"ವರ್ಷಕ್ಕೊಮ್ಮೆ ಬರುವ ಈ  ಬಜೆಟ್‌ನ ಗದ್ದಲದಿಂದ ನಮ್ಮ ಬದುಕಿನಲ್ಲಿ ಸ್ವಲ್ಪವಾದರೂ ಬದಲಾವಣೆಯಾಗಬಹುದೇ?" ಎಂದು ಎರಡು ಮಕ್ಕಳ ವಿಧವೆ ತಾಯಿ ಕೆ ನಾಗಮ್ಮ ಕೇಳುತ್ತಾರೆ. ಅವರ ಪತಿ 2007 ರಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಮರಣಹೊಂದಿದರು. ಈ ದುರಂತ ಅವರು ಸಫಾಯಿ ಕರ್ಮಚಾರಿ ಆಂದೋಲನವನ್ನು ಸೇರುವಂತೆ ಮಾಡಿತು. ಈಗ ಅಲ್ಲಿ ಅವರು ಸಂಚಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ದೊಡ್ಡ ಮಗಳು ಶೈಲಾ ನರ್ಸ್, ಸಣ್ಣ ಮಗಳು ಆನಂದಿ ತಾತ್ಕಾಲಿಕ ಸರ್ಕಾರಿ ಉದ್ಯೋಗಿಯಾಗಿದ್ದಾರೆ.

"'ಬಜೆಟ್' ಎಂಬ ಪದ ಕೇಳೋದಕ್ಕೇನೋ ಚೆನ್ನಾಗಿದೆ. ನಾವು ಸಂಪಾದಿಸುವ ಹಣದಿಂದ ಮನೆಯ ಬಜೆಟನ್ನೂ ಮಾಡಲು ಸಾಧ್ಯವಿಲ್ಲ. ಸರ್ಕಾರ ನಮ್ಮನ್ನು ತನ್ನ ಯೋಜನೆಗಳಿಂದ ಹೊರಗೆ ಇಟ್ಟಿದೆ. ಹೀಗಾದರೆ ಇದು ಯಾವ ಬಜೆಟ್? ಇದರಿಂದ ನನ್ನ ಹೆಣ್ಣು ಮಕ್ಕಳ ಮದುವೆಗೆ ಏನಾದ್ರೂ ಸಹಾಯ ಆಗ್ತದಾ?" ಎಂದು ನಾಗಮ್ಮ ಕೇಳುತ್ತಾರೆ.

ನಾಗಮ್ಮ ಅವರು ಹುಟ್ಟುವ ಮೊದಲೇ ಅವರ ತಂದೆ ತಾಯಿ ಚೆನ್ನೈಗೆ ವಲಸೆ ಬಂದಿದ್ದರು, ಹಾಗಾಗಿ ಅವರು ಚೆನ್ನೈನಲ್ಲಿ ಹುಟ್ಟಿ ಬೆಳೆದರು. 1995 ರಲ್ಲಿ ನಾಗಮ್ಮ ಅವರನ್ನು ಅವರ ತಂದೆ ತಮ್ಮ ಊರು ನಾಗುಲಪುರಂನಲ್ಲಿ ವಾಸಿಸುತ್ತಿದ್ದ ಸಹೋದರಿಯ ಮಗನಿಗೆ ಮದುವೆ ಮಾಡಿಕೊಟ್ಟರು. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪಾಮುರು ಬಳಿ ಇರುವ ಈ ಗ್ರಾಮದಲ್ಲಿ ಅವರ ಪತಿ ಕಣ್ಣನ್ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಇವರು ಪರಿಶಿಷ್ಟ ಜಾತಿ ಎಂದು ಪರಿಗಣಿಸಲಾಗಿರುವ ಮಾದಿಗ ಸಮುದಾಯದವರು. "2004 ರಲ್ಲಿ, ಇಬ್ಬರು ಹೆಣ್ಣು ಮಕ್ಕಳು ಆದ ಮೇಲೆ ಅವರ ಶಿಕ್ಷಣಕ್ಕಾಗಿ ನಾವು ಚೆನ್ನೈಗೆ ಬರಲು ನಿರ್ಧರಿಸಿದೆವು," ಎಂದು ನಾಗಮ್ಮ ನೆನಪಿಸಿಕೊಳ್ಳುತ್ತಾರೆ. ಚೆನ್ನೈಗೆ ಬಂದ  ಮೂರು ವರ್ಷಗಳಲ್ಲಿ ಕಣ್ಣನ್ ನಿಧನ ರಾದರು.

PHOTO • Kavitha Muralidharan
PHOTO • Kavitha Muralidharan

ತಮ್ಮ ಹೆಣ್ಣುಮಕ್ಕಳಾದ ಶೈಲಾ ಮತ್ತು ಆನಂದಿ ಅವರೊಂದಿಗೆ ಕೆ. ನಾಗಮ್ಮ

ನಾಗಮ್ಮ ಅವರು  ಚೆನ್ನೈನ ಗಿಂಡಿ ಬಳಿಯ ಸೇಂಟ್ ಥಾಮಸ್ ಮೌಂಟ್‌ನ ಕಿರಿದಾದ ಓಣಿಯೊಂದರಲ್ಲಿರುವ ಇಕ್ಕಟ್ಟಾದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಜೀವನವು ಐದು ವರ್ಷಗಳ ಹಿಂದೆ ನಾನು ಅವರನ್ನು ಕೊನೆಯ ಬಾರಿಗೆ ಭೇಟಿಯಾದಾಗ ಇದ್ದದ್ದಕ್ಕಿಂತ ಹೆಚ್ಚೇನು ಬದಲಾಗಿಲ್ಲ. “ಒಂದು ಸವರನ್ ಚಿನ್ನಕ್ಕೆ  20-30,000 ರೂಪಾಯಿಗಳಾಗಿದ್ದಾಗಲೂ, ಒಂದೆರಡು ಸವರನ್‌ ಖರೀದಿಸಲು ನಾನು ಸ್ವಲ್ಪ ಸ್ವಲ್ಪವೇ ಹಣ  ಉಳಿಸಲು ಬಯಸಿದ್ದೆ. [ಸವರನ್‌ ಅಂದರೆ ಸರಿಸುಮಾರು 8 ಗ್ರಾಂ]. ಈಗ ಒಂದು ಸವರನ್‌ಗೆ  60-70,000 ರೂಪಾಯಿ ಆಗಿದೆ, ನನ್ನ ಹೆಣ್ಣುಮಕ್ಕಳಿಗೆ ಹೇಗೆ ಮದುವೆ ಮಾಡಿಸುವುದು? ಬಹುಶಃ ಮದುವೆಗೆ ಚಿನ್ನ ಮುಖ್ಯವಾಗದೆ ಹೋದಾಗ ಮಾತ್ರ ಆಗಬಹುದೇನೋ,” ಎಂದು ಅವರು ನೋವಿನಿಂದ ಹೇಳುತ್ತಾರೆ.

ಸ್ವಲ್ಪ ಹೊತ್ತು ಮೌನವಾಗಿ ಯೋಚಿಸಿ, ನಂತರ: “ಚಿನ್ನ ಬಿಡಿ—ಊಟದ ಕತೆ ಏನು? ಗ್ಯಾಸ್ ಸಿಲಿಂಡರ್‌ಗಳು, ಅಕ್ಕಿ, ಅಗ್ಗದ ಬೆಲೆಯ ಹಾಲಿನ ಪ್ಯಾಕೆಟ್ ಕೂಡ ಕೈಗೆಟುಕುವಂತಿಲ್ಲ. ನಾನು ಒಂದು ವರ್ಷದ ಹಿಂದೆ 1,000 ರುಪಾಯಿಗೆ ಖರೀದಿಸಿದ ಅಷ್ಟೇ ಕೆಜಿ ಅಕ್ಕಿಗೆ ಈಗ 2,000 ಕೊಡುತ್ತಿದ್ದೇನೆ. ಆದರೆ ಸಂಪಾದನೆ ಮಾತ್ರ ಅಷ್ಟೇ ಇದೆ,” ಎಂದು ಹೇಳುತ್ತಾರೆ.

ತಾವು ಹೋರಾಟ ನಡೆಸುತ್ತಿರುವ ಕೈಯಿಂದ ಮಲ ಎತ್ತುವವರ ಕಷ್ಟಗಳ ಬಗ್ಗೆ ಮಾತನಾಡುವಾಗ ನಾಗಮ್ಮ ಅವರ ಹತಾಶೆ ಇನ್ನಷ್ಟು ಹೆಚ್ಚಾಗುತ್ತದೆ. "ಅವರ ಬದುಕು ಏನೂ ಸುಧಾರಿಸಿಲ್ಲ," ಎಂದು ಅವರು ಹೇಳುತ್ತಾರೆ.  "ಎಸ್‌ಆರ್‌ಎಂಎಸ್* ಅನ್ನು ಎನ್‌ಎಎಂಎಎಸ್‌ಟಿಇ (ನಮಸ್ತೆ) ಎಂದು ಮಾಡಿದರು. ಅದರ ಅರ್ಥವೇನು? ಕನಿಷ್ಠ ಎಸ್‌ಆರ್‌ಎಂಎಸ್ ಅಡಿಯಲ್ಲಿ ನಾವು ಗುಂಪುಗಳನ್ನಾದರೂ ಮಾಡಬಹುದಿತ್ತು ಮತ್ತು ಸ್ವಲ್ಪ ಘನತೆಯಿಂದ ಬದುಕಲು ಸಾಲಗಳನ್ನೂ ಪಡೆಯಬಹುದಿತ್ತು. ಆದರೆ ಈ ನಮಸ್ತೆ ಅಡಿಯಲ್ಲಿ ಅವರು ನಮಗೆ ಯಂತ್ರಗಳನ್ನು ಕೊಡುತ್ತಿದ್ದಾರೆ- ಹೀಗೆ,  ನನ್ನ ಗಂಡನ ಸಾವಿಗೆ ಕಾರಣವಾದ ಅದೇ ಕೆಲಸವನ್ನು ಮಾಡಲು ನಮ್ಮನ್ನು ಒತ್ತಾಯಿಸುತ್ತಿದ್ದಾರೆ. ನೀವು ಹೇಳಿ, ಈ ಯಂತ್ರ ನಮ್ಮ ಬದುಕಿಗೆ ಘನತೆಯನ್ನು ಕೊಡುತ್ತದೆಯೇ?" ಎಂದು ಅವರು ಕೇಳುತ್ತಾರೆ.

ಎಸ್‌ಆರ್‌ಎಂಎಸ್‌: ಸೆಲ್ಪ್‌ ಎಂಪ್ಲಾಯಿಮೆಂಟ್‌ ಸ್ಕೀಮ್‌ ಫಾರ್‌ ರಿಹ್ಯಾಬಿಲಿಟೇಷನ್‌ ಆಫ್‌ ಮ್ಯಾನ್ಯುವಲ್‌ ಸ್ಕಾವೆಂಜರ್ಸ್‌, 2007 ಎಂಬ ಯೋಜನೆಗೆ  2023 ರಲ್ಲಿ ನಮಸ್ತೆ ಅಥವಾ ನ್ಯಾಷನಲ್‌ ಆಕ್ಷನ್‌ ಫಾರ್‌ ಮೆಕ್ಯಾನೈಸ್ಡ್‌ ಸ್ಯಾನಿಟೇಷನ್‌ ಇಕೋಸಿಸ್ಟಂ ಎಂಬ ಹೊಸ ಹೆಸರು ಇಡಲಾಯಿತು. ಆದರೆ ನಾಗಮ್ಮ ಅವರು ಹೇಳುವಂತೆ, ಅದು ಮಲಹೊರುವವರ ಜೀವನವನ್ನು ಬದಲಾಯಿಸುವ ಬದಲು ಅದೇ ಉದ್ಯೋಗ ಮಾಡುವಂತೆ ಒತ್ತಡ ಹೇರಿತು.

ಕನ್ನಡ ಅನುವಾದ: ಚರಣ್‌ ಐವರ್ನಾಡು

Kavitha Muralidharan

کویتا مرلی دھرن چنئی میں مقیم ایک آزادی صحافی اور ترجمہ نگار ہیں۔ وہ پہلے ’انڈیا ٹوڈے‘ (تمل) کی ایڈیٹر تھیں اور اس سے پہلے ’دی ہندو‘ (تمل) کے رپورٹنگ سیکشن کی قیادت کرتی تھیں۔ وہ پاری کے لیے بطور رضاکار (والنٹیئر) کام کرتی ہیں۔

کے ذریعہ دیگر اسٹوریز کویتا مرلی دھرن

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Translator : Charan Aivarnad

Charan Aivarnad is a poet and a writer. He can be reached at: [email protected]

کے ذریعہ دیگر اسٹوریز Charan Aivarnad