಂದನ್ನು ನೀಡುತ್ತಿದ್ದರು. ಅವರು ಬಣ್ಣದ ಕುಂಚ ಮತ್ತು ಚಿಯಾರಿ ಎಂಬ ಬಿದಿರಿನಿಂದ ಮಾಡಿದ ಕೈಯಿಂದ ಪಾಲಿಶ್ ಮಾಡುವ ಕೆತ್ತನೆಯ ಸಲಕರಣೆಯನ್ನು ಬಳಸುತ್ತಾರೆ.

ಅಲ್ಲೇ ಸಮೀಪದಲ್ಲಿದ್ದ ಇನ್ನೊಂದು ವರ್ಕ್‌ಶಾಪ್‌ನಲ್ಲಿ ಗೋಪಾಲ್ ಪಾಲ್ ಅವರು ಮಣ್ಣಿನ ರಚನೆಗೆ ಚರ್ಮದ ವಿನ್ಯಾಸವನ್ನು ನೀಡುವ ಟವೆಲ್ ತರಹದ ಒಂದು ವಸ್ತುವನ್ನು ಅಂಟಿಸಲು ಅಂಟೊಂದನ್ನು ಸಿದ್ಧಪಡಿಸುತ್ತಿದ್ದರು. ಗೋಪಾಲ್ ಅವರು ಕೋಲ್ಕತ್ತಾದ ಉತ್ತರ ದಿಕ್ಕಿಗಿರುವ 120 ಕಿಲೋಮೀಟರ್ ದೂರದ ನಾಡಿಯಾ ಜಿಲ್ಲೆಯ ಕೃಷ್ಣನಗರದವರು. ಇಲ್ಲಿರುವ ಅನೇಕ ಕೆಲಸಗಾರರು, ಹೆಚ್ಚಿನ ಎಲ್ಲಾ ಪುರುಷರು ಒಂದೇ ಜಿಲ್ಲೆಯಿಂದ ಬಂದವರು. ಅವರಲ್ಲಿ ಹೆಚ್ಚಿನವರು ವರ್ಕ್‌ಶಾಪ್ ಮಾಲೀಕರು ಕೊಟ್ಟಿರುವ ಅದೇ ಪ್ರದೇಶದಲ್ಲಿರುವ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಾರೆ. ತುಂಬಾ ಬೇಡಿಕೆಯಿರುವ ಸೀಸನ್‌ಗೆ ಒಂದು ತಿಂಗಳ ಮುಂಚೆಯೇ ಈ ಕಾರ್ಮಿಕರನ್ನು ಕೆಲಸಕ್ಕೆ ಕರೆಸಿಕೊಳ್ಳುತ್ತಾರೆ. ಅವರು ದಿನಕ್ಕೆ ಎಂಟು ಗಂಟೆಗಳ ಪಾಳಿಯಲ್ಲಿ ದುಡಿಯುತ್ತಾರೆ. ಶರತ್ಕಾಲದಲ್ಲಿ ಬರುವ ಹಬ್ಬಕ್ಕೆ ಮುಂಚೆ ಈ ಕುಶಲಕರ್ಮಿಗಳು ರಾತ್ರಿಯಿಡೀ ಕೆಲಸ ಮಾಡುತ್ತಾರೆ, ತಮ್ಮ ಹೆಚ್ಚಿನ ಸಮಯವನ್ನು ಕೆಲಸದಲ್ಲಿಯೇ ಕಳೆಯುತ್ತಾರೆ.

ಕುಮೋರ್ತುಲಿಗೆ ಸುಮಾರು 300 ವರ್ಷಗಳ ಹಿಂದೆ ಕೃಷ್ಣನಗರದಿಂದ ಮೊದಲ ಬಾರಿಗೆ ಕುಂಬಾರರು ವಲಸೆ ಬಂದರು. ಅವರು ಬಾಗ್‌ಬಜಾರ್ ಘಾಟ್‌ಗೆ ಸಮೀಪವೇ ಕೆಲ ತಿಂಗಳುಗಳ ಕಾಲ ಹೊಸದಾಗಿ ನಿರ್ಮಾಣವಾಗುತ್ತಿದ್ದ ಕುಮೋರ್ತುಲಿಯಲ್ಲಿ ಬೀಡುಬಿಟ್ಟಿದ್ದರು. ಅಲ್ಲೇ ಇರುವ ನದಿಯಿಂದ ಜೇಡಿಮಣ್ಣನ್ನು ಸುಲಭವಾಗಿ ಸಂಗ್ರಹಿಸಬಹುದು ಎಂಬ ಕಾರಣಕ್ಕೆ ಆರಂಭದಲ್ಲಿ ಅವರು ಅಲ್ಲಿ ನೆಲೆಸಿದ್ದರು. ಇದರ ಜೊತೆಗೆ ಅವರು ಜಮೀನ್ದಾರರ ಮನೆಗಳಲ್ಲಿ ಕೆಲಸ ಕೂಡ ಮಾಡುತ್ತಿದ್ದರು, ದುರ್ಗಾಪೂಜಾ ಹಬ್ಬಕ್ಕಿಂತ ಕೆಲ ವಾರಗಳ ಮೊದಲು ಠಾಕುರ್‌ದಲಾನ್‌ಗಳಲ್ಲಿ (ಜಮೀನ್ದಾರರ ಮನೆಯ ಆವರಣದ ಒಳಗೆ ಧಾರ್ಮಿಕ ಉತ್ಸವಗಳು ನಡೆಯುವ ಸ್ಥಳ) ವಿಗ್ರಹಗಳನ್ನು ತಯಾರಿಸುತ್ತಿದ್ದರು.

ವೀಡಿಯೋ ನೋಡಿ: ಕುಮೋರ್ತುಲಿಗೊಂದು ಪಯಣ

1905 ರಲ್ಲಿ ಬಂಗಾಳದ ವಿಭಜನೆ ನಡೆಯುವ ಮೊದಲು ಮತ್ತು ವಿಭಜನೆಯ ಸಂದರ್ಭದಲ್ಲಿ ಬಾಂಗ್ಲಾದೇಶದ ಅತ್ಯಂತ ನುರಿತ ಕುಶಲಕರ್ಮಿಗಳು ಢಾಕಾ, ಬಿಕ್ರೊಂಪೂರ, ಪೊರೀತ್‌ಪೂರ್‌ನಿಂದ ಬದುಕು ಕಟ್ಟಿಕೊಳ್ಳಲು ಕುಮೋರ್ತುಲಿಯ ದಾರಿ ಹಿಡಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದು ಜಮೀನ್ದಾರಿ ಪದ್ಧತಿ ಅವನತಿಯಾದ ನಂತರ, ಶರ್ಬೋಜೊನಿನ್ ಅಥವಾ ಸಮುದಾಯ ಪೂಜಾ ಪದ್ಧತಿ ಜನಪ್ರಿಯವಾಯಿತು. ಮಾತೆ ದುರ್ಗೆಯನ್ನು ಇಕ್ಕಟ್ಟಾದ ಠಾಕುರ್‌ದಲಾನ್‌ಗಳಿಂದ ರಸ್ತೆಗಳಲ್ಲಿ ಹಾಕಲಾದ ವಿಶಾಲವಾದ ಪೆಂಡಾಲ್‌ಗಳಿಗೆ ತಂದು ಪೂಜಿಸಲು ಆರಂಭಿಸಿದರು. ದೇವಿ ಮತ್ತು ಇತರ ದೇವರ ವಿಗ್ರಹಗಳಿಗೆ ವಿಸ್ತಾರವಾದ ಮತ್ತು ಪ್ರತ್ಯೇಕ ಹಿಂಪರದೆಗಳನ್ನು ಹಾಕಿ ಅಲಂಕರಿಸಲಾಯಿತು.

ದುರ್ಗಾ ಪೂಜೆ ಪಶ್ಚಿಮ ಬಂಗಾಳದ ಅತ್ಯಂತ ದೊಡ್ಡ ಹಬ್ಬ. ಈ ಹಬ್ಬ ಸಾಮಾನ್ಯವಾಗಿ ಸೆಪ್ಟೆಂಬರ್ ಕೊನೆ - ಅಕ್ಟೋಬರ್ ಆರಂಭದಲ್ಲಿ ಬರುವ ಮಹಾಲಯದಿಂದ (ಮೊಹಲೊಯ) ಶುರುವಾಗುತ್ತದೆ. ಈ ದಿನದಂದು ಸಾವಿರಾರು ಜನರು ತಮ್ಮ ತಮ್ಮ ಪೂರ್ವಜರಿಗೆ ಸ್ಥಳೀಯರು ಹೂಗ್ಲಿ ಎಂದು ಕರೆಯುವ ಗಂಗಾ ತೀರದಲ್ಲಿ ತರ್ಪಣ ಬಿಟ್ಟು ಪ್ರಾರ್ಥನೆ ಸಲ್ಲಿಸುತ್ತಾರೆ. ಚೋತುರ್ಥಿ (ಚತುರ್ಥಿ), ಪೊಂಚಮಿ (ಪಂಚಮಿ) ಅಥವಾ ಷೊಷ್ಠಿಯ (ಷಷ್ಠಿ) ದಿನಗಳಲ್ಲಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಮೊಹಾಸಪ್ತೊಮಿ (ಮಹಾಸಪ್ತಮಿ), ಮೊಹಾಅಷ್ಟೊಮಿ (ಮಹಾಅಷ್ಟಮಿ), ಮೊಹಾನಬೊಮಿ (ಮಹಾನವಮಿ) - ಈ ಮೂರು ದಿನಗಳ ಕಾಲ ಮುಖ್ಯ ಪೂಜೆ ನಡೆಯುತ್ತದೆ. ಪೂಜಾ ವಿಧಾನಗಳು ತುಂಬಾ ದೀರ್ಘವಾಗಿರುತ್ತವೆ. ಮೂರು ದಿನಗಳ ನಂತರ ದಶೊಮಿಯಂದು (ದಶಮಿ - ಕೊನೆಯ ದಿನ) ಕೋಲ್ಕತ್ತಾದ ಜನತೆ ಬಾಬುಘಾಟ್ ಮತ್ತು ಹೂಗ್ಲಿ ಮೊದಲಾದ ಸ್ಥಳಗಳಲ್ಲಿ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜನೆ ಮಾಡುವ ಮೂಲಕ ದೇವಿಗೆ ಭಾವನಾತ್ಮಕ ವಿದಾಯವನ್ನು ಹೇಳುತ್ತಾರೆ.

ಕುಮೋರ್ತುಲಿಯಲ್ಲಿರುವ ತಮ್ಮ ವರ್ಕ್‌ಶಾಪ್‌ನಲ್ಲಿ ವಿಗ್ರಹಕ್ಕೆ ಅಂತಿಮ ಸ್ಪರ್ಶವನ್ನು ನೀಡುತ್ತಾ ಕಾರ್ತಿಕ್ ಅವರು ತಾವು ಮತ್ತು ತಮ್ಮ ಜೊತೆಗಿರುವ ಕೆಲಸಗಾರರೇ ಬಣ್ಣಗಳನ್ನೂ ತಯಾರಿಸುತ್ತಾರೆ ಎಂದು ಹೇಳುತ್ತಾರೆ. ಅವರು ಖೋರಿ ಮಠಿಯನ್ನು (ಸಮುದ್ರದ ನೊರೆಯಿಂದ ತಯಾರಿಸಿದ ವಿಶೇಷವಾದ ಮಣ್ಣು) ರಾಸಾಯನಿಕ ಬಣ್ಣಗಳೊಂದಿಗೆ ಮತ್ತು ಖಾಯ್‌-ಬಿಚಿ ಅಥವಾ ಹುಣಸೆ ಬೀಜಗಳಿಂದ ತಯಾರಿಸಿದ ಅಂಟುಗಳೊಂದಿಗೆ ಬೆರೆಸಿ ಬಣ್ಣಗಳನ್ನು ತಯಾರಿಸುತ್ತಾರೆ. ಹುಣಸೆ ಬೀಜದ ಪುಡಿ ದೀರ್ಘಕಾಲದವರೆಗೆ ಬಣ್ಣವು ವಿಗ್ರಹದ ಮೇಲೆ ಇರುವಂತೆ ಕಾಪಾಡುತ್ತದೆ.

ಕೆಲ ಸಮಯದ ನಂತರ ವಿಗ್ರಹಗಳು ಸಿದ್ಧವಾಗುತ್ತವೆ. ಅಲಂಕರಿಸಿಕೊಂಡು ತಮ್ಮ ನಗರ ಸಂಚಾರವನ್ನು ಆರಂಭಿಸುತ್ತವೆ. ಕುಮೋರ್ತುಲಿಯ ಮಬ್ಬು ಬೆಳಕಿನ ಸ್ಟುಡಿಯೋಗಳು ತಾವು ರೂಪ ನೀಡಿದ ಕಲಾಕೃತಿಗಳಿಗೆ ವಿದಾಯ ಹೇಳುತ್ತವೆ. ಈ ಕಲಾಕೃತಿಗಳು ಪ್ರಕಾಶಮಾನವಾದ ಬೆಳಕಿರುವ ಕೋಲ್ಕತ್ತಾದ ಪೆಂಡಾಲ್‌ಗಳಲ್ಲಿ ವಿರಾಜಮಾನವಾಗುತ್ತವೆ.

The artisans prepare a clay called ‘path mati’ by mixing jute particles with ‘atel mati’ from the Ganga

ಈಟೇಲ್‌ ಮಾಠಿ ಎಂಬ ಗಂಗೆಯ ಮಣ್ಣನ್ನು ಸೆಣಬಿನ ಪುಡಿಯೊಂದಿಗೆ ಬೆರೆಸಿ ಪಾಟ್‌ ಮಠಿ ಎಂಬ ಮಣ್ಣನ್ನು ತಯಾರಿಸುತ್ತಿರುವ  ಕುಶಲಕರ್ಮಿಗಳು

Once the bamboo structure is ready, straw is methodically bound together to give shape to an idol; the raw materials for this come from the nearby Bagbazar market

ಎಡ: ವಿಗ್ರಹಕ್ಕೆ ಆಧಾರವನ್ನು ಕೊಡುವ 'ಕಥಮೋ' ಎಂದು ಕರೆಯುವ ಬಿದಿರಿನ ಬಡಿಗೆಯನ್ನು ಸಿದ್ಧಪಡಿಸುವುದರೊಂದಿಗೆ ವಿಗ್ರಹ ತಯಾರಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಬಲ: ಬಿದಿರಿನ ಬಡಿಗೆ ಸಿದ್ಧವಾದ ನಂತರ ವಿಗ್ರಹಕ್ಕೆ ಆಕಾರ ನೀಡಲು ಅದಕ್ಕೆ ಸಮೀಪದ ಬಾಗ್‌ಬಜಾರ್ ಮಾರುಕಟ್ಟೆಯಿಂದ ತಂದಿರುವ ಒಣಹುಲ್ಲನ್ನು ಕಟ್ಟಲಾಗುತ್ತದೆ

An artisan applies sticky black clay on the straw structure to give the idol its final shape; the clay structure is then put out in the sun to dry for 3 to 4 days

ವಿಗ್ರಹಕ್ಕೆ ಅಂತಿಮ ಆಕಾರವನ್ನು ನೀಡಲು ಒಣಹುಲ್ಲಿನ ಮೇಲೆ ಜಿಗುಟಾದ ಕಪ್ಪು ಜೇಡಿಮಣ್ಣನ್ನು ಹಚ್ಚುತ್ತಿರುವ ಕುಶಲಕರ್ಮಿ; ಇದಾದ ನಂತರ ಈ ಮಣ್ಣಿನ ರಚನೆಯನ್ನು 3 ರಿಂದ 4 ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ

ಬಣ್ಣದ ಕುಂಚ ಮತ್ತು ಬಿದಿರಿನ ಶಿಲ್ಪಕಲೆಯ ಸಲಕರಣೆಯನ್ನು ಬಳಸಿಕೊಂಡು ವಿಗ್ರಹದ ಮೇಲೆ ನಾಚೂಕಿನ ಕೊರೆಯುವ ಕೆಲಸವನ್ನು ಮಾಡಲಾಗುತ್ತದೆ

At another workshop nearby, Gopal Paul uses a fine towel-like material to give idols a skin-textured look

ಸಮೀಪದಲ್ಲಿರುವ ಇನ್ನೊಂದು ವರ್ಕ್‌ಶಾಪ್‌ನಲ್ಲಿ ಗೋಪಾಲ್ ಪಾಲ್ ಅವರು ವಿಗ್ರಹಗಳಿಗೆ ಚರ್ಮದ ವಿನ್ಯಾಸವನ್ನು ನೀಡಲು ಟವೆಲ್ ತರಹದ ವಸ್ತುವನ್ನು ಬಳಸುತ್ತಾರೆ

Half painted Idol of Durga

ಮಹಾಲಯದ ಶುಭ ದಿನದಂದು ದುರ್ಗಾ ಮಾತೆಗೆ ಬಣ್ಣಗಳಿಂದ ಕಣ್ಣುಗಳನ್ನು ರಚಿಸಿ, ಮಣ್ಣಿನ ವಿಗ್ರಹಗಳಿಗೆ ಅಂತಿಮವಾಗಿ ಜೀವ ನೀಡಲಾಗುತ್ತದೆ

ವೀಕ್ಷಿಸಿ: ‘ಕುಮೋರ್ತುಲಿಗೊಂದು ಪಯಣ’ ಫೋಟೋ ಆಲ್ಬಾಂ

ಈ ವೀಡಿಯೊ ಮತ್ತು ವರದಿಯನ್ನು ಸಿಂಚಿತಾ ಮಜಿ ಅವರ 2015-16 ಪರಿ ಫೆಲೋಶಿಪ್‌ನ ಭಾಗವಾಗಿ ಮಾಡಲಾಗಿದೆ.

ಕನ್ನಡ ಅನುವಾದ: ಚರಣ್‌ ಐವರ್ನಾಡು

Sinchita Parbat

সিঞ্চিতা মাজি পিপলস আর্কাইভ অফ রুরাল ইন্ডিয়ার একজন বরিষ্ঠ ভিডিও সম্পাদক। এছাড়াও তিনি একজন স্বতন্ত্র ফটোগ্রাফার এবং তথ্যচিত্র নির্মাতা।

Other stories by Sinchita Parbat
Text Editor : Sharmila Joshi

শর্মিলা জোশী পিপলস আর্কাইভ অফ রুরাল ইন্ডিয়ার (পারি) পূর্বতন প্রধান সম্পাদক। তিনি লেখালিখি, গবেষণা এবং শিক্ষকতার সঙ্গে যুক্ত।

Other stories by শর্মিলা জোশী
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad