"ಕಳೆದ ವರ್ಷ ರಾತ್ರೋರಾತ್ರಿ ನಾವು ಒಂದು ಲಕ್ಷ ರೂಪಾಯಿ ಕಳೆದುಕೊಂಡೆವು," ಎಂದು ಮಂಜುನಾಥ್ ಗೌಡ ಹೇಳುತ್ತಾರೆ. “ಕೀಟಗಳು ದಾಳಿ ಮಾಡಿ ನಮ್ಮ ತೋಟದಲ್ಲಿನ ಹಣ್ಣನ್ನು ನಾಶಮಾಡಿದವು. ಬೆಳಗ್ಗೆ ಹಣ್ಣಿನ ಮೇಲೆ ಯಾರೋ ಸೂಜಿಯಿಂದ ಚುಚ್ಚಿದಂತೆ ಸಣ್ಣ ಸಣ್ಣ ತೂತುಗಳಾಗಿದ್ದವು. ಹಾಗಾಗಿ ಈ ವರ್ಷ (2023) ಈ ರೀತಿ ಆಗಬಾರದು ಎಂದು ಗಡೇನಹಳ್ಳಿಯಲ್ಲಿರುವ ತಮ್ಮ ಎರಡು ಎಕರೆ ದಾಳಿಂಬೆ ತೋಟದ ಸುತ್ತಲೂ ಬೇಲಿ ಹಾಕಿದ್ದಾರೆ. ಈ ರೀತಿ ರೋಗಗಳು, ಪಕ್ಷಿಗಳು ಮತ್ತು ಕೀಟಗಳಿಂದ ಬೆಳೆಯನ್ನು ರಕ್ಷಿಸಬಹುದು ಎಂದು 34 ವರ್ಷ ಪ್ರಾಯದ ಮಂಜುನಾಥ್ ನಂಬಿದ್ದಾರೆ.
ಹಣ್ಣುಗಳು ಬಹಳ ಸೂಕ್ಷ್ಮ ಮತ್ತು ಸುಲಭವಾಗಿ ನಾಶವಾಗುತ್ತವೆ ಎಂದು ಹೇಳುವ ಮಂಜುನಾಥ್ ಅವರು ಪ್ರತಿ ವರ್ಷ ಔಷಧಿ ಮತ್ತು ರಸಗೊಬ್ಬರಗಳಿಗಾಗಿ 2.5 ಲಕ್ಷ ರುಪಾಯಿ ವ್ಯಯಿಸುತ್ತಾರೆ.
ಅವರು ಮತ್ತು ಅವರ ಪತ್ನಿ ಈ ವಾರ್ಷಿಕ ಖರ್ಚನ್ನು ಬರಿಸಲು ಕಳೆದ ವರ್ಷ ಸಾಲ ತೆಗೆದುಕೊಂಡಿದ್ದರು. "ಈ ವರ್ಷ ನಾವು ಸ್ವಲ್ಪ ಲಾಭ ಗಳಿಸಿ, ಎಲ್ಲಾ ಸಾಲವನ್ನು ತೀರಿಸುತ್ತೇವೆ ಎಂದು ನಂಬಿದ್ದೇವೆ," ಎಂದು ಮಂಜುನಾಥ್ ಅವರೊಂದಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಾ, ಮನೆಗೆಲಸವನ್ನೂ ನಿಭಾಯಿಸುವ ಅವರ ಪತ್ನಿ ಪ್ರಿಯಾಂಕಾ ಹೇಳುತ್ತಾರೆ.
ಕೆಲವೇ ಕಿಲೋಮೀಟರ್ ದೂರದ ಮೋಹನ್ ಗೌಡ ಅವರ ಜಮೀನಿನಲ್ಲಿರುವ 400 ದಾಳಿಂಬೆ ಗಿಡಗಳು ಬ್ಯಾಕ್ಟೀರಿಯಾ ಬ್ಲೈಟ್ನಿಂದ (ಕ್ಸಾನ್ಥೋಮೋನಸ್ ಆಕ್ಸೋನೋಪೋಡಿಸ್ ಪಿವಿ. ಪುನಿಕಾ) ಬಾಧಿಸಲ್ಪಟ್ಟಿವೆ. "ಇದು ಎಲ್ಲಾ ಸಸಿಗಳಿಗೆ, ಒಂದು ತೋಟದಿಂದ ಇನ್ನೊಂದಕ್ಕೆ ಹರಡುತ್ತದೆ," ಎಂದು ಅವರು ಹೇಳುತ್ತಾರೆ. ಎಲೆಗಳಿಗೆ ಶಿಲೀಂಧ್ರನಾಶಕಗಳನ್ನು ಸಿಂಪಡಿಸುವುದೇ ಇದಕ್ಕಿರುವ ಪರಿಹಾರ.













