ನಮ್ಮ ಎಂಟು ಜನರ ತಂಡವು ಈ ಪುಸ್ತಕಗಳನ್ನು ವಿಸ್ಮಯದಿಂದ ತಿರುವಿ ಹಾಕತೊಡಗಿತು. ಇವುಗಳಲ್ಲಿ ಪ್ರತಿಯೊಂದು ಪುಸ್ತಕವೂ ಸಾಹಿತ್ಯಿಕ ಕೃತಿ, ಶ್ರೇಷ್ಠ ರಚನೆ ಅಥವಾ ರಾಜಕೀಯ ವಿಚಾರಗಳ ಸಂಕಲನವಾಗಿತ್ತು. ಇವುಗಳಲ್ಲಿ ಯಾವುದೇ ಪತ್ತೇದಾರಿ, ಬೆಸ್ಟ್ ಸೆಲ್ಲರ್ ಅಥವಾ ಜನಪ್ರಿಯ ಸಾಹಿತ್ಯದ ಪುಸ್ತಕಗಳು ಇರಲಿಲ್ಲ. ಇವುಗಳಲ್ಲಿ ತಮಿಳು ಮಹಾಕಾವ್ಯ 'ಶಿಲಪ್ಪದಿಗಾರಂ'ನ ಮಲಯಾಳಂ ಅನುವಾದವೂ ಒಂದಾಗಿತ್ತು. ಪುಸ್ತಕಗಳ ಸಂಗ್ರಹದಲ್ಲಿ ವೈಕೊಮ್ ಮೊಹಮ್ಮದ್ ಬಷೀರ್, ಎಂ.ಟಿ. ವಾಸುದೇವನ್ ನಾಯರ್, ಕಮಲಾ ದಾಸ್ ಮುಂತಾದವರ ಕೃತಿಗಳೂ ಸೇರಿದ್ದವು. ಇವುಗಳಲ್ಲಿ ಎಂ. ಮುಕುಂದನ್, ಲಲಿತಾಂಬಿಕಾ ಅಂತರ್ಜನಮ್ ಮುಂತಾದವರ ಪುಸ್ತಕಗಳಿದ್ದವು. ಮಹಾತ್ಮ ಗಾಂಧೀಜಿಯವರ ಸಾಹಿತ್ಯದ ಹೊರತಾಗಿ, ಪ್ರಸಿದ್ಧ ಕ್ರಾಂತಿಕಾರಿ ಲೇಖಕ ಥೊಪ್ಪಿಲ್ ಭಾಸಿ ಅವರ 'ನೀನು ನನ್ನನ್ನು ಕಮ್ಯುನಿಸ್ಟ್ ಆಗಿಸಿದೆ' ರೀತಿಯ ಪುಸ್ತಕಗಳನ್ನೂ ಒಳಗೊಂಡಿದ್ದವು.
“ಆದರೆ ಚಿನ್ನತಂಬಿ, ಜನರು ನಿಜವಾಗಿಯೂ ಇವನ್ನೆಲ್ಲ ಓದುತ್ತಾರೆಯೇ?” ಎಂದು ನಾವು ಹೊರಗೆ ಕುಳಿತುಕೊಳ್ಳುತ್ತಾ ಕೇಳಿದೆವು. ಮುತುವನ್ ಸಮುದಾಯವು ಇತರ ಬುಡಕಟ್ಟು ಸಮುದಾಯಗಳಂತೆಯೇ ಸೌಲಭ್ಯಗಳಿಂದ ವಂಚಿತ ಸಮುದಾಯ ಮತ್ತು ಇತರ ಕೇರಳೀಯರಿಗೆ ಹೋಲಿಸಿದರೆ ಶಿಕ್ಷಣದಲ್ಲಿ ಬಹಳ ಹಿಂದುಳಿದಿದೆ. ಇದಕ್ಕೆ ಉತ್ತರವಾಗಿ ಅವರು ಗ್ರಂಥಾಲಯದ ರಿಜಿಸ್ಟರ್ ಒಂದನ್ನು ಅವರು ಹೊರತಂದರು. ಅದರಲ್ಲಿ ಪುಸ್ತಕಗಳ ನೀಡಿಕೆ ಮತ್ತು ಮರಳಿಸುವಿಕೆಯ ಲೆಕ್ಕಾಚಾರವನ್ನು ಅತ್ಯಂತ ಅಚ್ಚುಕಟ್ಟಾಗಿ ಬರೆಯಲಾಗಿತ್ತು. ಈ ಗ್ರಾಮದಲ್ಲಿ ಕೇವಲ 25 ಕುಟುಂಬಗಳು ವಾಸಿಸುತ್ತಿದ್ದರೂ, 2013ನೇ ವರ್ಷದಲ್ಲಿ 37 ಪುಸ್ತಕಗಳನ್ನು ಓದಲು ಒಯ್ಯಲಾಗಿತ್ತು. ಇದು ಒಟ್ಟು 160 ಪುಸ್ತಕಗಳ ಸುಮಾರು ನಾಲ್ಕನೇ ಒಂದು ಭಾಗದಷ್ಟಾಗುತ್ತದೆ - ಇದನ್ನೊಂದು ಉತ್ತಮ ಅನುಪಾತವೆಂದೇ ಕರೆಯಬಹುದು. ಈ ಲೈಬ್ರರಿಯ ಒಂದು ಬಾರಿಯ ಸದಸ್ಯತ್ವ ಶುಲ್ಕ 25 ರೂಪಾಯಿ ಮತ್ತು ಮಾಸಿಕ ಶುಲ್ಕ 2 ರೂಪಾಯಿ. ಯಾವುದೇ ಪುಸ್ತಕವನ್ನು ಪಡೆಯಲು ಬೇರೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಅಲ್ಲಿ ಚಹಾ ಉಚಿತವಾಗಿ ಸಿಗುತ್ತದೆ; ಸಕ್ಕರೆ ಇಲ್ಲದ ಕಪ್ಪು ಚಹಾ. “ಜನರು ಬೆಟ್ಟಗಳನ್ನು ಹತ್ತಿ ಸುಸ್ತಾಗಿ ಬರುತ್ತಾರೆ” ಎನ್ನುತ್ತಾರೆ ಅವರು. ಕೇವಲ ಬಿಸ್ಕತ್ತು, ಖಾರಾ ತಿಂಡಿ ಮತ್ತು ಇತರ ವಸ್ತುಗಳಿಗೆ ಮಾತ್ರ ಹಣ ನೀಡಬೇಕಾಗುತ್ತದೆ. ಕೆಲವೊಮ್ಮೆ ಅಲ್ಲಿಗೆ ಬರುವವರಿಗೆ ಸಾಧಾರಣ ಊಟವೂ ಉಚಿತವಾಗಿ ದೊರೆಯುತ್ತದೆ.
ಪುಸ್ತಕಗಳನ್ನು ಕೊಂಡೊಯ್ಯುವವರ ಹೆಸರು, ಅವುಗಳನ್ನು ಪಡೆದ ಮತ್ತು ಮರಳಿಸಿದ ದಿನಾಂಕಗಳನ್ನು ರಿಜಿಸ್ಟರಿನಲ್ಲಿ ಅತ್ಯಂತ ಅಚ್ಚುಕಟ್ಟಾಗಿ ದಾಖಲಿಸಲಾಗಿದೆ. ಇಳಂಗೋ ಅಡಿಗಳ್ ಅವರ ‘ಶಿಲಪ್ಪದಿಗಾರಂ’ ಕೃತಿಯನ್ನು ಒಂದಕ್ಕಿಂತ ಹೆಚ್ಚು ಬಾರಿ ಓದಲು ಪಡೆಯಲಾಗಿದೆ. ಈ ವರ್ಷದ ಆರಂಭದಲ್ಲೇ ಈಗಾಗಲೇ ಸಾಕಷ್ಟು ಪುಸ್ತಕಗಳನ್ನು ಓದುಗರು ಕೊಂಡೊಯ್ದಿದ್ದಾರೆ. ದಟ್ಟ ಅರಣ್ಯದ ನಡುವೆ ಉನ್ನತ ಮಟ್ಟದ ಸಾಹಿತ್ಯ ಪ್ರಸಾರವಾಗುತ್ತಿರುವುದು ಮತ್ತು ಈ ವಂಚಿತ ಆದಿವಾಸಿ ಸಮುದಾಯದ ಜನರು ಅದನ್ನು ಅಷ್ಟೊಂದು ಆಸಕ್ತಿಯಿಂದ ಓದುತ್ತಿರುವುದು ಮನಸ್ಸಿಗೆ ನೆಮ್ಮದಿ ನೀಡುವ ವಿಷಯವಾಗಿತ್ತು. ನಮ್ಮಲ್ಲಿ ಕೆಲವರು ಬಹುಶಃ ನಗರ ಪ್ರದೇಶಗಳಲ್ಲಿ ಓದುವ ಹವ್ಯಾಸವು ಕಡಿಮೆಯಾಗುತ್ತಿರುವ ಬಗ್ಗೆ ಯೋಚಿಸತೊಡಗಿದ್ದೆವು.
ನಮ್ಮ ತಂಡದಲ್ಲಿದ್ದ ಬಹುತೇಕರು ಬರವಣಿಗೆಯನ್ನೇ ಜೀವನೋಪಾಯವಾಗಿಸಿಕೊಂಡವರು, ಆದರೆ ಈ ಪುಟ್ಟ ಗ್ರಂಥಾಲಯ ನಮ್ಮೆಲ್ಲರ ಅಹಂಕಾರವನ್ನು ಅಡಗಿಸಿತ್ತು. ನಮ್ಮೊಂದಿಗೆ ಪ್ರಯಾಣಿಸುತ್ತಿದ್ದ ಕೇರಳ ಪ್ರೆಸ್ ಅಕಾಡೆಮಿಯ ಪತ್ರಿಕೋದ್ಯಮದ ಮೂವರು ಯುವ ವಿದ್ಯಾರ್ಥಿಗಳಲ್ಲಿ ಒಬ್ಬನಾದ ವಿಷ್ಣು ಎಸ್., ಆ ಪುಸ್ತಕಗಳ ನಡುವೆ ಒಂದು ‘ವಿಭಿನ್ನವಾದ’ ಪುಸ್ತಕವನ್ನು ಪತ್ತೆಹಚ್ಚಿದ. ಅದೊಂದು ನೋಟ್ಬುಕ್ ಆಗಿತ್ತು, ಅದರ ಅನೇಕ ಪುಟಗಳಲ್ಲಿ ಕೈಬರಹವಿತ್ತು. ಅದಕ್ಕೆ ಯಾವುದೇ ಹೆಸರಿರಲಿಲ್ಲ, ಆದರೆ ಅದು ಚಿನ್ನತಂಬಿಯವರ ಆತ್ಮಕಥೆಯಾಗಿತ್ತು. ಇನ್ನೂ ಹೆಚ್ಚೇನೂ ಬರೆಯಲು ಸಾಧ್ಯವಾಗಿಲ್ಲ ಎಂದು ಅವರು ವಿಷಾದದಿಂದ ಹೇಳಿದರು. ಆದರೆ ಆ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. “ಚಿನ್ನತಂಬಿಯವರೇ... ಇದರಲ್ಲಿ ಇರೋದನ್ನ ಸ್ವಲ್ಪ ಓದಿ ತಿಳಿಸಿ” ಎಂದೆವು. ಅದು ಬಹಳ ಉದ್ದವಿರಲಿಲ್ಲ ಮತ್ತು ಅಪೂರ್ಣವಾಗಿತ್ತು, ಆದರೆ ಅದರಲ್ಲಿನ ಜೀವಂತಿಕೆ ಸ್ಪಷ್ಟವಾಗಿ ಎದ್ದುಕಾಣುತ್ತಿತ್ತು. ಅದು ಅವರ ಆರಂಭಿಕ ದಿನಗಳ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಯ ದಾಖಲೆಯಾಗಿತ್ತು. ಲೇಖಕರಿಗೆ ಕೇವಲ ಏಳು ವರ್ಷ ವಯಸ್ಸಾಗಿದ್ದಾಗ ನಡೆದ ಮಹಾತ್ಮ ಗಾಂಧೀಜಿಯವರ ಹತ್ಯೆಯೊಂದಿಗೆ ಇದು ಆರಂಭವಾಗುತ್ತದೆ ಮತ್ತು ಆ ಘಟನೆ ಅವರ ಮೇಲೆ ಬೀರಿದ ಪ್ರಭಾವವನ್ನು ಅವರ ಲೇಖನಿ ಅದ್ಭುತವಾಗಿ ವಿವರಿಸಿತ್ತು.