"ಕೊಂಡ್ರಾ ಸಮ್ಮಯ್ಯ ... ಆರ್ಥಿಕ ಸಾಲಗಳಿಗೆ ಸಂಬಂಧಿಸಿದ ಮಾನಸಿಕ ಸಂಕಟದಿಂದಾಗಿ ಕೀಟನಾಶಕ ವಿಷವನ್ನು ಸೇವಿಸಿದ್ದಾರೆ ..." ಎಂದು ಎಫ್ಐಆರ್ ಹೇಳಿದೆ.
ಎಫ್ಐಆರ್ (ಮೊದಲ ಮಾಹಿತಿ ವರದಿ) ಅನ್ನು ಸೆಪ್ಟೆಂಬರ್ 17, 2017ರಂದು ನರಸಾಪುರದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ತಾರಿಗೋಪುಲ್ಲಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ, ಸಮ್ಮಯ್ಯ ಮತ್ತು ಅವರ ಪತ್ನಿ ಕೊಂಡ್ರಾ ಸಾಗರಿಕಾ ಅವರು ಆರು ಎಕರೆ ಮಳೆಯಾಶ್ರಿತ ಭೂಮಿಯಲ್ಲಿ ಬಿಟಿ-ಹತ್ತಿ ಕೃಷಿ ಮಾಡುತ್ತಿದ್ದರು.
ಅವರ ಸಾಲ ಸುಮಾರು ರೂಪಾಯಿ 5 ಲಕ್ಷದವರೆಗಿದೆ, ಮುಖ್ಯವಾಗಿ ಸಂಬಂಧಿಕರಿಂದ ವಿವಿಧ ಬಡ್ಡಿದರಗಳಲ್ಲಿ ಸಾಲ ತೆಗೆದುಕೊಳ್ಳಲಾಗಿದೆ. ಸಮ್ಮಯ್ಯ ಮತ್ತು ಸಾಗರಿಕಾ ಅವರು ಒಂದು ಎಕರೆಗಿಂತಲೂ ಸ್ವಲ್ಪ ಹೆಚ್ಚು ಭೂಮಿಯನ್ನು ಹೊಂದಿದ್ದರು ಮತ್ತು ಉಳಿದವನ್ನು ಸಂಬಂಧಿಕರಿಂದ ಗುತ್ತಿಗೆಗೆ ಪಡೆದಿದ್ದರು. "ಪ್ರತಿ ಹಂಗಾಮಿಗೆ ಮುಂಚಿತವಾಗಿ ಸಾಲ ಪಡೆಯುವುದು ಹೆಚ್ಚಿನ ಸಾಲಕ್ಕೆ ಕಾರಣವಾಗಿದೆ" ಎಂದು ಸಾಗರಿಕಾ ಹೇಳುತ್ತಾರೆ. ಬರವು ನಷ್ಟ ಇನ್ನಷ್ಟು ಹೆಚ್ಚಲು ಕಾರಣವಾಯಿತು.
ದಂಪತಿಗಳು ತಮ್ಮ ಸ್ವಂತ ಭೂಮಿಯಲ್ಲಿ ಕೃಷಿ ಮಾಡಲು ಪ್ರಯತ್ನಿಸುವ ಮೊದಲು, ಹತ್ತಿ ಹೊಲಗಳಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರು 2011ರಲ್ಲಿ ಮದುವೆಯಾದ ನಂತರ, ಸ್ವಲ್ಪ ಕಾಲ ಹೈದರಾಬಾದ್ನಲ್ಲಿ ವಾಸಿಸುತ್ತಿದ್ದರು, ಅಲ್ಲಿ ಸಮ್ಮಯ್ಯ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸಮ್ಮಯ್ಯ ಅವರ ತಂದೆಯ ಆರೋಗ್ಯವು ಕೆಡಲು ಪ್ರಾರಂಭಿಸಿದ ನಂತರ ಅವರು 2013ರ ಸ್ವಲ್ಪ ಸಮಯದ ನಂತರ ತೆಲಂಗಾಣದ ಜಂಗಾಂವ್ ಜಿಲ್ಲೆಯ ನರಸಾಪುರಕ್ಕೆ ಮರಳಿದರು.
ಸೆಪ್ಟೆಂಬರ್ 2017ರಲ್ಲಿ ಅವರ ಆತ್ಮಹತ್ಯೆಯ ಸಮಯದಲ್ಲಿ ಸಮ್ಮಯ್ಯಾಗೆ 29 ವರ್ಷ ವಯಸ್ಸಾಗಿತ್ತು. ಸಾಗರಿಕಾಗೆ ಕೇವಲ 23 ವರ್ಷ. ಅವರ ಮಕ್ಕಳಾದ ಸ್ನೇಹಿತಾ ಮತ್ತು ಸಾತ್ವಿಕ್ 5 ಮತ್ತು 3 ವರ್ಷ ವಯಸ್ಸಿನವರಾಗಿದ್ದರು. “ಮಕ್ಕಳು ನನ್ನ ಗಂಡನೊಂದಿಗೆ ಕಳೆದ ಪ್ರತಿದಿನದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ” ಎಂದು ಅವರು ಹೇಳುತ್ತಾರೆ. “ನನ್ನ ಪತಿ ತೀರಿಕೊಂಡ ಮೊದಲ ವರ್ಷದಲ್ಲಿ ಬದುಕು ಬಹಳ ಕಷ್ಟಕರವಾಗಿತ್ತು. ನನ್ನ ಸಂಬಂಧಿಕರು ನನ್ನನ್ನು ಸಮರಾಂಭಗಳಿಗೆ ಕರೆಯುತ್ತಿರಲಿಲ್ಲ. ಈಗ ಅವರು ನನ್ನ ಬದುಕಿನ ಹೋರಾಟವನ್ನು ನೋಡಿದ್ದರಿಂದ ಮತ್ತೆ ನನ್ನನ್ನು ಕರೆಯಲು ಪ್ರಾರಂಭಿಸಿದ್ದಾರೆ… ”








