"ಮಗಳು ಗಂಟೆಗಟ್ಟಲೆ ತನ್ನ ತಾಯಿಯನ್ನು ಕರೆತರುವಂತೆ ಹಟ ಹಿಡಿದು ಅಳುತ್ತಾಳೆ" ಎಂದು ಏಳು ವರ್ಷದ ನವ್ಯಾಳ ತಂದೆಯಾದ ಶಿಶುಪಾಲ್ ನಿಷಾದ್ ಹೇಳುತ್ತಾರೆ. "ಆದರೆ ನಾನು ಅವಳನ್ನು ಎಲ್ಲಿಂದ ಕರೆತರಲಿ? ನಾವು ನಿದ್ರೆ ಮಾಡದೆ ಹಲವು ವಾರಗಳಾಗಿವೆ. ನನ್ನ ಮನಸ್ಸೇ ನನ್ನ ಕೈಯಲ್ಲಿಲ್ಲ" ಎಂದು ಉತ್ತರ ಪ್ರದೇಶದ ಸಿಂಗ್ತಾಯುಲಿ ಗ್ರಾಮದ 38 ವರ್ಷದ ಕಾರ್ಮಿಕರಾದ ನಿಷಾದ್ ಹೇಳುತ್ತಾರೆ.

ಶಿಶುಪಾಲ್ ಅವರ ಪತ್ನಿ ಮಂಜು - ನವ್ಯಾಳ ತಾಯಿ - ಜಲೌನ್ ಜಿಲ್ಲೆಯ ಕುಥಾಂಡ್ ಬ್ಲಾಕ್ ನ ಸಿಂಗ್ತಾಯುಲಿ ಪ್ರಾಥಮಿಕ ಶಾಲೆಯಲ್ಲಿ 'ಶಿಕ್ಷಾ ಮಿತ್ರ' ಅಥವಾ ಪ್ಯಾರಾ-ಟೀಚರ್ ಆಗಿದ್ದರು. ಉತ್ತರ ಪ್ರದೇಶ ಪಂಚಾಯತ್ ಚುನಾವಣೆಯಲ್ಲಿ ಕಡ್ಡಾಯ ಕರ್ತವ್ಯ ನಿರ್ವಹಿಸಿದ ನಂತರ ಕೋವಿಡ್-19ರಿಂದ ನಿಧನರಾದ 1,621 ಶಾಲಾ ಶಿಕ್ಷಕರ ಪಟ್ಟಿಯಲ್ಲಿ ಅವರದು 1,282ನೇ ಸ್ಥಾನ. ಆದರೆ ಅವರ ಮರಣದವರೆಗೂ ಐದು ಸದಸ್ಯರ ಕುಟುಂಬದ ಭಾಗವಾಗಿದ್ದ ಮಂಜು ನಿಷಾದ್,  ಅವರ ಕುಟುಂಬದ ಪಾಲಿಗೆ ಕೇವಲ ಸಂಖ್ಯೆಯಷ್ಟೇ ಆಗಿರಲಿಲ್ಲ.

ಅವರು ಮೂರು ಮಕ್ಕಳ ಪಾಲಿಗೆ ತಾಯಿಯಾಗಿದ್ದರು ಮತ್ತು ಕುಟುಂಬದ ಏಕೈಕ ಸಂಪಾದನೆದಾರಳಾಗಿದ್ದರು, ತಿಂಗಳಿಗೆ ಕೇವಲ 10,000 ರೂ.ಗಳನ್ನು ಮನೆಗೆ ತರುತ್ತಿದ್ದರು – ಇದು ಒಪ್ಪಂದದ ಮೇಲೆ ಕೆಲಸ ಮಾಡುವ ಮತ್ತು ಅಧಿಕಾರಾವಧಿಯ ಭದ್ರತೆಯಿಲ್ಲದ ಶಿಕ್ಷಾ ಮಿತ್ರರಿಗೆ ಪಾವತಿಸಲಾಗುವ ಕರುಣಾಜನಕ ಮೊತ್ತ. 19 ವರ್ಷಗಳ ಕಾಲ ಕೆಲಸ ಮಾಡಿದ ಮಂಜು ಅವರಂತಹವರಿಗೂ ಸಹ ಅದೇ ಸಂಬಳ. ಶಿಕ್ಷಾ ಮಿತ್ರಗಳು ತರಗತಿಗಳಲ್ಲಿ ಪಾಠ ಮಾಡುತ್ತಾರೆ, ಆದರೆ ಬೋಧನಾ ಸಹಾಯಕ (ಅಥವಾ ಶಿಕ್ಷಕರ ಸಹಾಯಕ) ಎಂದು ಅವರನ್ನು ವರ್ಗೀಕರಿಸಲಾಗಿದೆ.

ಶಿಶುಪಾಲ್ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ಕಾಮಗಾರಿಯಲ್ಲಿ ದಿನಕ್ಕೆ 300 ರೂ.ಗಳಿಗೆ ಕೂಲಿ ಕೆಲಸ ಮಾಡುತ್ತಿದ್ದರು, "ನಾನು ಕೆಲಸ ಮಾಡುತ್ತಿದ್ದ ಎಕ್ಸ್ ಪ್ರೆಸ್ ವೇಯ ಹಂತವು ಎರಡು ತಿಂಗಳ ಹಿಂದೆ ಪೂರ್ಣಗೊಂಡಿತು. ನಂತರ  ಹತ್ತಿರದಲ್ಲಿ ಬೇರೆ ಯಾವುದೇ ನಿರ್ಮಾಣ ಕೆಲಸಗಳು ನಡೆಯುತ್ತಿಲ್ಲ. ಕಳೆದ ತಿಂಗಳುಗಳಲ್ಲಿ ನನ್ನ ಹೆಂಡತಿಯ ಸಂಪಾದನೆಯಿಂದಲೇ ಮನೆ ನಡೆಯುತ್ತಿತ್ತು."

ಏಪ್ರಿಲ್ 15, 19, 26 ಮತ್ತು 29ರಂದು ನಡೆದ ಉತ್ತರ ಪ್ರದೇಶದ ನಾಲ್ಕು ಹಂತದ ಬೃಹತ್ ಪಂಚಾಯತ್ ಚುನಾವಣೆಯಲ್ಲಿ ಸಾವಿರಾರು ಶಿಕ್ಷಕರಿಗೆ ಚುನಾವಣಾ ಕರ್ತವ್ಯವನ್ನು ನಿಯೋಜಿಸಲಾಯಿತು. ಶಿಕ್ಷಕರು ಮೊದಲು ಒಂದು ದಿನದ ತರಬೇತಿಗೆ ಹೋದರು, ನಂತರ ಎರಡು ದಿನಗಳ ಮತದಾನ ಕೆಲಸಕ್ಕಾಗಿ - ಒಂದು ದಿನ ಸಿದ್ಧತೆಗಾಗಿ ಮತ್ತು ಎರಡನೆಯದು ಮತದಾನದ ದಿನ. ನಂತರ, ಮೇ 2ರಂದು ಮತಗಳನ್ನು ಎಣಿಸಲು ಸಾವಿರಾರು ಜನರು ಮತ್ತೆ ವರದಿ ಮಾಡಿಕೊಳ್ಳಬೇಕಾಯಿತು. ಈ ಕಾರ್ಯಗಳನ್ನು ಪೂರೈಸುವುದು ಕಡ್ಡಾಯವಾಗಿತ್ತು ಮತ್ತು ಮತದಾನವನ್ನು ಮುಂದೂಡುವಂತೆ ಶಿಕ್ಷಕರ ಸಂಘಗಳು ಸಲ್ಲಿಸಿದ್ದ ಮನವಿಗಳನ್ನು ನಿರ್ಲಕ್ಷಿಸಲಾಗಿತ್ತು.

ಯುಪಿ ಶಿಕ್ಷಕರ ಒಕ್ಕೂಟವು ಒಟ್ಟು 1,621 ಶಿಕ್ಷಕರನ್ನು ಪಟ್ಟಿ ಮಾಡಿದೆ. ಈ ಪೈಕಿ 193 ಶಿಕ್ಷಾ ಮಿತ್ರರು. ಮಂಜುವಿನಂತಹ ಇತರ 72 ಮಹಿಳೆಯರು ಈ ಪಟ್ಟಿಯಲ್ಲಿದ್ದಾರೆ. ಆದರೆ ಮೇ 18ರಂದು ಉತ್ತರ ಪ್ರದೇಶದ ಪ್ರಾಥಮಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಕೆಲಸದಲ್ಲಿ ಮೃತಪಟ್ಟ ಮೂವರು ಶಿಕ್ಷಕರ ಕುಟುಂಬಗಳು ಚುನಾವಣಾ ಆಯೋಗದ ಮಾನದಂಡಗಳ ಪ್ರಕಾರ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಇದರ ಅರ್ಥವೇನೆಂದರೆ, ಅವರು ತಮ್ಮ ಕೆಲಸದ ಸ್ಥಳಕ್ಕೆ ಅಥವಾ ಮನೆಗೆ ಹಿಂದಿರುಗುವಾಗ ಸಾಯುವ ಶಿಕ್ಷಕರು ಮಾತ್ರ ಪರಿಹಾರಕ್ಕೆ ಅರ್ಹರು. ಪತ್ರಿಕಾ ಹೇಳಿಕೆಯು ಹೇಳುವಂತೆ: "ಈ ಅವಧಿಯಲ್ಲಿ ಒಬ್ಬ ವ್ಯಕ್ತಿಯು ಯಾವುದೇ ಕಾರಣದಿಂದ ಸತ್ತರೆ ಪರಿಹಾರದ ಹಣ ನೀಡಲಾಗುತ್ತದೆ, ಅದನ್ನು ರಾಜ್ಯ ಚುನಾವಣಾ ಆಯೋಗವು ಮಂಜೂರು ಮಾಡುತ್ತದೆ."

Shishupal Nishad with Navya, Muskan, Prem and Manju: a last photo together of the family
PHOTO • Courtesy: Shishupal Nishad

ನವ್ಯಾ, ಮುಸ್ಕಾನ್, ಪ್ರೇಮ್ ಮತ್ತು ಮಂಜು ಅವರೊಂದಿಗೆ ಶಿಶುಪಾಲ್ ನಿಷಾದ್: ಕುಟುಂಬದ ಕೊನೆಯ ಫೋಟೋ

ಆ ವ್ಯಾಖ್ಯಾನದ ಪ್ರಕಾರ ಹೇಳುವುದಾದರೆ, ಪತ್ರಿಕಾ ಹೇಳಿಕೆಯು ಹೇಳುವುದು: "ಜಿಲ್ಲಾ ಆಡಳಿತಗಾರರು 3 ಶಿಕ್ಷಕರ ಸಾವಿನ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ (ಎಸ್ ಇಸಿ) ಮಾಹಿತಿ ನೀಡಿದ್ದಾರೆ." ಇದು ತರಬೇತಿ, ಮತದಾನ ಅಥವಾ ಎಣಿಕೆ ಸ್ಥಳಗಳಲ್ಲಿ ಸೋಂಕಿಗೆ ಒಳಗಾದ ಆದರೆ ಕೆಲವು ದಿನಗಳ ನಂತರ ಮನೆಯಲ್ಲಿ ಸಾವನ್ನಪ್ಪಿದ 1618 ಶಿಕ್ಷಕರನ್ನು ಪರಿಹಾರದ ಅರ್ಹತೆಯಿಂದ ಹೊರಗಿಡುತ್ತದೆ. ಮತ್ತು ಕೊರೊನಾ ವೈರಸ್ ಸೋಂಕಿನ ಸ್ವರೂಪ ಮತ್ತು ಅದು ಹೇಗೆ ಕೊಲ್ಲುತ್ತದೆ ಮತ್ತು ಅದು ಹಾಗೆ ಕೊಲ್ಲಲು ತೆಗೆದುಕೊಳ್ಳುವ ಸಮಯವನ್ನು ಸಂಪೂರ್ಣವಾಗಿ ಕಡೆಗಣಿಸುತ್ತದೆ.

ಶಿಕ್ಷಕ್ ಮಹಾಸಂಘವು ಇದನ್ನು ತಿರಸ್ಕರಿಸಿ ಪ್ರತಿಕ್ರಿಯಿಸಿದೆ, ಅಧಿಕಾರಿಗಳು ತಮ್ಮ ಬಳಿಯಿರುವ ಪೂರ್ಣ ಪಟ್ಟಿಯನ್ನು ನೋಡಬೇಕು ಎಂದು ಅದು ಹೇಳಿದೆ. "ಇದರಿಂದಲಾದರೂ ಅವರ ಕೇವಲ ಮೂವರು ಶಿಕ್ಷಕರ ನಿಧನವನ್ನು ದೃಢೀಕರಿಸುವಾಗ ಬಿಟ್ಟುಹೋಗಿರಬಹುದಾದ ಉಳಿದ 1,618 ಶಿಕ್ಷಕರ ಹೆಸರನ್ನು ತಾಳೆ ಮಾಡಿ ನೋಡಬಹುದು.” ಎಂದು ಮಹಾಸಂಘದ ಅಧ್ಯಕ್ಷ ದಿನೇಶ್ ಶರ್ಮಾ ಪರಿಗೆ ತಿಳಿಸಿದರು.

ಮಂಜು ನಿಷಾದ್ ಅವರು ಏಪ್ರಿಲ್ 25ರಂದು ಜಲೌನ್ ಜಿಲ್ಲೆಯ ಕಡೌರಾ ಬ್ಲಾಕ್ ನಲ್ಲಿ ಮತದಾನ ಕೇಂದ್ರದ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು, ಇದು 26ರಂದು ನಡೆಯಲಿದ್ದ ನಿಜವಾದ ಮತದಾನದ ಮೊದಲು ಸಿದ್ಧತೆಯ ದಿನವಾಗಿತ್ತು. ಅದಕ್ಕೂ ಕೆಲವು ದಿನಗಳ ಮೊದಲು ಅವರು ತರಬೇತಿ ಶಿಬಿರಕ್ಕೂ ಹಾಜರಾಗಿದ್ದರು. ಏಪ್ರಿಲ್ 25ರ ರಾತ್ರಿ ಅವರು ಗಂಭೀರ ಅನಾರೋಗ್ಯಕ್ಕೆ ಒಳಗಾದರು.

"ಇವೆಲ್ಲವೂ ಸರ್ಕಾರದ ಅಜಾಗರೂಕತೆಯಿಂದಾಗಿ ನಡೆದವು. ನನ್ನ ಹೆಂಡತಿ ಕೆಲವು ಉನ್ನತ ಅಧಿಕಾರಿಗಳೊಡನೆಗೆ ಮಾತನಾಡಲು ಪ್ರಯತ್ನಿಸಿದ್ದಳು, ಮನೆಗೆ ಹೋಗುವ ಅಗತ್ಯವನ್ನು ಮನಗಂಡಿದ್ದರಿಂದ ರಜೆಯನ್ನು ಕೋರಿದ್ದಳು. ಆದರೆ ಅವರು ಆಕೆಗೆ ಹೇಳಿದ್ದು: 'ನಿಮಗೆ ರಜೆ ಬೇಕಾದಲ್ಲಿ, ನೀವು ಕೆಲಸವನ್ನು ಬಿಟ್ಟು ಹೋಗಬಹುದು' ಎಂದು. ಇದರಿಂದಾಗಿ ಅವಳು ಬೇರೆ ದಾರಿಯಿಲ್ಲದೆ ಕರ್ತವ್ಯವನ್ನು ಮುಂದುವರಿಸಿದಳು" ಎಂದು ಶಿಶುಪಾಲ್ ಹೇಳುತ್ತಾರೆ.

ಮತದಾನದ ಕರ್ತವ್ಯವನ್ನು ಪೂರ್ಣಗೊಳಿಸಿದ ನಂತರ ಅವರು ಏಪ್ರಿಲ್ 26ರ ತಡರಾತ್ರಿ ಬಾಡಿಗೆ ವಾಹನದಲ್ಲಿ ಮನೆಗೆ ಮರಳಿದರು. "ಅವಳು ಅಸ್ವಸ್ಥತೆ ಮತ್ತು ಜ್ವರ ಬಂದ ಹಾಗಿದೆಯೆಂದು ಹೇಳಿದಳು," ಎಂದು ಅವರು ಮುಂದುವರೆದು ಹೇಳುತ್ತಾರೆ. ಮರುದಿನ ಅವರಿಗೆ ಕೋವಿಡ್-19 ಸೋಂಕು ಇರುವುದು ಪತ್ತೆಯಾದಾಗ, ಶಿಶುಪಾಲ್ ಮಂಜುವವರನ್ನು ಖಾಸಗಿ ನರ್ಸಿಂಗ್ ಹೋಂಗೆ ಕರೆದೊಯ್ದರು, ಅಲ್ಲಿ ಅವರನ್ನು ಒಂದು ವಾರದವರೆಗೆ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿದೆ ಎಂದು ತಿಳಿಸಲಾಯಿತು - ಅಲ್ಲಿ ಒಂದು ರಾತ್ರಿಗೆ ರೂ. 10,000 ಶುಲ್ಕವಿತ್ತು. ಸರಳವಾಗಿ ಹೇಳುವುದಾದರೆ: ಆಸ್ಪತ್ರೆಯಲ್ಲಿ ಪ್ರತಿದಿನ ಅವರು ಒಂದು  ತಿಂಗಳ ಆದಾಯವನ್ನು ಖರ್ಚು ಮಾಡಬೇಕಿತ್ತು. “ಆಗ ವಿಧಿಯಿಲ್ಲದೆ ನಾನು ಆಕೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದೆ” ಎನ್ನುತ್ತಾರೆ ಶಿಶುಪಾಲ್.

ಮಂಜು ಅವರು ಆಸ್ಪತ್ರೆಯಲ್ಲಿದ್ದಾಗಲೂ ಅವರ ಆತಂಕವು ಅವರಿಲ್ಲದೆ ಮಕ್ಕಳು ಮನೆಯಲ್ಲಿ ಏನು ಮಾಡುತ್ತಾರೆ, ಅವರು ಏನು ತಿನ್ನುತ್ತಾರೆ ಎಂಬುದರ ಮೇಲೆ ಸಂಪೂರ್ಣವಾಗಿ ಕೇಂದ್ರೀಕೃತವಾಗಿತ್ತು ಎಂದು ಅವರು ಹೇಳುತ್ತಾರೆ. ಮೇ 2ರಂದು, ಆಸ್ಪತ್ರೆಯಲ್ಲಿ ಐದನೇ ದಿನ - ಮತ್ತು ಅವರ ಎಣಿಕೆ ಕರ್ತವ್ಯದ ದಿನ ಏನಾಗಬಹುದಿತ್ತೋ ಅದೇ ಆಯಿತು – ಅವರು ತೀರಿಕೊಂಡರು.

Manju's duty letter. Thousands of teachers were assigned election duty in UP’s mammoth four-phase panchayat elections in April. On May 2, her fifth day in the hospital – and what would have been her counting duty day – Manju (right, with her children) died
PHOTO • Courtesy: Shishupal Nishad
Manju's duty letter. Thousands of teachers were assigned election duty in UP’s mammoth four-phase panchayat elections in April. On May 2, her fifth day in the hospital – and what would have been her counting duty day – Manju (right, with her children) died
PHOTO • Courtesy: Shishupal Nishad

ಮಂಜು ಅವರಿಗೆ ಬಂದಿದ್ದ ಕರ್ತವ್ಯದ ಕರೆಯ ಪತ್ರ . ಏಪ್ರಿಲ್‌ನಲ್ಲಿ ನಡೆದ ನಾಲ್ಕು ಹಂತದ ಉತ್ತರ ಪ್ರದೇಶದ ಬೃಹತ್ ಪಂಚಾಯತ್ ಚುನಾವಣೆಯಲ್ಲಿ ಸಾವಿರಾರು ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಯಿತು. ಮೇ 2ರಂದು, ಆಸ್ಪತ್ರೆಯಲ್ಲಿ ಐದನೇ ದಿನ - ಮತ್ತು ಅವರ ಎಣಿಕೆ ಕರ್ತವ್ಯದ ದಿನ ಏನಾಗಬಹುದಿತ್ತೋ ಅದೇ ಆಯಿತು ಮಂಜು (ಬಲಕ್ಕೆ, ಅವರ ಮಕ್ಕಳೊಂದಿಗೆ) – ಅವರು ತೀರಿಕೊಂಡರು .

"ಮೂರು ದಿನಗಳ ನಂತರ ನನ್ನ ತಾಯಿಯೂ ಹೃದಯಾಘಾತದಿಂದ ನಿಧನರಾದರು. 'ನನ್ನ ಬಹು (ಸೊಸೆ) ಹೊರಟುಹೋದ ಮೇಲೆ ಬದುಕಿ ಏನು ಮಾಡಬೇಕಿದೆ' ಎಂದು ಅವಳು ಹೇಳುತ್ತಲೇ ಇದ್ದಳು ಎಂದು ಶಿಶುಪಾಲ್ ಹೇಳುತ್ತಾರೆ.

ಅವರು ತಮ್ಮ ಮಕ್ಕಳನ್ನು ಮುಂದೆ ಹೇಗೆ ನೋಡಿಕೊಳ್ಳುವುದೆನ್ನುವುದರ ಕುರಿತು ಚಿಂತಿತರಾಗಿದ್ದಾರೆ. ನವ್ಯಾಳಿಗೆ ಇಬ್ಬರು ಒಡಹುಟ್ಟಿದರಿದ್ದು ಅವಳ ಸಹೋದರಿ ಮುಸ್ಸಾನ್ ಗೆ 13 ವರ್ಷ, ಮತ್ತು ಸಹೋದರ ಪ್ರೇಮ್‌ಗೆ 9 ವರ್ಷ. ಅವರು ವಾಸಿಸುವ ಮನೆಯ ಮಾಸಿಕ ಬಾಡಿಗೆ 1,500 ರೂ. ಇದೆಲ್ಲವನ್ನು ಹೇಗೆ ನಿಭಾಯಿಸುವುದೆಂದು ಅವರಿಗೆ ತಿಳಿಯುತ್ತಿಲ್ಲ. “ನನಗೆ ಏನೂ ತೋಚುತ್ತಿಲ್ಲ ಮನಸ್ಸೇ ನಿಲ್ಲುತ್ತಿಲ್ಲ. ಇನ್ನು ಕೆಲವು ತಿಂಗಳುಗಳಲ್ಲಿ ನನ್ನ ಜೀವನವೂ ಮುಗಿಯಲಿದೆ” ಎಂದು ಅವರು ಅಸಹಾಯಕತೆಯಿಂದ ಹೇಳುತ್ತಾರೆ.

*****

ಮಾನವ ದುರಂತದ ಜೊತೆಗೆ, ಪ್ರಸ್ತುತ ಪರಿಸ್ಥಿತಿಯು ಶಿಕ್ಷಾಮಿತ್ರ ವ್ಯವಸ್ಥೆಯ ಶೋಚನೀಯ ಸ್ಥಿತಿಯ ಬಗ್ಗೆಯೂ ಗಮನ ಸೆಳೆಯುತ್ತದೆ. ವಿವಿಧ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಈ ಯೋಜನೆಯು 2000-01ರಲ್ಲಿ ಉತ್ತರ ಪ್ರದೇಶದಲ್ಲಿ ಜಾರಿಗೆ ಬಂದಿತು. ಈ ಶಿಕ್ಷಕ ಸಹಾಯಕರನ್ನು ಒಪ್ಪಂದದ ಮೇಲೆ ನೇಮಿಸಿಕೊಳ್ಳುವುದು ಸರ್ಕಾರಿ ಶಾಲೆಗಳಿಗೆ ಹೋಗುವ ಬಡ ಮಕ್ಕಳ ಶಿಕ್ಷಣದ ಮೇಲಿನ ಬಜೆಟ್‌ಗಳನ್ನು ಕಡಿತಗೊಳಿಸುವ ಒಂದು ಮಾರ್ಗವಾಗಿತ್ತು. ಈಗಿರುವ ಕೆಟ್ಟ ಉದ್ಯೋಗ ಮಾರುಕಟ್ಟೆಯ ಕಾರಣ, ತಿಂಗಳಿಗೆ 10,000 ರೂ.ಗಳಲ್ಲಿ ಕೆಲಸ ಮಾಡಲು ಅತ್ಯಂತ ಅರ್ಹ ಜನರನ್ನು ಈ ಕೆಲಸ ಸೆಳೆಯುತ್ತಿದೆ – ಈ ಸಂಬಳವು ಸಾಮಾನ್ಯ ಶಿಕ್ಷಕರಿಗೆ ಪಾವತಿಸುವ ಸಂಬಳದ ಅತಿ ಸಣ್ಣ ಭಾಗವಾಗಿದೆ.

ಶಿಕ್ಷಾ ಮಿತ್ರ ಕೆಲಸಕ್ಕೆ ಸೇರಲು ಇಂಟರ್ ಮೀಡಿಯೇಟ್ ಅಥವಾ ತತ್ಸಮಾನ ಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು . ಶೈಕ್ಷಣಿಕ ಅರ್ಹತೆಯನ್ನು ಬಹಳವಾಗಿ ಕಡಿಮೆ ಮಾಡಲಾಗಿದೆ ಎಂಬ ಆಧಾರದ ಮೇಲೆ ಅತಿಕಡಿಮೆ ವೇತನವನ್ನು ಸಮರ್ಥಿಸಿಕೊಳ್ಳಲಾಗುತ್ತದೆ. ಆದರೆ ಮಂಜು ನಿಷಾದ್ ಎಂಎ ಪದವಿ ಪಡೆದಿದ್ದರು. ಅವರಂತೆ, ಸಾವಿರಾರು ಇತರ ಶಿಕ್ಷಾ ಮಿತ್ರರು ಈ ಹುದ್ದೆಗೆ ಮೀರಿದ ಅರ್ಹತೆಹೊಂದಿದ್ದಾರೆ ಆದರೆ ಕೆಲಸದ ಆಯ್ಕೆಗಳು ಅವರಿಗೆ ಲಭ್ಯವಿಲ್ಲ. "ಅವರನ್ನು ನಿಸ್ಸಂದೇಹವಾಗಿ ಬಹಳ ಕೆಟ್ಟ ರೀತಿಯಲ್ಲಿ ಶೋಷಣೆಗೆ ಒಳಪಡಿಸಲಾಗಿದೆ, ಇಲ್ಲದಿದ್ದರೆ, ಬಿ ಎಡ್ ಮತ್ತು ಎಂಎ ಪದವಿಗಳನ್ನು ಹೊಂದಿರುವವರು, ಕೆಲವರು ಪಿಎಚ್ ಡಿಗಳನ್ನು ಹೊಂದಿದ್ದರೂ ಸಹ, 10,000ಕ್ಕೆ ಏಕೆ ಕೆಲಸ ಮಾಡುತ್ತಾರೆ?" ಎಂದು ದಿನೇಶ್ ಶರ್ಮಾ ಕೇಳುತ್ತಾರೆ.

ಜ್ಯೋತಿ ಯಾದವ್, 38 - ಮರಣಹೊಂದಿದ ಶಿಕ್ಷಕರು ಮತ್ತು ಇತರ ಸಿಬ್ಬಂದಿಯ ಪಟ್ಟಿಯಲ್ಲಿ ಅವರ ಸಂಖ್ಯೆ 750 - ಪ್ರಯಾಗ್ ರಾಜ್ ಜಿಲ್ಲೆಯ ಸೊರಾನ್‌ನ ಥರ್ವಾಯಿಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಾ ಮಿತ್ರರಾಗಿ ಕೆಲಸ ಮಾಡುತ್ತಿದ್ದರು (ಸೋರಾವ್  ಎಂದೂ ಕರೆಯಲಾಗುತ್ತದೆ). ಅವರು ಬಿಎಡ್ ಪದವಿಯನ್ನು ಹೊಂದಿದ್ದರು ಮತ್ತು ಈ ವರ್ಷದ ಜನವರಿಯಲ್ಲಿ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಸಿಟಿಇಟಿ) ಉತ್ತೀರ್ಣರಾಗಿದ್ದರು. ಆದರೆ ಮಂಜು ನಿಷಾದರಂತೆಯೇ ತಿಂಗಳಿಗೆ 10,000 ರೂ. ಗಳಿಸುತ್ತಿದ್ದರು. ಮತ್ತು 15 ವರ್ಷಗಳಿಂದ ಕೆಲಸದಲ್ಲಿದ್ದರು.

Sanjeev, Yatharth and Jyoti at home: 'I took her there [for poll training] and found huge numbers of people in one hall bumping into each other. No sanitisers, no masks, no safety measures'
PHOTO • Courtesy: Sanjeev Kumar Yadav

ಸಂಜೀವ್, ಯಥಾರ್ತ್ ಮತ್ತು ಜ್ಯೋತಿ ತಮ್ಮ ಮನೆಯಲ್ಲಿ: “ನಾನು ಅವಳನ್ನು [ಚುನಾವಣಾ ತರಬೇತಿಗಾಗಿ] ಕರೆದೊಯ್ದ ಸಮಯದಲ್ಲಿ, ಒಂದೇ ಸಭಾಂಗಣದಲ್ಲಿ ಹಲವಾರು ಜನರು ಒತ್ತೊತ್ತಾಗಿ ಕುಳಿತಿದ್ದರು. ಅಲ್ಲಿ ಯಾವುದೇ ಸ್ಯಾನಿಟೈಜರ್‌, ಮಾಸ್ಕ್‌ ಇತ್ಯಾದಿ ರೀತಿಯ ಯಾವುದೇ ಸುರಕ್ಷತಾ ಕ್ರಮಗಳು ಇದ್ದಿರಲಿಲ್ಲ .”

"ನನ್ನ ಹೆಂಡತಿಯ ಚುನಾವಣಾ ತರಬೇತಿ ಏಪ್ರಿಲ್ 12ರಂದು ಪ್ರಯಾಗರಾಜ್ ನಗರದ ಮೋತಿಲಾಲ್ ನೆಹರು ಎಂಜಿನಿಯರಿಂಗ್ ಕಾಲೇಜಿನಲ್ಲಿತ್ತು" ಎಂದು ಅವರ ಪತಿ 42 ವರ್ಷದ ಸಂಜೀವ್ ಕುಮಾರ್ ಹೇಳುತ್ತಾರೆ. “ನಾನು ಅವಳನ್ನು [ಚುನಾವಣಾ ತರಬೇತಿಗಾಗಿ] ಕರೆದೊಯ್ದ ಸಮಯದಲ್ಲಿ, ಒಂದೇ ಸಭಾಂಗಣದಲ್ಲಿ ಹಲವಾರು ಜನರು ಒತ್ತೊತ್ತಾಗಿ ಕುಳಿತಿದ್ದರು. ಅಲ್ಲಿ ಯಾವುದೇ ಸ್ಯಾನಿಟೈಜರ್‌, ಮಾಸ್ಕ್‌ ಇತ್ಯಾದಿ ರೀತಿಯ ಯಾವುದೇ ಸುರಕ್ಷತಾ ಕ್ರಮಗಳು ಇದ್ದಿರಲಿಲ್ಲ. ”

“ಮರುದಿನ, ಅವಳು ಗಂಭೀರ ರೀತಿಯಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದಳು. ಅವಳು 14ರಂದು ಕರ್ತವ್ಯಕ್ಕೆ ಹೋಗಬೇಕಾಗಿತ್ತು (ಮತದಾನ 15ರಂದು ಪ್ರಯಾಗರಾಜ್‌ನಲ್ಲಿತ್ತು), ಹಾಗಾಗಿ ನಾನು ಮುಖ್ಯ ಶಿಕ್ಷಕರಿಗೆ ಕರೆ ಮಾಡಿ ಇಂತಹ ಪರಿಸ್ಥಿತಿಯಲ್ಲಿ ಅವಳು ಹೇಗೆ ಕೆಲಸಕ್ಕೆ ಬರುವುದು ಎಂದು ಕೇಳಿದೆ. "ಏನೂ ಮಾಡಲಾಗದು, ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಹಾಜರಾಗಲೇಬೇಕು" ಎಂದು ಹೇಳಿದರು. ಹಾಗಾಗಿ ನಾನು ಅವಳನ್ನು ನನ್ನ ಬೈಕ್‌ನಲ್ಲಿ ಕರೆದೊಯ್ದೆ. ನಾನು 14ರಂದು ಅವಳೊಂದಿಗೆ ಅಲ್ಲಿಯೇ ಇದ್ದೆ ಮತ್ತು ಅವಳ ಕರ್ತವ್ಯ ಮುಗಿದ ನಂತರ 15ರಂದು ಅವಳನ್ನು ಮರಳಿ ಕರೆತಂದೆ. ನಮ್ಮ ಮನೆ ಉಪನಗರದಲ್ಲಿದೆ, ಅವಳು ಕರ್ತವ್ಯ ನಿರ್ವಹಿಸುತ್ತಿದ್ದ ಕೇಂದ್ರವು 15 ಕಿಲೋಮೀಟರ್ ದೂರದಲ್ಲಿತ್ತು. ”

ಮುಂದಿನ ಕೆಲವು ದಿನಗಳಲ್ಲಿ ಅವಳ ಆರೋಗ್ಯವು ಒಂದೇ ಸಮ ಹದಗೆಡತೊಡಗಿತು. "ನಾನು ಅವಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಕರೆದೊಯ್ದೆ, ಆದರೆ ಅವರು ಅವಳನ್ನು ಅಡ್ಮಿಟ್‌ ಮಾಡಿಕೊಳ್ಳಲಿಲ್ಲ. ಮೇ 2ರ ರಾತ್ರಿ ಆಕೆಗೆ ಉಸಿರಾಟದ ತೊಂದರೆ ಕಾಣಿಸಿತು. ನಾನು ಅವಳನ್ನು ಮೇ 3ರಂದು ಆಸ್ಪತ್ರೆಗೆ ಕರೆದೊಯ್ದೆ, ಆದರೆ ಅವಳು ದಾರಿಯಲ್ಲೇ ತೀರಿಕೊಂಡಳು.”

ಕೋವಿಡ್-19ರಿಂದ ಉಂಟಾದ ಆಕೆಯ ಸಾವು ಕುಟುಂಬವನ್ನು ಛಿದ್ರಗೊಳಿಸಿದೆ. ಸಂಜೀವ್ ಕುಮಾರ್ ವಾಣಿಜ್ಯದಲ್ಲಿ ಪದವಿ ಪಡೆದಿದ್ದಾರೆ ಮತ್ತು ಯೋಗದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ - ಮತ್ತು ಪ್ರಸ್ತುತ ನಿರುದ್ಯೋಗಿಯಾಗಿದ್ದಾರೆ. ಅವರು 2017ರವರೆಗೆ ಟೆಲಿಕಾಂ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು, ಅದು ಮುಚ್ಚಲ್ಪಟ್ಟಿತು. ಅದರ ನಂತರ, ಅವರಿಗೆ ಯಾವುದೇ ಸ್ಥಿರವಾದ ಕೆಲಸ ಸಿಗಲಿಲ್ಲ ಮತ್ತು ಇದರಿಂದಾಗಿ ಕುಟುಂಬದ ಆದಾಯಕ್ಕೆ ಅವರ ಕೊಡುಗೆ ಕಡಿಮೆಯಿತ್ತು. ಮನೆಯ ಖರ್ಚುಗಳನ್ನೆಲ್ಲ ಜ್ಯೋತಿಯೇ ನೋಡಿಕೊಳ್ಳುತ್ತಿದ್ದರೆಂದು ಅವರು ಹೇಳುತ್ತಾರೆ.

ಈಗಷ್ಟೇ 2ನೇ ತರಗತಿ ಉತ್ತೀರ್ಣನಾಗಿರುವ ತಮ್ಮ ಒಂಬತ್ತು ವರ್ಷದ ಮಗ ಯಥಾರ್ತ್ ಮತ್ತು ತಮ್ಮೊಡನೆ ವಾಸವಿರುವ ವೃದ್ಧ ಪೋಷಕರನ್ನು ತಾನು ಹೇಗೆ ನೋಡಿಕೊಳ್ಳುವುದೆಂದು ಸಂಜೀವ್ ಚಿಂತಿತರಾಗಿದ್ದಾರೆ. "ನನಗೆ ಸರ್ಕಾರದಿಂದ ಸಹಾಯ ಬೇಕು" ಎಂದು ಅವರು ಬಿಕ್ಕಿ ಅಳುತ್ತಾ ಹೇಳಿದರು.

Sanjeev worries about how he will now look after nine-year-old Yatharth
PHOTO • Courtesy: Sanjeev Kumar Yadav

ಒಂಬತ್ತು ವರ್ಷದ ಯಥಾರ್ತನನ್ನು ಮುಂದೆ ಹೇಗೆ ನೋಡಿಕೊಳ್ಳುವುದು ಹೇಗೆನ್ನುವುದರ ಸಂಜೀವ್‌ ಚಿಂತಿತರಾಗಿದ್ದಾರೆ

" ರಾಜ್ಯದಲ್ಲಿ ಒಟ್ಟು 1.5 ಲಕ್ಷ ಶಿಕ್ಷಾ ಮಿತ್ರಗಳಿದ್ದಾರೆ ಮತ್ತು ಕಳೆದ ಹತ್ತು ವರ್ಷಗಳಲ್ಲಿ ಅವರ ಸಂಬಳವು ತೀವ್ರವಾಗಿ ಬದಲಾಗಿದೆ" ಎಂದು ದಿನೇಶ್ ಶರ್ಮಾ ಹೇಳುತ್ತಾರೆ. “ಅವರ ಇಡೀ ಪ್ರಯಾಣ ದುರದೃಷ್ಟಕರವಾಗಿದೆ. ಮಾಯಾವತಿಯವರ ಸರ್ಕಾರದ ಅವಧಿಯಲ್ಲಿ ಅವರಿಗೆ ಮೊದಲು ತರಬೇತಿ ನೀಡಲಾಯಿತು. ಆ ಸಮಯದಲ್ಲಿ ಆರಂಭಿಕ ವೇತನ ರೂ. 2,250ರಷ್ಟಿತ್ತು. ಅದರ ನಂತರ, ಅಖಿಲೇಶ್ ಕುಮಾರ್ ಯಾದವ್ ಆಳ್ವಿಕೆಯಲ್ಲಿ ಅವರನ್ನು ಕಾಯಂ ನೌಕರರಾಗಿ ಉಳಿಸಿಕೊಳ್ಳಲಾಯಿತು ಮತ್ತು ವೇತನ ರೂ. 35,000 ನೀಡಲಾಯಿತು [ನಂತರ ಇದನ್ನು 40,000 ರೂಗಳಿಗೆ ಹೆಚ್ಚಿಸಲಾಯಿತು]. ಆದರೆ ನಂತರ ಅರ್ಹತೆಯ ವಿಷಯದಲ್ಲಿ ವಿವಾದ ಉಂಟಾಯಿತು ಮತ್ತು ಬಿ.ಎಡ್ ಶಿಕ್ಷಕರು ಈ ನಿರ್ಧಾರವನ್ನು ವಿರೋಧಿಸಿದರು ನಂತರ ಈ ಪ್ರಕರಣವು ಸುಪ್ರೀಂ ಕೋರ್ಟ್‌ಗೆ ಹೋಯಿತು.”

"ಭಾರತ ಸರ್ಕಾರವು ನಿಯಮಗಳನ್ನು ಬದಲಾಯಿಸಿ ಹಲವು ವರ್ಷಗಳಿಂದ ಬೋಧನೆ ಮಾಡುತ್ತಿರುವ ಶಿಕ್ಷಕರಿಗೆ ಕಡ್ಡಾಯವಾದ ಟಿಇಟಿ ಪಾಸ್ ಆಗಿರಬೇಕಾದ ಅಗತ್ಯವನ್ನು ತೆಗೆದುಹಾಕಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಇದರಿಂದಾಗಿ, ಒಂದೇ ಬಾರಿಗೆ, ಅವರ ಸಂಬಳ ರೂ. 3,500ಕ್ಕೆ ಇಳಿಯಿತು, ಇದಾದ ಮೇಲೆ ಅವರಲ್ಲಿ ಅನೇಕರು ಆತಂಕದಿಂದ ಸತ್ತರು. ಅದರ ನಂತರ, ಪ್ರಸ್ತುತ ಸರ್ಕಾರವು ಈ ವೇತನವನ್ನು 10,000 ರೂ.ಗಳಿಗೆ ಹೆಚ್ಚಿಸಿದೆ. ”

ಏತನ್ಮಧ್ಯೆ, ಇಲ್ಲಿಯವರೆಗೆ ಕೇವಲ ಮೂರು ಶಿಕ್ಷಕರ ಸಾವುಗಳು ಮಾತ್ರ ಪರಿಹಾರಕ್ಕೆ ಅರ್ಹವಾಗಿರುವ ಮಾನದಂಡಗಳನ್ನು ಪೂರೈಸಿವೆ ಎಂದು ಹೇಳಿರುವ ಪ್ರಾಥಮಿಕ ಶಿಕ್ಷಣ ಇಲಾಖೆಯ ಟಿಪ್ಪಣಿಯ ಮುಜುಗರವು ಸರ್ಕಾರವನ್ನು ಇದಕ್ಕೆ ಪ್ರತಿಕ್ರಿಯಿಸಲೇಬೇಕಾದ ಅನಿವಾರ್ಯತೆಗೆ ದೂಡಿದೆ

ಮೇ 18ರಂದು ಪರಿ ವರದಿ ಮಾಡಿದಂತೆ , ಅಲಹಾಬಾದ್ ಹೈಕೋರ್ಟ್ ಪಂಚಾಯತ್ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಕೋವಿಡ್ -19ರ ಕಾರಣದಿಂದಾಗಿ ಮೃತಪಟ್ಟ ಚುನಾವಣಾಧಿಕಾರಿಗಳ (ಶಿಕ್ಷಕರು ಮತ್ತು ಇತರ ಸರ್ಕಾರಿ ನೌಕರರು) ಕುಟುಂಬಗಳಿಗೆ ಪರಿಹಾರವಾಗಿ ಕನಿಷ್ಟ 1 ಕೋಟಿ ರೂ ನೀಡಬೇಕೆಂದು ಹೇಳಿದೆ.

ಮೇ 20ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು "ಪ್ರಸ್ತುತ ಪರಿಸ್ಥಿತಿಯನ್ನು ಪರಿಹರಿಸಲು" ರಾಜ್ಯ ಚುನಾವಣಾ ಆಯೋಗದೊಂದಿಗೆ ಸಮನ್ವಯ ಸಾಧಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದರು . "ಪ್ರಸ್ತುತ ಮಾರ್ಗಸೂಚಿಗಳು ಕೋವಿಡ್ -19ರ ಪರಿಣಾಮಗಳನ್ನು ಅವುಗಳ ವ್ಯಾಪ್ತಿಯಲ್ಲಿ ಉಲ್ಲೇಖಿಸಿಲ್ಲ ... ಈ ಮಾರ್ಗಸೂಚಿಗಳನ್ನು ಸಹಾನುಭೂತಿಯ ಪರಿಗಣನೆಯೊಂದಿಗೆ ಮಾರ್ಪಡಿಸಬೇಕು." ಎಂದಿದ್ದಾರೆ. ರಾಜ್ಯ ಸರ್ಕಾರ "ಚುನಾವಣೆ ಅಥವಾ ಇನ್ನಾವುದೇ ಕೆಲಸ ಮಾಡಿದ ಸರ್ಕಾರಿ ನೌಕರರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಸಿದ್ಧವಾಗಿದೆ" ಎಂದು ಅವರು ಹೇಳಿದರು.

ಆದಾಗ್ಯೂ, ಶಿಕ್ಷಕರ ಒಕ್ಕೂಟದ ದಿನೇಶ್ ಶರ್ಮಾ ಹೇಳುತ್ತಾರೆ, "ಸರ್ಕಾರ ಅಥವಾ ಎಸ್ಇಸಿಯಿಂದ ನಮ್ಮ ಪತ್ರಗಳಿಗೆ ಪ್ರತಿಕ್ರಿಯೆಯಾಗಿ ನಾವು ಇನ್ನೂ ನೇರವಾಗಿ ಏನನ್ನೂ ಉತ್ತರವಾಗಿ ಪಡೆದಿಲ್ಲ. ಅವರು ಎಷ್ಟು ಶಿಕ್ಷಕರನ್ನು ಪರಿಹಾರಕ್ಕಾಗಿ ಪರಿಗಣಿಸುತ್ತಿದ್ದಾರೆ ಮತ್ತು ಮಾರ್ಗಸೂಚಿಗಳಲ್ಲಿ ಯಾವ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ ಎಂಬುದರ ಬಗ್ಗೆ ನಮಗೆ ತಿಳಿಸಿಲ್ಲ."

ಏಪ್ರಿಲ್‌ನಲ್ಲಿ ಪಂಚಾಯತ್ ಚುನಾವಣೆಗಳನ್ನು ನಡೆಸುವಲ್ಲಿ ಸರ್ಕಾರದ ನಿರಪರಾಧಿತ್ವದ ಹೇಳಿಕೆಯನ್ನು ಶಿಕ್ಷಕರು ಒಪ್ಪಿಕೊಳ್ಳುತ್ತಿಲ್ಲ. "ಈಗ ಮುಖ್ಯಮಂತ್ರಿಯವರು ನ್ಯಾಯಾಲಯದ ಆದೇಶದ ಮೇರೆಗೆ ಮಾತ್ರ ಚುನಾವಣೆ ನಡೆಸಿದ್ದಾಗಿ ಹೇಳುತ್ತಾರೆ. ಆದರೆ, ಹೈಕೋರ್ಟ್ ರಾಜ್ಯದ್ಯಾಂತ ಲಾಕ್‌ಡೌನ್‌ ಮಾಡುವಂತೆ ಆದೇಶಿಸಿದಾಗ, ಅವರ ಸರ್ಕಾರ ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಯಿತು. ಇದಲ್ಲದೆ, ಏಪ್ರಿಲ್ ವೇಳೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್ ಹೇಳಿದ್ದರೂ, ಕೋವಿಡ್ -19ರ ಎರಡನೇ ಅಲೆಯು ವೇಗವನ್ನು ಪಡೆಯುತ್ತಿರುವುದರಿಂದ ಆದೇಶವನ್ನು ಮರುಪರಿಶೀಲಿಸುವಂತೆ ಸರ್ಕಾರ ಒತ್ತಾಯಿಸಬಹುದಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ.”

"ಹಾಗೆ ನೋಡಿದರೆ, ಮತ ಎಣಿಕೆಯನ್ನು ಮೇ 2ರಂದು ನಡೆಸದೆ 15 ದಿನಗಳವರೆಗೆ ಮುಂದೂಡಬಹುದೇ ಎಂದು ಸುಪ್ರೀಂ ಕೋರ್ಟ್ ಸರ್ಕಾರವನ್ನು ಕೇಳಿತ್ತು. ಆದರೆ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಇದಕ್ಕೆ ಒಪ್ಪಲಿಲ್ಲ. ಇಂದು, ಅವರು ಹೈಕೋರ್ಟ್ ಪ್ರಮಾಣಪತ್ರವನ್ನು ನೀಡುತ್ತಿದ್ದಾರೆ - ಆದರೆ ಎಣಿಕೆಯನ್ನು ಮುಂದೂಡುವ ಸುಪ್ರೀಂ ಕೋರ್ಟ್ ಪ್ರಸ್ತಾಪವನ್ನು ನಿರಾಕರಿಸಿದ್ದರು . "

*****

"ಈ ಜಿಲ್ಲೆಯ ಮತದಾನದ ಮುಂಚಿನ ದಿನ ಎಂದರೆ ಏಪ್ರಿಲ್ 14ರ ರಾತ್ರಿ ನಾನು ಮಮ್ಮಿಯನ್ನು ಮನೆಗೆ ಕರೆತಂದು 15ರಂದು ಕರ್ತವ್ಯಕ್ಕೆ ಮರಳಿ ಕರೆದುಕೊಂಡು ಬರಬಹುದೇ ಎಂದು ಮತದಾನ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಪ್ರಧಾನ ಅಧಿಕಾರಿಯನ್ನು ಕೇಳಿದ್ದೆ" ಎಂದು ಮೊಹಮ್ಮದ್ ಸುಹೇಲ್ ಪ್ರಯಾಗರಾಜ್ (ಹಿಂದೆ ಅಲಹಾಬಾದ್) ನಗರದಿಂದ ಫೋನ್ ಮೂಲಕ ಪರಿಗೆ ತಿಳಿಸಿದರು.

A favourite family photo: Alveda Bano, a primary school teacher in Prayagraj district died due to Covid-19 after compulsory duty in the panchayat polls
PHOTO • Courtesy: Mohammad Suhail

ನೆಚ್ಚಿನ ಕುಟುಂಬದ ಫೋಟೋ: ಪ್ರಯಾಗ್ ರಾಜ್ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕಿ ಅಲ್ವೇದಾ ಬಾನೋ ಅವರು ಪಂಚಾಯತ್ ಚುನಾವಣೆಯಲ್ಲಿ ಕಡ್ಡಾಯ ಕರ್ತವ್ಯದ ನಂತರ ಕೋವಿಡ್-19ರಿಂದ ನಿಧನರಾದರು

ಅವರ ತಾಯಿ, 44 ವರ್ಷದ ಅಲ್ವೇದಾ ಬಾನೋ, ಪ್ರಯಾಗರಾಜ್ ಜಿಲ್ಲೆಯ ಚಕಾ ತಾಲ್ಲೂಕಿನ ಬೊಂಗಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಅದೇ ತಾಲೂಕಿನಲ್ಲಿ ಅವರಿಗೆ ಚುನಾವಣಾ ಕೆಲಸ ನೀಡಲಾಗಿತ್ತು. ಪಂಚಾಯತ್ ಚುನಾವಣಾ ಕೆಲಸದ ನಂತರ ಕೋವಿಡ್ -19 ಸೋಂಕಿನಿಂದ ಮೃತಪಟ್ಟ ಶಿಕ್ಷಕರ ಪಟ್ಟಿಯಲ್ಲಿ ಅವರ ಹೆಸರು 731ನೇ ಸ್ಥಾನದಲ್ಲಿದೆ.

"ಅಧಿಕಾರಿಗಳು ನನ್ನ ವಿನಂತಿಯನ್ನು ತಿರಸ್ಕರಿಸಿ ಅವರು ರಾತ್ರಿ ಅಲ್ಲಿಯೇ ಉಳಿಯಬೇಕೆಂದು ಹೇಳಿದ್ದರು. ಹಾಗಾಗಿ ನನ್ನ ತಾಯಿ ಏಪ್ರಿಲ್ 15ರ ರಾತ್ರಿ ಮನೆಗೆ ಮರಳಿದರು. ನನ್ನ ತಂದೆ ಅವರನ್ನು ಮತದಾನ ಕೇಂದ್ರದಿಂದ ಕರೆತಂದರು. ಅವರು ಹಿಂದಿರುಗಿದ ಮೂರು ದಿನಗಳ ನಂತರ, ಅವರ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿತು,” ಎಂದು ಸುಹೇಲ್ ಹೇಳುತ್ತಾರೆ. ಅವರು ಅದಾಗಿ ಮೂರು ದಿನಗಳ ನಂತರ ಆಸ್ಪತ್ರೆಯಲ್ಲಿ ನಿಧನರಾದರು.

ಮೊಹಮ್ಮದ್ ಸುಹೇಲ್ ಅವರ ಅಕ್ಕ ವಿವಾಹಿತರಾಗಿದ್ದು ಅವರ ಕಿರಿಯ ಸಹೋದರ 13 ವರ್ಷದ ಮೊಹಮ್ಮದ್ ತುಫೈಲ್ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಸುಹೇಲ್ 12 ನೇ ತರಗತಿ ಉತ್ತೀರ್ಣರಾಗಿದ್ದು, ಕಾಲೇಜಿಗೆ ಪ್ರವೇಶ ಪಡೆಯಲು ಬಯಸುತ್ತಿದ್ದಾರೆ.

ಅವರ ತಂದೆ, 52 ವರ್ಷದ ಸರ್ಫುದ್ದೀನ್, "ಲಾಕ್‌ಡೌನ್‌ಗೆ ಸ್ವಲ್ಪ ಮೊದಲು, ಕಳೆದ ವರ್ಷ ಸಣ್ಣ ಔಷಧಿ ಅಂಗಡಿಯೊಂದನ್ನು ತೆರೆದಿದ್ದರು" ಅದರಲ್ಲಿ ಇತ್ತೀಚೆಗೆ ವ್ಯಾಪಾರ ಅಷ್ಟಾಗಿ ನಡೆಯುತ್ತಿಲ್ಲ. "ನಾನು ದಿನಕ್ಕೆ ಹೆಚ್ಚೆಂದರೆ 100 ರೂ. ಸಂಪಾದಿಸುತ್ತೇನೆ. ನಾವೆಲ್ಲರೂ ಅಲ್ವೇದಾ ತರುತ್ತಿದ್ದ 10,000 ರೂ ಸಂಬಳದ ಮೇಲೆ ಅವಲಂಬಿತರಾಗಿದ್ದೆವು."

"ಶಿಕ್ಷಾ ಮಿತ್ರರು 35,000 ರೂಪಾಯಿಗಳ ವೇತನದೊಂದಿಗೆ ಶಿಕ್ಷಕರಾಗಿ ಬಡ್ತಿ ಪಡೆದಾಗ ಅವರನ್ನು ಅರ್ಹರಲ್ಲಎಂದು ಘೋಷಿಸಲಾಯಿತು [ಆ ದರ್ಜೆಯ ಪಾವತಿಗೆ]. ಈಗ ಅದೇ ಶಿಕ್ಷಾ ಮಿತ್ರರು, ಅವರಲ್ಲಿ ಅನೇಕರು ಹೆಚ್ಚಿನ ಅರ್ಹತೆಗಳನ್ನು ಹೊಂದಿದ್ದಾರೆ, ಅದೇ ಶಾಲೆಗಳಲ್ಲಿ ತಿಂಗಳಿಗೆ 10,000 ರೂಪಾಯಿಗಳಿಗೆ ಬೋಧಿಸುತ್ತಿದ್ದಾರೆ. ಹಾಗಾದರೆ ಈಗ ಅರ್ಹತೆಯ ಕುರಿತ ಪ್ರಶ್ನೆ ಮತ್ತು ಚರ್ಚೆ ಏಳುವುದಿಲ್ಲವೆ?" ಎಂದು ದಿನೇಶ್ ಶರ್ಮಾ ಕೇಳುತ್ತಾರೆ.

ಠಾಕೂರ್ ಫ್ಯಾಮಿಲಿ ಫೌಂಡೇಷನ್‌ನಿಂದ ಸ್ವತಂತ್ರ ಪತ್ರಿಕೋದ್ಯಮಕ್ಕಾಗಿ ಅನುದಾನದ ಮೂಲಕ ಜಿಗ್ಯಾಸಾ ಮಿಶ್ರಾ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಚಲಾಯಿಸಿರುವುದಿಲ್ಲ.

ಅನುವಾದ: ಶಂಕರ ಎನ್. ಕೆಂಚನೂರು

Reporting and Cover Illustration : Jigyasa Mishra

জিজ্ঞাসা মিশ্র উত্তরপ্রদেশের চিত্রকূট-ভিত্তিক একজন স্বতন্ত্র সাংবাদিক।

Other stories by Jigyasa Mishra
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru