ದೂರದಿಂದ ಯಾರೋ ಕರೆದು ವಿರಾಮದ ಸಮಯ ಮುಗಿಯಿತೆಂದು ಹೇಳುತ್ತಾರೆ. ಮೇಲ್ವಿಚಾರಕ ಒಬ್ಬೊಬ್ಬರಿಗೂ ಅವಧಿ ಭಾಷೆಯಲ್ಲಿ ಯಾವ ಕೆಲಸ ಮಾಡಬೇಕೆಂದು ಹೇಳಲು ಪ್ರಾರಂಭಿಸುತ್ತಾರೆ. ಮತ್ತು ಕೆಲಸವು ಮತ್ತೆ ಪ್ರಾರಂಭವಾಗುತ್ತದೆ. ಸಣ್ಣ ಟೆಂಟ್ನ ಅಡಿಪಾಯದ ಕೆಲಸಕ್ಕಾಗಿ ರಾಮ್ ಮೋಹನ್ ಅವರನ್ನು ಮೈದಾನದ ನಿಶ್ಯಬ್ದ ಮೂಲೆಗೆ ಕಳಿಸಲಾಗುತ್ತದೆ.
ಅಂದು ಜನವರಿ 23ರ ಶನಿವಾರ, ಮತ್ತು ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಜನವರಿ 24ರ ಬೆಳಿಗ್ಗೆಯಿಂದ ಇಲ್ಲಿಗೆ ಬರಲು ಪ್ರಾರಂಭಿಸಲಿರುವ ಸಾವಿರಾರು ರೈತರಿಗಾಗಿ ಪೆಂಡಾಲ್ಗಳನ್ನು (ಡೇರೆಗಳನ್ನು) ಹಾಕಲು ಎರಡು ದಿನಗಳ ಕಾಲ 10 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುತ್ತಿರುವ 50 ಜನರಲ್ಲಿ ರಾಮ್ ಕೂಡ ಒಬ್ಬರು. ಮೂರು ಕಾನೂನುಗಳನ್ನು ರದ್ದುಪಡಿಸುವ ಬೇಡಿಕೆಯನ್ನು ಪುನರುಚ್ಚರಿಸುವುದು ಈ ಹೋರಾಟದ ಉದ್ದೇಶ. ರ್ಯಾಲಿಯು ಜನವರಿ 26, ಗಣರಾಜ್ಯೋತ್ಸವದ ದಿನದಂದು ಅಂತ್ಯಗೊಳ್ಳಲಿದೆ.
ರಾಮ್ ಮೋಹನ್ ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಪ್ರತಿಭಟನಾಕಾರ ರೈತರೊಂದಿಗೆ ರ್ಯಾಲಿಯಲ್ಲಿ ಭಾಗವಹಿಸಲು ಯೋಜಿಸಿದ್ದಾರೆ. "ನಾನು ಏನಾಗುತ್ತಿದೆಯೆನ್ನುವುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇನೆ ಮತ್ತು ಇತರ ರೈತರು ಏನು ಹೇಳುತ್ತಿದ್ದಾರೆಂದು ಕೇಳಲು ನಾನು ಬಯಸುತ್ತೇನೆ ಜೊತೆಗೆ ನಾವೂ [ಅವರ ಬೇಡಿಕೆಗಳಿಂದ] ಹೇಗೆ ಪ್ರಯೋಜನ ಪಡೆಯುತ್ತೇವೆನ್ನುವುದನ್ನು ತಿಳಿಯಬೇಕಿದೆ" ಎಂದು ಅವರು ಹೇಳುತ್ತಾರೆ.
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಉಮರಿ ಬಿಡ್ಗಮಂಜ್ ಗ್ರಾಮದಲ್ಲಿ ವಾಸಿಸುತ್ತಿರುವ ಅವರ ಕುಟುಂಬವು ಅಲ್ಲಿ ಗೋಧಿ ಮತ್ತು ಭತ್ತವನ್ನು ಬೆಳೆಯುತ್ತದೆ. “ನಾವು 6-7 ಬಿಘಾ ಭೂಮಿಯಲ್ಲಿ [ಎಕರೆಗಿಂತ ಸ್ವಲ್ಪ ಹೆಚ್ಚು] ಏನು ಮಾಡಬಹುದು? ಆಹಾರಕ್ಕಾಗಿ ಸಾಕಾಗುತ್ತದೆ, ಅದಕ್ಕಿಂತ ಹೆಚ್ಚೇನಿಲ್ಲ” ಎಂದು ಅವರು ಹೇಳುತ್ತಾರೆ. ಅವರು ಡೇರೆಗಳನ್ನು ತಯಾರಿಸುವಲ್ಲಿ ನಿರತರಾಗಿರುವ ರ್ಯಾಲಿಯು ಅವರ ಮತ್ತು ಇತರ ಕೃಷಿ ಕುಟುಂಬಗಳ ಬೆಳೆಗಳಿಗೆ ಉತ್ತಮ ಬೆಲೆ ತರಲು ಸಹಾಯ ಮಾಡುಬಹುದೆಂದು ಅವರು ಆಶಿಸಿಸುತ್ತಾರೆ.
43ರ ಹರೆಯದ ರಾಮ್ ಮೋಹನ್ ಕಳೆದ 23 ವರ್ಷಗಳಿಂದ ಮುಂಬೈನಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಉತ್ತರ ಮುಂಬೈನ ಮಲಾಡ್ ರೈಲ್ವೆ ನಿಲ್ದಾಣದ ಬಳಿಯಿರುವ ಲೇಬರ್ ನಾಕಾದಲ್ಲಿ ಕಾಯುವ ಮೂಲಕ ಕೆಲಸವನ್ನು ಕಂಡುಕೊಳ್ಳುತ್ತಾರೆ - ಮತ್ತು ಅವರು ಕೆಲಸ ಸಿಕ್ಕಿದ ದಿನಗಳಲ್ಲಿ, ರೂ. 700 ದೈನಂದಿನ ವೇತನವಾಗಿ ಪಡೆಯುತ್ತಾರೆ.


















