ನನಗೆ ಸಾಕಾಗಿದೆ. ದೇಹ ಮತ್ತು ಮನಸ್ಸು ಎರಡೂ ಬಳಲಿವೆ. ನನ್ನ ಕಣ್ಣುಗಳಲ್ಲಿ ನೋವು ತುಂಬಿ ತುಳುಕುತ್ತಿದೆ. ನನ್ನ ಸುತ್ತಲಿನ ಶೋಷಿತ ಜನರ ಅನೇಕ ಕತೆಗಳನ್ನು ಬರೆಯಲು ನನಗೆ ಸಾಧ್ಯವಾಗುತ್ತಿಲ್ಲ. ಇದೆಲ್ಲವನ್ನೂ ನೋಡಿ ಮರಗಟ್ಟಿ ಹೋಗಿದ್ದೇನೆ. ನಾನು ಈ ಕಥೆಯನ್ನು ಬರೆಯಲು ಪ್ರಾರಂಭಿಸುವು ಹೊತ್ತಿಗೆ, ಸರ್ಕಾರವು ಚೆನ್ನೈನ ಅನಗಪುತ್ತೂರಿನಲ್ಲಿ ದಲಿತರ ಮನೆಗಳನ್ನು ನೆಲಸಮ ಮಾಡುತ್ತಿದೆ. ಇದು ನನ್ನನ್ನು ಇನ್ನಷ್ಟು ಹತಾಶೆಗೆ ದೂಡಿದೆ.
ಅಕ್ಟೋಬರ್ 7, 2023ರಂದು ತಮಿಳುನಾಡಿನ ಹೊಸೂರಿನಲ್ಲಿ ನಡೆದ ಪಟಾಕಿ ದುರಂತದ ಕಾರ್ಮಿಕರ ಸಾವಿನ ನೆನಪುಗಳಿಂದ ಹೊರಬರಲು ನನಗೆ ಇನ್ನೂ ಸಾಧ್ಯವಾಗಿಲ್ಲ. ನಾನು ಇಲ್ಲಿಯವರೆಗೆ 22 ಸಾವುಗಳನ್ನು ದಾಖಲಿಸಿದ್ದೇನೆ. ಇವರಲ್ಲಿ 8 ಮಂದಿ 17ರಿಂದ 21 ವರ್ಷದೊಳಗಿನ ವಿದ್ಯಾರ್ಥಿಗಳು. ಅವರೆಲ್ಲರೂ ಪಟಾಕಿ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅವರ ನಡುವೆ ಒಳ್ಳೆಯ ಸ್ನೇಹವಿತ್ತು.
ನಾನು ಫೋಟೊಗ್ರಫಿ ಕಲಿಯಲು ಆರಂಭಿಸಿದ ದಿನದಿಂದಲೂ ಪಟಾಕಿ ಕಾರ್ಖಾನೆಗಳು, ಗೋದಾಮುಗಳು ಮತ್ತು ಅಂಗಡಿಗಳಲ್ಲಿ ಕೆಲಸ ಮಾಡುವ ಜನರ ಬಗ್ಗೆ ನನಗೆ ಕುತೂಹಲ. ಅಲ್ಲಿ ಚಿತ್ರಗಳನ್ನು ತೆಗೆಯಲು ಬಹಳಷ್ಟು ಪ್ರಯತ್ನಿಸಿದ್ದೆ. ಆದರೆ ಅನುಮತಿ ದೊರೆತಿರಲಿಲ್ಲ. ಬಹಳಷ್ಟು ಸಲ ವಿಚಾರಿಸಿದ ಬಳಿಕ ಅಲ್ಲಿ ಫೋಟೊ ತೆಗೆಯಲು ಸಾಧ್ಯವಿಲ್ಲವೆನ್ನುವುದು ನನಗೆ ಮನವರಿಕೆಯಾಯಿತು. ಆದರೆ ಒಳಗೆ ಹೋಗಿ ಫೋಟೊ ತೆಗೆಯುವುದನ್ನು ಮರೆಯುವುದು ಸಹ ನನ್ನಿಂದ ಸಾಧ್ಯವಿರಲಿಲ್ಲ.
ನನ್ನ ಪೋಷಕರು ಎಂದೂ ನನಗೆ ದೀಪಾಳಿಗೆ ಹೊಸ ಬಟ್ಟೆ ಅಥವಾ ಪಟಾಕಿ ತಂದುಕೊಟ್ಟವರಲ್ಲ. ಅವರಿಗೆ ಅಷ್ಟು ಖರ್ಚು ಮಾಡುವುದು ಸಾಧ್ಯವಿರಲಿಲ್ಲ. ನಮಗೆ ಬಟ್ಟೆಗಳನ್ನು ಕೊಡಿಸುತ್ತಿದ್ದವರು ನಮ್ಮ ದೊಡ್ಡಪ್ಪ. ಯಾವಾಗಲೂ ನಮ್ಮ ದೀಪಾವಳಿ ಆಚರಣೆ ನಡೆಯುತ್ತಿದ್ದಿದ್ದು ದೊಡ್ಡಪ್ಪನ ಮನೆಯಲ್ಲಿ. ದೊಡ್ಡಪ್ಪ ಪಟಾಕಿಗಳನ್ನು ಸಹ ತರುತ್ತಿದ್ದರು. ನಮ್ಮ ದೊಡ್ಡಪ್ಪನ ಮಕ್ಕಳು ಸೇರಿದಂತೆ, ಎಲ್ಲಾ ಮಕ್ಕಳು ಸೇರಿ ಪಟಾಕಿ ಸುಡುತ್ತಿದ್ದೆವು.
ಪಟಾಕಿ ಸಿಡಿಸುವುದರಲ್ಲಿ ನನಗೆ ಅಂತಹ ಆಸಕ್ತಿಯೇನೂ ಇದ್ದಿರಲಿಲ್ಲ. ದೊಡ್ಡವನಾದಂತೆ ಪಟಾಕಿಯಿಂದ ಪೂರ್ತಿಯಾಗಿ ದೂರವಾದೆ. ನಂತರ ದೀಪಾವಳಿ ಸೇರಿದಂತೆ ಹಬ್ಬಗಳ ಆಚರಣೆಯನ್ನೇ ನಿಲ್ಲಿಸಿದೆ. ನನಗೆ ಶ್ರಮಜೀವಿಗಳ ಬದುಕಿನ ಕುರಿತು ಅರ್ಥವಾಗತೊಡಗಿದ್ದು ಫೋಟೊಗ್ರಫಿಯಲ್ಲಿ ತೊಡಗಿಸಿಕೊಂಡ ನಂತರವೇ.
ನಾನು ಫೋಟೊಗ್ರಫಿ ಮೂಲಕ ಬಹಳಷ್ಟು ವಿಷಯಗಳನ್ನು ಕಲಿತುಕೊಂಡೆ. ಪ್ರತಿ ವರ್ಷ ಪಟಾಕಿ ಗೋದಾಮುಗಳಲ್ಲಿ ಪಟಾಕಿ ದುರಂತ ಸಂಭವಿಸುತ್ತಿತ್ತು. ಆದರೆ ಅಂತಹ ಘಟನೆಗಳು ಯಾರ ಗಮನವನ್ನೂ ಸೆಳೆಯದೆ ಮುಗಿದು ಹೋಗುತ್ತಿದ್ದವು.





















