ಮನೋಜ್ ಚೌಧರಿಯವರ ಜಗತ್ತು ಕೆಲವೇ ಸೆಕೆಂಡುಗಳಲ್ಲಿ ಕುಸಿದುಬಿದ್ದಿತ್ತು.
“ನನ್ನ ಅಮ್ಮ ಮತ್ತು ಹೆಂಡತಿ ನನ್ನ ಪಾಲಿನ ಜಗತ್ತಾಗಿದ್ದರು. ಇಂದು ಇಬ್ಬರು ಮಕ್ಕಳು ಮಾತ್ರ ನನ್ನ ಪಾಲಿಗೆ ಉಳಿದಿದ್ದಾರೆ” ಎಂದು 35 ವರ್ಷದ ಮನೋಜ್ ಚಂದ್ರಾಪುರದ ಗ್ರಾಮೀಣ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ಮಾತನಾಡುತ್ತಾ ಹೇಳಿದರು.
ಮೇ 10, 2025ರಂದು ಕಾಂತಾ ಬುಧಾಜಿ ಚೌಧರಿ (60) ಮತ್ತು ಶುಭಾಂಗಿ (30) ಎಂಬ ಮಹಿಳೆಯರು ತಮ್ಮ ಊರಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಸಣ್ಣ ಕಾಡಿನಲ್ಲಿ ಹುಲಿ ದಾಳಿಗೆ ಬಲಿಯಾದರು. "ಅಮ್ಮ ಮತ್ತು ಹೆಂಡತಿ ಕಾಡಿಗೆ ಹೋಗಿದ್ದ ಸಮಯದಲ್ಲಿ ನಾನೂ ಮತ್ತು ಮಕ್ಕಳು ಇನ್ನೂ ನಿದ್ರೆಯಲ್ಲಿದ್ದೆವು" ಎಂದು ಮನೋಜ್ ಚೌಧರಿ ನೋವಿನಿಂದ ಹೇಳಿದರು. ಈ ದುರ್ಘಟನೆಯಲ್ಲಿ ಅವರ ನೆರೆ ಮನೆಯವರಾದ ಸಾರಿಕಾ ಶಾಲಿಕ್ ಶೆಂಡೆ (50) ಕೂಡ ಮೃತಪಟ್ಟರು.
ಈ ಮೂವರು ಮಹಿಳೆಯರು ತೆಂದು ಎಲೆ ಸಂಗ್ರಹಿಸಲೆಂದು ಇತರರೊಂದಿಗೆ ಕಾಡಿಗೆ ಹೋಗಿದ್ದರು.
ಪ್ರಸ್ತುತ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯ ಮೆಂಧಾ (ಮಾಲ್) ಗ್ರಾಮ ಶೋಕದಲ್ಲಿ ಮುಳುಗಿದೆ. ಮನೋಜ್ ಅವರಂತೆಯೇ ಇಲ್ಲಿನ ಹೆಚ್ಚಿನ ಗ್ರಾಮಸ್ಥರು ಸಣ್ಣ ರೈತರು ಅಥವಾ ಭೂ ರಹಿತ ಕಾರ್ಮಿಕರು. ಇವರು ಕಾಲಕ್ಕೆ ತಕ್ಕಂತೆ ರಾಜ್ಯ ಮತ್ತು ದೇಶದ ವಿವಿಧ ನಗರಗಳಿಗೆ ವಲಸೆ ಹೋಗುತ್ತಾರೆ. ಪ್ರತಿ ವರ್ಷ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಕಾಡಿನಿಂದ ತೆಂದು ಎಲೆಗಳು ಮತ್ತು ಮಹುವಾ ಹೂವುಗಳನ್ನು ಸಂಗ್ರಹಿಸುತ್ತಾರೆ.
ಸಿಂದೆವಾಹಿ ತಾಲ್ಲೂಕಿನಲ್ಲಿರುವ ಈ ಗ್ರಾಮವನ್ನು ಅಧಿಕೃತ ದಾಖಲೆಗಳಲ್ಲಿ ಮೆಂಧಮಾಲ್ ಗುಜಾರಿ ಎಂದು ನಮೂದಿಸಲಾಗಿದೆ, ಆದರೆ ಗ್ರಾಮದ ಹೊರಗಿರುವ ಫಲಕದಲ್ಲಿ 'ಮೆಂಧಾ (ಮಾಲ್)' ಎಂದು ಬರೆಯಲಾಗಿದೆ. ಇದು ತಡೋಬಾ ಅಂಧಾರಿ ಹುಲಿ ಸಂರಕ್ಷಿತಾರಣ್ಯ (ಟಿಎಟಿಆರ್) ದ ಸಮೀಪದಲ್ಲಿದೆ. ಈ ಸಂರಕ್ಷಿತಾರಣ್ಯವು 625 ಚದರ ಕಿಲೋಮೀಟರ್ನ ಮುಖ್ಯ ಅಥವಾ ರಕ್ಷಿತ ಪ್ರದೇಶವನ್ನು ಮತ್ತು ಸುಮಾರು 1,102 ಚದರ ಕಿಲೋಮೀಟರ್ನ ಬಫರ್ ಪ್ರದೇಶವನ್ನು ಹೊಂದಿದೆ. ಬಫರ್ ಪ್ರದೇಶದಲ್ಲಿ ಮಾನವ ವಾಸಸ್ಥಾನಗಳಿವೆ.
ಚಂದ್ರಾಪುರ ಜಿಲ್ಲೆಯಲ್ಲಿ 223 ಹುಲಿಗಳಿವೆ, ಅವುಗಳಲ್ಲಿ ಸುಮಾರು 120-125 ಹುಲಿಗಳು ತಡೋಬಾ ಅಂಧಾರಿ ಹುಲಿ ಸಂರಕ್ಷಿತಾರಣ್ಯ (ಟಿಎಟಿಆರ್) ದಲ್ಲಿವೆ ಎಂದು ಇತ್ತೀಚಿನ ಅರಣ್ಯ ಇಲಾಖೆಯ ದತ್ತಾಂಶಗಳು ತಿಳಿಸಿವೆ. ಹಲವಾರು ಗ್ರಾಮಸ್ಥರ ಹೇಳಿಕೆಗಳ ಪ್ರಕಾರ, ಮೆಂಧಾ (ಮಾಲ್) ಗ್ರಾಮದಲ್ಲಿ ಹುಲಿ ದಾಳಿಗೆ ಮನುಷ್ಯರು ಬಲಿಯಾಗಿರುವುದು ಇದೇ ಮೊದಲ ಬಾರಿ.
ಗ್ರಾಮಸ್ಥರು ಪೊಲೀಸ್ ಮತ್ತು ಅರಣ್ಯಾಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಹೇಳಿದಂತೆ, ಆ ಮೂವರು ಮಹಿಳೆಯರನ್ನು ಮೂರು ಮರಿಗಳನ್ನು ಹೊಂದಿದ್ದ ಹೆಣ್ಣು ಹುಲಿಯೊಂದು ಕೊಂದು ಹಾಕಿದೆ.
ಈ ಸಾವುಗಳಿಂದ ಭಾರಿ ಆಕ್ರೋಶ ಭುಗಿಲೆದ್ದು, ಸ್ವಲ್ಪ ಸಮಯದವರೆಗೆ ಪ್ರತಿಭಟನೆಗಳೂ ನಡೆದವು. ಇದರಿಂದ ಸ್ಥಳೀಯ ಶಾಸಕರು ಮತ್ತು ಜಿಲ್ಲೆಯ ಇತರ ರಾಜಕಾರಣಿಗಳು ಮೃತರಿಗೆ ಸಂತಾಪ ಸೂಚಿಸಲು ಮತ್ತು ದುಃಖಿತ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರನ್ನು ಸಮಾಧಾನಪಡಿಸಲು ಸ್ಥಳಕ್ಕೆ ಭೇಟಿ ನೀಡಿದರು.
























